ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ

ಚತುರ್ಥಾಶ್ವಾಸಂ
ಕಂ|| ಶ್ರೀರಮಣಿಯಂ ದ್ಪಿಷದ್ಬಳ
ಪಾರಾವಾರದೊಳುದಗ್ರ ಭುಜ ವಿಜಯ ಮಹಾ|
ಮೇರುವಿನ ಕಡೆದು ಪಡೆದಳ
ವಾರುಮನಿೞಸಿದುದುದಾತ್ತನಾರಾಯಣನಾ ೧

ವ|| ಅಂತು ದ್ರುಪದನ ಪೊೞಲೊಳ್ ಪಾಂಡವರ್ ಚಾಗಕ್ಕೆ ಬೂತುಂ ಭೋಗಕೆ ಪೊೞ್ತುಂ ನೆಯದೆನಿಸಿ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಿರ್ಪನ್ನೆಗಮಿತ್ತಲ್-

ಮ|| ಚರರಾಗೆಯ್ದಿದರೆಯ್ದಿ ಹಸ್ತಿನಪುರಕ್ಕಾ ಪಾಂಡವರ್ ತಮ್ಮುತ
ಯ್ವರುಮಿರ್ದರ್ ದ್ರುಪದಾರಾಜ ಪುರದೊಳ್ ಕೆಯ್ಕೊಂಡು ಪಾಂಚಾಳಿಯಂ|
ಧುರದೊಳ್ ಕರ್ಣನನಾಂತು ಗೆಲ್ದವನವಂ ಸಂದರ್ಜುನಂ ತಳ್ತು ಸಂ
ಗರದೊಳ್ ಶಲ್ಯನನಿಕ್ಕಿ ಗೆಲ್ದದಟನಾ ಭೀಮಂ ಗಡಂ ಕಾಣಿರೇ|| ೨

ವ|| ಎಂಬ ಮಾತಂ ಧೃತರಾಷ್ಟ್ರ ದುರ್ಯೋಧನಾದಿಗಳ್ ಕೇಳ್ದು ಬಿಲ್ಲುಂಬೆಱಗುಮಾಗಿ

ಕಂ|| ಕಾಯ್ವೞಲುಱ ಜತುಗೃಹದೊಳ
ಗಯ್ವರುಮಂ ಮಂತ್ರಬಲದೆ ಸುಟ್ಟೊಡಮವರಂ|
ದೆಯ್ವಬಲಮೊಂದೆ ಕಾದುದು
ದೆಯ್ವಮನಾರಯ್ಯ ವಿಱ ಬಾೞಲ್ ನೆವರ್|| ೩

ವ|| ಎಂಬುದುಂ ಭೀಷ್ಮ ದ್ರೋಣಾದಿಗಳ್ ನಿಶ್ಚಿತಮಂತ್ರರಾಗಿ ವಿದುರನಂ ಕರೆದಾಳೋಚಿಸಿ ಪೃಥಾತನೂಜರಂ ನಿನ್ನ ಬಲ್ಲ ಮಾೞ್ಕೆಯಿಂ ನುಡಿದೊಡಂಗೊಂಡು ಬರ್ಪುದೆಂದು ಪೇೞ್ದಟ್ಟುವುದುಮಾತನಂತೆ ಗೆಯ್ವೆನೆಂದು ರಥಾರೂಢನಾಗಿ ಪಾಂಚಾಳರಾಜಪುರಕ್ಕೆ ವಂದು ಪಾಂಡುಪುತ್ರರಂ ಕಂಡು-

ಚಂ|| ಅದು ಪಿರಿದುಂ ಪ್ರಮಾದಮದುವುಂ ಕುರುರಾಜನಿನಾಯ್ತು ಪೋಯ್ತು ಸಂ
ದುದು ಮಯಲ್ಕೆ ವೇೞ್ಪುದದನಾಳ್ವುದು ತಪ್ಪದೆ ಪಾಂಡುರಾಜನಾ||
ಳ್ದುದನೆಳೆಯಂ ಮನಂ ಬಸದೆ ಬರ್ಪುದು ನೀಮೆನೆ ಪೋಪ ಕಜ್ಜಮಂ
ವಿದುರನೊಳಯ್ವರುಂ ಸಮೆದು ಪೇೞ್ವುದುಮಾ ದ್ರುಪದಂಗೆ ರಾಜದಿಂ|| ೪

೧. ಲಕ್ಷ್ಮಿದೇವಿಯನ್ನು ಶತ್ರುಸೈನ್ಯವೆಂಬ ಸಮುದ್ರದಲ್ಲಿ ತನ್ನ ಬಲಿಷ್ಠವೂ ವಿಜಯಪ್ರದವೂ ಆದ ತೋಳೆಂಬ ಮಹಾಮೇರುಪರ್ವತದಿಂದ ಕಡೆದು ಪಡೆದ ಅರ್ಜುನನ ಪರಾಕ್ರಮವು ಯಾರನ್ನೂ ತಿರಸ್ಕರಿಸಿತು, ಹಾಗೆ ದ್ರುಪದನ ಪಟ್ಟಣದಲ್ಲಿ ಪಾಂಡವರು (ತಾವು ಮಾಡುವ) ದಾನಕ್ಕೆ ಪಾತ್ರರಾದವರು ಒಬ್ಬರೂ ಉಳಿಯಲಿಲ್ಲವೆಂಬಂತೆಯೂ ಸೌಖ್ಯಪಡುವುದಕ್ಕೆ ಕಾಲಾವಕಾಶವು ಸಾಲದೆಂಬಂತೆಯೂ ಸೌಖ್ಯದಿಂದ ರಾಜ್ಯವಾಳುತ್ತಿದ್ದರು. ೨. ಗೂಢಚಾರರು ಹಸ್ತಿನಾಪಟ್ಟಣಕ್ಕೆ ಬಂದು ಆ ಪಾಂಡವರೈದುಮಂದಿಯೂ ದ್ರುಪದರಾಜನ ಪಟ್ಟಣದಲ್ಲಿ ಇದ್ದಾರೆ. ದ್ರೌಪದಿಯನ್ನು ಪಡೆದು ಯುದ್ಧದಲ್ಲಿ ಕರ್ಣನನ್ನು ಗೆದ್ದವನು ಪ್ರಸಿದ್ಧನಾದ ಅರ್ಜುನ, ಸಂಸಿ ಯುದ್ಧದಲ್ಲಿ ಶಲ್ಯನನ್ನೂ ಹೊಡೆದು ಸೋಲಿಸಿದ ಪರಾಕ್ರಮಿಯೇ ಭೀಮ ವ|| ಎಂಬ ಮಾತನ್ನು ಧೃತರಾಷ್ಟ್ರ ದುರ್ಯೋಧನನೇ ಮೊದಲಾದವರು ಕೇಳಿ ಆಶ್ಚರ್ಯಭರಿತರಾದರು. ೩. ತಮ್ಮ ಮನಸ್ಸನ್ನು ಸುಡುವ ದುಖವು ಹೆಚ್ಚಾಗುತ್ತಿರಲು ಅರಗಿನಮನೆಯಲ್ಲಿ ಅಯ್ದುಜನರನ್ನೂ ತಮ್ಮ ಮಂತ್ರಶಕ್ತಿಯಿಂದ ಸುಟ್ಟರೂ ಅವರನ್ನು ದೈವಬಲವೊಂದೇ ರಕ್ಷಿಸಿತು. ದೈವಬಲವನ್ನು ಮೀರಿ ಯಾರು ತಾನೆ ಬದುಕುಲು ಸಮರ್ಥರಾಗುತ್ತಾರೆ? ಎಂದು ವ್ಯಥೆಪಟ್ಟರು. ವ|| ಭೀಷ್ಮ, ದ್ರೋಣ ಮೊದಲಾದವರು ನಿಷ್ಕೃಷ್ಟವಾದ ಮಂತ್ರಾಲೋಚನೆಯುಳ್ಳವರಾಗಿ ವಿದುರನ್ನು ಕರೆದು ಅವನೊಡನೆ ವಿಚಾರಮಾಡಿ ಪಾಂಡವರನ್ನು ನಿನಗೆ ತಿಳಿದ ರೀತಿಯಲ್ಲಿ ಬುದ್ಧಿ ಹೇಳಿ ಒಪ್ಪಿಸಿ ಕರೆದುಕೊಂಡು ಬರುವುದು ಎಂದು ಹೇಳಿ ಕಳುಹಿಸಿದರು. ಅವನು ಹಾಗೆಯೇ ಮಾಡುತ್ತೇನೆಂದು ತೇರನ್ನು ಹತ್ತಿ ದ್ರುಪದನ ಪಟ್ಟಣಕ್ಕೆ ಬಂದು ಪಾಂಡುಪುತ್ರರನ್ನು ನೋಡಿ ೪. ಕುರುರಾಜನಿಂದ ದೊಡ್ಡ ತಪ್ಪಾಗಿಹೋಯಿತು. ಆದದ್ದಾಗಿ ಹೋಯಿತು, ಕಳೆದುಹೋದುದನ್ನು ಮರೆತು ಬಿಡಬೇಕು. ಪಾಂಡುರಾಜನು ಆಳಿದ ಭೂಮಿಯನ್ನು ಬಿಡದೆ ನೀವು ಆಳಬೇಕು. ನೀವು ದೃಢಚಿತ್ತದಿಂದ ಬರಬೇಕು ಎಂದು ಹೇಳಲು ಪ್ರಯಾಣಮಾಡುವ ಕಾರ್ಯವನ್ನು ವಿದುರನೊಡನೆಯೇ ಅಯ್ವರೂ ಕೂಡಿ ಆಲೋಚಿಸಿ ಹೊರಡುವ

ವ|| ಆತನ ಬೞವೞಗೊಟ್ಟ ಮದಕರಿ ಕರೇಣು ಜಾತ್ಯಶ್ವ ಶಶಿತಾರ ಹಾರ ವಸ್ತುಗಳಂ ಕೆಯ್ಕೊಂಡು ದ್ರುಪದಜೆಯನೊಡಗೊಂಡು ದ್ರುಪದನನಿರವೇೞ್ದ್ದು ಕತಿಪಯ ಪ್ರಯಾಣಂಗಳಿಂ ಮದಗಜಪುರಮನೆಯ್ದೆ ವಂದಾಗಳ್-

ಚಂ|| ಘನಪಥಮಂ ಪಳಂಚಲೆವ ಸೌಧಚಯಂಗಳಿನಾಡುತಿರ್ಪ ಕೇ
ತನತತಿಯಿಂ ಕರೀಂದ್ರ ಗಳಗರ್ಜನೆಯಿಂ ಪಟಹಪ್ರಣಾದಮಂ|
ಘನರವಮೆಂದೆ ನರ್ತಿಸುವ ಕೇಕಿಗಳಿಂ ಕಡುರಯ್ಯಮಪ್ಪ ಹ
ಸ್ತಿನಪುರಮಂ ಜಿತೇಂದ್ರಪುರಮಂ ಪರಮೇಶ್ವರರಾಗಳೆಯ್ದಿದರ್|| ೫

ವ|| ಆಗಳಾ ಪೊೞಲ ಬೀದಿಗಳೊಳೆಲ್ಲಂ ಗಂಧೋದಕ ಪಂಚಗವ್ಯಂಗಳಂ ತಳಿಯಿಸಿ ಗುಡಿಯಂ ತೋರಣಂಗಳುಮಂ ತುಱುಗಲುಂ ಬಂಬಲುಮಾಗೆ ಕಟ್ಟಿಸಿ ಧೃತರಾಷ್ಟ್ರರ ದುರ್ಯೋಧನ ಕರ್ಣ ಶಲ್ಯ ಶಕುನಿ ನದೀತನೂಜ ಭಾರದ್ವಾಜ ಕೃಪಾದಿಗಳ್ವೆರಸಿದಿರ್ವಂದು ಯಥೋಚಿತ ಪ್ರತಿಪತ್ತಿಗಳಿಂದಯ್ವರುಮಂ ನಿಬಿಡಾಲಿಂಗನಂಗೆಯ್ದು ಮುಂದಿಟ್ಟೊಡಗೊಂಡು ವಂದು ಪೊೞಲಂಪುಗಿಸಿ ಮುನ್ನಮೆ ಸಮೆದ ಬೀಡುಗಳೊಳ್ ಬೀಡಂ ಬಿಡಿಸಿ ಸೂೞ್ಸೂ ಳೆ ಬಿರ್ದನಿಕ್ಕಿ ವಿವಿಧ ವಿನೋದಂಗಳಂ ತೋಱ ಕೆಲವು ದಿವಸಮಿರ್ದು ದ್ರೋಣ ಭೀಷ್ಮ ಕೃಪ ವಿದುರರ್ಕಳ್ ತಮ್ಮೊಳಾಲೋಚಿಸಿಯೆನ್ನ ನಡಪಿದುದರ್ಕಂ ಕೂರ್ತುದರ್ಕಂ ಪಾಂಡುಪುತ್ರರ್ಗೆ ನೆಲನಂ ಪಚ್ಚುಕೊಟ್ಟು ಪಟ್ಟಮಂ ಕಟ್ಟುವೆನೆನೆ ದುರ್ಯೋಧನನೇಗೆಯ್ದುಮೊಡಂಬಡದಿರೆ ಭೀಷ್ಮರ್ ಮುನಿದು-

ಚಂ|| ಒಡೆಯರದೇವರೆಂದು ನಿನಗಿತ್ತೊಡೆ ಪಟ್ಟಮನುರ್ಕಿದಪ್ಪೆ ಪೇೞ್
ಪೊಡವಿಗಶರಂತವರ್ಗಳಯ್ವರುಮಂ ಕ್ರಮದಿಂದೆ ಪಟ್ಟಮಂ|
ತಡೆಯದೆ ಕಟ್ಟಿ ಭೂತಳಮನಾಳಿಸದಿರ್ದೊಡದರ್ಕೆ ಸೊರ್ಕಿ ನೀಂ
ನುಡಿಯದಿರಣ್ಣ ನಿನ್ನ ನುಡಿಗಾಂ ತಡೆದಿರ್ಪೆನೆ ಪೇೞ್ ಸುಯೋಧನಾ|| ೬

ಕ್ರಮಮಱದೆನ್ನ ಕೊಟ್ಟುದನೆ ಕೊಂಡು ಮನೋಮುದದಿಂದೆ ಬಾೞ್ವುದಂ
ತವರಿವರೆಲ್ಲರುಂ ಸಮನದಲ್ಲದೆ ಮಾರ್ಮಲೆದರ್ಕಿ ಭೀಮನೊಳ್|
ಸಮರದೆ ಗರ್ವದಿಂ ಪೊಣರಲಾರ್ಪಿರೆ ಗಾವಿಲರಿನ್ನುಮೆಲ್ಲರಂ
ಯಮಸುತನುಂ ಸುರೇಂದ್ರಸುತನುಂ ಪೊಸದೀಗಳೆ ಮುಕ್ಕಿ ತೋಱರೇ|| ೭

ವಿಷಯವನ್ನು ದ್ರುಪದನಿಗೆ ಸಂತೋಷದಿಂದ ತಿಳಿಸಿದರು. ವ|| ಅವನು ಬಳುವಳಿಯಾಗಿ ಕೊಟ್ಟ ಮದ್ದಾನೆ, ಹೆಣ್ಣಾನೆ, ಜಾತಿಯ ಕುದುರೆಗಳು ಚಂದ್ರನಂತೆ ಹೊಳೆಯುತ್ತಿರುವ ಮುತ್ತಿನ ಹಾರ ಮೊದಲಾದ ಪದಾರ್ಥಗಳನ್ನು ಸ್ವೀಕರಿಸಿ ದ್ರೌಪದಿಯೊಡಗೂಡಿ ದ್ರುಪದನನ್ನು ಅಲ್ಲಿಯೇ ಇರಹೇಳಿ ಕೆಲವು ದಿನದ ಪ್ರಯಾಣಗಳಿಂದ ಹಸ್ತಿನಾಪುರದ ಸಮೀಪಕ್ಕೆ ಬಂದರು. ೫. ಆಕಾಶವನ್ನೇ ಅಪ್ಪಳಿಸುವ ಉಪ್ಪರಿಗೆಮನೆಗಳ ಸಮೂಹದಿಂದಲೂ ಚಲಿಸುತ್ತಿರುವ ಧ್ವಜಗಳಿಂದಲೂ ಶ್ರೇಷ್ಠವಾದ ಆನೆಯ ಕೊರಳಿನ ಗರ್ಜನೆಯಿಂದಲೂ ತಮಟೆಯ (ವಾದ್ಯದ) ದೊಡ್ಡ ಶಬ್ದವನ್ನು ಗುಡುಗೆಂದೇ ತಿಳಿದು ಕುಣಿದಾಡುತ್ತಿರುವ ನವಿಲುಗಳಿಂದಲೂ ಬಹು ರಮ್ಯವಾದ ಅಮರಾವತಿಯನ್ನು ಗೆದ್ದಿರುವ ಹಸ್ತಿನಾಪುರವನ್ನು ರಾಜಶ್ರೇಷ್ಠರಾದ ಪಾಂಡವರು ಆಗ ಸೇರಿದರು. ವ|| ಆಗ ಪಟ್ಟಣದ ಬೀದಿಗಳಲ್ಲೆಲ್ಲ ಶ್ರೀಗಂಧದ ನೀರನ್ನೂ ಪಂಚಗವ್ಯವನ್ನೂ (ಹಸುವಿಗೆ ಸಂಬಂಧಪಟ್ಟ ಹಾಲು ಮೊಸರು, ತುಪ್ಪ, ಗಂಜಲ, ಸಗಣಿ ಇವುಗಳನ್ನು ಮಿಶ್ರಮಾಡಿ ಶುದ್ಧಿಗಾಗಿ ಉಪಯೋಗಿಸುವ ಪದಾರ್ಥ) ಚಿಮುಕಿಸಿ ಧ್ವಜಗಳನ್ನೂ ತೋರಣಗಳನ್ನೂ ಗುಂಪುಗುಂಪಾಗಿ ಕಟ್ಟಿಸಿ ಧೃತರಾಷ್ಟ್ರನು ದುರ್ಯೋಧನ, ಕರ್ಣ, ಶಲ್ಯ, ಶಕುನಿ, ಭೀಷ್ಮ, ದ್ರೋಣ, ಕೃಪ ಮೊದಲಾದವರನ್ನೊಳಗೊಂಡು ಎದುರಾಗಿ ಬಂದು ಯಥೋಚಿತವಾದ ಮರ್ಯಾದೆ- ಸತ್ಕಾರಗಳಿಂದ ಅಯ್ದುಜನರನ್ನೂ ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಮುಂದಿಟ್ಟುಕೊಂಡು ಕರೆದುತಂದು ಪಟ್ಟಣವನ್ನು ಪ್ರವೇಶಮಾಡಿದನು. ಮೊದಲೇ ಸಿದ್ಧಮಾಡಿದ್ದ ಮನೆಗಳಲ್ಲಿ ತಂಗುವ ಹಾಗೆ ಮಾಡಿ ಸಲಸಲಕ್ಕೂ ಆತಿಥ್ಯವನ್ನು ಮಾಡಿ ನಾನಾರೀತಿಯ ವಿನೋದಗಳನ್ನು ತೋರಿಸಿ ಸಂತೋಷಪಡಿಸಿದನು. ಕೆಲವು ದಿವಸಗಳಾದ ಮೇಲೆ ದ್ರೋಣ ಭೀಷ್ಮ ಕೃಪರುಗಳು ತಮ್ಮಲ್ಲಿ ಆಲೋಚನೆ ಮಾಡಿ ನಾವು ಸಾಕಿದುದಕ್ಕೂ ಪ್ರೀತಿಸಿದುದಕ್ಕೂ (ಅನುಗುಣವಾಗಿ) ಪಾಂಡವರಿಗೆ ರಾಜ್ಯವನ್ನು ಭಾಗಮಾಡಿಕೊಟ್ಟು ಪಟ್ಟವನ್ನು ಕಟ್ಟೋಣವೆಂದು ಹೇಳಲು ದುರ್ಯೋಧನನು ಏನು ಮಾಡಿದರೂ ಒಪ್ಪಲಿಲ್ಲ. ಭೀಷ್ಮರು ಕೋಪಿಸಿಕೊಂಡು-೬. ‘ಒಡೆಯರಾದ ಪಾಂಡವರು ಏನು ಮಾಡಬಲ್ಲರು ಎಂದು ನಿನಗೆ ಪಟ್ಟವನ್ನು ಕೊಟ್ಟರೆ ಕೊಬ್ಬಿಹೋಗಿದ್ದೀಯೆ. ಹೇಳು ಭೂಮಿಗೆ ಒಡೆಯರಾದ ಆ ಆಯ್ದುಜನರಿಗೂ ಸಾವಕಾಶಮಾಡದೆ ಕ್ರಮವಾಗಿ ಪಟ್ಟವನ್ನು ಕಟ್ಟದೆ ರಾಜ್ಯವನ್ನೂ ಆಳಿಸುದಿದ್ದುದಕ್ಕಾಗಿ ಸೊಕ್ಕಿ ನೀನು ಮಾತನಾಡಬೇಡವಯ್ಯಾ, ನಿನ್ನ ಮಾತಿಗೆ (ಅಪ್ಪಣೆಗೆ) ನಾನು ಕಾದಿರುತ್ತೇನೆಯೇ ಹೇಳು ಸುಯೋಧನ’. ೭. ‘ಕ್ರಮವಾದುದು ಯಾವುದು ಎಂಬುದುನ್ನು ತಿಳಿದುಕೊಂಡು ನಾನು ಕೊಟ್ಟುದುದನ್ನು ಮನಸ್ಸಂತೋಷದಿಂದ (ತೃಪ್ತಿಯಾಗಿ) ಬಾಳುವುದು; ಹಾಗೆ ಅವರು ಇವರು

ವ|| ಅದಲ್ಲದೆಯುಂ ಪಾಂಡುಪುತ್ರರಪ್ಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನೆನಗೆ ಬೆಸಕೆಯ್ವರೆನ್ನೆಂದುದಂ ವಿಱುವರಲ್ಲರಾನವರ್ಗೆ ಪಟ್ಟಮಂ ಕಟ್ಟಿ ನೆಲನಂ ಪಚ್ಚುಕೊಡುವಾಗಳಡ್ಡಂ ಬರ್ಪ ಗಂಡರಂ ನೋೞ್ಪೆನೆಂದು ಬೀಷ್ಮರ್ ಬಗ್ಗಿಸಿದೊಡೆ ದುರ್ಯೋಧನನತಿ ಸಂಭ್ರಮಾಕುಳಿತನಾಗಿ ನೀಮೆಂದುದನೆಂದು ಬಾೞ್ವೆನೆಂದೊಡಪ್ಪುದೆಂದು-

ಮ|| ಧರಣೀನಾರಿಗೆ ಪಾಂಡುವಿಂ ಬೞಯಮಿಲ್ಲಾರುಂ ಪೆಱರ್ ಗಂಡರಂ
ತಿರಲೇವಂ ಬಡೆದಿರ್ದೊಡೞ್ದು ಕಿಡುಗುಂ ಸಪ್ತಾಂಗವಿ ರಾಜಕ|
ಕ್ಕರಸಂ ಧರ್ಮಜನಕ್ಕುಮೆಂದು ನಯದಿಂ ನಿಶೈಸಿ ಕಲ್ಯಾಣ ಕಾ
ರ್ಯರತರ್ ಕಟ್ಟಿದರಾ ಯುಷ್ಠಿರನೃಪಂಗುತ್ಸಾಹದಿಂ ಪಟ್ಟಮಂ|| ೮

ವ|| ಕಟ್ಟಿ ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು ಮೂಡಣ ಬಡಗಣ ನೆಲನಂ ದುರ್ಯೋಧನನಾಳ್ವುದೆಂದು ಧೃತರಾಷ್ಟ್ರಂ ಪೂರ್ವಸ್ಥಿತಿಳ್ ಪಚ್ಚುಕೊಟ್ಟು ದುರ್ಯೋಧನನಪ್ಪೊಡೆ ಪೊಲ್ಲಮಾನಸಂ ನೀಮುಂ ತಾಮುಮೊಂದೆಡೆಯೊಳಿರೆ ಕಿಸುರುಂ ಕಲಹಮುಮೆಂದುಂ ಕುಂದದದು ಕಾರಣದಿಂದಿಲ್ಲಿಗಱುವತ್ತು ಯೋಜನದೊಳಿಂದ್ರಪ್ರಸ್ಥಮೆಂಬುದು ಪೊೞಲಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿ ಮೆಂಬುದುಮಂತೆಗೆಯ್ವೆಮೆಂದು ಸಮಸ್ತ ಪರಿವಾರ ಪರಿವೃತರಾಗಿ-

ಮು|| ಒಡವರ್ಪುಗ್ರ ಮದೇಭ ವಾಜಿ ಗಣಿಕಾನರ್ಘ್ಯಾದಿ ರತ್ನಂಗಳೊಳ್
ತೊಡರ್ದೊಪ್ಪುತ್ತಿರೆ ಲಕ್ಷ್ಮಿ ದಂತಿ ತುರಗಂ ಶ್ರೀ ದಿವ್ಯಕಾಂತಾಜನಂ|
ತೊಡೆವೆಂಬೊಂದುಮನಾ ಸುರಾಸುರರಿನಾ ಗೋವಿಂದನಿಂ ಮುನ್ನೆ ಕೋ
ಳ್ಪಡೆದಂಭೋನಿಯಂತೆ ಬಂದು ನೆಗೞಂದ್ರಪ್ರಸ್ಥಮಂ ಧರ್ಮಜಂ|| ೯

ಮಟ್ಟರಗಳೆ|| ಎಯ್ದುವುದುಂ ತತ್ಪುರದುಪವನಂಗಳವಿರಳ ಮಳಯಾವಿಳಕಂಪಿತಂಗ|

ಳವಿರಳ ಕುಸುಮಾವಳಿ ಕಂಪುವೇ ಸೊಗಯಿಪ ಕಿಱು ಮಿಡಿಗಳೊಳೊಪ್ಪಿ ತೋ| ಲವಣಾಬ್ಧಿಯೆ ಬಳಸಿದುದೆನಿಸುವಗೞ ಬಳಸೆಸೆದಿರೆ ಕೋಂಟೆಯ ಚೆಲ್ವು ಪೊಗೞ|

ಲರಿದೆನಿಸಿರೆ ನೆಗೆದುದು ನಭಮನೆಯ್ದೆ ಮಿಳಿರ್ವ ಪತಾಕಾವಳಿ ದಿವಮನೆಯ್ದೆ ಬಳಸಿದ ಕೆಂಬೊನ್ನ ಮದಿಲ್ಗಳೊಳಗೆ ಮಣಿಮಯ ಭವನಾವಳಿ ತೊಳಗಿ ಬೆಳಗೆ

ರಸ ರಸದ ಬಾವಿ ಮನೆ ಮನೆಗೆ ಬೇ ಕಿಸುಗಲ್ಗಳ ರಜದ ಕಣಿವೆರಸು ತೋ ಸುರುಕುಜದ ನೆೞಲೊಳಂಗಣದೊಳೇನುಮಲಪಿಲ್ಲದೆ ಕಟ್ಟಿರೆ ಕಾಮಧೇನು

(ಪಾಂಡವರು ಕೌರವರು) ಸಮ ಎಂಬುದನ್ನು ತಿಳಿಯದೆ ಪ್ರತಿಭಟಿಸಿ ಭೀಮನನ್ನು ಯುದ್ಧದಲ್ಲಿ ಅಹಂಕಾರದಿಂದ ದಡ್ಡರಾದ ನೀವೆಲ್ಲ ಕಾದಬಲ್ಲಿರಾ. ಧರ್ಮರಾಜನೂ ಅರ್ಜುನನೂ ಈಗಲೇ ನಿಮ್ಮನ್ನು ಹೊಸೆದು ತಿಂದು ತೋರಿಸಲಾರರೇ?’ ವ|| ಅಷ್ಟೇ ಅಲ್ಲದೆ ಪಾಂಡವರು (ತಮ್ಮ ತಂದೆಯಾದ) ಪಾಂಡುರಾಜನಿಗೆ ಮಾಡದಿದ್ದುದನ್ನು ನನಗೆ ಮಾಡುತ್ತಾರೆ. ನಾನು ಹೇಳಿದುದನ್ನು ಮೀರುವವರಲ್ಲ. ನಾನು ಅವರಿಗೆ ಪಟ್ಟವನ್ನೂ ಕಟ್ಟಿ ರಾಜ್ಯವನ್ನು ಭಾಗಮಾಡಿಕೊಡುವಾಗ ಅಡ್ಡವಾಗಿ ಬರುವ ಶೂರರನ್ನು ನೋಡಿಯೆ ಬಿಡುತ್ತೇನೆ ಎಂದು ಗದರಿಸಲು ದುರ್ಯೋಧನನು ವಿಶೇಷ ಗಾಬರಿಗೊಂಡು ನೀವು ಹೇಳಿದುದನ್ನೇ ಒಪ್ಪಿ ಬಾಳುತ್ತೇನೆ ಎಂದು ಒಪ್ಪಿಕೊಂಡನು. ೮. ಈ ಭೂದೇವಿಗೆ ಪಾಂಡುರಾಜನಾದ ಮೇಲೆ ಬೇರೆ ಒಡೆಯರಾದವರಾರೂ ಇಲ್ಲ. ಹಾಗಿರುವಾಗ ನಿಮ್ಮ ಮಾತ್ಸರ್ಯಕ್ಕೊಳಗಾದರೆ ರಾಜ್ಯದ ಸಪ್ತಾಂಗಗಳೂ ನಾಶವಾಗುತ್ತವೆ. ಈ ರಾಜ್ಯಕ್ಕೆ ಧರ್ಮರಾಯನು ರಾಜನಾಗಲಿ ಎಂದು ರಾಜನೀತಿಗನುಗುಣವಾಗಿ (ಭೀಷ್ಮಾದಿಗಳು) ಆ ಧರ್ಮರಾಜನಿಗೆ ಉತ್ಸಾಹದಿಂದ ಪಟ್ಟವನ್ನು ಕಟ್ಟಿದರು. ವ|| ರಾಮಸೇತುವಿನಿಂದ ಹಿಡಿದು ಗಂಗಾನದಿಯ ದಕ್ಷಿಣಪಶ್ಚಿಮಭಾಗದ ಭೂಮಿಯನ್ನು ನೀವು ಆಳುವುದು. ಪೂವೋತ್ತರಭಾಗದ ನೆಲವನ್ನು ದುರ್ಯೋಧನನಾಳತಕ್ಕದ್ದು ಎಂದು ಧೃತರಾಷ್ಟ್ರನು ಮೊದಲಿನ ರೀತಿಯಲ್ಲಿಯೇ ಭಾಗಮಾಡಿಕೊಟ್ಟು; ದುರ್ಯೋಧನನಾದರೆ ದುರ್ಬುದ್ಧಿಯವನು. ನೀವೂ ಅವರೂ ಒಂದೇ ಕಡೆ ಇದ್ದರೆ ಅಸೂಯೆಯೂ ಕಲಹವೂ ಎಂದೂ ತಪ್ಪುವುದಿಲ್ಲ. ಆದ ಕಾರಣದಿಂದ ಇಲ್ಲಿಗೆ ಅರವತ್ತುಯೋಜನ ದೂರದಲ್ಲಿ ಇಂದ್ರಪ್ರಸ್ಥವೆಂಬ ಪಟ್ಟಣವಿದೆ. ಅಲ್ಲಿಗೆ ಹೋಗಿ ಸುಖವಾಗಿ ರಾಜ್ಯವಾಳುತ್ತಿರಿ ಎಂದನು. ಹಾಗೆಯೇ ಮಾಡುತ್ತೇವೆ ಎಂದು ಪಾಂಡವರು ಸಮಸ್ತ ಪರಿವಾರ ಸಹಿತರಾಗಿ- ೯. ಜೊತೆಯಲ್ಲಿ ಬರುತ್ತಿದ್ದ ಭಯಂಕರವಾದ ಆನೆ, ಕುದುರೆ, ವೇಶ್ಯೆಯರು, ವಿಶೇಷ ಬೆಲೆಯುಳ್ಳ ರತ್ನ ಇವೆಲ್ಲವೂ ಜೊತೆಯಲ್ಲಿ ಪ್ರಕಾಶಿಸುತ್ತಿರಲು ಆ ಪಾಂಡವರು ದೇವದಾನವರಿಂದಲೂ ಶ್ರೀಕೃಷ್ಣನಿಂದಲೂ ಲಕ್ಷ್ಮಿ, ಐರಾವತ, ಉಚ್ಚೆ ಶ್ರವಸ್ಸು, ಅಪ್ಸರಸ್ತ್ರೀಯರು, ಚಿಂತಾಮಣಿ ಮೊದಲಾದವುಗಳು ಸೂರೆಯಾಗುವುದಕ್ಕೆ ಮೊದಲಿದ್ದ ಸಮುದ್ರದ ಹಾಗೆ ಸಂಪೂರ್ಣವಾದ ಐಶ್ವರ್ಯದಿಂದ ಬಂದು

ಪರದರ ಪಾರ್ವರ ಸೂಳೆಯರ ಮನೆಗಳವು ಧನದನ ಮನೆಯುಮನೇೞಪ ಮನೆಗಳವು ಪೊೞಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ ದಿವಿಜೇಂದ್ರ ವಿಳಾಸದೊಳಿಂತು ಕೂಡಿ

ಪರಿತಂದಾಗಳ್ ಪಿರಿದೊಸಗೆವೆರಸಿ ಪುರಕಾಂತೆಯರಾದದಿಂದೆ ಪರಸಿ
ಸೂಸುವ ಶೇಷಾಕ್ಷತಮಂ ಸಮಂತು ಪಿರಿದುಂ ಮನ ಸಂತಸದಿಂದಮಾಂತು
ಕರುಮಾಡಮನಾದರದಿಂದಮೇಱ ಕೆಲದೊಳ್ಮಾಡಂಗಳನಱದು ತೋಱ
ಮಣಿ ಕನಕ ರಜತ ವಸ್ತುಗಳನಿತ್ತು ಬೇಡಿದ ನಾಡುಗಳನವಯವದಿಂದಮಿತ್ತು
ಕರಿ ತುರಗ ಬಲಂಗಳ್ ಪೆರ್ಚುವಂತು ಮಲೆಯುಂ ಮಂಡಲಮುಂ ಬೆರ್ಚುವಂತು
ಕೊಂಡಾಡುವ ನಾಲ್ವರುಮನುಜರೊಳಗೆ ನೆಗೞ್ದರಿಗನ ತೇಜಮೆ ತೊಳಗಿ ಬೆಳಗೆ
ನೆಲನಂ ಪ್ರತಿಪಾಲಿಸಿ ಧರ್ಮಸೂನು ಸೂಖಮಿರ್ದಂ ರಿಪುಬಳ ತಿಮಿರಭಾನು|| ೧೦

ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದುಷ್ಟ್ರಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗ ನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು-

ಮ|| ಸ್ರ|| ಸೆಣಸುಳ್ಳುದ್ವ ತ್ತರಂ ತಳ್ತಿಱಯದೆ ಚತುರಂಭೋ ಪರ್ಯಂತಮಂ ಧಾ ರಿಣಿಯಂ ತಾಂ ಪೋಗಿ ಬಾಯ್ಕೇಳಿಸದೆ ಮುನಿಜನಕ್ಕಿಷ್ಟಿ ವಿಘ್ನಂಗಳಂ ದಾ|

ರುಣ ದೈತ್ಯರ್ ಮಾಡೆ ನೀಡಿಲ್ಲದೆ ಚಲದಾಟಂದು ಕೊಂದಿಕ್ಕದೊರ್ವಂ
ಗುಣಮುಟೆಂದುಂಡು ಪಟ್ಟರ್ಪನನಣಮೆ ನಿರುದ್ಯೋಗಿಯಂ ಭೂಪನೆಂಬರ್|| ೧೧

ವ|| ಎಂದು ವಿಜಿರ್ಗೀಷುವೃತ್ತೋದ್ಯುಕ್ತನಾಗಲ್ ಬಗೆದು-

ಧರ್ಮರಾಯನು ಇಂದ್ರಪ್ರಸ್ಥಪುರವನ್ನು ಸೇರಿದನು. ೧೦. ಆ ಪಟ್ಟಣದ ತೋಟಗಳು ದಟ್ಟವಾದ ಮಲಯಮಾರುತದಿಂದ ಅಲುಗಾಡಿಸಲ್ಪಟ್ಟು ಸಾಂದ್ರವಾದ ಪುಷ್ಪರಾಶಿಯು ಸುಗಂಧವನ್ನು ಬೀರುತ್ತಿತ್ತು. ಸೊಗಸಾಗಿ ಕಾಣುವ ಸಣ್ಣ ಹೀಚುಗಳು ಒಪ್ಪಿ ತೋರುತ್ತಿದ್ದುವು, ಉಪ್ಪಿನ ಸಮುದ್ರವೇ ಸುತ್ತುವರಿದಿದೆಯೋ ಎಂಬಂತಿದ್ದ ಕಂದಕಗಳು ಸುತ್ತಿ ಪ್ರಕಾಶಿಸುತ್ತಿರಲು ಕೋಟೆಯ ಸೌಂದರ್ಯವು ಹೊಗಳುವುದಕ್ಕೆ ಅಸಾಧ್ಯವೆನಿಸಿತ್ತು, ಆಕಾಶದವರೆಗೆ ಮೇಲಕ್ಕೆದ್ದು ಅಲುಗಾಡುತ್ತಿರುವ ಬಾವುಟಗಳ ಸಾಲು ಸ್ವರ್ಗದವರೆಗೂ ಹೋಗಿದ್ದುವು. ಸುತ್ತುವರಿದಿರುವ ಕೋಟೆಯ ಗೋಡೆಗಳೊಳಗೆ ರತ್ನಖಚಿತವಾದ ಅರಮನೆಗಳ ಸಮೂಹಗಳು ತೊಳಗಿ ಬೆಳಗುತ್ತಿದ್ದುವು, ರಸಯುಕ್ತ ಬಾವಿಗಳು ಪ್ರತಿಮನೆಯಿಂದಲೂ ಬೇರೆ ಬೇರೆ ಕೆಂಪುರತ್ನಗಳ ಧೂಳಿನ ಗಣಿಯಿಂದ ಕೂಡಿ ತೋರುತ್ತಿದ್ದುವು. ಕಲ್ಪವೃಕ್ಷದ ನೆರಳಿನಲ್ಲಿ ಕಾಮಧೇನುವು ಯಾವ ಅಲೆತವೂ ಇಲ್ಲದೆ ಸುಖವಾಗಿದ್ದಿತು. ವ್ಯಾಪಾರಿಗಳ, ಬ್ರಾಹ್ಮಣರ, ವೇಶ್ಯಾಜನರ ಮನೆಗಳು ಕುಬೇರನ ಮನೆಯನ್ನು ತಿರಸ್ಕರಿಸುತ್ತಿದ್ದುವು. ಆ ಪಟ್ಟಣದ ಬೆಡಗನ್ನು ವಿಶೇಷವಾಗಿ ಮೆಚ್ಚಿ ದೇವೇಂದ್ರನ ವೈಭವದಿಂದ ಕೂಡಿ ಪಾಂಡವರು ನಡೆದುಬಂದಾಗ ಪಟ್ಟಣದ ಸ್ತ್ರೀಜನರು ವಿಶೇಷಸಂತೋಷದಿಂದ ಕೂಡಿ ಆದರದಿಂದ ಹರಸಿದರು. ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ಸಂಪೂರ್ಣವಾಗಿ ಮನಸ್ಸಂತೋಷದಿಂದ ಸ್ವೀಕರಿಸಿ ಉಪ್ಪರಿಗೆಯನ್ನು ಆದರದಿಂದ ಹತ್ತಿ ಸುಖವಾಗಿನೆಲಸಿದರು. ಪಕ್ಕದಲ್ಲಿದ್ದ ಮಾಡಗಳನ್ನು ಪರಿಚಯಮಾಡಿಕೊಂಡರು. ಅರ್ಥಿಗಳು ಬೇಡಿದ ಚಿನ್ನ, ಬೆಳ್ಳಿ, ರತ್ನಖಚಿತವಾದ ವಸ್ತುಗಳನ್ನೂ ರಾಜ್ಯಗಳನ್ನೂ ಶ್ರಮವಿಲ್ಲದೆ ದಾನಮಾಡಿದರು. ಆನೆ, ಕುದುರೆ, ಕಾಲಾಳಿನ ಬಲಗಳನ್ನೂ ಹೆಚ್ಚಿಸಿಕೊಂಡರು. ಬೆಟ್ಟಗುಡ್ಡಗಳೂ ಸಾಮಂತಮಂಡಲವೂ ಹೆದರುವಂತೆ ಸ್ತೋತ್ರಮಾಡಲ್ಪಟ್ಟರು. ನಾಲ್ಕು ಜನರಲ್ಲಿ ಅರ್ಜುನನ ತೇಜಸ್ಸೇ ತೊಳಗಿ ಬೆಳಗುತ್ತಿರಲು ಶತ್ರುಸೈನ್ಯವೆಂಬ ಕತ್ತಲಿಗೆ ಸೂರ್ಯನೋಪಾದಿಯಲ್ಲಿದ್ದ ಧರ್ಮರಾಯನು ರಾಜ್ಯವನ್ನು ಸುಖವಾಗಿ ಪರಿಪಾಲಿಸುತ್ತಿದ್ದನು. ವ|| ಶತ್ರುಗಳೇ ಹುಟ್ಟಿರದ ಧರ್ಮರಾಯನು ಶತ್ರುಸೈನ್ಯವನ್ನು ನಾಶಪಡಿಸುವ ಕತ್ತಿಯೆಂಬ ಹಲ್ಲಿನಿಂದ ಭಯಂಕರವಾದ ಸರ್ಪದಂತಿರುವ, ಸಮಸ್ತಭೂಮಿಗೂ ಆಶ್ರಯವಾಗಿರುವ ಅರಿಕೇಸರಿಯ ಬಾಹುಬಲದ ಆಶ್ರಯದಿಂದ ರಾಜ್ಯಭಾರಮಾಡುತ್ತಿರಲು ವಿಕ್ರಾಂತತುಂಗನಾದ ಅರ್ಜುನನು ಒಂದೇ ಸ್ಥಳದಲ್ಲಿರುವ ಸ್ಥಿತಿಗೆ ಜುಗುಪ್ಸೆಪಟ್ಟು ಜೈತ್ರಯಾತ್ರೆಯನ್ನು ಮಾಡಲು ಯೋಚಿಸಿದನು. ೧೧. ಅಸೂಯೆಯಿಂದ ಕೂಡಿ ದಾರಿತಪ್ಪಿ ನಡೆಯುವವರನ್ನು ಸಂಸಿ ಕತ್ತರಿಸದೆ ನಾಲ್ಕು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ತನ್ನ ಆಜ್ಞಾನವನ್ನಾಗಿ ಮಾಡಿಕೊಳ್ಳದೆ ಋಷಿಗಳ ಯಜ್ಞಕ್ಕೆ ವಿಘ್ನಮಾಡುತ್ತಿರುವ ದುಷ್ಟ ರಾಕ್ಷಸರನ್ನು ಸ್ವಲ್ಪವೂ ಸಾವಕಾಶವಿಲ್ಲದೆ ಪ್ರತಿಭಟಿಸಿ ಕೊಂದಿಕ್ಕದೆ ತನ್ನಲ್ಲಿ ಗುಣವುಂಟೆಂದು ಹೇಳುತ್ತ ಊಟಮಾಡಿ ಮಲಗಿರುವ ಒಬ್ಬ ನಿರುದ್ಯೋಗಿಯನ್ನು ರಾಜನೆನ್ನುತ್ತಾರೆಯೇ? ವ|| ಎಂದು ಯೋಚಿಸಿ ಜೈತ್ರಯಾತ್ರೆಗೆ

ಚಂ|| ಅಱಪಿದೊಡೆನ್ನ ಪೋಗನಿನಿಯಳ್ಗೆ ಮನಂ ಮಱುಕಕ್ಕೆ ನೀಳ್ದ ಕ ಣ್ಣೊದುಗುವಶ್ರುವಾರಿಗೆ ತೊದಳ್ನುಡಿ ಲಲ್ಲೆಗೆ ಪಕ್ಕುಗೊಟ್ಟು ಕಾ|
ಲ್ಗೆಱಗಿರೆ ಪೋಗು ಕೆಟ್ಟಪುದು ಮೋಹಮಯಂ ನಿಗಳಂ ಕಳತ್ರಮೆಂ ದಱಪದೆ ನಟ್ಟಿರುಳ್ ಮದು ಸಾರ್ಚಿದ ನಲ್ಲಳ ತಳ್ತ ತೋಳ್ಗಳಂ|| ೧೨

ವ|| ಮೆಲ್ಲಮೆಲ್ಲನೆ ಪತ್ತುವಿಡಿಸಿ ತನ್ನ ತೊಟ್ಟ ದಿವ್ಯಾಭರಣಂಗಳೆಲ್ಲಮಂ ಕಳೆದು ದಿವ್ಯಶರಗಳಂ ಬಿಗಿದುಕೊಂಡು ದಿವ್ಯಚಾಪಮಂ ಪಿಡಿದು ಪ್ರಥಮ ಚಳಿತ ದಕ್ಷಿಣ ಚರಣನಾಗಿನಿಜನಿವಾಸದಿಂ ಪೊಱಮಟ್ಟು ಖಾಂಡವಪ್ರಸ್ಥದಿಂದುತ್ತರಾಭಿಮುಖನಾಗಿ ಕಾಮ್ಯಕವನದೊಳಗನೆ ನೀಲಪರ್ವತದ ಮೇಗನೆ ಪೋಗಿ-

ಚಂ|| ಸಗರರ ಮೇಲೆ ಗಂಗೆಯನನಾಕುಲದಿಂ ತರಲಾ ಭಗೀರಥಂ
ನೆಗೞೆತಪೋನಿಯೋಗದೊಳವಂಗಮರಾಪಗೆ ಮೆಚ್ಚಿ ಪಾಯ್ವುದುಂ|
ಗಗನದಿನಂಧಕ ದ್ವಿಷ ಜಟಾಟವಿಯೊಳ್ ಬೞಕಾದ ಶೈಲದೊಳ್
ಸೊಗಯಿಸೆ ಪಾಯ್ದುದಿಂತಿದುವೆ ಬಂಧುರ ಕೂಟ ಕುಳಂ ಹಿಮಾಚಳಂ|| ೧೩

ಮ|| ಸ್ರ|| ವಿಲಸತ್ಕಲ್ಲೋಲ ನಾದಂ ನೆಗೞರೆ ನಿಜ ಕೂಟಾಗ್ರದೊಳ್ ಪಾಯ್ವ ಗಂಗಾ
ಜಲದಿಂ ಮೂರ್ಧಾಭಿಷೇಕೋನ್ನತಿ ನಿಲೆ ಚಮರೀ ಲೋಲ ಲಾಂಗೂಲಮಾಲಾ|
ವಲಿ ವಿಕ್ಷೇಪಂಗಳಿಂ ತಚ್ಚಮರರುಹ ಮಹಾಶೋಭೆ ಕೈಗಣ್ಮೆ ವಿಶ್ವಾ
ಚಲ ಚಕ್ರೇಶತ್ವಮುಂ ತಾಳ್ದಿದುದಖಿಳ ಧರಾರಮ್ಯಹೈಮಾಚಳೇ ದ್ರಂ|| ೧೪

ವ|| ಎಂದು ಮೆಚ್ಚಿ-

ಕಂ|| ಚಾರು ವಿವಿಧಾಗ್ನಿಕಾರ್ಯ
ಪ್ರಾರಂಭ ಮಹಾದ್ವಿಜನ್ಮ ಘೋಷದಿನಂಹೋ|
ದೂರಮುಮವನಿತವಾಳಂ
ಕಾರಂ ಸಂಸಾರ ಸಾರ ಗಂಗಾದ್ವಾರಂ|| ೧೫

ವ|| ಎನೆ ಸೊಗಯಿಸುವ ಗಂಗಾದ್ವಾರದೊಳ್ ಮುನಿಜನಂಗಳ ಬೇಳ್ವೆಗಳ್ಗುಪದ್ರವಂಗೆಯ್ವ ನಿಶಾಟಕೋಟಿಯಂ ನಿಶಿತ ಶರಕೋಟಿಯಿಂದಮುಚ್ಚಾಟಿಸಿ ಕೆಲವು ದಿವಸಮಿರ್ದಲ್ಲಿ ಪಡೆಮೆಚ್ಚೆ ಗಂಡನ ಗಂಡಗಾಡಿಯಂ ಕಂಡು ಫಣೀಂದ್ರನ ಕನ್ನೆ ಮದನಲತೆಯೆಂಬ ನಾಗಕನ್ನೆ ಕಣ್ಬೇಟಂಗೊಂಡು ತನ್ನ ಲೋಕಕ್ಕೊಡಗೊಂಡು ಪೋಗಲ್-

ಹೊರಡಬೇಕೆಂದು ನಿಶ್ಚಯಿಸಿದನು. ೧೨. ತನ್ನ ಜೈತ್ರಯಾತ್ರಾಪ್ರಯಾಣ ವಿಷಯವನ್ನು ಪ್ರಿಯಳಾದ ದ್ರೌಪದಿಗೆ ತಿಳಿಸಿದರೆ ಆ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಅವಳ ಮನಸ್ಸಿನ ದುಖದಿಂದ ಕೂಡಿದ ಕಣ್ಣೀರಿಗೂ ತೊದಳ್ನುಡಿಯ ಪ್ರಿಯವಾರ್ತೆಗೂ ಮನಸೋತು, ಅವಳು ನನ್ನ ಕಾಲಿಗೆರಗಿದರೆ ನನ್ನ ಪ್ರಯಾಣಕ್ಕೆ ವಿಘ್ನವುಂಟಾಗುತ್ತದೆ. ಹೆಂಡತಿಯು ಮೋಹಮಯವಾದ ಸರಪಣಿಯೇ ಸರಿ ಎಂದು ಅವಳಿಗೆ ತಿಳಿಸದೆಯೇ ನಡುರಾತ್ರಿಯಲ್ಲಿ ಮೈಮರೆತು ಮಲಗಿ ತನ್ನ ಸಮೀಪಕ್ಕೆ ನೀಡಿದ್ದ ಅವಳ ತೋಳುಗಳನ್ನು ವ|| ನಿಧಾನವಾಗಿ ಬಿಡಿಸಿಕೊಂಡು ತಾನು ಧರಿಸಿದ್ದ ಉತ್ತಮ ಒಡವೆಗಳನ್ನೆಲ್ಲ ಕಳೆದಿಟ್ಟು ಶ್ರೇಷ್ಠವಾದ ಬತ್ತಳಿಕೆಯನ್ನು ಬಿಗಿದುಕೊಂಡು ಉತ್ತಮವಾದ ಬಿಲ್ಲನ್ನು ಹಿಡಿದು ಬಲಗಾಲನ್ನು ಮುಂದಿಟ್ಟು ತನ್ನ ಮನೆಯಿಂದ ಹೊರಟು ಖಾಂಡವಪ್ರಸ್ಥದಿಂದ ಉತ್ತರದ ಕಡೆಗೆ ಹೊರಟು ಕಾಮ್ಯಕವನದೊಳಗಿನಿಂದಲೇ ನೀಲಪರ್ವತದ ಮೇಲಕ್ಕೆ ಬಂದನು. ೧೩. ತನ್ನ ಪಿತೃಗಳಾದ ಸಗರರ (ಭಸ್ಮರಾಶಿಯ) ಮೇಲೆ ಗಂಗೆಯನ್ನು ತರಲು ಆ ಭಗೀರಥನು ತಪಸ್ಸಿನಲ್ಲಿ ನಿರತನಾಗಲು ಅವನ ತಪಸ್ಸಿಗೆ ಮೆಚ್ಚಿ ದೇವನದಿಯಾದ ಗಂಗೆಯು ಮೊದಲು ಅಂಧಕಾಸುರನ ಶತ್ರುವಾದ ಶಿವನ ಜಟೆಯೆಂಬ ಕಾಡಿನಲ್ಲಿಯೂ ಬಳಿಕ ಅಡ್ಡವಾದ ಪರ್ವತದಲ್ಲಿಯೂ ಸೊಗಸಿನಿಂದ ಹರಿದಳು. ಅನೇಕ ಶಿಖರಗಳ ಸಮೂಹದಿಂದ ಮನೋಹರವಾಗಿರುವ ಆ ಹಿಮಾಚಲ ಪರ್ವತವೇ ಇದು. ೧೪. ಪ್ರಕಾಶಮಾನವಾದ ಅಲೆಗಳ ಧ್ವನಿಯು ಉಂಟಾಗುತ್ತಿರಲು ತನ್ನ ಶಿಖರಗಳ ತುದಿಯಲ್ಲಿ ಹರಿಯುವ ಗಂಗೋದಕದಿಂದ ಪಟ್ಟಾಭಿಷೇಕದ ಮಾನ್ಯತೆಯುಂಟಾಗಲು ಚಮರೀಮೃಗಗಳ ಮನೋಹರವಾದ ಬಾಲದ ತುದಿಯ ಕೂದಲುಗಳ ಸಮೂಹದ ಬೀಸುವಿಕೆಯಿಂದ ಚಾಮರಗಳನ್ನು ಬೀಸುವ ವೈಭವವು ಅಕವಾಗುತ್ತಿರಲು ಅಖಂಡ ಪ್ರಪಂಚದಲ್ಲಿರುವ ಎಲ್ಲ ಬೆಟ್ಟಗಳ ಚಕ್ರವರ್ತಿ ಪದವಿಯನ್ನು ಶ್ರೇಷ್ಠವಾದ ಈ ಹಿಮಾಚಲ ಪರ್ವತವು ತಾಳಿತು. ೧೫. ಗಂಗಾದ್ವಾರವೆಂಬ ಪುಣ್ಯಕ್ಷೇತ್ರವು ಮನೋಹರವೂ ನಾನಾ ವಿಧವೂ ಆದ ಮಹಾಬ್ರಾಹ್ಮಣರ ವೇದಘೋಷದಿಂದ ಪಾಪದೂರವೂ ಭೂಮಂಡಲಕ್ಕೆ ಅಲಂಕಾರ ಪ್ರಾಯವೂ ಸಂಸಾರಸಾರವೂ ಆಯಿತು. ವ|| ಇಂತಹ ಸೊಗಸಾಗಿರುವ ಗಂಗಾದ್ವಾರದಲ್ಲಿ ತಪಸ್ವಿಗಳ ಯಜ್ಞಕಾರ್ಯಕ್ಕೆ ಹಿಂಸೆಯನ್ನು ಮಾಡುವ ರಾಕ್ಷಸ ಸಮೂಹವನ್ನು ಹರಿತವಾದ ಬಾಣಗಳ ರಾಶಿಯಿಂದ ಹೊಡೆದೋಡಿಸುತ್ತ ಅಲ್ಲಿ ಕೆಲವು ದಿವಸವಿದ್ದನು. ಅಲ್ಲಿಯೇ

ಉ|| ಆಗಳುಮಿಂದು ಸೂರ್ಯರಣಮಿಲ್ಲದೆ ಕೞ್ತಲೆಯೆಂಬುದಿಲ್ಲ ತ
ದ್ಭೋಗಿ ಫಣಾಮಣಿ ದ್ಯುತಿಯೆ ಕೞ್ತಲೆಯಂ ತಲೆದೋಱಲೀಯದಾ||
ನಾಗರ ನಾಗಕನ್ನೆಯರ ರೂಪುಗಳಿಟ್ಟಳಮಾಗೆ ಬೋಗಿಗಳ್
ಬೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯು ಭೋಗನಾಯಕರ್|| ೧೬

ವ|| ಎಂದು ನಾಗಕನ್ನೆ ನಾಗಲೋಕದ ವಿಳಾಸಂಗಳಂ ತೋಱುತ್ತುಂ ತನ್ನ ಕೆೞಗಣ ನಾಗವಿಮಾನಕ್ಕೆ ವಂದು ನಾಗಕನ್ನೆಯರುಂ ತಾನುಂ ಮನಂಬುಗಿಸುವಂತೆ ಮಜ್ಜನಂಬುಗಿಸಿ ರಸರಸಾಯನಂಗಳನೂಡುವಂತೆ ದಿವ್ಯಾಹಾರಂಗಳನೂಡಿ-

ಉ|| ನಾಗವಿಭೂಷಣಪ್ರತತಿ ನಾಗರಖಂಡಮಪೂರ್ವಮಪ್ಪ ಪು
ನ್ನಾಗದ ಬಾಸಿಗಂ ಬಗೆದ ಬಣ್ಣದ ಪುಟ್ಟಿಗೆ ನಾಗಜಾಲಮೆಂ|
ದಾಗಡೆ ನಾಗಲೋಕ ವಿಭವಂಗಳೊಳಾೞಸಿ ನಾಗಶಯ್ಯೆಯೊಳ್
ನಾಗಿಣಿ ನಾಗಬಂಧದೊಳ್ ತಳ್ತು ಗುಣಾರ್ಣವನಂ ಮರುಳ್ಚಿದಳ್|| ೧೭

ವ|| ಅಂತಾಕೆಯ ಮುದ್ದುವೆರಸಿದ ತೊದಳ್ನುಡಿಗಂ ಪೂಮಾಲೆವೆರಸಿದ ಬೞಲ್ಮುಡಿಗಮಲಂಪುವೆರಸಿದ ನೋಟಕ್ಕಮಿಂಬುವೆರಸಿದ ಕೂಟಕ್ಕಂ ಪುರುಡುವೆರಸಿದ ಕೊಂಕಿಂಗಂ ಕದ್ದವಣಿ(?) ವೆರಸಿದ ಸೋಂಕಿಂಗಂ ಗಾಡಿವೆರಸಿದ ಹಾವಕ್ಕಂ ನಾಣ್ವೆರಸಿದ ಭಾವಕ್ಕಮೊಲ್ದು ಮೊಱಲ್ದುಮಿರೆಯಿರೆ ದೇವೇಂದ್ರಂಗಮಿಂದ್ರಾಣಿಗಂ ಜಯಂನೆಂತಂತೆ-

ಕಂ|| ಅಂತಾ ಫಣಿಕಾಂತೆಗಮರಿ
ಕಾಂತಾಳಿಕ ಫಳಕ ತಿಳಕ ಹರನೆನಿಪರಿಗಂ||
ಗಂ ತನಯನಕ ತೇಜೋ
ವಂತನಿಳಾವಂತನಿಂದುಮಂಡಳಕಾಂತಂ|| ೧೮

ವ|| ಅಂತು ಪುಟ್ಟುವುದುಮಾತನ ಬಾಲಕ್ರೀಡೆಯುಮಾಕೆಯ ಸುರತಕ್ರೀಡೆಯುಂ ತನ್ನ ನೋಟಕ್ಕಂ ಕೂಟಕ್ಕಂ ಸೊಗೆಯಿಸೆ ಕೆಲವು ದಿವಸಮಿರ್ದಲ್ಲಿಂ ಪೊಱಮಟ್ಟು ಬಂದು ಹಿಮವದ್ಗಿರೀಂದ್ರ ತಟ ನಿಕಟವರ್ತಿಗಳಪ್ಪಗಸ್ತ್ಯವಟಮುಂ ವಸಿಷ್ಠಪರ್ವತಂಗಳೆಂಬ ತೀಥಂಂಗಳೊಳೋಲಾಡುತ್ತುಮಾ ದಿಶಾಭಾಗಮನಾತ್ಮೀಯ ಶಾಸನಾಯತ್ತಂ ಮಾಡುತ್ತುಂ ಬಂದಿಂದುಬಿಂಬವಿಗಳದಮೃತಬಿಂದು ದುರ್ದಿನಾರ್ದ್ರ ಚಂದನಾನ್ವಿತಮುಮಶಿಶಿರ ಕರ ರಥ ತುರಗ ಖುರ ಶಿಖರ ನಿಖಂಡಿತ ಲವಂಗ ಪಲ್ಲವಮುಮೈರಾವತ ಕರಲೂನ ಸಲ್ಲಕೀ ಶಬಳ

ಪಡೆಮೆಚ್ಚೆಗಂಡನಾದ ಅರ್ಜುನನ ಸೌಂದರ್ಯವನ್ನು ನಾಗಕನ್ಯೆಯಾದ ಮದನಲತೆಯೆಂಬುವಳು ನೋಡಿ ಮೋಹಗೊಂಡು ಅವನನ್ನು ತನ್ನ ನಾಗಲೋಕಕ್ಕೆ ಕೊಂಡುಹೋದಳು. ೧೬. ಚಂದ್ರಸೂರ್ಯರು ಇಲ್ಲದಿದ್ದರೂ ಅಲ್ಲಿ ಕತ್ತಲೆಯೆಂಬುದೇ ಇಲ್ಲ. ಆ ಹಾವುಗಳ ಹೆಡೆಗಳಲ್ಲಿರುವ ರತ್ನಕಾಂತಿಯೇ ಕತ್ತಲೆಯು ತಲೆಹಾಕುವುದಕ್ಕೆ ಅವಕಾಶಕೊಡುವುದಿಲ್ಲ. ಆ ನಾಗರ ಮತ್ತು ನಾಗಕನ್ನಿಕೆಯರ ರೂಪಗಳು ಮನೋಹರವಾಗಿವೆ. ಆದುದರಿಂದಲೇ ಸರ್ಪಗಳು ಭೋಗಿಗಳು ಎನ್ನಿಸಿಕೊಂಡಿವೆ. ಭೋಗಿಗಳೆಂದರೆ ಭೋಗಪಾಲಕರೇ ವ|| ಎಂದು ಆ ನಾಗಕನ್ನಿಕೆ ಆ ನಾಗಲೋಕದ ವೈಭವಗಳನ್ನು ತೋರಿಸುತ್ತ ಕೆಳಭಾಗದಲ್ಲಿದ್ದ ತನ್ನ ಅಂತಪುರಕ್ಕೆ ಬಂದು ತಾನೂ ಆ ನಾಗಕನ್ನಿಕೆಯರೂ ತಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಅವನಿಗೆ ಸ್ನಾನಮಾಡಿಸಿ ರಸಯುಕ್ತವಾದ ರಸಾಯನಗಳನ್ನು ತಿನ್ನಿಸುವಂತೆ ದಿವ್ಯಾಹಾರಗಳನ್ನು ಊಡಿಸಿದರು. ೧೭. ಆ ನಾಗಕನ್ನಿಕೆಯು ಅರ್ಜುನನನ್ನು ನಾಗರ ಒಡವೆಗಳ ಸಮೂಹ; ನಾಗರ ಖಂಡವೆಂಬ ಪ್ರದೇಶ, ಅಪೂರ್ವವಾದ ಪುನ್ನಾಗ ಪುಷ್ಪಗಳ ಹಾರ, ಬಗೆಬಗೆಯ ವಸ್ತ್ರಗಳು, ನಾಗದವಲ್ಲಿ (ತಾಂಬೂಲ) ಮೊದಲಾದ ನಾಗಲೋಕದ ವೈಭವಗಳಲ್ಲಿ ಮುಳುಗಿಸಿ ನಾಗಶಯ್ಯೆಯಲ್ಲಿ ನಾಗಬಂಧವೆಂಬ ರತಿಬಂಧದಲ್ಲಿ ಸೇರಿಕೊಂಡು ಮರುಳು ಮಾಡಿದಳು. ವ|| ಆಕೆಯ ಮುದ್ದಿನಿಂದ ಕೂಡಿದ ಲಲ್ಲೆಮಾತಿಗೂ (ತೊದಳ್ನುಡಿ) ಹೂಮಾಲೆಯಿಂದ ಕೂಡಿ ಜೋಲಾಡುತ್ತಿರುವ ತುರುಬಿಗೂ ಪ್ರೀತಿಯಿಂದ ಕೂಡಿದ ನೋಟಕ್ಕೂ ಸುಖಮಯವಾದ ಕೂಡುವಿಕೆಗೂ ಸ್ಪರ್ಧೆಯಿಂದ ಕೂಡಿದ ವಕ್ರತೆಗೂ ಬಿಗಿದಪ್ಪಿದ ಆಲಿಂಗನಕ್ಕೂ ಸೌಂದರ್ಯದಿಂದ ಕೂಡಿದ ಶೃಂಗಾರ ಚೇಷ್ಟೆಗೂ ನಾಯಿಕೆಯಿಂದ ಕೂಡಿದ ಭಾವಗಳಿಗೂ ಒಲಿದು ಪ್ರೀತಿಸಿರಲು ದೇವೇಂದ್ರನಿಗೂ ಶಚಿದೇವಿಗೂ ಜಯಂತನು ಹುಟ್ಟುವ ಹಾಗೆ ೧೮. ಆ ಕನ್ನಿಕೆಗೂ ಶತ್ರುಸ್ತ್ರೀಯರ ಮುಖವೆಂಬ ಹಲಗೆಯಲ್ಲಿರುವ ತಿಲಕವನ್ನು ನಾಶಪಡಿಸುವವನೆಂಬ (ಕೀರ್ತಿಯನ್ನುಳ್ಳ) ಅರಿಕೇಸರಿಗೂ ಅಕ ತೇಜಸ್ಸಿನಿಂದ ಕೂಡಿದವನೂ ಚಂದ್ರಮಂಡಳದ ಕಾಂತಿಯುಳ್ಳವನೂ ಆದ ಇಳಾವಂತನೆಂಬ ಮಗನು ಹುಟ್ಟಿದನು. ವ|| ಆತನ ಬಾಲಕ್ರೀಡೆಯು ತನ್ನ ನೋಟಕ್ಕೂ ಅವಳ ಸುರತಕ್ರೀಡೆಯು ತನ್ನ ಕೂಟಕ್ಕೂ ಸೊಗಯಿಸುತ್ತಿರಲು ಕೆಲವು ದಿವಸವಿದ್ದು ಅಲ್ಲಿಂದ ಹೊರಟುಬಂದು ಶ್ರೇಷ್ಠವಾದ ಹಿಮಾಲಯ ಪರ್ವತದ ತಪ್ಪಲಿನ ಸಮೀಪದಲ್ಲಿರುವ ಅಗಸ್ತ್ಯವಟ ಮತ್ತು ವಸಿಷ್ಠಪರ್ವತವೆಂಬ

ಮುಮಪ್ಪುದಯಗಿರಿಯಿಂ ಸೊಗಯಿಸುವ ಮೂಡಣ ದೆಸೆಗೆ ವಂದು ನಂದೆಯ ಪರನಂದೆಯಶ್ವಿನಿ ಮಹಾನಂದೆಯೆಂಬ ತೀರ್ಥಜಲಂಗಳೊಳೋಲಾಡುತ್ತುಮುದ್ವೃತ್ತ ರಿಪುನೃಪತಿಗಳನೇಸಾಡುತ್ತುಮಲ್ಲಿಂ ತಳರ್ದು ಚಪಳ ಕಪಿಬಳ ವಿಲುಪ್ತ ವಿಗಳಿತ ಲತಾಭವನ ಮುಮಕ ಬಳ ನಳ ಕರತಳಗಳಿತ ಕುಳಶೈಳ ಸಹಸ್ರ ಸಂತಾಸ ಕಳಿತ ಸೇತುಬಂಧುರಮುಮಪ್ಪ ದಕ್ಷಿಣ ಸಮುದ್ರದ ತಡಿವಿಡಿದು ಬಂದು ರಾಮಚಂದ್ರಂ ವಿಹರಿಸಿದೆಡೆಗಳಂ ನೋಡಿ-

ಉ|| ಅಂದಿದು ಸೀತೆಯೊಳ್ ನೆರೆದು ನಿಂದೆಡೆ ತತ್ಖರದೂಷಣರ್ಕಳಂ
ಕೊಂದೆಡೆ ಪೋಗಿ ಪೊಮ್ಮರೆಯನೆಚ್ಚೆಡೆ ತಪ್ಪದಿದಪ್ಪುದೆಂದು ಕಾ|
ಯ್ಪಿಂ ದಶಕಂಠನಂ ತ್ರಿದಶ ಕಂಟಕನಂ ಕೊಲಲೆಂದು ರಾಮನಾ
ದಂದಿನ ಸಾಹಸಂ ಮನದೊಳಾವರಿಸಿತ್ತಳಂಕರಾಮನಾ|| ೧೯

ವ|| ಅಂತು ರಾಮ ಜನ್ಮೋತ್ತತ್ತಿಯೊಳಾದ ತನ್ನಯ ಮುನ್ನಿನ ಸಾಹಸಂಗಳಂ ನೆನೆಯುತ್ತುಂ ಬಂದಗಸ್ತ್ಯತೀರ್ಥಮಂ ಕಂಡು-

ಮ|| ಬಳೆಯಲ್ಕಣ್ಮಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದೊರ್ಮೆ ಮು
ಕ್ಕುಳಿಸಲ್ಕಂಬು ಸಾಲ್ದುದಿಲ್ಲ ಜಗಮಂ ತಿಂದಿರ್ದ ವಾತಾಪಿ ಪೊ|
ಕ್ಕಳುರ್ವಾತ್ಮೋದರ ವಹ್ನಿಯಿಂ ಪೊಱಮಡಲ್ ತಾನಾರ್ತನಿಲ್ಲೞ್ದುದಿ
ಲ್ಲೆಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪೆಂಪಾರ್ಗಗಸ್ತ್ಯಂಬರಂ|| ೨೦

ವ|| ಎಂದಗಸ್ತ್ಯತೀರ್ಥ ಸೌಭದ್ರ ಪೌಳೋಮ ಕಾಂಭೋಜ ಭಾರದ್ವಾಜಮೆಂಬಯ್ದು ತೀಥಂಗಲೊಳ್ ವರ್ಧಮಾನನೆಂಬ ಋಷಿಯ ಶಾಪದೊಳುಗ್ರಗ್ರಾಹ ಸ್ವರೂಪದೊಳಿರ್ದಚ್ಚರಸೆ ಯರುಮಂ ವಿಶಾಪೆಯರ್‌ಮಾಡಿ ಮಳಯಪರ್ವತಮನೆಯ್ದೆವಂದು-

ಚಂ|| ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪೆಂಪುವೆ
ತ್ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟಿ ಪೋ|
ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ
ಯದು ಕುಸುಮಾಸ್ತ್ರನಾಜ್ಞೆ ತವದೆಲ್ಲಿಯುಮಿಲ್ಲಿಯ ನಂದನಂಗಳೊಳ್|| ೨೧

ಪವಿತ್ರಕ್ಷೇತ್ರಗಳಲ್ಲಿ ವಿಹರಿಸಿ ಆ ದಿಗ್ಭಾಗ ಪ್ರದೇಶಗಳನ್ನೆಲ್ಲ ತನ್ನ ಆಜ್ಞಾನುವರ್ತಿಗಳನ್ನಾಗಿ ಮಾಡಿಕೊಂಡನು. ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತದ ಹನಿಗಳೆಂಬ ದುರ್ದುನದಿಂದ ಒದ್ದೆಯಾದ ಶ್ರೀಗಂಧದಿಂದ ಕೂಡಿದುದೂ ಸೂರ್ಯನ ಕುದುರೆಯ ಗೊರಸಿನ ತುದಿಯಿಂದ ಕತ್ತರಿಸಲ್ಪಟ್ಟ ಲವಂಗದ ಬಳ್ಳಿಯ ಚಿಗುರನ್ನುಳ್ಳದ್ದೂ ಐರಾವತವೆಂಬ ಇಂದ್ರನ ಆನೆಯ ಸೊಂಡಲಿನಿಂದ ಮುರಿಯಲ್ಪಟ್ಟ ಆನೆಬೇಲದ ಮರದ ವಿವಿಧ ಬಣ್ಣಗಳಿಂದ ಕೂಡಿದ ಪೂರ್ವದಿಕ್ಕಿಗೆ ಬಂದನು. ನಂದೆ, ಅಪರನಂದೆ, ಅಶ್ವಿನಿ, ಮಹಾನಂದೆಯೆಂಬ ತೀರ್ಥೋದಕಗಳಲ್ಲಿ ವಿಹರಿಸಿ ಪ್ರತಿಭಟಿಸಿದ ರಾಜರುಗಳನ್ನು ಸೋಲಿಸುತ್ತ ಅಲ್ಲಿಂದ ಹೊರಟು ಚಪಳವಾದ ಕಪಿಗಳ ಸಮೂಹದಿಂದ ನಾಶಮಾಡಲ್ಪಟ್ಟ ಬಳ್ಳಿವನೆಗಳಿಂದಲೂ ಅಕ ಬಳವಂತನಾದ ನಳನು ಸಾವಿರಾರು ಕುಲಪರ್ವತಗಳನ್ನು ಸೇರಿಸಿ ನಿರ್ಮಿಸಿದ ಸೇತುವೆಯಿಂದಲೂ ಅತಿ ರಮಣೀಯವಾದ ದಕ್ಷಿಣಸಮುದ್ರದ ತೀರಪ್ರದೇಶವನ್ನು ಅನುಸರಿಸಿ ಬಂದು (ಹಿಂದೆ) ರಾಮಚಂದ್ರನು ವಿಹರಿಸಿದ ಸ್ಧಳಗಳನ್ನು ನೋಡಿ-

೧೯. ಹಿಂದೆ ತ್ರೇತಾಯುಗದಲ್ಲಿ ಸೀತೆಯೊಡನೆ ಸೇರಿ ನಿಂತ ಸ್ಥಳವಿದು, ಆ ಖರದೂಷಣರನ್ನು ಕೊಂದ ಸ್ಥಳವಿದು, ಹೋಗಿ ಚಿನ್ನದ ಜಿಂಕೆಯನ್ನು ಹೊಡೆದ ಸ್ಥಳವಿದು, ಆಗಿರಬೇಕು ಎಂದು ವಿಶೇಷಕೋಪದಿಂದ ದೇವತೆಗಳಿಗೆ ಕಂಟಕನಾಗಿದ್ದ ಆ ಹತ್ತುತಲೆಯ ರಾವಣನನ್ನು ಕೊಲ್ಲಲು ಅವತರಿಸಿದ ರಾಮನ ಅಂದಿನ ಸಾಹಸವು ಅಕಳಂಕರಾಮನಾದ ಅರ್ಜುನನ ಮನಸ್ಸಿನಲ್ಲಿ ಪುನ ಅಂಕುರಿಸಿತು

ವ|| ರಾಮಾವತಾರದಲ್ಲಾದ ಅಂದಿನ (ತನ್ನ ಹಿಂದಿನ) ಸಾಹಸಗಳನ್ನು ನೆನೆಯುತ್ತ ಬಂದು ಅಗಸ್ತ್ಯತೀರ್ಥವನ್ನು ಕಂಡನು. ೨೦. ವಿಂಧ್ಯಪರ್ವತವು ತನ್ನಾಜ್ಞೆಯನ್ನು ಮೀರಿ ಬಳೆಯಲಾಗಲಿಲ್ಲ, ಸಮುದ್ರವು ತನಗೆ ಬಾಯ್ಮುಕ್ಕಳಿಸಲೂ ಸಾಕಾಗಲಿಲ್ಲ. ಜಗತ್ತನ್ನೇ ನುಂಗಿದ ವಾತಾಪಿಯೆಂಬ ರಾಕ್ಷಸನು ಪ್ರವೇಶಮಾಡಿ ಉರಿಯುತ್ತಿದ್ದ ತನ್ನ ಜಠರಾಗ್ನಿಯಿಂದ ಹೊರಟುಬರಲು ಸಮರ್ಥನಾಗಲಿಲ್ಲ. ಭೂಮಿಯು ತನ್ನ ಭಾರಕ್ಕೆ ಮುಳುಗದೆ ಉತ್ತರಕ್ಕೆ ಸರಿಯಿತು ಎಂಬ (ಮಹಿಮೆ) ವೈಭವವು ಅಗಸ್ತ್ಯಋಷಿಗಳಿಗಲ್ಲದೆ ಮತ್ತಾರಿಗುಂಟು ವ|| ಎಂದು ಆಲೋಚಿಸುತ್ತ ಅಗಸ್ತ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜವೆಂಬ ಅಯ್ದು ತೀರ್ಥಗಳಲ್ಲಿ ಸಂಚರಿಸಿ ವರ್ಧಮಾನನೆಂಬ ಋಷಿಯ ಶಾಪದಿಂದ ಭಯಂಕರವಾದ ಮೊಸಳೆಯ ಆಕಾರದಲ್ಲಿದ್ದ ಅಪ್ಸರಸ್ತ್ರೀಯರನ್ನು ಶಾಪ ವಿಮೋಚಿತರನ್ನಾಗಿ ಮಾಡಿ ಮಳಯಪರ್ವತಕ್ಕೆ ಬಂದು ಸೇರಿದನು. ೨೧. ಇದು ಮಲಯಪರ್ವತ, ಶ್ರೀಗಂಧಕ್ಕೆ ಮಲಯಜನೆಂದು ತಂಪಾದ ಗಾಳಿಗೆ ಮಲಯಾನಿಲ ಎಂದೂ ಹೆಸರು ಬಂದುದು ಇಲ್ಲಿ ಹುಟ್ಟಿದುದರಿಂದಲೇ, ವಸಂತಋತುವೂ ಇಲ್ಲಿ ಹುಟ್ಟಿ ಮತ್ತೆಲ್ಲಿಗೂ ಹೋಗುವುದಿಲ್ಲ.

ಮ|| ಇದಱಭ್ರಂಕಷ ಕೂಟ ಕೋಟಿಗಳೊಳಿರ್ದಂಭೋಜ ಷಂಡಂಗಳಂ
ಪುದಿದುಷ್ಣಾಂಶುವಿನೂರ್ದ್ವಗಾಂಶುನಿವಹಂ ಮೆಯ್ಯಿಟ್ಟಲರ್ಚುತ್ತುಮಿ|
ರ್ಪುದು ಮಾದ್ಯದ್ಗಜ ಗಂಡ ಭಿತ್ತಿ ಕರ್ಷಣಪ್ರೋದ್ಭೇದದಿಂ ಸಾರ್ದು ಬಂ
ದಿದಿರೊಳ್ ಕೂಡುವುದಿಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್|| ೨೨

ಮ||ಸ್ರ|| ನೆಗ್ದ ಕರ್ಪೂರ ಕಾಳಾಗರು ಮಳಯ ಮಹೀಜಂಗಳೇಳಾ ಲತಾಳೀ|
ಸ್ಧಗಿತಂಗಳ್ ಕಣ್ಗೆವಂದಿರ್ದುವನಿವನೆ ವಲಂ ಕೊಂಬುಗೊಂಡಂಗಜಂ ಮೆ|
ಲ್ಲಗೆ ಪಾರ್ದಾರ್ದಾಗಳುಂ ಕಿನ್ನರ ಯುವತಿ ಮೃಗೀವ್ರಾತಮಂ ತನ್ನ ನಲ್ಲಂ
ಬುಗಳಿಂದೆಚ್ಚೆಚ್ಚು ಮೆಚ್ಚಂ ಸಲಿಸುವನದಱಂ ರಮ್ಯಮಿಂತೀ ನಗೇಂದ್ರಂ|| ೨೩

ಮ|| ಇದಿರೊಳ್ ನಿಂದೊಡೆ ವಜ್ರಿ ಸೈರಿಸನಿರಲ್ವೇಡೆಮ್ಮೊಳೊಳ್ವೊಕ್ಕು ನಿ
ಲ್ವುದು ನೀನೆಂದು ಕಡಂಗಿ ಕಾಲ್ವಿಡಿವವೋಲ್ ತನ್ನೂರ್ಮಿಗಳ್ ಬಂದುವಂ|
ದಿದಱಂ ಪೋದ ತಪೋಪಳಂ (?) ಗಗನಮಂ ಮಾರ್ಪೊಯ್ಯೆ ಕಣ್ಗೊಪ್ಪಿ ತೋ
ರ್ಪುದಿದುತ್ಪ್ರೇಂಖದಸಂಖ್ಯ ಶಂಖ ಧವಳಂ ಗಂಭೀರ ನೀರಾಕರಂ|| ೨೪

ಚಂ|| ಚಳದನಿಳಾಹತ ಕ್ಷುಭಿತ ಭಂಗುರ ತುಂಗ ತರಂಗ ಮಾಳಿಕಾ
ವಳನ ಸಮುಚ್ಚಳನ್ಮಣಿಗಣಾತ್ತ ಮರೀಚಿ ಲತಾ ಪ್ರತಾನ ಸಂ|
ವಳಯಿತ ವಿದ್ರುಮ ದ್ರುಮ ವಿಳಾಸ ವಿಶೇಷಿತ ಬಾಡವಾನಳಾ
ವಿಳ ಜಳಮಂ ಮನಂ ಬಯಸಿ ನೋಡಿದನರ್ಣವಮಂ ಗುಣಾರ್ಣವಂ|| ೨೫

ವ|| ಅಂತು ನೋಡುತ್ತುಂ ಬಂದು ಮುಂದೊಂದೆಡೆಯೊಳದಭ್ರಾಭ್ರವಿಭ್ರಮ ಭ್ರಾಜಿತೋತ್ತುಂಗಶೈಲಮಂ ಕಂಡು-

ಮ|| ವಿನತಾಪುತ್ರನ ವಜ್ರತುಂಡಹತಿಗಂ ಮೆಯ್ಯಾಂತು ಕಂಡಂಗಳು
ಳ್ಳಿನಮಂಗಂಗಳನೊಡ್ಡಿಯೊಡ್ಡಿ ತನುವಂ ಕೊಟ್ಟಂತು ಜೀಮೂತವಾ|
ಹನನೆಂಬಂಕದ ಚಾಗಿ ನಿಚ್ಚಟಿಕೆಯಿಂದೀ ಶೈಳದೊಳ್ ಶಂಖಚೂ
ಡನನಾದಂದದೆ ಕಾದ ಪೆಂಪೆಸೆಯೆ ನಾಗಾನಂದಮಂ ಮಾಡಿದಂ|| ೨೬

ಇಲ್ಲಿಯ ಕೋಗಿಲೆಯ ಮೂಕತೆಯನ್ನು ಪಡೆಯುವುದಿಲ್ಲ, ಫಲ ಬಿಟ್ಟ ಮಾವು ಎಂದೂ ಮುನಿದುಹೋಗುವುದಿಲ್ಲ. ಇಲ್ಲಿಯ ನಂದನವನಗಳಲ್ಲಿ ಮನ್ಮಥನ ಆಜ್ಞೆ ಎಂದೂ ತಪ್ಪುವುದಿಲ್ಲ. ೨೨. ಇದರ ಅನೇಕ ಆಕಾಶಗಾಮಿಯಾದ ಶಿಖರಗಳ ಮೇಲಿರುವ ತಾವರೆಗಳ ಸಮೂಹವನ್ನು ಸೂರ್ಯನ ಊರ್ಧ್ವಗಾಮಿಯಾದ ಉಷ್ಣ ಕಿರಣಗಳು ಪ್ರವೇಶಿಸಿ ಅರಳಿಸುತ್ತವೆ. ಮದ್ದಾನೆಗಳ ಗಂಡಸ್ಥಳವೆಂಬ ಗೋಡೆಗಳ ಉಜ್ಜುವಿಕೆಯಿಂದ ಮುರಿದು (ಸ್ರವಿಸುತ್ತಿರುವ) ಶ್ರೀಗಂಧದ ರಸವು ಹರಿದುಬಂದು ಇಲ್ಲಿಯ ಅಪರಂಜಿಯ ಬಣ್ಣದ ಪರ್ವತದ ತಪ್ಪಲುಗಳನ್ನು ನಂದಿಸುತ್ತದೆ. ೨೩. ಏಲಕ್ಕಿ ಬಳ್ಳಿಗಳಿಂದ ವ್ಯಾಪ್ತವಾಗಿ ಪ್ರಸಿದ್ಧವಾಗಿರುವ ಇಲ್ಲಿಯ ಕರ್ಪೂರ, ಕರಿ ಅಗಿಲು, ಗಂಧದ ಮರಗಳು ಬಹು ರಮಣೀಯವಾಗಿವೆ. ಇದನ್ನೇ ಅಲ್ಲವೇ ಮನ್ಮಥನು ತನ್ನ ಸಂಕೇತಸ್ಥಳವನ್ನಾಗಿ ಮಾಡಿಕೊಂಡು ಮೃದುವಾಗಿ ನೋಡಿ ಆರ್ಭಟಿಸಿ ಕಿನ್ನರಯುವತಿಯೆಂಬ ಜಿಂಕೆಯ ಸಮೂಹವನ್ನು ಯಾವಾಗಲೂ ತನ್ನ ಉತ್ತಮ ಬಾಣಗಳಿಂದ ಹೊಡೆದು ಅವರ ಇಷ್ಟಾರ್ಥವನ್ನು ಸಲ್ಲಿಸುತ್ತಾನೆ. ಆದುದರಿಂದ ಈ ಪರ್ವತಶ್ರೇಷ್ಠವು ರಮಣೀಯವಾಗಿದೆ. ೨೪. ನೀನು ಎದುರುಗಡೆ ನಿಂತರೆ ಇಂದ್ರನು ಸೈರಿಸುವುದಿಲ್ಲ. ಇಲ್ಲಿರಬೇಡ; ನಮ್ಮೊಳಗೆ ಪ್ರವೇಶ ಮಾಡಿ ನಿಲ್ಲತಕ್ಕದ್ದು ಎಂದು ಉತ್ಸಾಹದಿಂದ ಕಾಲನ್ನು ಹಿಡಿಯುವ ಹಾಗೆ ಸಮುದ್ರದ ಅಲೆಗಳು ಪಕ್ಕದಲ್ಲಿರುವ ಪರ್ವತಗಳ ಬುಡವನ್ನು ಆಶ್ರಯಿಸಿವೆ. ಇಲ್ಲಿಂದ ಹೋದ ತಪೋಪಳವು (?) ಗಮನವನ್ನು ಪ್ರಿತಭಟಿಸಲು ಮೇಲೆ ತೇಲುತ್ತಿರುವ ಅಸಂಖ್ಯಾತವಾದ ಶಂಖಗಳಿಂದ ಬೆಳ್ಳಗಿರುವ ಗಂಭೀರವಾದ ಸಮುದ್ರವು ಕಣ್ಣಿಗೆ ಒಪ್ಪಿ ತೋರಿತು. ೨೫. ಚಲಿಸುತ್ತಿರುವ ಗಾಳಿಯ ಹೊಡೆತದಿಂದ ಕದಡಿದುದೂ ಅಸ್ಥಿರವೂ ಎತ್ತರವೂ ಆದ ಅಲೆಗಳ ಹೊರಳಿಕೆಯಿಂದ ಚಂಚಲವಾದುದು. ಮೇಲಕ್ಕೆ ಚಿಮ್ಮಿದ ರತ್ನಕಾಂತಿಗಳಿಂದ ಕೂಡಿದುದೂ ಹವಳದ ಬಳ್ಳಿಗಳ ಸೊಗಸಿನಿಂದ ವಿಶಿಷ್ಟವಾಗಿ ಮಾಡಲ್ಪಟ್ಟುದೂ ಬಡಬಾಗ್ನಿಯ ಬೆಂಕಿಯಿಂದ ಕದಡಲ್ಪಟ್ಟ ನೀರುಳ್ಳದೂ ಆದ ಸಮುದ್ರವನ್ನು ಗುಣಾರ್ಣವನಾದ ಅರ್ಜುನನು ತೃಪ್ತಿಯಿಂದ ನೋಡಿದನು. ವ|| ಹಾಗೆ ನೋಡುತ್ತ ಬಂದು ಮುಂಭಾಗದಲ್ಲಿ ಅತಿಶಯವಾದ ಮೋಡಗಳ ವಿಲಾಸದಿಂದ ಪ್ರಕಾಶಿತವಾದ ಎತ್ತರವಾದ ಪರ್ವತವನ್ನು ನೋಡಿದನು. ೨೬. ವಿನತೆಯ ಮಗನಾದ ಗರುಡನ ವಜ್ರದಷ್ಟು ಕಠಿಣವಾದ ಪೆಟ್ಟಿಗೂ ಶರೀರವನ್ನೊಡ್ಡಿ ಮಾಂಸಖಂಡಗಳಿರುವವರೆಗೂ ಅವಯವಗಳನ್ನು ಚಾಚಿ ಶರೀರ ದಾನಮಾಡಿ ಪ್ರಸಿದ್ಧನಾದ ಜೀಮೂತವಾಹನನೆಂಬ ಪ್ರಖ್ಯಾತನಾದ ತ್ಯಾಗಿಯು ಮನಸ್ಸಿನ ನಿಶ್ಚಲತ್ವದಿಂದ ಶಂಖಚೂಡ

ವ|| ಎಂದಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ ಬೀರದ ಪೆಂಪಂ ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಳೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ಗಳಂ ಮುಗಿದು-

ಪೃಥ್ವಿ|| ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ವಳಯಯಾ ಭುವಾ ಸ ಗಿರಿ ಸಾಗರ ದ್ವೀಪಯಾ|
ಕುಲಾಲ ಕರ ನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸ ಸರ್ವ ಜಗತಾಂ ಗುರುರ್ಗಿರಿಸುತಾಪತಿ ಪಾತು ನ|| ೨೭

ವ|| ಎಂದು ಬಾಳೇಂದುಮೌಳಿಯಂ ಸ್ತುತಿಸಿ-

ಚಂ|| ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ|
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮

ಉ|| ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦

ನೆಂಬುವವನನ್ನು ರಕ್ಷಿಸಿದ ಹಿರಿಮೆಯನ್ನು ಪ್ರಕಾಶಿಸಿ ನಾಗರಿಗೆ ಆನಂದವನ್ನುಂಟುಮಾಡಿದುದು ಈ ಬೆಟ್ಟದಲ್ಲಿಯೇ ವ|| ಎಂದು ಅಭಿನವ ಜೀಮೂತವಾಹನನಾದ (ಅರ್ಜುನನು) ಅರಿಕೇಸರಿಯು ಜೀಮೂತವಾಹನನ ಪರೋಪಕಾರದ, ವೀರ್ಯದ ಆಕ್ಯವನ್ನು ಮೆಚ್ಚುತ್ತ ಬಂದು ಗೌರೀನಾಥನೂ ಭೂಮಿ, ವಾಯು, ಆಕಾಶ, ಅಗ್ನಿ, ಸೂರ್ಯ, ಅಪ್, ಚಂದ್ರ, ಯಜಮಾನ ಎಂಬು ಅಷ್ಟಮೂರ್ತಿಯತನೂ ಮೂರು ಲೋಕಗಳಿಂದ ಸ್ತೋತ್ರಮಾಡಲ್ಪಡುವ ಕೀರ್ತಿಯುಳ್ಳವನೂ ಆದ ಗೋಕರ್ಣನಾಥನನ್ನು ಕಂಡು ಕೈ ಮುಗಿದನು. ೨೭. ಯಾರ ಅತಿವೇಗವಾದ ತಾಳಗತಿಯನ್ನುಳ್ಳ ತಾಂಡವ ನೃತ್ಯದಿಂದ ದಿಙ್ಮಂಡಲಗಳಿಂದಲೂ ಪರ್ವತಗಳಿಂದಲೂ ಸಮುದ್ರಗಳಿಂದಲೂ ದ್ವೀಪಗಳಿಂದಲೂ ಕೂಡಿದ ಭೂಮಿಯು ತಿರುಗಿಸಲ್ಪಟ್ಟು ಕುಂಬಾರನ ಕೈ ಚಕ್ರದಂತೆ ವೇಗವಾಗಿ ಸುತ್ತುವ ಲೀಲೆಗೆ ಒಳಗಾಯಿತೋ ಆ ಸರ್ವಜಗತ್ಪತಿಯೂ ಪಾರ್ವತಿ ರಮಣನೂ ಆದ ಶಿವನು ನಮ್ಮನ್ನು ಕಾಪಾಡಲಿ ಎಂದು ವ|| (ಬಾಲಚಂದ್ರನನ್ನು ತಲೆಯಲ್ಲಿ ಉಳ್ಳ) ಈಶ್ವರನನ್ನು ಪ್ರಾರ್ಥಿಸಿ ಮುಂದೆ ಬನವಾಸಿಯ ಸೊಬಗನ್ನು ಸವಿಯಲಾರಂಭಿಸಿದನು. ೨೮. ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ೨೯. ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ೩೦. (ಅತಿಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು

ಮ|| ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲೊಂದಿಂಪುಂ ತಗುಳ್ದೊಂದು ಗೇ
ಯಮುಮಾದಕ್ಕರಗೊಟ್ಟಿಯುಂ ಚದುರರೊಳ್ವಾತುಂ ಕುಳಿರ್ ಕೋೞ್ಪ ಜೊಂ|
ಪಮುಮೇವೇೞ್ವುದನುಳ್ಳ ಮೆಯ್ಸುಕಮುಮಿಂತೆನ್ನಂ ಕರಂ ನೋಡಿ ನಾ
ಡೆ ಮನಂಗೊಂಡಿರೆ ತೆಂಕನಾಡ ಮಯಲ್ಕಿನ್ನೇಂ ಮನಂ ಬರ್ಕುಮೇ|| ೩೧

ವ|| ಎಂದರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಮಾ ನಾಡನೊಂದೆ ಬಿಲ್ಲೊಳುಂಡಿಗೆ ಸಾಧ್ಯಂ ಮಾಡಿ ಪಶ್ಚಿಮ ದಿಗ್ವಿಭಾಗಾಭಿಮುಖನಾಗಿ ಬಂದು-

ಖಚರಪ್ಲುತ|| ಸಾರ ವಸ್ತುಗಳಿಂ ನೆದಂಭೋರಾಶಿಯೆ ಕಾದಿಗೆ ಕಾವನುಂ
ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ|
ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ
ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨

ವ|| ಅನ್ನೆಗಂ ತನ್ನ ಮಯ್ದನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸಂತಸದೊಸಗೆಪಡೆಮಾತಂ ಮುಂದುವರಿದಱಪುವಂತೆ-

ಮ|| ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ ಬಂದಪ್ಪನಾತಂಗೆ ಬೆಂ
ಬಲಮಿನ್ನೀಂ ನಿನಗಾತನಾತನನಿಳಾವಿಖ್ಯಾತನಂ ಕೂರ್ತು ನೋ|
ಡಲುಮೞ್ಕರ್ತಮರ್ದಪ್ಪಲುಂ ಪಡೆವೆಯಿಂದೆಂಬಂತೆ ಕೆತ್ತಿತ್ತು ದಲ್
ಬಲಗಣ್ಣುಂ ಬಲದೋಳುಮಾ ಬಲಿ ಬಲಪ್ರಧ್ವಂಸಿಗಂದಿಟ್ಟಳಂ|| ೩೩

ವ|| ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನುದಾತ್ತನಾರಾಯಣನ ಬರವನಱದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಣಿಕಾಂಭೋಜಕುಳತಿಳಕರಪ್ಪ ಯಾದವರುಂಬೆರಸು ಮದಕರಿ ಕರೇಣು ತುರಗಾದಿ ನಾನಾವಿಧವಾಹನಂಗಳನೇಱ ಮಯ್ದುನಂಗಿದಿರ್ವಂದು ತಮ್ಮಲಂಪಿನೞ್ಕಱನ ರೂಪನೆ ಕಾಣ್ಬಂತೆ ಕಂಡು ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಮೋರೊರ್ವರಂ ತೆಗೆದಪ್ಪಿ ನಿಬಿಡಾಲಿಂಗ ನಂಗೆಯ್ದಾನಂದಜಳಪರಿಪೂರ್ಣವಿಸ್ತೀರ್ಣವಿಲೋಚನಂಗಳಿಂದಂ ಮುಹುರ್ಮುಹು ರಾಲೋಕನಂ ಗೆಯ್ಯುತ್ತುಮುತ್ತುಂಗ ಮತ್ತವಾರಣಂಗಳನೇಱ ಪೊೞಲಂ ಪುಗೆ-

ನೆನೆಯುತ್ತದೆ. ೩೧. ಅಮೃತವನ್ನೂ ಮೀರಿಸುವಷ್ಟು ಹಿತಕರವಾದ ರತಿಕ್ರೀಡೆಯ ಮಾಧುರ್ಯವೂ ಬೆನ್ನಹಿಂದೆಯೇ ಅಟ್ಟಿ ಬರುತ್ತಿರುವ ಸಂಗೀತವೂ ನೆರೆದಿರುವ ವಿದ್ವಾಂಸರ ಗೋಷ್ಠಿಯೂ ಜಾಣರ ಒಳ್ಳೆಯ ಮಾತುಗಳೂ ತಂಪನ್ನುಂಟುಮಾಡುವ ಹೂಗೊಂಚಲುಗಳೂ ಯಾವ ಸುಖವನ್ನುಂಟುಮಾಡುವುವೋ ಆ ಸುಖಗಳು ನನ್ನ ಮನಸ್ಸನ್ನಾಕ್ರಮಿಸಿದ್ದರೂ ದಕ್ಷಿಣ ದೇಶವನ್ನು ಮರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ. ವ|| ಎಂದು ಅರಿಕೇಸರಿಯು ದಕ್ಷಿಣ ದೇಶವನ್ನು ವಿಶೇಷವಾಗಿ ಮೆಚ್ಚುತ್ತ ಆ ನಾಡನ್ನು ಶ್ರಮವಿಲ್ಲದೆಯೇ ಜಯಿಸಿ ವಶಪಡಿಸಿಕೊಂಡು ಪಶ್ಚಿಮ ದಿಕ್ಕಿಗೆ ಎದುರಾಗಿ ಬಂದನು. ೩೨. ಸಾರವತ್ತಾದ ಪದಾರ್ಥಗಳಿಂದ ತಂಬಿದ ಸಮುದ್ರವೇ ಅಗುಳು (ಕಂದಕ) ಅದರ ರಕ್ಷಕ ಬಲರಾಮ, ವೈಭವದಿಂದ ಅದನ್ನು ಆಳುವವನು ಶ್ರೀಕೃಷ್ಣ, ವಿಚಾರ ಮಾಡುವವನಿಗೆ ಇದೇ ಸಂಸಾರಸಾರ ಎಂದೆನಿಸಿಕೊಳ್ಳುವ ಸ್ಥಿರವೂ ಚಿನ್ನದ ಬಾಗಿಲುಗಳಿಂದ ಕೂಡಿದ ಎತ್ತರವಾದ ಉಪ್ಪರಿಗೆಗಳನ್ನುಳ್ಳದೂ ಆದ ದ್ವಾರಾವತೀ ಪಟ್ಟಣವನ್ನು ಅರ್ಜುನನು ಬಂದು ಸೇರಿದನು. ವ|| ಅಷ್ಟರಲ್ಲಿ ತನ್ನ ಮಯ್ದುನನಾದ ಅಮೋಘಾಸ್ತ್ರಧನಂಜಯನ ಬರುವಿಕೆಯ ಸಂತೋಷ ಸಮಾಚಾರವನ್ನು ತನಗೆ ಮೊದಲೇ ತಿಳಿಸುವಂತೆ ೩೩. ನಿನ್ನ ಹಿಂದಿನ ಅನೇಕ ಜನ್ಮಗಳ ಸ್ನೇಹಿತನು ಬರುತ್ತಾನೆ. ಆತನಿಗೆ ನೀನು ಬಲ, (ಸಹಾಯಕ) ನಿನಗೆ ಆತನು ಸಹಾಯಕ; ಲೋಕಪ್ರಸಿದ್ಧನಾದ ಆತನನ್ನೂ ಕಣ್ತುಂಬ ನೋಡಿ ಪ್ರೀತಿಯಿಂದ ಗಾಢಾಲಿಂಗನ ಮಾಡುವ ಸುಯೋಗವನ್ನು ಪಡೆಯುವೆ (ಎಂಬುದನ್ನು ಸೂಚಿಸುವ) ಎನ್ನುವ ಹಾಗೆ (ಬಲಿ ಚಕ್ರವರ್ತಿಯ ಬಲವನ್ನು ನಾಶಪಡಿಸಿದ) ಕೃಷ್ಣನಿಗೆ ಬಲಗಣ್ಣೂ ಬಲದೋಳೂ ಏಕಪ್ರಕಾರವಾಗಿ ಅದುರಿದುವು. ವ|| ಹಾಗೆ ಬಲಗಣ್ಣಿನ ಅದುರುವಿಕೆ (ಕುಣಿತ, ಸ್ಪಂದನ) ಯಿಂದಲೂ ಸೂಚಿತವಾದ ಶುಭಶಕುನಗಳಿಂದಲೂ ನಾರಾಯಣನಾದ ಕೃಷ್ಣನು ಉದಾತ್ತ ನಾರಾಯಣನಾದ ಅರ್ಜುನನ ಬರುವಿಕೆಯನ್ನು ತಿಳಿದು ಬಲರಾಮ, ಸಾತ್ಯಕಿ, ಕೃತವರ್ಮ ಮೊದಲಾದ ಒಡಹುಟ್ಟಿದವರನ್ನು ವೃಷ್ಣಿ ಮತ್ತು ಕಾಂಭೋಜಕುಲಶ್ರೇಷ್ಠರಾದ ಯಾದವರನ್ನೂ ಕೂಡಿಕೊಂಡು ಮದ್ದಾನೆ, ಹೆಣ್ಣಾನೆ, ಕುದುರೆ ಮೊದಲಾದ ಅನೇಕ ವಾಹನಗಳನ್ನು ಹತ್ತಿ ಮಯ್ದುನನಿಗೆ ಇದಿರಾಗಿ ಬಂದು ತಮ್ಮ ಸಂತೋಷಕ್ಕೂ ಪ್ರೀತಿಗೂ ಕಾರಣವಾದ ಆಕಾರವನ್ನೇ ಕಾಣುವ ಹಾಗೆ ಕಂಡು ದಿಗ್ಗಜಗಳ ಸೊಂಡಲಿನಂತಿದ್ದ ತೋಳುಗಳಿಂದ ಒಬ್ಬೊಬ್ಬರನ್ನೂ ಬಿಗಿದು ಆಲಿಂಗನ ಮಾಡಿಕೊಂಡರು. ಆನಂದ ಜಲ (ಸಂತೋಷದ ಕಣ್ಣೀರು) ದಿಂದ ತುಂಬಿದ ವಿಸ್ತಾರವಾದ ಕಣ್ಣುಗಳಿಂದ ಪುನ ಪುನ

ಚಂ|| ಸುರ ನರ ಕಿನ್ನರೋರಗ ನಭಶ್ಚರ ಕಾಂತೆಯರೇವರೆಂದು ಮಾಂ
ಕರಿಸುವ ಕೆಯ್ತದಂದದ ಮುರಾರಿಯ ತಂಗೆಯನಪ್ಪುಕೆಯ್ದು ಚ|
ಚ್ಚರಮೊಳಪೊಯ್ದು ನೀಂ ನಿನಗೆ ಮಾಡುವುದೇಂದಮರೇಂದ್ರಪುತ್ರನಂ
ಕರೆವವೊಲಾದುವಾ ಪುರದ ವಾತ ವಿಧೂತವಿನೂತ ಕೇತುಗಳ್|| ೩೪

ವ|| ಆಗಳ್ ಮೊೞಗುವ ಬದ್ಧವಣದ ಪಗಳುಂ ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸು-

ಚಂ|| ಒದವಿದ ನೂಲ ತೊಂಗಲುಲಿ ದೇಸೆಯನಾಂತು ವಿಳಾಸದಿಂದಿಱುಂ
ಕಿದ ನಿಱ ಗಂಡರಳ್ಳೆರ್ದೆಗಳಂ ತುೞವೋಜೆಯನುಂಟುಮಾಡುವಂ|
ದದೆ ನಿಡುಗಣ್ಗಳೊಳ್ನಡೆ ಮನೋಭವನೊಡ್ಡಣದಂತೆ ತಂಡ ತಂ
ಡದೆ ಪರಿತಂದು ಸೂಸಿದುದು ಸೇಸೆಯನಂದು ಪುರಾಂಗನಾಜನಂ|| ೩೫

ಮಿಳಿರ್ವ ಕುರುಳ್ಗಳೊಳ್ ಪೊಳೆವ ಕಣ್ಗಳ ಬೆಳ್ದು ಪಳಂಚಿ ಚಿನ್ನ ಪೂ
ಗಣೆಗೆಣೆಯಾಗೆ ಪುರ್ವುಮೆಮೆಗಳ್ ಬಿಡದಳ್ಳಿಱದಿಕ್ಷುಚಾಪದೊಳ್|
ಖಳ ಕುಸುಮಾಸ್ತ್ರನಿಟ್ಟ ಗೊಣೆಯಕ್ಕೆಣೆಯಾಗಿರೆ ನಿಳ್ಕಿ ನಿಳ್ಕಿ ಕೋ
ಮಳೆ ನಡೆ ನೋಡಿದಳ್ ಕರಿಯನೇಱದನಂ ಪಡೆಮೆಚ್ಚೆಗಂಡನಂ|| ೩೬

ವ|| ಮತ್ತೊರ್ವಳತಿ ಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು-

ಉ|| ಕಾಯದೆ ಕಾಮನಾರ್ದಿಸೆ ತೊವಲ್ವಿಡಿರಂತೆಡಗಯ್ಯೊಳೊಪ್ಪೆ ತೋ
ರ್ಪಾಯೆಲೆ ನೋಟ ಬೇಟದ ಕೊನರ್ ತಲೆದೋರ್ಪವೊಲಾಗೆ ಬಾಯೊಳಿ
ರ್ದಾಯೆಲೆ ಕಣ್ಗೆವಂದೆಸೆಯೆ ಕಯ್ಯೆಲೆ ಕಯ್ಯೊಳೆ ಬಾಯ ತಂಬುಲಂ
ಬಾಯೊಳೆ ತೋೞೆ ಮೆಯ್ಮ ದು ನೋಡಿದಳ್ ಸಮರೈಕಮೇರುವಂ|| ೩೭

ನೋಡುತ್ತ ಎತ್ತರವಾದ ಮದ್ದಾನೆಯನ್ನು ಹತ್ತಿ ಪುರಪ್ರವೇಶ ಮಾಡಿದರು. ೩೪. ದೇವ, ಮಾನವ, ಕಿನ್ನರ, ಉರಗ, ಖೇಚರ ಸ್ತ್ರೀಯರು (ಇವಳ ಮುಂದೆ) ಅವರು ಯಾರು ಎಂತಹವರು ಎಂದು ತಿರಸ್ಕರಿಸುವ ರೂಪವುಳ್ಳ ಸೌಂದರ್ಯವತಿಯೂ ಆದ ಶ್ರೀಕೃಷ್ಣನ ತಂಗಿಯಾದ ಆ ಸುಭದ್ರೆಯನ್ನು ಅಂಗೀಕಾರಮಾಡಿ ಜಾಗ್ರತೆಯಾಗಿ ಒಲಿಸಿಕೊಂಡು ನಿನ್ನವಳನ್ನಾಗಿಮಾಡಿಕೊ ಎಂದು ಇಂದ್ರಪುತ್ರನಾದ ಅರ್ಜುನನನ್ನು ಕರೆಯುವ ಹಾಗೆ ಆ ನಗರದ ಗಾಳಿಯಿಂದ ಅಲುಗಾಡುತ್ತಿರುವ ಪ್ರಸಿದ್ಧವಾದ ಧ್ವಜಗಳು ತೋರಿದುವು. ವ|| ಆಗ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು ಅಪರಂಜಿಯ ಆ ನಗರದ ಸ್ತ್ರೀಯರು ಚಿನ್ನದ ತಟ್ಟೆಯನ್ನು ಬಿಡಿಮುತ್ತಿನ ಅಕ್ಷತೆಯನ್ನು ತುಂಬಿಕೊಂಡು ೩೫. ಧರಿಸಿದ ನಡುಪಟ್ಟಿಯ ಕುಚ್ಚಿನ ಶಬ್ದಗಳೂ ಸೌಂದರ್ಯದಿಂದ ಕೂಡಿ ವೈಭವದಿಂದ ತೊಡೆಗಳ ಮಧ್ಯೆ ಸೇರಿಸಿಕೊಂಡಿರುವ ಸೀರೆಗಳ ನೆರಿಗೆಗಳೂ ಶೂರರಾದ ಪುರುಷರ ಹೃದಯವನ್ನು ತುಳಿದು ಯಮನಂತಿರಲು ಆಕರ್ಷಕವಾಗಿರುವ ದೀರ್ಘದೃಷ್ಟಿಯಿಂದ ಕೂಡಿ ಮನ್ಮಥನ ಸೈನ್ಯದ ಹಾಗೆ ಗುಂಪುಗುಂಪಾಗಿ ಓಡಿ ಬಂದು ಅರ್ಜುನನಿಗೆ ಅಕ್ಷತೆಯನ್ನು ಚೆಲ್ಲಿದರು (ಆಶೀರ್ವದಿಸಿದರು). ೩೬. ಚಲಿಸುತ್ತಿರುವ ಮುಂಗುರುಳುಗಳಲ್ಲಿ ಹೊಳೆಯುವ ಕಣ್ಣುಗಳ ಬಿಳಿಯ ಬಣ್ಣವು ಸೇರಿಕೊಂಡು ಚಿನ್ನದ ಪುಷ್ಪಬಾಣಕ್ಕೆ ಸಮಾನವಾಗಿರಲು ಹುಬ್ಬುಗಳೂ ಕಣ್ಣಿನ ರೆಪ್ಪೆಗಳೂ ಒಂದೇ ಸಮನಾಗಿ ಕುಣಿಯುತ್ತ ದುಷ್ಟನಾದ ಮನ್ಮಥನು ಕಬ್ಬಿನ ಬಿಲ್ಲಿನಲ್ಲಿ ಹೂಡಿದ ಬಿಲ್ಲಿನ ಹೆದೆಗೆ ಸಮಾನವಾಗಿರಲು ನೀಡಿನೀಡಿ ನಿಂತು ಆನೆಯ ಮೇಲಿದ್ದ ಅರ್ಜುನನನ್ನು ಸುಂದರಿಯೊಬ್ಬಳು ದೀರ್ಘವಾಗಿ ನೋಡಿದಳು. ವ|| ನಡುಪಟ್ಟಿಯಿಂದ ಕೂಡಿದ ಮನೋಹರವಾಗಿ ಬಾಗಿರುವ ಚಿಗುರಿನಂತಿರುವ ತುಟಿಯುಳ್ಳ ಮತ್ತೊಬ್ಬಳು ಓಡಿಬಂದು ನೋಡಬೇಕೆಂಬ ಸಂಭ್ರಮದಿಂದ ಆನೆಯು ಬರುವ ಹಾಗೆ ಬರುತ್ತಿದ್ದ ಅರ್ಜುನನ ಹತ್ತಿರಕ್ಕೆ ಬಂದು. ೩೭. ಕಾಮನು ಕರುಣೆಯಿಲ್ಲದೆ ಬಾಣಪ್ರಯೋಗ ಮಾಡಲು ಹೆದರಿ ಚಿಗುರನ್ನು ಹಿಡಿಯುವ ಹಾಗೆ ಎಡಗಯ್ಯಲ್ಲಿ ವೀಳೆಯದೆಲೆಯು ಒಪ್ಪಿರಲು ಪ್ರೇಮದ ಚಿಗುರು ಕಾಣಿಸಿಕೊಂಡ ಹಾಗೆ ಬಾಯಲ್ಲಿದ್ದ ತಾಂಬೂಲವು ಮನೋಹರವಾಗಿರಲು, ಕಯ್ಯಿನೆಲೆಯು ಕಯ್ಯಲ್ಲಿಯೂ ಬಾಯಿದಂಬುಲವು ಬಾಯಲ್ಲಿಯೂ ಇರುವ ಹಾಗೆಯೇ ತನ್ನನ್ನು ತಾನು ಮರೆತುಕೊಂಡು ಸಮರೈಕಮೇರುವಾದ ಅರ್ಜುನನನ್ನು

ವ|| ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದುಂಕಿ ಬರ್ಪಲರಂಬು ಬರ್ಪಂತೆ ಬಂದು-

ಮ|| ಸ್ಮರನಂ ರೂಪಿನೊಳಿಂದ್ರನಂ ವಿಭವದೊಳ್ ಪೋ ಮೆಚ್ಚಿನಾನಾವ ಗಂ
ಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನೆನುತ್ತಿರ್ಪಾಕೆ ಗಂಧೇಭ ಕಂ|
ಧರ ಬಂಧ ಪ್ರವಿಭಾಸಿಯಪ್ಪರಿಗನಂ ಕಾಣುತ್ತೆ ಕಣ್ಸೋಲ್ತು ಕಾ
ಮರಸಂ ಭೋಂಕನೆ ಸೂಸೆ ತಾಳ್ದಲರಿದೆಂದಿರ್ಕಚ್ಚೆಯಂ ಕಟ್ಟಿದಳ್ ೩೮

ವ|| ಅಂತು ನೋಡಿದ ಪೆಂಡಿರೆಲ್ಲಂ ಕಾಮದೇವನೆಂಬ ಬೇಂಟೆಕಾಱಂಗೊಡ್ಡಿದ ಪುಲ್ಲೆಗಳಂತರಲಂಬಿನ ಮೊನೆಗೆ ಪೂಣೆ ಪೊಕ್ಕು ಪಕ್ಕಾಗಿರೆ ಪೊೞಲೊಳಗಣಿಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗೆ-

ಮ|| ಲತೆಗಳ್ ಜಂಗಮರೂಪದಿಂ ನೆರೆದುವೋ ದಿವ್ಯಾಪ್ಸರೋವೃಂದವಿ
ಕ್ಷಿತಿಗೇನಿಂದ್ರನ ಶಾಪದಿಂದಿೞದುವೋ ಪೇೞೆಂಬ ಶಂಕಾಂತರಂ|
ಮತಿಗಂ ಪುಟ್ಟುವಿನಂ ಕರಂ ಪರಕೆಗಳ್ ತಳ್ಪೊಯ್ಯೆ ಸೇಸಿಕ್ಕಿತಿಂ
ದ್ರತನೂಜಂಗಿದಿರ್ವಂದು ಷೋಡತ ಸಹಸ್ರಾಂತಪುರಂ ಕೃಷ್ಣನಾ|| ೩೯

ವ|| ಆಗಳ್ ನಾರಾಯಣನ ತಂಗೆ ಸುಭದ್ರೆಯೆಂಬ ಕನ್ನೆ ಕೆಮ್ಮುಗಿಲ ತೆರೆಯ ಪೊರೆಯೊಳ್ ನೆಗೆದು ಪೊಱಮಡುವ ವಿದ್ಯಾಧರಿಯಂತೆ ತನ್ನ ಚೆಂಬೊನ್ನ ಕನ್ನೆಮಾಡದ ಮೇಗಣ ನೆಲೆಯ ಚೌಪಳಿಗೆಯ ಬಾಗಿಲೊಳ್ ನಿಂದು-

ಚಂ|| ಬಳಸಿದ ಗುಜ್ಜುಗಳ್ ನೆರೆದ ಮೇಳದ ಕನ್ನೆಯರೆತ್ತಮಿಕ್ಕೆ ಸಂ
ಚಳಿಸುವ ಚಾಮರಂ ಕನಕ ಪದ್ಮದ ಸೀಗುರಿ ತೊಟ್ಟ ಮಾಣಿಕಂ|
ಗಳ ಬೆಳಗಿಟ್ಟಳಂ ತನಗೊಡಂಬಡೆ ದೇಸೆ ವಿಳಾಸಮಂ ಪುದುಂ
ಗೊಳಿಸೆ ಮರಲ್ದು ಕನ್ನೆ ನಡೆ ನೋಡಿ ಗುಣಾರ್ಣವನೆಂಬನೀತನೇ|| ೪೦

ವ|| ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡಾಕೆಗಳಾಕೆಯ ಪತ್ತಿದ ಕಣ್ಣುಮನೞದ ಮನಮುಮಂ ಜೋಲ್ದ ನಾಣುಮಂ ನೇಲ್ದ ಸರಮುಮನಱದು ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದಗುಂತಿಗಳನಂತುಮಳವಲ್ಲದೆ ಪೊಗೞೆ-

ನೋಡಿದಳು. ವ|| ಮತ್ತೊಬ್ಬಳು ಕಬ್ಬಿನ ಬಿಲ್ಲಿನ ಹೆದೆಯಿಂದ ಬದುಕಿ ಬರುವ ಹೂಬಾಣವು ಬರುವ ಹಾಗೆ ಬಂದು ೩೮. ರೂಪದಲ್ಲಿ ಮನ್ಮಥನನ್ನೂ ವೈಭವದಲ್ಲಿ ಇಂದ್ರನನ್ನೂ ನಾನು ಮೆಚ್ಚುವುದಿಲ್ಲ, ಬಿಡು ಎಂತಹ ಶೂರನನ್ನಾದರೂ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಬಿಡುತ್ತೇನೆ ಎನ್ನುತ್ತಿದ್ದವಳೂ ಮದ್ದಾನೆಯ ಕುಂಭಸ್ಥಳದಲ್ಲಿ ಪ್ರಕಾಶಮಾನವಾಗಿದ್ದ ಅರಿಗನನ್ನು ನೋಡಿದ ತಕ್ಷಣವೆ ಅವನಿಗೆ ಅನಳಾಗಿ ಕಾಮರಸವು ಇದ್ದಕ್ಕಿದ್ದ ಹಾಗೆ ಸೂಸುತ್ತಿರಲು ಸಹಿಸುವುದಕ್ಕಸಾಧ್ಯವೆಂದು ಎರಡು ಕಚ್ಚೆಯನ್ನು ಬಿಗಿಯಾಗಿ ಕಟ್ಟಿದಳು. ವ|| ಹಾಗೆ ನೋಡಿದ ಹೆಂಗಸರೆಲ್ಲರೂ ಕಾಮದೇವನೆಂಬ ಬೇಟೆಗಾರನಿಗೆ ಒಡ್ಡಿದ ಹುಲ್ಲೆಗಳ ಹಾಗೆ ಪುಷ್ಪಬಾಣದ ತುದಿಗೆ ಪ್ರತಿಜ್ಞೆ ಮಾಡಿ ಪ್ರವೇಶಿಸಿ ಅದಕ್ಕನವಾಗಿರಲು ಅರ್ಜುನನು ನಗರದ ಒಳಭಾಗದಿಂದ ಬಂದು ದೇವೇಂದ್ರನ ವೈಭವವನ್ನೂ ತಿರಸ್ಕರಿಸುವಂತಿದ್ದ ತನಗಾಗಿ ಏರ್ಪಡಿಸಿದ್ದ ಅರಮನೆಯನ್ನು ಪ್ರವೇಶಿಸಿದನು. ೩೯. ಲತೆಗಳೇ ಜಂಗಮರೂಪದಿಂದ ಸೇರಿಕೊಂಡಿವೆಯೋ ಸ್ವರ್ಗದ ಅಪ್ಸರಸ್ತ್ರೀಯರು ಇಂದ್ರನ ಶಾಪದಿಂದ ಭೂಮಿಗೆ ಇಳಿದಿದ್ದಾರೆಯೋ ಎಂಬ ಸಂದೇಹವನ್ನುಂಟು ಮಾಡುತ್ತಿದ್ದ ಕೃಷ್ಣನ ಅಂತಪುರದ ಹದಿನಾರು ಸಾವಿರ ಸ್ತ್ರೀಯರು ಎದುರಾಗಿ ಬಂದು ಅರ್ಜುನನಿಗೆ ವಿಶೇಷವಾದ ಆಶೀರ್ವಾದಪೂರ್ವಕವಾಗಿ ಅಕ್ಷತಾರೋಪಣೆ ಮಾಡಿದರು. ವ|| ಆಗ ನಾರಾಯಣನ ತಂಗಿಯಾದ ಸುಭದ್ರೆಯೆಂಬ ಕನ್ನೆಯು ಕೆಂಪಾದ ಮೋಡವೆಂಬ ತೆರೆಯ ಮಧ್ಯಭಾಗದಿಂದ ಹೊರಟು ಬರುವ ವಿದ್ಯಾಧರ ಸ್ತ್ರೀಯ ಹಾಗೆ ತನ್ನ ಸುವರ್ಣಖಚಿತವಾದ ಕನ್ಯಾಮಾಡದ ಮೇಲಂತಸ್ತಿನ ತೊಟ್ಟಿಯ ಬಾಗಿಲಲ್ಲಿ ನಿಂತುಕೊಂಡು- ೪೦. ತನ್ನ ಸುತ್ತಲೂ ಬಳಸಿಕೊಂಡಿರುವ ಕನ್ಯಾಂತಪುರದ ಸೇವಕರಾದ ಕುಳ್ಳರೂ ಅಲ್ಲಿ ಸೇರಿಕೊಂಡಿದ್ದ ಜನರೂ ಎಲ್ಲ ಕಡೆಯಿಂದಲೂ ಬೀಸಲು ಚಲಿಸುತ್ತಿರುವ ಚಾಮರವೂ ಚಿನ್ನದ ತಾವರೆಯ ಕೊಡೆಯೂ ಧರಿಸಿದ್ದ ಮಾಣಿಕ್ಯರತ್ನದ ಕಾಂತಿಯೂ ಚೆಲುವಾಗಿ ತನಗೆ ಒಪ್ಪಿರಲು ಸೌಂದರ್ಯ ಸೌಭಾಗ್ಯಗಳೂ ಹೊಂದಿಕೊಂಡಿರಲು ಕನ್ಯೆಯಾದ ಸುಭದ್ರೆಯು ದೀರ್ಘದೃಷ್ಟಿಯಿಂದ ನೋಡಿ ಗುಣಾರ್ಣವನೆಂಬುವನೀತನೇ ಎಂದು ತನ್ನ ಸಖಿಯರನ್ನು ಕೇಳಿದನು. ವ|| ಅವರು ಅವಳ ನಟ್ಟದೃಷ್ಟಿಯನ್ನೂ ಪ್ರೀತಿಯಿಂದ ಕೂಡಿದ ಮನಸ್ಸನ್ನೂ ಸಡಿಲವಾದ ಲಜ್ಜೆಯನ್ನೂ ಮೆಲ್ಲಗಾದ ಧ್ವನಿಯನ್ನೂ ತಿಳಿದು ಸಹಜಮನ್ಮಥನಾದ ಅರ್ಜುನನ ಕುಲದ, ಛಲದ, ತ್ಯಾಗದ,

ಚಂ|| ಒದವಿದ ತನ್ನ ಜವ್ವನದ ರೂಪಿನ ಮೆಯ್ಯೊಳೆ ತಪ್ಪುದಪ್ಪು ನೋ
ಟದೊಳೆ ಪೊಡರ್ಪು ತಪ್ಪು ಬಗೆ ತಪ್ಪು ಮನೋಜನ ಪೂವಿನಂಬು ತೀ|
ವಿದ ದೊಣೆ ತೀವಿ ತನ್ನನಿಸೆ ಜಾಣನೆ ತಪ್ಪದೆ ತಪ್ಪುದಪ್ಪ ನೋ
ಡಿದುದದಱಂ ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್|| ೪೧

ವ|| ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನು ಮರಲ್ದ ತಾವರೆಯೆಸೞ್ಗಳೊಳ್ ಪುದಿದು ಪುದುಂಗೊಳಿಸಿದಂತಾನುಮನಂಗಾಮೃತವರ್ಷಮನೊದವಿಸಿದಂತಾನುಮೆರ್ದೆಯೊಳೆಡೆವಱಯದ ಪೊಳಪಿನೊಳ್ ತಳ್ಪೊಯ್ದು ಕಡೆಗಣ್ಣ ಬೆಳ್ಪುಗಳ್ ಸೊಗಯಿಸುವ ಕುವಳಯದಳನಯನೆಯ ನೋಟಂ ತನ್ನ ಮನದೊಳಳ್ಳಾಟಮಂ ಪಡೆಯೆ-

ಮ|| ನನೆಯಂಬಂಬನೆ ಕರ್ಚಿ ಪಾಱದಪುದೋ ಶೃಂಗಾರ ವಾರಾಶಿ ಭೋಂ
ಕನೆ ಬೆಳ್ಳಂಗೆಡೆದತ್ತೊ ಕಾಮಂ ನೆ ಮೆಯ್ವೆರ್ಚಿತ್ತೊ ಪೇಕೆಗೆಂ|
ಬಿನೆಗಂ ಸೋಲಮನುಂಟುಮಾಡೆ ಹರಿಗಂ ಕರ್ಣಾಂತ ವಿಶ್ರಾಂತ ಲೋ
ಚನನಾಲೋಚನಗೋಚರಂಬರೆಗಮೊಲ್ದಾ ಕನ್ನೆಯಂ ನೋಡಿದಂ|| ೪೨

ವ|| ಅಂತು ಸುರತಮಕರಧ್ವಜನ ಕಡೆಗಣ್ಣ ನೋಟಂ ಕಾಮನ ಕಿಸುಗಣ್ಚಿ ದ ನೋಟದಂತೊ ರ್ಮೊದಲೆ ತನ್ನ ಮನದೊಳಳ್ಳಾಟಮಂ ಪಡೆಯೆ-

ಉ|| ಸೋಲದೊಳೆಯ್ದೆ ಪೀರ್ದ ತೆಱದಿಂದೆಮೆಯಿಕ್ಕದೆ ನೋೞ್ಪ ಕಣ್ಗೆ ಕಣ್
ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|
ಕೀಲಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ
ಬೂಲಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ|| ೪೩

ವ|| ಆಗಳಾ ನಾರಾಯಣನುಮುದಾತ್ತನಾರಾಯಣನುಮಾನೆಯಿಂದಮಿೞದು ನವ ಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತ ತಾಳೋತ್ತುಂಗ ರಮ್ಯ ಹರ್ಮ್ಯದೆರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪೞಯ ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಮೆಸೆದಿರ್ದ ಮಣಿಮಯಪೀಠದೊಳೊಡನೇಱ ಕಿಱದು ಪೊೞ್ತು ಕುಳ್ಳಿರ್ದು ಮಜ್ಜನ ಭೋಜನ ತಾಂಬೂಲಾನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ ದಾಮೋದರನುದರದೊಳಿಟ್ಟುಕೊಳ್ವನಿತೞ್ಕಱ ಳಪಗತ ಪಥ ಪರಿಶ್ರಮನಂ ಮಾಡಿ-

ವೀರದ, ಭಾಗ್ಯದ, ಸೌಭಾಗ್ಯದ ಅತಿಶಯಗಳನ್ನು ಅಳತೆಯಿಲ್ಲದೆ ಹೊಗಳಿದರು. ೪೧. ಆಗ ಅವಳಿಗೆ ಯವ್ವನಪ್ರಾಪ್ತವಾದ ಶರೀರದ ಸೌಂದರ್ಯವು ಅಸ್ತವ್ಯಸ್ತವಾಯಿತು. ನೋಡದಲ್ಲಿನ ಉತ್ಸಾಹವೂ ಅಸ್ತವ್ಯಸ್ತವಾಯಿತು. ಮನಸ್ಸೂ ಅಸ್ತವ್ಯಸ್ತವಾಯಿತು. ಮನ್ಮಥನು ಪುಷ್ಪಬಾಣದಿಂದ ತುಂಬಿದ ಬತ್ತಳಿಕೆಯಿಂದ ತನ್ನನ್ನು ಹೊಡೆಯುತ್ತಿರಲು ತನ್ನ ಜಾಣ್ಮೆಯೇ ವ್ಯತ್ಯಸ್ತವಾಗಿ ಆ ಸತಿಯು ಗುಣಾರ್ಣವನನ್ನು ತಪ್ಪು ನೋಟಗಳಿಂದ ನೋಡಿದಳು (?) ವ|| ಹಾಗೆ ತಳತಳನೆ ಪ್ರಕಾಶಿಸುವ ರೇಷ್ಮೆಯ ವಿವಿಧ ಬಣ್ಣಗಳ ಬಟ್ಟೆಯನ್ನು ಹರಡಿದಂತೆಯೂ ಅರಳಿದ ತಾವರೆಯ ದಳದಲ್ಲಿ ಸೇರಿಕೊಂಡು ಹದಗೊಳಿಸಿದಂತೆಯೂ ಕಾಣುವ ಮಳೆಯನ್ನು ಉಂಟುಮಾಡಿದಂತೆಯೂ ಹೃದಯದ ಅವಿಚ್ಛಿನ್ನವಾದ ಕಾಂತಿಯಲ್ಲಿ ಪ್ರತಿಭಟಿಸಿ ಕಡೆಗಣ್ಣಿನ ಬಿಳಿಯ ಬಣ್ಣಗಳು ಸೊಗಯಿಸುತ್ತಿರುವ ಕನ್ನೆ ದಿಲೆಯ ಎಸಳಿನಂತೆ ಕಣ್ಣುಳ್ಳ ಆ ಸುಭದ್ರೆಯ ನೋಟವು ಅರ್ಜುನನ ಮನಸ್ಸಿನಲ್ಲಿ ತಳಮಳವನ್ನುಂಟುಮಾಡಿತು. ೪೨. ಈ ಸುಭದ್ರೆಗಾಗಿ ಪುಷ್ಪಬಾಣವೇ ಪುಷ್ಪಬಾಣ ಕಚ್ಚಿಕೊಂಡು ಹಾರಿಬರುತ್ತಿದೆಯೋ ಶೃಂಗಾರ ಸಮುದ್ರವು ಇದ್ದಕ್ಕಿದ್ದ ಹಾಗೆ ತಟ್ಟನೆ ಅಕ ಪ್ರವಾಹದಿಂದ ಹರಿದಿದೆಯೋ ಕಾಮನ ರಸಪ್ರವಾಹವು ಅಕವಾಯಿತೊ ಹೇಳು ಎನ್ನುವ ಹಾಗೆ ತನಗೆ ಸೋಲನ್ನುಂಟು ಮಾಡಲು ಕರ್ಣಾತವಿಶ್ರಾಂತನಾದ ಅರ್ಜುನನು ಕಣ್ಣಿಗೆ ನಿಲುಕಿಸುವವರೆಗೂ ಆ ಕನ್ಯೆಯನ್ನು ಪ್ರೀತಿಯಿಂದ ನೋಡಿದನು. ವ|| ಸುರತಮಕರಧ್ವಜನಾದ ಅರ್ಜುನನ ಕಡೆಗಣ್ಣಿನ ನೋಟವು ಕಾಮನ ಕೆಂಪೇರಿದ ನೋಟದಂತೆ ತಕ್ಷಣವೇ ತನ್ನ ಮನಸ್ಸಿನಲ್ಲಿ ನಡುಕವನ್ನುಂಟುಮಾಡಲು ೪೩. ಪ್ರೇಮದಿಂದ ಚೆನ್ನಾಗಿ ಹೀರುವ ರೀತಿಯಲ್ಲಿ ರೆಪ್ಪೆ ಹೊಡೆಯದೇ ನೋಡುವ ಕಣ್ಣಿಗೆ ಬೇರೊಂದು ಕಣ್ಣು (ಅಂದರೆ ಅರ್ಜುನನ ಕಣ್ಣು) ನವಿಲುಗರಿಯ ಕಣ್ಣಿನ ಹಾಗಾಗಿ ಮನಸ್ಸನ್ನು ಪ್ರವೇಶಿಸಲು ಕಾಮಬಾಣವು ಮನಸ್ಸಿನಲ್ಲಿ ನಾಟಿರಲು ಆ ಬಾಣಗಳ ಭಾರದಿಂದ ಮೆಲ್ಲಗೆ ಜೋತುಬಿದ್ದ ಹಾಗೆ ಸುಭದ್ರೆಯು ವಿಲಾಸದಿಂದ ತನ್ನ ತಾಂಬೂಲಕರಂಕವಾಹಿನಿಯು ಮೇಲೆ ಒರಗಿಕೊಂಡು ನಿಂತಳು. ವ|| ಆಗ ಕೃಷ್ಣನೂ ಅರ್ಜುನನೂ ಆನೆಯಿಂದ ಇಳಿದು ಹೊಸದಾದ ಚಿಗುರುಗಳ ತೋರಣಮಾಲೆಯಿಂದ ಅಲಂಕೃತವಾದ ಎತ್ತರವಾದ ಏಳುತಾಳೆಯ ಮರಗಳಷ್ಟು ಎತ್ತರವೂ ರಮಣೀಯವೂ ಆದ ಉಪ್ಪರಿಗೆಯ ಮುಖಮಂಟಪವನ್ನೇರಿ ಅಲ್ಲಿ ಇಟ್ಟಿದ್ದ ಚಿನ್ನದ ಪೀಕದಾನಿಗಳಲ್ಲಿಯೂ ಬಟ್ಟೆಗಳಿಂದ ಮುಚ್ಚಿದ್ದ ಸುಖಾಸನಗಳಲ್ಲಿಯೂ ಸಿದ್ಧಪಡಿಸಿದ್ದ ಚಿನ್ನದ ದಿಂಬುಗಳಲ್ಲಿಯೂ ಚೆಲುವಾಗಿದ್ದ ರತ್ನಮಯಪೀಠಗಳಲ್ಲಿಯೂ ವಿಶ್ರಮಿಸಿ ಕೆಲವುಕಾಲ

ಕಂ|| ಈತನ ಬಿರ್ದಿನನೀತಂ
ಭೂತಳಪತಿಯೆನಿಸಿದರಿಗನೊಡೆಯಂ ಹರಿ ತಾ|
ನೀತನೆ ಬಿರ್ದಿನನೆನೆ ವಿ
ಖ್ಯಾತಂಗೆ ನರಂಗೆ ಸೆಱಪುಗೆಯ್ದನನಂತಂ|| ೪೪

ವ|| ಅಂತೆನಿತಾನುಮಂದದೊಳ್ ಸೆಱಪುಗೆಯ್ದು ವಿವಿಧ ವಿನೋದಂಗಳಂ ತೋಱ ಮುನ್ನೆ ಬದರಿಕಾಶ್ರಮದೊಳ್-

ಕಂ|| ಆಯತಿಯಿಂದಂ ನರ ನಾ
ರಾಯಣರೆನೆ ನೆಗೞ್ದೆವರಿಗ ನಾವಿರ್ವರುಮಿಂ|
ತೀ ಯುಗದೊಳೀಗಳಾಂ ನಾ
ರಾಯಣನೆಂ ನೀನುದಾತ್ತನಾರಾಯಣನೈ|. ೪೫

ವ|| ಅದಱಂ ನಿನಗಮೆನಗಮೇತಱ ಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದು ನುಡಿಯುತಿರ್ಪನ್ನೆಗಮಿತ್ತಲ್-

ಚಂ|| ನವ ನಳಿನೀ ವನಂಗಳ ಪರಾಗರಜಂಗಳನುಂಡು ಮುನ್ನಮಂ
ತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬೞಲ್ದು ಕಾಱುವಂ|
ತೆವೊಲಿರೆ ಕೆಂಪು ತತ್ಕಮಳ ಕಾನನ ಕಂಟಕ ಲಗ್ನಪಾದನಾ
ದವೊಲುಡುಗುತ್ತುಮಾತ್ಮ ಕರಮಂ ರವಿ ಪೊರ್ದಿದನಸ್ತಶೈಲಮಂ|| ೪೬

ವ|| ಆ ಪ್ರಸ್ತಾವದೊಳ್-

ಉ|| ಆ ಸರಸೀಜ ಬಾಂಧವನ ಪಿಂಬಡಿನೊಳ್ ಕಡುವಿನ್ನನಾದುವಿಂ
ತೀ ಸರಸೀರುಹಂಗಳವನೀ ಪದದೊಳ್ ಬಿಸುಟೆಂತು ಪೋಪೆವೆಂ|
ಬೀ ಸಮಕಟ್ಟಿನೊಳ್ ನೆಲಸಿದಂತೆಱಗಿರ್ದುವು ಷಟ್ಪದಂಗಳು
ತ್ಕೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್|| ೪೭

ಚಂಡಮರೀಚಿಗಸ್ತಮಯಮಿಲ್ಲದುದೊಂದೆಡೆ ನಿಮ್ಮ ಕೇಳ್ದುದುಂ
ಕಂಡುದುಮುಳ್ಳೊಡಿನ್ ಬೆಸಸಿಮಾಮಿರದಲ್ಲಿಗೆ ಪೋಪೆವೆಂದು ಮೆ|
ಯ್ಗೊಂಡೊಲವಿಂದಗಲ್ಕೆಗಣಮಾಱದೆ ಪಕ್ಕಿಗಳೆಲ್ಲಮಂ ಮರು
ಳ್ಗೊಂಡವೊಲೂಳ್ದು ಕೂಡೆ ಬೆಸಗೊಂಡು ಬಿೞಲ್ದುವು ಜಕ್ಕವಕ್ಕಿಗಳ್|| ೪೮

ಕುಳಿತಿದ್ದು ಸ್ನಾನ, ಭೋಜನ-ತಾಂಬೂಲ, ಗಂಧಾನುಲೇಪನ, ಆಭರಣ, ಸುಗಂಧಪುಷ್ಪಮಾಲೆಯೇ ಮೊದಲಾದವುಗಳಿಂದ ಸಂತೋಷಪಟ್ಟು ಕೃಷ್ಣನು ತನ್ನ ಹೊಟ್ಟೆಯಲ್ಲಿಯೇ ಅರ್ಜುನನನ್ನು ಮಡಗಿಕೊಳ್ಳುವಷ್ಟು ಪ್ರೀತಿಯಿಂದ ಆಯಾಸಪರಿಹಾರವನ್ನು ಮಾಡಿದನು.

೪೪. ಇವನು ಅತಿಥಿ; ಇವನೇ ಭೂಪತಿಯಾದ ಅರಿಕೇಸರಿ; ಒಡೆಯನಾದ ಕೃಷ್ಣಪರಮಾತ್ಮನೂ (ತಾನೂ) ಈತನೇ. ಇವನೇ ವಾಸ್ತವನಾದ ನೆಂಟ, ಎನ್ನುವ ಹಾಗೆ ಸುಪ್ರಸಿದ್ಧನಾದ ಅರ್ಜುನನಿಗೆ ಕೃಷ್ಣನು ಅತಿಥ್ಯವನ್ನು ಮಾಡಿದನು. ವ|| ಹಾಗೆ ಅನೇಕರೀತಿಯಲ್ಲಿ ಸತ್ಕಾರಮಾಡಿ ನಾನಾರೀತಿಯ ಆಟಪಾಟಗಳನ್ನು ತೋರಿ ಕೃಷ್ಣನು ಅರ್ಜುನನಿಗೆ ಹೀಗೆಂದನು- ಅರ್ಜುನ! ಹಿಂದೆ ಬದರೀಕಾಶ್ರಮದಲ್ಲಿ- ೪೫ ಹಿಂದೆ ನಾವು ಪರಸ್ಪರಾವಲಂಬನದಿಂದ ಸುಪ್ರಸಿದ್ಧರಾದ ನರನಾರಾಯಣರಾಗಿದ್ದೆವು. ಈಗ ನಾವಿಬ್ಬರೂ ಈ ಯುಗದಲ್ಲಿಯೂ ಹಾಗೆಯೇ; ನಾನು ನಾರಾಯಣ (ಶ್ರೀಕೃಷ್ಣ), ನೀನು ಉದಾತ್ತನಾರಾಯಣನಾದ ಅರಿಕೇಸರಿ ವ|| ಆದುದರಿಂದ ನಿನಗೂ ನನಗೂ ಯಾವ ವಿಧದಲ್ಲಿಯೂ ವ್ಯತ್ಯಾಸವೂ ವಿಚ್ಛಿತ್ತಿ (ವಿಚ್ಛಿನ್ನ)ಯೂ ಇಲ್ಲವೆಂದು ಹೇಳುತ್ತಿರುವಲ್ಲಿ ಸಾಯಂಕಾಲವಾಯಿತು. ೪೬. ಸೂರ್ಯನು ಮೊದಲು ಹೊಸದಾಗಿ ಅರಳಿದ ತಾವರೆಯ ತೋಟದ ಧೂಳನ್ನು (ಪರಾಗವನ್ನು) ತಿಂದು, ಆಕಾಶದಲ್ಲಿ ಸುತ್ತಿದ ಶ್ರಮದಿಂದ ಬಳಲಿ ಆ ತಿಂದ ಧೂಳನ್ನೇವಾಂತಿ ಮಾಡುತ್ತಿರುವ ಹಾಗೆ ಸಂಜೆಗೆಂಪು ತೋರುತ್ತಿರಲು ಆ ತಾವರೆಯ ಕಾಡಿನ ಮುಳ್ಳುಗಳಲ್ಲಿ ಕಾಲು ಸಿಕ್ಕಿಕೊಂಡ ಕಿರಣವುಳ್ಳವನಾಗಿ ತನ್ನ ಕಿರಣಗಳನ್ನು ಉಡುಗಿಸಿಕೊಂಡು ಅಸ್ತಾಚಲವನ್ನು ಸೇರಿದನು (ಮುಳುಗಿದನು). ವ|| ಆಸಮಯದಲ್ಲಿ ೪೭. ಕಮಲಬಂಧುವಾದ ಸೂರ್ಯನ ಹಿಂದೆಯೇ ಈ ತಾವರೆಗಳೂ ಬಹಳ ಖಿನ್ನವಾಗಿವೆ (ಬಾಡಿವೆ). ಈ ಸಮಯದಲ್ಲಿ ಇವುಗಳನ್ನು ಬಿಸುಟು ನಾವು ಹೇಗೆ ಹೋಗುವೆವು ಎಂದು ದುರವಸ್ಥೆಯಲ್ಲಿ ನಿಂತಂತೆ ದುಂಬಿಗಳು ಅನೇಕ ಕೇಸರಗಳ ಇಕ್ಕಟ್ಟಿನ ಸಂಕಟಕ್ಕೊಳಗಾಗಿ ತಾವರೆಯ ಮೊಗ್ಗೆಂಬ ಗುಡಿಸಲಿನ ಒಳಗೆ ಸಿಕ್ಕಿಬಿದ್ದುವು. ೪೮. ಸೂರ್ಯನಿಗೆ ಅಸ್ತಮಯವೇ ಇಲ್ಲದ ಸ್ಥಳವೊಂದನ್ನು ನೀವು ಕೇಳಿದ್ದರೆ ಅಥವಾ ಕಂಡಿದ್ದರೆ ಹೇಳಿ; ನಾವು ಸಾವಕಾಶಮಾಡದೆ ಅಲ್ಲಿಗೆ ಹೊರಟುಹೋಗುತ್ತೇವೆ ಎಂದು ಹುಚ್ಚರಂತೆ ಎಲ್ಲ ಪಕ್ಷಿಗಳಿಗೂ ಕೂಗಿ

ವ|| ಅಂತು ಕಮಳವನಂಗಳಾದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ ಜಕ್ಕವಕ್ಕಿಗಳ್ ಸುರತಮಕರಧ್ವಜನ ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡಸುಂಗೊಂಡಗಲೆ ಸಂಧ್ಯಾರಾಗಮವರ ಮನದನುರಾಗಮನನುಕರಿಸುವಂತುಟಾಗೆ ಬೞಯಂ ಕ್ರಮಕ್ರಮದೊಳ್-

ಮ|| ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ ಕಾಲಮೇ
ಘಸಮೂಹಂ ದೆಸೆಯೆಲ್ಲಮಂ ಕವಿದುದೋ ಗಂಧೇಭ ಚರ್ಮಂಗಳಂ|
ಪಸರಂಗೆಯ್ದನೊ ಶಂಭುವೆಂಬ ಬಗೆಯಿಂ ತಳ್ಪೊಯ್ದು ಕೞ್ಪೇಱ ಸೂ
ಚಿಸಲಾರ್ಗಂ ವಶಮಾಗದಂತು ಕವಿದತ್ತುದ್ದಾಮ ಭೀಮಂ ತಮಂ|| ೪೯

ವ|| ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನಲೆಯಲಾಱವಾದುವು ಕನಕ ಪ್ರಾಸಾದ ಪಂಙ್ಕೆ ಗಳ್ ಪೞಪೞನೆ ಬೆಳಗುವ ಸೊಡರ್ಗಳನಾದಿತ್ಯನ ತಮೋರಾಜಕಂ ಮುಳಿದು ಸೆಗೆಯ್ದ ಬೆಳಗಿನ ಸೆಯ ಮನೆಗಳನ್ನವಾದುವು ಮದಗಜ ಗಂಡಸ್ಥಳಂಗಳೊಳೆಱಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖಿಭೂತಂಗಳಾದುವು ತಂಡತಂಡದೋಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾಹಂಸಕುಳಂಗಳ್ ತಳವೆಳಗಾದುವು ರಾಜಹಂಸಪಾರಾವತಮಿಥುನಂಗಳುತ್ತುಂಗಪ್ರಾಸಾದಶಿಖರ ಮಣಿಗವಾಕ್ಷಾಂತರಾಳ ವಿವಿಧ ಗೃಹಾಂತರಗತಂಗಳಾದುವು ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುರ ನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ-

ಮ|| ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನಾತ್ಮಾಂಗದೊಳ್ ರೋಹಿಣೀ
ಚರಣಾಲಕ್ತಕ ರಾಗಮಚ್ಚಿಱದುದೋ ಮೇಣ್ ಕಾಮಿಗಳ್ಗೀವ ರಾ|
ಗರಸಂ ಪೊಣ್ಮಿದುದೋ ತಮೋಗಜದ ಕೋಡೇಱಂದಮೇಂ ನೊಂದುದೋ
ಹರಿಣಂ ತಾನೆನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ|| ೫೦

ವ|| ಆಗಳ್ ತನ್ನ ರಾಗಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಟ್ಟಾಗಳ್-

ಹೇಳಿ ತನ್ನಲ್ಲಿ ವ್ಯಾಪ್ತವಾಗಿದ್ದ ಪ್ರೀತಿಯಿಂದ ತಾವು ಬೆರೆಯಲಾರದೆ ಚಕ್ರವಾಕಪಕ್ಷಿಗಳು ವಿಶೇಷವಾಗಿ ಬಳಲಿದುವು. ವ|| ಹಾಗೆ ತಾವರೆಯ ತೋಟಗಳು ಸೂರ್ಯನಿಗೆ ಕೈಮುಗಿಯುವಂತೆ ಮೊಗ್ಗಾಗಲು (ಮುಚ್ಚಿಕೊಳ್ಳಲು), ಚಕ್ರವಾಕಪಕ್ಷಿಗಳು ಅರ್ಜುನ ಸುಭದ್ರೆಯರ ವಿರಹತಾಪದಲ್ಲಿ ತಾವೂ ಭಾಗಿಗಳಾಗಿ (ದುಖಪಟ್ಟು?) ತಕ್ಷಣ ಅಗಲಲು ಸಾಯಂಕಾಲದ ಕೆಂಪುಬಣ್ಣವು ಅವರ ಮನಸ್ಸಿನ ಅನುರಾಗವನ್ನು ಅನುಕರಿಸುವಂತೆ ಸಂಧ್ಯಾರಾಗವು ಕಾಣಿಸಿತು. ೪೯. ಸ್ವಲ್ಪಕಾಲದಲ್ಲಿಯೇ ರಾಕ್ಷಸನು ಸಮಸ್ತ ಜಗತ್ತನ್ನು ಕಾಡಿಗೆಯಿಂದ ಹೂಳಿಬಿಟ್ಟಿದ್ದಾನೆಯೋ ಪ್ರಳಯಕಾಲದ ಮೋಡದ ಸಮೂಹಗಳು ದಿಕ್ಕುಗಳನ್ನೆಲ್ಲ ಕವಿದುಕೊಂಡಿದೆಯೋ ಈಶ್ವರನು ಮದ್ದಾನೆಯ ಚರ್ಮವನ್ನು ಹರಡಿದ್ದಾನೆಯೋ ಎಂಬ ಚಿಂತೆಯನ್ನುಂಟುಮಾಡಿ ಕಪ್ಪುಬಣ್ಣವು ವೃದ್ಧಿಯಾಗಿ (ಇದು ಹೀಗೆ ಎಂದು ಸೂಚಿಸುವುದಕ್ಕೆ) ಯಾರಿಗೂ ಶಕ್ಯವಿಲ್ಲದ ರೀತಿಯಲ್ಲಿ ಬಹಳ ಭಯಂಕರವಾದ ಕತ್ತಲೆಯು ಕವಿದುಕೊಂಡಿತು. ವ|| ಆಗ ನಕ್ಷತ್ರಮಂಡಲವು ದಿಗ್ವನಿತೆಯರ ಕಿರೀಟಮಾಣಿಕ್ಯದಷ್ಟು ಪ್ರಕಾಶಮಾನವಾಗಿದ್ದರೂ ಕತ್ತಲೆಯನ್ನು ಹೋಗಲಾಡಿಸಲು ಶಕ್ತವಾಗಲಿಲ್ಲ. ಸುವರ್ಣ ನಿರ್ಮಿತವಾದ ಉಪ್ಪರಿಗೆಯ ಸಾಲುಗಳು ಪಳಪಳನೆ ಬೆಳಗುತ್ತಿದ್ದ ದೀಪಗಳು ಸೂರ್ಯನ ನಂಟರೆಂದು ಕತ್ತಲೆಯೆಂಬ ರಾಜನು ಕೋಪಗೊಂಡು (ಆ ದೀಪಗಳನ್ನು) ಬಂಸಿದ ಪ್ರಾತಕಾಲದ ಸೆರೆಮನೆಗಳಂತೆ ಆದವು. ಮದ್ದಾನೆಗಳ ಕಪೋಲ ಪ್ರದೇಶಗಳಲ್ಲಿ ಎರಗಿ ಝೇಂಕರಿಸುವ ದುಂಬಿಯ ಸಮೂಹಗಳು ಮುಖತಿರುಗಿಸಿದವು. ಗುಂಪುಗುಂಪಾಗಿ ಅರಮನೆಗೆ ಬಂದು ಹೋಗುವ ವೇಶ್ಯೆಯರ ಕಾಲಂದಿಗೆಯ ಶಬ್ದವನ್ನು ಕೇಳಿ ಅರಮನೆಯ ಕೈದೋಟಸರೋವರದಲ್ಲಿದ್ದ ಹಂಸಸಮೂಹಗಳು ಅಸ್ತವ್ಯಸ್ತವಾದುವು. ರಾಜಹಂಸ ಮತ್ತು ಪಾರಿವಾಳದ ಜೋಡಿಗಳು ಉಪ್ಪರಿಗೆಯ ತುದಿಯಲ್ಲಿರುವ ರತ್ನಖಚಿತವಾದ ಕಿಟಕಿಗಳ ಮಧ್ಯಭಾಗದ ಮನೆಗಳನ್ನು (ಗೂಡುಗಳನ್ನು) ಹೋಗಿ ಸೇರಿದುವು. ಉದಯ ಪರ್ವತದ ತಪ್ಪಲಿನ ಗುಹೆಗಳ ಸಹಾಯವನ್ನುಳ್ಳ (ಅಂದರೆ ಮೂಡದಿಕ್ಕಿನಲ್ಲಿ ಉದಯಿಸುತ್ತಿದ್ದ) ಚಂದ್ರನು ಸಿಂಹದಿಂದ ಸೀಳಲ್ಪಟ್ಟ ತನ್ನ ಜಿಂಕೆಯ ರಕ್ತರಾಶಿಯಿಂದ ತುಂಬಿದವನಂತೆ ಕೆಂಪು ವರ್ಣದವನಾದನು. ೫೦. ಸಂಜೆಯೆಂಬ (ಅನ್ಯ) ಸ್ತ್ರೀಯಲ್ಲಿ ಕೂಡಿದೆಯಾ ಎಂದು (ಹೆಂಡತಿಯಾದ ರೋಹಿಣಿ ದೇವಿಯು) ಕೋಪದಿಂದ ಒದೆಯಲು ಅವಳ ಕಾಲಿನ ಅರಗಿನ ಬಣ್ಣವು ಚಂದ್ರನ ಶರೀರದಲ್ಲಿ ಎರಕ ಹೊಯ್ದಿದೆಯೋ ಅಥವಾ ಕಾಮಿಗಳಿಗೆ (ಸಹಜವಾಗಿಯೇ) ಕೊಡುವ (ಹೆಚ್ಚುವ) ಕಾಮರಸವು ಅಭಿವೃದ್ಧಿಯಾಯಿತೋ ಅಥವಾ (ಚಂದ್ರನ) ಜಿಂಕೆಯು ಕತ್ತಲೆಯೆಂಬ ಆನೆಯ ಕೊಂಬಿನ ಗಾಯದಿಂದ ಗಾಯಗೊಂಡಿದೆಯೋ ಎನ್ನುವ ಹಾಗೆ ಚಂದ್ರಬಿಂಬದ ಕೆಂಪು ಕಾಂತಿಯು ಎನ್ನಿಸಿತು. ವ|| ಸ್ವಲ್ಪಕಾಲದ ಮೇಲೆ ತನ್ನ ರಾಗ (ಕೆಂಪುಬಣ್ಣ)ವನ್ನು ರಾಗಿಗಳಿಗೆಲ್ಲ (ಪ್ರೀತಿಪಾತ್ರರಾದವರು- ಪ್ರಿಯ ಪ್ರೇಯಸಿಯರು- ವಿರಹಿಗಳು)

ಮ|| ಮುನಿದೀಶಂ ತವೆ ಸುಟ್ಟು ಮುಂ ಕರುಣದಿಂದಿತ್ತಂ ಪುನರ್ಜನ್ಮಮಂ
ನಿನಗೆಂದಾ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಂ|
ಜ್ಜನಕೆಂದೆತ್ತಿದ ಚಂದ್ರಕಾಂತ ಘಟದೊಳ್ ತಂದೞಯಿಂ ಪುಷ್ಪ ವಾ
ಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕೞಂದುವಾ|| ೫೧

ಕನ್ನೆತನಂಗೆಯ್ಯಲ್ ಬಗೆ
ಗುನ್ನಾಣ್ ಮಿಗೆ ಮನಮುಮಿೞ್ದ್ದುವರಿಯಲ್ ಬಗೆಗುಂ|
ಕನ್ನಡಿಕುಂ ತನ್ನಳಿಪಂ
ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್|| ೫೫

ನುಡಿಯಿಸಿ ಕೇಳ್ಗುಂ ಹರಿಗನ
ಪಡೆಮಾತನೆ ಮಾತು ತಪ್ಪೊಡಂ ಮತ್ತಮದಂ|
ನುಡಿಯಿಸುಗುಂ ಮೊದಲಿಂದಾ
ನುಡಿ ಪಱಪಡೆ ಮುಳಿದು ನೋಡುಗಂ ಕೆಳದಿಯರಂ|| ೫೬

ಅಱ ಮರುಳಂತುಟೆ ಸೊರ್ಕಿನ
ತೆಱದಂತುಟೆ ಮನಮೊಱಲ್ವುದೆರ್ದೆಯುರಿವುದು ಮೆ|
ಯ್ಯೆಱಗುವುದು ಪದೆವುದಾನಿದ
ನಱಯೆನಿದೇಕೆಂದು ಕನ್ನೆ ತಳವೆಳಗಾದಳ್|| ೫೭

ಉ|| ಆನೆಯನೇಱ ಸೌಷ್ಠವದೆ ಬರ್ಪರಿಕೇಸರಿಯೊಂದು ಗಾಡಿಯು
ದ್ದಾನಿ ತಗುಳ್ದು ಕಣ್ಣೊಳೆ ತೊೞಲ್ದೆರ್ದೆಯೊಳ್ ತಡಮಾಡೆ ಬೇಟದು ||
ದ್ದಾನಿಯನಾನೆ ಮನ್ಮಥ ಮಹೀಭುಜನೋವದೆ ತೋಱಕೊಟ್ಟುದೊಂ
ದಾನೆಯೆ ತನ್ನನಾನೆಗೊಲೆಗೊಂದಪುದೆಂದು ಲತಾಂಗಿ ಬೆರ್ಚಿದಳ್|| ೫೮

ಭಾಗಮಾಡಿಕೊಟ್ಟ ಹಾಗೆ ಕೆಂಪುಬಣ್ಣವು ಕಳೆದುಹೋಗಲಾಗಿ ಚಂದ್ರಬಿಂಬವು ಬೆಳ್ಳಗಾಯಿತು. ೫೧. ಈಶ್ವರನೂ ಮನ್ಮಥನ ಮೇಲೆ ಮೊದಲು ಕೋಪಿಸಿಕೊಂಡು (ನೇತ್ರಾಗ್ನಿಯಿಂದ) ಸುಟ್ಟು ಭಸ್ಮಮಾಡಿ ಪುನ ಕರುಣೆಯಿಂದ ನಿನಗೆ ಜನ್ಮವಿತ್ತಿದ್ದಾನೆ ಎಂದು ರತಿದೇವಿಯು ಅವನ ಪಾಪವನ್ನು ಪತನವನ್ನು ಹೋಗಲಾಡಿಸುವುದಕ್ಕಾಗಿ ಕಾಮನ ಮಜ್ಜನಕ್ಕೆ ಎತ್ತಿದ ಚಂದ್ರಕಾಂತ ಶಿಲೆಯ ಕಲಶದಲ್ಲಿ ಅದನ್ನು ವಾಸನಾಯುಕ್ತವನ್ನಾಗಿ ಮಾಡುವುದಕ್ಕಾಗಿ ಪ್ರೀತಿಯಿಂದ ತಂದಿಟ್ಟ ಕನ್ನೆ ದಿಲೆಯ ಪುಷ್ಪವನ್ನು ಚಂದ್ರನ ಕಪ್ಪು (ಕಲೆ-ಕರೆ) ಹೋಲುತ್ತಿತ್ತು. ೫೨. (ಬೆಳದಿಂಗಳು) ಭೂಮ್ಯಮಂತರಿಕ್ಷಗಳ ಮಧ್ಯಭಾಗವನ್ನು ಅಮೃತದಕಾಂತಿ ಆವರಿಸಿತೊ ಎನ್ನುವ ಹಾಗಿರಲು ವಿರಹಿಗಳು (ಪ್ರೇಮಿಗಳನ್ನು ಅಗಲಿರುವವರು) ಇದು ಮನ್ಮಥನು ನಮ್ಮನ್ನು ಹುಡುಕಲು ತಂದಿರುವ ಹುಡುಕುದೀಪ; ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುವಂತೆ ಚಂದ್ರನು ತೊಳಗಿ ಪ್ರಕಾಶಿಸಿದನು. ೫೩. ಹಾಗೆ ಸೊಗಯಿಸುವ ಸ್ವಚ್ಛವಾದ ಬೆಳದಿಂಗಳಿನಲ್ಲಿ ಸುಣ್ಣದಿಂದ ಬಿಳುಪುಮಾಡಲ್ಪಟ್ಟ ಎತ್ತರವೂ ಮನೋಹರವೂ ಆದ ಉಪ್ಪರಿಗೆಯ ಎರಡನೆಯ ಅಂತಸ್ತಿನ ಆಕರ್ಷಕವಾದ ಚಚ್ಚೌಕದ ಮುಂದಿನ ಮಹಡಿಯ ಮುಂಭಾಗದಲ್ಲಿ ವಿಜೃಂಭಣೆಯಿಂದ ಕೃಷ್ಣನು ಓಲಗದಿಂದಿದ್ದು ಅರ್ಜುನನೊಡನೆ ಅನೇಕ ವಿನೋದಗಳಿಂದ ಕೂಡಿದನು. ಆದಿಶೇಷನ ಅನಂತವಾದ ಹೆಡೆಯ ರತ್ನಗಳ ಸಮೂಹವು ಪ್ರಕಾಶಿಸುತ್ತಿರಲು ನಾರಾಯಣನು ಕ್ಷೀರಸಮುದ್ರದಲ್ಲಿ ಸಂತೋಷದಿಂದಿರುವ ಹಾಗೆ (ಇಲ್ಲಿ) ಕೈದೀವಿಗೆಗಳ ಸಮೂಹವು ಪ್ರಕಾಶಿಸಿ ಬೆಳಗುತ್ತಿರಲು ಅರ್ಜುನನು ಸುಖದಿಂದ ಇದ್ದನು. ೫೪. ಆ ಕಡೆ ಸುಭದ್ರೆಯು ಕೂಡ ವಿರಹತಾಪದಿಂದ ಮೈಸುಡುತ್ತಿರಲು ನಿಶ್ಚೇಷ್ಟಳಾಗಿ ಅರ್ಜುನನು ಇದ್ದ ಕಡೆಯೇ ನೋಡುತ್ತಿರಲು ಅವಳ ಸಖಿಯರ ಸಮೂಹವು ಅವಳ ರೂಪವನ್ನು ಸುಂದರವಾದ ಸಾಲುಬೊಂಬೆಯೆಂದು ಭ್ರಮಿಸಿತು. ೫೫. ನಾಚಿಕೆಯು ಕನ್ಯಾಭಾವವನ್ನು ಪ್ರದರ್ಶಿಸಲು ಇಚ್ಚಿಸುತ್ತದೆ. ಮನಸ್ಸಾದರೋ ವಿಶೇಷವಾಗಿ (ಅರ್ಜುನನ ಕಡೆ) ಸೆಳೆದುಕೊಂಡು ಹೋಗಲು ಆಶಿಸುತ್ತದೆ. ತನ್ನ ಪ್ರೇಮವನ್ನು ವಿಶದಪಡಿಸುತ್ತದೆ ಎಂದು ಕನ್ಯೆಯಾದ ಸುಭದ್ರೆಯು ತನ್ನಲ್ಲಿಯೇ ತಬ್ಬಿಬ್ಬಾದಳು. ೫೬. ಅರ್ಜುನನ ವಿಷಯಕವಾದ ಮಾತನ್ನೇ (ಕೆಳದಿಯರಿಂದ) ಹೇಳಿಸಿ ಕೇಳುತ್ತಾಳೆ. ಆ ಮಾತು ನಿಂತುಹೋದರೆ ಪುನ ಆ ಮಾತನ್ನೇ ಮೊದಲಿನಿಂದಲೂ ನುಡಿಯಿಸುತ್ತಾಳೆ. ಅದೂ ನಿಂತುಹೋದರೆ ಸಖಿಯರನ್ನೂ ಕೋಪದಿಂದ ನೋಡುತ್ತಾಳೆ. ೫೭. ಬುದ್ಧಿಭ್ರಮಣೆಯಾಗುತ್ತದೆ. ಸೊಕ್ಕಿನಿಂದ ಮಯ್ ಮರೆದಂತಾಗುತ್ತದೆ. ಮನಸ್ಸು ಪ್ರೀತಿಸುತ್ತದೆ. ಎದೆಯುರಿಯುತ್ತದೆ. ಶರೀರವು (ಅವನ ಕಡೆಯೇ) ಬಾಗುತ್ತದೆ. (ಅವನನ್ನೇ) ಅಪೇಕ್ಷಿಸುತ್ತದೆ.ಇದೇಕೆಂದು ತಿಳಿಯಲಾರದೆ ಕನ್ಯೆಯಾದ ಸುಭದ್ರೆಯು ತಳವೆಳಗಾದಳು. ೫೮. ಆನೆಯನ್ನು ಹತ್ತಿ ಸೊಗಸಾಗಿ ಬರುತ್ತಿರುವ ಅರ್ಜುನನ ಒಂದು ಸೌಂದರ್ಯಾತಿಶಯವು

ಮ|| ಮನಮಾರಾತಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾ
ವನಿತುಂ ಸ್ಥಾಪಿತ ಯೂಪಕೋಟಿ ಬಳವತ್ಕಾಮಾಗ್ನಿ ಹೋಮಾಗ್ನಿ ಚಂ|
ದನ ಕರ್ಪೂರ ಮೃಣಾಳನಾಳಮೆ ಪೊದಳ್ದಿಧ್ಮಂಗಳಿಂತಾಗೆ ತಾ
ನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಳ್ದಿಂಗಳೊಳ್|| ೫೯

ವ|| ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭಕ ಕಂಪ ಸ್ವೇದ ವೈವರ್ಣ್ಯ ಸಂತಾಪನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳನೊಡನೊಡನೆ ತೋಱುವುದುಮಾಕೆಯ ದಾದಿಯ ಮಗಳ್ ಚೂತಲತಿಕೆಯೆಂಬಳ್ ಕಂಡು-

ಚಂ|| ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟಲರ್ಗಣ್ಣ ನೋಟಮು
ಣ್ಮಿದ ಬೆಮರೋಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂ||
ದಿದ ಲತಿಕಾಂಗಮೊಂದಿದ ವಿಕಾರಮದೀಕೆಯೊಳೀಗಳಾದುದಿಂ
ತಿದು ಕುಸುಮಾಸ್ತ್ರನೆಂಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ|| ೬೦

ವ|| ಎಂದು ತನ್ನೊಳೆ ಬಗೆದು ಮತ್ತಮಿಂತೆಂದಳ್-

ಚಂ|| ಕೞಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್
ಗೞಯಿಸೆ ಕೆಂಪು ಕಣ್ಗಳ ಮೊದಲ್ಗಳೊಳೊಯ್ಯನೆ ತೋ ಬಾಡಿ ಪಾ|
ಡೞದು ಬೞಲ್ದು ಜೋಲ್ದಿರವು ಮೆಯ್ಯೊಳೆ ಮೆಯ್ವಿಡಿದೆನ್ನ ಕಣ್ಗಳೊಳ್
ಸುೞದುವು ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ|| ೬೧

ವ|| ಅದಱನೀಕೆಯ ಬಗೆಯನಱಯಲ್ವೇೞ್ಕುಮೆಂದು ಮೆಲ್ಲಮೆಲ್ಲನೆ ಕೆಲಕ್ಕೆವಂದು ಕುಂಚದಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದೇಕಾಂತದೊಳ್ ಕನ್ನೆಯನಿಂತೆಂದಳ್-

ಚಂ|| ಮೃಗಮದ ಪತ್ರರೇಖೆಗಳನೇಕೆಗೆ ತಾಳ್ದಿರದಾದುವೀ ಕದಂ
ಪುಗಳುರಮೇಕೆ ಹಾರ ಮಣಿಮಂಜರಿಯಿಲ್ಲದೆ ಬಿನ್ನಗಿರ್ದುದೀ|
ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದೀ
ಬಗೆಯೊಳಲಕ್ತಕ ದ್ರವದೊಳೊಂದದೆ ನಿಂದುವು ಪಾದಪಂಕಜಂ|| ೬೨

ತನ್ನನ್ನು (ಸುಭದ್ರೆಯನ್ನು) ಹಿಂಬಾಲಿಸಿ ಕಣ್ಣಿನಲ್ಲಿ ಸುತ್ತಾಡಿ ಎದೆಯಲ್ಲಿ ಸ್ಥಿರವಾಗಿ ಪ್ರೇಮಾತಿಶಯವನ್ನುಂಟುಮಾಡಲು ಮನ್ಮಥನೆಂಬ ರಾಜನೇ ತನ್ನಲ್ಲಿ ಸ್ವಲ್ಪವೂ ದಾಕ್ಷಿಣ್ಯವಿಲ್ಲದೆ ತನ್ನ ಆನೆಯನ್ನು ಛೂಬಿಟ್ಟು ಅದರಿಂದ ತನ್ನನ್ನು ಕೊಲ್ಲಿಸುವಂತೆ ಕೊಲ್ಲಿಸುತ್ತಿದ್ದಾನೆ ಎಂದು ಲತಾಂಗಿಯಾದ ಸುಭದ್ರೆಯು ಹೆದರಿದಳು. ೫೯. ಮನಸ್ಸೇ ಪೂಜಿಸಲ್ಪಟ್ಟ ಯಜ್ಞಭೂಮಿ, ಕಾಮಪೀಡಿತರಾದವರೇ ಬಲಿಗಾಗಿರುವ ಪಶುಗಳು, ಫಲಿಸಿ ಬಂದಿರುವ ಮಾವಿನಮರಗಳೇ ನೆಟ್ಟಿರುವ ಬಲಿಗಂಬಗಳು. ಅತಿಶಯವಾದ ಕಾಮಾಗ್ನಿಯೇ ಹೋಮಾಗ್ನಿ, ಶ್ರೀಗಂಧ, ಕರ್ಪೂರ, ತಾವರೆಯ ದಂಟುಗಳೇ ಅಲ್ಲಿ ಹರಡಿರುವ ಸಮಿತ್ತುಗಳ ಕಟ್ಟುಗಳು. ಹೀಗಾಗಲು ಇವಿಷ್ಟೂ ಕಾಮನ ಯಜ್ಞವೆಂದು ಸುಭದ್ರೆಯು ಬೆಳದಿಂಗಳಿನಲ್ಲಿ ಭಯಗೊಂಡಳು. ವ|| ಹಾಗೆ ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂದ ಸ್ತಂಭಿತಳಾದ (ತಡೆಯಲ್ಪಟ್ಟ) ದಿವ್ಯಗ್ರಹದ ಹಾಗೆ ಕಾಮಗ್ರಹದಿಂದ ಹಿಡಿಯಲ್ಪಟ್ಟು ಬುದ್ಧಿಭ್ರಮಣೆ, ರೋಮಾಂಚ, ಸ್ತಂಭನ, ನಡುಕ, ಬೆವರುವುದು, ವರ್ಣವ್ಯತ್ಯಾಸ, ಚಿಂತೆ, ಆಹಾರವಿಲ್ಲದಿರುವಿಕೆ, ಪ್ರೇಮಾತಿಶಯ, ಗಂಟತಗಿದ ಮಾತು, ಕಣ್ಣೀರುಸುರಿಯುವಿಕೆ, ಮೂರ್ಛೆಹೋಗುವುದು ಮೊದಲಾದ ನಾನಾ ವಿಕಾರಗಳನ್ನು (ಸುಭದ್ರೆಯು) ಮೇಲೆ ಮೇಲೆ ತೋರುತ್ತಿರಲು ಆಕೆಯ ದಾದಿಯ ಮಗಳಾದ ಚೂತಲತಿಕೆಯೆಂಬವಳು ಇದನ್ನು ಕಂಡಳು. ೬೦. ಈಕೆಯ ಬತ್ತಿದ ಎದೆ, ನಡುಗುವ ತುಟಿ, ಹೂವಿನಂತಿರುವ ಕಣ್ಣಿನ ದೆಸೆಗೆಟ್ಟ ದೃಷ್ಟಿ, ಹೆಚ್ಚಾದ ಬೆವರಿನ ಸಾಲಿಂದ ಕೂಡಿದ ದೀರ್ಘಶ್ವಾಸ, (ನಿಟ್ಟುಸಿರು), ತೊದಳಿನಿಂದ ಕೂಡಿದ ಮಾತು, ಕೃಶವಾದ ಲತೆಯಂತಿರುವ ಶರೀರ, ತೋರಿಬರುತ್ತಿರುವ ವಿಕಾರಗಳು ಇವೆಲ್ಲ ಈಗ ಇವಳಲ್ಲಿ ಉಂಟಾಗುತ್ತಿವೆ, ಇವು ಪುಷ್ಪಬಾಣನಾದ ಮನ್ಮಥನೆಂಬ ದುಷ್ಟನು ಉಂಟುಮಾಡಿರುವ ಸೊಕ್ಕಿನ ಚೇಷ್ಟೆಯೇ ಸರಿ ವ|| ಎಂದು ತನ್ನಲ್ಲಿಯೇ ಯೋಚಿಸಿ ಪುನ ಹೀಗೆಂದಳು- ೬೧. ಕಳಿತುಹೋಗಿರುವ (ಅಜ್ಜಿಯಾದ) ಸಂಪಗೆಯ ಬಣ್ಣದ ಹಾಗೆ ಬೆಳ್ಳಗಿರುವ ಕಣ್ಣಿನ ಮೊದಲಿನಲ್ಲಿ ಕೆಂಪುಬಣ್ಣವು ನಿಧಾನವಾಗಿ ವ್ಯಾಪಿಸಿ ತೋರುತ್ತಿರಲು ಬಾಡಿ ಹಿಂದಿನ ಸ್ಥಿತಿಯನ್ನು ಕಳೆದುಕೊಂಡು ಜೋತುಹೋಗಿರುವ ಈಕೆಯ ಶರೀರಸ್ಥಿತಿಯೇ ನನ್ನ ಕಣ್ಣಿನಲ್ಲಿ ಈ ಕನ್ಯೆಯ ಪ್ರೇಮಾತಿಶಯವನ್ನು ಪ್ರಕಟಪಡಿಸುತ್ತದೆ. ವ|| ಆದುದರಿಂದ ಈಕೆಯ ಮನಸ್ಸನ್ನು ತಿಳಿಯಬೇಕು ಎಂದು ನಿಧಾನವಾಗಿ ಪಕ್ಕಕ್ಕೆ ಬಂದು ಕುಂಚದ ಅಡಪದ ಡವಕೆಯ ಸೇವಕಿಯರನ್ನೆಲ್ಲ ಕಣ್ಸನ್ನೆಯಿಂದಲೇ ಕಳುಹಿಸಿ ರಹಸ್ಯವಾಗಿ ಕನ್ಯೆಯನ್ನು ಕುರಿತು ಕೇಳಿದಳು -೬೨. ಈ ನಿನ್ನ ಕೆನ್ನೆಗಳು ಕಸ್ತೂರಿಯಿಂದ ಬರೆದ ಪತ್ರರೇಖೆಗಳನ್ನು

ಮ|| ನಗೆಗಣ್ ಸೋರ್ವ ಕದುಷ್ಣ ವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂ
ಕೆಗಳಿಂ ನಾಡೆ ಬೆಡಂಗುಗೆಟ್ಟಿರವಿದಿಂತೇಕಾರಣಂ ಮಜ್ಜನಂ|
ಬುಗದಾರೋಗಿಸಲೊಲ್ಲದಿರ್ಪಿರವಿದೇಂ ನಾಣಳ್ಕಿದೇಂ ಕಾಮನಂ
ಬುಗಳತ್ತಿತ್ತೆಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ|| ೬೩

ವ|| ಎಂದು ಮುನ್ನಮೆ ಮುಟ್ಟಿ ನುಡಿಯದೆ ಪೊಱಪೊಱಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ ಮತ್ತಮಿಂತೆಂದಳ್-

ಮ|| ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನ
ತ್ಕನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ ನೀಳ್ದ ಮಾ|
ವಿನ ಪೋೞಂದದ ಕಣ್ಗೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ
ನಿನಗಂ ಮಾಡಿದನಾವನಾತನೆ ವಲಂ ಗಂಧೇಭ ವಿದ್ಯಾಧರಂ|| ೬೪

ವ|| ಎಂದು ತನ್ನ ಮನಮನಱದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ ಸುಯ್ಡೊಡೆ-

ಕಂ|| ಉಸಿರದಿರೆ ಮನದೊಳೆರ್ದೆಯಂ
ಪಸರಿಸುಗುಂ ಮಱುಕಮದಱನೆನಗಿಂತುಟೆ ಎಂ|
ದುಸಿರುಸಿರ್ದೊಡೆ ಬಗೆ ತೀರ್ಗುಂ
ಬಿಸಿದುಂ ಬೆಟ್ಟತ್ತುಮುಸಿರದೇಂ ತೀರ್ದಪುದೇ|| ೬೫

ಪೇೞೆಂಬುದುಮಾಂ ನಿನಗೆಡೆ
ವೇೞದೆ ಪೇೞiರ್ಗೆ ಪೇೞ್ವೆನಿಂದಿನ ಬಂದಾ|
ಕಾೞiದ ವಾೞ್ತೆಗೊಂಡೊಡೆ
ಪಾೞiದುದು ಮನಮುಮೆರ್ದೆಯುಮೇನಂ ಪೇೞ್ವೆಂ|| ೬೬

ಭೋಂಕನೆ ಮನಮಂ ಕದಡಿ ಕ
ಲಂಕಿದಪುದು ಬಿಡದೆ ಮನಮನೊನಲಿಸಿದಪುದಾ|
ದಂ ಕೆಳದಿ ಪಾಣ್ಬರಂಕುಸ
ನಂಕುಸದಾ ಪೊಳಪುಮವನ ಕಣ್ಗಳ ಬೆಳ್ಪುಂ|| ೬೭

ಏಕಮ್ಮ ಧರಿಸಿಲ್ಲವಾಗಿವೆ. ನಿನ್ನ ಎದೆಯೇಕೆ ರತ್ನಹಾರದ ಗೊಂಚಲುಗಳಿಲ್ಲದೆ ಶೂನ್ಯವಾಗಿದೆ? ಈ ನಿನ್ನ ಸೊಂಟವೇಕೆ ಚಿನ್ನದ ಡಾಬಿನ ಗೆಜ್ಜೆಗಳ ಶಬ್ದವಿಲ್ಲದೆ ಮೂಕವಾಗಿದೆ. ನಿನ್ನ ಪಾದಕಮಲಗಳೇಕೆ ಈ ರೀತಿಯಲ್ಲಿ ಅರಗಿನ ರಸದ ಲೇಪನವಾಗದೆ ನಿಂತಿವೆ? ೬೩. ನಿನ್ನ ಕಣ್ಣು ನಸುಬಿಸಿಯಾದ ಕಣ್ಣೀರಿನ ಪ್ರವಾಹವನ್ನು ಸುರಿಸುತ್ತಿರುವುದೂ ತೊಂಡೆಹಣ್ಣಿನಂತಿರುವ ತುಟಿಯು ನಿಟ್ಟುಸಿರಿನ ಬೆಂಕಿಯಿಂದ ತನ್ನ ಬೆಡಗನ್ನು ಹೋಗಲಾಡಿಸಿಕೊಂಡಿರುವ ಈ ಸ್ಥಿತಿಯೂ ಇದೇಕೆ? ಸ್ನಾನ ಮಾಡದೆ ಊಟಮಾಡದೆ ಇರುವುದಕ್ಕೆ ಕಾರಣವೇನು? ಲಜ್ಜೆಯೂ ಭಯವೂ ಇದೇಕೆ? ಕಾಮಬಾಣಗಳು ನಿನ್ನನ್ನು ವ್ಯಾಪಿಸಿ ನಿಜವಾಗಿಯೂ ಮುಟ್ಟುತ್ತಿಲ್ಲವೇ? ವ|| ಎಂದು ಮೊದಲೇ ಒಳಹೊಕ್ಕು (ಅವಳ ಇಂಗಿತವನ್ನೂ ತಿಳಿದು) ಮಾತನಾಡದೆ ಮೇಲೆ ಮೇಲೆ ಬಳಸುಮಾತುಗಳನ್ನಾಡಿ ಅವಳ ಸಂದೇಹವನ್ನು ಹೋಗಲಾಡಿಸಿ ಪುನ ಹೀಗೆಂದಳು-೬೪. ಮೋಡದಂತೆ ಕಪ್ಪಾದ ಮುಂಗುರುಳುಳ್ಳ ಬಾಗೆಹೂವಿನ ಬಣ್ಣವುಳ್ಳ ನಿನ್ನ ಶರೀರಕ್ಕೆ ಮಾಸುವಿಕೆಯನ್ನೂ ಕಾಂತಿಯುಕ್ತವಾದ ಹೊಂದಾವರೆಗೆ ಸಮಾನವಾದ ಮುಖಕ್ಕೆ ವಿಶೇಷವಾದ ಬಾಡುವಿಕೆಯನ್ನೂ ನೀಳವಾದ ಮಾವಿನ ಹೋಳಿನಂತಿರುವ ಕಣ್ಣಿಗೆ ಕಣ್ಣೀರನ್ನೂ ಮನಸ್ಸಿಗೆ ದುಖವನ್ನೂ ಯಾವನು ನಿನಗುಂಟುಮಾಡಿದನೋ ಅವನೇ ನಿಜವಾಗಿಯೂ ಗಂದೇಭವಿದ್ಯಾಧರನಾದ ಅರ್ಜುನನಲ್ಲವೇ? ವ|| ಎಂದು ತನ್ನ ಮನಸ್ಸನ್ನು ತಿಳಿದು ಹೃದಯಸ್ಪರ್ಶಿಯಾಗಿ ಮಾತನಾಡಿದ ಸಖಿಯ ಮಾತಿಗೆ ಬೇರೆಯೇನನ್ನೂ ಹೇಳಲಾರದೆ ನಾಚಿಕೆಗೊಂಡು ತಲೆಯನ್ನು ಬಗ್ಗಿಸಿ ನೆಲವನ್ನು ಕಾಲಿನಿಂದ ಬರೆಯುತ್ತ ನೀರಿನಲ್ಲಿ ಮುಳುಗಿದವರ ಹಾಗೆ ಸುಮ್ಮನೆ ಬೆವರುತ್ತ ದುಖದಿಂದ ನಿಟ್ಟಿಸಿರನ್ನು ಬಿಟ್ಟಳು. ೬೫. ಆಗ ಚೂತಲತಿಕೆಯು ಸುಭದ್ರೆಯನ್ನು ಕುರಿತು, ಅಮ್ಮಾಸುಭದ್ರೆ ಮನಸ್ಸಿನಲ್ಲಿರುವುದನ್ನು ಬಾಯಿಬಿಟ್ಟು ಹೇಳದಿದ್ದರೆ ದುಖವು ಹೃದಯವನ್ನು ಆವರಿಸುತ್ತದೆ. ಆದುದರಿಂದ ನನಗೆ ಹೀಗೆ ಎಂದು ಹೇಳು; ಹೇಳಿದರೆ ಇಷ್ಟಾರ್ಥವು ಕೈಗೂಡುತ್ತದೆ. ಬಿಸಿಯಾಗಿಯೂ ಬಿರುಸಾಗಿಯೂ ಉಸಿರಾಡುವುದರಿಂದ ತೀರುತ್ತದೆಯೇ? (ನಿಟ್ಟುಸಿರಿನಿಂದ ಇಷ್ಟಾರ್ಥವಾಗುತ್ತದೆಯೇ?) ೬೬. ಹೇಳು ಎನಲು ನಾನು ನಿನಗೆ ವಿಷಯವನ್ನು ತಿಳಿಸದೆ ಬೇರೆ ಯಾರಿಗೆ ಹೇಳಲಿ. ಈ ದಿನ ಆ ಕೆಟ್ಟ ಸುದ್ದಿಯನ್ನು ಕೇಳಿದೊಡನೆಯೇ ಮನಸ್ಸೂ ಎದೆಯೂ ಹಾಳಾಯಿತು.

ಏನು ಹೇಳಲಿ ೬೭. ಎಲೆ ಸಖಿಯೇ ಪಾಣ್ಬರಂಕುಶನೆಂಬ ಬಿರುದುಳ್ಳ ಅರ್ಜುನನ (ಅರಿಕೇಸರಿಯ) ಅಂಕುಶವೆಂಬ ಹೊಳಪೂ

ಅವನ ಕಣ್ಣುಗಳ ಬಿಳುಪೂ ಇದ್ದಕ್ಕಿದ್ದ ಹಾಗೆ ಮನಸ್ಸನ್ನು ಕದಡಿ ಕಲಕಿಸುತ್ತವೆ. ಅಷ್ಟಕ್ಕೆ ಬಿಡದೆ ಮನಸ್ಸನ್ನು ವಿಶೇಷವಾಗಿ ಕೆರಳಿಸುತ್ತವೆ.

ಚಂ|| ಮನಸಿಜನಂಬರಲ್ದ ಪೊಸ ಮಲ್ಲಿಗೆ ತೆಂಕಣ ಗಾಳಿಯೆಂಬಿವಿಂ
ತನುಬಲದಿಂದಮೆನ್ನನಲೆದಪ್ಪುವವೆನ್ನನೆ ಪೆಟ್ಟುವೆರ್ಚಿ ಚಂ|
ದ್ರನ ಬಲದಿಂದಮೆನ್ನ ನಲೆದಪ್ಪುವದರ್ಕೆನಗೀಗಳೊಂದಿ ಚಂ
ದ್ರನ ಬಲಮೊಳ್ಳಿತಾಗಿ ಸಲೆಯಿಲ್ಲದೊಡಾವುದುಮೊಳ್ಳಿಕೆಯ್ಗುಮೇ|| ೬೮

ವ|| ಎಂದು ಮನದ ಮಱುಕಮುಮನೆರ್ದೆಯ ಕುದಿಪಮುಮಂ ಬಗೆಯ ಕುಱಪಮುಮಂ ಮೆಯ್ಯ ಬಡತನಮುಮನಱಯೆ ತೋಱ ನುಡಿದೊಡೆ ರಾಜಹಂಸಿ ಮಾನಸ ಸರೋವರಮನಲ್ಲದೆ ಪೆಱತನೇಕೆ ಬಯಸುಗುಂ ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಱತನೇಕೆ ಬಯಸುಗುಮೆಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟಿಂತೆಂದಳ್-

ಮ|| ನನೆಯಂಬಂ ತೆಗೆದೆಚ್ಚನಂಗಜನ ತಪ್ಪೇನಾನುಮಂ ತೋ ಕಾ
ಣ್ಬನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ ಬೇಡವಿ
ಬಿನದಂ ತಪ್ಪಲೆ ಕಲ್ಪಿತಂ ಪರಿಯದಾತಂಗೆಂದು ನಿನ್ನೀ ಮನಂ
ನಿನಗಾತಂ ದೊರೆ ನೆಟ್ಟನಾದಿ ಪುರುಷಂಗೇಕಕ್ಕ ನೀನ್ನಾಣ್ಚುವೈ||

ವ|| ನೀನಿದರ್ಕೇನುಮಂ ಬಗೆಯಲ್ವೇಡ ನಿನ್ನ ಬಗೆಯಂ ಬಗೆದಂತೆ ತೀರ್ಚುವೆನೆಂದನೇಕ ಪ್ರಕಾರ ವಚನ ರಚನೆಗಳಿಂದಾಕೆಯ ಮನಮನಾ ನುಡಿಯುತ್ತಿರ್ಪಿನಮಿತ್ತ ವಿಕ್ರಮಾರ್ಜುನನುಮೋಲಗಂ ಪರೆದಿಂಬೞಯಂ ತನ್ನ ಪವಡಿಸುವ ಮಾಡಕ್ಕೊಡನೊಡ ನೋಲಗಿಸುತ್ತುಂ ಬಂದ ಪಂಡಿಕರ್ತಳುಮನುಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ ಕಣ್ಮುಚ್ಚದೆ ತನ್ನ ಜಸದಂತೆ ಪಸರಿಸಿದಚ್ಚವೆಳ್ದಿಂಗಳನಾಕೆಯ ಕಣ್ಗಳ ಬೆಳ್ಪಿನ ತಳರ್ಪೆನುತ್ತುಂ ಪೆಳ್ಪಳಿಸಿ ಚಂದ್ರನಂ ನೋಡಿ-

ಚಂ|| ಪ್ರಿಯ ಸತಿಯಾನನೇಂದುವೊಳಮಿಂದುವೊಳಂ ಬಿದಿ ಮುನ್ನಮಾವುದಂ
ನಯದೊಳೆ ನೋಡಿ ಮಾಡಿದನದಾವುದನೆಂದಱಯಲ್ಕೆ ನಾಡೆ ಸಂ|
ದೆಯಮದು ನೀಳ ನೀರಜ ವನಂಗಳ ಚೆಲ್ವುಗಳೆಂಬುವಾ ಲತಾಂ
ಗಿಯ ಕಡೆಗಣ್ಣ ಬೆಳ್ಪುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ|| ೭೦

೬೮. ಮನ್ಮಥನ ಬಾಣ ಹೊಸಮಲ್ಲಿಗೆ ದಕ್ಷಿಣಗಾಳಿ ಇವು ಪರಸ್ಪರ ಒಟ್ಟುಗೂಡಿ ನನ್ನನ್ನು ಹಿಂಸಿಸುತ್ತವೆ. ಇವು ಚಂದ್ರಬಲದಿಂದ (ಬೆಳದಿಂಗಳಿನಿಂದ) ಮತ್ತಷ್ಟು ಕೊಬ್ಬಿ ನನ್ನನ್ನು ಮತ್ತೂ ಹಿಂಸಿಸುತ್ತವೆ. ಈಗ ನನಗೆ ಚಂದ್ರಬಲವು (ಅದೃಷ್ಟ-ಗ್ರಹಬಲ) ಸರಿಯಾಗಿಲ್ಲದಿದ್ದರೆ ಮತ್ತಾವುದು ತಾನೆ ಒಳ್ಳೆಯದನ್ನು ಮಾಡಬಲ್ಲುದು? ವ|| ಎಂದು ಮನಸ್ಸಿನ ದುಖವನ್ನೂ ಹೃದಯದ ಬೇಗೆಯನ್ನೂ ಮನಸ್ಸಿನ ಗುರಿಯನ್ನೂ ಶರೀರದ ಬಡತನವನ್ನೂ ಸ್ಪಷ್ಟವಾಗಿ ತಿಳಿಯುವ ಹಾಗೆ ನಿರ್ದೇಶನ ಮಾಡಿ ನುಡಿಯಲಾಗಿ ಆ ಸಖಿಯು ತನ್ನ ಮನಸ್ಸಿನಲ್ಲಿಯೇ ರಾಜಹಂಸಪಕ್ಷಿಯು ಮಾನಸಸರೋವರವನ್ನಲ್ಲದೆ ಬೇರೆಯದನ್ನೇಕೆ ಅಪೇಕ್ಷಿಸುತ್ತದೆ. ಕಳಹಂಸಗಮನೆಯಾದ ಸುಭದ್ರೆಯು ಸುರತಮಕರಧ್ವಜನಾದ ಅರ್ಜುನನನ್ನಲ್ಲದೆ ಇತರರನ್ನೇಕೆ ಆಶಿಸುತ್ತಾಳೆ? ಎಂದು ಯೋಚಿಸುತ್ತಿದ್ದು ಮನಸ್ಸಿನಲ್ಲಿ ಉತ್ಸಾಹಗೊಂಡು ಸಂತೋಷಪಟ್ಟು ಹೀಗೆಂದಳು- ೬೯. ಪುಷ್ಟಬಾಣವನ್ನು ಪ್ರಯೋಗಿಸಿದ ತಪ್ಪೇನನ್ನೂ ಪ್ರಕಟವಾಗಿ ತೋರುವಂತೆ ಮಾಡುದುದರಿಂದ ಬ್ರಹ್ಮನು ಮನ್ಮಥನನ್ನು ತಪ್ಪಿತಸ್ಥನನ್ನಾಗಿಯೇ ಮಾಡಿದಂತಾಗಿದೆ. ಈ ಆರೋಪಿತವಾದ ವಿನೋದವೂ ತಪ್ಪಾಗುವುದಿಲ್ಲವೇ? ನಿನ್ನ ಮನಸ್ಸು ಆತನನ್ನು ಬಿಟ್ಟು ಹರಿಯದು. ನಿನಗೆ ಅವನೇ ಸರಿಸಮಾನನಾಗಿರುವವನು. ಆದಿಪುರುಷನಾದ ಅರಿಕೇಸರಿಯ ವಿಷಯದಲ್ಲಿ ಏತಕಕ್ಕ ಲಜ್ಜೆಪಡುತ್ತೀಯೇ? ವ|| ನೀನು ಇದಕ್ಕೆ ಏನೂ ಚಿಂತಿಸಬೇಡ. ನಿನ್ನ ಇಷ್ಟಾರ್ಥವನ್ನು ಇಷ್ಟಾರ್ಥದಂತೆಯೇ ತೀರಿಸುತ್ತೇನೆ ಎಂದು ಅನೇಕ ರೀತಿಯ ಮಾತಿನ ಚಮತ್ಕಾರಗಳಿಂದ ಅವಳ ಮನಸ್ಸು ತೃಪ್ತಿಪಡುವಂತೆ ನುಡಿಯುತ್ತಿರಲು ಈ ಕಡೆ ವಿಕ್ರಮಾರ್ಜುನನಾದ ಅರಿಕೇಸರಿಯು ಸಭೆಯು ವಿಸಜರ್ನೆಯಾದ ಬಳಿಕ ಮಲಗುವ ಮನೆಗೆ ಬಂದನು. ತನ್ನ ಜೊತೆಯಲ್ಲಿಯೇ ಅನುಸರಿಸಿ ಬರುತ್ತಿದ್ದ ಪಂಡಿತರುಗಳನ್ನು ಉಚಿತವಾದ ಸತ್ಕಾರಗಳಿಂದ ವಿಸರ್ಜನೆ ಮಾಡಿದನು. ಸುಭದ್ರೆಯ ಸೌಂದರ್ಯವು ತನ್ನ ಕಣ್ಣಿನಲ್ಲಿ ತನ್ನ ಕಣ್ಣಿನ ಗುಡ್ಡೆಯಂತೆಯೇ ಸುತ್ತಾಡುತ್ತಿರಲು ಕಣ್ಣನ್ನು ಮುಚ್ಚದೆ ತನ್ನ ಯಶಸ್ಸಿನಂತೆ ಪ್ರಸರಿಸಿದ್ದ ಸ್ವಚ್ಛವಾದ ಬೆಳುದಿಂಗಳನ್ನು ಆಕೆಯ ಕಣ್ಣುಗಳ ಬಿಳಿಯ ಬಣ್ಣದ ಚಲನೆಯೆಂದೇ ಭಾವಿಸಿ ಹೆದರಿದನು. ಚಂದ್ರನನ್ನು ನೋಡಿ ೭೦. ಚಂದ್ರನೂ ಪ್ರಿಯಸತಿಯಾದ ಸುಭದ್ರೆಯ ಮುಖಚಂದ್ರನೂ ಒಂದೇ ರೀತಿಯಲ್ಲಿವೆ. ಬ್ರಹ್ಮನು ಇವುಗಳಲ್ಲಿ ಯಾವುದನ್ನು ಮಾದರಿಯಾಗಿ ಮೊದಲು ಮಾಡಿದನು.? ತಿಳಿಯುವುದಕ್ಕೆ

(ಈ ಪದ್ಯದ ಅರ್ಥ ಸ್ಪಷ್ಟವಿಲ್ಲ. ಇದರರ್ಥ ಹೀಗಿದ್ದರೂ ಇರಬಹುದು – ಬ್ರಹ್ಮನು ಸುಭದ್ರೆಗೆ ಅರ್ಜುನನ ವಿಷಯದಲ್ಲಾದ ಮನ್ಮಥಚೇಷ್ಟೆಯನ್ನು ಸ್ವಭಾವಸಹಜವನ್ನಾಗಿ ಮಾಡಿ ಕಲ್ಪಿತವೆನ್ನುವ ಹಾಗೆ ಮಾಡಬಾರದಾಗಿತ್ತು. ಹೇಗಾದರೂ ನಿನಗೆ ಅವನೂ ಅವನಿಗೆ ನೀನು ಸಮಾನರಾಗಿರುವವರು.)

ವ|| ಅದಲ್ಲದೆಯುಂ-

ಉ|| ಆ ನವ ಮಾಳಿಕಾ ಕುಸುಮ ಕೋಮಳೆ ರಾಗ ರಸ ಪ್ರಪೂರ್ಣಂ ಚಂ
ದ್ರಾನನ ಲಕ್ಷ್ಮಿಯಿಂ ನಭದೊಳಿರ್ದಮೃತಾಂಶುವಿನುದ್ಘಕಾಂತಿ ಸಂ|
ತಾನಮನಾವಗಂ ತನಗೆ ಮಾಡಿದಳೆಂದೊಡೆ ತದ್ಗ ಹಾಂತರೋ
ದ್ಯಾನಸರಸ್ಸರೋಜರುಚಿಯೆಂಬುದಿದಾಕೆಯ ಕೆಯ್ಯದೆನ್ನಿರೇ|| ೭೧

ವ|| ಎಂದು ತನ್ನ ಮನಮುಮನೆರ್ದೆಯುಮನು ಸೆವಿಡಿದಿರ್ದಪೂರ್ವ ರೂಪೆಯ ರೂಪಮಂ ಮನದೊಳೆ ಬಗೆದು ಭಾವಿಸಿ ಮತ್ತಮಿಂತೆಂದಂ-

ಚಂ|| ಕುಸುರಿಯ ರೂಪನೆಯ್ದೆ ಪೊಗೞಲ್ಕಱಯೆಂ ನಡು ಪುರ್ವು ಬಾಸೆ ಕ
ಣ್ಗೊಸಗೆಯನುಂಟುಮಾೞ್ಪ ಜಘನಂ ಬೆಳರ್ವಾಯ್ ಮೊಲೆಗಳ್ ಕದಂಪುಗು|
ರ್ವಸಿಱನೆ ನೋಡೆ ಮೊಕ್ಕಳಮದಾರ್ ನಡೆ ನೋೞ್ಪೊಡಮಂತುಮಿಂತುಂ ಮೂ
ಱಸಿಯವು ಮೂಱು ದೊಡ್ಡಿದುವು ಮೂಡೆ ತೆಳ್ಳಿದುವಂಬುಜಾಕ್ಷಿಯಾ|| ೭೨

ಕಂ|| ಮೃಗಶಿಶುನೇತ್ರೆಯ ನಡುವೆರ್ದೆ
ಯುಗುರ್ಗಳ್ ಕರಮಸಿದು ಕನಕ ಕಾಂಚೀ ನಿನದ|
ಪ್ರಗಣಿತಮಗಲ್ದ ನಲ್ಲಳ
ಜಗನಮಿದೆನ್ನೆರ್ದೆಯನೆಂತು ಪೊಕ್ಕಳಿಪುವುದೋ|| ೭೩

ವ|| ಎಂದು ಸೈರಿಸದೆ-

ಮ|| ಮೊಲೆಗಳ್ ಬಟ್ಟಿದುವಾಗಿ ಕರ್ಗಿದ ಕುರುಳ್ ಕೊಂಕಾಗಿ ಕಣ್ಗೆಯ್ದೆ ನೀ
ಳ್ದರ್ಗಣ್ಗಳ್ ಚಪಳಂಗಳಾಗಿ ಜಘನಂ ಕಾಂಚೀ ಕಳಾಪ ಪ್ರಭೋ|
ಜ್ಜ ಲಮುಧ್ವ ತ್ತಮುಮಾಗಿ ತಾಮಲೆಗೆ ಮಧ್ಯಸ್ಥಂಗಳಾಗಿರ್ದುವ
ಕ್ಕಲೆಯಲ್ ತಕ್ಕುದೆ ಕೆನ್ನಮಾ ತ್ರಿವಳಿಗಳ್ಗೆನ್ನಂ ಸರೋಜಾಕ್ಷಿಯಾ|| ೭೪

ಸಂದೇಹವಾಗಿದೆ. ಕನ್ನೆ ದಿಲೆಯ ತೋಟದ ಸೌಂದರ್ಯವೆಂಬುದು ಲಂತಾಗಿಯಾದ ಆ ಸುಭದ್ರೆಯ ಕಡೆಗಣ್ಣುಗಳ ಬಿಳಿಯ ಕಾಂತಿಯಲ್ಲಿ ಸಿಕ್ಕಿ ಹೆಣೆದುಕೊಂಡಿರುವ ಬಿಡಿಸಲಾಗದ ಸಿಕ್ಕಲ್ಲವೇ? ವ|| ಅದೂ ಅಲ್ಲದೆ- ೭೧. ಆ ಹೊಸದಾದ ಪುಷ್ಪಮಾಲಿಕೆಯ ಹೂವಿನಂತೆ ಕೋಮಲವಾಗಿರುವ ಆ ಸುಭದ್ರೆಯು ತನ್ನ ಪ್ರೀತಿರಸದಿಂದ (ಕೆಂಪು ಬಣ್ಣದಿಂದ) ತುಂಬಿದ ಮುಖಚಂದ್ರನ ಕಾಂತಿಯಿಂದ ಆಕಾಶದಲ್ಲಿರುವ ಚಂದ್ರನ ಉತ್ತಮವಾದ ಕಾಂತಿಯ ಸಮೂಹವನ್ನು ತನ್ನದ್ದನ್ನಾಗಿ ಮಾಡಿಕೊಂಡಿದ್ದಾಳೆ ಎನ್ನುವಾಗ ಅವಳಿರುವ ಮನೆಯ ಉದ್ಯಾನದಲ್ಲಿರುವ ಕೊಳಗಳ ತಾವರೆಯ ಕಾಂತಿಯು ಆಕೆಯ ಅನದಲ್ಲಿರುವ ವಸ್ತು ಎಂದು ಹೇಳಲಾಗುವುದಿಲ್ಲವೇ? ವ|| ಎಂದು ತನ್ನ ಮನಸ್ಸನ್ನೂ ಹೃದಯವನ್ನೂ ಪೂರ್ಣವಾಗಿ ಸೆರೆಹಿಡಿದಿದ್ದ ಅಪೂರ್ವ ಸೌಂದರ್ಯದಿಂದ ಕೂಡಿದ ಆಕೆಯ ರೂಪವನ್ನು ತನ್ನ ಮನಸ್ಸಿನಲ್ಲಿ ಯೋಚಿಸಿಕೊಂಡು ಪುನ ಭಾವಿಸಿ ಹೀಗೆಂದನು- ೭೨. ಹೂವಿನ ಸೂಕ್ಷ್ಮಕೇಸರಗಳಂತಿರುವ ಅವಳ ಸೌಂದರ್ಯವನ್ನು ಹೊಗಳಲು ನನಗೆ ಶಕ್ಯವಿಲ್ಲ. ಇಷ್ಟುಮಾತ್ರ ಹೇಳಬಲ್ಲೆ : ಅವಳ ಸೊಂಟ, ಹುಬ್ಬು, ಹೊಟ್ಟೆಯ ಮೇಲಿನ ಕೂದಲಿನ ಸಾಲು, ಕಣ್ಣು, ಹಬ್ಬವನ್ನುಂಟುಮಾಡುವ ಪಿರ್ರೆಗಳು, ಬೆಳ್ಳಗಿರುವ ಬಾಯಿ, ಮೊಲೆಗಳು, ಕೆನ್ನೆ, ಉಗುರು, ಹೊಟ್ಟೆ ಇವುಗಳನ್ನು ಯಾರಾದರೂ ದೃಷ್ಟಿಸಿ ನೋಡಿದರೂ ಕಮಲಾಕ್ಷಿಯಾದ ಆ ಸುಭದ್ರೆಯ (ಮೇಲೆ ನಿರೂಪಿಸಿರುವ) ಅಂಗಗಳಲ್ಲಿ ಮೂರು ಕೃಶವಾದುವು, ಮೂರು ದಪ್ಪವಾದುವು, ಮೂರು ತೆಳುವಾದುವು. ೭೩. ಹುಲ್ಲೆಯ ಮರಿಯ ಕಣ್ಣುಗಳಂತೆ ಕಣ್ಣುಳ್ಳ ಸುಭದ್ರೆಯ ಸೊಂಟ, ಎದೆ, ಉಗುರುಗಳು ವಿಶೇಷ ತೆಳುವಾಗಿರುವುವು. ಚಿನ್ನದ ಡಾಬಿನ ಸದ್ದಿನ ಸಮೂಹವಿಲ್ಲದ ಪ್ರಿಯೆಯ ಜಘನಗಳು ನನ್ನ ಹೃದಯವನ್ನು ಪ್ರವೇಶಿಸಿ ಪ್ರೀತಿಯನ್ನುಂಟುಮಾಡುತ್ತಿವೆಯೋ? ವ|| ಎಂಬುದಾಗಿ ಸೈರಿಸಲಾರದೆ- ೭೪. ಅವಳ ದುಂಡುಮೊಲೆಗಳು ಕಪ್ಪಾದ ಕುರುಳುಗಳು ಕಣ್ಣಿನವರೆಗೆ ಕೊಂಕಾಗಿಯೂ ಉದ್ದವಾಗಿಯೂ ಬೆಳೆದು ಹೂವಿನಂತಿರುವ ಚಂಚಲವಾದ ಕಣ್ಣುಗಳು ಡಾಬಿನ ಕಾಂತಿಯ ಸಮೂಹದಿಂದ ಕೊಬ್ಬಿ ಬೆಳೆದ ಜಘನಗಳು ನನ್ನನ್ನು ಪೀಡಿಸುವುದಂತಿರಲಿ; ಕಮಲದಂತಿರುವ ಆ ಸುಭದ್ರೆಯ ಮಧ್ಯಪ್ರದೇಶದ ತ್ರಿವಳಿಗಳು ನನ್ನ ಮನಸ್ಸನ್ನು ವಿಶೇಷವಾಗಿ ಕಲಕಲು ಯೋಗ್ಯವಾಗಿವೆ. ಎಂಬುದಾಗಿ ಸ್ವಲ್ಪ ಹೊತ್ತು ಜ್ಞಾನಶೂನ್ಯನಾದಂತೆ ಹಲುಬಿ ಹಂಬಲಿಸಿ ಪುನ ಹಾವ, ಭಾವ, ವಿಳಾಸ, ವಿಭ್ರಮ, ಕಟಾಕ್ಷ ದೃಷ್ಟಿಗಳ ಮನಸ್ಸನ್ನು ಒಲಿಸಿಯೂ ಎದೆಯನ್ನು ಕಲಕಿಯೂ ಮನ್ಮಥನೆಂಬ ಆನೆಯಿಂದ

ವ|| ಎಂದು ಕಿಱದುಂ ಬೇಗಮಱಮರುಳಂತು ಪಲುಂಬಿ ಪಂಬಲಿಸಿ ಮತ್ತಮಾಕೆಯ ಹಾವ ಭಾವ ವಿಳಾಸ ವಿಭ್ರಮ ಕಟಾಕ್ಷೇಕ್ಷಂಗಳ್ ಮನಮನೊನಲಿಸೆಯುಮೆರ್ದೆಯಂ ಕನಲಿಸೆಯು ಮನಂಗ ಮತಂಗಜ ಕೋಳಾಹಳಾಕುಳೀಕೃತಾಂತರಂಗನಾಗಿ-

ವ|| ಜಂಗಮಂ ಮಾಡಿದ ಪದ್ಮಜಂ ಪಡೆದನಿಲ್ಲೀ ಕನ್ನೆಯಂ ಮಾಡುವ
ಲ್ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜಮಿಮ್ಮಾವು ಮ|
ಲ್ಲಿಗೆಯೆಂದಿಂತಿವನೞ್ಕಱಂದಮರ್ದಿನೊಳ್ ತಾನೞಯಿಂ ತೊಯ್ದು ಮೆ
ಲ್ಲಗೆ ಸಂದಂಗಜನೆಂಬಜಂ ಪಡೆದನಂತಾ ಕಾಂತಿಯಿಂ ಕಾಂತೆಯಂ|| ೭೫

ವ|| ಅಂತಲ್ತಪ್ಪಂದಾ ಕಾಂತೆಯಂ ವಿಧಾತ್ರಂ ಮಾಡುವಂದು ಕೊಸಗಿನ ಕೇಸರಂಗಳನಮೃತರಸದೊಳಂ ಶೃಂಗಾರರಸದೊಳಂ ಭಾವಿಸಿ ರಸಸಿದ್ಧಮಪ್ಪ ಪೊನ್ನ ಲತೆಯ ಮೆಯ್ಯುಮಂ ನೀಲದ ತಲೆನವಿರುಮಂ ಪವಳದ ಬಾಯ್ದೆಯುಮಂ ಮುತ್ತಿನ ಪಲ್ಲುಮಂ ರಾಜಾವರ್ತದ ಸೆಳ್ಳುಗುರುಮಂ ಧೂಪದ ಸುಯ್ಯುಮಂ ರತಿಯ ಸೌಭಾಗ್ಯಮುಮಂ ಸೀತೆಯ ಸೈರಣೆಯುಮನದ್ರಿಜಾತೆಯ ಶೃಂಗಾರಮುಮಂ ಮನೋಮಥನ ಮದನ ಮೋಹನ ಸಂತಾಪನ ವಶೀಕರಣಂಗಳೆಂಬ ಕಾಮದೇವನಯ್ದಲರಂಬಿನ ಶಕ್ತಿಗಳುಮನೊಂದುಮಾಡಿ ಲೋಕಮೆಲ್ಲಂ ಮರುಳ್ಮಾಡಲೆಂದು ಪೆಣ್ಮಾಡಿದನಕ್ಕುಮೆಂದು ಮತ್ತಮಾಕೆಯ ನೋಡಿದ ನೋಟಮಂ ಭಾವಿಸಿ

ಚಂ|| ನೆಗೊಳೆ ಗಾಡಿ ನೋೞ್ಪ ಬಗೆ ಬರ್ಪುದುಮಾನೆ ದಲಂದು ದಂತಿಯಂ
ನಿಱಸಿ ಮರಲ್ದು ನೋಡುವುದುಮೆನ್ನುಮನಾ ಸತಿ ಸೋಲದತ್ತ ಮ|
ತ್ತೆಱಗಿ ಬೞಲ್ದು ಜೋಲ್ದಳಿಪಿ ನೋಡಿದಳಿಂತೆಲೆ ಸತ್ತ ಪೊತ್ತ ಕ
ಣ್ಣಱಯದ ಬೆಳ್ಳನಲ್ಲೆನಱದೆಂ ಧವಳಾಕ್ಷಿಯ ನೋಟದಂದಮಂ|| ೭೬

ಹರಣೀಪ್ಲುತ || ದಳಿತ ಕಮಲಚ್ಛಾಯಾಟೋಪಂ ಮನೋಜ ರಸ ಪ್ರಭಾ
ವಳಯ ನಿಳಯಂ ಪ್ರೋದ್ಯದ್ಭ್ರೂವಿಭ್ರಮಂ ಮುಕುಳೀಕೃತಂ||
ಲಳಿತ ಮಧುರಂ ಲಜ್ಜಾಳೋಳಂ ಸ್ಮರಾಕುಳಿತಂ ಮನಂ
ದಳಿತಮಪಸನ್ಮುಗ್ಧಂ ಸ್ನಿಗ್ಧಂ ವಿಳೋಕನಮೋಪಳಾ|| ೭೭

ಚಂ|| ಉಡಮೊಗಮೆಂಬ ತಾವರೆಯ ನೀಳ್ದೆಸೞೊಳ್ ಮಱದುಂಬಿ ಪಾಯ್ದೊಡಂ
ಬಡನೊಳಕೊಂಡು ಕಣ್ಮಲರ ಬೆಳ್ಪುಗಳಾಲಿಯ ಕೞನೊಳ್ ಪೊದ|
ಳ್ದೊಡನೊಡನೋಡುವಟ್ಟೆನಗೆ ಸಂತಸಮಂ ಮಱುಕಕ್ಕೆ ಮಾಣ್ದೊಡೀ
ನಡೆಗಿಡೆ ಸತ್ಯಮಂ ತಮಮುಮಂ ಕಡೆಗಣ್ಣೊಳೆ ಕಂಡೆನೋಪಳಾ|| ೭೮



ಕೋಳಾಹಳ ಮಾಡಲ್ಪಟ್ಟ ಮನಸ್ಸುಳ್ಳವನಾಗಿ ೭೫. ಲೋಕವನ್ನೇ ಸೃಷ್ಟಿಸಿದ ಬ್ರಹ್ಮನು ಈ ಕನ್ಯೆಯನ್ನು ಸೃಷ್ಟಿಸಿರಲಾರ; ಇಷ್ಟು ಕಾಂತಿಯುಕ್ತಳಾದ ಈ ಕನ್ಯೆಯನ್ನು ಮನ್ಮಥನೆಂಬ ಬ್ರಹ್ಮನು ಸೃಷ್ಟಿಸುವಾಗ ಚಂದ್ರ, ಮಲಯಮಾರುತ, ಶ್ರೀಗಂಧ, ತಾವರೆ, ಸಿಹಿಮಾವು, ಮಲ್ಲಿಗೆ ಇವುಗಳನ್ನು ತನಗೆ ತೃಪ್ತಿಯಾಗುವವರೆಗೆ ಒಟ್ಟುಗೂಡಿಸಿ ಪ್ರೀತಿಯಿಂದ ಅಮೃತದಲ್ಲಿ ನೆನೆಯಿಸಿ ಅವಳನ್ನು ಸೃಷ್ಟಿಸಿರಬೇಕು. ವ|| ಹಾಗಿಲ್ಲದ ಪಕ್ಷದಲ್ಲಿ ಈ ಕಾಂತೆಯನ್ನು ಬ್ರಹ್ಮನು ಮಾಡುವರೆ ಬೆಟ್ಟದಾವರೆಯ ಎಸಳುಗಳನ್ನು ಅಮೃತರಸದಲ್ಲಿಯೂ ಶೃಂಗಾರರಸದಲ್ಲಿಯೂ ನೆನೆಯಿಸಿ ರಸವಿದ್ಯೆಯಿಂದ ಸಿದ್ಧವಾಗಿರುವ ಚಿನ್ನದ ಬಳ್ಳಿಯಂತಿರುವ ಮೈಯನ್ನೂ ಕಪ್ಪಗಿರುವ ತಲೆಗೂದಲನ್ನೂ ಹಳವದಂತಿರುವ ತುಟಿಯನ್ನು ಮುತ್ತಿನಂತಿರುವ ಹಲ್ಲನ್ನೂ ಎಳೆನೀಲದಂತಿರುವ ತೆಳುವಾದ ಉಗುರುಗಳನ್ನೂ ಧೂಪದ ವಾಸನೆಯಿಂದ ಕೂಡಿದ ಉಸಿರನ್ನೂ ಸೀತಾದೇವಿಯ ಸಹನ ಸ್ವಭಾವವನ್ನೂ ಗೌರೀದೇವಿಯ ಶೃಂಗಾರವನ್ನೂ ಮನ್ಮಥನ ಮನೋಮಥನ (ಮನಸ್ಸನ್ನು ಕಲಕುವಿಕೆ) ಮದನ (ಕಾಮೋದ್ರೇಕವನ್ನುಂಟು ಮಾಡುವಿಕೆ) ಮೋಹನ (ಪರವಶವನ್ನಾಗಿಸುವಿಕೆ) ಸಂತಾಪನ (ದುಖನ್ನುಂಟುಮಾಡುವಿಕೆ) ವಶೀಕರಣ (ತನ್ನದನ್ನಾಗಿ ಮಾಡಿಕೊಳ್ಳುವಿಕೆ) ಎಂಬ ಅಯ್ದು ಪುಷ್ಪಬಾಣಗಳ ಶಕ್ತಿಗಳನ್ನು ಒಂದುಗೂಡಿಸಿ ಲೋಕವನ್ನೆಲ್ಲ ಹುಚ್ಚು ಮಾಡುವುದಕ್ಕೋಸ್ಕರ ಸ್ತ್ರೀಮೂರ್ತಿಯನ್ನಾಗಿ ಮಾಡಿರಬೇಕು ಎಂದು ಭಾವಿಸಿ ಪುನ ಆಕೆಯ ನೋಟದ ನೋಟವನ್ನು ಮನಸ್ಸಿನಲ್ಲಿ ಭಾವಿಸಿಕೊಂಡು ೭೬. ಅವಳ ಸೌಂದರ್ಯವು ನನ್ನನ್ನು ಪೂರ್ಣವಾಗಿ ಆಕರ್ಷಿಸಿತು. ನಾನೇ ಆ ಆನೆಯನ್ನು ನಿಲ್ಲಿಸಿ (?) ಪುನ ಅವಳನ್ನು ನೋಡಿದೆನು. ಆ ಸ್ತ್ರೀಯು ನನ್ನನ್ನೂ ಪ್ರೇಮದ ಕಡೆಗೆ ಬಾಗಿಸಿ ತಾನೂ ನನಗೆ ಸೋತು ಪ್ರೀತಿಯಿಂದ ನೋಡಿದಳು. ಬೆಳ್ಳಗಿರುವ ಕಣ್ಣುಳ್ಳ ಆ ಸುಭದ್ರಯ ದೃಷ್ಟಿಯ ಮರ್ಮವನ್ನು ತಿಳಿಯದ ಜ್ಞಾನ ಶೂನ್ಯನಾದ ಬೆಪ್ಪನು ನಾನಲ್ಲ, ೭೭. ಪ್ರಿಯಳಾದ ಸುಭದ್ರೆಯ ನೋಟವು ಅರಳಿದ ಕಮಲದ ಬಣ್ಣವುಳ್ಳದ್ದು ; ಪ್ರೇಮರಸದ ಕಾಂತಿಸಮೂಹಕ್ಕೆ ಆವಾಸಸ್ಥಾನವಾದುದು. ಎತ್ತಿದ ಹುಬ್ಬಿನ ವೈಭವವುಳ್ಳದ್ದು ; ಮೊಗ್ಗಾಗಿ ಮಾಡಲ್ಪಟ್ಟುದು; ಸುಂದರವೂ ಮಧುರವೂ ಆದುದು; ಲಜ್ಜೆಯಲ್ಲಿ ಆಸಕ್ತವಾದುದು; ಮನ್ಮಥನಿಂದ ಬಾಸಲ್ಪಟ್ಟುದು; ಮನಸ್ಸನ್ನು ಸೀಳಿರುವುದು; ಮುಗ್ಧತೆಯಿಲ್ಲದುದು (ಸರಳವಾದುದು) ನಯವಾದುದು. ೭೮. ಬಾಗೆಯ ನಕ್ಷತ್ರದ ಮುಖ ಎಂಬಂತಿರುವ ಅವಳ

ಚಂ|| ಒದವಿದ ಬೇಟವಪ್ಪೊಡೆನಗತ್ತಳಗಂ ಬಗೆವೇೞ್ವೊಡೆನ್ನ ಮೇ
ಳದ ಕೆಳೆಯರ್ಕಳಿಲ್ಲವಳುಮಪ್ಪೊಡೆ ಜವ್ವನಮತ್ತೆ ನಾಣ ಕಾ|
ಪದು ಪಿರಿದೋತು ಮಾತಡಕಲೊಂದಿದ ದೂದವರಿಲ್ಲ ನೆಟ್ಟನ
ಪ್ಪುದಱನದಿಂತರಣ್ಯರುದಿತಂ ವಲವೆನ್ನೊಲವಿಂದುವಕ್ತ್ರೆಯಾ|| ೭೯

ವ|| ಎಂದಿಂತು ನಲ್ಲಳಂ ನೆನೆದು ಕಣ್ಗಾಪನೆ ಕಾದು ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಱದೆ ಪೊೞಲಂ ತೊೞಲ್ದು ನೋೞೞ ಬಗೆದಂದು ರಾಜಮಂದಿರದಿಂ ಪೊಱಮಟ್ಟು ಬರೆ ತನ್ನಂ ಕಾಣಲೊಡಮಱದು ನುಡಿಯಿಸಿ ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ ಪೀಠಮರ್ದಕರ್ಕಳ್ವೆರಸು ಕಾಮದೇವನೋಲಗಕ್ಕೆ ಬರ್ಪಂತೆ ಸೂಳೆಗೇರಿಯೊಳಗನೆ ಬರ್ಪುದುಮಲ್ಲಿ-

ಮ|| ಮೃಗಭೂಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊತ್ತು ಮ
ಲ್ಲಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸ್ವೇದ ಬಿಂ|
ದುಗಳೊಳ್ ನಾಂದು ಕುರುಳ್ಗಳೊಳ್ ಸುೞದು ಮುಂದೊಂದಿರ್ದ ಸೌಭಾಗ್ಯ ಘಂ
ಟೆಗಳೊಂದಿಂಚರದೊಳ್ ಪಳಂಚಿ ಸುೞದತ್ತಂದೊಂದು ಮಂದಾನಿಳಂ|| ೮೦

ವ|| ಆಗಳಾಱುಂ ಋತುಗಳ ಪೂಗಳನೊಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದೋಜನ ಸಾಲೆಯಿರ್ಪಂತಿರ್ದ ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ-

ವ|| ಎತ್ತಿದ ತೋಳ ಮೊತ್ತಮೊದಲಂಗಜ ಲಂಪಟ ವಿದ್ದೆಗೆತ್ತಿದಂ
ತೆತ್ತಮಪೂರ್ವಮಾಗೆ ಪೊಸವಾಸಿಗಮಂಗಜ ಚಕ್ರವರ್ತಿಗೆಂ|
ದೆತ್ತಿದ ವಿನಕೇತನಮನೋತ್ತರಿಸುತ್ತಿರೆ ಚಲ್ಲವಾಡಿ ಪೂ
ವೆತ್ತುವ ಮಾಲೆಗಾರ್ತಿಯರನೆಂದರಿಕೇಸರಿ ನಿಂದು ನೋಡಿದಂ|| ೮೧

ಮುಖವೆಂಬ ತಾವರೆಯ ದೀರ್ಘವಾದ ಎಸಳುಗಳಲ್ಲಿ ಮರಿದುಂಬಿಯು ಹೋಗಿ ಸೇರಿ ಸಮನ್ವಯಗೊಂಡಿರುವಂತೆ ಹೂವಿನಂತಿರುವ ಅವಳ ಕಣ್ಣಿನ ಬಿಳಿಯ ಬಣ್ಣವು ಗುಡ್ಡೆಯ ಕಪ್ಪು ಬಣ್ಣದಲ್ಲಿ ಹೊಂದಿಕೊಂಡು ಅವಳನ್ನೇ ನೋಡುತ್ತಿರುವ ನನಗೆ ಸಂತೋಷವನ್ನೂ ದುಖವನ್ನೂ ಸ್ಥಿರೀಕರಿಸಿರುವುದರಿಂದ ನಾನು ಅವಳ ಕಡೆಗಣ್ಣಿನಲ್ಲಿ ಸತ್ವತಮೋಗುಣಗಳನ್ನು ಏಕತ್ರ ನೋಡುತ್ತಿದ್ದೇನೆ. ೭೯. ನನಗೆ ಈಗ ಉಂಟಾಗಿರುವ ಪ್ರೇಮವಾದರೋ ಸಹಿಸಲಶಕ್ಯವಾದುದು. ಮನಸ್ಸನ್ನವಳಿಗೆ ತಿಳಿಸೋಣವೆಂದರೆ ಆಪ್ತ ಸ್ನೇಹಿತರಿಲ್ಲ ; ಸುಭದ್ರೆಯಾದರೋ ಯವ್ವನದಿಂದ ಮದಿಸಿರುವವಳು; ಅವಳಿಗೆ ಲಜ್ಜೆಯ ತಡೆ ವಿಶೇಷವಾಗಿದೆ. ಪ್ರೀತಿಸಿ ಸಂವಾದ ಸರಣಿಯನ್ನುಂಟುಮಾಡೋಣವೆಂದರೆ ಮಧ್ಯವರ್ತಿಗಳಾದ ಸಖಿಯರಿಲ್ಲ. ಆದುದರಿಂದ ಸುಭದ್ರೆಗೆ ಸಂಬಂಸಿದ ನನ್ನ ಪ್ರೇಮವು ನಿಜವಾಗಿಯೂ ಕಾಡಿನಲ್ಲಿ ಅತ್ತಂತೆಯೇ ಆಗಿದೆ. ವ|| ಹೀಗೆ ಅರ್ಜುನನು ಪ್ರಿಯಳನ್ನು ಜ್ಞಾಪಿಸಿಕೊಂಡು ಅವಳು ತನ್ನನ್ನು ನೋಡುವುದನ್ನು ನಿರೀಕ್ಷಿಸುತ್ತಾ ಚಿಂತಾಸಮುದ್ರದ ಮಧ್ಯದಿಂದ ಸುತ್ತುವರಿಯಲ್ಪಟ್ಟವನಾಗಿ ಸಹಿಸಲಾರದೆ (ಮನಶಾಂತಿಗಾಗಿ) ನಗರವನ್ನಾದರೂ ಸುತ್ತ ನೋಡಿ ಬರೋಣವೆಂದು ಮನಸ್ಸು ಮಾಡಿದನು. ಅರಮನೆಯಿಂದ ಹೊರಟು ಬರುತ್ತಿದ್ದಂತೆಯೇ ತನ್ನನ್ನು ಕಂಡು ತಕ್ಷಣವೇ ಗುರುತಿಸಿ ಮಾತನಾಡಿ ಮೆಚ್ಚಿದ ಜೊತೆಗಾರರಾದ ನಾಗರಿಕ (ಜಾಣನಾದ ಪಟ್ಟಣದವನು) ವಿಟ (ಸ್ತ್ರೀಲೋಲರಾದ ರಾಜಕುಮಾರರ ಸ್ನೇಹಿತ) ವಿದೂಷಕ (ಹಾಸ್ಯಗಾರ) ಪೀಠಮರ್ದಕ (ಸ್ತ್ರೀ ಸಂಪಾದನೆಯಲ್ಲಿ ರಾಜಕುಮಾರರಿಗೆ ಸಹಾಯ ಮಾಡುವವನು) ರೊಡಗೂಡಿ ಮನ್ಮಥನ ಸಭಾಸ್ಥಾನಕ್ಕೆ ಬರುವಂತೆ ಸೂಳೆಗೇರಿಯೊಳಭಾಗದಲ್ಲಿ ಬಂದನು. ೮೦. ಅಲ್ಲಿಯ ಸುಂದರ ಸ್ತ್ರೀಯರ ತುರುಬಿನಲ್ಲಿ ವಿಶೇಷವಾಗಿ ಲೇಪಿಸಿಕೊಂಡಿದ್ದ ಕಸ್ತೂರಿಯ ಕಂಪನ್ನು ಧರಿಸಿ ಮಲ್ಲಿಗೆಯ ಹೂವಿನ ಸುಗಂಧದಲ್ಲಿ ಸೇರಿಕೊಂಡು ಧೂಪಗಂಧದಲ್ಲಿ ವ್ಯಾಪಿಸಿ ಆ ಸ್ತ್ರೀಯರ ರತಿಕ್ರೀಡೆಯಿಂದಾದ ಬೆವರ ಹನಿಯಲ್ಲಿ ತೊಯ್ದು ಮುಂಗುರುಳುಗಳಲ್ಲಿ ಸುತ್ತಾಡಿ ವೇಶ್ಯಾಗೃಹದ ಮುಂದೆ ಕಟ್ಟಿದ ಇಂಪಾದ ಘಂಟಾನಾದವನ್ನು ತಗುಲಿ ಒಂದು ಮಂದಮಾರುತವು ಸುಳಿದಾಡಿತು. ವ|| ಆಗ ಆರು ಋತುಗಳ ಹೂವುಗಳನ್ನೂ ಒಟ್ಟುಗೂಡಿಸಿ ತನ್ನ ಪುಷ್ಪಬಾಣಗಳನ್ನು ಸಿದ್ಧಪಡಿಸಬೇಕೆಂದು ಕಾಮದೇವನು ಮಾಡಿದ ಅಕ್ಕಸಾಲೆಯ ಮನೆಯ ಹಾಗಿದ್ದ ಹೂವಿನ ಸಂತೆಯು ಕಂಡಿತು. ಹೂವಿನ ಸಮೂಹದ ಮಧ್ಯೆ ಇರುವ ವಸಂತ ಋತುವಿನ ಅದೇವತೆಯಂತೆ ಮಾಲೆಗಾತಿಯರು ೮೧. ಎತ್ತಿದ ಬಾಹುಮೂಲವು ಮನ್ಮಥನು ಗಾಳಿಪಟವಾಡಿಸುವಂತೆ ಆಡಿಸಲು ಎತ್ತಿದ ಅಪೂರ್ವ ಸೌಂದರ್ಯದಿಂದ ಕೂಡಿರಲು ಹೊಸದಾಗಿ ಕಟ್ಟಿದ ಹಾರವು ಮನ್ಮಥ ಚಕ್ರವರ್ತಿಗೆಂದೆತ್ತಿದ ಮೀನಧ್ವಜವನ್ನು ತಿರಸ್ಕರಿಸುತ್ತಿರಲು ಸರಸಸಲ್ಲಾಪಗಳಿಂದ ಹೂವನ್ನು ಎತ್ತಿ ತೋರಿಸುತ್ತಿರುವ ಅವರನ್ನು

(ಈ ಪದ್ಯದ ಅನ್ವಯವೂ ಅರ್ಥವೂ ಕ್ಲಿಷ್ಟವಾಗಿದೆ)

ವ|| ನೋಡಿ ನಾಡಾಡಿಯಲ್ಲದಾಕೆಗಳ ಜೋಡೆಗೆಯ್ತಂಗಳಂ ಕಂಡಿದು ಮನೆಯಾಣ್ಮನಂ ಮಾರುವಂದಮಲ್ಲದೆ ಪೂ ಮಾರುವಂದಮಲ್ತೆಂದು ಮುಗುಳ್ನಗೆ ನಗುತುಂ ಬರ್ಪನೊಂದೆಡೆಯೊಳ್ ಮನೆಯಾಣ್ಮನ ಕಣ್ಣೆಮೆಯೆ ಕಾಂಡಪಟಮಾಗೆಯುಂ ಬಗೆಯಾಣ್ಮನ ಕಣ್ಣೆಮೆಯೆ ದೂದವಿಯಾಗೆಯುಂ ಬಗೆದೆಡೆಯನೆಯ್ದಿ ಬಗೆದ ಬಗೆಯಂ ಬಗೆದಂತೆ ತೀರ್ಚಿ ಪೋಪ ಜೋಡೆಯರಂ ಕಂಡು ವಿಕ್ರಮಾರ್ಜುನನಿಂತೆಂದಂ-

ಮ|| ಕುಱುಪಂ ಪುರ್ವಿನ ಜರ್ವೆ ತೋ ಬಗೆಯಂ ಕಣ್ಸನ್ನೆಗಳ್ ಪೇೞೆ ತ
ನ್ನೆಱಕಂ ತನ್ನ ಮನಕ್ಕೆ ಕೂಡೆ ಕೆಲಕಂ ಗಂಡಂಗಮೊಳ್ಪಂ ಕರಂ|
ಮೆವಾ ಪ್ರೌಢೆಯ ಜೋಡೆಯಕ್ಕುಮೆಡೆಯೊಳ್ ದೂಂಟಿಂದೆ ದೂರಟಿಂಗೆ ಪೆ
ರ್ವಯಂ ಪೊಯ್ಸಿ ಕೆಲಕ್ಕೆ ನಾಣ್ಚಿ ತಲೆಗುತ್ತಿರ್ಪಾಕೆಯೇಂ ಜೋಡೆಯೇ|| ೮೨

ಉ|| ಕೂರಿದುವಪ್ಪ ಕಣ್ಮಲರ್ಗಳಳ್ಳೆರ್ದೆಯೊಳ್ ತಡಮಾಡೆ ತಾಮೆ ಕಣ್
ಪೇರಿಸೆ ಪುರ್ವು ನಾಲಗೆವೊಲಾಗೆ ಮನಂಬುಗಿಸಲ್ಕೆ ಬಲ್ಲೊಡಾ|
ಜಾರೆಯೆ ಜಾರೆ ಪಾನೆ ಕರಂ ಪಿರಿದುಂ ಗೞಪುತ್ತುಮಿರ್ಪಳಂ
ಸಾರಿಕೆಯೆಂಬರಲ್ಲದಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್| | ೮೩

ವ|| ಎಂದು ಪಾಣ್ಬರಂಕುಸನಾ ಪಾಣ್ಬೆಯರ ಗೆಯ್ವ ಗೆಯ್ತಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿೞ್ತುಗೊಡ್ಡಂಗಳುಮಂ ಕಂಡು ಚೋದ್ಯಂಬಟ್ಟು-

ಮ|| ಅಲರ್ಗಣ್ಣೊಳ್ ಸ್ಮರನಿರ್ದನಕ್ಕುಮೆಡೆವೋಪಾ ಜೋಡೆ ಕಾಮಂಗೆ ಕಾ
ದಲೆಯಕ್ಕುಂ ಪೆಱತೇನೊ ಪಾರದರದೊಳ್ ಸಂಸಾರ ಸರ್ವಸ್ವಮಂ|
ಗೆಲೆವಂದಿಂಪಿನಲಂಪನಾಳ್ದ ಸವಿಯುಂಟಕ್ಕುಂ ಸಮಂತಾವಗಂ
ತಲೆಯಂ ಮೂಗುಮನೊತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೇ|| ೮೪

ವ|| ಎನತ್ತುಂ ಬರ್ಪನೊಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಱನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಮಳವಿಗೞದ ವಿಳಾಸಂಗಳೊಳಂ ತಂಡತಂಡದೆ ನೆರೆದಿರ್ದ ಪೆಂಡವಾಸದೊಳ್ವೆಂಡಿರಂ ಕಂಡು-

ಅರಿಕೇಸರಿಯು ನಿಂತು ನೋಡಿದನು. ವ|| ಸಾಮಾನ್ಯರಲ್ಲದ ಅವರ ಜಾರಕೃತ್ಯವನ್ನು ಕಂಡು ಇದು ಮನೆಯ ಗಂಡನನ್ನು ಮಾರುವ ರೀತಿಯಲ್ಲದೆ ಹೂವನ್ನು ಮಾರುವ ರೀತಿಯಲ್ಲವೆಂದು ಹುಸಿನಗೆಯನ್ನು ನಗುತ್ತ ಮುಂದೆ ನಡೆದನು. ಒಂದು ಕಡೆಯಲ್ಲಿ ಮನೆಯೊಡೆಯನ ಕಣ್ಣರೆಪ್ಪೆಯನ್ನು ತೆರೆಯನ್ನಾಗಿಯೂ ಮನದೊಲವಿನ ಮಿಂಡನ ಕಣ್ಣ ದೃಷ್ಟಿಯನ್ನೇ ಸಖಿಯನ್ನಾಗಿಯೂ ಭಾವಿಸಿಕೊಂಡು ಸಂಕೇತಸ್ಥಳವನ್ನು ಸೇರಿ ಇಷ್ಟಾರ್ಥವನ್ನು ಯೋಚಿಸಿದಂತೆಯೇ ತೀರಿಸಿಕೊಂಡು ಹೋಗುವ ಜಾರೆಯರನ್ನು ಕಂಡು ವಿಕ್ರಮಾರ್ಜುನನು ಹೀಗೆಂದನು- ೮೨. ತಮ್ಮ ಸಂಕೇತಸ್ಥಳವನ್ನು ಹುಬ್ಬುಹಾರಿಸುವುದರಿಂದಲೂ ತಮ್ಮ ಮನಸ್ಸಿನ ಬಗೆಯನ್ನು (ಇಷ್ಟಾರ್ಥವನ್ನು) ಕಣ್ಣಿನ ಸನ್ನೆಗಳಿಂದಲೂ ಪ್ರಕಾಶಪಡಿಸುತ್ತ ತನ್ನ ಪ್ರೀತಿಯು ತನ್ನ ಮನಸ್ಸಿಗೆ ತೃಪ್ತಿಯಾಗಿರಲು ತನ್ನ ಪಕ್ಕದವರಲ್ಲಿಯೂ ತನ್ನ ಗಂಡನಲ್ಲಿಯೂ ಸದ್ಭಾವವನ್ನೂ ಪ್ರಕಾಶಪಡಿಸುತ್ತಿರುವ ಆ ಚತುರಳೇ ನಿಜವಾದ ಜಾರೆಯಾಗುವವಳು. ಪಕ್ಕಪಕ್ಕಗಳಲ್ಲಿ ಹೆಜ್ಜೆ ಹೆಜ್ಜೆಗೂ ಡಂಗುರ ಬಡಿಯಿಸಿಕೊಂಡು ಅಕ್ಕಪಕ್ಕದವರಿಗೆ ನಾಚಿಕೊಂಡು ತಲೆತಗ್ಗಿಸುವಾಕೆ ಜಾರೆಯಾಗಬಲ್ಲಳೇ? ೮೩. ತನ್ನ ತೀಕ್ಷ್ಣವಾದ ಕಣ್ಣೆಂಬ ಹೂವುಗಳು ವಿಟನ ದುರ್ಬಲವಾದ ಎದೆಯನ್ನು ನಿಧಾನವಾಗಿ ತನ್ನಷ್ಟಕ್ಕೆ ತಾನೆ ಚಲಿಸುವಂತೆ ಮಾಡಿ ಹುಬ್ಬುಗಳು ನಾಲಗೆಯಂತೆ ಮಾತನಾಡಿಸಿ ಅವನ ಮನಸ್ಸನ್ನು ಪ್ರವೇಶಿಸುವಂತೆ ಮಾಡಲು ಬಲ್ಲವಳು ನಿಜವಾದ ವೇಶ್ಯೆ. ಜಾರತ್ವವನ್ನು ಕುರಿತು ವಿಶೇಷವಾಗಿ ಹರಟುತ್ತಿರುವಳನ್ನು ಗಿಣಿಯೆನ್ನುವರಲ್ಲದೆ ಅಭಿಸಾರಿಕೆ (ಪ್ರಿಯವನ್ನು ರಹಸ್ಯವಾಗಿ ಹುಡುಕಿಕೊಂಡು ಹೋಗುವ ಜಾತಿ)ಯೆಂದು ಬುದ್ಧಿಯುಳ್ಳವರು ಅನ್ನುತ್ತಾರೆಯೆ? ವ|| ಎಂದು ಜಾರೆಯರಿಗೆ ಅಂಕುಶಪ್ರಾಯನಾದ ಅರಿಕೇಸರಿಯ ಆ ಚಾರೆಯರು ಮಾಡುವ ಕಾರ್ಯವನ್ನೂ ತೋರುವ ಸನ್ನೆಗಳನ್ನೂ ಆಡುವ ಮೃತ್ಯುವಿನಂತಹ ಚೇಷ್ಟೆಯ ಮಾತುಗಳನ್ನೂ ಕಂಡು ಆಶ್ಚರ್ಯಪಟ್ಟು ೮೪. (ಜಾರಸ್ತ್ರೀಯರ) ಹೂವಿನಂತಿರುವ ಕಣ್ಣಿನಲ್ಲಿ ಮನ್ಮಥನಿದ್ದಿರಬೇಕು. ಸಂಕೇತಸ್ಥಾನವನ್ನು ಹುಡುಕಿಕೊಂಡು ಹೋಗುವ ಆ ಜಾರೆಯರು ಮನ್ಮಥನ ಪ್ರೀತಿಗೆ ಪಾತ್ರರಾಗಿದ್ದಿರ ಬೇಕು. ಹಾದರದಲ್ಲಿ ಸಂಸಾರಸಾರಸರ್ವಸ್ವವನ್ನೂ ಮೀರಿರುವ ಸುಖದ ಸೊಂಪನ್ನು ಹೊಂದಿರುವ ರುಚಿಯಿದ್ದಿರಬೇಕು. ಹಾಗಿಲ್ಲದ ಪಕ್ಷದಲ್ಲಿ ಯಾವಾಗಲೂ ಅವರು ತಲೆಯನ್ನೂ ಮೂಗನ್ನೂ ಒತ್ತೆಯಿಟ್ಟು ಸುಮ್ಮನೆ ವಿಟರಲ್ಲಿ ಕೂಡುವಷ್ಟು ದಡ್ಡರೆ? ವ|| ಎಂದುಕೊಂಡು ಬರುತ್ತಿದ್ದವನು ಒಂದು ಸ್ಥಳದಲ್ಲಿ ಮನ್ಮಥನು ಸಾಕಿದ ಜಂಗಮಲತೆಗಳಂತೆಯೂ ಕಾಮನ ರಕ್ಷಣೆಯಲ್ಲಿರುವ ಕಲ್ಪಲತೆಗಳಂತೆಯೂ ಮನೋಜನೆಂಬ

ಚಂ|| ಮನಸಿಜನೀಕೆಗಂಡು ರತಿಯಂ ಬಿಸುಟಂ ಹರನೀಕೆಗಂಡು ನೂ
ತನ ಗಿರಿಜಾತೆಯಂ ತೊದನಾ ನರಕಾಂತಕನೀಕೆಗಂಡು ತೊ|
ಟ್ಟನೆ ನಿಜಲಕ್ಷ್ಮಿಯಂ ಮದನೆಂಬ ನೆಗೞ್ತೆಯನಪ್ಪುಕೆಯ್ದು ಜ
ವ್ವನದ ವಿಳಾಸದಂದದ ಬೆಡಂಗಿನ ಪೆಂಡಿರೆ ಪೆಂಡಿರಲ್ಲಿಯಾ|| ೮೫

ತಿಸರಮಿದಾವುದಕ್ಕ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕ
ಣ್ಗೆಸೆವುದಿದಾವುದೊಲ್ಲದುೞದಟ್ಟಿದೊಡಂದು ಕುಬೇರನಿತ್ತುದೆ|
ಕ್ಕಸರಮಿದಾವುದಾಂ ಮುಳಿಯೆ ಕಾಲ್ವಿಡಿದಿಂದ್ರನ ಕೊಟ್ಟುದಲ್ತೆ ಪೋ
ಪುಸಿಯದಿರೆಂಬ ಸೂಳೆಯರೆ ಸೂಳೆಯರಲ್ಲಿಯ ಪೆಂಡವಾಸದಾ|| ೮೬

ವ|| ಎಂಬುದಂ ಕೇಳುತ್ತುಂ ಬರೆವರೆ ಮತ್ತಮಾ ಪೆಂಡವಾಸಗೇರಿಯೊಳಗೆ ಸೌಭಾಗ್ಯದ ಭೋಗದ ಚಾಗದ ರೂಪುಗಳ್ ಮಾನಸರೂಪಾದಂತೆ-

ಉ|| ಸೀಗುರಿ ಚಾಪಿ ನಾಣ್ಕುಣಿದು ಮೆಟ್ಟುವ ಗುಜ್ಜರಿಗೞ ಬೀರಮಂ
ಚಾಗದ ಪೆಂಪುಮಂ ಪೊಗೞ್ವ ಸಂಗಡವರ್ಪವರೊಳ್ಪಿನಿಂದೆ ಮೆ|
ಯ್ಯೋಗಮಳುಂಬಮಪ್ಪ ಬಿಯಮಾಗೆರ್ದೆಗಂ ಬರೆ ಬರ್ಪ ಪಾಂಗಗು
ರ್ವಾಗಿರೆ ಚೆಲ್ವನಾಯ್ತುರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ|| ೮೭

ವ|| ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿಱುಕುಳ ಬೊಜಂಗರುಮಂ ಸುಣ್ಣದೆಲೆಯನೊತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನೊತ್ತೆವಿಡಿಸಲಟ್ಟುವ ಚಿಕ್ಕ ಪೋರ್ಕುಳಿ ಬೊಜಂಗರುಮಂ ಕತ್ತುರಿ ಬಿಯಮಂ ಮೆದು ಕತ್ತುರಿಯೊಳ್ ಪೂೞ್ದು ಕತ್ತುರಿಮಿಗದಂತಿರ್ಪ ಕತ್ತುರಿ ಬೊಜಂಗರುಮಂ ನೋಡಿ ಪೊೞಲ ಬೊಜಂಗರ ಬಿಯದಳವಿಗೆ ಮನದೊಳ್ ಮೆಚ್ಚುತ್ತುಂ ಬರ್ಪನೊಂದೆಡೆ ಯೊಳ್‌ರ್ದು ಕಳ್ಳೊಳಮಮರ್ದಿನೊಳಂ ಪುಟ್ಟಿದ ಪೆಂಡಿರಂತೆ ಸೊಗಯಿಸುವ ಪಲರು ಮೊಳ್ವೆಂಡಿರೊಂದೆಡೊಯೊಳಿರ್ದು ಕಾಮದೇವನೆಂಬ ಬಳಮರ್ದುಕಾಱನ ಮಾಡಿದ ಮರ್ದಿನಂತೆ ಬಳೆದು ದಳಂಬಡೆದು ಮೂನೂಱಱುವತ್ತು ಜಾತಿಯ ಕಳ್ಗಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ ಗಿಳಿಯ ಕೋಗಿಲೆಯ ಕೊಂಚೆಯಂಚೆಯ ಕುಂತಳಿಕೆಯ ಮಾೞ್ಕೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳೆದು ತಲೆಯೊಳ್ ತಳಿದು ಕಳ್ಳೊಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆಲ್ಲಂ ಬೊಟ್ಟಿಟ್ಟು ಕಿಱಯರ್ ಪಿರಿಯರಱದು ಪೊಡವಟ್ಟು ಧರ್ಮಗಳ್ಗುಡಿವರ್ಗೆಲ್ಲಂ ಮೀಸಲ್ಗಳ್ಳನೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿಱಕಿಱದನೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳಡಸಿದಲ್ಲವಲ್ಲಣಿಗೆಯ ಚಕ್ಕಣಂಗಳಂ ಸವಿಸವಿದು-

ಬೇಟೆಗಾರನ ದೀಹದ (ಒಂದು ಮೃಗವನ್ನು ಹಿಡಿಯುವುದಕ್ಕಾಗಿ ಉಪಯೋಗಿಸುವ ಮತ್ತೊಂದು ಮೃಗ) ಹುಲ್ಲೆಯಂತೆಯೂ ತಮ್ಮ ತಮ್ಮ ಮನೆಯ ಮುಂದಿನ ಪಚ್ಚೆಯ ರತ್ನದಿಂದ ನಿರ್ಮಿತವಾದ ಜಗಲಿಗಳಲ್ಲಿಯೂ ರತ್ನಖಚಿತವಾದ ಮನೆಯ ಮುಂದಿನ ಕೈಸಾಲೆಗಳಲ್ಲಿಯೂ ಅಳತೆಮೀರಿದ (ಅತ್ಯಕವಾದ) ವೈಭವಗಳಿಂದ ಕೂಡಿ ಗುಂಪು ಗುಂಪಾಗಿ ಕೂಡಿದ್ದ ವೇಶ್ಯಾವಾಟಿಯ (ಸೂಳೆಗೇರಿಯ) ಉತ್ತಮ ಸ್ತ್ರೀಯರನ್ನು ನೋಡಿದನು. ೮೫. ಇವಳ ಸೌಂದರ್ಯವನ್ನು ನೋಡಿ ಮನ್ಮಥನು (ತನ್ನ ಪ್ರಿಯಪತ್ನಿಯಾದ) ರತಿಯನ್ನು ಬಿಸುಟಿದ್ದಾನೆ. ಈಶ್ವರನ್ನು ಇವಳನ್ನು ನೋಡಿ ನೂತನವಧುವಾದ ಪಾರ್ವತಿಯನ್ನು ತೊರೆದಿದ್ದಾನೆ. ಆ ನರಕಾಸುರನಿಗೆ ಮೃತ್ಯುವಾದ ವಿಷ್ಣುವು ಇದಕ್ಕಿದ್ದ ಹಾಗೆ ತನ್ನ ಲಕ್ಷ್ಮಿಯನ್ನೂ ಮರೆತಿದ್ದಾನೆ ಎಂಬ ಪ್ರಸಿದ್ಧಿಯನ್ನು ಪಡೆದು ಯವ್ವನದ ವಿಳಾಸದ ಬೆಡಗಿನಿಂದ ಕೂಡಿದ ಸ್ತ್ರೀಯರೇ ಅಲ್ಲಿರುವ ಸ್ತ್ರೀಯರೆಲ್ಲ. ಮುಂದಿನ ಅವರ ಸಂಭಾಷಣೆಯು ಈ ರೀತಿಯಲ್ಲಿದ್ದಿತು. ೮೬. ಈ ಮೂರೆಳೆಯ ಹಾರವಾವುದಕ್ಕ? ಧರಣೀಂದ್ರನೆಂಬ ಸರ್ಪರಾಜನು ಕೊಟ್ಟುದು; ಕಣ್ಣಿಗೆ ಪ್ರಕಾಶಮಾನವಾಗಿರುವ ಈ ವಜ್ರದ ತಾಲಿ ಯಾವುದು? ನೀನು ಒಪ್ಪದೆ ತಿರಸ್ಕರಿಸಿ ಕಳುಹಿಸಲು ಆ ದಿನ ಕುಬೇರನು ಕೊಟ್ಟುದು. ಈ ಒಂದೆಳೆಯ ಸರ ಯಾವುದು? ನಾನು ಕೋಪಿಸಿಕೊಳ್ಳಲು ನನ್ನ ಕಾಲನ್ನು ಕಟ್ಟಿಕೊಂಡು ಇಂದ್ರನು ಕೊಟ್ಟುದಲ್ಲವೇ? ಹೋಗು ಸುಳ್ಳು ಹೇಳಬೇಡ ಎಂಬ ಪ್ರಸಿದ್ಧಿಯನ್ನು ಪಡೆದಿರುವ ಸೂಳೆಯರೇ ಆ ಸೂಳೆಗೇರಿಯ ಎಲ್ಲ ಕಡೆಯೂ. ವ|| ಎನ್ನುವುದನ್ನು ಕೇಳುತ್ತ ಬರುತ್ತಿರಲು ಪುನ ಆ ಸೂಳೆಗೇರಿಯೊಳಗೆ ಸೌಭಾಗ್ಯದ, ಭೋಗದ, ತ್ಯಾಗದ ರೂಪಗಳು ಮನುಷ್ಯಾಕಾರವನ್ನು ತಾಳಿದಂತೆ- ೮೭. ಸೀಗುರಿಯೆಂಬ ಛತ್ರಿ, ಅಂಗರಕ್ಷಕರು, ನೆಗೆದು ಹಾರುತ್ತ ಬರುತ್ತಿರುವ ಗುರ್ಜರದೇಶದ ಕತ್ತೆ, ತಮ್ಮ ವೀರದ ಮತ್ತು ತ್ಯಾಗದ ವೈಭವವನ್ನು ಹೊಗಳುತ್ತ ಬರುತ್ತಿರುವ ಸಂಗಡಿಗಳು, ಸರಿಯಾದ ರೀತಿಯಲ್ಲಿ

ಮಾಡಿಕೊಂಡಿರುವ ದೇಹಾಲಂಕಾರ ಅತ್ಯತಿಶಯವಾದ ದ್ರವ್ಯವ್ಯಯ- ಇವು ಹೃದಯಸ್ಪರ್ಶಿಯಾಗಿರಲು ಆಶ್ಚರ್ಯಕರವಾದ ರೀತಿಯ ಠೀವಿಯಿಂದ ಬರುತ್ತಿರುವ ರಾಜವಿಟರ ಲೀಲೆಯು ದೇವೇಂದ್ರನ ಲೀಲೆಗಿಂತ ಸುಂದರವಾಗಿದ್ದಿತು. ವ|| ಪುನ ಅಲ್ಲಿ ಕೋಟಿಹೊನ್ನುಗಳನ್ನು ಕೊಡುತ್ತೇವೆ ಎಂದು ಸೂಳೆಯರ ಮನೆಯ ಮುಂದಿನ ಗಂಟೆಯನ್ನು ಬಾರಿಸುವ ಸಾಮಾನ್ಯವಿಟರನ್ನೂ ಸುಣ್ಣದೆಲೆಯನ್ನು ಒತ್ತೆಯಿಟ್ಟು

ಮ|| ಮಧು ಸೀತುಂ ಕಟು ಸೀದು ಪೋ ಪುಳಿತ ಕಳ್ಳಲ್ತುಂ ಕರಂ ಕಯ್ತು ಬ
ರ್ಪುದು ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಗ ಸೊರ್ಕಿಪ್ಪಲಾ|
ಱದು ಚಿಂತಾಮಣಿಗೇವುದಕ್ಕ ದಳಮಿಲ್ಲೀ ಕಕ್ಕರಕ್ಕಿಂತುಟ
ಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್|| ೮೮

ವ|| ಅಂತು ಕುಡಿಯೆ ಕಕ್ಕರಗೆಯ್ತದಿಂ ತುದಿನಾಲಗೆಯೊಳ್ ತೊದಳ್ವೆರಸು ನುಡಿವ ನುಡಿಗಳುಂ ಪೊಡರ್ವ ನಿಡಿಯ ಪುರ್ವುಗಳುಂ ನಿಡಿಯಲರ್ಗಣ್ಗಳೊಳ್ ವಿಕಾರಂ ಬೆರಸು ನೆಗೞ್ದಭಿನಯಂಗಳುಂ ಮಳಮಳಿಪ ರೂಪು ಕಣ್ಗಳೊಳ್ ಬೆಳ್ಪನೞಯೆ ಸೋಂಕುವ ಕೆಂಪುಗಳುಂ ತಮ್ಮ ಕೆಂಪಂ ಕಣ್ಗಳ್ಗೆ ಕೊಟ್ಟು ಕಣ್ಗಳ ಬೆಳ್ಪಂ ತಮಗೆ ಮಾಱುಗೊಂಡಂತೆ ತನಿಗೆತ್ತುವರೆಸು ಬತ್ತಿ ಸೊಗಯಿಸುವ ಬೆಳರ್ವಾಯ್ಗಳೊಳಿಂಪಂ ತಾಳ್ದಿ ಪೊಱಮಡುವ ತಣ್ಗಂಪುಗಳುಮಮೃತಬಿಂದುಗಳಂತೆ ನೆಗೞ್ವ ಬೆಮರ ಬಿಂದುಗಳುಮಳವಲ್ಲದೊಪ್ಪೆ ಪಲರುಮೊಳ್ವೆಂಡಿರೊಂದೆಡೆ ಯೊಳಿರ್ದಲ್ಲಿ ಯೊರ್ವಳ್-

ಪೃಥ್ವಿ|| ಬೆಳರ್ತ ಬೆಳರ್ವಾಯ್ ಕರಂ ಪೊಳೆವ ಪಾಂಗೆ ಕಣ್ಣಿಂದಳು
ರ್ತುಳುಂಕೆ ನಿಡುವುರ್ವುಗಳ್ ಪೊಡರೆ ಬಾಯ ಕಂಪಿಂಗೆ ಸಾ|
ರ್ವಳಿಪ್ರಕರಮಂದು ಸೀಗುಡಿವೊಲಾಗೆ ನಾಣ್ಗೆಟ್ಟು ಮೊ
ಕ್ಕಳಂ ಜತಿಗೆ ಮೆಟ್ಟುವಳ್ ಪಿಡಿದು ಮೆಟ್ಟುವಳ್ ನೋೞ್ಪರಂ|| ೮೯

ವ|| ಮತ್ತಮೊರ್ವಳೂರ್ವಶಿಯನೆ ಪೋಲ್ವಾಕೆ ತನ್ನ ಗಂಭೀರನವಯೌವನ ಮದದೊಳಂ ಮದಿರಾಮದದೊಳಮಳವಿಗೞಯೆ ಸೊರ್ಕಿ-

ಮದ್ದಾನೆಯನ್ನೂ ಮಾಣಿಕ್ಯವನ್ನೂ ಒತ್ತೆಯಾಗಿಡಲು ಹೇಳಿಕಳುಹಿಸುವ ಚಿಕ್ಕ ಜಗಳಗಂಟಿ ವಿಟರನ್ನೂ ತಾವು ವಿಶೇಷವಾಗಿ ಕಸ್ತೂರಿಯನ್ನು ಲೇಪನ ಮಾಡಿಕೊಂಡು ಅದರಲ್ಲಿಯೇ ಅದ್ದಿ ಮುಳುಗಿ ಆ ಕಸ್ತೂರಿಯ ವ್ಯಯವನ್ನೇ ಒತ್ತೆಯನ್ನಾಗಿ ತೋರಿಸುತ್ತ ಕಸ್ತೂರಿಯ ಮೃಗದಂತೆ ಕರ್ರಗಿರುವ ಕಸ್ತೂರಿ ವಿಟರನ್ನೂ ನೋಡಿ ಆ ಪಟ್ಟಣದ ವಿಟರ ವ್ಯಯದ (ಖರ್ಚು ಮಾಡುವ ದ್ರವ್ಯದ) ಪ್ರಮಾಣಕ್ಕೆ ಮನಸ್ಸಿನಲ್ಲಿ ಮೆಚ್ಚುತ್ತ ಮುಂದೆ ಬರಲು ಪಾನಶಾಲೆಯು ಕಣ್ಣಿಗೆ ಬಿದ್ದಿತು. ಒಂದೆಡೆಯಲ್ಲಿ ಕಳ್ಳಿನಲ್ಲಿಯೂ ಅಮೃತದಲ್ಲಿಯೂ ಹುಟ್ಟಿದ ಸ್ತ್ರೀಯರಂತೆ – ಸುರಾದೇವಿ ಮತ್ತು ಲಕ್ಷ್ಮೀದೇವಿಯರಂತೆ ಸೊಗಯಿಸುವ ಅನೇಕ ಸುಂದರಿಯರು ಒಂದು ಕಡೆ ಸೇರಿ ಕಾಮದೇವನೆಂಬ ಮದ್ದುಗಾರನು (ತುಬಾಕಿಯ ಮದ್ದನ್ನು ಮಾಡುವವನು) ಮಾಡಿದ ಮದ್ದಿನಂತೆ ಅಭಿವೃದ್ಧಿಯಾಗಿ ಪುಷ್ಟಿಗೊಂಡಿರುವ ಮುನ್ನೂರರುವತ್ತು ಜಾತಿಯ ಕಳ್ಳುಗಳನ್ನು (ಹೆಂಡಗಳನ್ನು) ತಮ್ಮ ಮುಂದೆ ಇಟ್ಟುಕೊಂಡು ಮಧುಮಂತ್ರದಿಂದಲೇ ಮಧುದೇವತೆಗಳನ್ನು ಪೂಜಿಸಿದರು. ಚಿನ್ನ ಬೆಳ್ಳಿ ಮತ್ತು ಪದ್ಮರಾಗಗಳಿಂದ ಗಿಳಿ, ಕೋಗಿಲೆ, ಕ್ರೌಂಚ, ಹಂಸ ಮತ್ತು ಕುಂತಳಿಕೆಯೆಂಬ ಹಕ್ಕಿಗಳ ಮಾದರಿಗಳಲ್ಲಿ ಮಾಡಿರುವ ಚಿಪ್ಪುಗಳಲ್ಲಿ ತುಂಬಿ (ಮಧುಮಂತ್ರಗಳಿಂದಲೇ ಮಂತ್ರಿಸಿ ನೆಲದಲ್ಲಿ ಸ್ವಲ್ಪ ಸ್ವಲ್ಪ ಚೆಲ್ಲಿ ತಲೆಯಲ್ಲಿ ಪ್ರೋಕ್ಷಿಸಿಕೊಂಡು,) ಕಳ್ಳಿನಿಂದ ಮುಖಕ್ಕೆ ಬೊಟ್ಟನ್ನಿಟ್ಟು ಕಿರಿಯರಾದವರು ಹಿರಿಯರಾದವರನ್ನು ಗುರುತಿಸಿ ಅವರಿಗೆ ನಮಸ್ಕಾರ ಮಾಡಿ ಉಚಿತವಾಗಿ ದಾನಮಾಡಬೇಕಾದವರಿಗಾಗಿ ಮೀಸಲಾದುದನ್ನು ಅವರಿಗೆ ದಾನಮಾಡಿದರು. ಚಿನ್ನದ ಮತ್ತು ಬೆಳ್ಳಿಯ ಚಿಪ್ಪುಗಳಲ್ಲಿ ಸ್ವಲ್ಪ ಸ್ವಲ್ಪವಾಗಿ ತುಂಬಿಕೊಂಡು ಎಳೆಯ ಬಿದಿರಿನ ಕಳಕೆ, ಮಾವಿನ ಮಿಡಿ, ಬಿಲ್ಪತ್ರೆಯ ಕಾಯಿನ ತಿರುಳು, ಕಾರದ ಕಡಲೆಯ ಪುಡಿಯಿಂದ ಕೂಡಿದ ಹಸಿಯ ಶುಂಠಿಯ ಮಿಶ್ರಣವನ್ನುಳ್ಳ ಚಕ್ಕಣಗಳೆಂಬ ನಂಜಿಕೊಳ್ಳುವ ಪದಾರ್ಥಗಳನ್ನು ಸವಿಸವಿದು ಕಳ್ಳುಕುಡಿದರು. ೮೮. ಮಧುವೆಂಬ ಮದ್ಯವು ಸಿಹಿಯಾಗಿದ್ದರೂ ಕಟುವಾದುದು; ಸೀದುವೆಂಬುದು ಹುಳಿಯ ಹೆಂಡವಲ್ಲ; ವಿಶೇಷವಾಗಿ ಸಿಹಿಯಾಗಿರುತ್ತದೆ. ಮಾರೀಚಿ ತೊಡರ್ಪುಳ್ ಎಂಬ ಮದ್ಯಗಳಿಗಿಂತ ಶರದೆಯೆಂಬುದು ಹೆಚ್ಚು ವಾಸನೆಯಿಲ್ಲ; ಅಷ್ಟು ಸೊಕ್ಕಿಸಲಾರದು; ಚಿಂತಾಮಣಿಯೆಂಬ ಮದ್ಯದ ಸೇವನೆಗೆ ಅಡಿಕೆಯೇಕಕ್ಕ, ಕಕ್ಕರವೆಂಬ ಮದ್ಯಕ್ಕೂ ಹಾಗೆಯೇ (ಬೇಕಿಲ್ಲ) ಇಂತಹವೇ ಸರಿಯಾದ ಹೆಂಡವೆಂಬುದು ಎಂದು ಆ ಸ್ತ್ರೀಯರು ಕಾಮೋದ್ರೇಕವಾದ ಮದ್ಯವನ್ನು ಪಾನಮಾಡಿದರು. ವ|| ಹಾಗೆ ಕುಡಿಯಲು ಕಕ್ಕರವೆಂಬ ಮದ್ಯಪಾನದ ಸೊಕ್ಕಿನಿಂದ ತುದಿನಾಲಗೆಯಲ್ಲಿ ತೊದಳುಗಳಿಂದ ಕೂಡಿದ ಮಾತುಗಳುಂಟಾದುವು. ದೀರ್ಘವಾದ ಹುಬ್ಬುಗಳು ಅಲುಗಾಡುತ್ತಿದ್ದವು. ಉದ್ದವಾದ ಹೂವಿನಂತಿರುವ ಕಣ್ಣುಗಳಲ್ಲಿ ವಿಕಾರದಿಂದ ಕೂಡಿದ ಚೇಷ್ಟೆಗಳು ಮೂಡಿದವು. ಕೆರಳಿ ಕೆಂಪಾದ ರೂಪವು ಕಣ್ಣುಗಳ ಬಿಳುಪನ್ನು ಸಂಪೂರ್ಣವಾಗಿ

ಹೋಗಲಾಡಿಸಿತು. ಆವರಿಸುತ್ತಿರುವ ಕೆಂಪುಬಣ್ಣದ ತುಟಿಗಳು ತಮ್ಮ ಕೆಂಪನ್ನು ಕಣ್ಣುಗಳಿಗೆ ಕೊಟ್ಟು ಅದರ ಬಿಳುಪನ್ನು ತಾವು ಪ್ರತಿಯಾಗಿ ಕೊಂಡಂತೆ ತೋರಿದವು. ವಿಶೇಷವಾಗಿ ಅಲುಗಾಡುತ್ತ ಬತ್ತಿದ ಬಿಳುಪಾದ ಬಾಯಿಗಳಲ್ಲಿ ಇಂಪಿನಿಂದ ತಂಪಾದ ವಾಸನೆಗಳು ಸೂಸಿದವು. ಅಮೃತಬಿಂದುಗಳಂತೆ ಬೆವರ ಹನಿಗಳು ಪ್ರಕಾಶಿಸಿದುವು. ಅಳತೆಯಿಲ್ಲದ ಸೌಂದರ್ಯದಿಂದ ಕೂಡಿದ ಅನೇಕ ಉತ್ತಮ ಸ್ತ್ರೀಯರು ಒಂದೆಡೆ ಸೇರಿದರು. ಆ ಸ್ಥಳದಲ್ಲಿ ಒಬ್ಬಳು- ೮೯. ಬಿಳಿಚಿಕೊಂಡ ತುಟಿಯನ್ನೂ ವಿಶೇಷವಾಗಿ ಹೊಳೆವ ಕಡೆಗಣ್ಣಿನ ನೋಟವನ್ನೂ

ಚಂ|| ಮುಡಿ ಮಕರಧ್ವಜಂಬೊಲೆೞಲುತ್ತಿರೆ ಬೆಂಬಿಡಿದೊಯ್ಯನೊಯ್ಯನು
ಳ್ಳುಡೆ ಕಟಿಸೂತ್ರದೊತ್ತಿನೊಳೆ ಜೋಲ್ದಿರೆ ನಾಣ್ ತಲೆದೋ ಕೂಡೆ ಕೂ|
ಕಿಡುವ ಕುಕಿಲ್ವ ಬಿಕ್ಕುಳಿಪ ತೇಗುವ ತನ್ನ ತೊಡಂಕದೆಯ್ದೆ ನೂ
ರ್ಮಡಿ ಮನದೊಳ್ ಪಳಂಚಲೆಯೆ ಡಕ್ಕೆಯೊಳೞ್ಕಜವಾಗೆಯಾಡಿದಳ್|| ೯೦

ವ|| ಅಂತಾಕೆಗಳ್ ತೂಗಿ ತೊನೆವ ತೊನೆಪಂಗಳುಮಂ ಮರಸರಿಗೆವಿಡಿದು ಬಿಲ್ವಿಡಿದಾಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನಿಂತೆಂದಂ-

ಚಂ|| ನುಡಿವರೆ ನೋಡ ಕಳ್ಗುಡಿವರೆಂಬುದಿದಾಗದ ಸೂರುಳಂತದಂ
ಕುಡಿವನುಮಂತೆ ಕಳ್ಗುಡಿವರೆಂದೊಡೆ ನಾಣ್ಚುವರಂತುಟಪ್ಪುದಂ|
ಕುಡಿದುಮಿವಂದಿರಾರೆರ್ದೆಯುಮಂ ಸೆಗೆಯ್ದಪರೆಯ್ದೆ ದೋಷದೊಳ್
ತೊಡರ್ವುದುಮೊಂದುಪಾಶ್ರಯವಿಶೇಷದೊಳೊಳ್ಪನೆ ತಳ್ವುದಾಗದೇ|| ೯೧

ವ|| ಎನುತುಂ ಬರ್ಪನೊಂದೆಡೆಯೊಳೊರ್ವಂ ಪೞಕೆಯ್ದ ನಲ್ಲಳನುೞಯಲಾಱದೆ ಸುೞಯೆ ಮುಳಿದಾತನ ಕೆಳೆಯನಿಂತೆಂದಂ-

ಚಂ|| ಬಸನದೊಡಂಬಡಿಂಗಲಸಿ ಮಾಣ್ದೊಡಮಿಂತಿದನೀವೆನೆಂದನಂ
ಪುಸಿದೊಡಮಾಸೆದೋಱ ಬಗೆದೋಱದೊಡಂ ನೆರದಿರ್ದೊಡಂ ಸಗಾ|
ಟಿಸದೊಡಮಾಯಮುಂ ಚಲಮುಮುಳ್ಳೊಡೆ ಪೇಸದವಳ್ಗೆ ಮತ್ತಮಾ
ಟಿಸುವುದೆ ಮತ್ತಮಂಜುವುದೆ ಮತ್ತಮೞಲ್ವುದೆ ಮತ್ತವಿವುದೇ|| ೯೨

ವ|| ಎಂದು ನುಡಿದು ಬಿಸುಡಿಸಿದಂ ಮತ್ತೊರ್ವಂ ತನಗೆರಡಱಯದೊಲ್ದ ನಲ್ಲಳನೇತಳಪ್ಪೊಡಮೇವಮಂ ಮಾಡದೆ ಬೇಟಮಂ ಸಲಿಸುವುದರ್ಕೆ ಸಂತಸಂಬಟ್ಟು ಮುಂತಣ್ಗೆ ಕಾಪನಿಟ್ಟಿಂತೆಂದಂ-

ಉಳ್ಳ ಒಬ್ಬಳು ತನ್ನ ಕಣ್ಣಿನ ದೃಷ್ಟಿಯು ಎಲ್ಲ ಕಡೆಗೂ ವ್ಯಾಪಿಸುತ್ತಿರಲು ನೀಳವಾದ ಹುಬ್ಬುಗಳು ಕುಣಿಯುತ್ತಿರುವ ಬಾಯ ವಾಸನೆಯ ಮುತ್ತುತ್ತಿರುವ ದುಂಬಿಯ ಸಮೂಹವು ಸೂರ್ಯಪಾನೆ (ಬಿಸಿಲನ್ನು ಮರೆಮಾಡಲು ಉಪಯೋಗಿಸುವ ಒಂದು ಸಾಧನ) ಯಂತಾಗಲು ಲಜ್ಜೆಯಿಲ್ಲದೆ ನೋಡುವವರನ್ನು ಮೆಟ್ಟಿ ತಾಳಕ್ಕೆ ಸರಿಯಾಗಿ ಕುಣಿದಳು. ವ|| ಊರ್ವಶಿಯನ್ನೇ ಹೋಲುವ ಮತ್ತೊಬ್ಬಳು ಗಂಭೀರವಾದ ತನ್ನ ಹೊಸಯವ್ವನದ ಮದದಿಂದಲೂ ಮದ್ಯಪಾನ ಮದದಿಂದಲೂ ಅಳತೆ ಮೀರಿ ಸೊಕ್ಕಿ- ೯೦. ತನ್ನ ತುರುಬು ಮನ್ಮಥನ ಮೀನಿನ ಬಾವುಟದಂತೆ ಮೆಲ್ಲಮೆಲ್ಲಗೆ ಜೋಲಾಡುತ್ತಿರಲು ಒಳಉಡುಪು ಉಡಿದಾರದ ಹತ್ತಿರವೇ ಸಡಿಲವಾಗಿ ಜೋತುಬಿದ್ದಿರಲು ಮರ್ಮಸ್ಥಳವು ಹೊರಗೆ ಕಾಣಿಸುತ್ತಿರಲು ಒಡನೆಯೇ ಮೇಲಕ್ಕೆ ನೆಗೆದು ಹಕ್ಕಿಯಂತೆ ಶಬ್ದಮಾಡಿ ಬಿಕ್ಕಳಿಸುವ ತೇಗುವ ತನ್ನ ತೊಡಕುಗಳೇ ಮನಸ್ಸನ್ನು ನೂರು ಬಾರಿ ತಗುಲಿ ಹಿಂಸಿಸುತ್ತಿರಲು ಢಕ್ಕಾವಾದ್ಯಕ್ಕನುಗುಣವಾಗಿ ಆಶ್ಚರ್ಯವಾಗುವ ಹಾಗೆ ಕುಣಿದಳು. ವ|| ಹಾಗೆ ಅವರು ಆ ಕಡೆಗೂ ಈ ಕಡೆಗೂ ಅಳ್ಳಾಡುವ ತೂಗಾಟಗಳನ್ನೂ ಮರಸರಿಗೆ (?)ಯನ್ನೂ ಬಿಲ್ಲನ್ನೂ ಹಿಡಿದು ಭೂತಗಳ ಆಟವನ್ನು (ಬೂತಾಟಂ?) ಆಡುವುದನ್ನೂ ಗಂದೇಭವಿದ್ಯಾಧರನಾದ ಅರ್ಜುನನು ನೋಡಿ ಹೀಗೆಂದನು- ೯೧. ಕುಡಿಯುವವರನ್ನು ಕಳ್ ಕುಡಿಯುವವರು ಎಂದು ಹೇಳಬಹುದೇ? ಆಗದು. ಕುಡಿಯುವವರನ್ನು ಹಾಗೆ ಕುಡುಕರೆಂದರೆ ಅವರು ಲಜ್ಜಿತರಾಗುತ್ತಾರೆ. ಹಾಗೆ ಕುಡಿದರೂ ಅವರು ಎಲ್ಲರ ಹೃದಯವನ್ನೂ ಸೆರೆಹಿಡಿಯುತ್ತಾರಲ್ಲವೇ. ದೋಷವಾದುದೂ ಅವಲಂಬನದಿಂದ ಒಳ್ಳೆಯದೇ ಆಗುವುದಿಲ್ಲವೇ? ವ|| ಎನ್ನುತ್ತ ಬರುತ್ತಿದ್ದವನು ಒಂದೆಡೆಯಲ್ಲಿ ತನ್ನನ್ನು ಬಯ್ಯುತ್ತಿದ್ದ ಪ್ರಿಯಳನ್ನು ಬಿಡಲಾರದೆ ಅವಳ ಮನೆಯ ಮುಂದೆಯೇ ಸುಳಿದಾಡುತ್ತಿರಲು ಕೋಪಿಸಿಕೊಂಡ ಅವನ ಸ್ನೇಹಿತನು ಹೀಗೆಂದು ಅವನಿಗೆ ಬುದ್ಧಿ ಹೇಳಿದನು. ೯೨. ರತಿಕ್ರೀಡೆಗೆ ಒಪ್ಪದೆ ಜುಗುಪ್ಸೆಯಿಂದ ನಿನ್ನನ್ನು ಅವಳು ತ್ಯಜಿಸಿದರೂ (ನಿನಗೆ ಬೇಕಾದ) ಇಂತಿಂಥಾದ್ದನ್ನೆಲ್ಲ ಕೊಡುವನೆಂದ ನಿನಗೆ ಸುಳ್ಳು ಹೇಳಿದರೂ ನೀನು ಆಸೆ ತೋರಿಸಿ ನಿನ್ನ

ಮನಸ್ಸನ್ನು ಪ್ರಕಟಿಸಿದರೂ ಅವಳು ತನ್ನ ಮನಸ್ಸನ್ನು (ಪ್ರೇಮವನ್ನೂ) ಪ್ರಕಟಿಸದಿದ್ದರೂ ನೀನು ಅವಳನ್ನು ಕೂಡಿಕೊಂಡಿದ್ದರೂ ಅವಳು ತನ್ನ ಪ್ರತಿಪ್ರೇಮವನ್ನು ಪ್ರಕಟಿಸದಿದ್ದರೂ ನಿನಗೆ ಬಲವೂ ಛಲವೂ ಇದ್ದ ಪಕ್ಷದಲ್ಲಿ ಅವಳಿಗೆ ಅಸಹ್ಯಪಡದೆ ಪುನ ಅವಳಿಗಾಗಿ ಆಸೆ ಪಡುವುದೇ, ಅಂಜುವುದೇ, ಪುನ ವ್ಯಸನ ಪಡುವುದೇ, ಪುನ ಅವಳಿಗೆ (ಧನಕನಕಾದಿಗಳನ್ನು) ಕೊಡುವುದೇ? ವ|| ಎಂಬುದಾಗಿ ಹೇಳಿ (ಅವಳನ್ನು) ಬಿಸಾಡಿದನು. ಮತ್ತೊಬ್ಬನು ತನಗೆ ಕಪಟವಿಲ್ಲದೆ ಪ್ರೀತಿಸುತ್ತಿದ್ದ ಪ್ರಿಯಳನ್ನು ಯಾವುದರಲ್ಲಿಯೂ ಅಸಮಾಧಾನವನ್ನುಂಟುಮಾಡದೆ ಪ್ರೀತಿಯನ್ನು ನಿಲ್ಲಿಸಿದುದಕ್ಕೆ ಸಂತೋಷಪಟ್ಟು ಮುಂದಕ್ಕೆ ಕಾವಲಿಟ್ಟು ಹೀಗೆ ಹೇಳಿದನು.

ವ|| ಇನಿಯಂ ನೊಯ್ದುಮೊಡಂಬಡಂ ನುಡಿದೊಡೆಂದೆಂದಪ್ಪೊಡಂ ನಿನ್ನೊಳೆ
ಳ್ಳನಿತುಂ ದೋಷಮನುಂಟುಮಾಡದಿರೆಯುಂ ಕಣ್ಪಿಂತೆ ಸಂದಪ್ಪುದೊಂ|
ದನೆ ಕೇಳ್ದೋಪಳೆ ಕೂರ್ಮೆಗೆಟ್ಟೆನಗೆ ನೀನೇನಾನುಮೊಂದೇವಮಂ
ಮನದೊಳ್ ಮಾಡಿದೊಡಂದೆ ದೀವಳಿಗೆಯಂ ಮಾನಾಮಿಯಂ ಮಾಡೆನೇ|| ೯೩

ವ|| ಎಂದು ನುಡಿದಂ ಮತ್ತಮೊಂದೆಡೆಯೊಳೊರ್ವನೊರ್ವಳ ನಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಗೆ ನಕ್ಕು ತನ್ನ ಕಳೆಯಂಗೆ ತೋಱ-

ಚಂ|| ನಯದೊಳೆ ನೋಡಿ ನೋಟದೊಳೆ ಮೇಳಿಸಿ ಮೇಳದೊಳಪ್ಪುಕೆಯ್ದು ಗೊ
ಟ್ಟಿಯೊಳೊಳಪೊಯ್ದು ಪತ್ತಿಸುವ ಸೂಳೆಯರಂದಮನೆಯ್ದೆ ಪೋಲ್ವಂ ಸೂ|
ಳೆಯರ ತುಱುಂಬು ಸೂಳೆಯರ ಮೇಲ್ನುಡಿ ಸೂಳೆಯರಿರ್ಪ ಪಾಂಗು ಸೂ
ಳೆಯರ ನೆಗೞ್ತೆ ನಾಡೆ ತನಗೞ ದಲಕ್ಕನೆ ಸೂಳೆಯಾಗಳೇ|| ೯೪

ವ|| ಎನೆ ಕೇಳ್ದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳೊಂದು ಕಂದದ ಮೊದಲುಮಂ ವೃತ್ತದ ತುದಿಯುಮನೊಂದುಮಾಡಿ ಪದಮಿಕ್ಕಿಯೋದಿ ಪಂಡಿತಿಕ್ಕೆಗೆ ಮುಯ್ವಾಂತು ಮಾವ ಕಾಳೆಗದೊಳಂ ತಾನೆ ಓಡಿಯಾರೋಡಿದರೆಂಬಂತೆ ಬೀರಕ್ಕೆ ಮುಯ್ವಾಂತುಮೊಂದು ವೀಸನಪ್ಪೊಡಮಾರ್ಗಮಿತ್ತಱಯದೆ ಚಾಗಕ್ಕೆ ಮುಯ್ವಾಂತುಂ ತಮ್ಮಂ ನಗುವರನಱಯದೆಣ್ಬರೇಱದ ಕೞ್ತೆಯಂತೆ ದೆಸೆದೆಸೆಗೆ ಬೆಸೆವ ಪಚ್ಚಪಸಿಯೆಗ್ಗರುಮಂ ಕಂಡು

ಚಂ|| ಇಱಯದ ಬೀರಮಿಲ್ಲದ ಕುಲಂ ತಮಗಲ್ಲದ ಚಾಗಮೋದದೋ
ದಱಯದ ವಿದ್ದೆ ಸಲ್ಲದ ಚದುರ್ ನೆ ಕಲ್ಲದ ಕಲ್ಪಿ ಕೇಳ ಮಾ||
ತಱಯದ ಮಾತು ತಮ್ಮ ಬಱುವಾತುಗಳೊಳ್ ಪುದಿದೆಗ್ಗರೆಯ್ದೆ ಕ
ಣ್ಣೆವಿನಮಾರ್ ಪೞಯದೇನೆಳೆಯಂ ಕಿಡಿಸಲ್ಕೆ ಬಲ್ಲರೋ|| ೯೫

ವ|| ಎನೆ ನಗುತ್ತುಂ ಬರೆಯೊಂದೆಡೆಯೊಳ್ ನಾಲ್ವರಯ್ವರ್ ಗಾೞ್ದೊೞರಿರ್ದಲ್ಲಿಗೊರ್ವ ನೆಗ್ಗಂ ಗೊಟ್ಟಿಗೆ ವಂದು ಕಣ್ಣಱಯದೆ ಸೋಂಕೆಯುಂ ಮನಮಱಯದೆ ನುಡಿಯೆಯುಮಾತನ ನಾಕೆಗಳ್ ಬಾಸೆಯೊಳಿಂತೆಂದರ್-

೯೩. ಅಡ್ಡಮಾತನ್ನಾಡಿದರೆ ಪ್ರಿಯನು ನೊಂದುಕೊಳ್ಳುತ್ತಾನೆ ಎಂದು ನನ್ನಲ್ಲಿ ನಾನು ಎಳ್ಳಷ್ಟು ದೋಷವನ್ನುಂಟುಮಾಡಿಕೊಳ್ಳದಿದ್ದರೂ ನೀನು ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆಯೇ ಇದೆ. ಎಲೈ ಪ್ರಿಯಳೇ ಕೇಳು. ಹೀಗೆ ನಿನ್ನ ಪ್ರೀತಿಯನ್ನು ಕಳೆದುಕೊಂಡಿರುವ ನನಗೆ ನೀನೇನಾದರೂ ಬಂದು ಆತನನ್ನು ಮನಸ್ಸಿನಲ್ಲಿ ಮಾಡಿದರೂ ಅಂದೇ ನಾನು ದೀವಳಿಗೆಯನ್ನೂ ಮಹಾನವಮಿಯನ್ನೂ ಮಾಡದಿರುತ್ತೇನೆಯೇ? ವ|| ಎಂಬುದಾಗಿ ನುಡಿದನು. ಬೇರೊಂದೆಡೆಯಲ್ಲಿ ಒಬ್ಬನು ಒಬ್ಬಳ ನಡತೆಯ ಮಾತಿನ ತುರುಬಿನ ದಡ್ಡತನಕ್ಕೆ ಮುಗುಳ್ನಗೆ ನಕ್ಕು ತನ್ನ ಸ್ನೇಹಿತನಿಗೆ ತೋರಿಸಿ ಹೇಳಿದನು. ೯೪. ನಯವಾಗಿ ನೋಡಿ, ನೋಡುವುದರಿಂದಲೇ ಪ್ರೀತಿಯುಂಟಾಗುವಂತೆ ಮಾಡಿ ಪ್ರೀತಿಯಿಂದಲೇ ಆಲಂಗಿಸಿ, ಆಲಿಂಗನದಿಂದಲೇ ಕೂಡಿಕೊಂಡು ಕೂಡುವುದರಿಂದಲೇ ವಶಪಡಿಸಿಕೊಂಡು ತಮ್ಮ ಮನಸ್ಸನ್ನು ಬೆಸೆಯುವ ಸೂಳೆಯರ ರೀತಿಯನ್ನು ಚೆನ್ನಾಗಿ ಹೋಲುವ ಸೂಳೆಯರ ತುರುಬು, ಸೂಳೆಯರ ಮೃದುವಾದ ಮಾತು, ಸೂಳೆಯರು ಇರುವ ಸ್ಥಿತಿ, ಸೂಳೆಯರ ನಡೆವಳಿಕೆ ಇವು ನನಗೆ ವಿಶೇಷವಾಗಿ ಪ್ರೀತಿಕರವಾದುವಲ್ಲವೇ? ಈ ಅಕ್ಕನ ಆಟ, ನೋಟ, ತುರುಬು, ರೀತಿ, ಚೇಷ್ಟೆಗಳನ್ನು ನೋಡಿದರೆ ಇವಳೂ ಸೂಳೆಯಾಗಿಯೇ ಇರಬೇಕಲ್ಲವೆ? ವ|| ಎಂಬುದನ್ನು ಕೇಳಿ ಮುಗುಳ್ನಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ಒಂದು ಕಂದಪದ್ಯದ ಆದಿಯನ್ನೂ ಮತ್ತೊಂದು ವೃತ್ತದ ಅಂತ್ಯವನ್ನೂ ಒಂದುಗೂಡಿಸಿ ಓದಿ ತನ್ನ ಪಾಂಡಿತ್ಯಕ್ಕೆ ಮೆಚ್ಚಿಕೊಳ್ಳುತ್ತಲೂ ಯಾವ ಕಾಳಗದಲ್ಲಿಯೂ ತಾನು ನಿಲ್ಲದೆ ಓಡಿಹೋಗಿ ಹೋರಾಡಿದನು ಎಂಬಂತೆ ತನ್ನ ಪರಾಕ್ರಮವನ್ನು ಹೊಗಳಿಕೊಳ್ಳುತ್ತಲೂ ಒಂದು ವೀಸವನ್ನಾದರೂ ಯಾರಿಗೂ ದಾನಮಾಡದೆ ತಾನು ತ್ಯಾಗಿಯೆಂದು ಜಂಭ ಕೊಚ್ಚಿಕೊಳ್ಳುತ್ತಲೂ ತಮ್ಮನ್ನು

ನೋಡಿ ನಗುವವರನ್ನು ತಿಳಿಯದೆ ಎಂಟುಜನ ಹತ್ತಿಕೊಂಡಿರುವ ಕತ್ತೆಯಂತೆ ದಿಕ್ಕುದಿಕ್ಕಿನಲ್ಲಿಯೂ ಗರ್ವವನ್ನು ಪ್ರದರ್ಶಿಸುತ್ತಲೂ ಇರುವ ಶುದ್ಧ ಹಸಿಯ ದಡ್ಡರನ್ನು ನೋಡಿ ೯೫. ಕಾದದ ಶೌರ್ಯ, ಇಲ್ಲದ ಕುಲ, ತಮ್ಮಲ್ಲಿಲ್ಲದ ತ್ಯಾಗ, ತಾವು ಓದದ ಓದು, ತಿಳಿಯದ ವಿದ್ಯೆ, ಸಲ್ಲದ ಜಾಣ್ಮೆ, ವಿಶೇಷವಾಗಿ ಕಲಿಯದ ಕಲಿಕೆ, ಆಡಲು ತಿಳಿಯದ ಮಾತು, ಇವು ತಮ್ಮ ವ್ಯರ್ಥಾಲಾಪಗಳಲ್ಲಿ ಸೇರಿರುವ ದಡ್ಡರು ಹೆಚ್ಚುತ್ತಿರಲು-ಗುಂಪಾಗಿರಲು-ಯಾರು ತಾನೆ ಅವರನ್ನು ಹಳಿಯುವುದಿಲ್ಲ? ಅವರು ಲೋಕವನ್ನು ಕೆಡಿಸಲು ಬಲ್ಲರೇನು? ವ|| ಎನ್ನಲು ಅದನ್ನು ಕೇಳಿ ನಗುತ್ತ ಬರುತ್ತಿರಲು ಒಂದು ಕಡೆಯಲ್ಲಿ ನಾಲ್ಕೈದು ಜನ ತಂಟಲುದಾಸಿಯರಿದ್ದ ಕಡೆಗೆ ಒಬ್ಬ ದಡ್ಡನು ಅವರ ಅಭಿಪ್ರಾಯವನ್ನು ತಿಳಿಯದೆ ಮುಟ್ಟಿ ಇಷ್ಟವನ್ನು ತಿಳಿಯದೆ ನುಡಿಯಲು ಆ ದಾಸಿಯರು ಅವನನನ್ನು ಕುರಿತು ತಮ್ಮ

ಉ|| ಭಾವಕನೆಂದೊಡಂ ಚದುರನೆಂದೊಡಮಾರ್ ಪೆಱರಾರೊ ನೀನೆ ನಿ
ನ್ನಾವ ಗುಣಂಗಳಂ ಪೊಗೞ್ವೊಡೆಲ್ಲವಱಂ ನೆದೆಮ್ಮೊಳಿಂತು ಸ|
ದ್ಭಾವದೆ ಗೊಟ್ಟಿರಲ್ ಬಯಸಿ ಬಂದೆಯದೀಗಳಿದೊಳ್ಳಿತಾಯ್ತು ಮಾ
ದೇವರ ಮುಂದಣಾತನೆನಲಲ್ಲದೆ ಪೇೞು ಪೆಱತೇನನೆಂಬುದೋ|| ೯೬

ವ|| ಎಂದಾತನನಾಕೆಗಳ್ ಕಾಡಿ ಕೊಱಚಾಡಿ ಕಳೆದರ್ ಮತ್ತಮೊಂದೆಡೆಯೊಳೊರ್ವಳ್ ತನ್ನನುೞದ ಪೊಸ ಬೇಟದಾಣ್ದನನೇಗೆಯ್ದುಂ ಪೊಗಲೀಯದೆ ತನ್ನಳಿಪನೆ ತೋಱ-

ಚಂ|| ಮನೆಯನಿವಂ ಮನೋಭವನಿವಂ ಪೊಸ ಸುಗ್ಗಿಯೊಳಾದದೊಂದು ಕಿ
ತ್ತನಿವನಿದೆನ್ನನೇನುೞಯಲೀಗುಮೆ ನೀನುೞದಾಗಳೆಂದು ಪೋ|
ಪನನಿರದೋಪನಂ ಮಿಡುಕಲೀಯದೆ ಕಾಲ್ವಿಡಿದೞ್ತು ತೋರ ಕ
ಣ್ಬನಿಗಳನಿಕ್ಕಿದಳ್ ತರಳಲೋಚನೆ ಸಂಕಲೆಯಿಕ್ಕಿದಂತೆವೋಲ್|| ೯೭

ವ|| ಮತ್ತೊರ್ವಂ ತನ್ನ ಸೂಳೆಯೊಳಾದ ಬೇಸಱಂ ತನ್ನ ಕೆಳೆಯಂಗಿಂತೆಂದಂ-

ಚಂ|| ಮುಳಿಸಱದಂಜಿ ಬಾೞ್ತೆಯಱದಿತ್ತು ಮನಂಗೊಳೆಯುಂ ಕನಲ್ವುದ
ರ್ಕಳವಿಯುಮಂತುಮಿಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯ|
ನ್ನಳೆ ಮನೆದೊೞ್ತು ಸೀರ್ಕರಡಿಯನ್ನಳೆ ನಾದುನಿಯೊಲ್ದುಮೊಲ್ಲದ
ನ್ನಳೆ ಗಡ ಸೂಳೆಯೆಂದೊಡಿನಿತಂ ತಲೆವೇಸಱನೆಂತು ನೀಗುವೆಂ|| ೯೮

ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣ್ಮನಂ ಪಿಡಿದು-

ಉ|| ತಪ್ಪುದು ಮಾತು ದೂದವರ ಕೆಯ್ಯೊಳೆ ಕಾಲ್ವಿಡಿದಟ್ಟಿ ಕಣ್ಣ ನೀರ್
ತಪ್ಪುವು ನಿಚ್ಚಮಚ್ಚಿಗದೊಳೞ್ತು ಕರಂ ಬಿಸುಸುಯ್ಯೆ ಸುಯ್ದ ಸುಯ್|
ತಪ್ಪುದು ತಪ್ಪುದೆನ್ನ ತನು ಬೇಟದ ಕಾಟದೊಳಿಂತು ಕಂಡುಮಿ
ನ್ನಪ್ಪೊಡಮಾಸೆವಾತನೆನಗೋಪನೆ ನೀಂ ದಯೆಗೆಯ್ಯಲಾಗದೇ|| ೯೯

ರಹಸ್ಯಭಾಷೆಯಲ್ಲಿ ಹೀಗೆಂದರು -೯೬. ನಿನಗಿಂತ ರಸಿಕರೂ ಚತುರರೂ ಯಾರಿದ್ದಾರೆ. ನಿನ್ನ ಎಲ್ಲ ಗುಣಗಳನ್ನೂ ಹೊಗಳಲು ಹೊರಟರೆ ನೀನು ಸರ್ವಗುಣಸಂಪನ್ನನೆನ್ನಲೇಬೇಕು. ನೀನು ಸದ್ಭಾವದಿಂದ ನಮ್ಮಲ್ಲಿ ಕೂಡಲು ಬಯಸಿ ಬಂದಿದ್ದೀಯೆ; ಅದೀಗ ಒಳ್ಳೆಯದಾಯಿತು. ನೀನು ಮಹಾದೇವನಾದ ಶಿವನ ಮುಂದಿರು ಬಸವನಲ್ಲದೆ ಮತ್ತೇನೆಂದು ಹೇಳೋಣ- ವ|| ಎಂದು ಅವರು ಆತನನ್ನು ಕಾಡಿ ಕಡೆಗಣಿಸಿ ಮಾತನಾಡಿ ಕಳುಹಿಸಲು ಬೇರೊಂದೆಡೆಯಲ್ಲಿ ಒಬ್ಬಳು ತನ್ನನ್ನು ಬಿಟ್ಟುಹೋಗುತ್ತಿದ್ದ ಹೊಸ ಪ್ರೇಮದ ಒಡೆಯನನ್ನು ಏನು ಮಾಡಿದರೂ ಹೋಗುವುದಕ್ಕೆ ಬಿಡದೆ ತನ್ನ ಪ್ರೀತಿಯನ್ನು ತೋರಿಸಿ ೯೭. ಇವನು ಮನೆಯ ಯಜಮಾನ, ಇವನು ಮನ್ಮಥ, ಪ್ರಥಮ ಪ್ರೇಮಕಾಲದ ಚಿಕ್ಕ ಹರೆಯದವ; ಇವ ನನ್ನನ್ನು ಬಿಟ್ಟಾಗ ನಾನು ಉಳಿಯುವುದು ಸಾಧ್ಯವೇ? ಎಂದು ಹೋಗುತ್ತಿರುವ ಪ್ರಿಯನನ್ನು ಸುಮ್ಮನೆ ಚಲಿಸುವುದಕ್ಕೂ ಬಿಡದೆ ಕಾಲುಗಳನ್ನು ಕಟ್ಟಿಕೊಂಡು ಅತ್ತು ಸಂಕೋಲೆ ಹಾಕಿದಂತೆ ಚಂಚಲನೇತ್ರೆಯಾದ ಅವಳು ವಿಶೇಷವಾಗಿ ಕಣ್ಣೀರನ್ನು ಸುರಿಸಿದಳು. ವ|| ಮತ್ತೊಬ್ಬನು ತನ್ನ ಸೂಳೆಯಲ್ಲಾದ ಬೇಸರವನ್ನು ತನ್ನ ಸ್ನೇಹಿತನಿಗೆ ಹೀಗೆ ಹೇಳಿದನು. ೯೮. (ಅವಳ) ಕೋಪಕ್ಕೆ ಹೆದರಿ (ಅವಳ) ಅಭಿಪ್ರಾಯವನ್ನು ತಿಳಿದು ಕೊಟ್ಟು ಅವಳ ಮನಸ್ಸನ್ನು

ವಶಪಡಿಸಿಕೊಂಡಿದ್ದರೂ ಅವಳು ರೇಗುವುದಕ್ಕೆ ಅಳತೆಯೂ ಅಂತ್ಯವೂ ಅಲ್ಲ. ತಲೆಹಿಡಿಕಿಯೂ ಶನಿಯಂತಹವಳೇ. ಮನೆಕೆಲಸ ಮಾಡುವ ದಾಸಿಯೂ ಮಾರಿಯಂತಹವಳೇ. ನಾದಿನಿಯು ಸೀರ್ಕರಡಿಯಂತಹವಳೇ. ಎಷ್ಟಾದರೂ ಸೂಳೆಯು ಒಲಿದೂ ಒಲ್ಲದಂತಿರುವವಳೆ ತಾನೆ! ಈ ತಲೆಬೇನೆಯನ್ನು ಹೇಗೆ ನೀಗಲಿ. ವ|| ಎಂದು ಹೇಳಿ ಮುಂದೆ ಹೋದನು. ಬೇರೊಬ್ಬ ಪ್ರಿಯಳು ತನ್ನ ತಾಯಿಯ ಕಣ್ಣನ್ನು ವಂಚಿಸಿ ತನ್ನ ಪ್ರಿಯಳ ಮನೆಗೆ ಹೋಗುತ್ತಿರುವ ತನ್ನ ಪ್ರೇಮದೊಡೆಯನನ್ನು ಹಿಡಿದುಕೊಂಡು

೯೯. ದೂದವಿಯರ ಕಯ್ಯಲ್ಲಿ ನಿನ್ನ ಕಾಲುಹಿಡಿದು ಕಳುಹಿಸಿದ ಮಾತುಗಳು ನಾಶವಾಗುತ್ತಿವೆ. (ನಿಷ್ಪ್ರಯೋಜಕವಾಗುತ್ತಿವೆ) ನಿತ್ಯವೂ ದುಖಪಟ್ಟು ಅಳುವುದರಿಂದ ಕಣ್ಣೀರು ವ್ಯರ್ಥವಾಗುತ್ತಿದೆ. ನಿಟ್ಟುಸಿರಿನ ಬಿಸಿಯುಸಿರು ಹಾಳಾಗುತ್ತಿದೆ. ನನ್ನ ಶರೀರವು ಬೇಟದ ಕಾಟದಿಂದ ಕ್ಷೀಣಿಸುತ್ತಿದೆ. ಇದನ್ನು ನೋಡಿಯೂ ಇನ್ನು ಮೇಲಾದರೂ ಆಶೆಯ ಮಾತನ್ನು ದಯೆಗೆಯ್ಯಬಾರದೇ? ವ|| ಎಂದು

ವ|| ಎಂದು ಕರುಣಂಬಡೆ ನುಡಿದೊಡಗೊಂಡು ಪೋದಳ್ ಮತ್ತಮೊಂದೆಡೆಯೊಳೊರ್ವಳ್ ಕುಂಟಣಿಯುಪರೋಧಕ್ಕೆ ಪಿರಿದೀವ ಮುದುಪನನುೞಯಲಂಜಿ ತನ್ನ ಬೇಸಱಂ ತನ್ನ ಸಬ್ಬವದಾಕೆಗಿಂತೆಂದಳ್-

ಚಂ|| ಕೊರೆವೊಡೆ ಬೆಟ್ಟುಗಳ್ ಬಿರುವುವುಣ್ಮುವ ಲಾಳೆಯ ಲೋಳೆಗಳ್ ಪೊನ
ಲ್ವರಿವುವು ಕೆಮ್ಮಿ ಕುಮ್ಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದೆಂ|
ದಿರದೆರ್ದೆಗಪ್ಪುದತ್ತಳಗಮಾ ನೆರೆಪಂ ನೆರೆವಂದು ಪೊಂಗಳಂ
ಸುರಿವೊಡಮಾರೊ ಸೈರಿಸುವರಾತನ ಪಲ್ಲಿಲ್ಲಿವಾಯ ನಾತಮಂ|| ೧೦೦

ವ|| ಎಂದು ನಗಿಸುತ್ತಿರ್ದಳ್ ಮತ್ತಮೊಂದೆಡೆಯೊಳೊರ್ವಳ್ ತನ್ನ ನಲ್ಲನಲ್ಲಿಗೆದೂದುವೋಗಿ ಬಂದ ದೂದವಿಗೇಗಯ್ವ ತೆಱನುಮನಱಯದೆ ಪದೆದು ಪಡೆಮಾತಂ ಬೆಸಗೊಳ್ವಳಂ ಕಂಡು-

ಚಂ|| ಬಿರಯಿಸಿ ಬೇಟದೊಳ್ ಬಿರಿವ ನಲ್ಲರಗಲ್ದು ಕನಲ್ದೊನಲ್ದು ನ
ಲ್ಲರ ದೆಸೆಯಿಂದಮೞವರೆ ಕೋಗಿಲೆಯಕ್ಕೆಲರಕ್ಕೆ ತುಂಬಿಯ|
ಕ್ಕರಗಿಳಿಯಕ್ಕೆ ಬಂದೊಡಮೊಱಲ್ದೆರ್ದೆಯಾಱುವರೆಂದೊಡೋತ ದೂ
ತರೆ ತರೆ ಬಂದ ಸಬ್ಬವದ ಮಾತುಗಳಂ ಗುಡಿಗಟ್ಟಿ ಕೇಳರೇ ೧೦೧

ವ|| ಅಂತುಮಲ್ಲದೆಯುಂ-

ಚಂ|| ಮನದೊಳಲಂಪನಾಳ್ದಿನಿಯನಟ್ಟಿದ ದೂದರ ಸೀಯನಪ್ಪ ಮಾ
ತಿನ ರಸದೊಳ್ ಕೊನರ್ವುದು ತಳಿರ್ವುದು ಪೂವುದು ಕಾಯ್ವುದಂತು ಕಾ
ಯ್ತನಿತಳಂತು ನಿಂದು ಮನದೊಳ್ ತೊದಳಿಲ್ಲದ ನಲ್ಮೆಯೆಂಬ ನಂ
ದನವನಮೋಪರೊಳ್ ನೆರೆದೊಡಂತು ರಸಂ ಬಿಡೆ ಪಣ್ತುದಾಗದೇ|| ೧೦೨

ವ|| ಅಂತುಮಲ್ಲದೆಯುಂ-

ಚಂ|| ಅನುವಿಸೆ ಬೇಟಕಾಱನೊಲವಿರ್ಮಡಿಯಪ್ಪುದು ಬಯ್ಕೆ ಬೇಟಕಾ
ಱನ ಬಗೆ ನಿಲ್ಲದಿಕ್ಕೆಗೊಳಗಪ್ಪುದು ನಿಟ್ಟಿಸೆ ಬೇಟ ಬೇಟಕಾ|
ಱನ ರುಚಿ ಬಂಬಲುಂ ತುಱುಗಲುಂ ಕೊಳುತಿರ್ಪುದು ನೂಂಕೆ ಬೇಟಕಾ
ಱನ ಮನವಟ್ಟಿ ಪತ್ತುವುದು ಬೇಟವಿದೇಂ ವಿಪರೀತವೃತ್ತಿಯೋ|| ೧೦೩

ಕರುಣೆಯು ಬರುವ ಹಾಗೆ ಮಾತನಾಡಿ ಜೊತೆಯಲ್ಲಿ ಕರೆದುಕೊಂಡು ಹೋದಳು. ಬೇರೊಂದು ಕಡೆಯಲ್ಲಿ ಕುಂಟಣಿಯ ಬಲಾತ್ಕಾರಕ್ಕೆ ವಿಶೇಷ ಧನವನ್ನು ಕೊಡುವ ಮುದುಕನನ್ನು ಬಿಡಲು ಅಂಜಿ ತನ್ನ ಬೇಸರವನ್ನು ತನ್ನ ಪ್ರಿಯಸಖಿಗೆ ಹೀಗೆಂದಳು. ೧೦೦. (ಆ ಮುದುಕನು) ಗೊರಕೆಹೊಡೆದರೆ ಬೆಟ್ಟಗಳೇ ಬಿರಿದು ಹೋಗುತ್ತವೆ. ಸುರಿಯುವ ಜೊಲ್ಲಿನ ಲೋಳೆಗಳು ಪ್ರವಾಹವಾಗಿ ಹರಿಯುತ್ತವೆ. ಕೆಮ್ಮಿ ಎದುಗುಟ್ಟಿದರೆ ತೋಳಿನಲ್ಲಿಯೇ ಜೀವ ಹೋಗುತ್ತದೆಯೆಂಬ ಭಯವುಂಟಾಗುತ್ತದೆ. (ಇಂತಹ) ಆ ಮುದುಕನು (ನನ್ನಲ್ಲಿ) ಕೂಡುವುದಕ್ಕೆ ಬಂದು (ಎಷ್ಟೇ) ಹೊನ್ನುಗಳನ್ನು ಸುರಿದರೂ ಅವನ ಹಲ್ಲಿಲ್ಲದ ಬಾಯಿನ ದುರ್ಗಂಧವನ್ನು ಯಾರು ತಾನೆ ಸಹಿಸುತ್ತಾರೆ. ವ|| ಎಂದು ನಗಿಸುತ್ತಿದ್ದಳು, ಇನ್ನೊಂದೆಡೆಯಲ್ಲಿ ಒಬ್ಬಳು ತನ್ನ ಪ್ರಿಯನ ಕಡೆಗೆ ಪ್ರೇಮಸಂದೇಶವನ್ನು ಕೊಂಡುಹೋಗಿ ಬಂದ ದೂತಿಗೆ ಏನು ಮಾಡಬೇಕೆಂಬುದನ್ನು ತಿಳಿಯದೆ ಆಶೆಪಟ್ಟು (ಅವನು ಕಳುಹಿಸಿದ) ಪ್ರತ್ಯುತ್ತರವನ್ನು ಕೇಳುವವಳನ್ನು ನೋಡಿ

೧೦೧. ವಿರಹವೇದನೆಯಿಂದ ನರಳುತ್ತಿರುವ ಪ್ರೇಮಿಗಳ ಕೋಪದಿಂದ ಅಗಲಿಹೋದ ತಮ್ಮನಲ್ಲರ ಕಡೆಯಿಂದ ಪ್ರೇಮಸಮಾಚಾರವು ಬರಲು ಕೋಗಿಲೆಯಾಗಲಿ, ಗಾಳಿಯಾಗಲಿ, ತುಂಬಿಯಾಗಲಿ, ಗಿಳಿಯಾಗಲಿ, ಬಂದರೂ ನಲಿದು ಮನಸ್ಸಮಾಧಾನವನ್ನು ಪಡೆಯುತ್ತಾರೆ ಎಂದಾಗ ತಮ್ಮ ಪ್ರೀತಿಪಾತ್ರರಾದ ದೂರತೇ ತಂದಿರುವ ಪ್ರಿಯವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ? ವ|| ಹಾಗಲ್ಲದೆಯೂ ೧೦೨. ಪ್ರಿಯನು ಮನಸ್ಸಿನಲ್ಲಿ ಸಂತೋಷಗೊಂಡು ಕಳುಹಿಸಿದ ದೂತರ ತಂದಿರುವ ಪ್ರಿಯವಾರ್ತೆಯನ್ನು ಪುಳಕಿತರಾಗಿ ಕೇಳುವುದಿಲ್ಲವೇ?

ವ|| ಹಾಗಲ್ಲದೆಯೂ ೧೦೨. ಪ್ರಿಯನು ಮನಸ್ಸಿನಲ್ಲಿ ಸಂತೋಷಗೊಂಡು ಕಳುಹಿಸಿದ ದೂತರ ಸಿಹಿಯಾದ ಮಾತಿನ ರಸದಲ್ಲಿ ಶುದ್ಧಪ್ರೇಮವೆಂಬ ನಂದನವನವು ಕವಲೊಡೆಯುವುದು, ಚಿಗುರುವುದು, ಹೂ ಬಿಡುವುದು. ಹಾಗೆಯೇ ಕಾಯಾಗುವುದು -ಮನಸ್ಸಿನಲ್ಲಿ ನಿಂತು ನಲ್ಲನಲ್ಲರ ಸಮಾಗಮದಲ್ಲಿ ಹಣ್ಣಾಗುವುದಿಲ್ಲವೇ? ವ|| ಹಾಗಲ್ಲದೆಯೂ ೧೦೩. ಬಲಾತ್ಕಾರ ಮಾಡಿದರೆ ಪ್ರೇಮಿಯ

ಪ್ರೀತಿ ಎರಡರಷ್ಟಾಗುತ್ತದೆ. ಬಯ್ದರೆ ಪ್ರಿಯನ ಮನಸ್ಸು ಅಸ್ಥಿರವಾಗುತ್ತದೆ. ದೃಷ್ಟಿಸಿ ನೋಡಿದರೆ ಪ್ರೇಮವೂ ಬೇಟೆಕಾರನ ಸವಿಯೂ

ವ|| ಇಂದಿವಿ ದೂದವರೆಂಬರ್ ಬೇಟಕಾಱರ ಬೇಟಮೆಂಬ ಲತೆಗಳಡರ್ಪಿರ್ಪಂತಿರ್ದರೆಂತಪ್ಪ ಬೇಟಂಗಳುಮವರ್ ಪೊಸಯಿಸೆ ಪೊಸತಪ್ಪುದು ಕಿಡಿಸೆ ಕಿಡುವುದಂತುಮಲ್ಲದೆಯುಂ-

ಚಂ|| ನುಡಿಗಳೊಳಾಸೆಯುಂಟೆನಲೊಡಂ ತಳೆದಂತಿರೆ ನಿಲ್ವುದೆಂತುಮಾ
ವೆಡೆಯೊಳಮಾಸೆಗಾಣೆನೆನೆ ತೊಟ್ಟನೆ ಪೋಪುವು ನಲ್ಲರಿರ್ವರೀ|
ರೊಡಲೊಳಗಿರ್ಪ ಜೀವಮದುಕಾರಣದಿಂದಮೆ ಪೋಪ ಬರ್ಪೊಡಂ
ಬಡನೊಳಕೊಂಡ ದೂದವರ ಕೆಯ್ಯೊಳೆ ಕೆಯ್ಯೆಡೆಯಿರ್ಪುದಾಗದೇ|| ೧೦೪

ವ|| ಎಂದು ನುಡಿಯುತ್ತುಂ ಬರೆವರೆ ಮತ್ತೊಂದೆಡೆಯೊಳೊರ್ವಂ ಗರ್ಭೇಶ್ವರಂ ತನ್ನ ಹೃದಯೇಶ್ವರಿಯನಗಲ್ದು ಬಂದು ಪೆಱರಾರುಮಂ ಮೆಚ್ಚದಾಕೆಯಂ ನೆನೆದು-

ಚಂ|| ಮಿಱುಗುವ ತೋರಹಾರಮುಮನಪ್ಪಿನ ಕಾಳಸೆಗಡ್ಡಮೆಂಬ ಬೇ
ಸಱನೊಳೆ ಕಟ್ಟಲೊಲ್ಲದನಿತೞ್ಕಱನಿೞ್ಕುಳಿಗೊಂಡಲಂಪಿನ|
ತ್ತೆಱಗಿದ ನಲ್ಲಳಳ್ಳೆರ್ದೆಯೊಳಕ್ಕಟ ಬೆಟ್ಟುಗಳುಂ ಬನಂಗಳುಂ
ತೊಗಳುವಿಗಳೊಡ್ಡೞಯದೊಡ್ಡಿಸೆ ಸೈರಿಸುವಂತುಟಾದುದೇ|| ೧೦೫

ಮುನಿಸಿನೊಳಾದಮೇವಯಿಸಿ ಸೈರಿಸದಾದೞಲೊಳ್ ಕನಲ್ದು ಕಂ
ಗನೆ ಕನಲುತ್ತುಮುಮ್ಮಳಿಸಿ ಸೈರಿಸಲಾಱದೆ ಮೇಲೆವಾಯ್ದು ಬ
ಯ್ದನುವಿಸಿ ಕಾಡಿ ನೋಡಿ ತಿಳಿದೞ್ಕಱನಿೞ್ಕುಳಿಗೊಂಡಲಂಪುಗಳ್
ಕನಸಿನೊಳಂ ಪಳಂಚೆಲೆವುವೆನ್ನೆರ್ದೆಯೊಳ್ ತರಾಳಾಯತೇಕ್ಷಣೇ|| ೧೦೬

ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನಿರ್ದಂದಿನ ಮುಳಿಸೊಸಗೆಗಳಂ ನೆನೆದು-

ಚಂ|| ಬಗೆ ಗೆಲಲೆಂದು ಕಾಡಿ ಪುಸಿನಿದ್ದೆಯೊಳಾನಿರೆ ಲಲ್ಲೆಗೆಯ್ದು ಲ
ಲ್ಲೆಗೆ ಮದಿರ್ದೊಡೞ್ಕಱನೊಳೊಂದಿ ಮೊಗಂ ಮೊಗದತ್ತ ಸಾರ್ಚಿ ಬೆ|
ಚ್ಚಗೆ ನಿಡುಸುಯ್ದ ನಲ್ಲಳ ಮುಖಾಂಬುಜ ಸೌರಭದೊಳ್ ಪೊದಳ್ದದೇಂ
ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ|| ೧೦೭

ರಾಶಿರಾಶಿಯಾಗುತ್ತದೆ. ನೂಂಕಿದರೆ ಬೇಟೆಕಾರನ ಮನಸ್ಸು ಬೆನ್ನಟ್ಟಿ ಬರುತ್ತದೆ. ಆದುದರಿಂದ ಈ ಬೇಟವೆಂಬುದು ಎಂಥ ಪರಸ್ಪರ ವಿರೋಧ ಸ್ವಭಾವವುಳ್ಳುದೋ? ವ|| ಹೀಗೆ ದೂದವಿಯರೆಂಬುವರು ಬೇಟೆಕಾರರ ಬೇಟವೆಂಬ ಲತೆಗೆ ಆಶ್ರಯದಂತಿದ್ದಾರೆ. ಎಂತಹ ಪ್ರೇಮವೂ ಅವರು ಹೊಸದು ಮಾಡಿದರೆ ಹೊಸದಾಗುತ್ತದೆ. ಕೆಡಿಸಿದರೆ ಕೆಟ್ಟುಹೋಗುತ್ತದೆ. ಅಲ್ಲದೆಯೂ ೧೦೪. ಪ್ರೇಮಿಗಳಿಬ್ಬರ ಶರೀರದಲ್ಲಿರುವ ಪ್ರಾಣವು ದೂತರು ತರುವ ಮಾತುಗಳಲ್ಲಿ ಆಸೆಯಿದೆಯೆಂದೊಡನೆ ಜೀವಧಾರಣೆ ಮಾಡಿದ ಹಾಗೆ ಎದ್ದು ನಿಲ್ಲುತ್ತದೆ. ಯಾರ ಕಡೆಯಲ್ಲಿಯೂ ಆಸೆಯಿಲ್ಲವೆಂದೊಡನೆ ತಟಕ್ಕನೆ ಹೊರಟು ಹೋಗುತ್ತದೆ. ಆದುದರಿಂದ ಪ್ರಿಯರಲ್ಲಿಗೆ ಹೋಗಿ ಬಂದು ಅವರ ಒಪ್ಪಿಗೆಯನ್ನು ಪಡೆದಿರುವ ದೂತಿಯರ ಕಯ್ಯಲ್ಲಿಯೇ ಪ್ರಣಯಿಗಳ ಪ್ರಾಣವು ಮೀಸಲಾಗಿರುವುದು ವ|| ಎಂದು ಮಾತನಾಡುತ್ತ (ಅಷ್ಟು ಗಾಢವಾದ ಪ್ರೇಮವನ್ನು ಅಗಲಿ ನಾನು ದೂರವಿರುವುದನ್ನು ಹೇಗೆ ಸಹಿಸಲಿ ಎಂದು ಭಾವ) ಬರುತ್ತಿರಲು ಮತ್ತೊಂದು ಕಡೆಯಲ್ಲಿ ಒಬ್ಬ ಆಗರ್ಭ ಶ್ರೀಮಂತನು ತನ್ನ ಪ್ರಾಣಪ್ರಿಯೆಯನ್ನು ಅಗಲಿ ಬಂದು ಬೇರೆ ಯಾರನ್ನೂ ಮೆಚ್ಚದೆ ಆಕೆಯನ್ನು ಜ್ಞಾಪಿಸಿಕೊಂಡು ೧೦೫. ಪ್ರಿಯಳು ಮುತ್ತಿನ ಹಾರವನ್ನು ಧರಿಸಿದರೆ ನಮ್ಮ ಆಲಿಂಗನದ ಬೆಸುಗೆಗೆ ಅಡ್ಡಿಯಾಗುತ್ತದೆಂದು ಅವಳ ಕತ್ತಿನಲ್ಲಿ ಅದನ್ನು ತೊಡಿಸದೇ ಅಷ್ಟು ಪ್ರೇಮವನ್ನು ಸೆಳೆದುಕೊಂಡ ನಾನು ಈಗ ಸುಖದ ಕಡೆಗೇ ಬಾಗಿದ ನಲ್ಲಳ ನಡುಗುವ ಎದೆಗೂ ನನಗೂ ಮಧ್ಯೆ ಅಯ್ಯೋ ಬೆಟ್ಟಗಳೂ ತೊರೆಗಳೂ ಕಾಡುಗಳೂ ರಾಶಿ ರಾಶಿಯಾಗಿ ಅಡ್ಡವಾಗಿರುವಂತೆ ಚಾಚಿಕೊಂಡಿರಲು ಸಹಿಸುವ ಹಾಗಾಯಿತೆ? ಎ ೧೦೬. ಎಲೌ ಚಂಚಲಾಕ್ಷಿಯೇ ಕೋಪದಲ್ಲಿ ವಿಶೇಷವಾಗಿ ಅಸಮಾಧಾನಗೊಂಡು ಸಹಿಸಲಾರದೆ ವಿಶೇಷ ಕೋಪಿಸುತ್ತ ದುಖಿಸಿ ಹೇಗೂ ತಾಳಲಾರದೆ ಮೇಲೆ ಬಿದ್ದು ಬಯ್ದು ಬಲಾತ್ಕರಿಸಿ ಕಾಡಿ ನೋಡಿ ಸಮಾಧಾನವನ್ನು ಹೊಂದಿ ಮುತ್ತನ್ನು ಸೆಳೆದುಕೊಂಡ ಸುಖದ ನೆನಪುಗಳು ಕನಸ್ಸಿನಲ್ಲಿಯೂ ನನ್ನೆದೆಯನ್ನು ತಗುಲಿ ಪೀಡಿಸುತ್ತಿರುವುವು ವ|| ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯ ಜೊತೆಯಲ್ಲಿದ್ದ ಆ ದಿನದ ಕೋಪ ಪ್ರಸಾದಗಳನ್ನು ನೆನೆಸಿಕೊಂಡು ೧೦೭. (ಪ್ರಿಯೆಯೊಡನೆ) ಜಗಳವಾಡಿ ಅವಳ ಮನಸ್ಸನ್ನು ಗೆಲ್ಲಬೇಕೆಂದು ನಾನು ಹುಸಿನಿದ್ದೆಯಲ್ಲಿರಲು ತಾನು ಮುದ್ದುಮಾತುಗಳನ್ನಾಡಿ ಆ ಮುದ್ದುಮಾತಿಗೂ ನಾನು

ವ|| ಎಂದು ತನ್ನೊಳ್ ಪಲುಂಬುತಿರ್ದನಂ ಕಂಡೀತನುಮೆಮ್ಮಂದಿಗನುಮೆಮ್ಮ ನಂಟನು ಮಕ್ಕುಮೆಂದು ಮುಗುಳ್ನಗೆ ನಗುತ್ತುಂ ಬರ್ಪನೊಂದೆಡೆಯೊಳ್-

ಚಂ|| ಒಲವಿನೊಳಾದ ಕಾಯ್ದು ಮೀಗೆ ಕಾದಲನಂ ಬಿಸುಟಂತೆ ಪೋಪ ಕಾ
ದಲಳೞುತಂ ತೆಱಂದಿರಿದು ನೋಡಿದ ನೋಟದೊಳೆಯ್ದೆ ತಳ್ತ ಪೆ|
ರ್ಮೊಲೆ ಪೊಱಮುಯ್ವು ಬೆನ್ನಿನಿತುಮೊರ್ಮೆಯೆ ನಾಂಬಿನಮುಣ್ಮಿ ಪೊಣ್ಮಿ ಕ
ಣ್ಮಲರ್ಗಳಿನೆಚ್ಚು ಪಾಯ್ದುವರಲಂಬುಗಳಂತೆ ವಿಲೋಚನಾಂಬುಗಳ್|| ೧೦೮

ವ|| ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂ ಕೃತವಿಚಿತ್ರಭಿತ್ತಿವಿರಾಜಿತರಮ್ಯಹರ್ಮ್ಯತಳದೊಳ್ ಪಲಕಾಲಮಗಲ್ದ ನಲ್ಲರಿರ್ವರುಮೊಂದೆಡೆಯೊಳ್ ಕೂಡಿ-

ಮ|| ಸಮಸಂದೞ್ಕಱಲಂಪನೀಯೆ ಶಯನಂ ಘರ್ಮಾಂಬುವಿಂ ನಾನೆ ಮು
ನ್ನಮೆ ನಾಣೊೞ್ಕುಡಿವೋಗಿ ಸೂಸುವ ಪದಂ ಗಂಗಾಂಬುವಂ ಪೋಲೆ ವಿ|
ಭ್ರಮಮಂ ಕಂಠರವಕ್ಕೆ ತಾಡನ ರವಂ ತಂದೀಯೆ ತಚ್ಛಯ್ಯೆಯೊಳ್
ಸಮಹಸ್ತಂಬಿಡಿವಂತುಟಾಯ್ತು ಸುರತ ಪ್ರಾರಂಭ ಕೋಳಾಹಳಂ|| ೧೦೯

ವ|| ಅಂತನೇಕಪ್ರಕಾರ ಪುರ ಜನಜನಿತ ವಿಕಾರಂಗಳಂ ತೊೞಲ್ದು ನೋೞ್ಪನ್ನೆಗಂ-

ಚಂ|| ಸೊಡರ್ಗುಡಿಯೊಯ್ಯನಾಗೆ ಪೊಸ ಮಲ್ಲಿಗೆ ಮೆಲ್ಲಗೆ ಕಂಪು ನಾ ತ
ಣ್ಪಿಡಿದೆಲರೂದೆ ಗಾವರದ ಮೆಲ್ಲುಲಿ ತುಂಬಿಯ ಗಾವರಂಗಳಂ|
ಗೆಡೆಗೊಳೆ ಚಂದ್ರಿಕಾಪ್ರಭೆ ಮೊದಲ್ಗಿಡೆ ನಾಡೆ ವಿತರ್ಕದಿಂ ಬೆರ
ಲ್ಮಿಡಿದು ಗುಣಾರ್ಣವಂ ನೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ|| ೧೧೦

ವ|| ಆಗಳ್ ತನ್ನೊಡನೆ ತೊೞಲ್ವ ನಾಗರಕ ವಿಟ ವಿದೂಷಕ ಪೀಠಮರ್ದಕರ್ಕಳನಿರಲ್ವೇೞ್ದು ರಾಜಮಂದಿರಮಂ ಪೊಕ್ಕು ತನ್ನ ಪವಡಿಸುವ ಮಾಡಕ್ಕೆವಂದು ಹಂಸ ಧವಳ ಶಯ್ಯಾತಳದೊಳ್ ಗಂಗಾನದೀ ಪುಳಿನ ಪರಿಸರ ಪ್ರದೇಶದೊಳ್ ಮದೊಱಗುವೈರಾವತದಂತೆ ಪವಡಿಸಿ ಕಿಱದಾನುಂ ಬೇಗದೊಳ್ ಸುಭದ್ರೆಯಂ ಕನಸಿನೊಳ್ ಕಂಡು ನನಸೆಂದು ಬಗೆದು ಮಂಗಳಪಾಠಕರವಂಗಳೊಳ್ ಭೋಂಕನೆೞ್ಚತ್ತನನ್ನೆಗಂ-

ಮೈಮರೆತವನಂತಿರಲು ಪ್ರೇಮದಿಂದ ಕೂಡಿ ನನ್ನ ಮುಖದೊಡನೆ ತನ್ನ ಮುಖವನ್ನು ಸೇರಿಸಿ ಬಿಸಿಯಾಗಿ ನಿಟ್ಟುಸಿರು ಬಿಟ್ಟ ಪ್ರಿಯಳ ಮುಖಕಮಲದ ಸುಗಂಧದಲ್ಲಿ ಸೇರಿಕೊಂಡ ಪಚ್ಚಕರ್ಪೂರ ಮಿಶ್ರಿತವಾದ ತಾಂಬೂಲದ ಉಂಡೆಯೂ ಎಷ್ಟು ಗಮಗಮಿಸಿತ್ತೊ? ವ|| ಎಂದು ತನ್ನಲ್ಲಿಯೇ ಹಲುಬುತ್ತಿದ್ದವನನ್ನು ಅರ್ಜುನನು ಕಂಡು ಇವನೂ ನಮ್ಮಂತಹವನೂ ನಮ್ಮ ನಂಟನೂ ಆಗಿದ್ದಾನೆ ಎಂದು ಮುಗುಳ್ನಗೆ ನಗುತ್ತ ಬರುತ್ತಿದ್ದವನು ಒಂದು ಕಡೆಯಲ್ಲಿ ೧೦೮. ಪ್ರಣಯಕಲಹದಲ್ಲಿ ಉಂಟಾದ ಕೋಪವು ಹೆಚ್ಚಾಗಲು ಪ್ರಿಯನನ್ನು ತೊರೆದು ಹೋಗುತ್ತಿರುವ ಪ್ರಿಯಳು ಬಗೆಬಗೆಯಾಗಿ ಅಳುತ್ತಾ ಹಿಂತಿರುಗಿ ನೋಡಿದ ನೋಟದಲ್ಲಿ ಅವಳ ಗಾಢವಾದ ಪೆರ್ಮೊಲೆಗಳೂ ಹೆಗಲ ಹಿಂಭಾಗವೂ ಬೆನ್ನೂ ಏಕಕಾಲದಲ್ಲಿ ತೊಯ್ದುಹೋಗುವ ಹಾಗೆ ಅವಳ ಹೂವಿನಂತಿರುವ ಕಣ್ಣುಗಳಿಂದ ಕಣ್ಣೀರು ಪುಷ್ಟಬಾಣಗಳಂತೆ

ಹೆಚ್ಚಿ ಚಿಮ್ಮಿ ಸೂಸಿ ಹರಿದುವು. ವ|| ಮತ್ತೊಂದು ಕಡೆಯಲ್ಲಿ ಕಪ್ಪಾದ ಅಗುರು ಧೂಪದ ಹೊಗೆಯಿಂದ ಮಾಸಿದ ಶ್ಯಾಮಲ ವರ್ಣದಿಂದ ಅಲಂಕರಿಸಲ್ಪಟ್ಟು ಚಿತ್ರಮಯವಾದ ಗೋಡೆಗಳಿಂದ ವಿರಾಜಮಾನವಾಗಿರುವ ರಮಣೀಯವಾದ ಉಪ್ಪರಿಗೆಯ ಪ್ರದೇಶದಲ್ಲಿ ಹಲವು ಕಾಲ ಅಗಲಿದ್ದ ಇಬ್ಬರು ಪ್ರೇಮಿಗಳು ಒಂದು ಕಡೆ ಕೂಡಿದ್ದರು. ೧೦೯. ಆ ಪ್ರಿಯ ಪ್ರೇಯಸಿಯರಲ್ಲಿ ಸಮಾನವಾಗಿ ಉಂಟಾದ ಪ್ರೀತಿಯು ಸೌಖ್ಯವನ್ನುಂಟುಮಾಡಲು ಬೆವರಿನಿಂದ ಹಾಸಿಗೆಯು ತೊಯ್ದು ಹೋಯಿತು. ಮೊದಲೇ ಲಜ್ಜೆಯಿಂದ ಪ್ರಸರಿಸಿ ಹರಿಯುವ ಸುರತದ್ರವವು ಗಂಗಾಜಲವನ್ನು ಹೋಲುತ್ತಿತ್ತು. ಕತ್ತಿನ ಗರಗರಿಕೆಯ ಶಬ್ದಕ್ಕೆ ಸುರತಧ್ವನಿ ಸೊಗಸನ್ನುಂಟುಮಾಡುತ್ತಿತ್ತು. ಆ ಹಾಸಿಗೆಯಲ್ಲಿ ರತಿಕ್ರೀಡೆಯ ಪ್ರಾರಂಭದ ಆರ್ಭಟವು ಸಮಾನ ಹಸ್ತವನ್ನು ಹಿಡಿಯುವ ಹಾಗಾಯಿತು. ಪ್ರಿಯ ಪ್ರೇಯಸಿಯರ ಸುರತಕ್ರೀಡೆಯು ಸಮಾನ ಪ್ರಮಾಣವುಳ್ಳದ್ದಾಯಿತು. ವ|| ಹೀಗೆ ಪುರಜನರ ಅನೇಕ ಪ್ರಕಾರವಾದ ವಿಕಾರಗಳನ್ನು ಅರ್ಜುನನು ನೋಡುತ್ತ ಬರುತ್ತಿರಲು ೧೧೦. ದೀಪದ ಕುಡಿಯು ಮಲಿನವಾಯಿತು, ಮಲ್ಲಿಗೆಯು ಮೃದುವಾಗಿ ವಾಸನೆಯನ್ನು ಬೀರಿತು, ತಂಪಾದ ಗಾಳಿ ಬೀಸಿತು. ಪ್ರಾತಕಾಲದ ಮೃದುವಾದ ಧ್ವನಿಯು ದುಂಬಿಯ ಧ್ವನಿಯೊಡನೆ ಕೂಡಿಕೊಂಡಿತು. ಬೆಳುದಿಂಗಳಿನ ಕಾಂತಿ ಕಡಮೆಯಾಯಿತು. ವಿಶೇಷವಾದ ತರ್ಕದಿಂದ ಅರ್ಜುನನು ಬೆಳಗಾಗುವ ಹೊತ್ತನ್ನು ಪೂರ್ಣವಾಗಿ ತಿಳಿದನು. ವ|| ಆತ ತನ್ನೊಡನೆ

ಚಂ|| ಪುದಿದ ತಮಂ ಮದೀಯ ಕಿರಣಾಳಿಯನಾನದವೋಲೆ ನಿನ್ನ ನಾ
ವದಟರುಮಾನರೆನ್ನುದಯಮಭ್ಯುದಯಂ ನಿನಗೆಂದು ಕನ್ನೆಯಂ|
ಪದೆದೊಡಗೊಂಡು ಪೋಗಿರದಿರೆಂದು ಗುಣಾರ್ಣವ ಭೂಭುಜಂಗೆ ಕ
ಟ್ಟಿದಿರೊಳೆ ಬಟ್ಟೆದೋಱುವವೊಲಂದೊಗೆದಂ ಕಮಲೈಕಬಾಂಧವಂ|| ೧೧೧

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಚತುರ್ಥಾಶ್ವಾಸಂ

ತೊಳಲುತ್ತಿದ್ದ ನಾಗರಿಕ, ವಿಟ, ವಿದೂಷಕ, ಪೀಠಮರ್ದಕರನ್ನು ಇರಹೇಳಿ ಅರಮನೆಯನ್ನು ಪ್ರವೇಶಿಸಿ ತಾನು ಮಲಗುವ ಉಪ್ಪರಿಗೆಯ ಮನೆಗೆ ಬಂದು ಹಂಸದಷ್ಟು ಬೆಳ್ಳಗಿರುವ ಹಾಸಿಗೆಯಲ್ಲಿ ಗಂಗಾನದಿಯ ಮರಳು ದಿಣ್ಣೆಯ ಪ್ರದೇಶದಲ್ಲಿ ಮರೆತು ಮಲಗಿರುವ ಐರಾವತದ ಹಾಗೆ ಮಲಗಿದ್ದು ಕೆಲವು ಕಾಲದ ಮೇಲೆ ಸುಭದ್ರೆಯನ್ನು ಕನಸಿನಲ್ಲಿ ಕಂಡು ಅದು ಪ್ರತ್ಯಕ್ಷವೇ ಎಂದು ಭಾವಿಸುವಷ್ಟರಲ್ಲಿ ಮಂಗಳವನ್ನು ಹಾಡುವ ಹೊಗಳುಭಟರ ಶಬ್ದಗಳಿಂದ ಇದ್ದಕ್ಕಿದ್ದ ಹಾಗೆ ಎದ್ದನು. ಅಷ್ಟರಲ್ಲಿ ೧೧೧. ವ್ಯಾಪ್ತವಾದ ಕತ್ತಲೆಯು ನನ್ನ ಕಿರಣಸಮೂಹಗಳನ್ನು ಎದುರಿಸಲಾರದು. ಹಾಗೆಯೇ ನಿನ್ನನ್ನು ಯಾವ ಶೂರರೂ ಎದುರಿಸರು. ನನ್ನ ಉದಯವು ನಿನಗೆ ಶ್ರೇಯಸ್ಕರವಾದುದು, ಕನ್ಯೆಯಾದ ಸುಭದ್ರೆಯನ್ನು ಬಯಸಿ ಜೊತೆಯಲ್ಲಿ ಕರೆದುಕೊಂಡು ಹೋಗು (ಹೋಗದೇ ಇರಬೇಡ) ಇಲ್ಲಿರಬೇಡ ಎಂದು ಅರ್ಜುನ ಮಹಾರಾಜನಿಗೆ ಮುಂದಿನ ದಾರಿ ತೋರಿಸುವ ಹಾಗೆ ಸೂರ್ಯನು ಆ ದಿನ ಉದಯವಾದನು. ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದ ಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾ ಗುಣಾರ್ಣವನಿಂದ ರಚಿತವಾದ ವಿಕ್ರಮಾರ್ಜುನ ವಿಜಯದಲ್ಲಿ ನಾಲ್ಕನೆಯ ಆಶ್ವಾಸವು.
************




************

ಕಾಮೆಂಟ್‌ಗಳಿಲ್ಲ: