ಸಂಜೆ ಐದರ ಮಳೆ (ಕವನ ಸಂಕಲನದ ಆಯ್ದ ಕವನಗಳು)

ಸಂಜೆ ಐದರ ಮಳೆ (ಕವನ ಸಂಕಲನದ ಆಯ್ದ ಕವನಗಳು)
                ೧. ನಿನ್ನ ಚಿತ್ರವಾದದ್ದು ಹೇಗೆ?
ವರ್ಷಗಳ ಕೆಳಗೆ ರೋಮ ರೋಮದಲ್ಲು ಸ್ವಿಚ್ಚೊತ್ತಿದ್ದ
ಆಗುಂಬೆಯವಳ ಕೆನ್ನೆ ತುಟಿ ;
ಮೊನ್ನೆ ತಾನೇ ಸರ್ವೇಂದ್ರಿಯಗಳ ಡ್ರಿಲ್ಲುಮಾಡಿಸಿದ
ಸಿನಿಮಾನಟಿಯ ಸಾರ್ವಜನಿಕ ಕಟಿ ;
ಕೊಪ್ಪದಾಕೆಯ ಮೈಬಣ್ಣದ ಅಪ್ಪಟ
ಹೆಗ್ಗಡಿತಿತನದ ಝಳಪು ;
ಚಿಕ್ಕಂದಿನ ನೆನಪು ದೀಪಾವಳಿಸುವ ಮನೆಜವಾನಿ
ಸಕೀನಾಳ ಮೊಣಕಾಲ ಹೊಳಪು ;
ಕಣ್ಣು ವ್ಯಾಪಾರ ಬೆಳೆಸುವ
ಮನಸ್ಸು ಸದಾ ತಂಗಲೆಳೆಸುವ
ನಗೆಬಲೆಯ ಕೊಡಗಿಯ ಎಡಬೈತಲೆಯ
ತುಂಬು ತುರುಬಿನ ಹಸೆ ;
ಯಾರೋ ಮಲೆಯಾಳಿ ಮಂಗಳೆಯ
ಎರಡು ಅಮೃತದ ಬೊಗಸೆ---

ಥಟ್ಟನೆ ಕಾಡಿಸಿ,
ಅವನೆಲ್ಲ ಒಟ್ಟುಗೂಡಿಸಿ
ನಾ ಬರೆದ ಚಿತ್ರ
ಜಯನಗರದ ಹದಿನಾರನೆಯ ಬೀದಿಯನು ತಿಂಗಳ ಹಿಂದೆ
ಬೆಳುದಿಂಗಳಿಸಿದ ನೀನಾದದ್ದು ಹೇಗೆಂಬುದೇ
ನನ್ನ ತಲೆಕೆಡಿಸಿರುವ ವಿಚಿತ್ರ.

                 ೨.ಸಂಕೇತ.
ಹಗಲಲ್ಲಿ....
ಆಕಳಿಕೆಯ ನಿದ್ದೆಗಣ್ಣೆನ ಬಿಳಿಚುಮೊಗ ;
ರಜಾದಿನದ ಕಛೇರಿ ;
ಹುಡುಗರ ಸಿಳ್ಳು ಹುಸಿಕೆಮ್ಮು ಪಹರೆಗಳಿಗೆ
ಗೋಡೆ ರಸ್ತೆಗಳ ಬರಹಗಳಿಗೆ ಕೇಂದ್ರ ;
ಗಬಕ್ಕೆಂದು ಹಾರುವ ಹೆಬ್ಬುಲಿ ಮಲಗಿರುವ
ಗುಹೆಯ ನಿಶ್ಯಬ್ದದಂತೆ ಭಯಾನಕ ;

ಇರುಳಲ್ಲಿ....
ಗಾರುಡಿಗನ ಪುಂಗಿ ; ಸಿನಿಮ ಪೋಸ್ಟರಿನ ನಿತಂಬದ ಭಂಗಿ ;
ದಿನಕ್ಕೊಂದು ಹೊಸ ಚಹರೆ ಜಟಕಗಳ ಸೆಳೆತ.
ಕಾಮನಬಿಲ್ಲುಗಳ ಬೀಗಿಸಿ ಬಂದವರ ಮೈನವಿರ ನೇವರಿಸಿ
ಪೊಗರ ಹಗುರಿಸಿ ಸಿಹಿಯ ಒಗರಿಸಿ--

ನಡುವಯ್ಕರ ಮುಂಡೆಯರ ಬೇಸರ ತಮಾಷೆಗೆ
ಗಿಣಿಕುದುಕಿಗಣಿಯಾದ ಹರಯದ
ಗಿಲಕಿನಗೆಯವರ ಸಂಕೇತದ ಭಾಷೆಗೆ
ಸೌದೆಯೊದಗಿಸಿ ;
ಮಾನಿನಿಯರ ಸೆರಗ ಸರಿಪಡಿಸುವಿಕೆ, ತಲೆತುಂಬ ಹೊದೆಯುವಿಕೆ,
ಬಿಡ್ತು -- ತಪ್ಪಾಯ್ತು -- ಶಾಂತಂ ಪಾಪಂಗಳಿಗೆ
ಒಟ್ಟಾರೆ ಮುತ್ತೈದೆಯರ ಧೀರ್ಘಸುಮಂಗಲೀತನಕ್ಕೆ
ಎಚ್ಚರಿಕೆಯಾಗಿ

ಪಾಪದಂತೆ ಸುಪರಿಚಿತವಾಗಿ
ಊಹಾಪೋಹಗಳ ಸುತ್ತ
ಬಾನುಲಿಸುತ್ತ
ಇದೆ
ಸಂಸಾರಸ್ಥರ ಕೇರಿಯಲ್ಲಿನ ಒಂದು
ವೇಶ್ಯಾಗೃಹ.

              ೩.ಕಲೆ
ಕಣ್ಮಿಟುಕು, ಸಿಳ್ಳು, ಬೆಲ್ಲಿಗೆ
ಟೈಟ್ ಪ್ಯಾಂಟು, ಟೈ,
ಮೀಸೆಕೆಳಗಿನ ಲಫಂಗ ಜೊಲ್ಲೊಗೆ-
ಹಗಲು ಹೊಸ್ತಿಲಿನ ಹೊಚ್ಚ ಹೊಸ ಬಿಳಿ ಹುಲ್ಲು
ರಾತ್ರಿ ಸತಿಸಾವಿತ್ರಿತನದ ಪತಿಕಾಲೊತ್ತು,
ದೇಶಾವರಿಯ ಮಾಸಲು ಮುತ್ತು
ಅಲ್ಲ ಕಲೆ

ಸದ್ಗೃಹಸ್ಥೆಯ ಸೊಕ್ಕು ;
ಬೀದಿಬಸವಿತನಕ್ಕೆ ಬಾಗಿಲಿಕ್ಕು.

ನಟ್ಟಿರುಳ ಕಾಮುಕತೆ
ಗೆದುರಾದ ಹಳಸು ನಗೆ,
ಗುಳಿಗಣ್ಣಿನೊಂದು ಜತೆ
ದಳ್ಳಾಳಿ ಕಸುಬಲ್ಲ ಕಲೆ

ಗಗನ ಪರಿಚಾರಿಕೆ
ಪ್ರೇಮದಭಿಸಾರಿಕೆಯ ಆತ್ಮೀಯ ಕೋರಿಕೆ.

ಹತ್ತು ಕೈ ಬದಲಿದರು ಮಾಸಿದರು
ಅಷ್ಟಿಷ್ಟು ಹರಿದರೂ ಅದೇ ಬೆಲೆ
ಕರೆನ್ಸಿನೋಟು ಕಲೆ.


            ೪. ನಿಮ್ಮೊಡನಿದ್ದೂ ನಿಮ್ಮಂತಾಗದೆ
ನಿಮ್ಮೊಡನಿದ್ದೊ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲುಕಷ್ಟದ ಕೆಲಸ.

ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು
ಕೆಣಕಿ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ಒಳಗೊಳಗೆ ಬೇರುಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.

                    ೫. ಪಯಣದ ಅನಿಸಿಕೆ.
ಸೇದುತ್ತ ಕೆಮ್ಮಿ ಏದುತ್ತ ಬಡಬಡಿಸುತ್ತ
ಹಹ್ಹಹ್ಹಾ ಹಿಹ್ಹಿಹ್ಹೀ ಮೌನವ ಗುಡಿಸುತ್ತ
ಕುರುಕುತ್ತ ಅಳ್ಳಳ್ಳಾಯಿ ಮೆಲ್ಲುತ್ತ ಕಳ್ಳೆಕಾಯಿ
ಎದ್ದು ಮೈಮುರಿಯುತ್ತ ಕದ್ದು
ಹೆಣ್ಣೆದೆಯ ಕಣ್ಣಿಂದ ಮೈಮರೆಯುತ್ತ
ತಲೆ ಕೆರೆಯುತ್ತ ನಗೆಬಲೆಯ ತೆರೆಯುತ್ತ
ಸ್ಲಮ್ಲುಗಳ ಉಸಿರುತ್ತ
ನೋಡುತ್ತ ಗದ್ದೆಗಳ ಹಸಿರತ್ತ

ಮಾಸಾಂತ್ಯದ ಸಂಸಾರಿಯ ಮುಖವ ಸಂಜೆಯ ಸೀಳುತ್ತ
ದುರಾಸೆಯಂತೆ ಬೆಳೆಬೆಳೆಬೆಳೆದಿರುವ
ಹಳಿಗಳ ಮೇಲೆ ಒದ್ದಾಡಿರುವ ರೈಲಿನ ಡಬ್ಬಿಯ -

ದೇಸಿನಾಟಕದ ಮಾಸಿದ ಸೀನರಿಯ ಜ್ನಾಪಿಸುವ
ಮಂಕು ಬೆಳಕಲ್ಲಿ ಕುಸುಮೇಲೋಗರವಾಗಿ
ಅನುಭವವ ಛಾಪಿಸುವ ನನ್ನ ಸಹಪ್ರಯಾಣಿಕರು.
 
 

                 ೬. ಹೊಳೆ.
ನಡುಹಗಲು ಸ್ವಪ್ನಿಸಿದ ಹೊಳೆ
ತಂಪಿನ ಸ್ಯಾಂಪಲ್ಲುಗಳ ತಳ್ಳಿ
ದಡದ ರಂಜದ ಗಿಡದ ನನ್ನ ಕಾಲೆಡೆಯಲ್ಲಿ
ಬಟ್ಟಗಣ್ಣವಳೆ
ಎಳೆಯುತ್ತಿದೆ, ಎದೆಯ ನಿರ್ಧಾರವನು ಅಳೆಯುತ್ತಿದೆ-
ಬಿಸಿಲ ಧಗೆ ಮೈಲಿಗೆ
ಪರಿಹರಿಸುವಾತುರದ ಬಗೆ
ತೆರೆಯ ಕರೆ ಕೂಗಾಗಿ ಚಾಪಲ್ಯ
ಮಾಗಿ ಅತ್ಯಗತ್ಯತೆ
ಉಟ್ಟಿದ್ದ ಕಳಚಿ
ಧುಮುಕಬೇಕಿನ್ನೇನು... ಆಗ
ಪ್ರತಿಮೆ ನಿಲ್ಲುವ ಮೈ ಬಿಳುಚಿ.

ಇಲ್ಲೆದ್ದು ಮುಳುಗಿ ಮತ್ತೆ ಆಲ್ಲೆದ್ದು
ಹೋಯಿತೋ ಎನುವಲ್ಲಿ ನನ್ನತ್ತಲೇ ಕದ್ದು
ಧಾವಿಸಿದೆ ತೀರಹೊಕ್ಕಳ ಸಾವು
ಹಾವು.

ನೋಡುತ್ತಲಿದ್ದಂತೆ ಆ ಜಂತು ಹೆಸರಿನ ಭೀತಿ
ನೀತಿ ಸಂಸ್ಕಾರ ಆಚಾರ ಜಾತಿ
ಕೊನೆಗೆ ನೀನೇ ಆಗಿ ದಿಟ್ಟಿಸಿರೆ ನಲ್ಲೆ
ಸ್ನಾನ ಸುಖ ಇನ್ನೆಲ್ಲೆ ?

ನಿತ್ಯೋತ್ಸವ (ಕವನ ಸಂಕಲನ) ಆಯ್ದ ಕವನಗಳು

ನಿತ್ಯೋತ್ಸವ (ಕವನ ಸಂಕಲನ) ಆಯ್ದ ಕವನಗಳು
                  ೧.ಉದಯಾನುಭವ.
ಹತ್ತು ರಂಗಿನಪೂರ್ವ ಸಭೆ ಪೂರ್ವ ದಿಕ್ಕಿನಲಿ
ಸಭಿಕರೇ ಕಣ್ಣುಗಳು : ಭಾವ ಚಪ್ಪಾಳೆ.
ನಸು ನೀಲಿ ಹಾಳೆಗಳ ಕೆಂಬರಹದಡಿಯಲ್ಲಿ
ಬಂಗಾರ ಶಾಯಿಯಲಿ ಸಹಿಯ ಮಾಲೆ.

ಎಂಟಾದರೂ ದಿನವು ನಿದ್ದೆ ನಂಟನು ಬಿಡದೆ
ನಾಟಿನಂತಲುಗದೆಯೆ ಇದ್ದೆ ಹೊದ್ದು.
ಇಂದಕಸ್ಮಾತ್ತಾಗಿ ಬೆಳಗೆದ್ದು ನೋಡಿದರೆ
ದೇವರ್‍ಏ, ಏನೆಂಥ ಕಣ್ಣ ಮುದ್ದು.

ನಾ ಹೊದ್ದು ಬಿದ್ದಿದ್ದ ಬೆಚ್ಚೆನೆಯ ಈ ರಗ್ಗು
ಕಣ್ಣ ಮುಂದೆಳೆದಿರುವ ತೆರೆಯಂತಿದೆ.
ತೆರೆಯ ಈ ಕಡೆ ಮನಸು. ತೆರೆಯ ಆ ಕಡೆ ಪುನ್ಯ--
ಭೇಟಿಯಾಗದೆ ಸೊರಗಿತೆಂದೆನಿಸಿದೆ.

ಭಾಗ್ಯವಿರಬೇಕಹಹ, ಉದಯದನುಭವ ಗಳಿಗೆ,
ಎಲ್ಲರಿಗು ದೊರೆಕೊಳ್ಳದಿಂಥ ಸ್ವತ್ತು.
ಎನೆಷ್ಟು ಉಅಪಮೆಯಗಳ ವೆಚ್ಚ ಮಾಡಿದರೆನು,
ಮೂಕನುಗೆ ತಿಳಿಯುವುದೆ ನುಡಿಯ ಗತ್ತು?


                ೨.ಎಲ್ಲ ಮರೆತಿರುವಾಗ.
ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನಿನಪೇ;
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?

ಕಪ್ಪು ಕಣ್ಣೆನ ನೆಟ್ಟ ನೋಟದರೆಚಣವನ್ನೆ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೆ
ಹಿರಿದು ಕೊಲ್ಲುಬಳಿಗೆ ಸಾರದಿರು ನೆನಪೇ.
ಎಲ್ಲ ಮರೆತಿರುವಾಗ....

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ;
ಭವ್ಯ ಭವಿತವ್ಯಕ್ಕೆ ಮೊಗ ಮಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು, ಓ! ಚೆನ್ನ ನೆನಪೇ,
ಎಲ್ಲ ಮರೆತಿರುವಾಗ.....

 
           ೩.ಎಂಥೆಂಥ ಜೀವಗಳು.
ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ
ಶ್ರೀಗಂಧ ಬೆಳೆವಂಥ ನಾಡಿನಲ್ಲಿ;
ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ
ಸಿರಿವಂತ ನೆಲದೊಡಲ ಹಾಡಿನಲ್ಲಿ.

ಮಣ್ಣ ಹುಡಿ, ಹಣ್ಣು ಮಿದಿ, ಹುಲ್ಲೆಸಳೊ, ಮಳೆ ಬಿಸಿಲೊ
ಸಮನಾದ ಪ್ರೀತಿಯಲಿ ಹಾಡಿ ಹೊಗಳಿ
ಕಣ್ನು ಕುಡಿ ಎಂದೆಣಿಸಿ ನಾಡು- ನುಡಿ ಗಣಿಸಿ
ಎತ್ತಿ ಕುಣಿಸಿದರೊಲ್ಮೆ ಕೆಚ್ಚು ಕೆರಳಿ.

ಹುಟ್ಟಿದಾರಭ್ಯ ಹಿಡಿದೊಂದು ಹೆಗ್ಗುರಿಯ
ಮುಟ್ಟಲದನೆಡೆಬಿಡದೆ ತುಯ್ದು ಜನರು;
ಕ್ರೌರ್ಯಗಳ ಕುದುಗೋಲು ಕೊಚ್ಚುತಿದ್ದ್ರು ಕೊರಳ
ಸತ್ಯಕಲ್ಲದೆ ಬಾಯಿ ಬಿಡದ ಘನರು.

 
               ೪.ನಿನ್ನ ಹಿರಿಮೆ.
ನಿನ್ನ ಅನುರಾಗವೇ ಬೇಗಿರುವುದೆನ್ನೆದೆಯ
ಇರುಳು ಬಾನಿನ ತುಂಬ ಬಿಂಬವಾಗಿ;
ನಿನ್ನ ಸಹವಾಸವೇ ಸತತವೂ ಕಾದಿಹುದು
ಬಾಳ ದಾರಿಯ ತೋರುಗಂಬವಾಗಿ.

ನಿಟ್ಟುಸಿರ ಬೆಂಕಿಯಲಿ ಅನುದಿನವು ಬೆಂದರೊ
ಸವಿ ನುಡಿಯ ನರುಗಂಪು ತೇಲಿರುವುದು;
ಕಂಬನಿಯ ಉಪ್ಪಿನಲಿ ಕೈ ತೊಳೆದು ನೊಂದರೂ
ನಸು ನಗೆಯ ಸವಿಯನ್ನೆ ಸೂಸಿರುವುದು.

ಯಾವ ಪುಣ್ಯವೊ ಕಾಣೆ, ನಿನ್ನ ಒಲವಿನ ತೊರೆಗೆ
ನನ್ನ ಮನಸಿನ ನೆರೆಯ ಹರಿಸಿರುವುದು;
ಯಾವ ರುಣವೋ ಏನೊ ನಿನ್ನ ನೆಮ್ಮದಿ ಕರೆಗೆ
ನನ್ನ ಬಾಳಿನ ಹೊರೆಯ ಸರಿಸಿರುವುದು.

 
 
              ೫.ಬೇಸರಾಗಿದೆ ಮಾತು.
ಬೇಸರಾಗಿದೆ ಮಾತು, ಭಾರವಾಗಿದೆ ಮೌನ;
ನೋವು ಕರಗಿದೆ ಕಣ್ಣಲ್ಲಿ;
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ.
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ;
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ.



                          ೬.ದೀಪಾರತಿ.
ನೀನುರಿಸಿದ ಹೊಂಬೆಳಕಿನ ಕಿಡಿ ಅರಳಿದೆ ಇಲ್ಲಿ,
ಕುಡಿ ಚಾಚಿದೆ ಇಲ್ಲಿ.

ನೀ ಸುರಿಸಿದ ರಸ ತೈಲದ ಗುಡಿ ಹಾರಿದೆ ಇಲ್ಲಿ;
ಗುಡಿ ಮೀರಿದೆ ಇಲ್ಲಿ.

ನೀ ಬಿತ್ತಿದ ದಯೆ ಹಬ್ಬಿದೆ ಮನು ಸಂತತಿಯಲ್ಲಿ,
ಜನ ಸಮ್ಮತಿಯಲ್ಲಿ;

ನೀನೆತ್ತಿದ ತನು ಸಾಗಿದೆ ಭಾವೋನ್ನತಿಯಲ್ಲಿ,
ನವ ಸದ್ಗತಿಯಲ್ಲಿ.

ನಿನ್ನದೆ ನೆಲೆ, ನಿನ್ನದೆ ಮನೆ; ನಿನ್ನೆದೆಯೊ ಉದಾರ;
ನಾನೂಳಿಗಕಿರುವಲ್ಪನು- ನೀ ವಾರಸುದಾರ.
ಬೆಳೆಬೆಳೆಯಲಿ ನಿನ್ನದೆ ಘನ ಮಹಿಮಾಂಕುರ ಒಳಗೆ;
ಬೆಳಬೆಳಗಲಿ ಬಿರುದಾವಳಿ, ನಾಮಾಂಕಿತ ಹಲಗೆ.

ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್

ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್



            ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.

          ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು.ಅವರು ಇಲ್ಲಿಯವರೆಗೆ ಸುಮಾರು ೫ ದಶಕಗಳಿಂದ ೨೫ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದಿತು ಹಾಗೂ ಕನ್ನಡ ಲಘುಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು.
         ನಿಸಾರ್‍ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.ಇವರ ಕುರಿಗಳು ಸಾರ್‍ ಕುರಿಗಳು,ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಭಾಷಾಂತರ) ಹಾಗೂ ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನಗಳು ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ. .

ಕವನ ಸಂಕಲನಗಳು


ಶಿಲಾಲತೆ (ಕವನಸಂಕಲನ)

 ಶಿಲಾಲತೆ (ಕವನಸಂಕಲನ)
೧.ಹಿಂದಿನ ಸಾಲಿನ ಹುಡುಗರು.
ಹಿಂದಿನ ಸಾಲಿನ ಹುಡುಗರು' ಎಂದರೆ
ನಮಗೇನೇನೂ ಭಯವಿಲ್ಲ !
ನಮ್ಮಿಂದಾಗದು ಶಾಲೆಗೆ ತೊಂದರೆ ;
ನಮಗೆಂದೆಂದೂ ಜಯವಿಲ್ಲ !

ನೀರಿನ ಜೋರಿಗೆ ತೇಲದು ಬಂಡೆ ;
ಅಂತೆಯೆ ನಾವೀ ತರಗತಿಗೆ !
ಪರೀಕ್ಷೆ ಎಂದರೆ ಹೂವಿನ ಚೆಂಡೆ ?-
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೆ
ಹೊಸ ವಿದ್ಯಾರ್ಥಿಗಳಾಗುವೆವು ;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು !

ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬರಾವನು ನೋಯಿಸೆವು ;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೇರಿಸಲೆನ್ನುವೆವು.

ಸಂಬಳಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೆ ನಿಲ್ಲುವೆವು ;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೇನೋ ನಾವೇ ಹಿಂದು ;
ಹಿಂದುಳಿದವರೇ ನಾವಿಲ್ಲಿ !
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು !
ಕನ್ನಡಲ್ಲೇ ತೇರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು !

ಗೆದ್ದವರೆಲ್ಲಾ ನಮ್ಮವರೇ ಸರಿ ;
ಗೆಲ್ಲುವಾತುರವೆ ನಮಗಿಲ್ಲ .
ಸೋತವರಿಗೆ ನಾವಿಲ್ಲವೆ ಮಾದರಿ ?-
ಕೆರೆಗೆ ಬೀಳುವುದು ತರವಲ್ಲ .

ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು ;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೇ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತಿದೆ
ಆರತಿ ಬೆಳಗಲು ಜನವೆಲ್ಲಿ ?
ಎಲ್ಲಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲೆ ?

ಲೋಕದ ಶಾಲೆಯ ಭಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು .

ಪುಸ್ತಕ ಓದದೆ ಪ್ರೀತಿಯನರಿತೆವು ;
ಗೆಲ್ಲದೆ ಹೆಮ್ಮೆಯ ಗಳಿಸಿದೆವು ;
ನಾವೀ ಶಾಲೆಯನೆಂದೂ ಬೆಡೆವು ;
ನೆಮ್ಮದಿಯಾಗಿಯೆ ಉಳಿಯುವೆವು !

ದುಂಡು ಮಲ್ಲಿಗೆ

 ದುಂಡು ಮಲ್ಲಿಗೆ (ಕವನ ಸಂಕಲನ)
           ೧.ಒಳಗೆ ಬಾರೆನ್ನೊಲವೆ.
ಕದವ ತಟ್ಟದೆ, ನೇರ ಒಳಗೆ ಬಾರೆನ್ನೊಲವೆ ;
ತೆರೆದ ಬಾಗಿಲು ನಾನು ನಿನ್ನ ದನಿಗೆ.
ಹೊಂಬಿಸಿಲು ಬರುವಂತೆ ತೆರೆದ ಬಾಗಿಲಿನೊಳಗೆ
ಬಂದು ಬಿಡು ಕಾದಿರುವ ನಿನ್ನ ಮನೆಗೆ.

ಬೇಲಿಯುದ್ದಕು ಹೂವು ಸಂಜೆಗೆಂಪಾಗಿಹುದು;
ಹತ್ತು ಹನಿ ಮಳೆ ಬಿತ್ತು ಸಂಜೆಯಲ್ಲಿ,-
ನೀ ಬಂದ ದಾರಿಯನು ನಾನೀಗ ನೆನೆಯುವೆನು
ಅಚಲ ನಕ್ಷತ್ರಗಳ ಬೆಳಕಿನಲ್ಲಿ.

ನಲವತ್ತು ಚೈತ್ರಗಳ ತಳಿರ ಕನಸುಗಳಿಂದ
ಹೊಸ ಬಣ್ಣ ಬಂದಿಹುದು ನಿನ್ನ ತುಟಿಗೆ.
ಹೇಗೆ ಮರೆಯಲಿ ನಾನು ನಿನಗಿಟ್ಟ ಮುತ್ತುಗಳ ?
ಜೇನಲದ್ದಿದ ಕಮಲ ನಿನ್ನ ಕೆನ್ನೆ.

ನಿನ್ನ ನುಡಿಗಳಿಂತ ನಿನ್ನ ಕಿರುನಗೆ ಚೆಂದ ;
ಅದಕೆ ಹೊನ್ನ ಕಿರೀಟ ನಿನ್ನ ಮೌನ.
ಏಕಕಾಲದಲಿ ಹತ್ತಾರು ವಾದ್ಯಗಳಿಂದ
ಕೇಳಿ ಬದುತಿದೆ ಅದರ ಮಧುರ ಗಾನ.

ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ,-
ತುಂಬ ಸಂತಸ ನನಗೆ ನಿನ್ನ ಕಂಡು.
ಏನಂದುಕೊಳುವರೋ ಎಂಬ ಸಂಶಯ ಬೇಡ ;
ಎರಡೂ ನಿನ್ನವೇ : ಬಯಲು, ಚೆಂಡು !


                      ೨.ಪ್ರೇಮ.
ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು ;
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣ ಸನ್ನೆಯ ಹೆಸರು ಪ್ರೇಮವೆಂದು.

ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು ;
ಮಾಲುಗಣ್ಣಿನ ಹೆಣ್ಣೆ, ನಿನ್ನ ತುಟಿಯಿಕ್ಕೆಲದ
ಮಂದಹಾಸದ ಹೆಸರು ಪ್ರೇಮವೆಂದು.

ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು ;
ಬಳಿಗೆ ಬಾರೆನ್ನವಳೆ, ಬಿಗಿದಪ್ಪಿ ಮಾತಾಡು -
ನಾನದನೆ ಕರೆಯುವೆನು ಪ್ರೇಮವೆಂದು.

ಬಾರೆನ್ನ ಮನದನ್ನೆ, ಬರಲಿ ಹತ್ತಿರ ಕೆನ್ನೆ,
ಮುತ್ತಿನಲಿ ಒಂದಾಗಲೆರಡು ಜೀವ !
ಬಾಳಿನೇರಿಳಿತಗಳ ಮುಗಿವಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ !


             ೩.ಒಂದು ನೆನೆಪು.
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ ;
ಎದ್ದೆ, ಹೊಸಲಿನ ತನಕ ಹೋಗಿ ಬಂದೆ .
ಕಿಟಕಿಯಾಚೆಗೆ ಒಂದು ಚೆಂಗುಲಾಬಿಯ ಕಂಡೆ -
ಅದರ ಮುಳ್ಳೂ ಕೆಂಪು ! ಒಳಗೆ ನೊಂದೆ.

ಗೋಡೆ - ಕನ್ನಡಿಯೊಳಗೆ ಒಂದು ಮುಖವನು ಕಂಡೆ ;
ಅದು ಯಾರದೆನ್ನುವುದು ತಿಳಿಯಲಿಲ್ಲ.
ಅಳಿಲು ಕಚ್ಚಿದ ಕೆಂಪು ದಾಳಿಂಬೆ ಹಣ್ಣಿನಲಿ
ಬಿತ್ತವಿಲ್ಲದ ಹಳದಿ ಗೂಡ ಕಂಡೆ.

ಚೈತ್ರ ಮಾಸದ ಕನಸ ಕಂಡೆ ಆಷಾಡದಲಿ ;
ಚಿಕ್ಕ ಮಕ್ಕಳ ಕಂಡೆ ಹಸಿರ ನಡುವೆ ;
ಕೊಳದ ಕೆಂದಾವರೆಯ ಬಿರಿದ ಮೊಗ್ಗನು ಕಂಡೆ ;
ಮಂದಹಾಸವ ಕಂಡೆ. ನಿನ್ನ ನೆನೆದು.

ನೀನಿರದ ಹುಣ್ಣಿಮೆಯ ನಕ್ಷತ್ರ ಮೌನದಲಿ
ನನ್ನ ವಿರಹಾಗ್ನಿಯನು ಹಾಡಿಕೊಂಡೆ.
ನನ್ನ ಪಾಡಿಗೆ ನನ್ನ ಬಿಡಲು ಒಪ್ಪದ ಲೋಕ
ನನ್ನ ಕಣ್ಣಿಗೆ ಬಂತು ಹನಿಗಳಂತೆ.

ಬಂತು ನೆನಪಿಗೆ ಹಸೆಯ ಮಣೆಯಲ್ಲಿ ನೀನಂದು
ಕರವಸ್ತ್ರವನು ನನಗೆ ಕೊಟ್ಟ ನೆನಪು.
ಒಲವೆಂದರೇನೆಂದು ಕೇಳಲಿಲ್ಲವೆ ನೀನು ?
ಕೇಳಿದಂತೆಯೆ ನನಗೆ ಈಗ ನೆನಪು.


೪.ನಾಡಿನ ಏಕತೆ.
ಒಂದೆ ಸೂರಿನ ಕೆಳಗೆ ಇರುಳನ್ನು ಕಳೆದವರೆ,
ಒಂದೆ ಬಯಲಿಗೆ ಬಂದ ಜತೆಗಾರರೆ,
ಕಷ್ಟ ಕಾರ್ಪಣ್ಯಗಳ ದಾಟುತ್ತ ನಕ್ಕವರೆ,
ಬಾಳಿನೇರಿಳಿತಗಳಿಗಂಜದೆ,

ಏಕೆ ತಡಮಾಡುವಿರಿ? ಬನ್ನಿ ಜೀವನವೊಂದು;
ಮೈ ಬೇರೆಯಾದರೂ ಮನವು ಒಂದೆ,
ಭಾಷೆ ತಿಳಿಯದು ಎಂದು ದೂರ ಸರಿಯುವಿರೇಕೆ?
ಹೃದಯಕ್ಕೆ ತಲಪುವುದು ಎಲ್ಲ ಭಾಷೆ.

ಅಡ್ಡ ಗೋಡೆಗಳನ್ನು ಒಡೆದು ಮುಂದಕೆ ಬನ್ನಿ;
ಬೇಲಿಗಳ ಬಾಗಿಲನು ತಳ್ಳಿ ಬನ್ನಿ.
ಬನ್ನಿ ತೆರವಿಗೆ; ಬಂದು ಅಣಿಯಾದ ತಾಣದಲಿ
ಗೂಡ ಕಟ್ಟಿರಿ ನಾಡ ಸೆರಗಿನಲ್ಲಿ.

ಬರಲಿ ಯಾರೆಲ್ಲಿಂದ, ಕೂಗಿ 'ಅಣ್ಣಾ!' ಎಂದು
ಕೈಕುಲುಕಿ ಉಭಯ ಕುಶಲೋಪರಿಯಲಿ.
ಉತ್ತರವೊ ದಕ್ಷಿಣವೊ ಬರಿಯ ದಿಕ್ಕಿನ ಹೆಸರು.
ಒಲವು ಕರೆಯುತ್ತಲಿದೆ ಮನೆ ಮನೆಯಲಿ.

ಬೇರೆ ಎನ್ನುವ ಪದದ ಬೇರ ಕಿತ್ತೆಸೆದು ಬಿಡಿ;
ಎಲ್ಲರೊಂದೇ ಎನ್ನುವುದೊಂದೇ ಮಂತ್ರ.
ಆ ಮಕ್ಕಳೀಮಕ್ಕಳೊಂದಾಗಿ ನಗಲಿ ಬಿಡಿ;
ದೂರವಾಗಲಿ ಬೇರೆ ಎಂಬ ತಂತ್ರ!

ವೇಷ ಭೂಷಣ ಬೇರೆ ಬೇರೆ; ಒಳಗಿನ ಉಸಿರು
ಎಲ್ಲೆಲ್ಲು ಒಂದೆ; ಇದು ನಮ್ಮ ನಿಲುವು.
ದೂರದೂರುಗಳಿಂದ ನಮ್ಮೆಡೆಗೆ ಬಂದವರು
ನಮ್ಮ ಬಂಧುಗಳೆಂದು ತಿಳಿಯಬೇಕು.

ಉತ್ತರ ಗಡಿ ನಮಗೆ ಹಿಮಾಚಲವೆ;
ಉಳಿದ ಕಡೆಗಳಲಿಹುದು ನೀಲಿಗಡಲು.
ಕೇಳಿಬರುತಿದೆ ನಾಡ ಹಾಡು ಆಗಸದೊಳಗೆ.
ಸಸ್ಯಶಾಮಲೆ ನಮ್ಮ ತಾಯಿನಾಡು.

ಎಲ್ಲರೂ ಎಲ್ಲರೊಳಿತಿಗೆ ದುಡಿವುದೇ ಧರ್ಮ;
ಈ ನಾಡಿನೇಕತೆಗೆ ಶ್ರಮಿಸ ಬನ್ನಿ.
ಕಣ್ಣ ತುಂಬಲಿ ನಾಡಿನೇಕತೆಯ ಶುಭಚಿತ್ರ;
ತಾಯಡಿಗೆ ಹೂವಿಡಲು ಮುಂದೆ ಬನ್ನಿ!


೫.ಯಾವ ಕಾಲದಲಿ ಯಾರು ನಕ್ಕರೋ.
ಯಾವ ಕಾಲದಲಿ ಯಾರು ನಕ್ಕರೋ
ನೀನು ನಕ್ಕ ಹಾಗೆ ?
ಎಷ್ಟು ನೋವುಗಳ ನುಂಗಿಕೊಂಡರೋ
ನಕ್ಕ ಒಂದು ಗಳಿಗೆ !

ಬೇಡವೆಂದರೂ ಏಕೆ ನಗುವೆಯೋ
ತಿಳಿಯಲಿಲ್ಲ ನನಗೆ.
ಬಾಳಹಾದಿಯಲಿ ಹೇಗೆ ಚಿಗುರಿತೋ
ನೋವು ನಲಿವಿನೊಡನೆ ?

ಜ್ವಾಲೆಯಂತೆ ನಗೆ ಹೇಗೆ ಹಬ್ಬಿತೋ
ತುಟಿಯ ತಳಿರ ಬಳಿಗೆ ?
ನೋವ ನೆನಪು ಬಂದೇಕೆ ಕಾಡಿತೋ
ನಮ್ಮ ನಲಿವಿನೊಡನೆ !

ಕಣ್ಣ ನೀರಿನಲಿ ಹೊಳೆವ ನೋವಿನಲಿ
ನಗಲೆ ನಿನ್ನ ಜತೆಗೆ ?-
ಕೆಂಡದಂಥ ತಳಿರ್‍ಏಕೆ ಬಳ್ಳಿಯಲಿ
ಕಾಣಲಿಲ್ಲ ನನಗೆ ?

ನಿಜದ ಅನುಭವಕೆ ಕನಸಿನಂಗಿಯನು
ತೊಡಿಸ ಬಂದೆ ನೀನು !
ಬಳಿಗೆ ಬಂದವಳು, ದೂರ ಸರಿದವಳು
ನಗುವೆಯಲ್ಲೆ ನೀನು ?

ದೀಪದ ಮಲ್ಲಿ

ದೀಪದ ಮಲ್ಲಿ (ಕವನಸಂಕಲನ)
೧.ನೀ ಬರುವ ದಾರಿಯಲಿ.
ನೀ ಬರುವ ದಾರಿಯಲಿ
ಹಗಲು ತಂಪಾಗಿ
ಬೇಲಿಗಳ ಸಾಲಿನಲಿ
ಹಸುರು ಕೆಂಪಾಗಿ
ಪಯಣ ಮುಗಿಯುವ ತನಕ
ಎಳಬಿಸಿಲ ಮಣಿ ಕನಕ
ಸಾಲುಮರಗಳ ಮೇಲೆ ಸೊಬಗ ಸುರಿದಿರಲಿ !

ನೀ ಬರುವ ದಾರಿಯಲಿ
ಹಕ್ಕಿಗಳು ಹಾಡಿ
ಬೆಳ್ದಿಂಗಳಿಂಪಿನಲಿ
ತಾರೆಗಳು ಮೂಡಿ
ಕನಸು ಹಬ್ಬಲಿ ನಿನ್ನ
ಕಣ್ಣಬಳಿ, ಚಿನ್ನ,
ಹತ್ತಾರು ಗಳಿಗೆಯಲಿ ಹಾದಿ ಹಾರಿರಲಿ !

ನೀ ಬರುವ ದಾರಿಯಲಿ
ಬನದೆಲರು ಸುಳಿದು
ಸಂತಸದ ಇರುಳಿನಲಿ
ಆದುದನು ನುಡಿದು
ಮುಂದೆ ಕಾದಿಹ ನೂರು
ಹರುಷಗಳ ಕಣ್ ತೆರೆದು
ಪಯಣವೋ ನಿಲುಗಡೆಯೊ ನೀನರಿಯದಂತಿರಲಿ !


೨.ನಿಲ್ಲಿಸದಿರೆನ್ನ ಪಯಣವನು.
ಕಣ್ಣ ಸನ್ನೆಯಿದೇನು ? ಕೆನ್ನೆಯಲಿ ಸುಳಿಬಂದು
ತುಟಿಯಂಚಿನಲಿ ಮಾತು ಮಾಯವಾಗಿರಲು
ಮತ್ತೊಮ್ಮೆ ಬೆಡಗಿನಲಿ ಜಡೆಯನೆದುರಿಗೆ ತಂದು
ಅದರ ಮೇಲೊಂದು ಸಲ ನಡುಬೆರಳನಿಳಿಸಿ
ಕಡೆಗೆ ಏನೋ ಏಕೋ ಜಗದಗಲ ಕಣ್ ತೆರೆದು
ನಿರಿಯ ಜರಿಯಂಚಿನಲಿ ಚೆಂದುಟಿಯನೊರಸಿ
ಮುನ್ನೀರು ತನ್ನ ಹನಿಯೊಂದರಲಿ ಮೈಹುದುಗಿ
ಮಿಂಚುವೊಲು, ಮೋಹನಾಂಗಿಯೆ, ಉಸಿರ ಬಲೆ ಬೀಸಿ
ನಿಲ್ಲಿಸದಿರೆನ್ನ ಪಯಣವನು. ನಾನಿಲ್ಲಿನ್ನು
ನಿಲ್ಲಲಾರೆನು ; ನನ್ನ ಬೀಳ್ಕೊಡುವುದುದೇ ಚೆನ್ನು.
ಹಬ್ಬಸಾಲಿಗೆ ಬಂದು ಹತ್ತುದಿನ ಇಲ್ಲಿದ್ದೆನಲ್ಲ !
ಗದ್ದಲದ ನಡುವೆ ಪ್ರೇಮದ, ತೆರೆಗೆ ತೆತ್ತೆವಲ್ಲ !
ಎಷ್ಟು ದಿನವಿದ್ದರೂ ಅಗಲಿಕೆಯು ತಪ್ಪದಲ್ಲ !
ಮತ್ತೆ ನಾನಿಲ್ಲಿ ಬಹ ದಿನವೇನು ಬಲುದೂರವಲ್ಲ !

೩.ದೀಪದ ಮಲ್ಲಿ .
ಎಲೆಲೆ! ದೇಪದ ಮಲ್ಲಿ,
ಎದೆಯ ಕತ್ತಲೆಯಲ್ಲಿ
ಪದುಮ ದೀಪದ ಹಿಡಿದು
ಬಾಗಿ ನಿಂತು

ಕವಿಗಿನಿತೆ ಬೆಳಕಿನಲ್ಲಿ
ಎಂಬ ಕಿರುನಗೆಯಲ್ಲಿ
ಹಿಗ್ಗಿ ಹೂವಾಯ್ತಿಂತು
ಪ್ರಾಣ ತಂತು.

ನೀನೆ ಕಂಚಿನ ಬೊಂಬೆ ?
ಅಲ್ಲ ಮಿಂಚಿನ ಬೊಂಬೆ ?
ಹಂಬಲವನೆದೆಯೊಳಗೆ
ತುಂಬಿದೊಲುಮೆ.

ಎಲ್ಲಿತ್ತೊ ಒಂದು ದನಿ,
ಎಲ್ಲಿತ್ತೊ ಒಂದು ಬನಿ,
ನಿನ್ನಿಂದ ಹಾಡಾಯ್ತು
ಅಮೃತವಾಯ್ತು.


೪.ಹೃದಯ ಮೋಹಿನಿಗೆ.
ನಿದ್ದೆಯ ಬೇಲಿಯ ಕನಸಿನ ಬನದಲಿ
ಆಡುವ ಹೆಣ್ಣೆ, ನೀನಾರು ?

ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,
ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ,
ಬಿಂಕದ ಹೆಣ್ಣೆ, ನೀನಾರು ?

ಎತ್ತಿದ ಮುಖವೊ ಚೆಲುವಿನ ಗೋಪುರ ;
ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ -
ಹೃದಯದ ಮರುಳೆ, ನೀನಾರು ?

ವಸಂತ ಹಸೆಮಣೆ ನಿನ್ನ ಹಣೆ;
ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ
ತೆರಳುವ ಹೆಣ್ಣೆ, ನೀನಾರು ?

ಕನಸಿನ ಬನದಲಿ ಕಮಲಾಕರದಲಿ
ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ
ಒಲಿಯದ ಹೆಣ್ಣೆ, ನೀನಾರು ?

ಕೆನ್ನೆಯ ಬಾನಲಿ ಮುತ್ತಿನ ಚಂದಿರ
ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ
ಮಾಯಾಮೋಹಿನಿ, ನೀನಾರು ?
  

           ೫.ನಿರೀಕ್ಷೆ.
ಹಗಲಿನಬ್ಬರ ತಣ್ಣಗಾಯಿತು ;
ಸಂಜೆ ರಂಜಿಸಿ ತೆರಳಿತು ;
ತುಂಬುತಾರೆಯ ಗಗನ ಮೆರೆಯಿತು ;
ಚಂದ್ರಲೋಕವೆ ತೆರೆಯಿತು.

ಸುತ್ತ ಬೆಳ್ಳಿಯ ಹಬೆಯನೆಬ್ಬಿಸಿ
ಬೆಳಕು ನುಗ್ಗಿತು ಹಳ್ಳಿಗೆ.
ಹಾದಿ ಬೀದಿಯಲೆಲ್ಲ ಮಲ್ಲಿಗೆ ! -
ಹಾಡು, ಜೀವವೆ, ಮೆಲ್ಲಗೆ,

ಆಳಿನೆತ್ತರ ಬೆಳೆದ ಜೋಳದ
ಹೊಲದ ಚೆಲುವಿನ ತೊಡೆಯಲಿ
ಬಾನಿನೆತ್ತರ ಹಾರಿದೊಲವಿನ
ಕೆಂಪು ಕನಸಿನ ಸುಳಿಯಲಿ,

ದಿಕ್ಕು ದಿಕ್ಕಿಗೆ ಕಣ್ಣ ತಿರುಗಿಸಿ
ಎದುರುಗಾಳಿಯನೆದುರಿಸಿ
ಬೇಲಿಯಾಚೆಗೆ ನೆರಳನೋಡಿಸಿ
ಬಳಿಯ ಜಿಂಕೆಯ ಗದರಿಸಿ,

'ಇನಿಯ ಬಂದನು, ಬಂದ ; ಬಂದನೆ ?'
ಎಂದು ಕಾದಿಹ ಹೆಣ್ಣಿಗೆ
ಅವನೆ ಚಂದಿರ, ತಾನೆ ಚಂದ್ರಿಕೆ ;
ಬೇರೆ ಹುಣ್ಣಿಮೆ ಇವರಿಗೆ !