ಪಂಪಭಾರತ : ಗದ್ಯಾನುವಾದ - ದ್ವಿತೀಯಾಶ್ವಾಸಂ

ದ್ವಿತೀಯಾಶ್ವಾಸಂ
ಕಂ|| ಶ್ರೀಗಗಲುರಮಂ ಕೀರ್ತಿ
ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ|
ಶ್ರೀಗೆ ಭುಜಶಿಖರಮಂ ನೆಲೆ
ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ|| ೧

ಎಂಬ ಪರಕೆಗಳ ರವದೊಳ್
ತುಂಬೆ ನಭೋವಿವರಮಮರ ಮುನಿಜನಮಮರೇಂ|
ದ್ರಂ ಬೆರಸು ತಳರ್ದುದಾದುದ
ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ|| ೨

ವ|| ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯ್ದೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ-

ಕಂ|| ಆಹ್ವಾನಂಗೆಯ್ದಶ್ವಿನಿ
ದೇವರನವರಿತ್ತ ವರದೊಳವರಂಶಮೆ ಸಂ|
ಭಾವಿಸೆ ಗರ್ಭದೊಳಮಳರ
ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್|| ೩

ವ|| ಆಗಳಾ ಪಾಂಡುರಾಜನಾ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ವರ್ ಕೂಸುಗಳುಮೇೞ್ಗೆವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಜನಕ್ಕೆ ಕಲ್ಪವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳಾದಂತೆ ಸೊಗಯಿಸಿ ಬಳೆಯೆ-

೧. ಎಲೌ ಅಂಗನೆ ನೀನು ನಿನ್ನ ಅಗಲವಾದ ಎದೆಯನ್ನು ಲಕ್ಷ್ಮಿಗೂ ದಿಗಂತವನ್ನು ಕೀರ್ತಿಲಕ್ಷ್ಮಿಗೂ ಭುಜಶಿಖರವನ್ನು ಶತ್ರುಗಳನ್ನು ಗೆಲುವ ವಿಜಯಲಕ್ಷ್ಮಿಗೂ ನಿವಾಸಸ್ಥಾನವನ್ನಾಗಿಸಿ ಸೂರ್ಯನಿರುವವರೆಗೂ ಸ್ಥಿರವಾಗಿ ನಿಲ್ಲು ೨. ಎಂಬ ಹರಕೆಯ ಶಬ್ದವು ಆಕಾಶ ಪ್ರದೇಶವನ್ನೆಲ್ಲ ತುಂಬಲು ದೇವತೆಗಳೂ ಋಷಿಗಳೂ ದೇವೇಂದ್ರನೊಡನೆ ಹೊರಟುಹೋದರು. ಕುಂತಿಗೂ ಅವಳ ಪತಿಯಾದ ಪಾಂಡುರಾಜನಿಗೂ ವಿಶೇಷವಾಗಿ ಮನಸ್ಸಂತೋಷವಾಯಿತು. ವ|| ಹಾಗೆ ಗುಣಾರ್ಣವನ ಜನ್ಮೋತ್ಸವದ ಸಂತೋಷದ ಸಂಭ್ರಮದಲ್ಲಿ ಸೇರಿಕೊಂಡು ಕುಂತಿಯೂ ಪಾಂಡುರಾಜನೂ ಇರಲಾಗಿ ಮಾದ್ರಿಯು ತನಗೆ ಮಕ್ಕಳಿಲ್ಲದುದಕ್ಕೆ ಉತ್ಸಾಹಶೂನ್ಯಳಾಗಿ ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ ವಿಶೇಷವಾಗಿ ದುಖಪಟ್ಟು ಚಿಂತಿಸುತ್ತಿರಲಾಗಿ ಆಕೆಯ ಬಾಡಿದ ಮುಖದ ರೀತಿಯನ್ನು ಕಂಡು ಕುಂತಿಯು ಕರುಣಿಸಿ ಪುತ್ರೋತ್ಪತ್ತಿ ಕಾರಣಗಳಾದ ಮಂತ್ರಗಳನ್ನು ಉಪದೇಶಮಾಡಲಾಗಿ ಅವಳು ಆ ಮಂತ್ರಕ್ಕೆ ವಿಸಿದ ರೀತಿಯಲ್ಲಿ ನಿಯಮದಿಂದ ೩. ಅಶ್ವಿನೀದೇವತೆಯರನ್ನು ಆಹ್ವಾನಿಸಿ ಬರಿಸಿ ಅವರು ಕೊಟ್ಟ ವರಗಳಿಂದ ಅವರಂಶವೇ ಗರ್ಭದಲ್ಲುಂಟಾಗಲು ಅವಳಿ ಮಕ್ಕಳನ್ನು ಪಡೆದು ಸಂತಾನವನ್ನು ಊರ್ಜಿತಗೊಳಿಸಿದಳು. ವ|| ಆಗ ಆ ಪಾಂಡುರಾಜನು ಆ ಶಿಶುಗಳಿಗೆ ಋಷಿಗಳಿಂದ ಜಾತಕರ್ಮಗಳನ್ನು ಮಾಡಿಸಿ ನಕುಲಸಹದೇವರೆಂಬ ಜೋಡಿ ಹೆಸರನ್ನಿಟ್ಟು ಮಕ್ಕಳನ್ನು ಪಡೆಯುವ ಸಂಪೂರ್ಣತೃಪ್ತಿ ಹೊಂದಿರಲು ಆ ಅಯ್ದು ಮಕ್ಕಳೂ ಶುಕ್ಲಪಕ್ಷದ ಪ್ರಥಮೆಯ ವೃದ್ಧಿಚಂದ್ರನಂತೆ ಮೇಲೆಮೇಲೆ ಸೊಗಯಿಸಿ ಬಳೆಯುತ್ತಿದ್ದರು; ಅವರು ಭರತವಂಶಕ್ಕೆ ವಿಸ್ತಾರವಾದ ಯಶಸ್ಸಿನಮೊಳಕೆಗೂ ಬಂಧುಜನಗಳಿಗೆ ಪುಣ್ಯದ ಮೊಳಕೆಗಳೂ ಶತ್ರುಜನಕ್ಕೆ ಕಾಳಕೂಟವಿಷದ ಮೊಳಕೆಗಳೂ ಆಗಿ ಪಂಚಾಂಗ ಮಂತ್ರಗಳಾದ ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ, ಸಮಾರಾಧನ ಎಂಬ ವೇದಕ್ಕೆ ಸಂಬಂಸಿದ ಮಂತ್ರಗಳು ತಮ್ಮ

ಕಂ|| ತೊಡರ್ದಮರ್ದ ಬಾಳವಣ್ಣದ
ತುಡುಗೆ ಪಳಂಚಲೆವ ಪಂಚ ಜಡೆ ನೊಸಲೊಳೊಡಂ|
ಬಡುವರಳೆಲೆಯಿವಱಂ ಚೆ
ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ|| ೪

ವ|| ಅಂತಾತಂ ಬಳೆಯೆವಳೆಯೆ-

ಕಂ|| ನಡೆವ ತಳರ್ನಡೆಯೊಳ್ ಪುಡಿ
ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ|
ಪಿಡಿದಡರ್ದೊಡೆ ಬಾಯ್ವಿಟ್ಟೆ
ಲ್ವಡಗಾದುವು ಮುದ್ದದಂತು ಸೊಗಯಿಸವೇಡಾ|| ೫

ಮುನಿವನ ಮನೆ ಬಿಸುಟುವು ಮುಂ
ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು|
ದ್ದಿನೊಳಡರ್ವ ಪಿಡಿವ ಗುರ್ದುವ
ಮನೆಗೆೞೆವನಿತರ್ಕಮಲಸಿ ಮರುದಾತ್ಮಜನಾ|| ೬

ವ|| ಅಂತಾತಂ ಬಳೆಯೆ-

ಕಂ|| ಬೇಡದುದಂ ಬೇಡುವ ಪುಡಿ
ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ|
ಕ್ರೀಡೆ ಮುರಾರಿಯ ಬಾಲ
ಕ್ರೀಡೆಯನನುಕರಿಪುದಾದುದರಿಕೇಸರಿಯಾ|| ೭

ಪರೆದಡರ್ದ ಧೂಳಿ ಕಿಱುನಗೆ
ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್|
ಪರಕಲಿಸಿದ ಕಾಡಿಗೆವೆರ
ಸರಿಕೇಸರಿ ತಾಯ ಮನಮನಿೞ್ಕುಳಿಗೊಂಡಂ|| ೮

ಒಗೆತರ್ಪ ಪಲ್ಗಳಾ ನಗೆ
ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ|
ಳ್ದಗಲದ ಚೆಲ್ವಿನ ಮೊಲ್ಲೆಯ
ಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ|| ೯

ರೂಪದಲ್ಲಿಯೇ ಪ್ರತ್ಯಕ್ಷವಾಗಿ ಮೂರ್ತಿಮತ್ತುಗಳಾದಂತೆ ಸೊಗಯಿಸಿ ತೋರಿದರು. ೪. ಮೈಯನ್ನು ಚೆನ್ನಾಗಿ ಸೇರಿಕೊಂಡ ಕತ್ತಿಯ ಬಣ್ಣದ (ನೀಲಿಬಣ್ಣದ) ಉಡುಪಿನಿಂದಲೂ ಬೆನ್ನಿಗೆ ಅಪ್ಪಳಿಸುತ್ತಿರುವ ಅಯ್ದು ಜಡೆಗಳಿಂದಲೂ ಒಪ್ಪಿ ತೋರುವ ಅರಳೆಲೆಯ ಆಕಾರದ ಪದಕಗಳಿಂದಲೂ ಧರ್ಮರಾಯನ ಬಾಲಕ್ರೀಡೆಯು ಸುಂದರವಾಗಿದ್ದಿತು. ವ|| ಹಾಗೆ ಅವನು ಅಭಿವೃದ್ಧಿಯಾಗುತ್ತಿರಲು ೫. ಭೀಮನು ನಡೆಯುವ ತಪ್ಪು ಹೆಜ್ಜೆಗಳಿಂದಲೇ ಕಲ್ಲುಗಳು ಒಡೆದು ಪುಡಿಯಾದುವು. ಆನೆಗಳನ್ನು ಹಿಡಿದು ಅವನು ಹತ್ತಲು ಅವು ಬಾಯಿಬಿಟ್ಟು (ಕೂಗಿಕೊಂಡು) ಜಜ್ಜಿ ಎಲುಬುಮಾಂಸಗಳಾದುವು. ಮುದ್ದುಮುದ್ದಾಗಿರುವ ಬಾಲ್ಯಸ್ಥಿತಿ ಹೀಗೆ ಸೊಗಯಿಸಬೇಡವೇ? ೬. ಭೀಮನು ಹುಟ್ಟುವುದಕ್ಕೆ ಮುಂಚೆ ಋಷಿಗಳ ಮಡಲಿನಲ್ಲಿಯೇ ಬಳೆದ ಸಿಂಹಗಳು ಈಗ ಭೀಮನು ಆಟಕ್ಕಾಗಿ ಅವುಗಳನ್ನು ಹತ್ತುವ, ಹಿಡಿಯುವ, ಗುದ್ದುವ, ಮನೆಯೊಳಕ್ಕೆ ಎಳೆದುಕೊಂಡುಹೋಗುವ ಹಿಂಸೆಗಳಷ್ಟಕ್ಕೂ ಆಯಾಸಗೊಂಡು ಆ ಋಷಿಗಳ ವನವನ್ನೇ ತೊರೆದುಹೋದವು. ೭. ಬೇಡದುದನ್ನು ಬೇಡುವ ಧೂಳಾಟವಾಡುವ ತೊದಲುಮಾತುಗಳನ್ನಾಡುವ ನಗುವನ್ನುಂಟುಮಾಡುವ ಅರಿಕೇಸರಿಯ ಬಾಲಕ್ರೀಡೆಯು ಶ್ರೀಕೃಷ್ಣನ ಬಾಲಕ್ರೀಡೆಗಳನ್ನು ಅನುಕರಿಸುವುದಾಯಿತು. ೮. ಕೆದರಿ ಮೆಯ್ಗಂಟಿಕೊಂಡಿರುವ ಧೂಳು, ಹುಸಿನಗೆಯಿಂದ ಕೂಡಿದ ತೊದಲುಮಾತು, ನಗುಮುಖದಲ್ಲಿ ಹರಡಿದ ಕಾಡಿಗೆಯೊಡನೆ ಅರಿಕೇಸರಿ ತಾಯಿಯಾದ ಕುಂತಿಯ ಮನಸ್ಸನ್ನು ಆಕರ್ಷಿಸಿದನು.

೯. (ಆಗತಾನೆ) ಹುಟ್ಟುತ್ತಿರುವ ಹಲ್ಲುಗಳು ಆ ನಗೆಮೊಗದ ವಾಗ್ದೇವಿಯನ್ನು ಪೂಜಿಸುವುದಕ್ಕಾಗಿ ಹರಡಿದ ಸುಂದರವಾದ ಮೊಲ್ಲೆಯ

ಕರಿಕಳಭಂಗಳ ಶಿಶು ಕೇ
ಸರಿಗಳ ಬೞಯಂ ತಗುಳ್ದು ಬಡವುಗಳನವಂ|
ತಿರಿಪಿ ಪಿಡಿಯುತ್ತುಮರಿಗಂ
ಪರಿದಾಡುವ ಸಮವಯಸ್ಕರೊಳ್ ಸೊಗಯಿಸಿದಂ|| ೧೦

ದೆಯ್ವಬಲಂ ಸೊಗಸಿಕೆ ಮುಂ
ಗೆಯ್ವ ಬಲಂ ಬಾಳಕಾಲದೊಳ್ ತೊಡರ್ದ ಪೊಡ|
ರ್ದಯ್ವರ ಬಾಲಕ್ರಿಯೆಯುಂ
ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ|| ೧೧

ವ|| ಅಂತಾ ಕೂಸುಗಳ್ ನಿಜ ಜನನೀಜನಕರ ಮನಮನಿೞ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯೆ ಬಳೆಯೆ-

ಚಂ|| ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ|
ಗಿಲೆ ನನೆದೋಱ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್|| ೧೨

ವ|| ಅಂಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದೆಳಗೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳು ಮಾತನ ಬರವಿಂಗೆ ನೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ ನನೆಯ ಬಿರಿಮುಗುಳ್ಗಳ ತುಱುಗಲೊಳೆಱಗಿ ತುಱುಗಿದ ಕಲ್ಪಲತೆಗಳು ಮಾತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳುದಿರ್ದ ಕೞವೂಗಳುಮಾತನ ಬರವಿಂಗೆ ವನವನಿತೆ ಮೆಚ್ಚಿ ನೆಯೆ ಕೆಯ್ಗೆಯ್ದಂತೆ ನಿಱನಿಱಗೊಂಡು ಸೊಗಯಿಸುವ ನಿಱಗನ ನಿಱದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ ನಂದನವನಂಗಳ್ ಜನಂಗಳನನಂಗಂಗೆ ತೋೞ್ತುವೆ ಸಂಗೆಯ್ಸಿದುವು-

ಮೊಗ್ಗಿನ ರಾಶಿಯನ್ನು ತಿರಸ್ಕರಿಸುತ್ತಿರಲು ಗುಣಾರ್ಣವನು ಸೊಗಸಾಗಿ ಕಂಡನು. ೧೦. ಆನೆಯ ಮರಿಗಳನ್ನೂ ಸಿಂಹದ ಮರಿಗಳನ್ನೂ ಬೆನ್ನಟ್ಟಿ ಹೋಗಿ ಆ ಬಡಪ್ರಾಣಿಗಳನ್ನು ಹಿಂತಿರುಗಿಸಿ ಹಿಡಿಯುವ ಅರಿಕೇಸರಿ ಅಲ್ಲಿ ಓಡಾಡುವ ಜೊತೆಗಾರರೊಡನೆ ಸೊಗಸಾಗಿ ಕಂಡನು. ೧೧. ದೈವಬಲವೂ ಸೊಗಸಿಕೆಯೂ ಮುಂದಿನ ಕಾಲದಲ್ಲಿ ಅವರಿಗುಂಟಾಗಬಹುದಾದ ಸಾಮರ್ಥ್ಯವೂ ಬಾಲಕಾಲದಲ್ಲಿಯೇ ಸೂಚಿತವಾಗಿ ಪ್ರಕಾಶಿತವಾಗಿರುವ ಬಾಲಕ್ರೀಡೆಯು ತಾಯಿಯನ್ನೂ ತಂದೆಯನ್ನೂ ತಮ್ಮ ಭುಜವನ್ನು ತಾವೇ ನೋಡಿಕೊಳ್ಳುವ ಹಾಗೆ ಮಾಡಿತು (ಅಂದರೆ ತಾವೇ ಅದೃಷ್ಟಶಾಲಿಗಳೆಂದು ತಮ್ಮ ಭುಜವನ್ನು ತಾವೇ ನೋಡಿ ಸಂತೋಷಪಡುವ ಹಾಗೆ ಮಾಡಿತು).

ವ|| ಹಾಗೆ ಆ ಮಕ್ಕಳು ತಮ್ಮ ತಾಯಿತಂದೆಯರ ಮನಸ್ಸನ್ನು ಸೂರೆಗೊಳ್ಳುವಂತೆಯೂ ಶತ್ರುಜನರ ಮನಸ್ಸನ್ನು (ಪ್ರಾಣಾಪಹರಣ ಮಾಡುವಂತೆ) ಆಕ್ರಮಿಸುತ್ತಿರುವಂತೆಯೂ ಬಳೆದರು. ೧೨. ಅರಳಿದ ಅದಿರ್ಮುತ್ತೆಯ ಹೂವು, ಹೊಸದಾಗಿ ಬಿಟ್ಟಿರುವ ಮಲ್ಲಿಗೆಯ ಹೂವು, ಸುವಾಸನೆಯನ್ನು ಒತ್ತಿ ಹೊರಡಿಸುತ್ತಿರುವ ದಕ್ಷಿಣದ ಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿ, ಕೊರಳ ಶಬ್ದದಿಂದ ಕುಕಿಲ್ ಎಂಬ ಧ್ವನಿಯನ್ನು ಹೊರಡಿಸುತ್ತಿರುವ ಕೋಗಿಲೆ, ಹೂವಿನಿಂದ ಕೂಡಿ ನಯವಾಗಿರುವ ಮಾವಿನ ಮರ, ಒಂದೇ ಸಲವಲ್ಲದೆ ಬಾರಿಬಾರಿಗೂ ಹೆಚ್ಚುತ್ತಿರುವ ಉಯ್ಯಾಲೆಯ ಹೊಸದಾದ ಇವು ವಸಂತಋತುವಿನ ಪ್ರವೇಶದಲ್ಲಿ ಏನು ಸೊಗಸಾಗಿ ಕಂಡವೋ !

ವ|| ಆಗ ಆ ವಸಂತರಾಜನ ಬರವಿಗಾಗಿ ಬಾವುಟಗಳನ್ನು ಕಟ್ಟಿದಂತೆ ಕೋಮಲವಾಗಿ ಬೆಳೆದು ಅಲುಗಾಡುವ ಅಶೋಕವೃಕ್ಷಗಳೂ, ಆತನ ಬರವಿಗಾಗಿ ತೋರಣ ಕಟ್ಟಿದಂತೆ ಹಣ್ಣು ಕಾಯಿಗಳನ್ನು ಬಿಟ್ಟಿರುವ ಮಾವಿನ ಮರಗಳನ್ನು ಏರಿ ಅಡ್ಡಲಾಗಿ ಎಳೆಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ಕುಡಿಯನ್ನು ಚಾಚುವ ಮೊಲ್ಲೆಯ ಬಳ್ಳಿಗಳೂ ಆತನ ಬರುವಿಕೆಗೆ ಸಂಪೂರ್ಣ ಸುಂದರವಾಗಿ ಕಾಣುವುದಕ್ಕಾಗಿ ಅಲಂಕಾರವನ್ನು ಮಾಡಿಕೊಳ್ಳುವ ಪ್ರೇಯಸಿಯಂತೆ ಹೂವಿನ ದಪ್ಪ ಮೊಗ್ಗಿನ ಗುಂಪುಗಳಿಂದ ಕೂಡಿ ದಟ್ಟವಾಗಿರುವ ಕಲ್ಪಲತೆಗಳೂ ಆತನ ಬರವಿಗೆ ಮಂಗಳವಾದ್ಯವನ್ನು ಬಾಜಿಸುವಂತೆ ಭೋರ್ಗರೆದು ಶಬ್ದಮಾಡುವ ದುಂಬಿಗಳೂ ಆತನ ಬರವಿಗೆ ರಂಗೋಲೆಯನ್ನಿಕ್ಕಿದಂತೆ ಮರಳಿನ ಪ್ರದೇಶದಲ್ಲಿ ಉದುರಿದ್ದ ಕಳಿತಹೂವುಗಳೂ ಆತನ ಬರುವಿಕೆಗೆ ವರಲಕ್ಷ್ಮಿಯು ಸಂತೋಷಪಟ್ಟು ಸಂಪೂರ್ಣವಾಗಿ ಅಲಂಕಾರ ಮಾಡಿದಂತೆ ನಿರಿಗೆನಿರಿಗೆಯಾಗಿ ಸೊಗಯಿಸುವ ಸಿಹಿಮಾವಿನ ಸಾಲಾಗಿರುವ ಗೊಂಚಲುಗಳೂ ಆತನ ಮೇಲೆ ಪ್ರೀತಿಸಿ ನುಗ್ಗಲು

ಚಂ|| ಬಿರಯಿಯ ಮಿೞ್ತುವೆಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ
ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ|
ಱರನಿರದೂಱ ಸಾಱ ಜಡಿವಂತೆಸೆಗುಂ ಸಹಕಾರ ಕೋಮಳಾಂ
ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್|| ೧೩

ಚಂ|| ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ
ಲ್ಗವಿಲನುಮಾಗಿ ಬಂದ ಮಲಯಾನಿಲನೂದೆ ತೆರಳ್ವ ಚೂತ ಪ|
ಲ್ಲವದ ತೆರಳ್ಕೆ ತದ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ
ಲ್ಲವದ ತೆರಳ್ಕೆಯಂತೆಸೆಯೆ ಕಣ್ಗೆಸೆದಿರ್ದುವು ನಂದನಾಳಿಗಳ್|| ೧೪

ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ|
ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ|| ೧೫

ವ|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯು ಮಪ್ಪುದಱಂ ವನಕ್ರೀಡಾನಿಮಿತ್ತದಿಂ ಪೋಗಿ-

ಚಂ|| ವನಕುಸುಮಂಗಳಂ ಬಗೆಗೆವಂದುವನೞಯೊಳಾಯ್ದು ಕೊಯ್ದು ಮೆ
ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದೆ ಮ|
ತ್ತನಿತಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇ
ೞ್ಪನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತ ಕಾಂತೆವೋಲ್|| ೧೬

ವ|| ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ-

ರೋಮಾಂಚನವಾದಂತೆ ಹುಟ್ಟಿರುವ ಚಿಗುರು ಮತ್ತು ಕಿರುಗೊಂಬೆಗಳ ಮೊಳಕೆಗಳೂ ಆತನ ಶರೀರಸ್ಪರ್ಶದಿಂದ ಕಾಮರಸವು ಜಿನುಗುವಂತೆ ಸ್ರವಿಸುವ ಮರದ ಹಾಲಿನ ಸೋನೆಗಳೂ ಇವುಗಳಿಂದ ಆ ಆಶ್ರಮದ ನಂದನವನಗಳು ಜನಗಳು ಮನ್ಮಥನಿಗೆ ಸೇವೆಗೆಯ್ಯುವ ಹಾಗೆ ಮಾಡಿದುವು. ೧೪. ನಾನು ವಿರಹಿಗಳ ಶತ್ರುವಾಗಿದ್ದೇನೆ. ಅವರನ್ನು ತುಳಿದಲ್ಲದೆ ನನ್ನ ಕೋಪವು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಗಡಿದು ಕೂಗುತ್ತಿದ್ದಾನೆ. ಇಲ್ಲಿಗೆ ವಿರಹಿಗಳು ಪ್ರವೇಶಿಸಲು ಅವಕಾಶಕೊಡಬೇಡಿ ಎಂದು ಒಂದೇ ಸಮನಾಗಿ ಬಲಾತ್ಕಾರದಿಂದ ಕೂಗಿ ಹೇಳಿ ಹೆದರಿಸುವಂತೆ ಮಾವಿನ ಮೃದುವಾದ ಚಿಗುರುಗಳನ್ನು ತೃಪ್ತಿಯಾಗುವಷ್ಟು ತಿಂದು ಕೊಬ್ಬಿ ಬೆಳೆದಿರುವ ಕೋಗಿಲೆಗಳ ಕೊರಳನಾದವು ಆ ತೋಟಗಳಲ್ಲಿ ಪ್ರಕಾಶಿಸುತ್ತದೆ. ೧೪. ಮುತ್ತಿಕೊಳ್ಳುತ್ತಿರುವ ಸೊಕ್ಕಿದ ದುಂಬಿಗಳಿಂದ ಮಾಸಿದವನಾಗಿಯೂ ತಾವರೆಯ ಪರಾಗಗಳಿಂದ ಮಾಸಲುಗೆಂಪುಬಣ್ಣದವನಾಗಿಯೂ ತಲೆದೋರಿದ ಮಲಯಮಾರುತನು ಬೀಸಿದುದರಿಂದ ಅಳ್ಳಾಡುವ ಮಾವಿನಮರದ ಚಿಗುರುಗಳ ಅಲುಗಾಟವು ಆ ವನಲಕ್ಷ್ಮಿಯು ಉಟ್ಟ ರೇಷ್ಮೆಯ ಸೀರೆಯ ಸೆರಗಿನ ಅಲುಗಾಟದಂತೆ ಪ್ರಕಾಶಿಸಲು ಆ ತೋಟದ ಸಾಲುಗಳು ಕಣ್ಣಿಗೆ ಮನೋಹರವಾಗಿದ್ದುವು. ೧೫. ಆ ವನವನ್ನು ಬಿಟ್ಟು ಹೋಗದೆ ಅಲ್ಲಿಯೇ ಹಾರಾಡುತ್ತಿರುವ ದುಂಬಿಯೇ ಆನೆಯ ಘೀಂಕಾರವಾಗಿರಲು, ಬೆಳದಿಂಗಳೇ ಅದರ ಕೋಪವಾಗಿರಲು, ಬೀಸುವ ಗಾಳಿಯೇ ಬೀಸಣಿಗೆಯಾಗಿರಲು, ಕಾಯಿಗಳಿಂದ ಸೊಗಸಾಗಿ ಸೋರುತ್ತಿರುವ ಸೋನೆಯೇ ಮದೋದಕವಾಗಿರಲು ಮಾವಿನ ಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬಾಗಿರಲು ವಸಂತಕಾಲವೆಂಬ ಆನೆಯು ವಿರಹಿಗಳನ್ನು ತನ್ನ ಕೋಡಿನಿಂದ ತಿವಿದು ಹರಿಯಿತು, ಓಡಿತು. ವ|| ಹಾಗೆ ಬಂದ ವಸಂತಋತುವಿನಲ್ಲಿ ಮಾದ್ರಿಯು ತಾನು ಅಹಂಕಾರದಿಂದ ಕೆಟ್ಟವಳೂ ಆಟವಾಡುವುದರಲ್ಲಿ ಆಸಕ್ತಳಾದವಳೂ ಆಗಿದ್ದುದರಿಂದ ಕಾಡಿನಲ್ಲಿ ಆಟವಾಡುವುದಕ್ಕಾಗಿ ಹೋಗಿ ೧೬. ತನ್ನ ಮನಸ್ಸಿಗೆ ಒಪ್ಪುವಂತಹ ಕಾಡಿನ ಹೂವುಗಳನ್ನು ಪ್ರೀತಿಯಿಂದ ಆರಿಸಿ ಕೊಯ್ದು ಮೃದುವಾಗಿ ಬಕುಳವೃಕ್ಷದ ಪಾತಿಯಪ್ರದೇಶದಲ್ಲಿ ಸುರಿದು ತಾವರೆಯ ಸೂತ್ರದಿಂದಲೂ ಮತ್ತಿತರ ಹೂಗಳಿಂದಲೂ ರಚಿಸಿದ ಮೊಗ್ಗಿನ ಸರಿಗೆ, ತೋಳಬಳೆ, ಕೈಬಳೆ, ಹಾರ ಮೊದಲಾದವುಗಳನ್ನು ತೃಪ್ತಿಯಾಗುವಷ್ಟು ಧರಿಸಿ ಅಲಂಕಾರಮಾಡಿಕೊಂಡು ಮಾದ್ರಿಯು ವಸಂತಲಕ್ಷ್ಮಿಯಂತೆ ವಿಶೇಷವಾಗಿ

ಚಂ|| ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನಾವಗವಿವ ಚೆನ್ನ ಪೂ
ಗಳನವನೊಯ್ಯನೋಸರಿಸುತುಂ ವದನಾಬ್ಜದ ಕಂಪನಾಳ್ದುಣಲ್|
ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ
ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ|| ೧೭

ವ|| ತಾಪಸಾಶ್ರಮದಿಂ ಪೊಱಮಟ್ಟಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು-

ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್|| ೧೮

ವ|| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ-

ಚಂ|| ಬಿಗಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ
ಯ್ಯಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ ಮೆ|
ಲ್ಲಗೆ ಮಱಸೊಂದಿದಂದದೊಳೆ ಜೋಲ್ದ ನಿಜೇಶನನಾ ಲತಾಂಗಿ ತೊ
ಟ್ಟಗೆ ಕೊಳೆ ನೋಡಿ ಕೆಟ್ಟೆನಿನಿಯಂ ಮಱಸೊಂದಿದನೋ ಬೞಲ್ದನೋ|| ೧೯

ವ|| ಎಂದು ಪಱಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು ಪರಲೋಕ ಪ್ರಾಪ್ತನಾದುದನಱತು-

ಕಂ|| ತಾಪಸನ ಶಾಪಮೆಂಬುದು
ಪಾಪದ ರೂಪಱತುಮಱಯದಂತೇಕೆ ಮನಂ|
ಗಾಪೞದು ಬಂದು ಮುಟ್ಟಿದೆ
ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ|| ೨೦

ನೀನ್ನಿನ್ನ ಸಾವನದನೆನ
ಸುನ್ನೆನೆಯದೆ ನೆರೆವೆನೆಂಬ ಬಗೆಯೊಳ್ ಬಂದೈ|
ನಿನ್ನೊಡನೆ ವಂದು ದಿವದೊಳ್
ನಿನ್ನ ಮನೋರಥಮನರಸ ನೆಱಪದೆ ಮಾಣೆಂ|| ೨೧

ಒಪ್ಪಿದಳು. ವ|| ಹಾಗೆ ಧರಿಸಿದ ಪುಷ್ಪಾಭರಣವೇ ಮನ್ಮಥನು ಪ್ರಯೋಗಿಸಿದ ಪುಷ್ಪಬಾಣಕ್ಕೆ ಸಮಾನವಾಗಿರಲು ೧೭. ಅಲುಗಾಡುತ್ತಿರುವ ಮುಂಗುರುಳುಗಳಲ್ಲಿ ಸಿಕ್ಕಿಕೊಂಡು ವಿಶೇಷ ಸೌಂದರ್ಯವನ್ನುಂಟುಮಾಡುತ್ತಿರುವ ಸೊಗಸಾದ ಹೂವುಗಳನ್ನು ನಿಧಾನವಾಗಿ ಒಂದು ಪಕ್ಕಕ್ಕೆ ಓಸರಿಸುತ್ತ ಮುಖಕಮಲದ ಸುಗಂಧವನ್ನು ಪಡೆದು ಆಸ್ವಾದಿಸುವುದಕ್ಕೋಸ್ಕರ ಮುತ್ತಿಕೊಳ್ಳುತ್ತಿರುವ ದುಂಬಿಯನ್ನು ಕಯ್ಯಲ್ಲಿ ಹಿಡಿದಿದ್ದ ನೆಯ್ದಿಲಪುಷ್ಪದಿಂದ ಮೆಲ್ಲಗೆ ಓಡಿಸುತ್ತ ಬೆಡಂಗಿನಿಂದ ಕೂಡಿ ಸೊಕ್ಕಿದ ಮನ್ಮಥನ ಮದ್ದಾನೆಯಂತೆ ಬರುತ್ತಿದ್ದ ಮಾದ್ರಿಯನ್ನು ವ|| ತಾಪಸಾಶ್ರಮದಿಂದ ಹೊರಗೆಹೊರಟು ಹಾಗೆಯೇ ಕಾಡಿನಲ್ಲಿ ಅಡ್ಡಾಡುತ್ತಿದ್ದ ಪಾಂಡುರಾಜನು ನೋಡಿ ೧೮. ಅವಳು ಧರಿಸಿದ ಪುಷ್ಪಾಲಂಕಾರವು ತನ್ನ ಮೃದುವಾದ ಹೃದಯದಲ್ಲಿ ಸೊಗಯಿಸಲು ಅವಳ ಸೌಂದರ್ಯವು ಅವನ ದೃಷ್ಟಿಯಲ್ಲಿ ಕಾಮರಸವುಕ್ಕುವಷ್ಟು ನಿಧಾನವಾಗಿ ಆಡುತ್ತಿರಲು ಅವಳನ್ನು ತೃಪ್ತಿಯಾಗುವಷ್ಟು ನೋಡಿ ಥಟಕ್ಕನೆ ಹಿಡಿಯಲು ಮೇಲೆ ನುಗ್ಗಿ ಅವಳನ್ನು ರಾಜನಾದ ಪಾಂಡುವು ತನಗಿದ್ದ ಶಾಪವನ್ನು ಯೋಚಿಸದೆ ಪ್ರೀತ್ಯಾತಿಶಯದಿಂದ ಮೃತ್ಯುದೇವತೆಯನ್ನಪ್ಪುವಂತೆ ಆಲಿಂಗನ ಮಾಡಿಕೊಂಡನು. ವ|| ಹಾಗೆ ವಿಷದ ಬಳ್ಳಿಯನ್ನು ಆಲಿಂಗನ ಮಾಡುವಂತೆ ಅವಳನ್ನು ಅಪ್ಪಿಕೊಳ್ಳಲು ಆ ಪ್ರಿಯಳು ಆಲಿಂಗಿಸಿದ ತಾವರೆಯದಂಟಿನಂತೆ ಮೃದುವೂ ಕೋಮಳವೂ ಆದ ಅವಳ ಬಾಹುಪಾಶವೇ ಯಮಪಾಶವಾಗಲು- ೧೯. ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳು ಸಡಿಲವಾಗಲು ಮುಖವು ಜೋತುಬೀಳಲು ಮುಖದಲ್ಲಿದ್ದ ನಗೆಗಣ್ಗಳ ಪಾಪೆಗಳು ಕಾಂತಿಹೀನವಾಗಿ ಮುಚ್ಚಿರಲು ಉಸಿರಾಟವು ನಿಂತುಹೋಗಲು ನಿಧಾನವಾಗಿ ಪ್ರಜ್ಞೆತಪ್ಪಿದವನಂತೆ ಜೋತುಬಿದ್ದ ತನ್ನ ಪತಿಯನ್ನು ಆ ಮಾದ್ರಿಯು ದಿಟ್ಟಿಸಿನೋಡಿ, ಕೆಟ್ಟೆನು; ಪತಿಯು ಮೂರ್ಛೆ ಹೋದನೋ ಇಲ್ಲವೇ ಬಳಲಿದ್ದಾನೋ ವ|| ಎಂದು (ಹರಿದುಹೋದ) ನಿಂತುಹೋದ ಉಸಿರನ್ನೂ ತಣ್ಣಗಾದ ಮೆಯ್ಯನ್ನೂ ನೋಡಿ ಪತಿ ಸತ್ತನೆಂದು ತಿಳಿದಳು. ೨೦. ಪ್ರಿಯನಾದ ಪಾಂಡುರಾಜನೇ ಋಷಿಯ ಶಾಪವು ಪಾಪದ ರೂಪವನ್ನೂ ತಾಳಿರುವುದು; ತಿಳಿದೂ ತಿಳಿದೂ ತಿಳಿಯದೆ ನಿನ್ನ ಮನಸ್ಸಿನ ಸಂಯಮವನ್ನು ನಾಶಪಡಿಸಿಕೊಂಡು ಬಂದು ಪಾಪಿಷ್ಠಳಾದ ನನ್ನ ಶರೀರವನ್ನು ಏಕೆ ಮುಟ್ಟಿದೆ? ೨೧. ನೀನು ನಿನ್ನ ಸಾವನ್ನು ಸ್ವಲ್ಪವೂ ಯೋಚಿಸದೆ ನಿನ್ನೊಡನೆ ಕೂಡುತ್ತೇನೆ ಎಂದು ಬಂದಿದ್ದೀಯೇ. (ಹಾಗೆಯೇ) ನಾನೂ ನಿನ್ನೊಡನೆ

ಉನ್ನತ ಧವಳಚ್ಛತ್ರ
ಚ್ಛನ್ನ ವಿಯತ್ತಳನನಿಂದುಕುಳತಿಳಕನನಿಂ|
ತನ್ನೆಯದಿಂದೀ ಪೞುವಿನೊ
ಳೆನ್ನರಸನನಿಂತು ಬಿದಿಯೆ ತಂದಿಕ್ಕುವುದೇ|| ೨೨

ವ|| ಎಂದು ವನದೇವತೆಗಳ್ಗೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆರ್ದೆದೆದು-

ಕಂ|| ಆ ದೆಸೆಯೊಳ್ ಭೂಭುಜನೋ
ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ|
ತಾ ದೆಸೆಯೊಳ್ ಭೂಪತಿಗೇ
ನಾದುದೊ ಪೇೞ್ ಬಿದಿಯೆ ಕೆಟ್ಟೆನೞದೆನೆನುತ್ತುಂ|| ೨೩

ಬೞಯನೆ ಮಕ್ಕಳ್ ಭೋರ್ಗರೆ
ದೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿ|
ಟ್ಟೆೞಲೆ ನಡುನಡುಗೆ ಕಣ್ಣೀರ್
ಗೞಗೞನೊರ್ಮೊದಲೆ ಸುರಿಯೆ ಪರಿತಂದಾಗಳ್|| ೨೪

ವ|| ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುರಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ-

ಕಂ|| ಅಡವಿಯೊಳೆನ್ನುಮನೆನ್ನೀ
ನಡಪಿದ ಶಿಶುಗಳುಮನಿಸಿರಿಸಿ ನೀಂ ಪೇೞದೆ ಪೋ|
ದೊಡಮೇನೋ ನಿನ್ನ ಬೞಯನೆ
ನಡೆತರ್ಪೆಂ ನಿನ್ನರಸ ಬಿಸುಟೆಂತಿರ್ಪೆಂ|| ೨೫

ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಲನನೆನಗೊಪ್ಪಿಸಾನಾತನಾದುದನಪ್ಪೆನೆನೆ ಮಾದ್ರಿಯಿಂತೆಂದಳ್-

ಕಂ|| ಎನಗಿಂದಿನೊಂದು ಸೂೞುಮ
ನಿನಿಯಂ ದಯೆಗೆಯ್ದನೆನ್ನ ಸೂೞಂ ನಿನಗಾ|
ನೆನಿತಾದೊಡವಿವೆನೆ ಮ
ತ್ತನಯರ್ ಕೆಯ್ಯೆಡೆ ಪಲುಂಬದಿರ್ ಪೆಱಪೆಱವಂ|| ೨೬

ಬಂದು ಸ್ವರ್ಗದಲ್ಲಿ ನಿನ್ನಿಷ್ಟಾರ್ಥವನ್ನು ಸಲ್ಲಿಸದೆ ಬಿಡುವುದಿಲ್ಲ ೨೨. ಅಯ್ಯೋ ವಿಯೇ, ಎತ್ತರವಾದ (ರಾಜಸೂಚಕವಾದ) ತನ್ನ ಶ್ವೇತಚ್ಛತ್ರದಿಂದ ಆಕಾಶಪ್ರದೇಶವನ್ನೆಲ್ಲ ಮುಚ್ಚಿದವನೂ ಚಂದ್ರವಂಶಶ್ರೇಷ್ಠನಾದವನೂ ಆದ ಪತಿಯನ್ನು ಹೀಗೆ ಅನ್ಯಾಯದಿಂದ ಕಾಡಿನಲ್ಲಿ ತಂದೆಸೆಯುವುದೇ? ವ|| ಎಂದು ವನದೇವತೆಗಳಿಗೆಲ್ಲ ಮರುಕ ಹುಟ್ಟುವ ಹಾಗೆ ಅಳುತ್ತಿದ್ದ ಮಾದ್ರಿಯ ಆ ಧ್ವನಿಯನ್ನು ಕುಂತಿ ಕೇಳಿ ಥಟ್ಟನೆ ಎದೆಬಿರಿದು- ೨೩. ಯಾವ ದಿಕ್ಕಿನಲ್ಲಿ ರಾಜನು ಹೋದನು ಆ ದಿಕ್ಕಿನಿಂದಲೇ ಮಾದ್ರಿಯ ಕುರಣಾಮಯವಾದ ಧ್ವನಿಯೂ (ಕೇಳಿಬರುತ್ತಿದೆ) ಅಯ್ಯೋ ದೈವವೇ ನನ್ನ ರಾಜನಿಗೆ ಏನಾಗಿದೆಯೋ ಹೇಳು ಸತ್ತೆ, ಕೆಟ್ಟೆ, ಎಂದು ಚೀರಿದಳು. ೨೪. ಮಕ್ಕಳು ವಿಶೇಷ ಶಬ್ದಮಾಡಿಕೊಂಡು ಅಳುತ್ತಾ ಬೆನ್ನಹಿಂದೆಯೇ ಬರುತ್ತಿರಲು ತಲೆಯ ತುರುಬು ಬಿಚ್ಚಿ ಕೆಳಗೆ ಜೋಲುತ್ತಿರಲು ಸೊಂಟವು ನಡುಗುತ್ತಿರಲು ಕಣ್ಣೀರು ಗಳಗಳನೆ ಧಾರಾಕಾರವಾಗಿ ಹರಿಯುತ್ತಿರಲು ಕುಂತಿಯು ಓಡಿಬಂದಳು. ವ|| ತನ್ನ ಪ್ರಿಯನ ಶರೀರವನ್ನು ತಬ್ಬಿಕೊಂಡು ತನ್ನ ಸಾವನ್ನು ನಿಷ್ಕರ್ಷೆ ಮಾಡಿಕೊಂಡು ಹಲ್ಲನ್ನು ಕಿರಿಯುತ್ತಿದ್ದ (?) ಮಾದ್ರಿಯನ್ನು ಕಂಡು ಕುಂತಿಯು ನೆಲದಲ್ಲಿ ಬಿದ್ದು ಹೊರಳಾಡಿ ವಿಶೇಷವಾಗಿ ಅತ್ತಳು. ೨೫. ಈ ಕಾಡಿನಲ್ಲಿ ನನ್ನನ್ನೂ ನಾನು ಸಾಕಿದ ಈ ಮಕ್ಕಳನ್ನೂ ಬಿಟ್ಟು ನೀನು ಹೋದರೆ ತಾನೆ ಏನು? ನಾನು ನಿನ್ನ ಹಿಂದೆಯೇ ಬರುತ್ತೇನೆ. ರಾಜನೇ ನಿನ್ನನ್ನು ಬಿಟ್ಟು ನಾನು ಹೇಗಿರಬಲ್ಲೆ? ಎಂದು ಮಾದ್ರಿಯನ್ನು ಕುರಿತು ನೀನು ಈ ಕೂಸುಗಳನ್ನು ಸ್ವೀಕರಿಸಿ ಸಲಹು; ಪ್ರಿಯನನ್ನು ನನಗೊಪ್ಪಿಸು, ಅವನಾದುದನ್ನು ನಾನು ಆಗುತ್ತೇನೆ ಎನ್ನಲು ಮಾದ್ರಿ ಹೀಗೆಂದಳು- ೨೬. ನನ್ನ ಪತಿಯು ಇಂದಿನ ಸರದಿಯನ್ನು ನನಗೆ ದಯಮಾಡಿ ಕೊಟ್ಟಿದ್ದಾನೆ. ನನ್ನ ಈ ಸರದಿಯನ್ನು ನಿನಗೆ ಏನಾದರೂ ಕೊಡುತ್ತೇನೆಯೇ ! ನನ್ನ ಮಕ್ಕಳು

ವ|| ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣ್ಮಂ ಪೊಗೞೆ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ (?) ಕಿರ್ಚಿಂಗೆ ಕುಲದೊಳಂ ಚಲದೊಳಮಾವ ಕಂದುಂ ಕುಂದುಮಿಲ್ಲದೆ ತನ್ನೊರೆಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯನಿಂತೆಂದು ಸಂತೈಸಿದರ್-

ಚಂ|| ಕೞದವರ್ಗೞ್ವುದೞ್ತೊಡವರೇೞ್ವೊಡಮಂತವರಿಂ ಬೞಕ್ಕೆ ತಾ
ಮುೞವೊಡಮೇೞರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ|
ಗೞಯಿಸಿಕೊಳ್ವುದೊಂದೆ ಚದುರಿಂತುಟು ಸಂಸೃತಿ ಧರ್ಮಮೇಕೆ ಬಾ
ಯೞವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ|| ೨೭

ವ|| ಅಂತುಮಲ್ಲದೆ-

ಕಂ|| ಬಿಡದೞಲ್ವ ಬಂಧುಜನದೊ
ೞ್ಕುಡಿಯದ ಕಣ್ಣೀರ ಪೂರಮಾ ಪ್ರೇತಮನೋ|
ಗಡಿಸದೆ ಸುಡುವುದು ಗಡಮಿ
ನ್ನುಡುಗುವುದೀ ಶೋಕಮಂ ಸರೋಜದಳಾಕ್ಷೀ|| ೨೮

ವ|| ನೀನಿಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನಱಯದಜ್ಞಾನಿಗಳಂತೆ ವಿಪ್ರಳಾ ಪಂಗೆಯ್ದೆಯಪ್ಪೊಡೀ ಕೂಸುಗಳ್ ಮನಮಿಕ್ಕಿಯುಮೆರ್ದೆಯಿಕ್ಕಿಯುಂ ಕಿಡುವರೆಂದನೇಕೋಪ ಶಾಂತವಚನಂಗಳಿಂದಮಾಕೆಯುಬ್ಬೆಗಮನಾ ನುಡಿದುಮಲ್ಲಿಯ ಮುನಿಜನ ಮೆಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಱಪಿದೊಡಾಗಳ್-

ಕಂ|| ತುಱುಗಿದ ಹಿಮಬಿಂದುಗಳಿಂ
ದೆಱಗಿದ ನವ ವನಜವನದವೋಲ್ ಶೋಕದಿನಂ|
ದೊವ ನಯನೋದಬಿಂದುವಿ
ನೆಱಗಿದುದೊರ್ಮೊದಲೆ ಬಂಧುಮುಖ ವನಜವನಂ|| ೨೯

ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ವಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ

ನಿನ್ನ ಅನ; ಇದಕ್ಕೆ ವಿರೋಧವಾಗಿ ಬೇರೆ ಬೇರೆ ರೀತಿಯಲ್ಲಿ ಹಂಬಲಿಸಬೇಡ ವ|| ಎಂದು ತಪೋವನದ ಋಷಿಗಳೂ ವನದೇವತಾಸಮೂಹವೂ ತನ್ನ ಸಾಹಸವನ್ನು ಹೊಗಳುತ್ತಿರಲು ಮಾದ್ರಿಯು ದಾಹೋತ್ತರದಂತೆ (?) ತನ್ನನ್ನು ಬೆಂಕಿಗೆ ಅರ್ಪಿಸಿಕೊಂಡು (ಸಹಗಮನ ಮಾಡಿ) ಕುಲದಲ್ಲಿಯೂ ಛಲದಲ್ಲಿಯೂ ಸ್ವಲ್ಪವೂ ದೋಷವೂ ನ್ಯೂನತೆಯೂ ಇಲ್ಲದೆ ತನಗೆ ಸಮಾನರಾದವರಾರೂ ಇಲ್ಲ ಎನ್ನಿಸಿದಳು. ಇತ್ತ ಕುಂತಿಯು ದುಖದಿಂದ ಕೂಡಿದವಳಾಗಿರಲು ತಪೋವನದಲ್ಲಿದ್ದ ವೃದ್ಧ ತಾಪಸರು ಅವಳನ್ನು ಹೀಗೆಂದು ಸಮಾಧಾನಮಾಡಿದರು. ೨೭. ಸತ್ತವರು ಏಳುವ ಪಕ್ಷದಲ್ಲಿ ಅವರಿಗಾಗಿ ಅಳಬೇಕು. ಇಲ್ಲ ಅವರಾದ ಮೇಲೆ ಉಳಿದ ನಾವು ಉಳಿಯುವ ಪಕ್ಷದಲ್ಲಿಯೂ (ನಾವು ಅಳಬೇಕು). ಹಾಗೆ ಸತ್ತ ಅವರು ಏಳುವುದಿಲ್ಲ. ನಮಗೂ ಬಾಳುವೆಯಿಲ್ಲ ; ಧರ್ಮಸಂಗ್ರಹ ಮಾಡುವುದೊಂದೇ ಜಾಣತನ. ಇಂತಹುದೇ ಸಂಸಾರಧರ್ಮ. ಹೀಗಿರುವಾಗ ಗೋಳಿಡುವುದೇಕೆ? ಚಿಂತಿಸುವುದೇಕೆ? ಹಲುಬುವುದೇಕೆ? ವ್ಯಥೆಪಡುವುದೇಕೆ? ವ|| ಹಾಗೂ ಅಲ್ಲದೆ ೨೮. ನಿರಂತರವಾಗಿ ಅಳುವ ಬಂಧುಜನಗಳ ಕಣ್ಣೀರಿನ ಪ್ರವಾಹವು ಆ ಪ್ರೇತವನ್ನು ಅಸಹ್ಯಪಡುವ ರೀತಿಯಲ್ಲಿ ಸುಡುವುದಿಲ್ಲವೆ? ಕಮಲಪತ್ರದಂತೆ ಕಣ್ಣುಳ್ಳ ಎಲೈ ಕುಂತಿಯೇ ಇನ್ನು ಈ ದುಖವನ್ನು ನಿಲ್ಲಿಸತಕ್ಕದ್ದು. ವ|| ನೀನು ಸಂಸಾರಸ್ಥಿತಿಯನ್ನು ತಿಳಿಯದ ಜ್ಞಾನಿಯಂತೆ ದುಖಾಕ್ರಾಂತಳಾಗಿ ವಿಶೇಷವಾಗಿ ಹಲುಬಿದರೆ ಮಕ್ಕಳು ಉತ್ಸಾಹಶೂನ್ಯರಾಗಿಯೂ ಅಧೈರ್ಯರಾಗಿಯೂ ಕೆಟ್ಟುಹೋಗುವರು ಎಂದು ಅನೇಕ ವಿಧವಾದ ಸಮಾಧಾನದ ಮಾತುಗಳಿಂದ ಆಕೆಯ ಉದ್ವೇಗವು ಕಡಮೆಯಾಗುವ ಹಾಗೆ ನುಡಿದುದಲ್ಲದೆ ಅಲ್ಲಿಯ ಋಷಿಸಮೂಹವೆಲ್ಲ ಆ ಮಕ್ಕಳನ್ನೂ ಕುಂತಿಯನ್ನೂ ಮುಂದಿಟ್ಟುಕೊಂಡು ಜೊತೆಯಲ್ಲಿ ಕರೆದುಕೊಂಡು ಹಸ್ತಿನಾಪಟ್ಟಣಕ್ಕೆ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೂ ಅಂಬಾಲೆಗೂ ಪಾಂಡುರಾಜನ ವೃತ್ತಾಂತವನ್ನು ತಿಳಿಸಿದರು.

೨೯. ದಟ್ಟವಾಗಿ ಬೀಳುವ ಮಂಜಿನಹನಿಗಳಿಂದ (ಬಗ್ಗಿರುವ) ಆವರಿಸಲ್ಪಟ್ಟ ಹೊಸತಾವರೆಯ ತೋಟದಂತೆ ಬಂಧುಜನಗಳ ಮುಖವೆಂಬ ಕಮಲದ ವನವು ಅಂದು ದುಖದಿಂದ ಸ್ರವಿಸುತ್ತಿರುವ ಕಣ್ಣಿನ ಹನಿಗಳಿಂದ ಒಟ್ಟಿಗೇ ಬಗ್ಗಿದುವು. ವ|| ಆಗ ಮಗನ ಮೇಲಿನ ಪ್ರೀತಿಯಿಂದ ಗೋಳಿಡುತ್ತಿದ್ದ ಅಂಬಾಲೆಯನ್ನೂ ನೆಂಟರನ್ನೂ ನೋಡುವುದರಿಂದ ಪುನ ಕಾಣಿಸಿಕೊಂಡ ದುಖದಿಂದ ಬಾಯಿ ಬಿಟ್ಟು

ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ ತದನಂತರದೊಳದುವೆ ನಿರ್ವೇಗಮಾಗೆ ವ್ಯಾಸವಚನದೊಳ್ ಸತ್ಯವತಿಯುಮಂಬಿಕೆಯುಮಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನಾಶ್ರಯಿಸಿದರಿತ್ತ ಗಾಂಗೇಯನಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಮಿರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳಯ್ವರುಂ ಸಹಪಾಂಸುಕ್ರೀಡಿತರಾಗಿ-

ಕಂ|| ಒಡನಾಡಿಯುಮೊಡನೋದಿಯು
ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ|
ಪೊಡೆಸೆಂಡೆಂಬಿವನಾಡು
ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್|| ೩೦

ವ|| ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮಮಾಡಿ ಕೋಲನೀಡಾಡಿ ಪಲವು ಸೂೞು ಕಾಡಿ-

ಕಂ|| ಪರಿದನಿಬರುಮೊಡನಡರ್ದಿರೆ
ಮರನಂ ಮುಟ್ಟಲ್ಕೆ ಪಡೆಯದನಿಬರ್ಗಂ ಕಿಂ|
ಕಿರಿವೋಗಿ ಭೀಮಸೇನಂ
ಮರನಂ ಪಿಡಿದಲ್ಗೆ ಪಣ್ವೊಲನಿಬರುಮುದಿರ್ದರ್|| ೩೧

ವ|| ಅಂತು ಬಿೞ್ದು ಸುಲಿದ ಮೊೞಕಾಲ್ಗಳುಂ ಕೞಲ್ದ ಪಲ್ಗಳುಮೆಲ್ವಡಗಾದ ಮೈಯ್ಗಳು ಮುಡಿದ ಕೆಯ್ಗಳುಮಾಗಿ ಬೆರಸೞುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂಬೇೞ್ದೊಡವರಿಂದಿತ್ತ ಭೀಮನೊಡನಾಡದಿರಿಮೆಂದು ಮುದುಗಣ್ಗಳ್ ಬಾರಿಸೆ ತಮ್ಮ ನೊಂದು ಸಿಗ್ಗಿಂಗನಿಬರುಮೊಂದಾಗಿ ಪೋಗಿ ಪೊಱವೊೞಲ ಮರದ ಕೆಳಗೆ ಮಱಸೊಂದಿದ ಭೀಮನನಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿ-

ಕಂ|| ಪಾವುಗಳಂ ಕೊಳಿಸಿ ಮಹಾ
ಗ್ರಾವಮನುಱದಡಸಿ ಕಟ್ಟಿ ಕೊರಲೊಳ್ ಗಂಗಾ|
ದೇವಿಯ ಮಡುವಿನೊಳೞದ
ರಾವರಿಸದೆ ತಮ್ಮ ಕುಲಮನಡಿಗೞವವೋಲ್|| ೩೨

ಅಳುತ್ತಿದ್ದ ಕುಂತಿ, ಭೀಷ್ಮ, ಧೃತರಾಷ್ಟ್ರ, ವಿದುರರುಗಳನ್ನೂ ಸತ್ಯವತಿದೇವಿಯನ್ನೂ ಸಮಾಧಾನಮಾಡಿ ಪಾಂಡುರಾಜನಿಗೆ ತರ್ಪಣಾದಿ ಕ್ರಿಯೆಗಳನ್ನು ಮಾಡಿ ಮುಗಿಸಿ ಆಮೇಲೆ ಆ ದುಖವೇ ವಿರಕ್ತಿಗೆ ಕಾರಣವಾಗಲು ವ್ಯಾಸರ ಉಪದೇಶದಂತೆ ಸತ್ಯವತಿಯೂ ಅಂಬೆ ಅಂಬಾಲೆಯರೂ ಸಂಸಾರ ತ್ಯಾಗಮಾಡಿ ತಪೋವನವನ್ನು ಆಶ್ರಯಿಸಿದರು. ಈ ಕಡೆ ಭೀಷ್ಮನು ಅಯ್ದು ಮಕ್ಕಳನ್ನೂ ತನ್ನ ಮಡಿಲೇ ತೊಟ್ಟಿಲಾಗಿರುವಂತೆ ಸಾಕುತ್ತಿರಲು ದುರ್ಯೋಧನನೇ ಮೊದಲಾದ ನೂರು ಮಂದಿಯೂ ಧರ್ಮರಾಜನೇ ಮೊದಲಾದ ಅಯ್ದು ಜನಗಳೂ ಒಟ್ಟಿಗೆ ಧೂಳಾಟವನ್ನಾಡುತ್ತಿರುವವರಾದರು. ೩೦. ಒಡನೆ ಆಡಿಯೂ ಒಡನೆ ಓದಿಯೂ ಜೊತೆಯಲ್ಲಿಯೇ ಬೆಳೆದೂ ಗೊಳ್ಳೆಗೊಟ್ಟಿ, ಬಟ್ಟಿ, ಉಳಿಸೆಂಡು, ಪೊಡೆಸೆಂಡು ಎಂಬ ಈ ಆಟಗಳನ್ನಾಡುತ್ತಲೂ ತಮ್ಮ ತಮ್ಮಲ್ಲಿ ಪ್ರತ್ಯೇಕವಾದ ಸ್ನೇಹವನ್ನು ಬೆಳೆಸುತ್ತ ಜೊತೆಯಲ್ಲಿಯೇ ಬೆಳೆದರು. ವ|| ಆ ಮಕ್ಕಳು ಮಕ್ಕಳಾಟವನ್ನಾಡುತ್ತಿದ್ದು ಒಂದು ದಿನ ಮರಗೆರಸಿಯೆಂಬ ಆಟವನ್ನು ಆಡಲೆಂದು (ಬಂದು) ಮುಂದಿನ ತಮ್ಮ ಹಗೆತನ ಹಬ್ಬುವುದನ್ನು (ಇಂದೇ) ಸೂಚಿಸುವಂತೆ ಹನ್ನೆರಡು ಮತ್ತರಷ್ಟು ಅಗಲವಾಗಿ ಬೆಳೆದ ಆಲದಮರದ (ಕೆಳಭಾಗಕ್ಕೆ) ಬಂದ ಭೀಮನನ್ನು ಕಾಣದ ಹಾಗೆ ಇರಿಸಿ ಕೋಲನ್ನೆಸೆದು ಅನೇಕ ಸಲ ಕಾಡಿದನು. ೩೧. ಓಡಿದ ಅಷ್ಟಮಂದಿಯೂ ಒಟ್ಟಿಗೆ ಮರವನ್ನು ಹತ್ತಿರಲು ಅವರನ್ನು ಮುಟ್ಟುವುದಕ್ಕಾಗದೆ ಅಷ್ಟು ಜನರ ಮೇಲೆಯೂ ರೇಗಿ ಕೋಪಿಸಿಕೊಂಡು ಭೀಮನು ಮರವನ್ನು ಹಿಡಿದು ಅಳ್ಳಾಡಿಸಲು ಹಣ್ಣಿನ ಹಾಗೆ ಅಷ್ಟು ಜನವೂ ಕೆಲಗೆ ಉದುರಿದರು (ಬಿದ್ದರು). ವ|| ಹಾಗೆ ಬಿದ್ದು ತರೆದುಹೋದ ಮೊಣಕಾಲುಗಳಿಂದಲೂ ಕಳೆದುಹೋದ ಹಲ್ಲುಗಳಿಂದಲೂ ಜಜ್ಜಿಹೋದ ಶರೀರದಿಂದಲೂ ಮುರಿದ ಕಯ್ಯಿಂದಲೂ ಕೂಡಿ ಅಳುತ್ತಾ ಬಂದು ಭೀಷ್ಮ ಧೃತರಾಷ್ಟ್ರರಿಗೆ ಹಾಗಾಗುವುದಕ್ಕೆ ಕಾರಣವನ್ನು ತಿಳಿಸಲು ಅವರು ಅಂದಿನಿಂದ ಮುದೆ ಭೀಮನೊಡ ನಾಡಬೇಡಿ ಎಂದು ವೃದ್ಧರು (ಮುದಿಕಣ್ಣುಗಳು) ನಿವಾರಿಸಲು ತಾವು ನೊಂದ ನಾಚಿಕೆಗಾಗಿ ಅಷ್ಟು ಜನವೂ ಒಟ್ಟುಗೂಡಿಹೋಗಿ ಪಟ್ಟಣದ ಹೊರಭಾಗದಲ್ಲಿ ಮರದ ಕೆಳಗೆ ಮೈಮರೆತು ನಿದ್ದೆಮಾಡುತ್ತಿದ್ದ ಭೀಮನ ಮೇಲೆ ಬಿದ್ದು ಹಿಡಿದು ನೂರುಜನರೂ ಅವನ ಕತ್ತನ್ನು ತುಳಿದು ೩೨. ಹಾವುಗಳಿಂದ ಕಚ್ಚಿಸಿ ದೊಡ್ಡಕಲ್ಲನ್ನು ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ತಮ್ಮ ವಂಶವನ್ನೇ ತಳಕ್ಕೆ ಅದ್ದುವ ಹಾಗೆ

ವ|| ಅಂತೞ್ದುವುದುಂ ಗಂಗಾದೇವಿಯ ವರಪ್ರಸಾದದೊಳ್ ವಿಷಮ ವಿಷಧರಂಗಳ್ ಪರಿಯೆ ಕೊರಲೊಳ್ ತೊಡರ್ದ ಶಿಲೆಯಂ ಪಱದೀಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುೞ್ದು ಬಂದಂಗೆ ವಿಷದ ಲಡ್ಡುಗೆಯನಿಕ್ಕಿಯುಮೆನಿತಾನುಮುಪ ದ್ರವಂಗಳೊಳ್ ತೊಡರಿಕ್ಕಿಯುಂ ಗೆಲಲಾಱದೆ ಮನಮಿಕ್ಕಿಯುಮೆರ್ದೆಯಿಕ್ಕಿಯುಮಿರ್ದರಂತಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಸುಖಮಿರ್ಪನ್ನೆಗಮಿತ್ತ ಗಂಗಾದ್ವಾರದೊಳ್ ಮಾಯಾಪುರಮೆಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಮಾ ಋಷಿಗೆ ಬಿಲ್ಲುಮಂಬುಂವೆರಸೊರ್ವ ಮಗಂ ಪುಟ್ಟಿದನಾತಂಗೆ ಶರದ್ವತನೆಂದು ಪೆಸರನಿಟ್ಟು ನಡಪೆ ಬಳೆದು ತಪಂಗೆಯ್ವಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದಿಂದ್ರನಚ್ಚರಸೆ ಜಲಚರೆಯೆಂಬವಳ್ ಬಂದೊಡಾಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿ-

ಕಂ|| ಒಗೆದ ಶರಸ್ತಂಬದೊಳಿ
ರ್ಬಗಿಯಾಗಿ ಮನೋಜ ರಾಗರಸಮುಗುತರೆ ತೊ|
ಟ್ಟಗೆ ಬಿಸುಟು ಬಿಲ್ಲನಂಬುಮ
ನಗಲ್ದನಾಶ್ರಮದಿನುದಿತ ಲಜ್ಜಾವಶದಿಂ|| ೩೩

ವ|| ಅನ್ನೆಗಮಾ ತಪೋವನಕ್ಕೆ ಬೇಂಟೆಯಾಡಲ್ಬಂದ ಶಂತನುವಿನೊಡನೆಯವರಾ ಶರಸ್ತಂಬದೊಳ್ ಪರಿಕಲಿಸಿರ್ದ ಮುನೀಂದ್ರನಿಂದ್ರಿಯ ದೊಳೊಗೆದ ಪೆಣ್ಗೂಸುಮಂ ಗಂಡುಗೂಸುಮನವಱ ಕೆಲದೊಳಿರ್ದ ದಿವ್ಯ ಶರಾಸನ ಶರಂಗಳುಮಂ ಕಂಡು ಕೊಂಡುಪೋಗಿ ಶಂತನುಗೆ ತೋಱದೊಡಾತನುಮಾ ಶಿಶುದ್ವಯಮಂ ನಿಜ ಗಜಪುರಕ್ಕುಯ್ದು ಕೃಪೆಯಿಂ ನಡಪಿದನಪ್ಪುದಱಂ ಕೃಪನುಂ ಕೃಪೆಯುಮೆಂದು ಪೆಸರನಿಟ್ಟು ನಡಪುತ್ತಿರ್ಪನ್ನೆಗಮವರಯ್ಯಂ ಶರದ್ವತನಲ್ಲಿಗೆ ಬಂದು ಕಿಱಯಾತಂಗೆ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಧನುರ್ವಿದ್ಯೋಪದೇಶಂಗೆಯ್ಯೆ ಸರ್ವವಿದ್ಯಾವಿಶಾರದನಾದನಾ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂಗೆಯ್ಸೆ-

ಚಂ|| ಬರೆಯದೆ ಬಂದ ಸುದ್ದಗೆಯೆ ಸೂತ್ರಮನೊಂದೆ ಮುಹೂರ್ತಮಾತ್ರದಿಂ
ಬರಿಸಿದುದುಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತ್ಮವೃತ್ತಿವೋಲ್|
ಪರಿಣಮಿಸಿತ್ತು ಮತ್ತುೞದ ವಿದ್ಯೆಗಳೋಜರೆ ಚಟ್ಟರೆಂಬಿನಂ
ನೆರೆದುವು ತನ್ನೊಳಾರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್|| ೩೪

ವಿಚಾರಮಾಡದೆ ಗಂಗಾನದಿಯ ಮಡುವಿನಲ್ಲಿ ಮುಳುಗಿಸಿದರು. ವ|| ಹಾಗೆ ಮುಳುಗಿಸಿದರೂ ಗಂಗಾದೇವಿಯ ವರಪ್ರಸಾದದಿಂದ ವಿಷಯುಕ್ತವಾದ ಹಾವುಗಳು ಹರಿದುಹೋದವು. ಕೊರಳಿನಲ್ಲಿ ಕಟ್ಟಿದ್ದ ಕಲ್ಲನ್ನು ಕಿತ್ತು ಬಿಸಾಡಿ ಗಂಗೆಯ ನೀರನ್ನು ತೋಳಿನಿಂದ ಕಲಕಿ ತಳ್ಳಿ ಪುನ ಹಿಂತಿರುಗಿದವನಿಗೆ ವಿಷದ ಲಾಡುಗಳನ್ನು ತಿನ್ನಿಸಿಯೂ ಇನ್ನೂ ಅನೇಕ ವಿಧವಾದ ಕಷ್ಟಗಳಲ್ಲಿ ಸಿಕ್ಕಿಸಿಯೂ ಗೆಲ್ಲಲಾರದೆ ಉತ್ಸಾಹಶೂನ್ಯರಾಗಿಯೂ ಧೈರ್ಯಕುಗ್ಗಿದವವಾಗಿಯೂ ಇಧ್ದರು. (ಈ ಕಡೆ) ಭೀಷ್ಮನು ಅಯ್ದು ಜನ ಮಕ್ಕಳಿಗೂ ಚೌಲೋಪನಯನಾದಿ ಕರ್ಮಗಳನ್ನು ಮಾಡಿ ಸುಖನಾಗಿದ್ದನು. (ಈ ಕಡೆ) ಗಂಗಾದ್ವಾರದಲ್ಲಿ ಮಾಯಾಪುರವೆಂಬ ಋಷ್ಯಾಶ್ರಮದಲ್ಲಿ ಗೌತಮನೆಂಬ ಬ್ರಹ್ಮಋಷಿಯು ತಪಸ್ಸು ಮಾಡುತ್ತಿರಲು ಆ ಋಷಿಗೆ ಬಿಲ್ಲುಬಾಣಗಳಿಂದ ಕೂಡಿದ ಒಬ್ಬ ಮಗನು ಹುಟ್ಟಿದನು. ಅವನಿಗೆ ಶರದ್ವತನೆಂದು ಹೆಸರನ್ನಿಟ್ಟು ಸಲಹಿದನು. ಅಭಿವೃದ್ಧಿಯಾದ (ಬೆಳೆದ) ಆ ಋಷಿಯ ಬಳಿಗೆ ಜಲಕ್ರೀಡೆಯ ನೆಪದಿಂದ ಇಂದ್ರನ ಅಪ್ಸರಸ್ತ್ರೀಯಾದ ಜಲಚರೆಯೆಂಬುವಳು ಬರಲು (ಆ ಋಷಿಯು) ಆಕೆಯನ್ನು ನೋಡಿ ಕಾಮಾಸಕ್ತನಾಗಿ ಅವಳೊಡನೆ ಕೂಡಿ- ೩೩. ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ ರೇತಸ್ಸು ಎರಡು ಭಾಗವಾಗಿ ಸುರಿಯಲು ಆ ಶರದ್ವತನು ತನಗೊದಗಿದ ನಾಚಿಕೆಯಿಂದ ಬಿಲ್ಲುಬಾಣಗಳನ್ನು ಕೂಡಲೆ ಬಿಸಾಡಿ ಋಷ್ಯಾಶ್ರಮವನ್ನು ಬಿಟ್ಟು ಹೋದನು. ವ|| ಅಷ್ಟರಲ್ಲಿ ಆ ತಪೋವನಕ್ಕೆ ಬೇಟೆಯಾಡುವುದಕ್ಕಾಗಿ ಬಂದಿದ್ದ ಶಂತನುವಿನೊಡನಿದ್ದವರು ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ್ದ ಋಷಿಶ್ರೇಷ್ಠನ ವೀರ್ಯದಿಂದ (ರೇತಸ್ಸಿನಿಂದ) ಹುಟ್ಟಿದ ಹೆಣ್ಣು ಕೂಸನ್ನೂ ಗಂಡುಕೂಸನ್ನೂ ಅವುಗಳ ಪಕ್ಕದಲ್ಲಿ ಬಿಲ್ಲುಬಾಣಗಳನ್ನೂ ನೋಡಿ ಅವುಗಳನ್ನು ತೆಗೆದುಕೊಂಡು ಹೋಗಿ ಶಂತುನುವಿಗೆ ತೋರಿಸಿದರು. ಅವನು ಆ ಎರಡು ಮಕ್ಕಳನ್ನೂ ತನ್ನ ಹಸ್ತಿನಾಪುರಕ್ಕೆ (ಕರೆದು) ಕೊಂಡುಹೋಗಿ ಕೃಪೆಯಿಂದ ಕೃಪೆ ಮತ್ತು ಕೃಪ ಎಂದು ಹೆಸರಿಟ್ಟು ಸಾಕಿದನು. ಅವರ ತಂದೆಯಾದ ಶರದ್ವತನು ಅಲ್ಲಿಗೆ ಬಂದು ಚಿಕ್ಕವನಿಗೆ ಚೌಳೋಪನಯನವೇ ಮೊದಲಾದ ಕರ್ಮಗಳನ್ನೂ ಮಾಡಿ ಬಿಲ್ಲಿನ ವಿದ್ಯೆಯನ್ನೂ ಹೇಳಿಕೊಡಲು ಅವನು ಸರ್ವವಿದ್ಯಾವಿಶಾರದನಾದನು. ಭೀಷ್ಮನು ಆ ಕೃಪಾಚಾರ್ಯರ ಬಳಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿದನು. ೩೪. ಗುಣಾರ್ಣವನ ಹಾಗೆ (ಅರ್ಜುನ-ಅರಿಕೇಸರಿ) ಕುಶಾಗ್ರಬುದ್ಧಿಗಳಾಗಿರುವವರು ಯಾರಿದ್ದಾರೆ? ಏಕೆಂದರೆ ಶುದ್ಧವರ್ಣಮಾಲೆಯ ಸೂತ್ರವನ್ನೂ ಅಭ್ಯಾಸ ಮಾಡದೆಯೇ ಕ್ಷಣಮಾತ್ರದಲ್ಲಿ ಅಕ್ಷರಗಳನ್ನೂ ಕಲಿತನು. ಹಾಗೆಯೇ ಸೂತ್ರರೂಪದಲ್ಲಿ ಹೇಳಿದವುಗಳು ಅರ್ಥವಿವರಣೆಯಿಲ್ಲದೆಯೇ ತನ್ನ ಸಹಜ ಸ್ವಭಾವದಿಂದಲೇ ಅವನಿಗೆ ಅನವಾದುವು. ಉಳಿದ ಅನೇಕ ವಿದ್ಯೆಗಳು ಉಪಾಧ್ಯಾಯರೇ ಶಿಷ್ಯರಾದಂತೆ ಅವನಲ್ಲಿ

ವ|| ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀಪ್ರರೋಚನಾಪ್ರಸ್ತಾವನೇತಿವೃತ್ತ ಸಂ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಮಾಱಂಗ ದೊಳಮಯ್ದು ತೆಱದ ಮಂತ್ರಂಗಳೊಳಮಾಱುಂ ದರ್ಶನದೊಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತ್ರದೊಳಂ ನಾರದಾದಿ ಪ್ರಣೀತ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾ ಪೂರ್ವಯಂತ್ರ ಪ್ರಯೋಗ ವಿಷಾಪಹರಣ ಸರಭೇದ ರತಿತಂತ್ರೇಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳತಿಮತಿ ಪ್ರವೀಣನುಮಾರೂಢಸರ್ವಜ್ಞ ಮಹೇಂದ್ರ ಜಾಣ(?)ನುಮಾಗಿ-

ಕಂ|| ಉಳ್ಳೋದುಗಳೊಳಗನಿತಱ
ವುಳ್ಳರ್ಗಂ ತಿಳಿಪಲರಿಯದೆನಿಪೆಡೆಗಳುಮಂ|
ತೆಳ್ಳಗಿರೆ ತಿಳಿಪುಗುಂ ಬೆಸ
ಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ|| ೩೫

ವ|| ಎಂದು ಲೋಕಮೆಲ್ಲಂ ಪೊಗೞೆ ನೆಗೞ್ದ ಪೊಗೞ್ತೆಗಂ ನೆಗೞ್ತೆಗಂ ತಾನೆ ಗುಱಯಾಗಿ-

ಕಂ|| ಮಾನಸದೊಳ್ ಹಂಸೆಯವೋಲ್
ಮಾನಸ ವಾಗ್ವನಿತೆ ತನ್ನ ಮಾನಸದೊಳಿವಂ|
ಮಾನಸನೆಂದಗಲದೆ ನಿಲೆ
ಮಾನಸನಾದಂ ಸರಸ್ವತೀ ಕಳಹಂಸಂ|| ೩೬

ವ|| ಅಂತಯ್ಯರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗೆ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ ಭೀಮಸೇನಂ ವ್ಯಾಕರಣದೊಳಾರಿಂದ ಮಗ್ಗಳಂ ಕುಶಲನಾದಂ ನಕುಲಂ ಕುಂತಶಸ್ತ್ರದೊಳತಿ ಪ್ರವೀಣನುಮಾಗಿ ಅಶ್ವವಿದ್ಯೆಯೊಳಾರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳತಿ ಪರಿಣತನಾದಂ

ಸೇರಿಕೊಂಡವು. ವ|| ಹಾಗೆ ಅಯ್ದು ಅಂಗಗಳಿಂದ ಕೂಡಿದ ವ್ಯಾಕರಣಶಾಸ್ತ್ರ ಮತ್ತು ವೃತ್ತಿಭೇದದಿಂದ ಕೂಡಿದ ಛಂದಶ್ಶಾಸ್ತ್ರಗಳಲ್ಲಿಯೂ ಶಬ್ದಾಲಂಕಾರದಿಂದ ಕೂಡಿದ ಅಲಂಕಾರಶಾಸ್ತ್ರದಲ್ಲಿಯೂ ವ್ಯಾಸ ವಾಲ್ಮೀಕಿ ಕಶ್ಯಪ ಮೊದಲಾದವರಿಂದ ರಚಿತವಾದ ಮಹಾಕಾವ್ಯಗಳಲ್ಲಿಯೂ ನಾಂದಿ, ಪ್ರರೋಚನ, ಪ್ರಸ್ಥಾವನ, ಇತಿವೃತ್ತ, ಸಂಪ್ರವೇಶ, ನಿಷ್ಕಂಭ, ಕಪೋತಿಕಾ, ವ್ಯಾಳಿಕಾ ಮೊದಲಾದ ಲಕ್ಷಣಗಳಿಂದ ಕೂಡಿದ ನಾಟಕಶಾಸ್ತ್ರದಲ್ಲಿಯೂ ಹದಿನೆಂಟು ಧರ್ಮಶಾಸ್ತ್ರಗಳಲ್ಲಿಯೂ ನಾಲ್ಕು ವೇದಗಳಲ್ಲಿಯೂ ಆರು ಅಂಗಗಳಲ್ಲಿಯೂ ಅಯ್ದು ರೀತಿಯ ಮಂತ್ರಗಳಲ್ಲಿಯೂ ಆರು ದರ್ಶನಗಳಲ್ಲಿಯೂ ಭರತಪ್ರಣೀತವಾದ ನಾಟ್ಯ ಶಾಸ್ತ್ರದಲ್ಲಿಯೂ ನಾರದನೇ ಮೊದಲಾದವರಿಂದ ರಚಿತವಾದ ಸಂಗೀತ ವಿದ್ಯಾವಿಶೇಷಗಳಲ್ಲಿಯೂ ಹಸ್ತಿಶಾಸ್ತ್ರಜ್ಞರಾಜ ರಾಜಪುತ್ರ ಗೌತಮ, ವಾದ್ವಾಕಿ, ಪಾಳಕಾಪ್ಯ, ಸುಗತಿ, ಶ್ರೀಹರ್ಷನೇ ಮೊದಲಾದ ಪ್ರಾಚೀನರಿಂದ ವಿರಚಿತವಾದ ಹಸ್ತಿಶಾಸ್ತ್ರದಲ್ಲಿಯೂ ಚಿತ್ರಕರ್ಮ, ಪತ್ರಚ್ಛೇದ, ಗ್ರಹಗಣಿತ, ರತ್ನಪರೀಕ್ಷೆಗಳಲ್ಲಿಯೂ ದಾರುಕರ್ಮ, ವಾಸ್ತು – ವಿದ್ಯೆಗಳಿಂದ ಕೂಡಿದ ಯಂತ್ರೋಪಯೋಗದಲ್ಲಿಯೂ ವಿಷಾಪಹರಣ, ಸ್ವರಭೇದ, ರತಿತಂತ್ರ, ಇಂದ್ರಜಾಲ ಮೊದಲಾದ ಬಗೆಬಗೆಯ ವಿದ್ಯೆಗಳಲ್ಲಿಯೂ ಅನೇಕಾಕ್ಷರ ಸ್ವರೂಪದಲ್ಲಿಯೂ ಚಾಪ, ಚಕ್ರ, ಪರಸು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಗರ, ಗದೆಯೇ ಮೊದಲಾದ ವಿಧವಿಧವಾದ ಆಯುಧಗಳ ಪ್ರಯೋಗದಲ್ಲಿಯೂ ಅತಿಪ್ರವೀಣನೂ ಸರ್ವಜ್ಞತ್ವವುಳ್ಳವನೂ ಇಂದ್ರನಂತೆ ಜಾಣನೂ ಆದನು. ೩೫. ಇರುವ ವಿದ್ಯೆಗಳಲ್ಲೆಲ್ಲ ಪೂರ್ಣಪಾಂಡಿತ್ಯಪಡೆದವರಿಗೂ ತಿಳಿಸುವುದಕ್ಕೆ ಅಸಾಧ್ಯವಾದ ಸ್ಥಳಗಳಲ್ಲಿಯೂ ಅರ್ಜುನನು (ಅರಿಕೇಸರಿಯು) ಸರಳವಾಗಿ ತಿಳಿಸುತ್ತಾನೆ. ಅರ್ಜುನನ ಲೆಕ್ಕಪೊಕ್ಕಗಳನ್ನು ವಿಚಾರಮಾಡಿ ನೋಡಯ್ಯಾ ವ|| ಎಂದು ಲೋಕದ ಜನರೆಲ್ಲ ಹೊಗಳುವ ಹಾಗೆ ಪ್ರಸಿದ್ಧಿಪಡೆದ ಹೊಗಳಿಕೆಗೂ ಪ್ರಸಿದ್ಧಿಗೂ ತಾನೆ ಗುರಿಯಾದನು. ೩೬. ಇವನ ಮನಸ್ಸಿನಲ್ಲಿ ಹುಟ್ಟಿದ ವಾಗ್ದೇವತೆಯು ಇವನು ಮನುಷ್ಯನೆಂದು ಬಿಟ್ಟು ಹೋಗದೆ ಮಾನಸ ಸರೋವರದಲ್ಲಿರುವ ಹಂಸಪಕ್ಷಿಯ ಹಾಗೆ ಸ್ಥಿರವಾಗಿ ನಿಲ್ಲಲು ಸರಸ್ವತಿಯ ವಾಹನವಾದ ಹಂಸದ ಹಾಗಿರುವ ಅರ್ಜುನನು ಮನುಷ್ಯಮಾತ್ರನಾಗಿದ್ದಾನೆ. ವ|| ಹಾಗೆ ಅಯ್ದು ಜನರೂ ಸಮಸ್ತಶಸ್ತ್ರಶಾಸ್ತ್ರಪ್ರಯೋಗಗಳಲ್ಲಿಯೂ ನಿಪುಣರಾದರು. ಧರ್ಮರಾಜನು ಧರ್ಮಶಾಸ್ತ್ರಗಳಲ್ಲಿಯೂ ಶ್ರುತಿಸ್ಮೃತಿಗಳಲ್ಲಿಯೂ ಪ್ರವೀಣನಾದನು. ಭೀಮಸೇನನು ವ್ಯಾಕರಣದಲ್ಲಿ ಎಲ್ಲರಿಗಿಂತಲೂ ಮೇಲಾದ ಬುದ್ಧಿವಂತನಾದನು. ನಕುಲನು ಕುಂತಶ್ಶಾಸ್ತ್ರದಲ್ಲಿ ಪ್ರವೀಣನಾಗಿ ಅಶ್ವವಿದ್ಯೆಯಲ್ಲಿ ಎಲ್ಲರಿಗಿಂತಲೂ ಹಿರಿಯನಾದನು. ಸಹದೇವನು

ಚಂ|| ಬಳೆದುವು ತೋಳ್ಗಳೆಕ್ಕೆಯಿನಮಳ್ ಬಳೆವಂತಿರೆ ಮುಯ್ವುಗಳ್ ಕುಳಾ
ಚಳ ಶಿಖರಂಗಳಂ ಮಸುಳೆವಂದುವು ಪರ್ವಿದ ವಕ್ಷವಿ ಕ್ಷಮಾ|
ತಳ ಕುಳಲಕ್ಷ್ಮಿಗಾಯ್ತು ಕುಳಮಂದಿರಮೆಂದು ಮಹೀತಳಂ ಮನಂ
ಗೊಳೆ ನೆದತ್ತುದಾತ್ತ ನವಯೌವನಮೊರ್ಮೆಯೆ ಧರ್ಮಪುತ್ರನಾ|| ೩೭

ವ|| ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತಪ್ಪ ತನ್ನ ಮೆಯ್ಯ ಬಣ್ಣ ಮಳವಲ್ಲದೊಪ್ಪೆ-

ಚಂ|| ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂ
ತೊಳವೆನಿಪಂತುಟಪ್ಪ ಪೊಸ ಬಣ್ಣದೊಳೊಂದಿದ ಪಾರಿಜಾತಮ|
ಗ್ಗಳಮೆಸೆದೊಪ್ಪುವಂತೆ ತಳಿರಿಂ ಮುಗುಳಿಂ ನವಯೌವನಂ ಮನಂ
ಗೊಳೆ ಕರಮೊಪ್ಪಿದಂ ದಶ ಸಹಸ್ರ ಮದೇಭ ಬಳಂ ವೃಕೋದರಂ|| ೩೮

ವ|| ಅಂತೊಪ್ಪುವ ಗಂಡಗಾಡಿಯೊಳಿಂದ್ರನೀಲದಂತಪ್ಪ ಬಣ್ಣಂ ಕಣ್ಗೆವರೆ-

ಚಂ|| ಶರದದ ಚಂದ್ರನಂ ವಿಮಲ ಚಂದ್ರಿಕೆ ಬಾಳದಿನೇಶನಂ ತಮೋ
ಹರಕಿರಣಂ ಕಿಶೋರ ಹರಿಯಂ ನವಕೇಸರ ರಾಜಿ ಮಿಕ್ಕ ದಿ|
ಕ್ಕರಿಯನನೂನ ದಾನ ಪರಿಶೋಭೆ ಮನಂಗೊಳೆ ಪೊರ್ದುವಂತೆ ಸುಂ
ದರ ನವಯೌವನಂ ನೆಯೆ ಪೊರ್ದೆ ಗುಣಾರ್ಣವನೊಪ್ಪಿ ತೋಱದಂ|| ೩೯

ವ|| ಅಂತು ನವಯೌವನಂ ನೆಯೆ ನಿಱನಿಱಗೊಂಡ ಗುಣಾರ್ಣವನ ತಲೆ ನವಿರ್ಗಳ್ ಲಾವಣ್ಯರಸಮನಿಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು ಮೂಱುಂ ಲೋಕದ ಮೂಱು ಪಟ್ಟಮನಾಳಲ್ಕೆ ತಕ್ಕ ಲಕ್ಷಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟಿದ ನೊಸಲ್ಗೆ ಲಕ್ಷಣಮನಱಸಲ್ವೇಡೆಂಬಂತಾದುದು ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರೆರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್ ಕಾಮದೇವನ ವಿಜಯ ವೈಜಯಂತಿಗಳಂತಾದುವು ನೀಳ್ಪಂ ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಣಿದಂತೆ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳೆಂಬಲರಂಬುಗಳ್ ಗಣಿಕಾಜನಂಗಳೆರ್ದೆಯಂ ನಟ್ಟು ಕೆಂಕಮಾದಂತಾದುವು ರಿಪುಜನದ ಪೆರ್ಚಿಂಗಂ ಪರಾಂಗನಾಜನದ ಮೆಚ್ಚಿಂಗಂ ಮೂಗಿಱವಂತೆ

ಜ್ಯೋತಿಶ್ಶಸ್ತ್ರದಲ್ಲಿ ಪಂಡಿತನಾದನು. ೩೭. ಧರ್ಮ ರಾಜನ ಎರಡು ತೋಳುಗಳೂ ಅವಳಿಗಳೂ ಬೆಳೆದಂತೆ ಜೊತೆಯಲ್ಲಿಯೇ ಬೆಳೆದುವು. ಹೆಗಲುಗಳು ಕುಲಪರ್ವತಗಳ ಶಿಖರಗಳನ್ನು ತಿರಸ್ಕರಿಸಿದುವು (ಕಾಂತಿಹೀನವನ್ನಾಗಿ ಮಾಡಿದುವು). ವಿಸ್ತಾರವಾದ ಅವನ ಎದೆಯು ಅಸಮಾನಳಾದ ಈ ಭೂದೇವಿಗೆ ವಂಶಪಾರಂಪರ್ಯವಾಗಿ ಬಂದ ನಿವಾಸವಾಯಿತು ಎಂದು ಲೋಕದ ಜನ ಸಂತೋಷಿಸುವ ಹಾಗೆ ಧರ್ಮರಾಜನ ಉದಾತ್ತವಾದ ಹೊಸಯೌವನವು ಒಟ್ಟಿಗೆ ತುಂಬಿ ಬಂದಿತು. ವ|| ಹಾಗೆ ಸೊಗಯಿಸುವ ಆಕಾಶದಲ್ಲಿ ಚಿನ್ನದ ಬಣ್ಣದ ಹಾಗಿರುವ ತನ್ನ ಶರೀರದ ಬಣ್ಣವು ಅಳತೆಯಿಲ್ಲದೆ ಪ್ರಕಾಶಿಸಿತು. ೩೮. ಬ್ರಹ್ಮನು ಕುಲಪರ್ವತವನ್ನು ಮನುಷ್ಯನ ರೂಪದಲ್ಲಿ ಮಾಡಿದ್ದಾನೆ ಎನಿಸಿಕೊಂಡು ಭೀಮನು ಅದೇ ಬಣ್ಣದ ಪಾರಿಜಾತವು ಚಿಗುರಿನಿಂದಲೂ ಮೊಗ್ಗುಗಳಿಂದಲೂ ಕೂಡಿ ಪ್ರಕಾಶಮಾನವಾಗಿ ಒಪ್ಪುವಂತೆ ಅವನ ಹೊಸಪ್ರಾಯವು ಆಕರ್ಷಕವಾಗಿರಲು ಹತ್ತುಸಾವಿರ ಮದ್ದಾನೆಗಳ ಬಲವುಳ್ಳವನಾಗಿ ಒಪ್ಪಿ ತೋರಿದನು. ವ|| ಹಾಗೆ ಒಪ್ಪುವ ಸೌಂದರ್ಯದಲ್ಲಿ ಇಂದ್ರನೀಲಮಣಿಯ ಹಾಗಿರುವ ಬಣ್ಣವು ಮನೋಹರವಾಗಿರಲು ೩೯. ಶರತ್ಕಾಲದ ಚಂದ್ರನನ್ನು ನಿರ್ಮಲವಾದ ಬೆಳದಿಂಗಳೂ ಬಾಲಸೂರ್ಯನನ್ನು ಕತ್ತಲೆಯನ್ನು ಹೋಗಲಾಡಿಸುವ ಕಿರಣಗಳೂ ಸಿಂಹದಮರಿಯನ್ನು ಹೊಸದಾಗಿ ಹುಟ್ಟಿದ ಅದರ ಕತ್ತಿನ ಕೂದಲರಾಶಿಯೂ ಉಳಿದ ದಿಗ್ಗಜಗಳನ್ನೂ ಸ್ವಲ್ಪವೂ ಕಡಿಮೆಯಿಲ್ಲದ ಮದೋದಕದ ಕಾಂತಿಯೂ ಆಕರ್ಷಿಸುವ ರೀತಿಯಲ್ಲಿ ಸೇರಿಕೊಳ್ಳುವಂತೆ ಸುಂದರವಾದ ಹೊಸಯೌವನವು ಪೂರ್ಣವಾಗಿ ಬಂದು ಕೂಡಲು ಗುಣಾರ್ಣವನು ಒಪ್ಪಿ ತೋರಿದನು.

ವ|| ಹಾಗೆ ನವಯೌವನವು ಸಂಪೂರ್ಣವಾಗಲು ಗುಂಗುರುಗುಂಗುರಾದ ಗುಣಾರ್ಣವನ ತಲೆಯ ಕೂದಲು ಸೌಂದರ್ಯರಸವನ್ನು ಮಿದಿದುಮಿದಿದು ತುಂಬಿದ ಬ್ರಹ್ಮನ ಬೆರಳಚ್ಚುಗಳಂತಾದುವು; ಸ್ವರ್ಗ, ಮರ್ತ್ಯ ಪಾತಾಳಗಳೆಂಬ ಮೂರುಲೋಕಗಳ ಮೂರು ರಾಜ್ಯಭಾರವನ್ನು ಮಾಡುವುದಕ್ಕೂ ಯೋಗ್ಯವಾದ ಲಕ್ಷಣಗಳಿಂದ ತುಂಬಿರುವ ಸಹಜಮನೋಜನಾದ ಅರ್ಜುನನ ಹಣೆಯ ಪಟ್ಟಾಭಿಷೇಕ ಮಾಡಿದ ಹಣೆಗೆ ಯಾವ ಲಕ್ಷಣವಿರಬೇಕೆಂಬುದನ್ನು (ಅನ್ಯಥಾ) ಹುಡುಕಬೇಡ ಎನ್ನುವಂತಾಯಿತು; (ಅಂದರೆ ಆ ಎಲ್ಲ ಲಕ್ಷಣಗಳೂ ಈ ಹಣೆಯಲ್ಲಿಯೇ ಇವೆ ಎಂದರ್ಥ). ಮನ್ಮಥನ ಕಬ್ಬಿನ ಬಿಲ್ಲಿನ ವಕ್ರತೆಯಂತೆ ಬಗ್ಗಿದ್ದರೂ ಅನ್ಯಸ್ತ್ರೀಯರ ಪ್ರೀತಿಗೆ ಬಗ್ಗದೆ ಸೊಗಯಿಸುವ ಸುರತಮಕರಧ್ವಜನ ಹುಬ್ಬುಗಳು ಮನ್ಮಥನ ವಿಜಯದಂತಾದುವು; ದೀರ್ಘತ್ವವನ್ನೂ ಬಿಳಿಯ ಬಣ್ಣವನ್ನೂ ಹೊಂದಿ ಅನ್ಯಸ್ತ್ರೀಯರ ವಿಷಯದಲ್ಲಿ ಕೋಪಿಸಿಕೊಂಡಂತೆ ಕೆಂಪಾದ ರಕ್ತನಾಳಗಳಿಂದ ಕೂಡಿ ಸೊಗಯಿಸುವ ಶೌಚಾಂಜನೇಯನ ಕಣ್ಣುಗಳೆಂಬ ಪುಷ್ಪಬಾಣಗಳು

ಸೊಗಯಿಸುವ ಗಂಧೇಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನಲ್ಲದೆ ಪೆಱರ ಕಂಪನಾಸೆವಡದಂತಾದುದು ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತ ತುಂಗನ ವಿಸೆಗಳಾತನ ತೀವ್ರ ಪ್ರತಾಪಾನಳ ಧೂಮಲೇಖೆ ಯಂತಾದುವು ಪುಳಿಯೊಳಲೆದ ಪವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಬಿಂಬಾಧರಮನಂಗರಾಗರಸದುರುಳಿ ಯಂತಾದುದು ರಸದಾಡಿಮದ ಬಿತ್ತುಮಂ ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ ವಿಬುಧವನಜವನ ಕಳಹಂಸನ ದಂತಪಙ್ತಿಗಳ ಮೃತಕಿರಣನ ಕಾಂತಿಗಳನಿಳಿಸುವಂತಾದುವು ಮಡಿದು ತಂದಿಟ್ಟ ಪೊಸನೆಯ್ದಿಲ ಕಾವನಾವಗಂ ಗೆಲ್ದ ರತ್ನಕುಂಡಲಂಗಳ ಪೊಳಪನೊಳ ಕೊಂಡಂತೆ ನಸುನೇಲ್ವ ಕರ್ಣಾಟೀ ಕರ್ಣಪೂರನ ಪಾಲೆಗಳುಂ ಸರಸ್ವತಿಯಾಡುವ ಲೀಲಾಂದೋಳದಂತಾದುವು ಬಳ್ವಳ ಬೆಳೆದೆಳಗೌಂಗಿನಂತೆ ಲೋಕದ ಚೆಲ್ವೆಲ್ಲಮನೊಳಕೊಂಡು ರೇಖೆಗೊಂಡ ಲಾಟೀ ಲಲಾಮನ ಪರಿಣದ್ಧ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು ತನ್ನ ಚೆಲ್ವನಲ್ಲದೆ ಪೆಱರ ಚೆಲ್ವನಾಸೆವಡದಂತಾದುದು ಕುಲದ ಚಲದ ಮೈಮೆಯೊಳ್ ತನ್ನನೆ ನೋಡಿದ ಸಂತೋಷದೊಳುತ್ಸಾಹ ಮಾದಂತೆ ಸೊಗಯಿಸುವ ಸಮರೈಕಮೇರುವಿನ ಭುಜಶಿಖರಂಗಳ್ ಕುಲಶಿಖಿರಿ ಶಿಖರಂಗಳಂತಾದುವು ವ್ಯಾಳ ಗಜಂಗಳು ಮನಂಕದ ಬರ್ದೆಯರುಮನುಗಿಬಗಿಮಾಡಿದ ಸಂತೋಷದೊಳ್ ಬಳ್ವಳ ಬಳೆದ ವಿಕ್ರಾಂತತುಂಗನ ನಿಡುದೋಳ್ಗಳ್ ಗಣಿಕಾಜನಕ್ಕೆ ಕಾಮಪಾಶಂಗಳು ಮರಾತಿಜನಕ್ಕೆ ಯಮಪಾಶಂಗಳುಮಾದುವು ರಕ್ತಾಶೋಕಪಲ್ಲವದಂತೆ ತೊಳತೊಳಗುವಾಂ ಕುಚಕಲಶ ಪಲ್ಲವನ ಕರತಳಪಲ್ಲವಂಗಳ್ ಸಮದ ಗಜಕುಂಭಸ್ಥಳಾಸಾಳನ ಕರ್ಕಶಂಗಳಾದುವು ಪೊಡರ್ವ ಪಗೆವರನುಱದೆ ಕೊಂಡ ಸಂತೋಷದೊಳಂ ಶ್ರೀಯನೊಳಕೊಂಡ ಸಂತೋಷದೊಳಂ ತೆಕ್ಕನೆ ತೀವಿದ ಕೇರಳೀ ಕೇಳಿ ಕಂದರ್ಪನಗಲುರಂ ಲಕ್ಷ್ಮಿಗೆ ಕುಲಭವನಮುಂ ನಿವಾಸಭವನಮುಮಾದುದು ಪೊಡರ್ವ ಮಂಡಳಿಕರ ಮನದಂತೆ ಕರಮಸಿದಾದ ಪರಾಕ್ರಮಧವಳನ ಮಧ್ಯಪ್ರದೇಶಂ ನಾರಾಯಣಂ ತನ್ನಾಳ್ದಂ ಮಾಡಿ ತಾನಾಳ್ಮಾಡಿಯುಂ ತಾನಳ್ಳಾಡೆಯುಂ ಬರ್ದೆಯರ ಮನವನಳ್ಳಾಡಿಸುವಂತಾದುದು ಗಂಭೀರಗುಣದೊಳಮಾವರ್ತನ ಸಿದ್ಧಿಯೊಳಂ ಜಳನಿಯನೆ ಪೋಲ್ವ ಶರಣಾಗತ ಜಳನಿಯ ನಿಮ್ನನಾಭಿ ಚೆಲ್ವಿಂಗೆ ತಾನೆ ನಾಭಿಯಾದುದು ಸಿಂಹಕಟಿತಟಮನಿಳಿಸುವ ರಿಪುಕುರಂಗ ಕಂಠೀರವನ ಕಟಿತಟಮೊಲು

ವೇಶ್ಯಾಸ್ತ್ರೀಯರ ಎದೆಯಲ್ಲಿ ನಾಟಿ ಕೆಂಪಾದಂತಾದುವು; ಶತ್ರುಜನಗಳ ಅಭಿವೃದ್ಧಿಗೂ ಪರಾಂಗನೆಯರ ಮೆಚ್ಚಿಕೆಗೂ ಜುಗುಪ್ಸೆ ಪಡುವ ಹಾಗೆ ಸೊಗಯಿಸುವ ಗಂದೇಭವಿದ್ಯಾಧರನ ಮೂಗು ತನ್ನ ಉಸಿರಿನ ವಾಸನೆಯಲ್ಲದೆ ಇತರರ ವಾಸನೆಗೆ ಆಸೆಪಡದಂತಾಯಿತು ! ಹೊಸಪ್ರಾಯದ ಮೊದಲ ಬಣ್ಣದಂತೆ ಕಪ್ಪಾಗಿ ಕಸ್ತೂರಿಯಿಂದ ಬರೆದಂತಿರುವ ವಿಕ್ರಾಂತತುಂಗನ ಮೀಸೆಗಳು ಅವನ ಭಯಂಕರವಾದ ಪ್ರಾತಾಪಗ್ನಿಯ ಹೊಗೆಯ ರೇಖೆಯಂತಾದುವು; ಹುಳಿಯಿಂದ ತೊಳೆದ ಹವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಕೆಂಪಾದ ತುಟಿಯು ಕಾಮರಸದ ಉಂಡೆಯಂತಾಯಿತು; ದಾಳಿಂಬದ ಬೀಜಗಳನ್ನೂ ಹೊಸಮುತ್ತುಗಳನ್ನೂ ಉಗುಳುವಂತಿದ್ದ ವಿಬುಧವನಜವನಕಳಹಂಸನ ಹಲ್ಲಿನ ಸಾಲುಗಳು ಚಂದ್ರನ ಕಾಂತಿಯನ್ನು ತಿರಸ್ಕರಿಸುವಂತಾದುವು; ಮಡಿಸಿ ತಂದಿರಿಸಿದ ಹೊಸನೆಯ್ದಿಲೆಯ ಕಾವನ್ನು ಯಾವಾಗಲೂ ಗೆದ್ದಿರುವ ರತ್ನದ ಹತ್ತು ಕಡುಕುಗಳ ಹೊಳಪನ್ನೊಳಕೊಂಡು ಹಾಗೆಯೇ ಸ್ವಲ್ಪ ಜೋಲಾಡುತ್ತಿರುವ ಕರ್ಣಾಟೀಕರ್ಣಪೂರನ ಕಿವಿಯ ಹಾಲೆಗಳು ಸರಸ್ವತಿಯು ತೂಗುತ್ತಿರುವ ಆಟದುಯ್ಯಾಲೆಯಂತಾದುವು; ಬಳಬಳನೆ (ಸೊಂಪಾಗಿ) ಬೆಳೆದ ಎಳೆ ಅಡಿಕೆಯಂತೆ ಲೋಕಸೌಂದರ್ಯವನ್ನೆಲ್ಲ ತನ್ನಲ್ಲಿ ಸೇರಿಸಿಕೊಂಡು ಗೆರೆಯನ್ನು ಹೊಂದಿದ ಲಾಟೀಲಲಾಮನ ತುಂಬುಗೊರಳು ಯುವರಾಜಪಟ್ಟಾಭಿಷೇಕಕ್ಕೆ ಯೋಗ್ಯವಾದ ಒಡವೆಯನ್ನು ಧರಿಸುವುದಕ್ಕೆ ವ್ರತಮಾಡಿ ತನ್ನ ಸೌಂದರ್ಯವನ್ನೇ ಅಲ್ಲದೆ ಇತರ ಸೌಂದರ್ಯಕ್ಕೂ ಆಸೆಪಡುವಹಾಗಾಯಿತು. ಕುಲ ಮತ್ತು ಛಲದ ಮಹಿಮೆಯಲ್ಲಿ ತನ್ನನ್ನೇ ನೋಡಿದ ಸಂತೋಷವು ಉತ್ಸಾಹವಾದ ಹಾಗೆ ಸೊಗಯಿಸುವ ಸಮರೈಕಮೇರುವಿನ ಭುಜದ ಮೇಲುಭಾಗಗಳು ಕುಲಪರ್ವತದ ಶಿಖರಗಳ ಹಾಗೆ ಆದುವು; ದುಷ್ಟ ಆನೆಗಳನ್ನೂ ಸುಪ್ರಸಿದ್ಧರಾದ ಸುಮಂಗಲಿಯರನ್ನೂ (ಕುಲಸ್ತ್ರೀಯರನ್ನೂ) ಹೆದರಿಸಿದ ಸಂತೋಷದಲ್ಲಿ ಸುಪುಷ್ಟವಾಗಿ ಬೆಳೆದ ವಿಕ್ರಾಂತತುಂಗನ ದೀರ್ಘವಾದ ತೋಳುಗಳು ವೇಶ್ಯಾಸ್ತ್ರೀಯರಿಗೆ ಕಾಮಪಾಶವೂ ಶತ್ರುರಾಜರಿಗೆ ಯಮಪಾಶವೂ ಆದುವು; ಕೆಂಪು ಮುಳ್ಳುಮುತ್ತುಗದ ಚಿಗುರಿನ ಹಾಗೆ ಪ್ರಕಾಶಮಾನವಾಗಿರುವ ಆಂಕುಚಕಲಶಪಲ್ಲವನ ಚಿಗುರಿನಂತಿರುವ ಅಂಗೈಗಳು ಮದ್ದಾನೆಗಳ ಕುಂಭಸ್ಥಳವನ್ನು ಅಪ್ಪಳಿಸುವುದರಿಂದ ಒರಟಾದುವು; ಉದ್ಧತರಾದ ಶತ್ರುಗಳನ್ನು ಶೀಘ್ರವಾಗಿ ಸೋಲಿಸಿದ ಸಂತೋಷದಿಂದಲೂ ಐಶ್ವರ್ಯವನ್ನು ಪಡೆದ ಸಂತೋಷದಿಂದಲೂ ಇದ್ದಕ್ಕಿದ್ದ ಹಾಗೆ ತುಂಬಿಕೊಂಡ ಕೇರಳೀಕೇಳೀಕಂದರ್ಪನ ವಿಶಾಲವಾದ ಎದೆಯು ಲಕ್ಷ್ಮೀದೇವಿಗೆ ವಂಶಪಾರಂಪರ್ಯವಾಗಿ ಬಂದ ನೆಲೆಯೂ ನಿತ್ಯವಾಸಸ್ಥಳವೂ ಆಯಿತು; ಉದ್ವ ತ್ತರಾದ (ಮೇಲೆ ಬೀಳುವ) ಸಾಮಂತರಾಜರ ಮನಸ್ಸಿನಂತೆ ಬಹಳ ಕೃಶವಾದ ಪರಾಕರ್ಮಧವಳನ ಸೊಂಟವು ಶ್ರೀಮನ್ನಾರಾಯಣನು ತಾನೇ ಯಜಮಾನನಾಗಿಯೂ ತನ್ನನ್ನೇ ಆಳಾಗಿಯೂ ಮಾಡಿಕೊಂಡೂ ತಾನೇ ನರ್ತನಮಾಡಿ ಕುಲಸ್ತ್ರೀಯರ ಮನಸ್ಸನ್ನು ವಿಚಲಿತವನ್ನಾಗಿ ಮಾಡುವಂತಾಯಿತು. ಗಂಭೀರಗುಣದಲ್ಲಿಯೂ ಸುಳಿಸುಳಿಯಾಗಿರುವ ಇತರ ಗುಣದಲ್ಲಿಯೂ ಸಮುದ್ರವನ್ನು ಹೋಲುವ ಶರಣಾಗತ ಜಲನಿಯ ಆಳವಾದ ಹೊಕ್ಕುಳು ಸೌಂದರ್ಯಕ್ಕೆ ತಾನೆ ಕೇಂದ್ರವಾಯಿತು; ಸಿಂಹದ ಸೊಂಟದ ಭಾಗವನ್ನೂ ಹಿಯ್ಯಾಳಿಸುವ ರಿಪುಕುರಂಗಕಂಠೀರವನ ಸೊಂಟದ ಭಾಗವು ಪ್ರೀತಿಯಿಂದ ನೋಡುವ ಸುಂದರ ಸ್ತ್ರೀಯರ ಕಣ್ಣಿಗೆ ಕಾಮನ ಗುರಾಣಿಯಂತೆ ದೊಡ್ಡದಾಗಿ ಬೆಳೆದು ಅತಿಶಯವಾದ ದಪ್ಪವನ್ನು ತಾಳಿದಂತೆ ವಿಶೇಷ ಗುಂಡಾಗಿ ಬೆಳೆದುವು;

ನೋಡುವ ಗಾಡಿಕಾರ್ತಿಯರ ಕಣ್ಗೆ ಕಾಮನಡ್ಡಣದಂತೆದೊಡ್ಡಿತ್ತಾಗಿ ವಿಱುವುದ್ವೃತ್ತ ವೃತ್ತತೆಯ ನೀೞ್ದುಕೊಂಡಂತುದ್ವೃತ್ತಂಗಳಾದುವು ಉದಾತ್ತನಾರಾಯಣನೂರುಯುಗ್ಮಂಗಳ್ ಮಾನಿನಿಯರ ಮನೋಗಜಂಗಳಂ ಕಟ್ಟಲ್ಕಾಲಾನ ಸ್ತಂಭಂಗಳಾದುವು ಅಂತಪೂರ್ವಂಗಳಾಗಿ ತೊಳಗುವ ಕಿಱುದೊಡೆಗಳುಡುವಡರ್ದನ್ನಮಾರೂಢ ಸರ್ವಜ್ಞನ ದೊಡ್ಡ ಮಾರ್ಗಂಳೆಳವಾೞೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು ಗೂಢಗುಲಪಾರ್ಷ್ಣಿಗಳನೊಳಕೊಂಡ ಮನುಜಮಾಂಧಾತನ ಪೊಱ ಅಡಿಗಳ್ ವಿರೋ ಭೂಪಾಳರನಡಿಗೆಱಗಿಸಿದ ಸಂತೋಷದೊಳುನ್ನತಂ ಗಳಾದಂತೆ ಕೂರ್ಮೋನ್ನತಂಗಳಾದುವು ನೊಸಲಂ ಸುಟ್ಟಿ ತೋರ್ಪನ್ನವಪ್ಪುಂಗುಟಂಗಳೊಳ್ ಮಿಂಚಂ ಕೀಲಿಸಿದಂತೆ ತೊಳಗಿ ಪೊಳೆವ ಪ್ರಚಂಡ ಮಾರ್ತಾಂಡನ ಪಾದನಖಂಗಳ್ ಗಂಡರ ಪೆಂಡಿರಂಜಿದಳ್ಕಿದ ಮೊಗಮಂ ನೋಡಲ್ಕೆ ಕನ್ನಡಿಗಳನ್ನವಾದುವು ಪೊಸತಲರ್ದ ಕೆಂದಾವರೆಯ ಕೆಂಪುಮಂ ಮೆಲ್ಪುಮನಿೞ್ಕುಳಿಗೊಂಡು ತೊಳಗುವರಿಕೇಸರಿಯ ಪಾದತಳಂಗಳಡಿಗೆಱಗಿದರಿನರಪಾಲರ ಮಕುಟಮಾಣಿಕ್ಯ ಮರೀಚಿಜಾಲ ಬಾಳಾತಪಂಗಳನೆಲೆದು ಕೆಂಕಮಾದಂತಾದುವು ಪೊಸವೆಸಱಗೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತ್ರನೆಂಬ ಚಿತ್ತಾರಿಯ ವರ್ಣಕ್ರಮಂಗೆಯ್ದ ಕದಳೀಗರ್ಭಶ್ಯಾಮಮೆಂಬ ಬಣ್ಣದಂತಾದುದು-

ಚಂ|| ಮನದೊಳೊಱಲ್ದು ಜೋಲ್ದಳಿಪಿ ನೋಡಲೊಡಂ ಸೆಗೆಯ್ದು ಕಣ್ಣುಮಂ
ಮನಮುಮನಂಗಜನ್ಮನರಲಂಬುಗಳಿಂದೆ ಮರುಳ್ಚಿ ಬಂದ ಮಾ|
ವಿನ ಬನದೊಳ್ ತೆರಳ್ಚಿ ಪೊಳೆವಿಂದುಮರೀಚಿಗಳಿಂದುರುಳ್ಚಿ ಪೂ
ವಿನ ಪಸೆಯೊಳ್ ಪೊರಳ್ಚಿದನಳುರ್ಕೆಯ ಬರ್ದೆಯರಂ ಗುಣಾರ್ಣವಂ|| ೪೦

ವ|| ಅಂತು ನಕುಲ ಸಹದೇವರ್ ಸಹಿತಮಯ್ವರುಂ ನವಯೌವನದ ಪರಮಸುಖಮನೆಯ್ದಿ ಸಂತೋಷದಿನಿರ್ದರಿತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ-

ಕಂ|| ಸ್ನಾನಾರ್ಥಮೊಂದು ಕಳಶಮ
ನಾ ನಿಯಮ ನಿಧಾನನೆೞಲೆ ಪಿಡಿದಮಳಿನ ಗಂ|
ಗಾ ನದಿಗೆ ವಂದು ಸುರತ ನಿ
ಧಾನಿಯನಮರೇಂದ್ರ ಗಣಿಕೆಯಂ ಮುನಿ ಕಂಡಂ|| ೪೧

ವ|| ಅಂತು ಕಾಣ್ಬುದುಮಮೃತಾಬ್ಧಿಯೆಂಬಚ್ಚರಸೆಯ ಕನಕ ಕಾಂಚೀಕಳಾಪದೊಳ್ ತೊಡರ್ದ ದೇವಾಂಗ ವಸ್ತ್ರದುಳ್ಳುಡೆಯೊಳುಲಿವ ಸೂಸಕದ ನೂಲ ತೊಂಗಲ್ವೆರಸೆೞಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ-

ಉದಾತ್ತ ನಾರಾಯಣನ ಎರಡು ತೊಡೆಗಳು ಸ್ತ್ರೀಯರ ಮನಸ್ಸೆಂಬ ಆನೆಗಳನ್ನೂ ಕಟ್ಟುವ ಕಂಬಗಳಾದುವು, ಹಾಗೆಯೇ ಅಪೂರ್ವವಾಗಿ ಪ್ರಕಾಶಿಸುವ ಕಿರುದೊಡೆಗಳು ಉಡುಹತ್ತಿದಂಥವು – ಆರೂಢಸರ್ವಜ್ಞನ ತೊಡೆಯ ಕಿಣ ಅಥವಾ ಜಡ್ಡುಗಳು (ಕುದುರೆ ಸವಾರಿ ಮಾಡುವಾಗ ಒತ್ತಿ ಆದ ಜಡ್ಡು) ಎಳೆಯ ಬಾಳೆಯ ದಿಂಡಿನಲ್ಲಿ ಸಾಣೆಯಕಲ್ಲನ್ನು ಕಟ್ಟಿದ ಹಾಗಾದುವು; ಗೂಢವಾದ ಕಾಲಿನ ಹರಡನ್ನು ಹೊಂದಿರುವ ಮನುಜಮಾಂಧಾತನ ಅಡಿಯ ಹೊರಭಾಗಗಳು ಶತ್ರುರಾಜರನ್ನು ಕಾಲಿಗೆ ಬೀಳುವಂತೆ ಮಾಡಿದ ಸಂತೋಷದಲ್ಲಿ ಎತ್ತರವಾದಂತೆ ಹಾಗೆಯೇ ಆಮೆಯ ಚಿಪ್ಪಿನ ಮೇಲುಭಾಗದಂತೆ ಉಬ್ಬಿಕೊಂಡವು. ಮುಖವನ್ನು ಸುಟ್ಟಿ ತೋರಿಸುವಂತಿರುವ ಕಾಲಿನ ಬೆರಳುಗಳಲ್ಲಿ ಸ್ವಲ್ಪ ನೆಟ್ಟಿರುವ ಹಾಗೆ ಪ್ರಕಾಶಮಾನವಾಗಿರುವ ಪ್ರಚಂಡಮಾರ್ತಾಂಡನ ಕಾಲಿನ ಉಗುರುಗಳು ವೀರಪತ್ನಿಯರು ಹೆದರಿದ ತಮ್ಮ ಮುಖವನ್ನು ನೋಡುವುದಕ್ಕೆ (ಉಪಯೋಗಿಸುವ) ಕನ್ನಡಿಯಂತಾದುವು. ಹೊಸದಾಗಿ ಅರಳಿರುವ ಕೆಂಪುದಾವರೆಯಂತೆ ಕೆಂಪುಬಣ್ಣವನ್ನೂ ಬಿಳಿಯಬಣ್ಣವನ್ನೂ ತಿರಸ್ಕರಿಸುವ ಅರಿಕೇಸರಿಯ ಪಾದತಳಗಳು ಕಾಲಿಗೆ ಬಿದ್ದ ಶತ್ರುರಾಜರ ಕಿರೀಟದಲ್ಲಿರುವ ಮಾಣಿಕ್ಯ ಸಮೂಹದ ಕೆಂಬಿಸಿಲನ್ನು ಹಿಯ್ಯಾಳಿಸಿ ಕೆಂಪಾದಂತಾದುವು. ಹೆಸರುಕಾಳಿನ ಹೊಸಮೊಳಕೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಶರೀರದ ಬಣ್ಣವು ಬ್ರಹ್ಮನೆಂಬ ಬಣ್ಣಗಾರನು ಬಣ್ಣಗಳನ್ನು ಕಲಸಿಮಾಡಿದ ಬಾಳೆಯ ಹೂವಿನ ಮೋತೆಯಂತೆ ಕೆಂಪುಮಿಶ್ರವಾದ ಕಪ್ಪುಬಣ್ಣದಿಂದ ಕೂಡಿತು. ೪೦. ಗುಣಾರ್ಣವನು ದಿಟ್ಟರಾದ ಸ್ತ್ರೀಯರು ತನ್ನನ್ನು ಮನಸ್ಸಿನಲ್ಲಿ ಪ್ರೀತಿಸಿ ತನಗೆ ಅನವಾಗಿ ಸೋತು ಆಶೆಯಿಂದ ನೋಡಲು ಅವರ ಕಣ್ಣನ್ನೂ ಮನಸ್ಸನ್ನೂ ಮನ್ಮಥನ ಪುಷ್ಪಬಾಣದಿಂದ ಸೆರೆಹಿಡಿದು ಅವರಿಗೆ ಮೋಹವುಂಟಾಗುವ ಹಾಗೆ ಮಾಡಿ ಫಲಭರಿತವಾದ ಮಾವಿನ ತೋಟದಲ್ಲಿ ಸೇರಿಸಿ ಪ್ರಕಾಶಮಾನವಾದ ಬೆಳುದಿಂಗಳಿಂದ ಉರುಳಿಸಿ ಹೂವಿನ ಹಾಸಿಗೆಯಲ್ಲಿ ಹೊರಳುವ ಹಾಗೆ ಮಾಡಿದನು. (ಅವನನ್ನು ನೋಡಿದ ರಸ್ತ್ರೀಯರೂ ವಿಧವಿಧವಾದ ಕಾಮಬಾಧೆಗೊಳಗಾಗುತ್ತಿದ್ದರು ಎಂದು ಭಾವ). ವ|| ಹೀಗೆ ನಕುಲ ಸಹದೇವರೊಡನೆ ಅಯ್ದು ಜನರೂ ಹೊಸಪ್ರಾಯದ ಉತ್ತಮಸುಖವನ್ನು ಹೊಂದಿ ಸಂತೋಷದಿಂದಿದ್ದರು. ಈ ಕಡೆ ಗಂಗಾದ್ವಾರದಲ್ಲಿ ಭರದ್ವಾಜನೆಂಬ ನಿಯಮಿಷ್ಠನಾದ ಋಷಿಯು- ೪೧. ಸ್ನಾನಕ್ಕಾಗಿ ಒಂದು ಕೊಡವನ್ನು ಕೆಳಗೆ ಜೋಲುಬೀಳುವ ಹಾಗೆ ಹಿಡಿದು ಪರಿಶುದ್ಧವಾದ ಗಂಗಾನದಿಗೆ ಬಂದು ಸಂಭೋಗಸುಖಕ್ಕೆ ಆವಾಸಸ್ಥಾನಳಾದ ದೇವವೇಶ್ಯೆಯೊಬ್ಬಳನ್ನು ನೋಡಿದನು. ವ|| ಹಾಗೆ ನೋಡಲಾಗಿ ಅಮೃತಾಬ್ಧಿಯೆಂಬ ಹೆಸರಿನ ಆ ಅಪ್ಸರಸ್ತ್ರೀಯ

ಕಂ|| ಆದೆಲರ ಸೋಂಕಿನೊಳ್ ತೆಱ
ಪಾದೊಡೆ ಬೆಳ್ಪೆಸೆಯೆ ಮಸೆದ ಮದನನ ಬಾಳಂ|
ತಾದುವು ಪೊಳೆವೊಳ್ದೊಡೆ ತೆಱ
ಪಾದೆರ್ದೆಯಂ ನಟ್ಟುವಂದು ತನ್ಮುನಿಪತಿಯಾ|| ೪೨

ವ|| ಅಂತು ಕಂತುಶರಪರವಶನಾಗಿ ಧೈರ್ಯಕ್ಷರಣೆಯುಮಿಂದ್ರಿಯ ಕ್ಷರಣೆಯುಮೊಡನೊಡನಾಗೆ-

ಕಂ|| ಮಾಣದೆ ಸೋರ್ವಿಂದ್ರಿಯಮಂ
ದ್ರೋಣದೊಳಾಂತಲ್ಲಿಯೊಗೆದ ಶಿಶುವಂ ಕಂಡೀ|
ದ್ರೋಣದೊಳೆ ಪುಟ್ಟಿದೀತಂ
ದ್ರೋಣನೇ ಪೋಗೆಂದು ಪೆಸರನಿಟ್ಟಂ ಮುನಿಪಂ|| ೪೩

ವ|| ಅಂತು ಭರದ್ವಾಜನಾತ್ಮತನೂಜಂಗೆ ಪೆಸರನಿಟ್ಟು ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನಾತನ ಮಗಂ ದ್ರುಪದನುಮಂ ದ್ರೋಣನುಮನೊಡಗೂಡಿ ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದೊಳ್ ಬಿಲ್ವಿದ್ದಯಂ ಕಲಲ್ವೇೞ್ದೊಡೆ ದ್ರೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡಾತಂಗ ಮಾಕೆಗಂ ತ್ರಿಣೇತ್ರನಂಶದೊಳೊರ್ವ ಮಗಂ ಪುಟ್ಟಿ-

ಕಂ|| ದಿವಿಜಾಶ್ವತ್ಥಾಮದೊಳೀ
ಭುವನಂಗಳ್ ನಡುಗೆ ಶಿಶು ಸರಂಗೆಯ್ದೊಡೆ ನ|
ಕ್ಕವಯವದೆ ಕುಂಭಸಂಭವ
ನಿವನಶ್ವತ್ಥಾಮನೆಂದು ಪೆಸರಿಡೆ ನೆಗೞ್ದಂ|| ೪೪

ವ|| ಅಂತು ನೆಗೞ್ದು ತಮ್ಮಯ್ಯನ ಕೈಯೊಳ್ ಧನುರ್ವಿದ್ಯೋಪದೇಶದೊಳ್ ಧನುರ್ಧ ರಾಗ್ರಗಣ್ಯನುಮಾಗಿ ಸಂದಂ ದ್ರುಪದನುಂ ತನ್ನ ರಾಜ್ಯದೊಳ್ ನಿಂದಂ ದ್ರೋಣನುಂ ತನಗೆ ಬಡತನಮಡಸೆ ಅಶ್ವತ್ಥಾಮನನೊಡಗೊಂಡು ನಾಡು ನಾಡಂ ತೊೞಲ್ದು ಪರಶುರಾಮನಲ್ಲಿಗೆ ವಂದಂ-

ಚಂ|| ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಮೇಕವಿಂ
ಶತಿ ಪರಿಸಂಖ್ಯೆಯಿಂ ತವಿಸಿ ಸರ‍್ವನಿವೇದಕಮೆಂಬ ಯಜ್ಞದೊಳ್|
ಕ್ಷಿತಿ ಪೊಗೞ್ವನ್ನಮಿತ್ತು ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾ
ಪತಿಗೆ ಸಮುದ್ರಮುದ್ರಿತಧರಿತ್ರಿಯನೊಂದೞಯೂರನೀವವೋಲ್|| ೪೫

ಚಿನ್ನದ ನಡುಪಟ್ಟಿಯಲ್ಲಿ ಸಿಕ್ಕಿಕೊಂಡಿದ್ದ ರೇಷ್ಮೆಯ ವಸ್ತ್ರದ ಒಳ ಉಡುಪಿನಲ್ಲಿ ಶಬ್ದಮಾಡುವ ಗೆಜ್ಜೆಯ ಕುಚ್ಚಿನ ನೂಲಗೊಂಚಲ ಸಮೇತವಾಗಿ ಇಳಿಬಿದ್ದಿರುವ ಮುಂಭಾಗದ ಸೆರಗು ಮಳೆಗಾಲದ ನವಿಲಿನಂತೆ ಸೊಗಯಿಸಿತು. ೪೨. ಆಗುಂಟಾದ ಗಾಳಿಯ ಸ್ಪರ್ಶದಿಂದ ವಸ್ತ್ರವು ಓಸರಿಸಲು ಅವಳ ಸುಂದರವಾದ ತೊಡೆಯು ಮನ್ಮಥನ ಕತ್ತಿಯ ಹಾಗಾಗಿ ಆ ಋಷಿಯ ತೆರೆದ ಹೃದಯವನ್ನು ನಾಟಿತು. ವ|| ಹಾಗೆ ಮನ್ಮಥನ ಬಾಣಗಳಿಗೆ ಅನನಾಗಿ ಅವನ ಧೈರ್ಯವೂ ರೇತಸ್ಸೂ ಒಟ್ಟಿಗೆ ಸೋರಿಹೋದವು. ೪೩. ನಿಲ್ಲದೆ ಸೋರುವ ಆ ರೇತಸ್ಸನ್ನು (ವೀರ್ಯವನ್ನು) ಆ ಋಷಿಯು ಒಂದು ದೊನ್ನೆಯಲ್ಲಿ ಹಿಡಿದು ಅದರಿಂದ ಹುಟ್ಟಿದ ಶಿಶುವನ್ನು ನೋಡಿ ದೊನ್ನೆಯಲ್ಲಿ ಹುಟ್ಟಿದ ಮಗುವು ದ್ರೋಣನೆಂಬ ಹೆಸರಿನವನೇ ಸರಿ, ಹೋಗು ಎಂದು ಆ ಹೆಸರನ್ನೇ ಅವನಿಗೆ ಇಟ್ಟನು. ವ|| ಭಾರದ್ವಾಜನು ಹಾಗೆ ತನ್ನ ಮಗುವಿಗೆ ಹೆಸರಿಟ್ಟು ತನ್ನ ಸ್ನೇಹಿತನೂ ಪಾಂಚಾಳದೇಶದ ರಾಜನೂ ಪೃಷತನ ಮಗನೂ ಆದ ದ್ರುಪದನನ್ನೂ ದ್ರೋಣನನ್ನೂ ಒಟ್ಟುಗೂಡಿಸಿ ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದಲ್ಲಿ ಬಿಲ್ವಿದ್ಯೆಯನ್ನು ಕಲಿಯಲು ಹೇಳಲಾಗಿ ದ್ರೋಣನೂ ದ್ರುಪದನೂ ಬಿಲ್ಗಾರರಲ್ಲಿ ಮೊತ್ತಮೊದಲಿಗರಾದರು. ಹೀಗಾಗಲು ಭಾರದ್ವಾಜನು ದ್ರೋಣನಿಗೆ ಕೃಪನ ತಂಗಿಯಾದ ಶಾರದ್ವತೆಯನ್ನು ತಂದು ಮದುವೆಮಾಡಲಾಗಿ ಆತನಿಗೂ ಆಕೆಗೂ ಮುಕ್ಕಣ್ಣನಾದ ರುದ್ರನ ಅಂಶದಿಂದ ಒಬ್ಬ ಮಗನು ಹುಟ್ಟಿದನು. ೪೪. ಆ ಮಗುವು ಧ್ವನಿಮಾಡಿದ ತಕ್ಷಣವೇ ಕೂಗಿಕೊಂಡ ದೇವಲೋಕದ ಉಚ್ಛೆ ಶ್ರವವೆಂಬ ಕುದುರೆಯ ಕೆನೆತದಿಂದ ಲೋಕಗಳೆಲ್ಲ ನಡುಗಲು ಅದನ್ನು ನೋಡಿ ದ್ರೋಣನು ನಕ್ಕು ನಿರಾಯಾಸದಿಂದ ಇವನಿಗೆ ಅಶ್ವತ್ಥಾಮನೆಂದು ಹೆಸರಿಡಲು ಅವನು ಪ್ರಸಿದ್ಧನಾದನು. ವ|| ಹಾಗೆ ಪ್ರಸಿದ್ಧನಾಗಿ ತಮ್ಮಯ್ಯನ ಕಯ್ಯಲ್ಲಿ ಧನುರ್ವಿದ್ಯೋಪದೇಶವನ್ನು ಪಡೆದು ಬಿಲ್ಗಾರರಲ್ಲಿ ಅಗ್ರೇಸರನಾದನು. ದ್ರುಪದನೂ ತನ್ನ ರಾಜ್ಯದಲ್ಲಿ ನಿಂತನು. ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದನು.

೪೫. ಭೂಮಿಯಲ್ಲಿರುವ ಕ್ಷತ್ರಿಯರು ಬೇರುಸಹಿತ ಹಾಳಾಗುವಂತೆ ಮೊದಲು ಇಪ್ಪತ್ತೊಂದು ಸಲ ನಾಶಪಡಿಸಿ ಲೋಕವೇ ಹೊಗಳುವ

ವ|| ಅಂತು ವಲ್ಕಲಾವೃತ ಕಟಿತಟನುಮಾಗಿರ್ದ ಜಟಾಕಲಾಪನುಮಾಗಿ ತಪೋವನಕ್ಕೆ ಪೋಪ ಭಾರ್ಗವಂ ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನಂ ಕಂಡು ಕನಕ ಪಾತ್ರಕ್ಕುಪಾಯಮಿಲ್ಲಪ್ಪುದಱಂ ಮೃತ್ಪಾತ್ರದೊಳರ್ಘ್ಯಮೆತ್ತಿ ಪೂಜಿಸಿ-

ಚಂ|| ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ
ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ
ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ
ಲ್ಲೊಡಮೆ ಸಮಂತು ಪೇೞವಳಾವುದನೀವುದೊ ಕುಂಭಸಂಭವಾ|| ೪೬

ವ|| ಎಂಬುದು ದ್ರೋಣನೆನಗೆ ವಿದ್ಯಾಧನಮೆ ಧನಮಪ್ಪುದಱಂ ದಿವ್ಯಾಸ್ತ್ರಂಗಳಂ ದಯೆಗೆಯ್ವುದೆನೆ ವಾರಣ ವಾಯವ್ಯಾಗ್ನೇಯ ಪೌರಂದರಾದಿ ಪ್ರಧಾನಾಸ್ತ್ರಂಗಳಂ ಕುಡೆ ಕೊಂಡು ಪರಶುರಾಮನಂ ಬೀೞ್ಕೊಂಡು ತನ್ನೊಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳರಸು ಗೆಯ್ದಪನೆಂದು ಕೇಳ್ದಾ ಪೊೞಲ್ಗೆವಂದು ದ್ರುಪದನರಮನೆಯ ಬಾಗಿಲೊಳ್ ನಿಂದು ಪಡಿಯಱನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮರಸಂಗಱಯೆ ಪೆೞೆಂಬುದುಮಾತನಾ ಮಾೞ್ಕೆಯೊಳೆ ಬಂದಱಪುವುದುಂ ದ್ರುಪದಂ ರಾಜ್ಯಮದಿರಾ ಮದೋನ್ಮತ್ತನುಂ ಗರ್ವಗ್ರಹ ವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ-

ಕಂ|| ಅಂತೆಂಬನಾರ್ಗೆ ಪಿರಿದುಂ
ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ|
ೞೆಂತೆನಗೆ ಕೆಳೆಯನೇ ನೂಂ
ಕಂತಪ್ಪನನಱಯೆನೆಂದು ಸಭೆಯೊಳ್ ನುಡಿದಂ|| ೪೭

ವ|| ಅಂತು ನುಡಿದುದಂ ಪಡಿಯಱಂ ಬಂದಾ ಮಾೞ್ಕೆಯೊಳಱಪೆ ದ್ರೋಣನೊತ್ತಂಬದಿಂದೊಳಗಂ ಪೊಕ್ಕು ದ್ರುಪದನಂ ಕಂಡು-

ಚಂ|| ಅಱಯಿರೆ ನೀಮುಮಾಮುಮೊಡನೋದಿದೆವೆಂಬುದನಣ್ಣ ನಿನ್ನನಾ
ನಱಯೆನದೆಲ್ಲಿ ಕಂಡೆಯೊ ಮಹೀಪತಿಗಂ ದ್ವಿಜವಂಶಜಂಗಮೇ|
ತಱ ಕೆಳೆಯಿಂತು ನಾಣಿಲಿಗರಪ್ಪರೆ ಮಾನಸರೆಂಬ ಮಾತುಗಳ್
ನೆಱಗೊಳೆ ಕುಂಭಸಂಭವನನಾ ದ್ರುಪದಂ ಕಡು ಸಿಗ್ಗು ಮಾಡಿದಂ|| ೪೮

ಹಾಗೆ ಸರ್ವನಿವೇದಕವೆಂಬ ಯಜ್ಞವನ್ನು ಮಾಡಿ ಕಶ್ಯಪ ಪ್ರಜಾಪತಿಯೆಂಬ ಬ್ರಹ್ಮಋಷಿಗೆ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಅಖಂಡ ಭೂಮಂಡಲವನ್ನು ಒಂದು ಸಾಮಾನ್ಯವಾದ ಗ್ರಾಮವನ್ನು ಕೊಡುವಂತೆ ಗುರುದಕ್ಷಿಣೆಯಾಗಿ ಕೊಟ್ಟನು. ವ|| ಈಗ ನಾರುಮಡಿಯಿಂದ ಕೂಡಿದ ನಡುವನ್ನುಳ್ಳವನೂ ಜಟಾಸಮೂಹದಿಂದ ಕೂಡಿದವನೂ ಆದ ಆ ಪರಶುರಾಮನು ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ದ್ರೋಣನನ್ನು ಚಿನ್ನದ ಪಾತ್ರೆಗಳಿಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಘ್ಯವನ್ನು ಕೊಟ್ಟು ಪೂಜಿಸಿದನು. ೪೬. ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದಡಕೆಯೂ ಇಲ್ಲ. ಬೇಡುವವನಾದರೋ ವೇದಪಾರಂಗತ. ಹೇಗೆ ಅವನನ್ನು ಸಂತೋಷಪಡಿಸಲಿ? ‘ಎಲೈ ದ್ರೋಣನೆ ಈಗ ಇದೊಂದು ಬಿಲ್ಲೂ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ. ಬೇರೆ ಆಸ್ತಿಯಿಲ್ಲ. ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ? ಚೆನ್ನಾಗಿ ಯೋಚಿಸಿ ಹೇಳು. ವ|| ಎಂಬುದಾಗಿ ಹೇಳಲು ದ್ರೋಣನು ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ದಯಪಾಲಿಸಬೇಕು ಎನ್ನಲು ವಾರುಣ, ವಾಯುವ್ಯ, ಆಗ್ನೇಯ, ಐಂದ್ರಾದಿ ಅಸ್ತ್ರಗಳನ್ನು ಕೊಡಲು ಅದನ್ನು ತೆಗೆದುಕೊಂಡು ಪರಶುರಾಮನಿಂದ ಅಪ್ಪಣೆ ಪಡೆದು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದು ದ್ರುಪದನರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮ ಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದನು. ಅವನು ಆ ರೀತಿಯಲ್ಲಿಯೇ ಬಂದು ತಿಳಿಸಲಾಗಿ ದ್ರುಪದನು ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತನಾದ ಮನಸ್ಸುಳ್ಳವನೂ ಆಗಿ ಒಳ್ಳೆಯ ನಡತೆಯಿಲ್ಲದೆ

೪೭. ‘ಹಾಗೆನ್ನುವವನು ಯಾರ ಸಂಬಂ? ಇದು ವಿಶೇಷ ಭ್ರಮೆಯಲ್ಲವೆ? ದ್ರೋಣನೆಂಬುವವನು ಬ್ರಾಹ್ಮಣನೇ ಹೇಗೆ? ನನಗೆ ಸ್ನೇಹಿತನೇ ಹೇಳು? ಅಂತಹವನನ್ನು ನಾನು ತಿಳಿದಿಲ್ಲ ; ಅವನನ್ನು ಹೊರಕ್ಕೆ ತಳುಘಿ’ಈಆ’ ಎಂದು ಸಭಾಮಧ್ಯದಲ್ಲಿ ಕೆಟ್ಟಮಾತನಾಡಿದನು. ವ|| ಹಾಗೆ ಹೇಳಿದುದನ್ನು ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲಾತ್ಕಾರದಿಂದ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ ೪೮. ‘ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ’ ಎನ್ನಲು ದ್ರುಪದನು

ವ|| ಅಂತು ಮಾಡಿದುದುಮಲ್ಲದೀ ನಾಣಿಲಿ ಪಾರ್ವನೆೞೆದು ಕಳೆಯಿಮೆಂಬುದುಂ ದ್ರೋಣ ನಿಂತೆಂದಂ-

ಚಂ|| ನುಡಿ ತಡವಪ್ಪುದೊಂದು ಮೊಗದೊಳ್ ಮುಱುಕಂ ದೊರೆಕೊಳ್ವುದೊಂದು ನಾ
ಣ್ಗೆಡೆಗುಡದಿರ್ಪುದೊಂದು ನುಡಿಗಳ್ ಮೊಯಂ ಮಯಿಪ್ಪುದೊಂದು ಕ|
ಳ್ಗುಡಿದವರಂದಮಿಂತು ಸಿರಿ ಸಾರ್ತಕೆ ಸಾರ್ವುದದರ್ಕೆ ಸಂದೆಯಂ
ಬಡದೆ ಜಗಕ್ಕನೀಗಳಱದೆಂ ಸಿರಿ ಕಳ್ಳೊಡವುಟ್ಟಿತೆಂಬುದಂ|| ೪೯

ವ|| ಎಂದು ಸೈರಿಸದೆ-

ಚಂ|| ಖಳ ನೊಳವಿಂಗೆ ಕ್ಪುಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ
ದಳವೊಡನೋದಿದೊಂದು ಬೆರಗಿಂಗೆ ಕೊಲಲ್ಕೆನಗಾಗದೀ ಸಭಾ|
ವಳಯದೊಳೆನ್ನನೇೞಸಿದ ನಿನ್ನನನಾಕುಳಮೆನ್ನ ಚಟ್ಟರಿಂ
ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ವಿಸೆವೊತ್ತೆನೇ|| ೫೦

ವ|| ಎಂದಾರೂಢಪ್ರತಿಜ್ಞನಾಗಿ ನಾಗಪುರಕ್ಕೆ ವಂದು ತಮ್ಮ ಭಾವಂ ಕೃಪನ ಮನೆಯೊಳಪ ಗತಪರಿಶ್ರಮನಾಗಿರ್ದೊಂದು ದಿವಸಂ ಪಾಂಡವರುಂ ಕೌರವರುಂ ಪೊಱಪೊೞಲೊಳ್-

ಕಂ|| ನೆರೆದಿಸುತಿರೆ ತೋಲ್ವುಲ್ಲೆಯ
ನಿರದದು ಬಿೞ್ದೊಡೆ ಪುರಾಣ ಕೂಪದೊಳದನಿ|
ನ್ನರಿದು ತೆಗೆವಂದಮೆಂದವ
ರಿರೆ ಬಳಸಿಯುಮಲ್ಲಿ ಕಂಡು ನಕ್ಕಂ ದ್ರೋಣಂ|| ೫೧

ಭರತಕುಳತಿಳಕರಿರ್ ವರ
ಶರಾಸನ ವ್ಯಗ್ರಹಸ್ತರಿರ್ ಬಳಯುತರಿರ್|
ನೆರೆದಿನಿಬರುವಿ ಲಕ್ಷ್ಯಮ
ನಿರದಕ್ಕಟ ಸರದೆ ತೆಗೆಯಲಾರ್ತಿರುಮಿಲ್ಲಾ|| ೫೨

ವ|| ಎಂದು ತನ್ನ ಮಗನಪ್ಪಶ್ವತ್ಥಾಮನಂ ಕರೆದೀ ಲಕ್ಷ್ಯಮಂ ತೆಗೆಯೆಂಬುದುಮಾತನಂತೆ ಗೆಯ್ವೆನೆಂದು ನೈಷ್ಠಿಕಮೆಂಬ ಮುಷ್ಟಿಯೊಳಂ ಪುಂಖಾನುಪುಂಖಮೆಂಬ ಶರಸಂಧಾನದೊಳವಯವದೊಳೆ ತೆಗೆದೊಡನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗಱಪಿದೊಡೆ

ನಿನ್ನನ್ನು ನಾನು ತಿಳಿದಿಲ್ಲ (ನೀನು ನನಗೆ ಅಪರಿಚಿತನು) ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕ ವಾಗುವಂತೆ ಹೀಯ್ಯಾಳಿಸಿದನು. ವ|| ಹಾಗೆ ಮಾಡಿದುದೂ ಅಲ್ಲದೆ ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ನೂಕು ಎನ್ನಲು ದ್ರೋಣನು ಹೀಗೆಂದನು- ೪೯. ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು; ಮುಖದಲ್ಲಿ ವಕ್ರಚೇಷ್ಟೆಯುಂಟಾಗುವುದು; ಮಾತುಗಳು ನಾಚಿಕೆಯಿಲ್ಲದಾಗುವುವು; ಸಂಬಂಧವನ್ನು ಮರೆಯುವಂತೆ ಮಾಡುವುದು; ಆದುದರಿಂದ ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆನು’ ವ|| ಎಂದು ಹೇಳಿ ಸಹಿಸಲಾರದೆ. ೫೦. ‘ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು’ ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ? ವ|| ಎಂದು ಪಣತೊಟ್ಟವನಾಗಿ ಹಸ್ತಿನಾಪುರಕ್ಕೆ ಬಂದು ತನ್ನ ಭಾವನಾದ ಕೃಪನ ಮನೆಯಲ್ಲಿ ಶ್ರಮಪರಿಹಾರಮಾಡಿಕೊಂಡನು. ಒಂದು ದಿನ ಪಾಂಡವರೂ ಕೌರವರೂ ಪಟ್ಟಣದ ಹೊರಭಾಗದಲ್ಲಿ ೫೧. ಒಟ್ಟುಗೂಡಿ ಚಕ್ಕಳದ ಜಿಂಕೆಯೊಂದನ್ನು ಬಾಣಗಳಿಂದ ಹೊಡೆಯುತ್ತಿರಲು ಅದು ಹಳೆಯ ಬಾವಿಯಲ್ಲಿ ಬಿದ್ದುಬಿಟ್ಟಿತು. ಅದನ್ನು ತಿಳಿದು ಮೇಲಕ್ಕೆ ತೆಗೆಯುವ ರೀತಿ ಸಾಧ್ಯವಿಲ್ಲವೆಂದವರಿರಲಾಗಿ ಅಲ್ಲಿ ಸುತ್ತಾಡುತ್ತಿದ್ದ ದ್ರೋಣನು ಅದನ್ನು ಕಂಡು ನಕ್ಕನು. ೫೨. ‘ಭರತವಂಶತಿಲಕರಾಗಿದ್ದೀರಿ; ಬಿಲ್ವಿದ್ಯೆಯಲ್ಲಿ ಪರಿಣತರಾಗಿದ್ದೀರಿ; ಬಲಿಷ್ಠರಾಗಿದ್ದೀರಿ; ಅಯ್ಯೋ ಒಟ್ಟುಗೂಡಿದ ನೀವಿಷ್ಟು ಜನರೂ ಈ ಗುರಿಯನ್ನು (ಚಕ್ಕಳದ ಜಿಂಕೆಯನ್ನು) ಬಾಣದಿಂದ ಮೇಲಕ್ಕೆ ತೆಗೆಯಲು ಸಮರ್ಥರಾಗಲಿಲ್ಲವೆ? ವ|| ಎಂದು ತನ್ನ ಮಗನಾದ ಅಶ್ವತ್ಥಾಮನನ್ನು ಕರೆದು ಈ ಲಕ್ಷ್ಯವನ್ನು ತೆಗೆ ಎಂದನು. ಅವನು ‘ಹಾಗೆಯೇ ಮಾಡುತ್ತೇನೆ’ ಎಂದು ನೈಷ್ಠಿಕವೆನ್ನುವ ಮುಷ್ಟಿಯಿಂದ ಬಾಣದ ಒಂದು ಗರಿಯನ್ನನುಸರಿಸಿ ಮತ್ತೊಂದು ಬಾಣಬಿಡುವ ಪ್ರಯೋಗದಿಂದ

ನದೀತನೂಜಂ ಭಾರದ್ವಾಜಂಗೆ ಬೞಯನಟ್ಟಿ ಬರಿಸಿ ಪೂರ್ವ ಸಂಭಾಷಣಾರ್ಘ್ಯಮೆತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಿಗಳಿಂ ಸಂತಸಂಬಡಿಸಿ ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು-

ಮ|| ಮದಮಂ ಮುಕ್ಕುಳಿಸಿರ್ದಿಭಂಗಳನುದಗ್ರಾಶ್ವಂಗಳಂ ತಕ್ಕಿನ
ಗ್ಗದ ಬಾಡಂಗಳನಾಯ್ದು ಕೊಟ್ಟು ತಣಿದೆಂ ಪೋ ಸಾಲ್ಗುಮೆಂಬನ್ನಮಂ|
ದಿದಿರೊಳ್ ನೂಱಱುವರ್ ಕುಮಾರರುಮನಿಟ್ಟೀ ಕೂಸುಗಳ್ ಯೋಗ್ಯರ
ಪ್ಪುದನಿನ್ನೊಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ|| ೫೩

ವ|| ಎಂಬುದುಮಂತೆಗೆಯ್ವೆನೆಂದು ಕಲಶಜನನಿಬರ ಮೊಗಮಂ ನೋಡಿ-

ಕಂ|| ಈ ನೆರೆದಿನಿಬರುಮೆಂದುದ
ನೇನೀವರೆ ಪೇೞಮೆಂದೊಡನಿಬರುಮಿರ್ದರ್|
ಮೌನವ್ರತದೆ ಗುಣಾರ್ಣವ
ನಾನೀವೆಂ ನಿಮ್ಮ ಬಯಸಿ ಬೇೞ್ಪುದನೆಂದಂ|| ೫೪

ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆದಂ-

ಕಂ|| ಇನಿಬರೊಳಗೀತನೊರ್ವನೆ
ಧನುರಾಗಮದೆಡೆಗೆ ಕುಶಲನಕ್ಕುಮದರ್ಕೇಂ|
ಕಿನಿಸದಿರಿಂ ಮುನ್ನಱಪಿದೆ
ನೆನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ|| ೫೫

ವ|| ಅಂತು ದ್ರೋಣಾಚಾರ‍್ಯಾನಾಚಾರ‍್ಯಪದವಿಯಂ ಕೈಕೊಂಡು ಪಾಂಡವ ಕೌರವರ್ಗೆ ಚತುರಂಗ ಧನುರ್ವೇದಮುಮಂ ದಿವ್ಯಾಸ್ತ್ರಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮನುಪದೇಶಂಗೆಯ್ಯುತ್ತುಮಿರೆಯಿರೆ-

ಕಂ|| ಯಾದವ ವಂಶಜರುಂ ನಾ
ನಾ ದೇಶ ನರೇಂದ್ರರುಂ ಘಟೋದ್ಭವನ ಧನು|
ರ್ವೇದಮನೆ ಕಲಲ್ ಬಂದಾ
ಳಾದರ್ ವಿದ್ಯಾಪ್ರಭಾವಮಾ ದೊರೆತೆ ವಲಂ|| ೫೬

ನಿರಾಯಾಸವಾಗಿ ಮೇಲಕ್ಕೆತ್ತಿದನು. ಅಷ್ಟುಮಂದಿಯೂ ಆಶ್ಚರ್ಯಪಟ್ಟು (ಆ ವಿಷಯವನ್ನು) ಭೀಷ್ಮ ಧೃತರಾಷ್ಟ್ರರಿಗೆ ತಿಳಿಸಿದರು. ಭೀಷ್ಮನು ದ್ರೋಣಾಚಾರ್ಯರಿಗೆ ಹೇಳಿ ಕಳುಹಿಸಿ ಬರಮಾಡಿ ಕುಶಲ ಸಂಭಾಷಣಾಪೂರ್ವಕ ಅರ್ಘ್ಯವನ್ನು ಕೊಟ್ಟು ಮಧುಪರ್ಕ, ವೇತ್ರಾಸನ, ತಾಂಬೂಲದಾನಾದಿಗಳಿಂದ ಸಂತೋಷಪಡಿಸಿ ಆತನ ಕುಲ, ವಿದ್ಯೆ ಮತ್ತು ವೃತ್ತಿಗಳನ್ನು ಪ್ರಶ್ನೆಮಾಡಿ ತಿಳಿದುಕೊಂಡನು. ೫೩. ಮದವನ್ನು ಉಗುಳುತ್ತಿರುವ ಆನೆಗಳನ್ನೂ (ಮದ್ದಾನೆಗಳನ್ನು) ಉತ್ತಮವಾದ ಕುದುರೆಗಳನ್ನೂ ಯೋಗ್ಯವೂ ಶ್ರೇಷ್ಠವೂ ಆದ ಗ್ರಾಮಗಳನ್ನೂ ‘ತೃಪ್ತನಾದೆ, ಸಾಕು, ಹೋಗು’ ಎನ್ನುವಷ್ಟು ಕೊಟ್ಟು ಅಂದು ಆ ನೂರಾರು ಮಕ್ಕಳನ್ನು ಅವರಿಗೆ ಒಪ್ಪಿಸಿ ‘ಈ ಮಕ್ಕಳು ಯೋಗ್ಯರಾಗಬೇಕು ಎಂಬ ಇಷ್ಟ ನಿಮಗಿರುವುದಾದರೆ ಎಲೈ ದ್ರೋಣನೇ ನೀನು ಇವರಿಗೆ ಶಸ್ತ್ರವಿದ್ಯೆಯ ಉಪಾಧ್ಯಾಯನಾಗು’

ವ|| ಎನ್ನಲು ದ್ರೋಣನು ಹಾಗೆಯೇ ಮಾಡುತ್ತೇನೆಂದು ಕೇಳಿ ಅವರೆಲ್ಲರ ಮುಖವನ್ನು ನೋಡಿ- ೫೪. ‘ಇಲ್ಲಿ ಸೇರಿರುವ ಇಷ್ಟುಜನರೂ ನಾನು ಕೇಳಿದ್ದನ್ನು ಕೊಡಬಲ್ಲಿರಾ ಹೇಳಿ’ ಎನ್ನಲು ಎಲ್ಲರೂ ಮೌನವಾಗಿದ್ದರು. ಗುಣಾರ್ಣವನು ‘ನೀವು ಆಶೆಪಟ್ಟು ಬೇಡಿದುದನ್ನು ನಾನು ಕೊಡುತ್ತೇನೆ’ ಎಂದನು. ವ|| ಹಾಗೆನ್ನಲಾಗಿ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೇರಿಸಿಕೊಂಡು ದ್ರೋಣನು ಬೀಷ್ಮನಿಗೆ ಹೀಗೆ ಹೇಳಿದನು- ೫೫. ‘ಇಷ್ಟು ಮಕ್ಕಳಲ್ಲಿ ಇವನೊಬ್ಬನೇ ಬಿಲ್ವಿದ್ಯೆಯಲ್ಲಿ ಪಾರಂಗತನಾಗುತ್ತಾನೆ. ಅದಕ್ಕೆ ಕೋಪಿಸಬೇಡಿ; ಮೊದಲೇ ತಿಳಿಸಿದ್ದೇನೆ’ ಎನ್ನಲು ಭೀಷ್ಮನು ಸಂತೋಷಾತಿಶಯದಿಂದ ಮುಗುಳ್ನಗೆ ನಕ್ಕನು. ವ|| ಹಾಗೆ ದ್ರೋಣಾಚಾರ್ಯನು ಆಚಾರ್ಯಪದವಿಯನ್ನು ಅಂಗೀಕಾರ ಮಾಡಿ ಪಾಂಡವ ಕೌರವರುಗಳಿಗೆ ನಾಲ್ಕು ಭಾಗವಾಗಿರುವ ಬಿಲ್ವಿದ್ಯೆಯನ್ನೂ ದಿವ್ಯಾಸ್ತ್ರಗಳ ಪ್ರಯೋಗಗಳನ್ನೂ ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಗ, ಗದೆಯೇ ಮೊದಲಾದ ಬಗೆಬಗೆಯ ಆಯುಧ ಪ್ರಯೋಗಗಳನ್ನೂ ಆನೆ, ತೇರು, ಕುದುರೆ ಮತ್ತು ಕಾಲಾಳುಗಳ ಯುದ್ಧದ ರೀತಿಯನ್ನೂ ಹೇಳಿಕೊಟ್ಟನು. ೫೬. ಯಾದವ ವಂಶದವರೂ ನಾನಾ ದೇಶದ ರಾಜರೂ ದ್ರೋಣಾಚಾರ್ಯರ ಧನುರ್ವಿದ್ಯೆಯನ್ನು ಕಲಿಯಲು ಬಂದು ಆತನ ಶಿಷ್ಯರಾದರು. ದ್ರೋಣನ ವಿದ್ಯಪ್ರಭಾವವು

ದ್ರೋಣಂ ಗಡಮಿಷುವಿದ್ಯೆಗೆ
ಜಾಣಂ ಗಡಮೆಂದು ಕೇಳ್ದು ಕೌರವರ್ಗೆಲ್ಲಂ|
ಪ್ರಾಣಂ ಬರ್ಪಾಕೃತಿಯೊಳೆ
ಬಾಣಾಸನ ಬಾಣಪಾಣಿ ಕರ್ಣಂ ಬಂದಂ|| ೫೭

ವ|| ಅಂತು ಬಂದು ವೈರಿಗಜಘಟಾವಿಘಟನನೊಳ್ ವಿಘಟಿಸಿ ಬಿಲ್ಗಲ್ತು-

ಕಂ|| ಕೆಳೆಯುಂ ಗುಱಯುಂ ಗೊಟ್ಟಿಯು
ಮಳವಿಗೆ ಪಿದಾಗೆ ತನಗೆ ದುರ್ಯೋಧನನೊಳ್|
ಮುಳಿಸುಂ ನೋವುಂ ಕಲುಷಮು
ಮಳುಂಬಮೆನೆ ತನಗರಾತಿಕಾಳಾನಳನೊಳ್|| ೫೮

ವ|| ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನಭ್ಯಾಸಂಗೆಯ್ವಂತೆ ವಿದ್ಯಾಭ್ಯಾಸಂಗೆಯ್ಯೆ-

ಕಂ|| ಮನದೊಳೊಗೆದನ್ಯಜನ್ಮದ
ಮುನಿಸದು ಕಣ್ಣಿಂ ತುಳುಂಕೆ ಸೈರಿಸದವನು|
ರ್ವಿನಕ ಲಿತನಕ್ಕೆ ದುರ್ಯೋ
ಧನನುಂ ಭೀಮನೊಳೆ ಸೆಣಸಿ ಗದೆಯಂ ಕಲ್ತಂ|| ೫೯

ವ|| ಅಂತು ಭಾರದ್ವಾಜನಾಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಂ ಸಮೆಯಿಸುವ ಸೂತ್ರಧಾರನಂತೆ ಶಸ್ತ್ರವಿದ್ಯಾಭ್ಯಾಸಂಗೆಯ್ಸುತ್ತಿರೆ ದೇಶಾಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ಸಕಳ ಕಳಾಧರನಂತೆ ಶಸ್ತ್ರಕಳಾಧರನಾಗಿ ತನ್ನುಮಂ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನಾರಯಲೆಂದು-

ಕಂ|| ಛಾಯಾಲಕ್ಷ್ಯಮನೊಡ್ಡಿಯು
ಮಾಯದ ನೀರೊಳಗೆ ತನ್ನನಡಸಿದ ನೆಗೞಂ|
ಬಾಯೞವಿನಮಿಸಿಸಿಯುಮರೆ
ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞ್ದಂ|| ೬೦

ವ|| ಅಂತು ಪೊಗೞ್ದು ತನ್ನ ಪಗೆವನಪ್ಪ ದ್ರುಪದನನೀತನಮೋಘಂ ಗೆಲಲ್ ನೆಗು ಮೆಂದು ನಿಶ್ಚೈಸಿ-

ಅಂತಹ ಮಹಿಮೆಯುಳ್ಳದ್ದಲ್ಲವೆ? ೫೭. ದ್ರೋಣನಲ್ಲವೆ ! ಬಾಣವಿದ್ಯೆಯಲ್ಲಿ ಜಾಣನಲ್ಲವೆ! ಎಂಬ ಪ್ರಶಂಸೆಯನ್ನು ಕೇಳಿ ಕೌರವರಿಗೆಲ್ಲ ಪ್ರಾಣ ಬರುವ ರೀತಿಯಲ್ಲಿ ಬಿಲ್ಲುಬಾಣಗಳನ್ನು ಹಿಡಿದು ಕರ್ಣನೂ ಅಲ್ಲಿಗೆ ಬಂದು ಕೂಡಿದನು. ವ|| ಹಾಗೆ ಬಂದು ಶತ್ರುರಾಜರ ಆನೆಗಳ ಸಮೂಹವನ್ನು ಭೇದಿಸಲು ಸಮರ್ಥನಾದ ಅರ್ಜುನನಲ್ಲಿ (ಅರಿಕೇಸರಿಯಲ್ಲಿ) ರ್ಸ್ಪಸಿ ಬಿಲ್ವಿದ್ಯೆಯನ್ನು ಕಲಿತನು.

೫೮. ಕಾಲಕಳೆದಂತೆಲ್ಲ ಕರ್ಣನಿಗೆ ದುರ್ಯೋಧನನಲ್ಲಿ ಸ್ನೇಹವೂ ಗುರಿಯೂ (ಸಹಪಾಠಿತ್ವವೂ) ಅಳತೆಗೆ ಮೀರಿದಂತೆ ಅರಾತಿ ಕಾಲಾನಲನಾದ ಅರ್ಜುನನಲ್ಲಿ ಕೋಪವೂ ವ್ಯಥೆಯೂ ಅಸೂಯೆಯೂ ಅಕವಾಯಿತು. ವ|| ಕರ್ಣನು ಗುಣಾರ್ಣವನಲ್ಲಿ ರ್ಸ್ಪಸಿ ಹಗೆತನವನ್ನಭ್ಯಾಸಮಾಡುವಂತೆಯೇ ವಿದ್ಯೆಯನ್ನು ಅಭ್ಯಾಸಮಾಡಿದನು. ೫೯. ಮನಸ್ಸಿನಲ್ಲಿ ಹುಟ್ಟಿದ ಪೂರ್ವಜನ್ಮದ ಕೋಪವು ಕಣ್ಣಿನಲ್ಲಿ ತುಳುಕುತ್ತಿರಲು ಅವನ ಅಭಿವೃದ್ಧಿಯಾಗುತ್ತಿರುವ ಶೌರ್ಯಕ್ಕೆ ಸಹನೆಯಿಲ್ಲದೆ ದುರ್ಯೋಧನನೂ ಭೀಮನಲ್ಲಿ ರ್ಸಸಿ ಗದೆಯ ಪ್ರಯೋಗವನ್ನು ಕಲಿತನು. ವ|| ಹಾಗೆ ದ್ರೋಣಾಚಾರ್ಯನು ಮುಂದೆ ಬರುವ ಯುದ್ಧರಂಗಕ್ಕೆ ಪಾತ್ರಗಳನ್ನು ಸಿದ್ಧಪಡಿಸುವ ಸೂತ್ರಧಾರನ ಹಾಗೆ ಶಸ್ತ್ರವಿದ್ಯಾಭ್ಯಾಸವನ್ನು ಮಾಡಿಸುತ್ತಿರಲು ಅನೇಕ ದೇಶದ ಒಡೆಯರಾದ ಹಲವು ರಾಜಕುಮಾರರ ಮಧ್ಯದಲ್ಲಿ ನಕ್ಷತ್ರಸಮೂಹದ ಮಧ್ಯದ ಪೂರ್ಣಚಂದ್ರನ ಹಾಗೆ ಶಸ್ತ್ರಕಲೆಯನ್ನು ಧರಿಸಿ ತನ್ನನ್ನೂ ಗೆದ್ದಿರುವ ಸಾಮಂತಚೂಡಾಮಣಿಯಾದ ಅರ್ಜುನನ (ಅರಿಕೇಸರಿಯ) ಬಾಣಪ್ರಯೋಗ ಪಾಂಡಿತ್ಯವನ್ನು ಪರೀಕ್ಷಿಸಬೇಕೆಂದು- ೬೦. ಪ್ರತಿಬಿಂಬದ ಗುರಿಯನ್ನು ಒಡ್ಡಿಯೂ ಆಳವಾದ ನೀರಿನಲ್ಲಿ ತನ್ನನ್ನು ಹಿಡಿದಿದ್ದ ಮೊಸಳೆಯನ್ನು ಅದು ಅರಚಿಕೊಂಡು ಸಾಯುವ ಹಾಗೆ ಬಾಣ ಪ್ರಯೋಗಮಾಡಿಸಿಯೂ ನೋಡಿ ‘ಅರೆ, ಹೋ, ಅಜ, ಭಾಪು, ಎಂಬ ಮೆಚ್ಚಿಕೆಯ ಮಾತುಗಳಿಂದ ಗುರುವು ಅರ್ಜುನನನ್ನು ಶ್ಲಾಘಿಸಿದನು. ವ|| ಹಾಗೆ ಹೊಗಳಿ ತನ್ನ ಲ

ಚಂ|| ಅಣುಗಿನೊಳೆನ್ನ ಚಟ್ಟರೊಳಗೀತನೆ ಜೆಟ್ಟಿಗನೆಂದು ವಿದ್ದೆಯಂ
ಗುಣಕಱುಗೊಂಡು ಕೊಟ್ಟೆನಗೆ ಸಂತಸಮಪ್ಪಿನವಿವ ನಿನ್ನ ದ|
ಕ್ಷಿಣೆಯದು ಬೇಗಮಾ ದ್ರುಪದನಂ ಗಡ ಕೋಡಗಗಟ್ಟುಗಟ್ಟಿ ತಂ
ದಣಿಯರಮೊಪ್ಪಿಸಿಂತಿದನೆ ಬೇಡಿದೆನಾಂ ಪರಸೈನ್ಯಭೈರವಾ|| ೬೧

ವ|| ಎಂಬುದುವಿ ಬೆಸನದಾವುದು ಗಹನಮೆಂದು ಪೂಣ್ದು ಪೋಗಿ-

ಮ|| ಒಡವಂದಂಕದ ಕೌರವರ್ ದ್ರುಪದನಂಬೇಱಂಗೆ ಮೆಯ್ಯೊಡ್ಡದೊ
ಡ್ಡೊಡೆತೋಡುತ್ತಿರೆ ಸೂಸೆ ಬೀೞ್ವ ತಲೆಗಳ್ ಸೂೞ್ಪಟ್ಟನಾಗಳ್ ಜವಂ|
ಪಿಡಿದೀಡಾಡುವ ಮಾೞಯಂತೆ ಪಲರಂ ಕೊಂದಿಕ್ಕಿ ಮೆಯ್ಯುಟ್ಟೆವಂ|
ದೆಡೆಯೊಳ್ ಮಾಣದುರುಳ್ಚಿ ಕಟ್ಟಿ ರಿಪುವಂ ಮುಂದಿಕ್ಕಿದಂ ದ್ರೋಣನಾ|| ೬೨

ವ|| ಆಗಳಾ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಂಪಂ ಕರ್ಚಿ ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ-

ಕಂ|| ಸಿರಿಮೆಯ್ಯೊಳಗಂದಱವಿರೆ
ನೆರವಿಯೊಳಾರಱವರೊರ್ಮೆ ಕಂಡರನಱಯ|
ಲ್ಕರಿದೆಮ್ಮಂ ಬಡ ಪಾರ್ವರ
ನರಸರೆ ನೀವಿಗಳಱವಿರಱಯಿರೊ ಪೇೞಂ|| ೬೩

ವ|| ಎಂದು ಸಾಯೆ ಸರಸಂ ನುಡಿದು ಮತ್ತಮಿಂತೆಂದಂ-

ಕಂ|| ಆದಿ ಕ್ಷತ್ರಿಯರೇ ನೀ
ಮಾದಿತ್ಯನನಿಳಿಪ ತೇಜರಿರ್ ಪಾರ‍್ವನ ಕಾಲ್|
ಮೋದೆ ನಡುತಲೆಯಲಿರ್ಪುದು
ಮಾದುದು ನಿಮಗೆಂದು ನುಡಿದು ಕಾಯ್ಪಿನೊಳೊದೆದಂ|| ೬೪

ವ|| ಒದೆದು ನಿನ್ನನಿನಿತು ಪರಿಭವಂಬಡಿಸಿದುದು ಸಾಲ್ಗುಂ ನಿನ್ನಂ ಕೊಲಲಾಗದು ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತಾಗಿರ್ಕುಮೆಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದು ಪೋಗೆಂಬುದುಂ ದ್ರುಪದಂ ಪರಿಭವಾನಳನಳವಲ್ಲದಳುರೆ

ಶತ್ರುವಾದ ದ್ರುಪದನನ್ನು ಈತನು ಸಂಪೂರ್ಣವಾಗಿ ಗೆಲ್ಲಲ್ಲು ಸಮರ್ಥನಾಗುತ್ತಾನೆಂದು ನಿಷ್ಕರ್ಷಿಸಿ ಅವನನ್ನು ಕುರಿತು ೬೧. ‘ಅರ್ಜುನಾ ಭಕ್ತಿಯುಳ್ಳ ನನ್ನ ಶಿಷ್ಯರಲ್ಲಿ ಇವನೇ ಪರಾಕ್ರಮಶಾಲಿ ಎಂದು ವಿದ್ಯೆಯನ್ನು ಪ್ರೀತಿಯಿಂದ ದಾನಮಾಡಿದ ನನಗೆ ಸಂತೋಷವಾಗುವ ಹಾಗೆ ನೀನು ಕೊಡುವ ಗುರುದಕ್ಷಿಣೆಯಾಗಿ ಜಾಗ್ರತೆಯಾಗಿ ಆ ದ್ರುಪದನನ್ನು ಕೋಡಗಗಟ್ಟು ಕಟ್ಟಿ ತಂದು ಅತಿಶಯವಾದ ರೀತಿಯಲ್ಲಿ ಒಪ್ಪಿಸು. ಎಲೈಪರಸೈನ್ಯಭೈರವನೇ ಇದನ್ನೇ ನಾನು ನಿನ್ನಿಂದ ಬೇಡಿದುದು, ವ|| ಎನ್ನಲು ಈ ಆಜ್ಞಾಕಾರ್ಯ ಏನು ಮಹಾದೊಡ್ಡದು ಎಂದು ಪ್ರತಿಜ್ಞೆಮಾಡಿ ಹೋಗಿ-೬೨. ಒಡನೆ ಬಂದ ಪ್ರಸಿದ್ಧರಾದ ಕೌರವರು ದ್ರುಪದನ ಬಾಣದ ಪೆಟ್ಟಿಗೆ ಶರೀರವನ್ನು ಒಡ್ಡಲಾರದೆ ಚದುರಿ ಓಡುತ್ತಿರಲು, ಬೀಳುವ ತಲೆಗಳು ಚೆದುರಾಡುತ್ತಿರಲು ತನ್ನ ಸರದಿಯನ್ನು ಪಡೆದ ಅರ್ಜುನನು ಹಲಬರನ್ನು ಯಮನು ಹಿಡಿದು ಬಿಸಾಡುವ ರೀತಿಯಲ್ಲಿ ಸಾಯಿಸಿ, ಶರೀರವನ್ನು ಮುಟ್ಟುವಷ್ಟು ಹತ್ತಿರಕ್ಕೆ ಬಂದವರನ್ನೂ ಉರುಳಿಸಿ ಶತ್ರುವನ್ನು ಕಟ್ಟಿತಂದು ದ್ರೋಣನ ಮುಂದೆ ಇಟ್ಟನು. ವ|| ಆಗ ದ್ರೋಣನು ಪರಾಕ್ರಮಧವಳನಾದ ಅರ್ಜುನನ ಶೌರ್ಯಕ್ಕೆ ಸಂತೋಷಪಟ್ಟು ಕೆನ್ನೆಗೆ ಮುತ್ತಿಟ್ಟು ದ್ರುಪದನನ್ನು ತನ್ನ ಮಂಚದ ಕಾಲಿಗೆ ಕಟ್ಟ ಹೇಳಿ ಅವನ ತಲೆಯ ಮೇಲೆ ತನ್ನ ಕಾಲನ್ನು ಗರ್ವದಿಂದ ನೀಡಿ- ೬೩. ‘ಐಶ್ವರ್ಯಸ್ಥಿತಿಯಲ್ಲಿ ಅಂದು ನೀವು ನಮ್ಮನ್ನು ತಿಳಿಯುತ್ತೀರಾ (ಗುರುತಿಸುತ್ತೀರಾ). ಒಂದು ಸಲ ಗುಂಪಿನಲ್ಲಿ ಕಂಡವರನ್ನೂಯಾರು ತಾನೆ ಗುರುತಿಸಬಲ್ಲರು. ಬಡಬ್ರಾಹ್ಮಣರಾದ ನಮ್ಮನ್ನೂ ಗುರುತಿಸಲಸಾಧ್ಯ. ರಾಜರೇ ಈಗಲಾದರೂ ಗುರುತಿಸುತ್ತೀರೋ ಇಲ್ಲವೋ ಹೇಳಿ. ವ|| ಎಂದು ಪ್ರಾಣಹೋಗುವಷ್ಟು ಪರಿಹಾಸ್ಯ ಮಾಡಿ ಪುನ ಹೀಗೆಂದನು- ೬೪. ‘ನೀವು ಆದಿಕ್ಷತ್ರಿಯರಾಗಿದ್ದೀರಿ; ಸೂರ್ಯನನ್ನೂ ತಿರಸ್ಕರಿಸುವ ತೇಜಸ್ಸುಳ್ಳವರಾಗಿದ್ದೀರಿ. ಹಾರುವನು ಒದ್ದ ಕಾಲು ನಡುನೆತ್ತಿಯಲ್ಲರುವದಾಯಿತಲ್ಲಾ’ ಎಂದು ಹೇಳಿ ಕೋಪದಿಂದ ಒದೆದನು-

ವ|| ಒದ್ದು ‘ನಿನ್ನನ್ನು ಇಷ್ಟು ಅವಮಾನಪಡಿಸಿದುದು ಸಾಕು. ನಿನ್ನನ್ನು ಕೊಲ್ಲಬಾರದು. ಕೊಂದರೆ ಹೆದರಿ ತನಗಿಂತ ಮೇಲಾದ ಶತ್ರುವನ್ನೂ ಕೊಂದಂತಾಗುತ್ತದೆ’ ಎಂದು ಕಟ್ಟಿದ ಕಟ್ಟುಗಳೆಲ್ಲವನ್ನೂ ತಾನೇ ಬಿಚ್ಚಿಕಳೆದು ಹೋಗು ಎನ್ನಲು ದ್ರುಪದನು ಅವಮಾನವೆಂಬ

ನಿನ್ನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನಿತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮೆಯ್ಯೊಳೆ ವಿದ್ದೆಯಂ ನೆಯೆ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆ ಯಲ್ಕೆ ಬಾಹ್ಲೀಕ ಭೂರಿಶ್ರವಸ್ಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಿಂತೆಂದಂ-

ಕಂ|| ನೆಯೆ ಧನುರ್ವಿದ್ಯೆಯ ಕ
ಣ್ದೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್|
ಮೆದಪ್ಪೆನೆನ್ನ ವಿದ್ದೆಯ
ನಱದೊಯ್ಕನೆ ನೆರೆದು ನೋೞ್ಪುದನಿಬರುವಿಗಳ್|| ೬೫

ವ|| ಎಂದೊಡಂತೆಗೆಯ್ವಮೆಂದನಿಬರುಮೊಡಂಬಟ್ಟು ಪೊಱವೊೞಲೊಳುತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮೂಹೂರ್ತದೊಳ್-

ಕಂ|| ಗಟ್ಟಿಸಿ ಸಿಂಧುರದೊಳ್ ನೆಲ
ಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್|
ಕಟ್ಟಿಸಿ ಪೞಯಿಗೆಗಳನಳ
ವಟ್ಟಿರೆ ಬಿಯಮಲ್ಲಿ ಮೊೞಗೆ ಪಲವುಂ ಪಗಳ್|| ೬೬

ವ|| ಅಂತು ಸಮೆದ ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾಹ್ಲೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂ ವೆರಸು ಬಂದು ಕುಳ್ಳಿರೆ-

ಕಂ|| ಅರಸಿಯರನಣುಗರಂ ಬೇ
ೞ್ಪರುಮಂ ಮೊನೆಗಾಱರಂ ಪ್ರಗೀತರನಿಂಬಾ|
ಗಿರೆ ಚೌಪಳಿಗೆಗಳೊಳ್ ಕು ಳ್ಳಿರಿಸಿದರೊಡನೆಸೆಯೆ ನೆರೆದ ಪುರಜನ ಸಹಿತಂ|| ೬೭

ವ|| ಆಗಳ್ ಕುಂಭಸಂಭವಂ-

ಕಂ|| ಪೊಸ ಮುತ್ತಿನ ತುಡಿಗೆ ಪೊದ
ಸೆಯೆ ದುಕೂಲಾಂಬರಂ ನಿಜಾಂಗದೊಳಂ ಸಂ|
ದೆಸೆದಿರೆ ಬೆಳ್ಮುಗಿಲಿಂದಂ
ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ ಬಂದಂ- ೬೮

ಅಗ್ನಿಯು ವಿಶೇಷವಾಗಿ ಸುಡಲು ‘ನಿನ್ನನ್ನೂ ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದಿರುವುದಿಲ್ಲ’ ಎಂದು ದೂಡ್ಡ ಪ್ರತಿಜ್ಞೆಯನ್ನೂ ಮಾಡಿಹೋದನು. ಈ ಕಡೆ ಭಾರದ್ವಾಜನು ಪಾಂಡವ ಕೌರವರುಗಳ ಶರೀರದಲ್ಲಿ ವಿದ್ಯೆಯನ್ನು ಪೂರ್ಣವಾಗಿ ಅಳವಡಿಸಿದ ತನ್ನ ಮಹಿಮೆಯನ್ನು ಪ್ರಕಾಶಪಡಿಸುವುದಕ್ಕಾಗಿ ಬಾಹ್ಲೀಕ, ಭೂರಿಶ್ರವ, ಸೋಮದತ್ತ, ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಹೀಗೆಂದು ಹೇಳಿದನು. ೬೫. ‘ಬಿಲ್ವಿದ್ಯೆಯೇ ಆವಿರ್ಭಾವವಾಗುವ ಹಾಗೆ ಸಂಪೂರ್ಣವಾಗಿ ಕಲಿತುಕೊಂಡಿರುವ ನಿಮ್ಮ ಮಕ್ಕಳ ಶರೀರದಲ್ಲಿ ನನ್ನ ವಿದ್ಯಯನ್ನು ಪ್ರಕಾಶಪಡಿಸುತ್ತೇನೆ. ಈಗ ಎಲ್ಲರೂ ಒಟ್ಟಾಗಿ ಸೇರಿ ಪ್ರತ್ಯಕ್ಷವಾಗಿ ತಿಳಿದು ನೋಡಬೇಕು.’ ವ|| ಎಂದು ಹೇಳಲಾಗಿ ಹಾಗೆಯೇ ಮಾಡೋಣವೆಂದು ಎಲ್ಲರೂ ಒಪ್ಪಿ ಪಟ್ಟಣದ ಹೊರಗಿನ ಉತ್ತರದಿಗ್ಭಾಗದಲ್ಲಿ ಚಚ್ಚೌಕವಾದ ಭೂಮಿಯನ್ನು ಅಳೆದು ಕಲ್ಲು ಹುಲ್ಲನ್ನು ಶೋಸಿ ತೆಗೆದು ಶುಭದಿನ ಶುಭಮೂಹೂರ್ತದಲ್ಲಿ ೬೬. ನೆಲವನ್ನು ಚಂದ್ರಕಾವಿಯಿಂದ ಧಮ್ಮಸ್ಸುಮಾಡಿ ಅಪರಂಜಿಯಿಂದ ಮಾಡಿದ ಮನೆಗಳ ತೊಟ್ಟಿಗಳಲ್ಲಿ ಬಾವುಟಗಳನ್ನು ಕಟ್ಟಿಸಿ ಸೂಕ್ತ ವೆಚ್ಚದಿಂದ ಹಲವು ವಾದ್ಯಗಳು ಮೊಳಗುತ್ತಿರಲು ವ|| ಹಾಗೆ ನಿರ್ಮಿಸಿದ ವ್ಯಾಯಾಮರಂಗಕ್ಕೆ ಭೀಷ್ಮ, ಧೃತರಾಷ್ಟ್ರ, ವಿದುರ, ಸೋಮದತ್ತ, ಬಾಹ್ಲೀಕ, ಭೂರಿಶ್ರವರೇ ಮೊದಲಾದ ಕುಲವೃದ್ಧರು ಕುಂತಿಗಾಂಧಾರಿಯರೊಡನೆ ಬಂದು ಕುಳಿತರು. ೬೭. ರಾಣಿಯರನ್ನೂ ಮಕ್ಕಳನ್ನೂ ಬೇಕಾದವರನ್ನೂ ಯೋಧರನ್ನೂ ಗಣ್ಯರನ್ನೂ ಪಟ್ಟಣಿಗರೊಡನೆ ಶೋಭಿಸುವ ಹಾಗೆ ಒಟ್ಟಿಗೆ ಹಜಾರದ ಮೇಲುಭಾಗದಲ್ಲಿ ಆಕರ್ಷಕವಾಗಿರುವ ರೀತಿಯಲ್ಲಿ ಕುಳ್ಳಿರಿಸಿದರು. ೬೮. ಆಗ ದ್ರೋಣನು ಹೊಸಮುತ್ತಿನ ಆಭರಣಗಳು ವ್ಯಾಪಿಸಿ ಶೋಭಾಯ ಮಾನವಾಗಿರಲು, ರೇಷ್ಮೆಯ ವಸ್ತ್ರವು ತನ್ನ ಶರೀರವನ್ನು ಸೇರಿ ಸುಂದರವಾಗಿರಲು ಬಿಳಿಯ ಮೋಡದಿಂದ ಮುಚ್ಚಿದ ನೀಲಪರ್ವತವು

ವ|| ಅಂತು ಬಂದು ರಂಗಭೂಮಿಯ ನಡುವೆ ನಿಂದು-

ಕಂ|| ನೆಗೞರೆ ಪುಣ್ಯಾಹ ಸ್ವರ ಮೊಗೆದಿರೆ ಪಟು ಪಟಹ ಕಾಹಳಾ ರವವಾಗಳ್|
ಪುಗವೇೞ್ದಂ ವಿವಿಧಾಸ್ತ್ರ ಪ್ರಗಲ್ಭರಂ ತನ್ನ ಚಟ್ಟರಂ ಕಳಶಭವಂ|| ೬೯

ಅಂತು ಪುಗವೇೞ್ವ್ವುದುಂ ದಿ
ಗ್ದಂತಿಗಳುಂ ಕುಲನಗಂಗಳುಂ ಗಡಣಂಗೊಂ|
ಡೆಂತು ಕವಿತರ್ಕುಮಂತೆ ನೆ
ಲಂ ತಳರ್ರ‍ಿನೆಗಂ ಪ್ರಚಂಡ ಕೋದಂಡಧರರ್|| ೭೦

ವ|| ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ ದುರ್ಯೋಧನನಂ ಮುಂತಿಟ್ಟು ಯುಯುತ್ಸು ದುಶ್ಯಾಸನ ದುಸ್ಸಹ ದುಸ್ಸಳ ಜರಾಸಂಧ ಸತ್ಯ ಸಂಧ ನಿಸ್ಸಹ ರಾಜಸಂಧ ವಿಂದ ಅನುವಿಂದ ದುರ್ಮತಿ ಸುಬಾಹು ದುಸ್ಪರ್ಶನ ದುರ್ಮರ್ಷಣ ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಸುನಾಭ ಚಿತ್ರ ಉಪಚಿತ್ರ ನಂದ ಉಪನಂದ ಸುಚಿತ್ರಾಂಗದ ಚಿತ್ರಕುಂಡಲ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹು ಪ್ರತಿಮ ಸುಪ್ರತಿಮ ಸಪ್ರಮಾಥಿ ದುರ್ಧರ್ಷಣ ದುಷ್ಟರಾಜಯ ಮಿತ್ರ ಉಪಮಿತ್ರ ಚೌಳೋಪ ದ್ವಂದ್ವಹಸ್ತ ಪ್ರತೀಪ ಸುಪ್ರತೀಪ ಪ್ರಹಸ್ತ ಪ್ರತಾಪ ಪ್ರಮದ ಸದ್ಬಾಹುಗಳ್ ಮೊದಲಾಗಿ ನೂರ್ವರುಂ ಬಂದು-

ಕಂ|| ಗದೆಯೊಳ್ ಬಿಲ್ಲೊಳ್ ಗಜದೊಳ್
ಕುದುರೆಯೊಳಂ ರಥದೊಳಸ್ತ್ರಕೌಶಲದೆ ಬೆಡಂ|
ಗೊದವಿರೆ ತೋಱದರವರೊ ರ್ಮೊದಲೆ
ಜನಂ ಪೊಗೞೆ ನೆಗೞೆ ಜಳನಿ ನಿನದಂ|| ೭೧

ವ|| ಅಂತವರಿಂ ಬೞ ಯಂ-

ಕಂ|| ಆದ ಮುಳಿಸಿಂದಮಾಗಳ್ ಮೋದುವ ಬಗೆ ಬಳೆಯೆ ಪಿಡಿದ ಗದೆಗಳಿನಿಳಿಪಂ|
ತಾದುದು ಸುಯೋಧನೋಗ್ರ ವೃ ಕೋದರರೊರ್ಮೊದಲೆ ಶಿಖರಮುಳ್ಳೆರಡಗಮಂ|| ೭೨

ವ|| ಅಂತಿರ್ವರುಮೊರ್ವರೊರ್ವರೊಳ್ ಸೆಣಸಿ ಬಹಪ್ರಯೋಗ ಗದಾ ಕೌಶಲಮಂ ತೋಱಲೆಂದು-

ಬರುವ ಹಾಗೆಬಂದನು. ವ|| ಬಂದು ರಂಗಸ್ಥಳದ ಮಧ್ಯೆ ನಿಂತುಕೊಂಡು- ೬೯. ಪುಣ್ಯಾಹವಾಚನ ಮಂತ್ರನಾದವೂ ತಮಟೆ ಕೊಂಬು ಮೊದಲಾದ ವಾದ್ಯಧ್ವನಿಗಳೂ ಮೊಳಗುತ್ತಿರಲು ಬಗೆಬಗೆಯಾದ ಶಸ್ತ್ರಾಸ್ತ್ರಗಳಲ್ಲಿ ಪರಿಣತರಾದ ತನ್ನ ಶಿಷ್ಯರನ್ನು ದ್ರೋಣನು ಪ್ರವೇಶಮಾಡಹೇಳಿದನು. ೭೦. ದಿಗ್ಗಜಗಳೂ ಕುಲಪರ್ವತಗಳೂ ಗುಂಪುಕೂಡಿ ಮುತ್ತುವ ಹಾಗೆಯೂ ಭೂಮಿ ನಡುಗುವ ಹಾಗೆಯೂ ಉದ್ದಾಮರಾದ ಬಿಲ್ಗಾರರು ವ|| ಧರ್ಮರಾಯನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲಸಹದೇವರೂ ದುರ್ಯೋಧನನನ್ನು ಮುಂದಿಟ್ಟುಕೊಂಡು ಯುಯುತ್ಸು, ದುಶ್ಯಾಸನ, ದುಸ್ಸಳ, ಜರಾಸಂಧ, ಸತ್ಯಸಂಧ, ನಿಸ್ಸಹ, ರಾಜಸಂಧ, ವಿಂದ, ಅನುವಿಂದ, ದುರ್ಮತಿ, ಸುಬಾಹು, ದುಸ್ಪರ್ಶನ, ದುರ್ಮರ್ಷಣ, ದುರ್ಮುಖ, ದುಷ್ಕರ್ಣ, ವಿಕರ್ಣ, ವಿವಿಂಶತಿ, ಸುಲೋಚನ, ಸುನಾಭ, ಚಿತ್ರ, ಉಪಚಿತ್ರ, ನಂದ, ಉಪನಂದ, ಸುಚಿತ್ರಾಂಗದ, ಚಿತ್ರಕುಂಡಲ, ಸುಹಸ್ತ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹು, ಪ್ರತಿಮೆ, ಸುಪ್ರತಿಮ, ಸಪ್ರಮಾಥಿ, ದುರ್ಧರ್ಷಣ, ದುಷ್ಟರಾಜಯ, ಮಿತ್ರ, ಉಪಮಿತ್ರ, ಚೌಳೋಪ, ದ್ವಂದ್ವಹಸ್ತ, ಪ್ರತೀಪ, ಪಹಸ್ತ, ಪ್ರತಾಪ, ಪ್ರಮದ, ಸದ್ಬಾಹುಗಳೇ ಮೊದಲಾದ ನೂರ್ವರೂ ಬಂದು-೭೧. ಜನರೆಲ್ಲರೂ ಸಮುದ್ರಧ್ವನಿಯಂತೆ ಗಟ್ಟಿಯಾಗಿ ಒಟ್ಟಿಗೆ ಹೊಗಳುವ ಹಾಗೆ ಗದೆಯಲ್ಲಿಯೂ ಬಿಲ್ಲಿನಲ್ಲಿಯೂ ಆನೆಯಲ್ಲಿಯೂ ಕುದುರೆಯಲ್ಲಿಯೂ ರಥದಲ್ಲಿಯೂ ಅಸ್ತ್ರಕೌಶಲದಲ್ಲಿಯೂ ಬೆಡಗುತೋರುವಂತೆ ಜಾಣ್ಮೆಯನ್ನು ಪ್ರದರ್ಶಿಸಿದರು. ವ|| ಅವರಾದ ಮೇಲೆ ೭೨. ಹೆಚ್ಚಿದ ಕೋಪವೂ ಹೊಡೆಯಬೇಕೆಂಬ ಅಭಿಲಾಷೆಯೂ ಬೆಳೆಯಲಾಗಿ ದುರ್ಯೋಧನನೂ ಭೀಮನೂ ಏಕಕಾಲದಲ್ಲಿ ಹಿಡಿದ ಗದೆಗಳು ಶಿಖರದಿಂದ ಕೂಡಿದ ಎರಡು ಬೆಟ್ಟಗಳನ್ನು ಒಟ್ಟಿಗೆ ಇಳಿಸಿದಂತಾದುವು. ವ|| ಅವರಿಬ್ಬರೂ ಪರಸ್ಪರ ರ್ಸ್ಪಸಿ ಅನೇಕ ಪ್ರಯೋಗಗಳಿಂದ ಕೂಡಿದ ಗದಾಕೌಶಲವನು

ಕಂ|| ಗೆಡೆವಚ್ಚಿರ್ವರ್ ಮನಗೊಂ ಡೊಡನೊಡನೋರಂತು ತಗುಳ್ದು ಝೇಂಕರಿಸಿದೊಡೆ| ಲ್ವಡಗಾಗೆ ಮೋದಲೆಂದಿ ರ್ದೆಡೆಯೊಳ್ ಗುರು ತನ್ನ ಮಗನನೆಡೆವುಗವೇೞ್ದಂ|| ೭೩

ವ|| ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳೆರಡಱ ನಡುವೆ ಕುಲಗಿರಿಯಿರ್ಪಂತಿರ್ದಶ್ವತ್ಥಾಮನಂ ಕಂಡಿರ್ವರುಮೆರಡುಂ ದೆಸೆಗೆ ತೊಲಗಿ ನಿಂದಾಗಳ್-

ಕಂ|| ಆ ದೂರ್ವಾಂಕುರ ವರ್ಣದೊ ಳಾದಮೊಡಂಬಟ್ಟ ಕನಕ ಕವಚಂ ರಾಜ| ತ್ಕೋದಂಡಮಮರ್ದ ದೊಣೆ ಕ ಣ್ಗಾದಮೆ ಬರೆ ಬಂದು ಮುಂದೆ ನಿಂದಂ ಹರಿಗಂ|| ೭೪

ವ|| ಆಗಳ್ ಕುಂಭಸಂಭವನುಲಿವ ಜನದ ಕಳಕಳ ರವಮುಮಂ ಮೊೞಗುವ ಪಗಳುಮಂ ಬಾರಿಸಿ-

ಕಂ|| ಈತಂ ಗುಣಾರ್ಣವಂ ವಿ
ಖ್ಯಾತ ಯಶಂ ವೈರಿಗಜಘಟಾವಿಘಂಟನನಿಂ||
ತೀತನ ಸಾಹಸಮುಪಮಾ ತೀತಮಿದಂ ನೋಡಿಮೆಂದು ನೆರವಿಗೆ ನುಡಿದಂ|| ೭೫

ವ|| ಆ ಪ್ರಸ್ತಾವದೊಳ್-

ಚಂ|| ಒಡೆಗುಮಜಾಂಡಮಿನ್ನಿನಿಸು ಜೇವೊಡೆದಾಗಳೆ ಬೊಮ್ಮನುಂ ಮನಂ
ಗಿಡುಗುಮದೇವುದೆಂದು ಮಿಡಿದೊಯ್ಯನೆ ಜೇವೊಡೆದಾಗಳಂಬನಂ| ಬೊಡನೊಡನೀಂಬುವೆಂಬನಿತು ಸಂದೆಯಮಪ್ಪಿನಮಸ್ತ್ರ ಜಾಲದಿಂ ತಡೆಯದೆ ಪಂಜರಂಬಡೆದನಂದು ವಿಯತ್ತಳದೊಳ್ ಗುಣಾರ್ಣವಂ|| ೭೬

ವ|| ಮತ್ತಮೈಂದ್ರ ವಾರುಣ ವಾಯವ್ಯಾಗ್ನೇಯ ಪಾರ್ವತಾದಿ ಬಾಣಂಗಳಂ ತುಡೆ-

ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಗಳ್ ಧರಿತ್ರಿಯಂ
ಕವಿದುವು ಗಾಳಿಗಳ್ ಪ್ರಳಯಕಾಲಮನಾಗಿಸಲೆಂದೆ ಲೋಕಮಂ| ಕವಿದುವು ಮೊಕ್ಕಳಂ ಕವಿದುವುಗ್ರ ಲಯಾಗ್ನಿಗಳಂತೆ ಬೆಟ್ಟುಗಳ್ ಕವಿದುವಿವೆಂಬನಿತ್ತು ಭಯಮಾಯ್ತು ಗುಣಾರ್ಣವನಸ್ತ್ರಕೌಶಲಂ|| ೭೭

ತೋರಿಸಿದರು. ೭೩. ಸಮಾನಬಲರಾದ ಇಬ್ಬರೂ ದೃಢಚಿತ್ತರಾಗಿ ಜೊತೆಜೊಯಲ್ಲಿಯೇ ಬೆನ್ನಟ್ಟಿಕೊಂಡು ಝೋಂಕರಿಸಿ (ಪರಸ್ಪರ ಅವರಿಬ್ಬರ ಶರೀರವು) (ಎಲಬು ಮಾಂಸವಾಗಿ) ಜಜ್ಜಿಹೋಗುವ ಹಾಗೆ ಹೊಡೆಯಬೇಕೆಂದಿದ್ದ ಸಮಯದಲ್ಲಿ ಗುರುವಾದ ದ್ರೋಣನು (ಅವರಿಬ್ಬರನ್ನು ಬೇರ್ಪಡಿಸುವುದಕ್ಕಾಗಿ) ತನ್ನ ಮಗನಾದ ಅಶ್ವತ್ಥಾಮನನ್ನು ಮಧ್ಯೆ ಪ್ರವೇಶಮಾಡಹೇಳಿದನು. ವ|| ಹಾಗೆ ಎಲೆಯನ್ನು ಮೀರಲು ಯೋಚಿಸಿದ ಎರಡು ಮಹಾಸಮುದ್ರಗಳ ಮಧ್ಯೆ ಕುಲಪರ್ವತದಂತಿದ್ದ ಅಶ್ವತ್ಥಾಮನನ್ನು ನೋಡಿ ಇಬ್ಬರೂ ಎರಡು ಪಕ್ಕಕ್ಕೆ ಸರಿದು ನಿಂತರು. ೭೪. ಎಳೆಯ ಗರಿಕೆಯ ಬಣ್ಣದಿಂದ ವಿಶೇಷವಾಗಿ ಒಪ್ಪಿ ತೋರುವ ಚಿನ್ನದ ಕವಚ ಪ್ರಕಾಶಮಾನವಾದ ಬಿಲ್ಲು ಮೈಗೆ ಸೇರಿಕೊಂಡಿದ್ದ ಬತ್ತಳಿಕೆ ಇವು ಕಣ್ಣುಗಳಿಗೆ ಮನೋಹರವಾಗಿರಲು ಹರಿಗನು ಮುಂದುಗಡೆ ಬಂದು ನಿಂತನು. ವ|| ಆಗ ದ್ರೋಣನು ಶಬ್ದಮಾಡುತ್ತಿದ್ದ ಜನಗಳ ಕಳಕಳಧ್ವನಿಯನ್ನೂ ಮೊಳಗುತ್ತಿದ್ದ ವಾದ್ಯಗಳನ್ನೂ ನಿಲ್ಲಿಸಿ ೭೫. ವಿಖ್ಯಾತಯಶಸ್ಸುಳ್ಳವನೂ ವೈರಿಗಜ ಘಟಾವಿಘಟನೂ (ಶತ್ರುಗಳೆಂಬ ಆನೆಗಳನ್ನು ಸೀಳುವ ಪರಾಕ್ರಮಿಯಾದ) ಆದ ಗುಣಾರ್ಣವನು ಇವನು. ಈತನ ಸಾಹಸ ಹೋಲಿಕೆಗೆ ಮೀರಿದುದು ಇದನ್ನು ನೋಡಿ ಎಂದು ಆ ಗುಂಪಿಗೆ ತಿಳಿಸಿದನು. ವ|| ಆ ಸಂದರ್ಭದಲ್ಲಿ- ೭೬. ಅರ್ಜುನನು ಸ್ವಲ್ಪ ಮಟ್ಟಿಗೆ ಬಿಲ್ಲನ್ನು ಶಬ್ದಮಾಡಿಸಿದರೂ ಬ್ರಹ್ಮಾಂಡವು ಒಡೆದುಹೋಗುತ್ತದೆ; ಬ್ರಹ್ಮನು ಉತ್ಸಾಹಶೂನ್ಯನಾಗುತ್ತಾನೆ. ಅಷ್ಪನ್ನೇಕೆ ಮಾಡುವುದು ಎಂದು ಅವನು ಬಹುನಿಧಾನ ಟಿಂಕಾರಮಾಡಿದಾಗ ಒಂದು ಬಾಣವು ಮತ್ತೊಂದು ಬಾಣವನ್ನೂ ಹೆರುತ್ತಿದೆಯೋ ಎಂಬ ಸಂದೇಹವನ್ನುಂಟುಮಾಡುತ್ತ ಗುಣಾರ್ಣವನು ಆಕಾಶಪ್ರದೇಶದಲ್ಲಿ ಆ ದಿನ ಅಸ್ತ್ರಗಳ ಸಮೂಹದಿಂದ ಸ್ವಲ್ಪವೂ ಸಾವಕಾಶ ಮಾಡದೆ ಒಂದು (ಬಾಣದ) ಪಂಜರವನ್ನು ಕಟ್ಟಿದನು. ವ|| ಮತ್ತು ಐಂದ್ರ, ವಾರುಣ, ವಾಯವ್ಯ, ಆಗ್ನೇಯ, ಪಾರ್ವತವೇ ಮೊದಲಾದ ಅಸ್ತ್ರಗಳನ್ನು ಪ್ರಯೋಗಿಸಲು- ೭೭. ಪ್ರಳಯಕಾಲದ ಕಪ್ಪುಮೋಡಗಳು ಮುಚ್ಚಿಕೊಂಡವು. ಸಮುದ್ರಗಳು ಭೂಮಿಯನ್ನು ಮುಚ್ಚಿದುವು.

ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುಯೋಧನನ ಮೊಗಂ ತಲೆನವಿರ ಗಂಟಿಂ ಕಿಱದಾಗೆ ದ್ರ್ಹೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮರಲ್ದ ತಾವರೆಯಿಂ ಪಿರಿದಾಗೆ-

ಕಂ|| ತೊಳಗುವ ತೇಜಂ ತೊಳತೊಳ ತೊಳಗುವ ದಿವ್ಯಾಸ್ತ್ರಮಮರ್ದ ಕೇದಂಡಮಸುಂ|
ಗೊಳಿಸೆ ಮನಂಗೊಳಿಸೆ ಭಯಂ
ಗೊಳಿಸೆ ಸಭಾಸದರನುಱದೆ ಕರ್ಣಂ ಬಂದಂ|| ೭೮

ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಯಿಂ ದಿವ್ಯಾಸ್ತ್ರಂಗಳನುರ್ಚಿ ಕೊಂಡು-

ಕಂ|| ಅರಿಗನ ಬಿಲ್ಬಲ್ಮೆಯೊಳಂ ದೆರಡಿಲ್ಲದೆ ಬಗೆದ ಮುಳಿಸುಮೇವಮುಮೆರ್ದೆಯೊಳ್||
ಬರೆದಿರೆ ತೋಱದನಾಯತ
ಕರ ಪರಿಘಂ ಕರ್ಣನಾತ್ಮ ಶರಪರಿಣತಿಯಂ|| ೭೯

ವ|| ಅಂತು ತೋಱಯುಮೆರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾಱದೆ ವಿದ್ವಿಷ್ಟ ವಿದ್ರಾವಣನನಿಂತೆಂದಂ-

ಕಂ|| ಸಂಗತದಿನೀಗಳಿಂತೀ
ರಂಗಮೆ ರಣರಂಗಮಾಗೆ ಕಾದುವಮಳವಂ|
ಪೊಂಗದಿರಿದಿರ್ಚದೇಂ ಗಳ
ರಂಗಂಬೊಕ್ಕಾಡುವಂತೆ ಪೆಂಡಿರೆ ಗಂಡರ್|| ೮೦

ವ|| ಎಂಬುದುಮತಿರಥಮಥನನಿಂತೆಂದಂ-

ಕಂ|| ಈ ನೆರೆದ ಗುರುಜನಂಗಳ
ಮಾನಿನಿಯರ ಮುಂದೆ ಕರ್ಣ ಪೊಲ್ಲದು ನುಡಿದೈ|
ನೀನೆನ್ನೀ ನಿಡುದೋಳ್ಗಳ
ತೀನಂ ಮೞಸುವೆಯಪ್ಪೊಡಾನೊಲ್ಲದನೇ|| ೮೧

ವ|| ಎಂಬುದುಂ ದ್ರೋಣನುಂ ಕೃಪನುಮೆಡೆಗೆ ವಂದು ಕರ್ಣನನಿಂತೆಂದರ್-

ಪ್ರಳಯಕಾಲವನ್ನುಂಟುಮಮಾಡಬೇಕೆಂದೇ ಬಿರುಗಾಳಿಗಳು ಭೂಮಿಯನ್ನಾವರಿಸಿಕೊಂಡವು. ಪ್ರಳಯಕಾಲದ ಬೆಂಕಿಗಳು ವಿಶೇಷವಗಿ ಮುಚ್ಚಿಕೊಂಡವು. ಹಾಗೆಯೇ ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ ಅರ್ಜುನನ ಅಸ್ತ್ರವಿದ್ಯಾ ಕೌಶಲವು ಭಯಂಕರವಾಯಿತು. ವ|| ಆಗ ಆ ಪರಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನೋಡಿ ದುರ್ಯೋಧನನ ಮುಖವು ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು, ದ್ರೋಣ, ಭೀಷ್ಮ, ಕೃಪ, ವಿದುರರೇ ಮೊದಲಾದವರ ಮುಖಗಳು ಅರಳಿದ ತಾವರೆಗಿಂತ ಹಿರಿದಾದುವು. ೮೭. ಈ ಮಧ್ಯೆ ಪ್ರಕಾಶಮಾನವಾದ ತೇಜಸ್ಸೂ ಅತ್ಯಂತ ಜಾಜ್ವಲ್ಯಮಾನವಾದ ದಿವ್ಯಾಸ್ತ್ರದಿಂದ ಕೂಡಿಕೊಂಡಿರುವ ಬಿಲ್ಲೂ ಸಭೆಯ ಜನರನ್ನು ಉತ್ಸಾಹಗೊಳಿಸಿ ಆಕರ್ಷಿಸಿ ಭಯವನ್ನುಂಟುಮಾಡುತ್ತಿರಲು ಕರ್ಣನು ವೇಗವಾಗಿ ಬಂದನು. ವ|| ದ್ರೋಣಾ ಚಾರ್ಯರಿಗೆ ನಮಸ್ಕಾರಮಾಡಿ ಬತ್ತಳಿಕೆಯಿಂದ ದಿವ್ಯಾಸ್ತ್ರಗಳನ್ನು ಸೆಳೆದುಕೊಂಡು ೭೯. ಅರ್ಜುನನ ಬಿಲ್ಲಿಗಿಂತ ತನ್ನ ಬಿಲ್ಲಿನ ಪಾಂಡಿತ್ಯವು ಸ್ವಲ್ಪವೂ ಬೇರೆಯಿಲ್ಲವೆಂದು ಭಾವಿಸಿದ ಕೋಪವೂ ಅಸಮಾಧಾನವೂ ಎದೆಯಲ್ಲಿ ಬರೆದಿರಲು ಪರಿಘಾಯುಧದಂತೆ ದೀರ್ಘವಾದ ಬಾಹುಗಳನ್ನುಳ್ಳ ಕರ್ಣನು ತನ್ನ ಅಸ್ತ್ರವಿದ್ಯಾಪ್ರೌಢಿಮೆಯನ್ನು ಪ್ರದರ್ಶಿಸಿದನು. ವ|| ಹಾಗೆ ತೋರಿಸಿಯೂ ಹೃದಯದ ಕೋಪವು ನಾಲಗೆಗೆ ಬರಲು ಸಹಿಸಲಾರದೆ ವಿದ್ವಿಷ್ಠವಿದ್ರಾವಣನಾದ ಅರ್ಜುನನನ್ನು ಕುರಿತು ಹೀಗೆಂದನು- ೮೦ ಎಲ್ಲರೂ ಇಲ್ಲಿ ಸೇರಿರುವುದರಿಂದ ಈ ವ್ಯಾಯಾಮರಂಗವೇ ರಣರಂಗವಾಗಿರಲು ಯುದ್ಧಮಾಡೋಣ. ಪರಾಕ್ರಮದಿಂದ ಉಬ್ಬದೇ (ಅಹಂಕಾರಪಡದೇ) ಇದಿರಿಸು. ಇದೇನಯ್ಯ ನಾಟ್ಯರಂಗವನ್ನು ಪ್ರವೇಶಿಸಿ ನರ್ತನಮಾಡುವುದಕ್ಕೆ ಶೂರರು ಹೆಂಗಸರೇನು? ವ|| ಎನ್ನಲು ಅದಕ್ಕೆ ಅತಿರಥಮಥನನಾದ ಅರ್ಜುನನು ಹೀಗೆಂದನು. ೮೧. ಕರ್ಣ ನೀನು ಇಲ್ಲಿ ಸೇರಿರುವ ಹಿರಿಯರ ಮತ್ತು ರಾಣಿವಾಸದ ಮುಂದೆ ಕೆಟ್ಟ ಮಾತನ್ನಾಡಿದ್ದೀಯೆ. ನೀನು ನನ್ನ ದೀರ್ಘವಾದ ತೋಳುಗಳ ತೀಟೆಯನ್ನು ಹೋಗಲಾಡಿಸುವುದಾದರೆ ನಾನು ಬೇಡವೆನ್ನುತ್ತೇನೆಯೇ? ವ|| ಎನ್ನಲು ದ್ರೋಣನು ಕರ್ಣನ

ಕಂ|| ಏವದ ಮುಳಿಸಿನ ಕಾರಣ ಮಾವುದೊ ನೀಂ ನಿನ್ನ ತಾಯ ತಂದೆಯ ದೆಸೆಯಂ|
ಭಾವಿಸದೆ ಕರ್ಣ ನುಡಿವಂ ತಾವುದು ಸಮಕಟ್ಟು ನಿನಗಮರೀಕೇಸರಿಗಂ|| ೮೨

ಚಂ|| ಎಂಬುದುಮಾ ಮಾತಿಂಗೆ ಮಱುವಾತುಗುಡಲಱಯದೆ ಪಂದೆಯಂ ಪಾವಡರ್ದಂತು ಮ್ಮನೆ ಬೆಮರುತ್ತುವಿರ್ದ ಕರ್ಣನಂ ದುರ್ಯೋಧನಂ ಕಂಡು ದ್ರೋಣನುಮಂ ಕೃಪನುಮನಿಂತೆಂದಂ-

ಕಂ|| ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ ನೀ| ಮೊಲಿದೆಲ್ಲಿ ಪುಟ್ಟ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ|| ೮೩

ವ|| ಎಂದು ನುಡಿದು ಕರ್ಣನನೀಗಳೆ ಕುಲಜನಂ ಮಾಡಿ ತೋರ್ಪೆನೆಂದು ಕೆಯ್ಯಂ ಪಿಡಿದೊಡಗೊಂಡು ಪೋಗಿ ಕನಕಪೀಠದ ಮೇಲೆ ಕುಳ್ಳಿರಿಸಿ ಕನಕಕಳಶದಲ್ ತೀವಿದಗಣ್ಯಪುಣ್ಯ ತೀರ್ಥೋದಕಂಗಳಂ ಚತುರ್ವೇದಪಾರಗರಿಂದಭಿಷೇಕಂಗೆಯ್ಸಿ-

ಕಂ|| ಮಂಗಳವಗಳ್ ಶುಭ ವಚ
ನಂಗಳ್ ಚಮರೀರುಹಂಗಳಾ ಶ್ವೇತಚ್ಛ|
ತ್ರಂಗಳಮರ್ದೆಸಯೆ ಕರ್ಣಂ
ಗಂಗಮಹೀತಳ ವಿಭೂತಿಯಂ ನೆಯಿತ್ತಂ|| ೮೪

ವ|| ಅಂತಿತ್ತು ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನಿತ್ತು ನೀನೆನಗೊಂದನೀಯಲ್ವೇೞ್ದ್ದುದೆಂದು-

ಕಂ|| ಪೊಡಮಡುವರ್ ಜೀಯೆಂಬರ್
ಕುಡು ದಯೆಗೆಯ್ಯೇಂ ಪ್ರಸಾದಮೆಂಬಿವು ಪೆಱರೊಳ್|
ನಡೆಗೆಮ್ಮ ನಿನ್ನಯೆಡೆಯೊಳ್ ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ|| ೮೫

ವ|| ಎಂದು ಬೇಡಿಕೊಂಡು ಕರ್ಣನಂ ಮುಂದಿಟ್ಟೊಡಗೊಂಡು ಪೋಗಿ ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್-

ಉ|| ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮು
ಯ್ವಾಂತಿರದಿರ್ ಗುಣಾರ್ಣವನಿನಸ್ತಮಯಕ್ತಿದು ಸಾಲ್ಗುವಿಗಳೆಂ|
ಬಂತೆವೊಲಂದು ಮುಂದಱದು ತನ್ನ ಮಗಂಗೆ ಸಮಂತು ಬುದ್ಧಿವೇ ೞ್ವಂತೆವೊಲತ್ತಲಸ್ತಗಿರಿಯಂ ಮಗೊಂಡುದು ಸೂರ್ಯಮಂಡಲಂ|| ೮೬

ಮಧ್ಯೆ ಪ್ರವೇಶಿಸಿ ಕರ್ಣನಿಗೆ ಹೀಗೆ ಹೇಳಿದರು. ೮೨. ಅಸಮಾಧಾನಕ್ಕೂ ಕೋಪಕ್ಕೂ ಕಾರಣವೇನು? ನಿನ್ನ ತಾಯಿ ತಂದೆಯ ವಿಷಯವನ್ನು ವಿಚಾರಿಸಿ ಮಾತನಾಡುವುದಾದರೆ ನಿನಗೂ ಅರಿಕೇಸರಿಗೂ ಯಾವ ಸಮಾನತೆಯಿದೆ? ವ|| ಎನ್ನಲು ಆ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಮರ್ಥನಾಗದೆ ಹೇಡಿಯ ಮುಂದೆ ಹಾವು ಅಡ್ಡಬಂದ ಹಾಗೆ ಸುಮ್ಮನೆ ಬೆವರಿ ನಿಂತಿದ್ದ ಕರ್ಣನನ್ನು ದುರ್ಯೋಧನನು ನೋಡಿ ದ್ರೋಣನನ್ನೂ ಕೃಪನನ್ನೂ ಕುರಿತು ಹೀಗೆಂದನು-೮೩. ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ? ಕರ್ಣನ ಕುಲವನ್ನೂ ಬಿಡಿಸಿ (ವಿಚಾರಮಾಡಿ) ನೋಡಬೇಡಿ; ನೀವು ಪ್ರೀತಿಸಿ ಎಲ್ಲಿ ಹುಟ್ಟಿ ಬೆಳೆದಿರಿ? ಕೊಡದಲ್ಲಿಯೂ ಜೊಂಡಿನ ರಾಶಿಯಲ್ಲಿಯೂ ಕುಲವಿದ್ದಿತೆ? ವ|| ಎಂಬುದಾಗಿ ಹೇಳಿ ಕರ್ಣನನ್ನೂ ಈಗಲೇ ಕುಲಜನನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಕರ್ಣನ ಕಯ್ಯನ್ನು ಹಿಡಿದುಕೊಂಡು ಹೋಗಿ ಚಿನ್ನದ ಪೀಠದ ಮೇಲೆ ಕುಳ್ಳಿರಿಸಿ ಚಿನ್ನದ ಕಳಶದಲ್ಲಿ ತುಂಬಿದ್ದ ಅಸಂಖ್ಯಾತವಾದ ಪುಣ್ಯತೀರ್ಥೋದಕಗಳಿಂದ ನಾಲ್ಕು ವೇದಗಳಲ್ಲಿ ಪ್ರವೀಣರಾದ ಪಂಡಿತರಿಂದ ಅಭಿಷೇಕಮಾಡಿಸಿದನು. ೮೪. ಮಂಗಳವಾದ್ಯಗಳೂ ಒಳ್ಳೆಯ ಸ್ವಸ್ತಿವಾಚನಗಳೂ ಚಾಮರಗಳೂ ಬಿಳಿಯ ಕೊಡೆಗಳೂ ಒಟ್ಟಿಗೆ ಸೇರಿ ಪ್ರಕಾಶಿಸುತ್ತಿರಲು ಕರ್ಣನಿಗೆ ಅಂಗರಾಜ್ಯದ ವೈಭವವನ್ನು ಸಂಪೂರ್ಣವಾಗಿ ಕೊಟ್ಟನು. ವ|| ಹಾಗೆ ಕೊಟ್ಟು ಪ್ರತಿನಿತ್ಯದ ದಾನಕ್ಕಾಗಿ ದೇವತೆಗಳ ಅಳತೆಯಲ್ಲಿ ಹದಿನೆಂಟುಕೋಟಿ ಸುವರ್ಣನಾಣ್ಯಗಳನ್ನೂ ಕೊಟ್ಟು ನೀನು ನನಗೊಂದನ್ನು ಅನುಗ್ರಹಿಸಬೇಕು ಎಂದನು. ೮೫. ಎಲೈ ರಾಧೇಯನೇ ಇತರರು ನನಗೆ ನಮಸ್ಕಾರ ಮಾಡುತ್ತಾರೆ; ಸ್ವಾಮಿ ಎನ್ನುತ್ತಾರೆ; ಕೊಡಿ, ದಯಪಾಲಿಸಿ, ಏನು ಪ್ರಸಾದ ಎನ್ನುತ್ತಾರೆ. ಇವೆಲ್ಲ ಇತರರಲ್ಲಿ ನಡೆಯಲಿ; ನನ್ನ ನಿನ್ನ ವ್ಯವಹಾರದಲ್ಲಿ ಬೇಡ, ನೀನು ನನಗೆ ಸ್ನೇಹಿತನು ಮಾತ್ರನಾಗಿರುತ್ತೀಯೆ. ವ|| ಎಂದು ಬೇಡಿಕೊಂಡು ಕರ್ಣನನ್ನು ಮುಂದುಮಾಡಿಕೊಂಡು ಹೋಗಿ ಧೃತರಾಷ್ಟ್ರನಿಗೂ ಗಾಂಧಾರಿಗೂ ನಮಸ್ಕಾರ ಮಾಡಿಸಿದನು. ೮೬. ‘ಹೀಗೆ ದುರ್ಯೋಧನನು ಮಾಡಿದ ರಾಜ್ಯವೈಭವಕ್ಕೆ ಸುಮ್ಮನೆ

ವ|| ಆಗಳ್ ದುರ್ಯೋಧನನಂ ಮುಂದಿಟ್ಟೊಡಗೊಂಡು ಧೃತರಾಷ್ಟ್ರ ಕರ್ಣ ಶಲ್ಯ ಶಕುನಿ ಸೈಂಧವ ಪ್ರಭೃತಿಗಳ್ ನೆಲಂ ಮೂರಿವಿಟ್ಟಂತೆ ಸಭಾಕ್ಷೋಭಮಾಗೆ ತಳರ್ದು ನಾನಾವಿಧ ವಾಹನಂಗಳನೇಱ ನಿಜನಿವಾಸಂಗಳ್ಗೆ ಪೋದರಿತ್ತ ಧರ್ಮಪುತ್ರನಂ ಮುಂದಿಟ್ಟು ಭೀಮಾರ್ಜುನ ನಕುಲ ಸಹದೇವರುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳ್ ನಾನಾವಿಧ ವಾಹನಂಗಳ ನೇಱ ಬರೆ ಪುರಜನಂಗಳೆಲ್ಲಮೋರೋರ್ವರನೆ ಪಿಡಿಯಚ್ಚುವಿಡಿದು ನುಡಿಯೆ ಕೆಲರನಾಗತಮನಱವ ಬುದ್ಧಿಯೊಡೆಯರಿಂತೆಂಬರ್-

ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ವಿ
ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ|
ಡವರನಕಾರಣಂ ಕೆಣಕಿದೀ ಪೊಸ ಪೊೞ್ತಳಾದ ಕಿರ್ಚು ಕೌ
ರವರ್ಗಿದು ನಾಡೆಯುಂ ತಿಣುಕನಾಗಿರದೇಂ ಗಳ ಸಯ್ತು ಪೋಕುಮೇ|| ೮೭

ವ|| ಎಂದೊರ್ವರೊರ್ವರೊಂದೊಂದನೆ ನುಡಿಯತ್ತುಂ ಪೋಗೆ ಬೆಳಗುವ ಕೈದೀವಿಗೆಗಳ್ ಕೞ್ತಲೆಯಂ ತಲೆದೋಱಲೀಯದೆ ಪ್ರಚಂಡ ಮಾರ್ತಾಂಡನ ತೇಜೋಂಕುರಂಗಳ್ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಳ್-

ಕಂ|| ಎಸೆವ ನಿಜವಂಶಮಂ ಪೆ ರ್ಚಿಸುವ ಗುಣಾರ್ಣವನೊಳುಂತೆ ಸೆಣಸಲ್ಕೆಂದಿ|

ರ್ಪ ಸುಯೋಧನಂಗೆ ಮುಳಿಸಿಂ
ಕಿಸುಗಣ್ಣಿದ ತೆಱದಿನಮೃತಕರನುದಯಿಸಿದಂ|| ೮೮
ವ|| ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದಳವುಮಂ
ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ ಕಂಡು ತನ್ನೆರ್ದೆಯುಂ
ಪೊಳ್ಳುಮರನಂ ಕಿರ್ಚಳುರ್ವಂತೊಳಗೊಳಗುಳುರೆ ಸೈರಿಸಲಾಱದೆ ಕರ್ಣನಂ
ಕರೆದಾಳೋಚಿಸಿ ತಮ್ಮಯ್ಯನಲ್ಲಿಗೆ ಪೋಗಿ ಪೊಡಮಟ್ಟು ಕಟ್ಟೇಕಾಂತದೊಳಿಂತೆಂದಂ-

ಮ|| ಪಿರಿಯರ್ ನೀಮಿರೆ ಪಾಂಡುರಾಜನೆ ವಲಂ ಮುಂ ಪಟ್ಟಮಂ ಕಟ್ಟೆ ಭೂ ಭರಮಂ ತಾಳ್ದಿದನೀಗಳಾತನ ಸುತರ್ ತಾಮಾಗಳೇ ಯೋಗ್ಯರಾ|

ಗರೆ ಪಟ್ಟಕ್ಕೆ ತಗುಳ್ದು ಪಾಲನೆವಿರ್ ಪಾವಿಂಗೆ ದಾಯಾದ್ಯರಂ ಪಿರಿಯರ್ಮಾಡಿದಿರೆಮ್ಮ ಸಾವುಮುೞವುಂ ದೈವೇಚ್ಛೆಯಾಯ್ತಾಗದೇ|| ೮೯

ಉಬ್ಬಿಹೋಗಬೇಡ. ಗುಣಾರ್ಣವನಿಂದ ನೀನು ಸಾಯುವುದಕ್ಕೆ ಈಗ ಇಷ್ಟೇ ಸಾಕು’ ಎಂದು ಸೂರ್ಯನು ಮುಂದೆ ತನಗಾಗುವುದನ್ನು ಇಂದೇ ಪೂರ್ಣವಾಗಿ ಬುದ್ಧಿ ಹೇಳುವ ಹಾಗೆ ಅಸ್ತಮಯನಾದನು (ಸೂರ್ಯಮಂಡಲವು ಅಸ್ತಪರ್ವತದ ಹಿಂದೆ ಮರೆಗೊಂಡಿತು). ವ|| ಆಗ ದುರ್ಯೋಧನನನ್ನು ಮುಂದಿಟ್ಟುಕೊಂಡು ದೃತರಾಷ್ಟ್ರ, ಕರ್ಣ, ಶಲ್ಯ, ಶಕುನಿ, ಸೈಂಧವ, ಮೊದಲಾದವರು ನೆಲ ಬಿರಿದುಹೋದ ಹಾಗೆ ಸಭಾಮಂಟಪವು ಕಲಕಿಹೋಗುವ ಹಾಗೆ ಹೊರಹೊರಟು ನಾನಾವಿಧವಾದ ವಾಹನಗಳನ್ನು ಹತ್ತಿಕೊಂಡು ತಮ್ಮ ವಾಸಸ್ಥಳಕ್ಕೆ ಹೋದರು. ಈ ಕಡೆ ಧರ್ಮರಾಜನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲ ಸಹದೇವರೂ ಭೀಷ್ಮ, ದ್ರೋಣ, ಕೃಪ, ವಿದುರರೇ ಮೊದಲಾದವರೂ ಬಗೆಬಗೆಯ ವಾಹನಗಳನ್ನು ಹತ್ತಿ ಬರುತ್ತಿರಲು ಪಟ್ಟಣದವರೆಲ್ಲ ಒಬ್ಬೊಬ್ಬರನ್ನೂ ಅವರ ಪ್ರತ್ಯೇಕವಾದ ಸಂಕೇತಗಳಿಂದ ಗುರುತಿಸಿ ಮಾತನಾಡುತ್ತಿರಲು ಅವರಲ್ಲಿ ಭವಿಷ್ಯಜ್ಞಾನವುಳ್ಳ ಕೆಲವರು ಹೀಗೆಂದರು- ೮೭. ಅವರು ಇವರು ಅಂತಹವರು ಇಂತಹವರು ಎನ್ನಬೇಡ. ಅರಿಕೇಸರಿಯನ್ನೆದುರಿಸುವವರಾರೂ ಇಲ್ಲ. ಅರ್ಜುನನ ಆಜ್ಞೆಯನ್ನು ಮೀರಿ ಅವನನ್ನು ಪ್ರತಿಭಟಿಸುವ ವೀರರು ಯಾರೂ ಇಲ್ಲ. ಇಬ್ಬರಿಗೂ ಸಮಾನವಾಗಿದ್ದ ಸ್ನೇಹಭಂಗವಾಗಿ ಪಾಂಡವರನ್ನು ಕಾರಣವಿಲ್ಲದೆ ಕೆಣಕಿದ ಈ ಹೊತ್ತಿನಲ್ಲಿ ಉಂಟಾದ ಬೆಂಕಿಯು (ಮನಸ್ತಾಪವು) ಕೌರವರಿಗೆ ವಿಶೇಷವಾದ ಹಿಂಸೆಯನ್ನುಂಟುಮಾಡದೇ ಸಾಮಾನ್ಯವಾಗಿ ಹೋಗುತ್ತದೆಯೇ? ವ|| ಎಂದು ಒಬ್ಬೊಬ್ಬರು ಒಂದೊಂದನ್ನು ಆಡುತ್ತ ಹೋಗುತ್ತಿರಲಾಗಿ ಪ್ರಕಾಶಮಾನವಾಗಿದ್ದ ಕೈದೀವಿಗೆಗಳು ಕತ್ತಲೆಯ ಹರಡುವುದಕ್ಕೆ ಅವಕಾಶ ಕೊಡದೆ ಪ್ರಕಾಶಮಾನವಾದ ಸೂರ್ಯಕಿರಣಗಳ ಮೊಕಳೆಯಂತೆ ಬೆಳಗುತ್ತಿರಲು ಪಾಂಡವರು ತಮ್ಮ ನಿವಾಸಕ್ಕೆ ಹೋದರು. ಆಗ-೮೮. ಪ್ರಕಾಶಮಾನವಾದ ತನ್ನ ವಂಶವನ್ನೂ ಅಭಿವೃದ್ಧಿಗೊಳಿಸುವ ಗುಣಾರ್ಣವನಾದ ಅರ್ಜುನನಲ್ಲಿ ನಿಷ್ಕಾರಣವಾಗಿ ಜಗಳವಾಡಬೇಕೆಂದಿರುವ ದುರ್ಯೋಧನನಿಗೆ ಕೋಪದಿಂದ ತನ್ನ ಕಣ್ಣನ್ನು ಕೆರಳಿಸಿದ ರೀತಿಯಲ್ಲಿ ಚಂದ್ರನು ಕೆಂಪಗೆ ಉದಯಿಸಿದನು. ವ|| ಆಗ ದುರ್ಯೋಧನನು ಭೀಮಸೇನನ ಪರಾಕ್ರಮದ ಪ್ರಮಾಣವನ್ನೂ ಅರ್ಜುನನ ದಿವ್ಯಾಸ್ತ್ರಕೌಶಲವನ್ನೂ ನೋಡಿ ಅವನ ಹೃದಯವು ಪೊಳ್ಳುಮರವನ್ನು ಬೆಂಕಿಯು ಸುಡುವಂತೆ ಒಳಗೊಳಗೆ ಸುಡುತ್ತಿರಲು ಸಹಿಸಲಾರದೆ ಕರ್ಣನನ್ನು ಕರೆದು (ಅವನೊಡನೆ) ಯೋಚನೆಮಾಡಿ ತನ್ನ ತಂದೆಯಾದ ಧೃತರಾಷ್ಟ್ರನ ಸಮೀಪಕ್ಕೆ ಹೋಗಿ ನಮಸ್ಕಾರಮಾಡಿ ಬಹು ರಹಸ್ಯವಾಗಿ ಹೀಗೆ ಹೇಳಿದನು- ೮೯. ‘ಹೀಗೆ ಹಿರಿಯರಾದ ನೀವಿದ್ದರೂ ಪಾಂಡುರಾಜನಿಗೆ ಪಟ್ಟವನ್ನು ಕಟ್ಟಲು ಆತನು ರಾಜ್ಯಭಾರವನ್ನು ವಹಿಸಿದನು. ಈಗಲೂ ಅವರ ಮಕ್ಕಳು ತಾವಾಗಲೇ

ವ|| ಅದಲ್ಲದೆಯುಂ-

ಚಂ|| ಮಲೆ ತಲೆದೋಱದೆಂದುದನೆ ಕೊಟ್ಟುದಡಂಗಮಡಂಗಿ ಬಂದೊಡೊ ಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು ಕಱುಂಬದೆ ಮಿಕ್ಕ ಶತ್ರು ಮಂ|

ಡಳಿಕರೆ ಮಿತ್ರ ಮಂಡಳಿಕರಾದರನಾಕುಳಮಿಂದು ನಾಳೆ ಮಾ ರ್ಮಲೆದರನಿಕ್ಕಿ ನಮ್ಮನೆೞೆದಿಕ್ಕುಗುವಿ ನೆಲೆಯಿಂ ಗುಣಾರ್ಣವಂ|| ೯೦

ವ|| ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ ಭೀಮಸೇನಂ ಗದೆಗೊಳಲುಮಾಂಪುದರಿದು ಪಾಂಶುವಧದೆ ಕೆಯ್ಗೆ ಮಾಡುವುದು ತ್ತಮಪಕ್ಷಮಂತುಮಲ್ಲದೆಯುಂ-

ಶ್ಲೋ|| ಸ್ವಾಮ್ಯಾರ್ಥಂ ಸ್ವಾಮ್ಯ ವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ ಅರ್ಧರಾಜ್ಯಹರಂ ಭೃತ್ಯಂ ಯೋನ ಹನ್ಯಾತ್ಸ ಹನ್ಯತೇ||

ಎಂಬುದರ್ಥಶಾಸ್ತ್ರ ಸದ್ಭಾವಂ-

ಉ|| ಮೇಣ್ಕುಲಮಿಲ್ಲೆಯೋ ನಮಗೆ ದಾಯಿಗರಲ್ಲರೊ ಶಸ್ತ್ರವಿದ್ಯೆಯೊಳ್ ಪೂಣ್ಕೆಗಳಿಲ್ಲೆಯೋ ಧರೆಗೆ ಮುನ್ನವರಯ್ಯನೆ ಮುಖ್ಯನಲ್ಲನೋ| ಜಾಣ್ಕಿಱದಾಗವೇಡ ಮನದಲ್ ನಿಮಗಯ್ಯ ವಿದ್ಯಾತೃಯೋಗದಿಂ ಕಣ್ಕುರುಡಾದೊಡೇನೊ ಕುರುಡಾಗಲೆವೇಱ್ಪುದೆ ನಿಮ್ಮ ಬುದ್ಧಿಯುಂ|| ೯೧

ವ|| ಎಂದು ತನ್ನ ಮನದೊಳೊಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು-

ಉ|| ಏನೆರ್ದೆಗೊಂಡ ಕಜ್ಜಮನೆ ಪೇೞ್ದೆಯೊ ಚಿಂತಿಸುತಿರ್ಪೆನಾನುಮೇ ನಾನುಮುಪಾಯಮಂ ಬಗೆವರಂತವರ್ಗಳ್ ನಿನಗೆಂದೆ ಕಂದ ಪೇೞ್|
ನೀನಿರೆ ಪಟ್ಟಮುಂ ನೆಲನುಮಪ್ಪುದನೊಲ್ವೆನೆ ವೈರಿಗಳ್ಗೆ ನೀ ನೇನುಮದರ್ಕೆ ಚಿಂತಿಸದಿರಿಲ್ಲಿರಲೀವನೆ ಪಾಂಡುಪುತ್ರರಂ|| ೯೨

ವ|| ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇೞ್ದು ಪಾಂಡವರಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನೇಱಸಿಕೊಂಡು ದುರ್ಯೋಧನನಪ್ಪೊಡೆ ಪೊಲ್ಲ ಮಾನಸನಾತನುಂ ನೀಮುಮೊಂದೆಡೆಯೊಳಿರೆ ಕಿಸುಱುಂ ಕಲಹಮುಮೆಂದುಂ ಕುಂದದದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ ಕುರುಜಾಂಗಣ ವಿಷಯಕ್ಕೆ ತಿಳವಮಪ್ಪಂತಿರ್ದುದಲ್ಲಿಗೆ ಪೋಗಿ

ಪಟ್ಟಕ್ಕೆ ಯೋಗ್ಯರಾಗುತ್ತಿಲ್ಲವೆ? (ನೀವು) ಬೆನ್ನಟ್ಟಿಕೊಂಡು ಹೋಗಿ ಹಾವಿಗೆ ಹಾಲನ್ನೆರೆಯುತ್ತಿದ್ದೀರಿ. ದಾಯಾದಿಗಳನ್ನು ದೊಡ್ಡವರನ್ನಾಗಿ ಮಾಡಿದಿರಿ. ನಮ್ಮ ಸಾವು ಬುದುಕುಗಳು ಈಗ ಅದೃಷ್ಟಾನವಾಗದೇ ಇರುತ್ತದೆಯೇ’ (ಅಂದರೆ ರಾಜ್ಯವು ನಮಗೆ ಬಂದೇಬರುತ್ತದೆಯೆಂಬ ನಿಷ್ಕರ್ಷೆಯಿಲ್ಲ. ಅದೃಷ್ಟವಿದ್ದರೆ ಬರಬಹುದು ಎಂಬಂತೆ ಸಂಶಯಾತ್ಮಕವಾಯಿತು ಎಂದರ್ಥ). ವ|| ಹಾಗೂ ಅಲ್ಲದೆ-೯೦. (‘ಶತ್ರುರಾಜರೆಲ್ಲ’) ಪ್ರತಿಭಟನೆಯೇ ಇಲ್ಲದೆ ಮನಸ್ಸಿನಲ್ಲಿ ಶತ್ರುತ್ವವನ್ನೂ ಅಡಗಿಸಿಕೊಂಡು ಅವರು ಕೇಳಿದ್ದನ್ನು ಕೊಟ್ಟು ಅವರಿಗೆ ಅಡಿಯಾಳಾಗುವಂತೆ ಪ್ರತಿಜ್ಞೆಮಾಡಿತು. ಸಣ್ಣ ಪಾಳೆಯಗಳೆಲ್ಲ ಅವರ ಆಜ್ಞಾನುವರ್ತಿಯಾಗಿರಲು ನಿಷ್ಕರ್ಷೆಮಾಡಿಕೊಂಡುವು. ಪ್ರತಿಭಟಿಸದೆ ಶತ್ರುಮಂಡಲವೆಲ್ಲ ಮಿತ್ರಮಂಡಳಿಕರಾದರು. ಇಂದೋ ನಾಳೆಯೋ ಗುಣಾರ್ಣವನು ಪ್ರತಿಭಟಿಸಿದವರನ್ನೆಲ್ಲ ಧ್ವಂಸಮಾಡಿ ನಮ್ಮನ್ನೂ ಈ ನೆಲೆಯಿಂದ ಎಳೆದು ಬಿಸಾಡತ್ತಾನೆ’. ವ|| ಹಾಗೆ ವಿಕ್ರಮಾರ್ಜುನನು ಬಿಲ್ಲನ್ನು ಹಿಡಿದರೂ ಭೀಮಸೇನನು ಗದೆಯನ್ನು ಧರಿಸಿದರೂ ಪ್ರತಿಭಟಿಸುವುದಸಾಧ್ಯ. ರಹಸ್ಯವಾಗಿ ಮೋಸದ ಕೊಲೆಯಿಂದ ಅನಪಡಿಸಿಕೊಳ್ಳುವುದು ಉತ್ತಮವಾದ ಮಾರ್ಗ ಹಾಗೂ ಅಲ್ಲದೆ- ವ|| ‘ಭಾಗಕ್ಕೆ ಆಶೆಪಡುತ್ತಿರುವವನೂ ಸ್ವಾಮ್ಯವನ್ನು ಪಡೆಯಲು ಶಕ್ತಿಯುಳ್ಳವನೂ ರಹಸ್ಯವನ್ನು ತಿಳಿದವನೂ ಕಾರ್ಯಶೀಲನಾದವನೂ ಅರ್ಧರಾಜ್ಯವನ್ನು ಅಪಹರಿಸುವವನೂ ಆದ ಆಳನ್ನು ಯಾವನು ಕೊಲ್ಲುವುದಿಲ್ಲವೋ ಅವನು ತಾನೇ ಹತನಾಗುತ್ತಾನೆ.” ವ|| ಎನ್ನುವುದು ಅರ್ಥಶಾಸ್ತ್ರದ ಸಾರವತ್ತಾದ ಭಾಗ. ೯೧. ‘ಅಲ್ಲದೆ ನಮಗೆ ಅವರಿಗೆ ಸಮಾನವಾದ ಕುಲವಿಲ್ಲವೇ? ರಾಜ್ಯಕ್ಕೆ ನಾವು ಭಾಗಿಗಳಲ್ಲವೆ? ನಾವು ಅವರಷ್ಟೇ ಶಸ್ತ್ರವಿದ್ಯೆಯಲ್ಲಿ ಪ್ರಸಿದ್ಧರಲ್ಲವೆ; ಈಗಾಗಲೇ ಅವರಯ್ಯ ರಾಜ್ಯಭಾರಮಾಡಿಯಾಗಲಿಲ್ಲವೆ? ನಿಮ್ಮ ಮನಸ್ಸಿನಲ್ಲಿ ಜಾಣ್ಮೆ ಕಿರಿದಾಗಬೇಕಾಗಿಲ್ಲ. ದುರದೃಷ್ಟವಶದಿಂದ ಕಣ್ಣು ಕುರುಡಾದರೆ ನಿಮ್ಮ ಬುದ್ಧಿಯೂ ಕುರುಡಾಗಬೇಕೆ?’ ವ|| ಎಂದು ತನ್ನ ಮನಸ್ಸಿಗೊಪ್ಪಿದ ಮಾತನ್ನಾಡಿದ ಮಗನ ಮಾತನ್ನು ಧೃತರಾಷ್ಟ್ರನು ಅಂಗೀಕರಿಸಿದನು. ೯೨. ನನ್ನ ಹೃದಯದಲ್ಲಿದ್ದ ಕಾರ್ಯವನ್ನೇ ನೀನು ಹೇಳಿದ್ದೀಯೆ; ಅವರು ನಿನಗೇನಾದರೂ ಕೇಡನ್ನು ಯೋಚಿಸುತ್ತಿದ್ದಾರೆಯೆ ಎಂಬುದಾಗಿಯೇ ನಾನೂ ಚಿಂತಿಸುತ್ತಿದ್ದೇನೆ. ಮಗು, ನೀನಿರುವಾಗ ಪಟ್ಟವೂ ರಾಜ್ಯವೂ ಶತ್ರುಗಳಿಗೆ ಆಗುವುದನ್ನು ನಾನು ಒಪ್ಪುತ್ತೇನೆಯೇ? ಅದಕ್ಕೆ ನೀನು ಚಿಂತಿಸಬೇಡ; ಪಾಂಡುಪುತ್ರರು ಇಲ್ಲಿರಲು ನಾನು ಅವಕಾಶಕೊಡುತ್ತೇನೆಯೇ? ವ|| ಎಂದು ದುರ್ಯೋಧನನನ್ನು ಬೀಡಿಗೆ ಹೋಗಹೇಳಿ ಧೃತರಾಷ್ಟ್ರನು ಅಯ್ದು ಮಂದಿ ಪಾಂಡವರನ್ನೂ

ಸುಖಮಿರಿಮೆಂದೊಡಂತೆಗೆಯ್ವೆಮೆಂದು ಬೀೞ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನಱ ಪಿದರನ್ನೆಗಮಿತ್ತ ದುರ್ಯೋಧನನವರ ಪೋಗನಱದು ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮುಂ ಚರ್ಚಿಸಿವಾರಣಾವತಮನೊಂದೇ ದಿವಸದೊಳೆಯ್ದು ವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೇೞ್ದು ಕಳಿಪಿದನಾಗಳ್-

ಕಂ|| ಉದಿತೋದಿತನೈ ನೀಂ ನಿನ ಗುದಯದ ಮೇಲುದಯಮೆಂದು ನೆಗೞ್ದರಿಗಂಗ| ಭ್ಯುದಯಮನಱಪುವ ತೆಱದಿಂ ದುದಯಾಚಳಚುಂಬಿಬಿಂಬನಿನನುದಯಿಸಿದಂ|| ೯೩

ವ|| ಆ ಪ್ರಸ್ತಾವದೊಳ್ ಮಂಗಳಪಾಠಕರ ಮಂಗಳವೃತ್ತೋಚ್ಚಾರಣೆಗಳಿಂದಂ ಪಾಂಡವರಯ್ವರುಮುನ್ಮೀಲಿತನಯನರಾಗಿ ನಿತ್ಯನಿಯಮಂಗಳಂ ನಿರ್ವರ್ತಿಸಿ ಮಂಗಳವಸದನಂಗೊಂಡು ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನಿಕ್ಕುವ ಸೇಸೇಗಳು ಮನಾಂತುಕೊಳುತ್ತುಂ ಪಲವುಂ ತೆಱದ ಪ್ರಯಾಣ ಪಟಹಂಗಳೆಸೆಯೆ ಶುಭ ಲಕ್ಷಣ ಲಕ್ಷಿತಂಗಳಪ್ಪಾಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನೇಱ ದಿವ್ಯಬಾಣಾಸನ ಬಾಣಪಾಣಿಗಳಾಗಿ ನಿಜಪರಿಜನಂ ಬೆರಸು ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೞಲ್ದು ಸೈರಿಸಲಾಱದೆ-

ಚಂ|| ಮನದೊಳಲಂಪು ಪೊಣ್ಮೆ ನುಡಿದುಂ ನಡೆ ನೋಡಿಯುಮಾಟಪಾಟಮಂ ಬಿನದಮುಮಾರುಮಂ ಮಯಿಸುತ್ತಿರೆ ಬೀದಿಗಳೊಳ್ ವಿಳಾಸದೊ|
ಡ್ಡೆನಿಸಿ ತೊೞಲ್ವ ಪಾಂಡವರ ಪೋಗಿನೊಳುಂತೆ ಬೆಡಂಗುಗೆಟ್ಟು ಹ
ಸ್ತಿನಪುರಮಿಂದು ರಕ್ಕಸನ ತಿಂದ ಪೊೞಲ್ಗೆಣೆಯಾಗದಿರ್ಕುಮೇ|| ೯೪

ವ|| ಎಂದು ಕಣ್ಣನೀರಂ ನೆಗಪೆ-

ಚಂ|| ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧು ವಾದದೊಳ್

ಬೆರಸಿ ಸಮಂತು ಸೂಸುವ ಜಲಾರ್ದ್ರಲಸದ್ಧವಳಾಕ್ಷತಂಗಳೊಳ್| ಬೆರಸಿದ ತಣ್ಪನೆತ್ತಿ ಕವಿದೆತ್ತಿದ ಬಾಸಿಗದೊಂದು ಕಂಪಿನೊಳ್
ಪೊರೆದು ಮದಾಳಿಗಳ್ವೆರಸು ಬಂದುದದೊಂದನುಕೂಲ ಮಾರುತಂ|| ೯೫

ಬರಮಾಡಿ ತೊಡೆಯಮೇಲೆ ಕುಳ್ಳಿರಿಸಿಕೊಂಡು ‘ದುರ್ಯೋಧನನಾದರೆ ಕೆಟ್ಟ ಮನಸ್ಸುಳ್ಳವನು. ಅವನೂ ನೀವೂ ಒಂದೇ ಸ್ಥಳದಲ್ಲಿದ್ದರೆ ಕೋಪವೂ ಜಗಳವೂ ಎಂದೂ ತಪ್ಪುವುದಿಲ್ಲ. ಆದ ಕಾರಣ ಗಂಗಾನದಿಯ ದಕ್ಷಿಣದಲ್ಲಿ ಕುರುಜಾಂಗಣದೇಶಕ್ಕೆ ತಿಲಕದಂತಿರುವ ವಾರಣಾವತವೆಂಬ ಪಟ್ಟಣವಿದೆ; ಅಲ್ಲಿಗೆ ಹೋಗಿ ಸುಖವಾಗಿರಿ ಎನ್ನಲು (ಪಾಂಡವರು) ಹಾಗೆಯೇ ಮಾಡುವೆವು ಎಂದು ಅವರ ಅಪ್ಪಣೆಯನ್ನು ಪಡೆದು ಮನೆಗೆ ಬಂದು ಭೀಷ್ಮದ್ರೋಣ ಕೃಪ ವಿದುರರುಗಳಿಗೂ ಕುಂತಿಗೂ ಆ ವಿಷಯವನ್ನು ತಿಳಿಸಿದರು. ಅಷ್ಟರಲ್ಲಿ ಇತ್ತಕಡೆ ದುರ್ಯೋಧನನು ಅವರು ಹೋಗುವುದನ್ನು ತಿಳಿದು ಪುರೋಚನನೆಂಬ ತನ್ನ ಆಪ್ತನಾದ ಹೆಗ್ಗಡೆಯಲ್ಲಿ ಅರಗಿನ ಮನೆಯ ಉಪಾಯವನ್ನು ವಿಚಾರ ಚರ್ಚೆಮಾಡಿ ವಾರಣಾವತವನ್ನು ಒಂದೇ ದಿವಸದಲ್ಲಿ ಹೋಗಿ ಸೇರುವ ಹಾಗೆ ರಥವನ್ನು ಸಿದ್ಧಪಡಿಸಿ ನಾಲ್ಕು ಲಕ್ಷ ಸೈನ್ಯವನ್ನೂ ಅವನ ಸಹಾಯಕ್ಕಾಗಿ ಕಳುಹಿಸಿದನು; ಆಗ- ೯೩. ‘ನೀನು ಅಭಿವೃದ್ಧಿಯಾಗುವವನು, ನಿನಗೆ ವೃದ್ಧಿಯ ಮೇಲೆ ವೃದ್ಧಿಯಾಗುತ್ತದೆ’ ಎಂದು ಪ್ರಸಿದ್ಧನಾದ ಅರಿಕೇಸರಿಗೆ ಅವನ ಅಭಿವೃದ್ಧಿಯನ್ನು ಸೂಚಿಸುವ ರೀತಿಯಿಂದ ಉದಯಪರ್ವತಸ್ಪರ್ಶಿಯಾದ ಸೂರ್ಯನು ಉದಯಿಸಿದನು. ವ|| ಆ ಸಂದರ್ಭದಲ್ಲಿ ಹೊಗಳುಭಟರ ಮಂಗಳಪದ್ಯಪಠನಗಳಿಂದ ಪಾಂಡವರೈದು ಜನರೂ ಅರಳಿದ ಕಣ್ಣುಗಳನ್ನುಳ್ಳವರಾಗಿ ಪ್ರತಿದಿನವೂ ಮಾಡಬೇಕಾದ ನಿತ್ಯಕರ್ಮಗಳನ್ನು ಮುಗಿಸಿ ಮಂಗಳಕರವಾದ ಅಲಂಕಾರವನ್ನು ಮಾಡಿಕೊಂಡು ವೃದ್ಧಬ್ರಾಹ್ಮಣರುಗಳು ಆಶೀರ್ವದಿಸುವ ಹರಕೆಗಳನ್ನೂ ಚೆಲ್ಲುತ್ತಿರುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸಿಕೊಳ್ಳುತ್ತ ನಾನಾರೀತಿಯ ಪ್ರಯಾಣಭೇರಿಗಳು ಪ್ರಕಾಶಿಸುತ್ತಿರಲು ಶುಭಲಕ್ಷಣಗಳಿಂದ ಗುರುತಿಸಲ್ಪಟ್ಟ ಒಳ್ಳೆಯ ತಳಿಯಿಂದ ಕೂಡಿದ ಕಾಂಭೋಜದೇಶದ ಉತ್ತಮ ಕುದುರೆಗಳ ಸಮೂಹದಿಂದ ಸಿದ್ಧಪಡಿಸಿದ ದಿವ್ಯರಥಗಳನ್ನು ಹತ್ತಿ ದೇವದತ್ತವಾದ ಬಿಲ್ಲುಬಾಣಗಳನ್ನು ಕಯ್ಯಲ್ಲಿ ಹಿಡಿದವರಾಗಿ ತಮ್ಮ ಪರಿವಾರದೊಂದಿಗೆ ಸೇರಿಕೊಂಡು ಹಸ್ತಿನಾಪುರದಿಂದ ಹೊರಟರು. ಭೀಷ್ಮ ದ್ರೋಣ ಕೃಪ ವಿದುರರು ದಾರಿ ಕಳುಹಿಸಲು ಬಂದರು. ಪಟ್ಟಣಿಗರೆಲ್ಲರೂ ಸೇರಿ ಅವರು ಹೊರಟುಹೋಗುವಿಕೆಗಾಗಿ ದುಖಪಟ್ಟು ಸಹಿಸಲಾರದೆ ಶೋಕಿಸಿದರು. ೯೪. ಮನಸ್ಸಿನಲ್ಲಿ ಸಂತೋಷವುಕ್ಕುವಂತೆ ಮಾತನಾಡಿಯೂ ದೀರ್ಘದೃಷ್ಟಿಯಿಂದ ನೋಡಿಯೂ ತಮ್ಮ ಆಟಪಾಟವಿನೋದಗಳಿಂದ ಯಾರನ್ನಾದರೂ ಮೈಮರೆಯುವಂತೆ ಮಾಡಿಯೂ ಬೀದಿಗಳಲ್ಲಿ ಸೌಂದರ್ಯದ ಪುಂಜವೆಂದೆನಿಸಿಕೊಂಡು ತಿರುಗಾಡುತ್ತಿದ್ದ ಪಾಂಡವರು ಊರನ್ನು

ವ|| ಅಂತು ಪೊೞಲಂ ಪೊಱಮಡೆ ಬೞಯನೆ ತಗುಳ್ದು ಬರ್ಪ ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ ನಗೆಯ ತೆಗೞನವರನೆಮ್ಮ ಬೞಯಟ್ಟಿದಂದು ಬನ್ನಿಮೆಂದು ಪ್ರಿಯಂ ನುಡಿದಿರಿಸಿ ಕಿಱದಂತರಂ ಬಂದೊಂದು ತಾವರೆಗೆಯ ಮೊದಲೊಳ್ ನಿಂದು ಭೀಷ್ಮ ದ್ರೋಣ ಕೃಪ ವಿದುರರ್ಕಳನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಮೆನೆ-

ಕಂ|| ನಡಪಿಯುಮೋದಿಸಿಯುಂ ಬಿ ಲ್ವಿಡಿಯಿಸಿಯುಂ ಕೆಚ್ಚುವಿರ್ದ ಕೂರ್ಮೇಗಳೆರ್ದೆಯಂ|
ನಡೆ ಪಾಂಡುಸುತರಲ್ಕೆಗೆ
ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್|| ೯೬

ವ|| ಆಗಳ್ ವಿದುರಂ ಕೆಲನಱಯದಂತುಮವಂಱವಂತುಂ ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಮೆಂದೊಡಂತೆ ಗೆಯ್ವೆಮೆಂದವರನಿರಲ್ವೇೞ್ದು ಪಯಣಂಬೋಗಿ-

ಕಂ|| ಪೊಳಪಿನ ಕಿರಣದ ಗಾಳಿಯ ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್| ತಳರ್ದು ನೆಲೆಯಿಂದಮಾಗಳ್ ಕೊಳದಿಂ ಪೊಱಮಟ್ಟ ಹಂಸೆಗಳ್ಗೆಣೆಯಾದರ್|| ೯೭

ವ|| ಆಗಿ ತಾವಾ ದಿಗಭೇಶ್ವರರಪ್ಪುದಱಂ ತಳರ್ದೆಡೆಯೆಡೆಯ ಮರಂಗಳ ತೊಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನವರ ಪರಕೆಯುಮಂ ಕೆಯ್ಕೊಳುತ್ತುಮವರ್ಗೆ ಬಾಧೆಯಾಗದಂತು ಕಾಪಂನಿಯಮಿಸುತ್ತುಂ ಕಾಲೂರ್ಗಳ ಗಂಡರ ಪೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಂಗೆ ನಗುತ್ತುಮಲ್ಲಿಗಲ್ಲಿಗೊಡೆದ ಕೆಗಮೞದಾಯತನಕ್ಕಂ ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು-

ಬಿಟ್ಟು ಹೋಗುವುದರಿಂದ ಹಸ್ತಿನಾಪಟ್ಟಣವು ವೈಭವಶೂನ್ಯವಾಗಿ ತಿಂದುಳಿದ ಪಟ್ಟಣಕ್ಕೆ ಸಮಾನವಾಗುವುದಿಲ್ಲವೇ ವ|| ಎಂದು ಕಣ್ಣೀರನ್ನು ಸುರಿಸಿದರು. ೯೫. ಆಶೀರ್ವಾದವನ್ನು ಮಾಡುತ್ತಿರುವ ಊರಹಿರಿಯರ ಮತ್ತು ಕುಲಸ್ತ್ರೀಯರ ಸ್ವಸ್ತಿವಾಚನಗಳಿಂದಲೂ ವಿಶೇಷವಾಗಿ ಚೆಲ್ಲುತ್ತಿರುವ ಮನೋಹರವೂ ಧವಳವರ್ಣಯುಕ್ತವೂ ಆದ ಆರ್ದ್ರಾಕ್ಷತೆಗಳಿಂದಲೂ ತಂಪಿನಿಂದಲೂ ಕಂಪಿನಿಂದಲೂ ಎತ್ತಿ ಕಟ್ಟಿದ ಬಾಸಿಂಗದ ಸುಗಂಧದಿಂದಲೂ ಮದಿಸಿದ ದುಂಬಿಗಳಿಂದಲೂ ಕೂಡಿದ ಹಿತವಾದ ಗಾಳಿಯೊಂದು (ಪಾಂಡವರಿಗೆ ಶುಭಸೂಚಕವಾಗಿ) ಬೀಸಿತು. ವ|| ಹಾಗೆ ಪಟ್ಟಣವನ್ನು ಬಿಟ್ಟು ಹೊರ ಹೊರಡಲು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಸಹಪಾಠಿಗಳನ್ನೂ ನಕಲಿಯವರನ್ನೂ ಹಾಸ್ಯಗಾರರನ್ನೂ ದೂಷಣೆಮಾಡುತ್ತಿದ್ದವರನ್ನೂ ಪಾಂಡವರು ‘ನಾವು ಹೇಳಿಕಳುಹಿಸಿದಾಗ ಬನ್ನಿ’ ಎಂದು ಒಳ್ಳೆಯ ಮಾತನ್ನಾಡಿ ನಿಲ್ಲಿಸಿ ಕೊಂಚ ದೂರ ಬಂದು ಒಂದು ತಾವರೆಯ ಕೆರೆಯ ಅಂಚಿನಲ್ಲಿ ನಿಂತು ಭೀಷ್ಮ, ದ್ರೋಣ ಕೃಪ ವಿದುರರುಗಳನ್ನು ‘ನಮಗೆ ಬುದ್ಧಿವಾದಗಳನ್ನು ತಿಳಿಸಿ ದಯಮಾಡಿ’ ಎಂದರು. ೯೬. ಬಾಲ್ಯದಿಂದ ಸಲಹಿಯೂ ವಿದ್ಯಾಭ್ಯಾಸ ಮಾಡಿಸಿಯೂ ಬಿಲ್ವಿದ್ಯೆಯನ್ನು ಕಲಿಸಿಯೂ ನಿಕಟವಾಗಿ ಅಂಚಿಕೊಂಡು ಗಾಢವಾಗಿದ್ದ ಪ್ರೇಮವು ಮನಸ್ಸನ್ನು ನಾಟಿರಲು ಬೀಷ್ಮದ್ರೋಣಕೃಪ ವಿದುರರು ಅವರ ಅಗಲಿಕೆಗಾಗಿ ನಿಟ್ಟುಸಿರನ್ನು ಸೆಳೆದರು. ವ|| ಆಗ ವಿದುರನು ಪಕ್ಕದವರಿಗೆ ತಿಳಿಯದಂತೆಯೂ ಅವರಿಗರ್ಥವಾಗುವಂತೆಯೂ ಸರಳವಾದ ರೀತಿಯಲ್ಲಿಯೇ ‘ದಾರಿಯಲ್ಲಿ ಪ್ರಾಪ್ತವಾಗಬಹುದಾದ ವಿಷ, ಅಗ್ನಿ ಮೊದಲಾದುವುಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ’ ಎಂದು ಹೇಳಲು ಅವರು ಹಾಗೆಯೇ ಮಾಡುತ್ತೇವೆಂದು ಹೇಳಿ ಅವರನ್ನು ಅಲ್ಲಿಯೇ ನಿಲ್ಲಿಸಿ ಮುಂದೆ ಪ್ರಯಾಣಮಾಡಿದರು. ೯೭. ಕಿರಣದ ಹೊಳಪನ್ನೂ ಗಾಳಿಯ ಸುಳಿವನ್ನೂ ಸೈರಿಸದೆ, ಹೂವಿನೆಸಳಿನಂತೆ ಕೋಮಲವಾಗಿದ್ದ ಆ ಸುಕುಮಾರರು ತಮ್ಮ ವಾಸಸ್ಥಳದಿಂದ ಹೊರಟು ಸರೋವರವನ್ನು ಬಿಟ್ಟು ಹೊರಟ ಹಂಸಗಳಿಗೆ ಸಮಾನರಾದರು. ವ|| ತಾವು ಆಗರ್ಭ ಶ್ರೀಮಂತರಾದುದರಿಂದ ಅಲ್ಲಿಂದ ಹೊರಟು ಪಕ್ಕಪಕ್ಕದಲ್ಲಿಯೇ ಸಿಕ್ಕಿದ ಮರಗಳ ನದಿಗಳ ಹಳ್ಳಿಗಳ ಹೆಸರುಗಳನ್ನು ವಿಚಾರಮಾಡುತ್ತಲೂ ಶ್ರೇಷ್ಠವಾದ ಅಗ್ರಹಾರದ ಮಹಾಜನಗಳು ಕೊಟ್ಟಂತಹ ಚಿನ್ನದ ಯಜ್ಞೋಪವೀತಗಳನ್ನೂ ಆಶೀರ್ವಾದಗಳನ್ನೂ ಸ್ವೀಕರಿಸುತ್ತಲೂ ಅವರಿಗೆ ಯಾವ ತೊಂದರೆಯೂ ಆಗದಂತೆ ರಕ್ಷಣೆಯನ್ನು ಏರ್ಪಡಿಸುತ್ತಲೂ ಸಣ್ಣ ಹಳ್ಳಿಗಳ ಗಂಡಸರ ಹೆಂಗಸರ ಆಚಾರ, ಉಡುಪು ಮಾತು ಮತ್ತು ತುರುಬುಗಳ

ಚಂ|| ಎಡಱಱಿದೀವ ಕಲ್ಪತರುವೆಂದು ವನೀಪಕಕೋಟಿ ಸಂತಸಂ
ಬಡೆ ಪೊಡೆವೊಂದಕಾಳವಿಳಯಾಶನಿಯೆಂದು ವಿರೋಗಳ್ ಮನಂ|
ಗಿಡೆ ಬಿಯಮುಂ ಪರಾಕ್ರಮಮುಮೊಪ್ಪಿರೆ ತನ್ನೊಡವುಟ್ಟಿದರ್ ಸಮಂ
ತೊಡವರೆ ವಾರಣಾವತಮನೆಯ್ದಿದನಮ್ಮನ ಗಂಧವಾರಣಂ|| ೯೮

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ

ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ದ್ವಿತೀಯಾಶ್ವಾಸಂ

ದಡ್ಡತನಕ್ಕೆ ಹುಸಿನಗುತ್ತಲೂ ಅಲ್ಲಲ್ಲಿ ಒಡೆದುಹೋಗಿದ್ದ ಕೆರೆಗೂ ಪಾಳಾಗಿದ್ದ ದೇವಾಲಯಗಳಿಗೂ ಹಣವನ್ನೂ ಕೊಟ್ಟು ಮೊದಲಿದ್ದ ಸ್ಥಿತಿಗೆ ತರುತ್ತಲೂ ತಾನು ಇಳಿದುಕೊಳ್ಳುವುದಕ್ಕೆ ಹಾಕಿದ್ದ ಬಳ್ಳಿಯ ಚಪ್ಪರಗಳಲ್ಲಿಯೂ ಹೂವಿನ ಗೊಂಚಲುಗಳಲ್ಲಿಯೂ ವಿಶ್ರಮಿಸಿಕೊಳ್ಳುತ್ತಲೂ ಬಂದು ೯೮. ಬಡತನದ ಸ್ವರೂಪವನ್ನು ತಿಳಿದು ದಾನಮಾಡುವ ಕಲ್ಪವೃಕ್ಷವಿದೆಂದು ಯಾಚಕಸಮೂಹವು ಸಂತೋಷಪಡುವಂತಿರುವ ದಾನಗುಣವೂ ಇದೊಂದು ಅಕಾಲದಲ್ಲಿ ಪ್ರಾಪ್ತವಾಗುವ ಪ್ರಳಯಕಾಲದ ಸಿಡಿಲೆಂದು ಶತ್ರುಗಳ ಮನಸ್ಸನ್ನು ಕೆಡಿಸುವ ಪರಾಕ್ರಮವೂ ತನ್ನಲ್ಲಿ ಪ್ರಕಾಶಿಸುತ್ತಿರಲು ತನ್ನ ಸಹೋದರರು ಜೊತೆಯಲ್ಲಿಯೇ ಕೂಡಿ ಬರುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು (ಅರಿಕೇಸರಿಯು) ವಾರಣಾವತವನ್ನು ಬಂದು ಸೇರಿದನು.
************


**************

ಕಾಮೆಂಟ್‌ಗಳಿಲ್ಲ: