ಪಂಪಭಾರತ : ಗದ್ಯಾನುವಾದ - ದಶಮಾಶ್ವಾಸಂ

ದಶಮಾಶ್ವಾಸಂ
ಕಂ|| ಶ್ರೀ ನಾರೀವಲ್ಲಭನಭಿ
ಮಾನಧನಂ ಹರಿಗನಾ ಕುರುಕ್ಷೇತ್ರದೊಳಂ|
ತೇನುಂ ಮಾಣದೆ ಬಿಟ್ಟುದ
ನಾ ನೆಗೞ್ದ ಸುಯೋಧನಂಗೆ ಚರರಱಪುವುದುಂ|| ೧

ಗುರು ಗುರುಸುತ ಶಕುನಿ ಕೃಪಾಂ
ಗರಾಜರಂ ಬರಿಸಿ ನುಡಿದನವನಿಪನೇಂ ಕೇ|
ಳ್ದಿರೆ ಪಾಂಡುಸುತರ ಮುನಿಸಿನ
ತಱಸಲವಿನ ಚಲದ ಬಲದ ಕಲಿತನದಳವಂ|| ೨

ಬಂದು ಕುರುಕ್ಷೇತ್ರದೊಳಳ
ವೊಂದಿರೆ ನಮ್ಮೊಳ್ ಕಡಂಗಿ ಮಿಗೆ ತಳ್ತಿಱಯ|
ಲ್ಕೆಂದಾನುಂ ಬಂದಿರ್ದರಿ
ದೇಂ ದಾಯಿಗತನಮನೆಮಗವರ್ ತೋಱದಪರ್|| ೩

ಮ|| ಪಡೆವಳ್ಳಂ ಗಡಮಾ ಬಲಕ್ಕೆ ದಲೆ ಧೃಷ್ಟದ್ಯುಮ್ನನೆಂಬೊಳ್ಳೆಯಾ
ಪಡೆಯೊಳ್ ಗಂಡನುಮಾ ಮೊಲಂ ದ್ರುಪದನುಂ ಪೇರೊಟ್ಟೆಯಾ ಮತ್ಸ್ಯನುಂ|
ಗಡಮಂತಾ ಬಲಕಾಳ್ದನೇನಱಯಿರೇ ಧರ್ಮಜ್ಞನಾ ಧರ್ಮಜಂ
ಗಡಮೇಂ ನಾಯಕರೊಳ್ಳಿದರ್ ನೆರೆದರೋ ಕಾದಲ್ಕೆ ಮತ್ಸೈನ್ಯದೊಳ್|| ೪

ವ|| ಎಂಬುದುಂ ಕುಂಭಸಂಭವನಿಂತೆಂದಂ-

ಮ|| ಕಳವೇೞ್ದೆ ಕುರುಭೂಮಿಯಂ ಕಳಕವರ್ ವಂದಿರ್ದರೆಂದಂತೆ ದೋ
ರ್ವಳ ಚಾತುರ್ವಳ ತತ್ಸುಹೃದ್ಬಳಮನಿನ್ನೇಗೇಳ್ದಪೈ ಪಾಂಡವರ್|
ಬಳಸಂಪನ್ನರುದಗ್ರದೈವಬಲಸಂಪನ್ನರ್ ಮರುಳ್ಮಾತನಿ
ನ್ನುೞ ಗಾಂಗೇಯರ ಪೇೞ್ದದೊಂದು ತೆಱದಿಂ ನೀಂ ಕಾದು ದುರ್ಯೋಧನಾ|| ೫

ವ|| ಎಂಬುದುಮಾ ಮಾತಂ ಮನದೇಗೊಂಡಂತೆಗೆಯ್ವೆನೆಂದನಿಬರುಮಂ ವಿಸರ್ಜಿಸಿ ನಿಶಾಸಮಯದೊಳ್ ಪತ್ತೆಂಟು ಕೆಯ್ದೀವಿಗೆಗಳ ಬೆಳಗಿನೊಳಂ ಕತಿಪಯ ಪರಿಜನ ಪರಿವೃತನಾಗಿ ರಾಜರಾಜಂ ಸಿಂಧುಜನರಮನೆಗೆವಂದು ವಾಹನದಿಂದಮಿೞದು ಕುರುಪಿತಾಮಹಂಗೆಱಗಿ ಪೊಡೆವಡುವುದುಂ ಪರಸಿ ಮಂಚದೊಳೇಱಲ್ ಕರೆದೊಡೊಲ್ಲೆಂ ಮಹಾಪ್ರಸಾದಮಿಂತಿರ್ಪೆನೆಂದು ಮಣಿಮಯ ಹೇಮಾಸನದೊಳ್ ಕುಳ್ಳಿರ್ದನಂ ನೋಡಿ ಕಜ್ಜಂ ಪುಟ್ಟಿದೊಡೆಮಗೆ ಬೞಯಟ್ಟದೀ ಪೊೞದಾವುದು ಮನವಾೞ್ತೆಗೆೞ್ತಂದೆಯೆಂದೊಡೆ ಸುಯೋಧನನಿಂತೆಂದಂ-

೧. ಸಂಪಲ್ಲಕ್ಷ್ಮೀಪತಿಯೂ ಅಭಿಮಾನಧನನೂ ಆದ ಅರ್ಜುನನು ಕುರುಕ್ಷೇತ್ರದಲ್ಲಿ ಯಾವ ತಡೆಯೂ ಇಲ್ಲದೆ ಬೀಡುಬಿಟ್ಟುದನ್ನು ಆ ಪ್ರಸಿದ್ಧನಾದ ದುರ್ಯೋಧನನಿಗೆ ದೂತರು ತಿಳಿಸಿದರು. ೨. ದ್ರೋಣ, ಅಶ್ವತ್ಥಾಮ, ಶಕುನಿ, ಕೃಪ, ಕರ್ಣರನ್ನು ಬರಮಾಡಿ ದುರ್ಯೋಧನನು ಹೇಳಿದನು- ಪಾಂಡವರ ಕೋಪದ, ನಿಶ್ಚಯದ, ಛಲದ, ಬಲದ, ಪರಾಕ್ರಮದ ಅಳತೆಯನ್ನು ಕೇಳಿದಿರಾ?

೩. ಸಮರ್ಥರಾಗಿ ಕುರುಕ್ಷೇತ್ರಕ್ಕೆ ಬಂದು ವಿಶೇಷ ಉತ್ಸಾಹದಿಂದ ನಮ್ಮಲ್ಲಿ ಯುದ್ಧಮಾಡುವುದಕ್ಕಾಗಿಯೇ ಬಂದಿದ್ದಾರೆ. ಅವರು ನಮ್ಮಲ್ಲಿ ಎಂತಹ ಜ್ಞಾತಿತ್ವವನ್ನು ತೋರಿಸುತ್ತಿದ್ದಾರೆ! ೪. ಆ ಪಾಂಡವಸೈನ್ಯಕ್ಕೆ ನಿಜವಾಗಿಯೂ ಸೇನಾನಾಯಕನಾಗಿರುವವನು ಧೃಷ್ಟದ್ಯುಮ್ನನೆಂಬ ನೀರುಹಾವು, ಆ ಸೈನ್ಯದಲ್ಲಿ ಶೂರನಾಗಿರುವವರು ದ್ರುಪದನೆಂಬ ಮೊಲ, ಮತ್ಸ್ಯನೆಂಬ ಒಂಟೆ, ಆ ಸೈನ್ಯಕ್ಕೆ ಯಜಮಾನ ಧರ್ಮದ ಗೊಡ್ಡಾದ ಧರ್ಮರಾಯ (ಅವರ ಯೋಗ್ಯತೆ ನನಗೆ ತಿಳಿಯದೇ?) ಒಳ್ಳೆಯ ನಾಯಕರು ನನ್ನ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಸೇರಿದ್ದಾರೆ! ವ|| ಎಂಬುದಾಗಿ ಹೇಳಲು ದ್ರೋಣಾಚಾರ್ಯನು ಹೀಗೆಂದನು. ೫. ನೀನು ಕುರುಕ್ಷೇತ್ರವನ್ನು ಯುದ್ಧ ಭೂಮಿಯನ್ನಾಗಿ ನಿಷ್ಕರ್ಷಿಸಿದೆ. ನೀನು ಹೇಳಿದ ಹಾಗೆ (ಅದರಂತೆ) ಅವರು ಯುದ್ಧರಂಗಕ್ಕೆ ಬಂದಿದ್ದಾರೆ. ಅವರ ಬಾಹುಬಲವನ್ನೂ ಚತುರಂಗಸೈನ್ಯದ ಬಲವನ್ನೂ ಅವರ ಮಿತ್ರವರ್ಗದ ಶಕ್ತಿಯನ್ನೂ ಇನ್ನೇನೆಂದು ಕೇಳುತ್ತೀಯಾ? ಪಾಂಡವರು ಬಲಸಂಪನ್ನರು, ಉತ್ತಮವಾದ ದೈವಬಲದಿಂದ ಕೂಡಿರುವವರು. ಅವಿವೇಕದ ಮಾತನ್ನು ಬಿಟ್ಟುಬಿಡು. ದುರ್ಯೋಧನಾ, ಭೀಷ್ಮರು ಹೇಳಿದ ರೀತಿಯಲ್ಲಿ ಯುದ್ಧಮಾಡು. ವ|| ಎನ್ನಲು ಆ ಮಾತನ್ನು ಅಂಗೀಕರಿಸಿ ಹಾಗೆಯೇ ಮಾಡುತ್ತೇನೆಂದು ಒಪ್ಪಿದನು. ಅಷ್ಟು ಮಂದಿಯನ್ನೂ ಬಿಟ್ಟು ಕಳೆದು ರಾತ್ರಿಯ

ಕಂ|| ಹರಿ ಬಲದಿಂ ಪಾಂಡವರನು
ವರಮಂ ಪೊತ್ತಿಸಿದರೆನ್ನೊಳಾಂ ಕರಮಱದಾ|
ಹರಿಯಂ ಕೋಡಗಗಟ್ಟಾ
ಗಿರೆ ಕಟ್ಟಿದೊಡಂದು ನೀಮೆ ಬಿಡಿಸಿದಿರಲ್ತೇ|| ೬

ಕರಿಗಂ ಪರಮಾಣುಗಮಂ
ತರಮಾವುದೊ ನಿಮಗಮಸುರವೈರಿಗಮೇನಂ|
ತರಮಂತೆ ನಿಮ್ಮೊಳಗ್ಗದ
ಪರಶುಧರಂ ಪೊಣರ್ದು ತಾನದಂದೇನಾದಂ|| ೭

ಪಿಡಿದರವರಸುರವೈರಿಯ
ನೊಡಂಬಡಿಂ ತೊೞ್ತುವೆಸದಿನಾಂ ನಿಮ್ಮಡಿಯಂ|
ಪಿಡಿದೆನದೇಂ ತಾನೆಚ್ಚುಂ
ಪಿಡಿದೊಡವರ್ವಂದು ಪಿಡಿದರೆನ್ನರೆ ಗೆಲ್ಲಂ||

ಮ|| ಕೊರಲೊಳ್ ಕಟ್ಟಿದ ದೇವಿಯಂತಿರುರದೊಳ್ ಶ್ರೀ ತೊಟ್ಟಲೊಳ್ ತೊಟ್ಟನಂ
ತರಮೆನ್ನೊಳ್ ನೆಲಸಿತ್ತು ನಿಮ್ಮ ದಯೆಯಿಂ ನಿಮ್ಮಂ ಕರಂ ನಚ್ಚಿ ಸಂ|
ಗರಮಂ ಬಲ್ಲಿದರೊಳ್ ಪೊಣರ್ಚಿದೆನದರ್ಕೆನ್ನೊಳ್ ರಣಶ್ರೀ ರಣಾ
ಜಿರದೊಳ್ ಮಾಣದೆ ಪೊರ್ದುವಂತೆ ಬೆಸಸಿಂ ನಿಮ್ಮೊಂದಭಿಪ್ರಾಯಮಂ|| ೯

ವ|| ಎಂದು ನುಡಿದ ತನ್ನ ಮೊಮ್ಮನ ನಯದ ವಿನಯದ ನುಡಿಗಳ್ಗೆ ಕರುಣಿಸಿ ಕುರುವೃದ್ಧನಿಂತೆಂದಂ-

ಮ|| ಧೃತರಾಷ್ಟ್ರಂ ನುಡಿದಾರ್ತನೇ ಹರಿ ಭರಂಗೆಯ್ದಾರ್ತನೇ ನೀಂ ಪೃಥಾ
ಸುತರಂ ನೋಯಿಸಲಾಗದೆಂದು ನುಡಿದೇನಾಮಾರ್ತೆಮೇ ನಿನ್ನೊರಂ|
ಟುತನಂ ಕೈಗೞವಾಯ್ತದಪ್ಪೊಡೆ ಮಹಾಭಾರಾವತಾರಂ ರಣೋ
ದ್ಯತನಾಗೆಂಬುದನೆಮ್ಮನನ್ಯರವೊಲೇಂ ನೀಂ ಪ್ರಾರ್ಥಿಸಲ್ವೇೞ್ಪುದೇ|| ೧೦

ವ|| ಎಂಬುದುಂ ಮಹಾಪ್ರಸಾದಮೆಂದು ದುರ್ಯೋಧನಂ ಪೋದನಿತ್ತ ಗಾಂಗೇಯಂ ತನ್ನಂತರ್ಗತದೊಳ್-

ಸಮಯದಲ್ಲಿ ಹತ್ತೆಂಟು ಕೈದೀವಿಗೆಗಳ ಬೆಳಕಿನಲ್ಲಿ ಕೆಲವೇ ಜನ ಸೇವಕರಿಂದ ಕೂಡಿದವನಾಗಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನ ಅರಮನೆಗೆ ಬಂದನು. ವಾಹನದಿಂದಿಳಿದು ಕುರುಪಿತಾಮಹನಾದ ಭೀಷ್ಮನಿಗೆ ಬಗ್ಗಿ ನಮಸ್ಕಾರ ಮಾಡಿದನು. ಅವರು ಹರಸಿ ಅವನನ್ನು ಮಂಚದ ಮೇಲೆ ಹತ್ತಿ ಕುಳಿತುಕೊಳ್ಳಹೇಳಿದರು. ‘ಒಲ್ಲೆ ಹಾಗೆ ಮಾಡಲಾರೆ, ಇದೇ ನನಗೆ ಪರಮಾನುಗ್ರಹ, ಹೀಗಿರುತ್ತೇನೆ, ಎಂದು ರತ್ನಖಚಿತವಾದ ಚಿನ್ನದ ಪೀಠದ ಮೇಲೆಯೇ ಕುಳಿತುಕೊಂಡನು. ಭೀಷ್ಮನು ಅವನನ್ನು ನೋಡಿ ‘ಕಾರ್ಯವುಂಟಾದರೆ ನಮಗೆ ದೂತರ ಮೂಲಕ ಹೇಳಿಕಳುಹಿಸದೆ ಈ ಹೊತ್ತಿನಲ್ಲಿಯೂ ಮನೆವಾರ್ತೆಗಾಗಿ ಬಂದೆ’ ಎಂದರು. ದುರ್ಯೋಧನನು ಹೀಗೆಂದನು- ೬. ಆ ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ. ಇದನ್ನು ನಾನು ತಿಳಿದೇ ಅಂದು ಕೃಷ್ಣನನ್ನು ಕೋಡಗಗಟ್ಟಿನಿಂದ ಕಟ್ಟಿದರೆ ಆ ದಿನ ನೀವೆ ಬಿಡಿಸಿದಿರಲ್ಲವೇ ೭. ಆನೆಗೂ ಸೂಕ್ಷ್ಮವಾದ ಅಣುವಿಗೂ ಎಷ್ಟು ವ್ಯತ್ಯಾಸ? ನಿಮಗೂ ಕೃಷ್ಣನಿಗೂ ಯಾವ ಅಂತರ? ನಿಮ್ಮಲ್ಲಿ ಆ ಪ್ರಸಿದ್ಧನಾದ ಪರಶುರಾಮನು ಜಗಳವಾಡಿ ಆದಿನ ತಾನೇ ಏನಾದ? ೮. ಅವರು ಶ್ರೀಕೃಷ್ಣನನ್ನು ಸಮಾನಪ್ರತಿಪತ್ತಿಯಿಂದ ಆಶ್ರಯಿಸಿದ್ದಾರೆ. ನಾನು ನಿಮ್ಮ ಪಾದವನ್ನು ಸೇವಕವೃತ್ತಿಯಿಂದ ಹಿಡಿದಿದ್ದೇನೆ. ಒಂದು ಸಲ ಹೊಡೆದೂ ಪುನ ಆಶ್ರಯಿಸಿದ್ದಾರೆ ಎನ್ನುವುದಿಲ್ಲವೇ (?) ೯. ನಿಮ್ಮದಯೆಯಿಂದ ರಾಜ್ಯಲಕ್ಷ್ಮಿಯು ಕೊರಳಲ್ಲಿ ಕಟ್ಟಿದ ದುರ್ಗಾಪದಕದಂತೆ ತೊಟ್ಟಿಲಲ್ಲಿ ಬಾಲ್ಯತನದಿಂದ ಇಲ್ಲಿಯವರೆಗೆ ಏಕಪ್ರಕಾರವಾಗಿ ನನ್ನಲ್ಲಿ ನೆಲಸಿದ್ದಾಳೆ. ನಿಮ್ಮನ್ನು ಪೂರ್ಣವಾಗಿ ನಂಬಿ ಬಲಿಷ್ಠರಾದವರಲ್ಲಿ ಯುದ್ಧವನ್ನು ಹೂಡಿದ್ದೇನೆ. ಈಗ ರಣರಂಗದಲ್ಲಿ ಯುದ್ಧಲಕ್ಷ್ಮಿಯು ನನ್ನನ್ನೇ ತಪ್ಪದೆ ಸೇರುವಂತೆ ಮಾಡಬೇಕು. ನಿಮ್ಮ ಅಭಿಪ್ರಾಯವನ್ನು ಕೊಡಿರಿ. ವ|| ಎಂದು ನುಡಿದ ತನ್ನ ಮೊಮ್ಮಗನ ವಿನಯದಿಂದ ಕೂಡಿದ ಮಾತುಗಳಿಗೆ ಕರುಣಿಸಿ ಭೀಷ್ಮನು ಹೀಗೆ ಹೇಳಿದನು. ೧೦. ನೀನು ಪಾಂಡವರನ್ನು ನೋಯಿಸಬಾರದು ಎಂದು ಹೇಳಿ ನಿನ್ನ ತಂದೆಯಾದ ಧೃತರಾಷ್ಟ್ರನು ನಿನ್ನನ್ನು ತಿದ್ದಲು ಪ್ರಯತ್ನಿಸಿದ. ಕೃಷ್ಣನು ಆರ್ಭಟಮಾಡಿ ನೋಡಿದ. ಅವರಿಬ್ಬರೂ ಸಮರ್ಥರಾಗಲಿಲ್ಲ. ಕುಂತೀ ಪುತ್ರರನ್ನು ನೋಯಿಸಬಾರದೆಂದು ಹೇಳಿದೆವು. ನಾವು ಸಮರ್ಥರಾದೆವೇ? ನಿನ್ನ ಒರಟುತನ ಕೈಮೀರಿದ್ದಾಯಿತು. ಮುಂದಾಗುವುದಾದರೋ ಮಹಾಭಾರತ ಯುದ್ಧ. ಯುದ್ಧಕಾರ್ಯದಲ್ಲಿ ತೊಡಗು ಎಂದು ನಮ್ಮನ್ನು ಇತರರ ಹಾಗೆ ನೀನು ಪ್ರಾರ್ಥಿಸಬೇಕೆ? ವ|| ಎನ್ನಲು ದುರ್ಯೋಧನನು ಮಹಾಪ್ರಸಾದ ಎಂದು ಹೇಳಿಹೋದನು. ಈ ಕಡೆ ಭೀಷ್ಮನು ತನ್ನ

ಕಂ|| ಅಣಿಯರಮೊದವಿದ ಮುಳಿಸಿನೊ
ಳಣಮಱದವರೆಂದು ರಣದೆ ಜಯಿಸಲ್ ನಾರಾ
ಯಣನೊಳಮುದಾತ್ತನಾರಾ
ಯಣನೊಳಮಿಂತೆತ್ತಿಕೊಂಡ ಗಂಡರುಮೊಳರೇ|| ೧೧

ನಿನ್ನನೆ ನಚ್ಚಿದನನುವರ
ಕೆನ್ನನೆ ಪೂಣಿಸಿದನೆನಗೆರೞ್ತಂಡಮುಮೋ|
ರನ್ನರೆ ದಲೆಂತು ಕಾದುವೆ
ನೆನ್ನಯ ಮಕ್ಕಳೊಳಮೆನ್ನ ಮೊಮ್ಮಕ್ಕಳೊಳಂ|| ೧೨

ಮಕ್ಕಳ ಮೊಮ್ಮಕ್ಕಳ ರಥ
ಮೆಕ್ಕೆಯಿನೆಡೆಗೊಂಡೊಡವರನೋವದೆ ರಣದೊಳ್|
ಮಕ್ಕಳನಾಂ ಕೊಂದೊಡೆ ತ
ನ್ನಿಕ್ಕಿದ ತತ್ತಿಯನೆ ಪಾವು ನೊಣೆವಂತಕ್ಕುಂ|| ೧೩

ನರ ನಾರಾಯಣರಿರ್ವರೆ
ಧುರದೊಳ್ ಮಾರ್ಕೊಳ್ವರೆನ್ನನೊರ್ವಂ ಮೊಮ್ಮಂ|
ಪರಮಗುರುಪೊರ್ವನವರಿ
ರ್ವರುಮಂ ಕಾದೞವೆನುೞದ ರಿಪುನೃಪಬಲಮಂ|| ೧೪

ವ|| ಎಂದು ತನ್ನೊಳ್ ಬಲೆಯುತ್ತಿರ್ಪಿನಮತ್ತ ದುರ್ಯೋಧನಂ ಸಹಸ್ರ ಕಿರಣೋದಯದೊಳನೇಕಸಹಸ್ರನರಪತಿ ಪರಿವೃತನುಮಾಗಿ ಮಂದಾಕಿನೀತನೂಜಂಗೆ ಬೞಯನಟ್ಟಿ ಬರಿಸಿ ಮಣಿಮಯಪೀಠದೊಳ್ ಕುಳ್ಳಿರಿಸಿ ದೇವಾಸುರಯುದ್ಧದೊಳ್ ಗುಹಂಗೆ ವೀರಪಟ್ಟಮಂ ಕಟ್ಟುವ ಪುರಂದರನಂದಮನೆ ಪೋಲ್ತು-

ಉ|| ತುಂಗ ಮೃದಂಗ ಶಂಖ ಪಟಹಧ್ವನಿ ದಿಕ್ತಟದಂತನೆಯ್ದೆ ವಾ
ರಾಂಗನೆಯರ್ ಚಳಲ್ಲುಳಿತ ಚಾಮರಮಂ ನೆರೆದಿಕ್ಕೆ ಪಂಚ ರ|
ತ್ನಂಗಳುಮಂ ಪುದುಂಗೊಳಿಸಿ ಪೊಂಗಳಸಂಗಳೊಳಿರ್ದ ಪುಣ್ಯತೋ
ಯಂಗಳೊಳೞ್ಕಱಂ ಮಿಸಿಸಿ ಕಟ್ಟಿದನಾ ವಿಭು ವೀರಪಟ್ಟಮಂ|| ೧೫

ವ|| ಅಂತು ಪರಶುರಾಮನನಂಜಿಸಿದ ವೀರಂಗೆ ವೀರಪಟ್ಟಮಂ ಕಟ್ಟಿ ಪಗೆವರನೆನ್ನ ಮಂಚದ ಕಾಲೊಳ್ ಕಟ್ಟಿದೆನೆಂದು ಪೊಟ್ಟಳಿಸುವ ಸುಯೋಧನನ ನುಡಿಯನವಕರ್ಣಿಸಿ ಕರ್ಣನಿಂತೆಂದಂ-

ಮನಸ್ಸಿನಲ್ಲಿ ಚಿಂತಾಕ್ರಾಂತನಾದನು. ೧೧. ದುರ್ಯೋಧನನು ವಿಶೇಷವಾಗಿ ತನಗುಂಟಾದ ಕೋಪದಲ್ಲಿ ಪಾಂಡವರು ನಿಶ್ಶಕ್ತರು, ಸತ್ವಶಾಲಿಗಳಲ್ಲ ಎಂದು ಜಯ ಪಡೆಯುವುದಕ್ಕಾಗಿ ನಾರಾಯಣನನ್ನೂ ಉದಾತ್ತನಾರಾಯಣನನ್ನೂ ಲಕ್ಷ್ಯಮಾಡದೆ ಯುದ್ಧದಲ್ಲಿ ಜಯಿಸುವುದಕ್ಕೆ ಹೊರಟಿದ್ದಾನೆ. ಇಂತಹ ಶೂರನು ಬೇರೆ ಇದ್ದಾನೆಯೇ. ೧೨. ದುರ್ಯೋಧನನು ನನ್ನನ್ನೇ ನಂಬಿದ್ದಾನೆ. ಯುದ್ಧಮಾಡುತ್ತೇನೆಂದು ನನ್ನಿಂದ ಪ್ರತಿಜ್ಞೆ ಮಾಡಿಸಿದ್ದಾನೆ. ನನಗೆ ಎರಡು ಗುಂಪಿನವರೂ ಸಮಾನರಾದವರಲ್ಲವೇ? (ಸಮಾನಬಂಧುಗಳಲ್ಲವೇ?) ನನ್ನ ಮಕ್ಕಳೊಡನೆಯೂ ಮೊಮ್ಮಕ್ಕಳೊಡನೆಯೂ ಹೇಗೆ ಯುದ್ಧಮಾಡಲಿ? ೧೩. ಮಕ್ಕಳ ಮೊಮ್ಮಕ್ಕಳ ತೇರುಗಳು ಗುಂಪುಗುಂಪಾಗಿ ನಡುವೆ ಎದುರಿಸಿದರೆ ಅವರನ್ನು ರಕ್ಷಿಸದೆ ಯುದ್ಧದಲ್ಲಿ ಮಕ್ಕಳನ್ನು ಕೊಂದೆನಾದರೆ ಹಾವು ತಾನು ಇಕ್ಕಿದ (ಪ್ರಸವಿಸಿದ-ಹೆತ್ತ) ಮೊಟ್ಟೆಗಳನ್ನು ತಾನೆ ನುಂಗಿದಂತಾಗುತ್ತದೆಯಲ್ಲವೇ? ೧೪. ನರನಾರಾಯಣರಿಬ್ಬರೇ ಯುದ್ಧದಲ್ಲಿ ನನ್ನನ್ನು ಪ್ರತಿಭಟಿಸುವವರು. ಅವರಲ್ಲಿ ಒಬ್ಬ ಮೊಮ್ಮಗ, ಮತ್ತೊಬ್ಬ ಪರಮಗುರು. ಅವರಿಬ್ಬರನ್ನೂ ರಕ್ಷಿಸಿ ಉಳಿದ ಶತ್ರುರಾಜಸೈನ್ಯವನ್ನು ನಾಶಪಡಿಸುತ್ತೇನೆ. ವ|| ಎಂದು ತನ್ನಲ್ಲಿ ಯೋಚಿಸುತ್ತಿರಲಾಗಿ ಆ ಕಡೆ ದುರ್ಯೋಧನನು ಸೂರ್ಯೋದಯದಲ್ಲಿ ಅನೇಕ ಸಾವಿರ ರಾಜರುಗಳಿಂದ ಸುತ್ತುವರಿಯಲ್ಪಟ್ಟು ಭೀಷ್ಮನಿಗೆ ದೂತರ ಮೂಲಕ ಹೇಳಿಕಳುಹಿಸಿ ಬರಮಾಡಿದನು. ರತ್ನಖಚಿತವಾದ ಪೀಠದಲ್ಲಿ ಕುಳ್ಳಿರಿಸಿದನು. ದೇವಾಸುರಯುದ್ಧದಲ್ಲಿ ಷಣ್ಮುಖನಿಗೆ ವೀರಪಟ್ಟವನ್ನು ಕಟ್ಟುವ ಇಂದ್ರನ ರೀತಿಯನ್ನೇ (ಅನುಕರಿಸಿ) ೧೫. ಶ್ರೇಷ್ಠವಾದ ಮೃದಂಗ, ಶಂಖ, ತಮಟೆ, ಮೊದಲಾದವುಗಳ ಉಚ್ಚಧ್ವನಿಯು ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿರಲು ವೇಶ್ಶಾಸ್ತ್ರೀಯರು ಚಲಿಸುತ್ತಿರುವ ಚಾಮರವನ್ನು ಗುಂಪಾಗಿ ಬೀಸುತ್ತಿರಲು ಪಂಚರತ್ನಗಳ ರಾಶಿಗಳಿಂದ ಕೂಡಿದ ಚಿನ್ನದ ಕಲಶಗಳ ಪುಣ್ಯ ತೀರ್ಥಗಳಲ್ಲಿ ಪ್ರೀತಿಯಿಂದ ಸ್ನಾನ ಮಾಡಿಸಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನಿಗೆ ವೀರಪಟ್ಟವನ್ನು ಕಟ್ಟಿದನು. ವ|| ಹಾಗೆ ಪರಶುರಾಮನನ್ನೇ ಹೆದರಿಸಿದ

ಚಂ|| ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು ನೀನಿದಂ
ಬಗೆದಿವರಿನ್ನುಮಾಂತಿಱವರೆಂದು ವಿಮೋಹಿಸಿ ವೀರಪಟ್ಟಮಂ|
ಬಗೆಯದೆ ಕಟ್ಟಿದೈ ಗುರುಗಳಂ ಕುಲವೃದ್ಧರನಾಜಿಗುಯ್ದು ಕೆ
ಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ|| ೧೬

ಕಂ|| ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ|
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱವೊಡೆನಗೆ ಪಟ್ಟಂಗಟ್ಟಾ|| ೧೭

ಆದಿಯೊಳವರಂ ಪಿರಿದೊಂ
ದಾದರದಿಂ ನಡಪಿದಜ್ಜರಪ್ಪುದಱಂದಂ|
ಕಾದರಿವರವರೊಳವರುಂ
ಕಾದರ್ ನೆರೆದಿವರೊಳೆಂತು ನಂಬುವೆ ನೃಪತೀ|| ೧೮

ವ|| ಎಂಬುದುಮಾ ನುಡಿಗೆ ಸಿಡಿಲ್ದು ಕುಂಭಸಂಭವನಿಂತೆಂದಂ-

ಕಂ|| ಸಿಂಗದ ಮುಪ್ಪು ನೆಗ್ದ
ಗಾಂಗೇಯರ ಮುಪ್ಪುಮಿೞಕೆವಡೆಗುಮೆ ವನಮಾ|
ತಂಗಂಗಳಿನಸುಹೃಚ್ಚತು
ರಂಗಬಲಂಗಳಿದನದೆಂತುಮಂಗಾಪತೀ|| ೧೯

ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾಮಧ್ಯದೊಳ|
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆನುಡಿವೈ|| ೨೦

ವ|| ಎಂದು ನುಡಿದ ಗುರುವಿನ ಕರ್ಣಕಠೋರವಚನಂಗಳ್ಗೆ ಕರ್ಣಂ ಕಿನಿಸಿ-

ಚಂ|| ಕುಲಮೆನೆ ಮುನ್ನಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ|
ಕುಲಮಭಿಮಾನಮೊಂದೆ ಕುಲಮಣ್ಮು ಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ|| ೨೧

ವೀರನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಗಳನ್ನು ನನ್ನ ಮಂಚದ ಕಾಲಿನಲ್ಲಿ ಕಟ್ಟಿದೆನೆಂದು ಅಹಂಕಾರ ಪಡುತ್ತಿರುವ ದುರ್ಯೋಧನನ ಮಾತನ್ನು ಕೇಳಿ ಕರ್ಣನು ಹೀಗೆಂದನು. ೧೬. ಹಿಂದಿನ ಕಟ್ಟುಕಥೆಯಂತಾಯ್ತು ಇವರ ಯುದ್ಧದ ಕತೆ. ಇದನ್ನು ತಿಳಿಯದೆ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ಧಮಾಡುತ್ತಾರೆ ಎಂದು ಭ್ರಾಂತಿಗೊಂಡು ವಿಚಾರಮಾಡದೆ ಇವರಿಗೆ ಸೇನಾಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯುದ್ಧರಂಗಕ್ಕೆ ಸೆಳೆದು ನಿಷ್ಪ್ರಯೋಜನಕವಾಗಿ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೋಧನ? ೧೭. ಕಣ್ಣು ಕಾಣದ ಈ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗಕ್ಕೆ ಸಮಾನವಲ್ಲವೇ? ಆತನು ಧರಿಸಿರುವ ಬಿಲ್ಲು ದಂಟಿಗೆ ಸಮಾನವಲ್ಲವೇ? ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬೇಕಾದರೆ ನನಗೆ ಪಟ್ಟ ಕಟ್ಟಯ್ಯ. ೧೮. ಬಾಲ್ಯದಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ ಇವರು ಅವರೊಡನೆ ಕಾದುವುದಿಲ್ಲ. ಅವರೂ ಇವರೊಡನೆ ಪ್ರತಿಭಟಿಸಿ ಕಾದುವುದಿಲ್ಲ. ರಾಜನೇ ಹೇಗೆ ಇವರನ್ನು ನಂಬುತ್ತೀಯೆ? ವ|| ಎನ್ನಲು ಆ ಮಾತಿಗೆ ದ್ರೋಣನು ಸಿಡಿದು ಹೀಗೆಂದನು. ೧೯. ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಅಲ್ಲಗಳೆಯಬೇಡ, ಸಿಂಹವು ಮುಪ್ಪಾದರೆ ಆನೆಗಳಿಗೆ ಸದರವೇನು? ಹಾಗೆಯೇ ಭೀಷ್ಮರು ಮುದುಕರಾದುದರಿಂದ ಚತುರಂಗಸೈನ್ಯವು ಅವರನ್ನು ಗೆಲ್ಲಬಲ್ಲವೇ? ೨೦. ಸತ್ಕುಲಪ್ರಸೂತರಾದವರನ್ನು ಶ್ರೇಷ್ಠರಾದವರನ್ನು ಎಲ್ಲರಿಗೂ ಹಿತರಾದವರನ್ನು ಕುರಿತು ಈ ಸಭಾಮಧ್ಯದಲ್ಲಿ ಹೆಚ್ಚಿದ ಕೊಬ್ಬಿನಿಂದ ನೀನು ನಿಷ್ಪ್ರಯೋಜನವಾಗಿ ತಿರಸ್ಕಾರದ ಮಾತನಾಡಿದ್ದೀಯೆ. ಕುಲವನ್ನು ನಾಲಗೆ ಆಡಿ ತೋರಿಸುತ್ತದೆಯಲ್ಲವೆ? ವ|| ಎಂದು ನುಡಿದ ಕಿವಿಗೆ ಕರ್ಕಶವಾದ ಮಾತುಗಳಿಗೆ ಕರ್ಣನು ಕೋಪಿಸಿಕೊಂಡು ೨೧. ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ಘೋಷಿಸುತ್ತೀರಿ? ನಿಮ್ಮ ಕುಲಗಳು

ಕಂ|| ಗಂಗಾಸುತಂ ಪೃಥಾಸುತ
ರಂ ಗೆಲ್ದೊಡೆ ತಪಕೆ ಪೋಪೆನವರ್ಗಳ ಕೆಯ್ಯೊಳ್|
ಗಾಂಗೇಯನೞದೊಡಹಿತರ
ನಾಂ ಗೆಲೆ ತಳ್ತಿಱವೆನನ್ನೆಗಂ ಬಿಲ್ವಿಡಿಯೆಂ|| ೨೨

ವ|| ಎಂದು ಕರ್ಣಂ ಪ್ರತಿಜ್ಞೆಗೆಯ್ವುದುಂ ಸಿಂಧುತನೂಜನಿಂತೆಂದಂ-

ಚಂ|| ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತೇನೆನಗುಂಟೆ ಭಾರತಂ|
ಕಲಹಮಿದಿರ್ಚುವಂ ಹರಿಗನಪ್ಪೊಡೆ ಮೊಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್|| ೨೩

ವ|| ಎಂದು ಮತ್ತಮಿಂತೆಂದಂ-

ಕಂ|| ಮುದುಪರ ಬಿಲ್ಬಲ್ಮೆಯುಮಿಱ
ವದಟುಂ ಬಗೆವಾಗಳಣ್ಣನೆಂದಂತುಟೆ ತ
ಪ್ಪದು ಕರಮೆ ತುಚ್ಛಮಕ್ಕುಂ
ತದನದೊಳಿನ್ನೆನ್ನ ನುಡಿದ ನುಡಿಯಂ ಕೇಳಿಂ|| ೨೪

ಮ|| ಪಿಡಿಯೆಂ ಚಕ್ರಮನೆಂಬ ಚಕ್ರಿಯನಿಳಾಚಕ್ರಂ ಭಯಂಗೊಳ್ವಿನಂ
ಪಿಡಿಯೆಪ್ಪೆಂ ಕರಚಕ್ರಮಂ ನರರಥಂ ತೂಳ್ದಾ ಕುರುಕ್ಷೇತ್ರದಿಂ|
ಪಡುವೆಣ್ಗಾವುದು ಪೋಗೆ ಪೋಗಡಿಸುವೆಂ ನಿಚ್ಚಂ ಧರಾಶರಂ
ಪಡಲಿಟ್ಟಂತಿರೆ ಮಾೞ್ಪೆನೋವದೆ ಪಯಿಂಛಾಸಿರ್ವರಂ ಯುದ್ಧದೊಳ್|| ೨೫

ವ|| ಎಂದು ಮಹಾಪ್ರತಿಜ್ಞಾರೂಢನಾದ ಗಾಂಗೇಯನಳವನಳವಲ್ಲದೆ ಪೊಗೞ್ದವರಂ ಬೀಡಿಂಗೆ ಬಿಜಯಂಗೆಯ್ಯಿಮೆಂದು ಕಳಿಪಿ ಮಱುದಿವಸಂ ಯುದ್ಧಸನ್ನದ್ಧರಾಗಿ ಪ್ರಯಾಣಭೇರಿಯಂ ಪೊಯ್ಸಿದಾಗಳ್-

ಮ|| ಕೆಡೆದಂ ಪದ್ಮಜನಾಸನಾಂಬುರುಹದಿಂದಾಗಳ್ ಸುರೇಂದ್ರಾಚಳಂ
ನಡುಗಿತ್ತರ್ಕನಳುರ್ಕೆಗೆಟ್ಟು ನಭದಿಂ ತೂಳ್ದಂ ಮರುಳ್ದಪ್ಪಿದಳ್|
ಮೃಡನಂ ಗೌರಿ ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್
ನಡುಗಿತ್ತೆಂಬಿನಮುರ್ವಿ ಪರ್ವಿದುದು ತತ್ಸನ್ನಾಹಭೇರೀರವಂ|| ೨೬

ಪ್ರತಿಭಟಿಸಿದವರನ್ನು ಎದುರಿಸಿ ಹಿಂಬಾಲಿಸಿ ತಿಂದು ಹಾಕುತ್ತವೆಯೇನು? ಹುಟ್ಟಿದ ಜಾತಿ ನಿಜವಾದ ಕುಲವಲ್ಲ ; ಛಲ-ಕುಲ, ಸದ್ಗುಣ-ಕುಲ, ಆತ್ಮಗೌರವವೊಂದೆ ಕುಲ, ಪರಾಕ್ರಮವೆಂಬುದು ಕುಲ, ವಿಚಾರಮಾಡುವುದಾದರೆ ಈಗ ಈ ಯುದ್ಧದಲ್ಲಿ ಅಣ್ಣಾ, ನಿಮ್ಮ ಈ ಕುಲವು ನಿಮಗೆ ವ್ಯಥೆಯನ್ನುಂಟುಮಾಡುತ್ತದೆ. ೨೨. ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ಅವರುಗಳ ಕಯ್ಯಲ್ಲಿ ಭೀಷ್ಮನು ನಾಶವಾದರೆ ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸಂಸಿ ಯುದ್ಧಮಾಡುತ್ತೇನೆ. ಅಲ್ಲಿಯವರೆಗೆ ನಾನು ಬಿಲ್ಲನ್ನೇ ಹಿಡಿಯುವುದಿಲ್ಲ. ವ|| ಎಂಬುದಾಗಿ ಕರ್ಣನು ಪ್ರತಿಜ್ಞೆ ಮಾಡಲು ಭೀಷ್ಮನು ಹೀಗೆ ಹೇಳಿದನು. ೨೩. ಕರ್ಣ ಶೌರ್ಯದ ಗರ್ವ, ಯವ್ವನದ ಮದ, ಸ್ವಾಮಿಯ ನಂಬಿಕೆ, ಮೀರಿದ ಬಾಹುಬಲದ ವೈಭವ -ಇವು ನಿನಗಿರುವಷ್ಟು ನನಗಿದೆಯೇನಪ್ಪ. ಇದು ಭಾರತದ ಯುದ್ಧ, ಎದುರಿಸುವವನು ಹರಿಗನಾಗಿರುವಾಗ ಈ ಹೀಯಾಳಿಕೆಯೇಕೆ? ನೀನು ಪ್ರತಿಭಟಿಸಿ ಕಾದುವೆಯಣ್ಣಾ, ಈ ಮಹಾಯುದ್ಧದಲ್ಲಿ ನಿನಗೂ ಸರಗಿ ಬರುತ್ತದೆ ನೋಡುವೆಯಂತೆ ವ|| ಎಂದು ಪುನ ಹೀಗೆಂದನು- ೨೪. ನಾನೇನೋ ಮುದುಕ. ಮುದುಕರ ಅಸ್ತ್ರವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ. ತಪ್ಪೇನಿಲ್ಲ, ವಿಶೇಷವಾಗಿ ನಿಜವೇ ಆಗುತ್ತದೆ. ಆದರೂ ಯುದ್ಧದಲ್ಲಿ ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿ- ೨೫. ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಭೂಮಂಡಲವೆಲ್ಲ ಭಯಪಡುವ ಹಾಗೆ ಚಕ್ರವನ್ನು ಹಿಡಿಸುತ್ತೇನೆ. ಅರ್ಜುನನ ತೇರು ಹಾರಿ ಕುರುಕ್ಷೇತ್ರದಲ್ಲಿ ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ ಬಾಣಪ್ರಯೋಗ ಮಾಡುತ್ತೇನೆ. ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ರಾಜರನ್ನು ಕೆಳಗುರುಳಿಸುತ್ತೇನೆ. (ಕೆಳಗೆ ಮಲಗುವ ಹಾಗೆ ಮಾಡುತ್ತೇನೆ) ವ|| ಎಂದು ಮಹಾಪ್ರತಿಜ್ಞೆಯನ್ನು ಮಾಡಿದ ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಎಲ್ಲರೂ ಹೊಗಳಿದರು. ಅವರನ್ನು ‘ಬೀಡಿಗೆ ದಯಮಾಡಿಸಿ’ ಎಂದು ಕಳುಹಿಸಿಕೊಟ್ಟನು. ಮಾರನೆಯದಿನ ಯುದ್ಧಸನ್ನದ್ಧನಾಗಿ ಪ್ರಯಾಣಸೂಚಕವಾದ ಭೇರಿಯನ್ನು ಶಬ್ದಮಾಡಿಸಿದನು. ೨೬. ಆ ಭೇರಿಯ ಶಬ್ದವನ್ನು ಕೇಳಿ

ವ|| ಅಂತು ಮೊೞಗುವ ಭೇರೀರವದೊಡನೆ ನೆಲಂ ಮೊೞಗೆಯುಂ ತಳ್ತೆತ್ತಿದ ವಿಚಿತ್ರಕೇತುಗಳೊಡನುತ್ಪಾತಕೇತುಗಳ್ ಮೂಡೆಯುಂ ಪೆರ್ವೆಂಡಿರ್ ಸೇಸೆಯೊಡನೆ ರುರವರ್ಷಂ ಸುರಿಯೆಯುಂ ಹಿತ ಪುರೋಹಿತ ಜಯ ಜಯ ಧ್ವನಿಗಳೊಡನೆ ಹಾಹಾಕ್ರಂದನ ಧ್ವನಿಗಳ ನಿಮಿತ್ತಮಾಕಾಶದೊಳ್ ನೆಗೞೆಯುಂ ಕಾದುವೆನೆಂದು ನೆಗೞೆ ನುಡಿದ ನುಡಿಯುಮಂ ಪಿಡಿದ ಚಲಮುಮಂ ಬಗೆದು ಸೆರಗಂ ಬೆರಗುಮಂ ಬಗೆಯದೆ ಮಂಗಳಾಭರಣದೊಳ್ ನೆಯೆ ಕೆಯ್ಗೆಯ್ದು ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳಾಯೋಗಂಗೊಂಡು ಬಂದ ಮದಾಂಧಗಂಧಸಿಂಧುರಮಪ್ಪ ಪಟ್ಟವರ್ಧನದ ಬೆಂಗೆವಾಯ್ದು-

ಕಂ|| ನಯಮನಯಂ ಜಯಮೆನಗಪ
ಜಯವಿದು ಯಶಮಯಶಮೆಂಬಿದಂ ಬಗೆಯದೆ ನಿ|
ಶ್ಚಯಿಸಿ ಕಲಹಮನೆ ಮನದೊಳ್
ಭಯಮಱಯದ ಕಲಿ ಸುಯೋಧನಂ ಪೊಱಮಟ್ಟಂ|| ೨೭

ವ|| ಅಂತು ಪೊಱಮಟ್ಟು ಮುಂದೆ ಪರಿವ ಧವಳಚ್ಛತ್ರಚಾಮರಂಗಳುಂ ಮಿಳಿರ್ವ ಪಾಳಿ ಕೇತನಂಗಳುಂ ಪೊಯ್ವ ಪಂಚಮಹಾಶಬ್ದಂಗಳುಂ ತನಗೆ ರಾಜರಾಜ ಶಬ್ದಮನನ್ವರ್ಥಂ ಮಾಡೆ ಜಯದ್ರಥ ಜಯತ್ಸೇನ ಸುದಕ್ಷಿಣ ಶಲ್ಯ ಶಕುನಿ ಧೃಷ್ಟಕೇತು ನೀಳ ಭಗದತ್ತ ಶ್ರುತಾಯುಧ ನಿಯತಾಯುಧಾಚ್ಯುತಾಯುಧಾದಿಗಳಪ್ಪ ಪನ್ನೊಂದಕ್ಷೋಹಿಣೀಪತಿಗಳುಂ ಗಾಂಗೇಯ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಪ್ರಭೃತಿಗಳುಂ ಕರ್ಣ ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳ್ ಮೂವರುಂ ಬೆರಸು ಬರೆ ಬಾಹ್ಲಿಕ ಭೂರಿಶ್ರವಸೋಮದತ್ತರೆಂಬ ಮೂವರುಮನಂತ ಬಲಂ ಬೆರಸು ಕೂಡಿಬರೆಯವಂತಿದೇಶಾಶ್ವರರಪ್ಪ ವಿಂದಾನುವಿಂದರೆಣ್ಬತ್ತು ನಾಲ್ಸಾಸಿರ ಮದದಾನೆ ವರೆಸು ಬಂದು ಕೂಡೆ ಕಳಿಂಗರಾಜಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರ ಮಕ್ಕಳ್ ಚತುಸ್ತ್ರಿಂಶತ್ಸಹಸ್ರ ನಕ್ತಂಚರ ಪರಿವೃತ ಹಳಂಭೂಷ ಮುಸಲಾಯುಧ ಕಾಳನೀಳ ವಿದ್ಯುನ್ಮಾಲ್ಯಾದಿಗಳುಂ ಬಂದು ಕೂಡೆ ತ್ರಿಗರ್ತಾಶಂ ಸುಶರ್ಮನುಂ ಸಂಸಪ್ತಕರ್ ಪದಿನೆಂಟು ಕೋಟಿ ರಥಂ ಬೆರಸು ಬಂದು ಕೂಡೆ ಮತ್ತಮನೇಕ ದೇಶಾಶ್ವರರುಂ ಬರೆ ಯುಯುತ್ಸು ದುಶ್ಶಾಸನ ಚಿತ್ರಸೇನ ದುಸ್ಸಹ ದುಸ್ಸಳ ವಿಂದಾನುವಿಂದ ದುರ್ಧರ್ಷಣ ದುರ್ಮರ್ಷಣ ದುಸ್ಸ ರ್ಶನ ಸುಬಾಹು ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಚಿತ್ರೋಪಚಿತ್ರ ನಂದೋಪನಂದ ಚಿತ್ರಾಂಗದ ಚಿತ್ರಕುಂಡಲ ಜರಾಸಂಧ

ಬ್ರಹ್ಮನು ಕಮಲಾಸನದಿಂದ ಉರುಳಿದನು; ಮೇರುಪರ್ವತವು ನಡುಗಿತು. ಸೂರ್ಯನು ಸ್ಥಾನಭ್ರಷ್ಟನಾಗಿ ಆಕಾಶದಿಂದ ಹಾರಿದನು. ಪಾರ್ವತಿಯು ಭ್ರಾಂತಿಗೊಂಡು ಈಶ್ವರನ್ನು ತಬ್ಬಿಕೊಂಡಳು. ಈ ಸಮಸ್ತ ಭೂಮಂಡಲವು ಕಮಲದೆಲೆಯ ಮೇಲಿನ ನೀರಿನ ಹಾಗೆ ನಡುಗಿತು ಎನ್ನುವಂತೆ ಆ ಪ್ರಯಾಣಭೇರೀ ಶಬ್ದವು ಹೆಚ್ಚಿ ಹಬ್ಬಿತು. ವ|| ಆಗ ಭೂಮಿಯು ಗುಡುಗಿತು. ಎತ್ತಿ ಕಟ್ಟಿರುವ ಚಿತ್ರಮಯವಾದ ಧ್ವಜಗಳೊಡನೆ ಅಪಶಕುನ ಸೂಚಕವಾದ ನಕ್ಷತ್ರಗಳು ಕಾಣಿಸಿಕೊಂಡವು. ವೃದ್ಧಸ್ತ್ರೀಯರು ಚೆಲ್ಲುವ ಮಂತ್ರಾಕ್ಷತೆಗಳೊಡನೆ ರಕ್ತದ ಮಳೆಯು ಸುರಿಯಿತು. ಹಿತರಾದ ಪುರೋಹಿತರ ಜಯಜಯಶಬ್ದಗಳೊಡನೆ ಅಳುವ ಶಬ್ದವು ಅಕಾರಣವಾಗಿ ಆಕಾಶದಲ್ಲಿ ಉಂಟಾಯಿತು. ಆದರೂ ದುರ್ಯೋಧನನು ಯುದ್ಧ ಮಾಡುತ್ತೇನೆಂದು ಸ್ಪಷ್ಟವಾಗಿ ಆಡಿದ ಮಾತನ್ನೂ ಹಿಡಿದ ಛಲವನ್ನೂ ಯೋಚನೆ ಮಾಡಿ ಭಯವನ್ನೂ ಅಪಾಯವನ್ನೂ ಯೋಚಿಸಲೇ ಇಲ್ಲ. ಮಂಗಳಕರವಾದ ಒಡವೆಗಳಿಂದ ಪೂರ್ಣವಾಗಿ ಅಲಂಕಾರಮಾಡಿಕೊಂಡು ಮುತ್ತು ಮಾಣಿಕ್ಯದ ಆಭರಣಗಳಿಂದ ಅಲಂಕೃತವಾಗಿ ಬಂದ ಮದಗಜವಾದ ಪಟ್ಟದಾನೆಯನ್ನು ಹತ್ತಿ ೨೭. ಇದು ನೀತಿ ಇದು ಅನೀತಿ, ಇದು ಜಯ ಇದು ಅಪಜಯ, ಇದು ಯಶಸ್ಸು ಇದು ಅಪಯಶಸ್ಸು ಎಂದು ವಿಚಾರಮಾಡದೆ ಯುದ್ಧವನ್ನೇ ಮನಸ್ಸಿನಲ್ಲಿ ನಿಷ್ಕರ್ಷಿಸಿ ಭಯವೆಂದರೇನೆಂಬುದನ್ನೇ ತಿಳಿಯದ ಶೂರನಾದ ದುರ್ಯೋಧನನು ಯುದ್ಧಕ್ಕೆ ಹೊರಟನು. ವ|| ಹಾಗೆ ಹೊರಟು ತನ್ನ ಮುಂದೆ ನಡೆಯುತ್ತಿದ್ದ ಶ್ವೇತಚ್ಛತ್ರಚಾಮರಗಳೂ ಅಲುಗಾಡುತ್ತಿದ್ದ ಕೊಂಬು, ತಮಟೆ, ಭೇರಿ, ಘಂಟೆ ಮತ್ತು ಬಿನ್ನಹಂಗಳಗಳೆಂಬ ಪಂಚಮಹಾವಾದ್ಯಗಳೂ ತನ್ನ ಚಕ್ರವರ್ತಿ ಎಂಬ ಶಬ್ದವನ್ನು ಅನ್ವರ್ಥವಾಗಿ ಮಾಡುತ್ತಿದ್ದವು. ಜಯದ್ರಥ, ಜಯತ್ಸೇನ, ಸುದಕ್ಷಿಣ, ಶಲ್ಯ, ಶಕುನಿ, ಧೃಷ್ಟಕೇತು, ನೀಳ, ಭಗದತ್ತ, ಶ್ರುತಾಯುಧ, ನಿಯತಾಯುಧ, ಅಚ್ಯುತಾಯುಧರೇ ಮೊದಲಾದ ಹನ್ನೊಂದಕ್ಷೋಹಿಣೀ ನಾಯಕರೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ ಮೊದಲಾದವರೂ ಕರ್ಣ, ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳು ಮೂವರೂ ಒಟ್ಟುಗೂಡಿ ಬಂದರು. ಬಾಹ್ಲಿಕ ಭೂರಿಶ್ರವ ಸೋಮದತ್ತರೆಂಬ ಮೂವರೂ ಕಡೆಯಿಲ್ಲದಷ್ಟು ಸೇನಾಸಮೇತರಾಗಿ ಬಂದು ಸೇರಿದರು. ಅವಂತೀದೇಶದ ಒಡೆಯರಾದ ವಿಂದಾನುವಿಂದರು ಎಂಬತ್ತುನಾಲ್ಕು ಸಾವಿರ ಮದ್ದಾನೆಯೊಡಗೂಡಿ ಬಂದು ಕೂಡಿದರು. ಕಳಿಂಗ ರಾಜನಾದ ಕ್ಷೇಮಧೂರ್ತಿಯೂ ಭೀಮಸೇನನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಹಳಂಭೂಷ ಮುಸಲಾಯುಧ ಕಾಳ ನೀಳ ವಿದ್ಯುನ್ಮಾಲಿ ಮೊದಲಾದವರೂ ಮೂವತ್ತುನಾಲ್ಕುಸಾವಿರ ರಾಕ್ಷಸರಿಂದ ಸುತ್ತುವರಿಯಲ್ಪಟ್ಟು ಬಂದು ಜೊತೆಗೂಡಿದರು. ತ್ರಿಗರ್ತಾಶ್ವರನಾದ ಸುಶರ್ಮನೂ ಸಂಶಪ್ತಕರೂ ಹದಿನೆಂಟು ಕೋಟಿ ತೇರಿನೊಡನೆ ಬಂದು ನೆರೆದರು. ಇನ್ನೂ ಅನೇಕ ದೇಶಾಶರು ಬಂದು ಒಟ್ಟುಗೂಡಿದರು. ಯುಯುತ್ಸು, ದುಶ್ಶಾಸನ, ಚಿತ್ರಸೇನ, ದುಸ್ಸಹ, ದುಸ್ಸಳ, ವಿಂದಾನುವಿಂದ,

ಸತ್ಯಸಂಧ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹುಗಳ್ ಮೊದಲಾಗೆ ತನ್ನ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಱದು ಬಳಸಿ ಬರೆ ವಿಳಯಕಾಳ ವಾತಾಹತಿಯಿಂ ಜಳನಿಯೆ ತಳರ್ವಂತೆ ತಳರ್ದು ಕುರುಕ್ಷೇತ್ರಕ್ಕೆ ಮೊಗಸಿದಾಗಳ್-

ಚಂ|| ಕರಿ ಮಕರಂಗಳಂ ಕರಿ ಘಟಾವಳಿಯಬ್ದಕುಳಂಗಳಂ ಭಯಂ
ಕರತರಮಾದ ಪೆರ್ದೆರೆಗಳಂ ಹಯಸಂತತಿ ಮತ್ಸ್ಯಕೋಟಿಯಂ|
ಸುರಿತ ನಿಶಾತಹೇತಿಯುತ ಸದ್ಭಟಕೋಟಿ ನಿರಂತರಂ ತಿರ
ಸ್ಕರಿಸಿರೆ ಘೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಾರ್ಣವಂ|| ೨೮

ಮ|| ಮದವದ್ದಂತಿ ವರೂಥ ವಾಜಿ ಭಟ ಸಂಘಾತಂಗಳೀ ಲೆಕ್ಕಮೆಂ
ಬುದನಾಂ ನಿಟ್ಟಿಸಲಾನೊಂದನಱವೆಂ ತತ್ಸೈನ್ಯ ಪಾದೋತ್ಥಿತಂ|
ಪುದಿದೆತ್ತಂ ರಜಮಂಬರಸ್ಥಳಮುಮಂ ಮುಟ್ಟಿತ್ತು ತಳ್ತುರ್ವಿ ಪ
ರ್ವಿದೊಡಾ ಮುನ್ನಿನ ತೆಳ್ಪುಗೆಟ್ಟು ಕೆಸಱುಯ್ತಾಕಾಶ ಗಂಗಾಜಲಂ|| ೨೯

ಚಂ|| ರವಿಕಿರಣಾಳಿಗಳ್ ಧ್ವಜಪಟಾಳಿಯ ತಿಂತಿಣಿಯಿಂದಮುರ್ಚಲಾ
ಱವೆ ರವಿವಾಜಿಗಳ್ ನೆಗೆದ ಪಾಂಸುಗಳಿಂ ದೆಸೆಗೆಟ್ಟು ಪೋಗಲಾ|
ಱವೆ ರವಿಬಿಂಬಮಂದೆಸೆಯಲಾಱದೆ ಪೆಂಪಿನ ತಿಣ್ಪನಾಂತ ಕೌ
ರವಬಳದಂತು ಮೇರೆ ಪವಣೆಂಬುದನಿನ್ನಱವಂದಮಾವುದೋ|| ೩೦

ಮ|| ಮದವದ್ದಂತಿ ಮದಾಂಬುಧಾರೆಗಳವಂದೊಂದೊಂದಳ್ ಕೂಡೆ ಪ
ಣ್ಣಿದ ಜಾತ್ಯಶ್ವ ರಥಾಶ್ವ ಸಂಕುಳ ಖಲೀನೋದ್ಭೂತ ಲಾಲಾಜಲಂ|
ಕದಡೆೞ್ದೆತ್ತಮವುಂಕೆ ಬೇ ಪರಭಾಗಂಬೆತ್ತು ಲೋಕಕ್ಕೆ ಸ
ನ್ನಿದಮಾಗಿರ್ದುವು ಕೌರವಧ್ವಜಿನಿಯೊಳ್ ಕಾಳಿಂದಿಯುಂ ಗಂಗೆಯುಂ|| ೩೧

ವ|| ಅಂತು ದುರ್ಯೋಧನಂ ತನ್ನ ಬಲದ ಕರಿಘಟೆಗಳ ಕರ್ಣ ತಾಳಾಹತಿಯಿಂ ಕುಲಗಿರಿಗಳಳ್ಳಾಡೆಯುಂ ತನ್ನ ಬಲದ ಪದಾಭಿಘಾತದೊಳಂ ಕುಲಗಿರಿಗಳ್ ಜೀೞ್ದು ಪಾೞೆಯುಂ ತನ್ನ ಬಲದ ಪದೋತ್ಥಿತ ರಜಮೆ ಮಹಾಸಮುದ್ರಂಗಳಂ ತೆಕ್ಕನೆ ತೀವೆಯುಂ ನಿಚ್ಚವಯಣದಿಂ ಬಂದು ಕುರುಕ್ಷೇತ್ರದ ಪೂರ್ವ ದಿಗ್ಭಾಗದೊಳ್ ಪ್ರಳಯಂ ಮೂರಿವಿಟ್ಟಂತೆ ಬೀಡಂಬಿಟ್ಟು ಧರ್ಮಪುತ್ರನಲ್ಲಿ ಗುಳೂಕನೆಂಬ ದೂತನನಿಂತೆಂದಟ್ಟಿದಂ-

ದುರ್ಧಷಣ, ದುರ್ಮರ್ಷಣ, ದುಸ್ಪರ್ಶನ, ದುಷ್ಕರ್ಣ, ಸುಬಾಹು, ದುರ್ಮುಖ, ವಿಕರ್ಣ, ವಿವಿಂಶತಿ, ಸುಲೋಚನ, ಚಿತ್ರೋಪಚಿತ್ರ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹುಗಳೇ ಮೊದಲಾದ ನೂರುಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರುಜನ ಮಕ್ಕಳೂ ಸುತ್ತುಗಟ್ಟಿ ಬಂದರು. ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಸಮುದ್ರವೇ ಚಲಿಸುವಂತೆ ಚಲಿಸಿ ಸೈನ್ಯವು ಕುರುಕ್ಷೇತ್ರವನ್ನು ಮುತ್ತಿಕೊಂಡಿತು. ೨೮. ನೀರಾನೆಗಳನ್ನೂ ಮೊಸಳೆಗಳನ್ನೂ ಆನೆಯ ಸಮೂಹವೂ, ಮೇಘಸಮೂಹವನ್ನೂ ಅತಿಭಯಂಕರವಾದ ದೊಡ್ಡ ಅಲೆಗಳನ್ನೂ ಕುದುರೆಗಳ ಸಮೂಹವೂ, ಮೀನಿನ ಸಮೂಹವನ್ನು ಪ್ರಕಾಶಮಾನವೂ ಹರಿತವೂ ಆದ ಕತ್ತಿಗಳಿಂದ ಕೂಡಿದ ಒಳ್ಳೆಯ ಭಟಸಮೂಹವೂ ಒಂದೇಸಮನಾಗಿ ತಿರಸ್ಕರಿಸುತ್ತಲು ಚತುರಂಗಸೇನಾಸಮುದ್ರವು ಘೋಷಿಸುತ್ತಿರುವ ಸಮುದ್ರವನ್ನೇ ಮೀರಿ ಬಂದಿತು. ೨೯. ಮದ್ದಾನೆ, ತೇರು, ಕುದುರೆ, ಕಾಲಾಳುಗಳು ಈ ಲೆಕ್ಕವುಳ್ಳದ್ದು ಎಂದು ನಾನು ಹೇಳಲಾರೆ. ಇಷ್ಟು ಮಾತ್ರ ಹೇಳಬಲ್ಲೆ. ಆ ಸೈನ್ಯದ ತುಳಿತದಿಂದ ಮೇಲೆದ್ದು ಎಲ್ಲ ಕಡೆಯಲ್ಲೂ ವ್ಯಾಪಿಸಿ ಆಕಾಶಪ್ರದೇಶವನ್ನು ಮುಟ್ಟಿದ್ದ ಧೂಳು ಮತ್ತೂ ಹೆಚ್ಚಾಗಿ ವ್ಯಾಪಿಸಲು ಆಕಾಶಗಂಗಾನದಿಯ ನೀರು ತನ್ನ ಮೊದಲಿನ ಸ್ವಚ್ಛತೆಯನ್ನು ಕಳೆದುಕೊಂಡು ಬಗ್ಗಡವಾಯಿತು. ೩೦. ಸೂರ್ಯನ ಕಿರಣಗಳ ಸಮೂಹವು ಬಾವುಟದ ಬಟ್ಟೆಗಳ ಸಮೂಹವನ್ನು ಭೇದಿಸಿಕೊಂಡು ಬರಲಾರವು, ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ ದಿಕ್ಕೆಟ್ಟು ಮುಂದೆ ಹೋಗಲಾರವು, ಸೂರ್ಯಬಿಂಬವು ಪ್ರಕಾಶಹೀನವಾಗಿ ವೈಭವದ ಭಾರದಿಂದ ಕೂಡಿದ ಕೌರವಸೇನೆಯಂತೆಯೇ ಕೊನೆ, ಎಲ್ಲೆ, ಪ್ರಮಾಣಗಳನ್ನು ತಿಳಿಯಲಾರದಂತಿದ್ದುವು ೩೧. ಮದ್ದಾನೆಗಳ ಮದೋದಕದ ಒಟ್ಟುಗೂಡಿದ ಪ್ರವಾಹವೂ ಸಿದ್ಧವಾಗಿ ಅಲಂಕೃತವಾಗಿರುವ ಜಾತ್ಯಶ್ವ ಮತ್ತು ರಥಾಶ್ವ (ಜಾತಿ ಕುದುರೆ ಮತ್ತು ತೇರಿನ ಕುದುರೆ)ಗಳ ಕಡಿವಾಣಗಳ ಸಮೂಹದಿಂದ ಹುಟ್ಟಿದ ಜೊಲ್ಲಿನ ರಸವೂ ಒಂದರೊಡನೊಂದುಗೂಡಲು (ಒಂದನ್ನೊಂದು ಒತ್ತರಿಸಲು) ಗಂಗಾ ಯುಮುನಾನದಿಗಳು ಬೇರೆ ಆಕಾರವನ್ನು ಪಡೆದು ಕೌರವ ಸೈನ್ಯ ಪ್ರದೇಶದಲ್ಲಿ ಹರಿಯುವ ಹಾಗಿದ್ದುವು. ವ|| ದುರ್ಯೋಧನನು ಸೈನ್ಯದ ಆನೆಗಳ ಸಮೂಹದ ಕಿವಿಯ ಬೀಸುವಿಕೆಯ ಪೆಟ್ಟಿನಿಂದ ಕುಲಪರ್ವತಗಳಳ್ಳಾಡಿದುವು. ಅವನ ಸೈನ್ಯದ ಕಾಲಿನ ತುಳಿತದಿಂದ ಕುಲಪರ್ವತಗಳು ಪುಡಿಯಾಗಿ ಮೇಲಕ್ಕೆದ್ದು

ಚಂ|| ಮಸೆಯಿಸುಗುಳ್ಳ ಕೆಯ್ದುಗಳನರ್ಚಿಸುಗಾನೆಗಳಂ ತಗುಳ್ದು ಪೂ
ಜಿಸುಗೆ ವಿಶುದ್ಧ ವಾಜಿಗಳನಾಜಿಗೆ ಜೆಟ್ಟಿಗರಾಗಿ ಕೊಳ್ಳಿವೀ|
ಸೀಸುಗೆ ನಿರಂತರಂ ರವಳಿ ಘೋಷಿಸುಗಿಂದೆ ಕಡಂಗಿ ಸಾರ್ಚಿ ಬಿ
ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ|| ೩೨

ವ|| ಎಂದಾ ದೂತನಾ ಮಾೞ್ಕೆಯೊಳೆ ಬಂದು ಪೇೞೆ ಕೇಳ್ದು ಯಮನಂದನನಿಂತೆಂದಂ-

ಚಂ|| ಪಗೆ ಮಸೆದಂದೆ ಕೆಯ್ದು ಮಸೆದಿರ್ದುವು ಪೂಡಿಸುವಂಕದಾನೆ ವಾ
ಜಿಗಳೆಮಗಿಲ್ಲ ಜಟ್ಟಿಗರೆ ಎನ್ನೊಡವುಟ್ಟಿದರಲ್ತೆ ನಾಲ್ಕುಮಾ|
ನೆಗಳಿವನಾಂ ದಲಿಂ ರಣದೊಳರ್ಚಿಸಿ ಬಿಟ್ಟಪೆನೇಕೆ ಮಾಣ್ಬೆನಾ
ವಗಮಿದನಂತೆ ಪೇೞು ನೆಯೆ ನಾಳೆಯೆ ಕಾಳೆಗಮಂತೆ ಗೆಯ್ವಮಾಂ|| ೩೩

ವ|| ಎಂದಾ ದೂತನಂ ವಿಸರ್ಜಿಸಿ ಪುಂಡರೀಕಾಕ್ಷಂಗೆ ಬೞಯನಟ್ಟಿ ಬರಿಸಿ ನಮ್ಮ ಪಡೆಯೊಳಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಮೆನೆ-

ಶಾ|| ಮಾತಂಗಾಸುರವೈರಿಯಲ್ಲಿ ಪಡೆದುಂ ಬಿಲ್ಲಂ ಧನುರ್ವಿದ್ಯೆಗಂ
ತಾತಂಗಗ್ಗಳಮಾರುಮಲ್ಲದಱನಾ ಶ್ವೇತಂಗಮಂತಾ ನದೀ
ಜಾತಂಗಂ ದೊರೆ ಯುದ್ಧಮೆಂದಱದು ತಚ್ಛೆ ತಂಗೆ ಭೂಲೋಕವಿ
ಖ್ಯಾತಂಗಗ್ಗಳ ವೀರಪಟ್ಟಮನುದಾರಂ ಕಟ್ಟಿದಂ ಧರ್ಮಜಂ|| ೩೪

ವ|| ಅಂತು ವಿರಾಟನಂದನನಂ ಧರ್ಮನಂದನಂ ಸೇನಾನಾಯಕನಂ ಮಾಡೆ ನಾಳೆ ಕಾಳಗಮೆಂದು ಪಡೆವಳರ್ ಪೋಗಿ ಸಾಱಮೆಂಬುದುಮವರ್ ಬೀಡುವೀಡುಗಳ್ಗೆಲ್ಲಂ ಸಾಱದಾಗಳ್-

ಚಂ|| ಪಗೆ ಸುಗಿವನ್ನೆಗಂ ಮಸೆವ ವೀರಭಟರ್ಕಳ ರೌದ್ರಮಪ್ಪ ಕೆ
ಯ್ದುಗಳಿನಗುರ್ವಿನದ್ಭುತದಿನುರ್ವಿದ ಕೆಂಗಿಡಿಗಳ್ ಪಳಂಚಿ ತೊ|
ಟ್ಟಗೆ ಕೊಳೆ ಪಾಯ್ದವೋಲ್ ಪೊಳೆವ ಸಂಜೆಯ ಕೆಂಪದು ಸಾಣೆಗೊಡ್ಡಿದಿ
ಟ್ಟಗೆಯ ರಜಂಬೊಲೆಂಬಿನೆಗಮಸ್ತಮಯಕ್ಕಿೞದಂ ದಿವಾಕರಂ|| ೩೫

ಹಾರಿದುವು. ಅವನ ಸೈನ್ಯದ ಕಾಲಿನಿಂದ ಎದ್ದ ಧೂಳೇ ಮಹಾಸಮುದ್ರಗಳನ್ನು ಇದ್ದಕ್ಕಿದ್ದ ಹಾಗೆ ತುಂಬಿತು. ಹೀಗೆ ನಿತ್ಯಪ್ರಯಾಣದಿಂದ ಬಂದು ಕುರುಕ್ಷೇತ್ರದ ಪೂರ್ವದಿಗ್ಭಾಗದಲ್ಲಿ ಪ್ರಳಯ ಕಾಲವೇ ಗುಂಪುಕೂಡಿದ ಹಾಗೆ ಬೀಡನ್ನು ಬಿಟ್ಟು ದುರ್ಯೋಧನನು ಧರ್ಮರಾಜನ ಹತ್ತಿರಕ್ಕೆ ಉಳೂಕನೆಂಬ ಆಳಿನ ಮೂಲಕ ಹೀಗೆಂದು ಹೇಳಿ ಕಳುಹಿಸಿದನು. ೩೨. ಇರುವ ಆಯುಧಗಳನ್ನು ಹರಿತಮಾಡಲಿ, ಆನೆಗಳನ್ನು ಪೂಜಿಸಲಿ, ಪರಿಶುದ್ಧರಾದ ಕುದುರೆಗಳನ್ನು ಶ್ರದ್ಧೆಯಿಂದ ಪೂಜಿಸಲಿ; ಯುದ್ಧವೀರರಾಗಿ ಯುದ್ಧ ಸೂಚಕಗಳಾದ ದೀವಟಿಗೆಗಳನ್ನು ಬೀಸಿಸಲಿ. ನಿಲ್ಲಿಸದೆ ಒಂದೇಸಮನಾಗಿ ಯುದ್ಧ ಘೋಷವಾಗುತ್ತಿರಲಿ; ಉತ್ಸಾಹದಿಂದ ಕೂಡಿ ಯುದ್ಧಮಾಡಬೇಕಾದ ಈದಿನ ಯುದ್ಧರಂಗದಲ್ಲಿ ವ್ಯರ್ಥಾಲಾಪ ಮಾಡುತ್ತಿರಲು ಕಾರಣವೇನು? ನೇರವಾಗಿ ನಾಳೆಯಿಂದಲೇ ಕಾಳಗ ಪ್ರಾರಂಭವಾಗತಕ್ಕದ್ದು. ವ|| ಎಂದು ಹೇಳಿದ ಆ ಮಾತನ್ನು ಆ ದೂತನು ಆ ರೀತಿಯಿಂದಲೇ ಬಂದು ಹೇಳಲಾಗಿ ಧರ್ಮರಾಜನು ಕೇಳಿ ಹೀಗೆಂದನು.

೩೩. ಹಗೆತನ ಪ್ರಾರಂಭವಾದ ದಿನವೇ ಆಯುಧಗಳು ಸಾಣೆಗೊಂಡಿವೆ. ಪೂಜಿಸಬೇಕಾದ ಪ್ರಸಿದ್ಧವಾದ ಪ್ರತ್ಯೇಕ ಆನೆ ಕುದುರೆಗಳು ನಮಗಿಲ್ಲ ; ನನ್ನೊಡನೆ ಹುಟ್ಟಿದವರೇ ಜಟ್ಟಿಗಳಾದವರಲ್ಲವೇ? ಈ ನಾಲ್ಕು ಆನೆಗಳನ್ನೇ ಪೂಜಿಸಿ ಯುದ್ಧದಲ್ಲಿ ಬಿಡುತ್ತೇನೆ. ಏಕೆ ತಡೆಯಲಿ? ಇದನ್ನು ಹೀಗೆಯೇ ಪೂರ್ಣವಾಗಿ ಹೇಳು. ನಾಳೆಯೇ ಯುದ್ಧವಾಗಲಿ. ನಾವೂ ಹಾಗೆಯೇ ಮಾಡುತ್ತೇವೆ. ವ|| ಎಂದು ಆ ದೂತನನ್ನು ಕಳುಹಿಸಿಕೊಟ್ಟನು. ಶ್ರೀಕೃಷ್ಣನಿಗೆ ಸಮಾಚಾರವನ್ನು ದೂತರ ಮೂಲಕ ಕಳುಹಿಸಿ ಬರಮಾಡಿದನು. ‘ನಮ್ಮ ಸೈನ್ಯದಲ್ಲಿ ಯಾರಿಗೆ ವೀರಪಟ್ಟವನ್ನು ಕಟ್ಟೋಣ ಅಪ್ಪಣೆ ಕೊಡಿ’ ಎಂದು ಕೇಳಿದನು. ೩೪. ಶ್ವೇತನು ಈಶ್ವರನಲ್ಲಿ ಬಿಲ್ಲನ್ನು ಪಡೆದಿದ್ದಾನೆ. ಬಿಲ್ವಿದ್ಯೆಯಲ್ಲಿ ಆತನನ್ನು ಮೀರಿಸುವವರಾರೂ ಇಲ್ಲ. ಆದುದರಿಂದ ಆ ಶ್ವೇತನಿಗೂ ಭೀಷ್ಮನಿಗೂ ಯುದ್ಧವು ಸಮಾನವಾದುದು ಎಂದು ತಿಳಿದು ಆ ಉದಾರಿಯಾದ ಧರ್ಮರಾಜನು ಭೂಲೋಕವಿಖ್ಯಾತನಾದ ಶ್ವೇತನಿಗೆ ಅತಿಶಯವಾದ ವೀರಪಟ್ಟವನ್ನು ಕಟ್ಟಿದನು. ವ|| ಹಾಗೆ ವಿರಾಟನ ಮಗನಾದ ಶ್ವೇತನನ್ನು ಧರ್ಮರಾಜನು ಸೇನಾನಾಯಕನನ್ನಾಗಿ ಮಾಡಿ ನಾಳೆಯೇ ಯುದ್ಧವೆಂದು ಸೇನಾಪತಿಗಳು ಹೋಗಿ ಸಾರಿರಿ ಎನ್ನಲು ಅವರು ಬೀಡುಬೀಡುಗಳಲ್ಲೆಲ್ಲ ಘೋಷಿಸಿದರು- ೩೫. ಶತ್ರುವು ಹೆದರುವಂತೆ ಮಸೆದಿರುವ ವೀರಭಟರುಗಳ ಭಯಂಕರವಾದ ಆಯುಧಗಳಿಂದ ಭಯಂಕರವೂ ಆಶ್ಚರ್ಯಕರವೂ ಆಗಿ ಎದ್ದಿರುವ ಕೆಂಗಿಡಿಗಳು ತಗಲಿ ಆವರಿಸಲು ಮೇಲೆ ಹಾಯುವ ಹಾಗೆ

ವ|| ಆಗಳುಭಯಬಲಂಗಳೊಳಂ ಚಾತುರ್ಯಾಮಾವಸಾನಘಟಿತ ಘಂಟಿಕಾಧ್ವನಿಗಳುಂ ಸಂಧ್ಯಾಸಮಯಸಮುದಿತ ಶಂಖಧ್ವನಿಗಳುಂ ಪಂಚಮಹಾಶಬ್ದಧ್ವನಿಗಳುಮೊಡನೊಡನೆ ನೆಗೞ್ದುವಾಗಳೆರಡುಂ ಬೀಡುಗಳೊಳಂ ಭೋರೆಂದಾರ್ದು ರವಳಿ ಘೋಷಿಸಿ ಕೊಳ್ಳಿವೀಸಿದಾಗಳ್-

ಕಂ|| ಉರಿಮುಟ್ಟಿದರಳೆಯಂತಂ
ಬರಮುರಿದತ್ತಜನ ಪದ್ಮವಿಷ್ಟರದೆಸಳಂ|
ದರೆಸೀದುವಖಿಳ ದಿಗ್ದಿ ರ
ದರದಂಗಳ್ ಕರಮೆ ಕರಿಪುಗಾಱದುವಾಗಳ್|| ೩೬

ವ|| ಅಂತು ಕೊಳ್ಳಿವೀಸಿದಿಂಬೞಯಂ-

ಕಂ|| ಧೃತ ಧವಳವಸನರಾರಾ
ತಶಿವರರ್ಚಿತ ಸಮಸ್ತಶಸ್ತ್ರರ್ ನೀರಾ|
ಜಿತತುರಗರೊಪ್ಪಿದರ್ ಕೆಲ
ರತಿರಥ ಸಮರಥ ಮಹಾರಥಾರ್ಧರಥರ್ಕಳ್|| ೩೭

ಉಡಲುಂ ತುಡಲುಂ ವಸ್ತ್ರಂ
ತುಡುಗೆಯನಾನೆಯುಮನರ್ಥಿಸಂತತಿಗೀಯಲ್|
ಬಿಡುವೊನ್ನುಮನಾಳ್ಗಟ್ಟುವ
ತೊಡರೊಳ್ ತೊಡರ್ದಿರ್ದರರಸುಮಕ್ಕಳ್ ಕೆಲಬರ್|| ೩೮

ವ|| ಆ ಪ್ರಸ್ತಾವದೊಳೊರ್ವಂ ತನ್ನ ದೋರ್ವಲದಗುರ್ವಿನೊಳುರ್ವೀಪತಿಯನಿಂತೆಂದಂ-

ಉ|| ನಾಳೆ ವಿರೋ ಸಾಧನ ಘಟಾಘಟಿತಾಹವದಲ್ಲಿ ನಿನ್ನ ಕ
ಟ್ಟಾಳಿರೆ ಮುಂಚಿ ತಾಗದೊಡಮಳ್ಕು ತಾಗಿ ವಿರೋಸೈನ್ಯ ಭೂ|
ಪಾಳರನೊಂದೆ ಪೊಯ್ಯದೊಡಮೀ ತಲೆ ಪೋದೊಡಮಟ್ಟೆಯಟ್ಟಿ ಕ
ಟ್ಟಾಳನೆ ಮುಟ್ಟಿ ತಳ್ತಿಱಯದಿರ್ದೊಡಮಂಜಿದೆನಾಂ ಮಹೀಪತೀ|| ೩೯

ವ|| ಎಂದು ತನ್ನ ಮನದ ಪೊಡರ್ಪುಮಂ ಕೂರ್ಪುಮನುಂಟುಮಾಡಿ ನುಡಿದಂ ಮತ್ತೊರ್ವಂ ತನ್ನನಾಳ್ದಂ ಪೆರ್ಚಿ ಪೊರೆದುದರ್ಕೆ ಕರಂ ಮೆಯ್ವೆರ್ಚಿ ನುಡಿದಂ-

ಹೊಳೆಯುತ್ತಿರುವ ಆ ಸಂಜೆಗೆಂಪು ಸಾಣೆಗೆ ಕೊಟ್ಟ ಇಟ್ಟಿಗೆಯ ಧೂಳೆನ್ನುವ ಹಾಗಿರಲು ಸೂರ್ಯನು ಮುಳುಗಿದನು. ವ|| ಆಗ ಎರಡು ಸೈನ್ಯಗಳಲ್ಲಿಯೂ ನಾಲ್ಕು ಯಾಮಗಳ ಕಡೆಯಲ್ಲಿ ಉಂಟಾಗುವ ಗಂಟೆಯ ಶಬ್ದಗಳೂ ಸಂಧ್ಯಾಕಾಲದಲ್ಲಿ ಶಂಖಧ್ವನಿಗಳೂ ಪಂಚಮಹಾಧ್ವನಿಗಳೂ ಜೊತೆಜೊತೆಯಲ್ಲಿಯೇ ಉಂಟಾದುವು. ಆಗ ಎರಡು ಬೀಡುಗಳಲ್ಲಿಯೂ ಭೋರೆಂದು ಸಾಮೂಹಿಕ ಶಬ್ದವನ್ನು ಘೋಷಿಸಿ ಆ ಯುದ್ಧಸೂಚಕವಾದ ದೀವಟಿಗೆಗಳನ್ನು ಬೀಸಿದರು. ೩೬. ಬೆಂಕಿ ತಗುಲಿದ ಹತ್ತಿಯಂತೆ ಆಕಾಶವು ಉರಿದುಹೋಯಿತು. ಬ್ರಹ್ಮನ ಕಮಲಾಸನದ ದಳಗಳು ಅರ್ಧ ಸುಟ್ಟವು. ಎಲ್ಲ ದಿಗ್ಗಜಗಳ ದಂತಗಳೂ ವಿಶೇಷವಾಗಿ ಕರ್ರಗಾದುವು ವ|| ಹಾಗೆ ಕೊಳ್ಳಿ ಬೀಸಿದ ಬಳಿಕ ೩೭. ಆ ಸೈನ್ಯದಲ್ಲಿ ವಸ್ತ್ರವನ್ನು ಧರಿಸಿದವರೂ ಶಿವನನ್ನು ಆರಾಸಿದವರೂ ಸಮಸ್ತ ಆಯುಧಗಳನ್ನು ಪೂಜಿಸಿದವರೂ ಕುದುರೆಗಳಿಗೆ ಆರತಿಯನ್ನೆತ್ತಿದವರೂ ಆದ ಕೆಲವರು ಅತಿರಥ, ಸಮರಥ, ಮಹಾರಥ, ಅರ್ಧರಥರುಗಳು ಪ್ರಕಾಶಿಸಿದರು.

೩೮. ಉಡಲು ವಸ್ತ್ರವನ್ನೂ ತೊಡಲು ಆಭರಣವನ್ನೂ ಆನೆಯನ್ನೂ ಯಾಚಕಸಮೂಹಕ್ಕೆ ಕೊಡಲು ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ಸಡಗರದಲ್ಲಿ ಕೆಲವು ಅರಸು ಮಕ್ಕಳು ತೊಡಗಿದ್ದರು. ವ|| ಆ ಸಂದರ್ಭದಲ್ಲಿ ಒಬ್ಬನು ತನ್ನ ತೋಳಬಲದ ಆಕ್ಯದಿಂದ ರಾಜನಿಗೆ ಹೀಗೆ ಹೇಳಿದನು- ೩೯. ಎಲೈ ರಾಜನೆ ನಾಳೆ ನಡೆಯಲಿರುವ ಶತ್ರುಸೈನ್ಯದ ಗಜಯುದ್ಧದಲ್ಲಿ ನಿನ್ನ ಶೂರರಿರಲು ಅವರನ್ನು ಮುಂಚಿ ಶತ್ರುಸೈನ್ಯವನ್ನು ಪ್ರತಿಭಟಿಸುತ್ತೇನೆ. ಭಯವುಂಟಾಗುವಂತೆ ತಗುಲಿ ಶತ್ರುರಾಜರನ್ನು ಒಂದೇಸಮನಾಗಿ ಹೊಡೆದು ಹಾಕುತ್ತೇನೆ. ಈ ತಲೆ ಹೋದರೂ ಮುಂಡವೇ ಶೂರರನ್ನು ಬೆನ್ನಟ್ಟಿ ಹೋಗಿ ತಗಲಿ ಕತ್ತರಿಸುತ್ತದೆ. ಹಾಗೆ ಮಾಡದಿದ್ದರೆ ನಾನು ಅಂಜಿದವನಾಗುತ್ತೇನೆ. ವ|| ಎಂದು ತನ್ನ ಮನದ ಉತ್ಸಾಹವನ್ನೂ ಕೆಚ್ಚನ್ನೂ ಪ್ರದರ್ಶನ ಮಾಡಿ ತೋರಿಸಿದನು. ಮತ್ತೊಬ್ಬನು ತನ್ನ ಯಜಮಾನನು ತನ್ನನ್ನು

ಚಂ|| ಒದವಿದ ನಿನ್ನದೊಂದು ದಯೆ ಮೇಣ್ ಪಿರಿದೋ ನೆಗೞ್ದೆನ್ನ ಗಂಡುಮಾ
ದದಟುಮಳುರ್ಕೆಯುಂ ಪಿರಿದೊ ಸಂದೆಯಮಾದಪುದಿಂತಿದಿಲ್ಲಿ ತೂ|
ಗಿದೊಡಱಯಲ್ಕೆ ಬಾರದದು ಕಾರಣದಿಂ ರಿಪುಭೂಪ ದಂತಿದಂ
ತದ ತೊಲೆಯೊಳ್ ಪರಾಕ್ರಮದಿನೆನ್ನನೆ ಭೂಪತಿ ತೂಗಿ ತೋನೇ|| ೪೦

ವ|| ಎಂದು ತನ್ನ ಸೆರಗುಂ ಬೆರಗುಮಿಲ್ಲದ ಕಲಿತನಮನಱಯೆ ನುಡಿದಂ ಮತ್ತಮೊಂದೆಡೆಯೊಳೊರ್ವ ವೀರಭಟನುದಾರ ವೀರರಸರಸಿಕನಾಗಿ-

ಚಂ|| ಕುದುರೆಯನೇಱದಂಬೆರಸು ಸೌಳೆನೆ ವೋಗಿರೆ ಪೊಯ್ದುಮೆಯ್ದೆ ಕ
ಟ್ಟಿದಿರೊಳೆ ನೂಂಕಿದಾನೆಗಳ ಕೋಡುಗಳಂ ಬಳೆವೋಗೆ ಪೊಯ್ದುಮಾಂ|
ತದಟರನೊಂದೆವೊಯ್ದುಮೆರಡುಂ ಬಲಮೆನ್ನನೆ ನೋಡೆ ತಕ್ಕಿನೆ
ನ್ನದಟುಮನೆನ್ನ ವೀರಮುಮನಾಜಿಯೊಳೆನ್ನರಸಂಗೆ ತೋಱುವೆಂ|| ೪೧

ವ|| ಎಂದತಿರಭಸ ರಣವ್ಯಸನಮನಾತ್ಮೀಯಶಾಸನಾಯತ್ತಂ ಮಾಡಿದಂ ಮತ್ತೊರ್ವ ನತ್ಯುಗ್ರ ಮಂಡಳಾಗ್ರಮನನುಗೆಯ್ದು ವೀರಗ್ರಹಗ್ರಸ್ತನಾಗಿ-

ಚಂ|| ಸಿಡಿಲೊಳೆ ತಳ್ತು ಪೋರ್ವ ಸಿಡಿಲಂತಿರೆ ಬಾಳೊಳೆ ಬಾಳ್ ಪಳಂಚಿ ಮಾ
ರ್ಕಿಡಿವಿಡೆ ನೋಡಲಂಜಿ ದೆಸೆದೇವತೆಗಳ್ ಪೆಱಪಿಂಗ್ ತೋಳ ತೀನ್|
ಕಿಡೆ ನಲಿದೊಂದೆರೞ್ಕುದುರೆಯಟ್ಟೆಯುಮೊಂದೆರಡಾನೆಯಟ್ಟೆಯುಂ
ತೊಡರ್ದೊಡನಾಡೆ ತಳ್ತಿಱಯದಿರ್ದೊಡೆ ಜೋಳಮನೆಂತು ನೀಗುವೆಂ|| ೪೨

ವ|| ಎಂದು ನಿಜಭುಜವಿಜಯಮನಪ್ಪುಕೆಯ್ದು ನುಡಿದಂ ಮತ್ತೊರ್ವನಲ್ಲಿಯೆ-

ಮ|| ಸುರಲೋಕಂ ದೊರೆಕೊಳ್ವುದೊಂದು ಪರಮ ಶ್ರೀಲಕ್ಷ್ಮಿಯುಂ ಬರ್ಪುದಾ
ದರದಿಂ ದೇವನಿಕಾಯದೊಳ್ ನೆರೆವುದೊಂದುತ್ಸಾಹಮುಂ ತನ್ನ ಮೆ|
ಯ್ಸಿರಿ ಭಾಗ್ಯಂ ನೆರಮಪ್ಪುದೊಂದೆ ರಣದೊಳ್ ಗೆಲ್ದಾಜಿಯಂ ತಳ್ತು ಸಂ
ಗರದೊಳ್ ಜೋಳದ ಪಾೞಯಂ ನೆರಪಿದಂ ಗಂಡಂ ಪೆಱಂ ಗಂಡನೇ|| ೪೩

ವಿಶೇಷವಾಗಿ ಸಾಕಿದುದಕ್ಕೆ ತೃಪ್ತಿಗೊಂಡು ಮೆಯ್ಯುಬ್ಬಿ ಮಾತನಾಡಿದನು- ೪೦. ನನ್ನಲ್ಲಿ ನಿನಗುಂಟಾದ ದಯೆ ಹೆಚ್ಚಿನದೊ ಅಥವಾ ನನ್ನ ಪ್ರಸಿದ್ಧವಾದ ಪೌರುಷವೂ ಪರಾಕ್ರಮವೂ ಕೀರ್ತಿಯೂ ದೊಡ್ಡದೋ ಎನ್ನುವುದು ಸಂದೇಹವಾಗಿದೆ. ಇಲ್ಲಿ ಇವೆರಡರನ್ನೂ ತೂಗಿ ನೋಡಲು ಸಾಧ್ಯವಿಲ್ಲ. ಆದುದರಿಂದ ಶತ್ರುರಾಜರ ಆನೆಯ ದಂತದ ತಕ್ಕಡಿಯಲ್ಲಿ ಪರಾಕ್ರಮದ ದೃಷ್ಟಿಯಿಂದ ನನ್ನನ್ನು ತಾನೇ ತೂಗಿ ತೋರಿಸುತ್ತೇನೆ. ವ|| ಎಂದು ತನ್ನ ಭಯವೂ ಅಪಾಯವೂ ಇಲ್ಲದ ಶೌರ್ಯವನ್ನು ಸ್ಪಷ್ಟವಾಗಿ ಪ್ರದರ್ಶಿಸಿದನು. ಬೇರೊಂದು ಸ್ಥಳದಲ್ಲಿ ವೀರಭಟನು ಔದಾರ್ಯದಿಂದ ಕೂಡಿದ ವೀರರಸದಲ್ಲಿ ಮಗ್ನನಾಗಿ ನುಡಿದನು. ೪೧. ಹತ್ತಿದ ಕುದುರೆಯೊಡನೆ ಸವಾರನನ್ನು ‘ಸಿಳ್’ ಎಂದು ಕತ್ತರಿಸುವ ಹಾಗೆ ಚೆನ್ನಾಗಿ ಹೊಡೆದು, ನೇರ ಎದುರಾಗಿ ನುಗ್ಗಿದ ಆನೆಗಳ ಕೊಂಬುಗಳನ್ನು ಅವುಗಳ ಅಣಸು ಬಿದ್ದುಹೋಗುವಂತೆ ಎದುರಿಸಿದ ಶೂರರನ್ನೂ ಒಟ್ಟಿಗೆ ಧ್ವಂಸ ಮಾಡಿ ಎರಡು ಸೈನ್ಯಗಳೂ ನನ್ನನ್ನೇ ನೋಡುವಷ್ಟು ಸಮರ್ಥವಾದ ನನ್ನ ಪರಾಕ್ರಮವನ್ನೂ ನನ್ನ ವೀರವನ್ನೂ ಯುದ್ಧದಲ್ಲಿ ನನ್ನ ಸ್ವಾಮಿಗೆ ತೋರಿಸುತ್ತೇನೆ ವ|| ಎಂದು ಅತ್ಯಂತ ರಭಸದಿಂದ ಕೂಡಿದ ತನ್ನ ಯುದ್ಧಾಸಕ್ತಿಯನ್ನು ತೋರ್ಪಡಿಸಿಕೊಂಡನು. ಮತ್ತೊಬ್ಬನು ಬಹಳ ಭಯಂಕರವಾದ ಕತ್ತಿ ಸಿದ್ಧಪಡಿಸಿಕೊಂಡು ಪರಾಕ್ರಮವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾದನು. ೪೨. ಸಿಡಿಲನ್ನು ಸಂಸಿ ಹೋರಾಡುವ ಸಿಡಿಲಿನಂತೆ ಕತ್ತಿಯಲ್ಲಿ ಕತ್ತಿಯು ಘಟ್ಟಿಸಿ ಎದುರು ಕಿಡಿಗಳನ್ನು ಚೆಲ್ಲುತ್ತಿರಲು ಅದನ್ನು ನೋಡಿ ದಿಗ್ದೇವತೆಗಳೆಲ್ಲ ಹೆದರಿ ಹಿಮ್ಮೆಟ್ಟುತ್ತಿರಲು ತೋಳಿನ ನವೆಯು ತೀರುವ ಹಾಗೆ ಒಂದೆರಡು ಕುದುರೆಯ ಮುಂಡಗಳೂ ಒಂದೆರಡಾನೆಯ ಮುಂಡಗಳೂ ಕತ್ತಿಗೆ ಸಿಕ್ಕಿ ಜೊತೆಯಲ್ಲಿ ಕುಣಿಯುವಂತೆ ಸಂತೋಷದಿಂದ ಸಂಸಿ ಕಾದದಿದ್ದರೆ ಜೋಳದ ಋಣವನ್ನು ನಾನು ಹೇಗೆ ತೀರಿಸುತ್ತೇನೆ? ವ|| ಎಂದು ತನ್ನ ತೋಳಿನ ಜಯವನ್ನು ಕ್ರಯಿಸಿ ಮಾತನಾಡಿದನು. ಅಲ್ಲಿಯೇ ಮತ್ತೊಬ್ಬನು ೪೩. ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಮತ್ತೊಂದು ಫಲ. ನನ್ನ ಉತ್ಸಾಹವೂ ಮೆಯ್ಸಿರಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಅನ್ನದ

ವ|| ಎಂದು ನುಡಿದಂ-

ಮ|| ತವೆ ಮಾಱುಂತ ಬಲಂ ಕಱುತ್ತಿಱದು ತನ್ನಾಳ್ದಂ ಕರಂ ಮೆಚ್ಚೆ ಗೆ
ಲ್ದವನಂ ಶ್ರೀವಧು ಪತ್ತುಗುಂ ಮಡಿದನಂ ದೇವಾಂಗನಾನೀಕಮು|
ತ್ಸವದಿಂದುಯ್ಗುಮದೆಂತುಮಿಂಬು ಸುಭಟಂಗಿಂತಪ್ಪುದಂ ಕಂಡುಮಂ
ಜುವನೇಕಂಜುವನೆಂದು ಪೆರ್ಚಿ ನುಡಿದಂ ಮತ್ತೊರ್ವನಾಸ್ಥಾನದೊಳ್|| ೪೪

ವ|| ಅಂತು ನುಡಿದೆರಡುಂ ಬಲಂಗಳುಂ ತಂತಮ್ಮ ವೀರಮಂ ಚಾಗಮಂ ಮೆದು ತಮ್ಮ ಕೆಯ್ದುಗಳನರ್ಚಿಸಿ ದರ್ಭಶಯನಂ ಮಾಡಿ ಪಲ್ಲಂ ಸುಲಿದು ಶಸ್ತ್ರಸಂಗ್ರಹರಾಗಿ ಪಲರುಂ ವೀರಭಟರ್ ತಮ್ಮಂ ತಾಮೆ ಪರಿಚ್ಛೇದಿಸಿರ್ದರತ್ತ ಮತ್ತಮೊರ್ವಂ ತನ್ನ ನಲ್ಲಳೊಳಿಂತೆಂದನೀ ಪೊೞ್ತೆ ಪೊೞ್ತು ನಾಳೆ ದೇವಲೋಕದ ಕನ್ಯಕೆಯರೋಲಗದೊಳಿರ್ಪೆನೆಂದು ನುಡಿಯೆ ನೀನೆಂದಂತು ಪೋಗಲ್ ತೀರದು ನಾಳೆ ಮಗುೞ್ದು ಬಂದೆನ್ನೊಳ್ ನೆರೆವೆಯೆಂದು ಪೇೞೆ ನಿನಗಱವುಂಟೆ ಎಂದು ಕೇಳೆಯೆನ್ನೋಲೆವಾಗ್ಯಮುಂಟೆಂದಳ್ ಮತ್ತಮೊಂದೊಡೆಯೊಳೊರ್ವಳ್ ದರ್ಭಶಯನಸ್ಥನಾದ ನಿಜಪ್ರಾಣೇಶ್ವರನ ಪರಿಚ್ಛೇದಮನಱದು ತನ್ನ ಸಾವಂ ಪರಿಚ್ಛೇದಿಸಿ-

ಉ|| ತಾಂ ಗಡ ನಾಳೆ ಪೋಗಿ ದಿವಿಜಾಂಗನೆಯೊಳ್ ತೊಡರ್ದಿರ್ಪನಿಲ್ಲಿ ಮಾ
ಣ್ದಾಂ ಗಡಮಿರ್ಪೆನಂತನಿತು ಬೆಳ್ಳೆನೆ ಮುನ್ನಮೆ ಪೋಗಿ ನಲ್ಮೆಗೆ
ಲ್ಲಂಗೊಳೆ ದೇವಲೋಕದೊಳಶನನಾದಿರ್ಗೊಳ್ವೆನೋವೊ ಸ
ಗ್ಗಂಗಳೊಳಿರ್ಪ ದೇವಡಿತಿ ತೊೞರೊಳೞಯನಾಗಲೀವೆನೇ|| ೪೫

ವ|| ಎಂದು ಕೈದವಮಿಲ್ಲದ ನಲ್ಮೆಯಂ ನಾಲಗೆಯ ತುದಿಗೆ ತಂದು ನುಡಿದಳ್ ಮತ್ತೊರ್ವಳ್ ತನ್ನಾಣ್ಮನ ದೋರ್ವಲದಗುರ್ವಂ ನೆಚ್ಚಿ-

ಚಂ|| ಜಲಯೊಳಾದ ಮುತ್ತುಗಳವೇಂ ಪೊಸತಾದುವೆ ನಿನ್ನ ತೋಳ ಬಾ
ಳೊಳೆ ಬಲಗರ್ವದಿಂ ತೆಗೆದುದಗ್ರ ವಿರೋ ಮದೇಭ ಮಸ್ತಕ|
ಸ್ಥಳ ಜಳರಾಶಿಯೊಳ್ ಬಳೆದ ನಿರ್ಮಳ ನಿರ್ವ್ರಣ ವೃತ್ತಮೌಕ್ತಿಕಾ
ವಳಿಯನೆ ತರ್ಪುದೆಂದು ನುಡಿದೞ್ಕಳಾಱಸಿದಳ್ ನಿಜೇಶನಂ|| ೪೬

ಋಣವನ್ನು ತೀರಿಸಿದವನೇ ನಿಜವಾಗಿ ಶೂರ. ಬೇರೆಯವನು ಶೂರನೇ ವ|| ಎಂಬುದಾಗಿ ಹೇಳಿದನು. ೪೪. ಪ್ರತಿಭಟಿಸಿದ ಸೈನ್ಯವು ಸಂಪೂರ್ಣವಾಗಿ ನಾಶವಾಗುವಂತೆ ಗುರಿಯಿಟ್ಟು ಹೊಡೆದು ತನ್ನ ಸ್ವಾಮಿಯು ವಿಶೇಷವಾಗಿ ಮೆಚ್ಚುವಂತೆ ಗೆದ್ದವನು ಅಪಾರವಾದ ಐಶ್ವರ್ಯವನ್ನು ಪಡೆಯುತ್ತಾನೆ. ದೇವಸ್ತ್ರೀಯರ ಸಮೂಹವು ಸಂತೋಷದಿಂದ ಸ್ವಾಗತಿಸುತ್ತದೆ. ಇವೆರಡೂ ಸುಭಟನಿಗೆ ಸಂತೋಷಕರವಾದುದೇ. ಹೀಗಿರುವುದನ್ನು ತಿಳಿದೂ ಹೆದರುವವನು ಏಕೆ ಹೆದರುತ್ತಾನೆ ಎಂದು ಮತ್ತೊಬ್ಬನು ಆ ರಾಜಸಭೆಯಲ್ಲಿ ಉಬ್ಬಿ ಹೇಳಿದನು. ವ|| ಹೀಗೆ ಮಾತನಾಡಿ ಎರಡು ಸೈನ್ಯದವರೂ ತಮ್ಮ ತಮ್ಮ ವೀರವನ್ನೂ ತ್ಯಾಗವನ್ನೂ ಪ್ರದರ್ಶಿಸಿ ತಮ್ಮ ಆಯುಧಗಳನ್ನು ಪೂಜಿಸಿ ದರ್ಭೆಯ ಮೇಲೆ ಮಲಗಿ, ಹಲ್ಲನ್ನು ತೊಳೆದು ಶಸ್ತ್ರಧಾರಿಗಳಾಗಿ ಅನೇಕ ವೀರಭಟರು ತಮ್ಮ ವಿಷಯವನ್ನು ತಾವೇ ನಿಶ್ಚಯಿಸಿದರು. ಆ ಕಡೆ ಮತ್ತೊಬ್ಬನು ತನ್ನ ಪ್ರಿಯಳೊಡನೆ ಹೀಗೆಂದನು. ಈ ಹೊತ್ತೇ ಹೊತ್ತು. ನಾಳೆ ದೇವಲೋಕದ ಸ್ತ್ರೀಯರಲ್ಲಿ ಸಂತೋಷದಿಂದಿರುತ್ತೇನೆ ಎಂದು ಹೇಳಿದನು. ಅವಳು ‘ನೀನು ಹೇಳಿದ ಹಾಗೆ ಹೋಗುವುದು ಸಾಧ್ಯವಿಲ್ಲ. ನಾಳೆ ಪುನ ನೀನು ಬಂದು ನನ್ನಲ್ಲಿ ಸೇರುತ್ತೀಯೆ’ ಎಂದಳು. ‘ಅದು ನಿನಗೆ ಹೇಗೆ ಗೊತ್ತು’ ಎಂದು ಪ್ರಶ್ನಿಸಿದನು. ಅವಳು ‘ನನ್ನ ಓಲೆಭಾಗ್ಯವುಂಟು’ ಎಂದಳು. ಬೇರೊಂದು ಕಡೆಯಲ್ಲಿ ಒಬ್ಬಳು ದರ್ಭೆಯ ಹಾಸಿಗೆಯಲ್ಲಿದ್ದ ತನ್ನ ಪತಿಯ ನಿಶ್ಚರ್ಯವನ್ನು ತಿಳಿದು ತನ್ನ ಸಾವನ್ನು ನಿಷ್ಕರ್ಷಿಸಿ ೪೫. ನನ್ನ ಪತಿಯು ನಾಳೆ ಹೋಗಿ ದೇವತಾಸ್ತ್ರೀಯರಲ್ಲಿ ಸೇರಿರುತ್ತಾನೆ, ಇಲ್ಲಿ ನಾನು ಮಾತ್ರ ಇರುತ್ತೇನಲ್ಲವೆ? ಅಷ್ಟು ದಡ್ಡಳೇ ನಾನು! ಮೊದಲೇ ಹೋಗಿ ನನ್ನ ಸದ್ಗುಣವು ಪ್ರಕಾಶವಾಗುವ ಹಾಗೆ ದೇವಲೋಕದಲ್ಲಿ ನನ್ನ ಪತಿಯನ್ನು ಇದಿರುಗೊಳ್ಳುತ್ತೇನೆ. ಓಹೋ ಸ್ವರ್ಗದಲ್ಲಿರುವ ದೇವಸ್ತ್ರೀಯರೆಂಬ ದಾಸಿಯರಲ್ಲಿ (ನನ್ನ ಪತಿಯು) ಪ್ರೀತಿಸುವುದಕ್ಕೆ ಅವಕಾಶ ಕೊಡುತ್ತೇನೆಯೇ?

ವ|| ಎಂದು ಕಪಟವಿಲ್ಲದ ತನ್ನ ಪ್ರೇಮವನ್ನು ನಾಲಗೆಯ ತುದಿಗೆ ತಂದು ಸ್ಪಷ್ಟವಾಗಿ ಹೇಳಿದಳು. ಮತ್ತೊಬ್ಬಳು ತನ್ನ ಒಡೆಯನ ಬಾಹುಬಲದ ಆಕ್ಯವನ್ನು ನಂಬಿ ೪೬. ಸಮುದ್ರದಲ್ಲಿ ಹುಟ್ಟಿದ ಮುತ್ತುಗಳು ಮಹತ್ತಾದುದೇನು? ನಿನ್ನ ತೋಳೆಂಬ ಕತ್ತಿಯಿಂದ ಬಲಪ್ರದರ್ಶನಮಾಡಿ ಉದ್ಧಾರ ಮಾಡಿದ ಭಯಂಕರವಾದ ಶತ್ರುರಾಜರ ಮದ್ದಾನೆಯ ಕುಂಭಸ್ಥಳವೆಂಬ ಮುತ್ತುಗಳೇ ಅನರ್ಘ್ಯವಾದುವು. ಅವು ನಿರ್ಮಲವೂ ಊನವಿಲ್ಲದುದೂ ದುಂಡಾದುದೂ ಆಗಿವೆ. ಆ ಮುತ್ತಿನ ರಾಶಿಯನ್ನೇ ತಂದುಕೊಡಬೇಕು ಎಂದು ಪ್ರೀತಿಯಿಂದ

ವ|| ಅಂತುಭಯ ಬಲಂಗಳೊಳಂ ವೀರಜನಜನಿತಾಳಾಪಂಗಳ್ ನೆಗೞೆ ವಿಕ್ರಮಾರ್ಜುನನನಂತನುಂ ತಾನುಂ ಜಲಕ್ಕನಿರೆ ಪಲ್ಲಂ ಸುಲಿದಗಣ್ಯ ಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು ಸಾಮಾನ್ಯಯಜ್ಞಂಗೆಯ್ದು ಪಲವುಂ ತೆಱದ ಪಗಳೆಸೆಯೆ ನಾಂದೀಮುಖಮಂ ನಿರ್ವರ್ತಿಸಿ ಶುಭಲಕ್ಷಣಲಕ್ಷಿತನುಂ ಸನ್ನಾಹಕರ್ಮನಿರ್ಮಿತನುಂ ಹಸ್ತಾಯುಧ ಕುಶಳನುಂ ಭದ್ರಮನನುಮಪ್ಪ ವಿಜಯಗಜಮುಮನಕ್ಷಯರಥಾಶ್ವಕೇತನ ಶರಾಸನ ಶರ ವಿಚಿತ್ರ ತನುತ್ರ ವಿವಿಧಾಸ್ತ್ರಶಸ್ತ್ರಂಗಳುಮಂ ಗಂಧ ಧೂಪ ದೀಪಾದಿಗಳಿಂದರ್ಚಿಸಿ ಪೊಡೆವಟ್ಟಾಗಳ್-

ಕಂ|| ಬೆಳಗುವ ಸೊಡರ್ಗಳ ಬೆಳಗುಮ
ನಿಳಿಸಿ ತೞತ್ತೞಸಿ ಪೊಳೆಯೆ ತಮ್ಮಯ ಬೆಳಗ|
ಗ್ಗಳಿಸಿ ತೞತೞಸಿ ವಿದ್ಯು
ದ್ವಿಳಸಿತಮನೆನಿಸಿದುವು ನರನ ದಿವ್ಯಾಸ್ತ್ರಂಗಳ್|| ೪೭

ಕಂ|| ಸೊಡರ್ಗುಡಿಯ ಕೆಂಪಿನೊಳ್ ಕೆಂ
ಪಿಡಿದಿರೆ ರಿಪುನೃಪತಿಬಲದ ಶೋಣಿತಜಳಮಂ|
ಕುಡಿಯದೆಯುಂ ದಲ್ ಮುನ್ನಮೆ
ಕುಡಿದಂತೆಸೆದಿರ್ದುವರಿಗನಸ್ತ್ರಚಯಂಗಳ್|| ೪೮

ವ|| ಅಂತಾಯಿರುಳುಂ ವಿಜಯಂ ವಿಜಯೋದ್ಯೋಗದೊಳ್ ಕಳೆಯೆ ಬೆಳಗಪ್ಪ ಜಾವದೊಳ್ ಬೀಡುವೀಡುಗಳ್ಗೆಲ್ಲಂ ತೋೞಲ್ದೇಕಿರ್ಪಿರೇೞಂ ಪಣ್ಣಿಮೆನೆ-

ಉ|| ತಂಡದೆ ಕೀಱ ಸಾಱುವ ಪಲರ್ ಪಡೆವಳ್ಳರ ಮಾತುಗಳ್ ಮನಂ
ಗೊಂಡಿರೆ ಸನ್ನಣಂದುಡುವ ಪಣ್ಣುವ ಬಾೞ್ತೆಯವಂದಿರಂ ಮರು|
ಳ್ಗೊಂಡವೊಲೂಳ್ವ ಬಗ್ಗಿಸುವ ಬೇಗದೊಳಾ ಕಟಂಕಗಳೆಯ್ದೆ ಕೆ
ಯ್ಕೊಂಡುವು ಮಂದರ ಕ್ಷುಭಿತ ದುಗ್ಧಪಯೋ ಗಭೀರನಾದಮಂ|| ೪೯

ಚಂ|| ಕೃತ ವಿವಿಧಾಸ್ತ್ರ ವೀರಭಟಕೋಟಿ ಭಯಂಕರಮಾಗೆ ಬೀಸುವಾ
ವುತಿಯ ಕಳಂಕ ಪಂಕದೊಳೆ ಪೆರ್ಚಿದ ಕೞ್ತಲೆ ತೀವ್ರ ಶಸ್ತ್ರಸಂ|
ಹತಿಗಳ ದೀಪ್ತಿಯಿಂ ಬಿಸುಗೆಯಾಗಿ ಕರಂ ಪೊಗರ್ವಟ್ಟಗುರ್ವುದು
ದ್ಭುತಮುಮನೀಯೆ ಪಣ್ಣಿದುವು ಪಾಂಡವ ಕೌರವ ರೌದ್ರಸಾಧನಂ|| ೫೦

ನುಡಿದು ತನ್ನ ಪತಿಯನ್ನು ಸಮಾಧಾನಪಡಿಸಿದಳು. ವ|| ಹಾಗೆ ಎರಡು ಸೈನ್ಯದಲ್ಲಿಯೂ ವೀರಲಾಪಗಳು ಮೊಳಗುತ್ತಿದ್ದುವು. ವಿಕ್ರಮಾರ್ಜುನನೂ ಕೃಷ್ಣನೂ ನಿರ್ಮಲವಾಗಿ ಹಲ್ಲನ್ನು ತೊಳೆದು ಅಸಂಖ್ಯಾತವಾದ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಮಂಗಳಾಭರಣಗಳನ್ನು ತೊಟ್ಟು ನಿತ್ಯಕರ್ಮಗಳನ್ನು ಮುಗಿಸಿದರು. ನಾನಾ ರೀತಿಯ ವಾದ್ಯಗಳು ಮೊಳಗುತ್ತಿರಲು ನಾಂದಿಮುಖವೆಂಬ ಪಿತೃಕಾರ್ಯವನ್ನು ಮುಗಿಸಿದರು. ಶುಭಲಕ್ಷಣಗಳಿಂದ ಕೂಡಿದುದೂ ಯುದ್ಧಕಾರ್ಯಕ್ಕೆ ಸಿದ್ಧಮಾಡಲಟ್ಟುದೂ ಕರಕೌಶಲ್ಯ ಉಳ್ಳುದೂ ಭದ್ರಜಾತಿಗೆ ಸೇರಿದುದೂ ಆದ ವಿಜಯಗಜವನ್ನೂ ನಾಶವಿಲ್ಲದ ತೇರು, ಕುದುರೆ, ಧ್ವಜ, ಬಿಲ್ಲು, ಬಾಣ, ಕವಚ, ವಿವಿಧ ಅಸ್ತ ಶಸ್ತ್ರ -ಮೊದಲಾದವುಗಳನ್ನೂ ಗಂಧ, ಧೂಪ, ದೀಪ, ಮೊದಲಾದವುಗಳಿಂದ ಪೂಜಿಸಿ ನಮಸ್ಕರಿಸಿದರು. ೪೭. ಅರ್ಜುನನ ದಿವ್ಯಾಸ್ತ್ರಗಳು ಅಲ್ಲಿ ಕಾಂತಿಯುಕ್ತವಾಗಿ ಪ್ರಕಾಶಮಾನವಾಗಿದ್ದ ದೀಪದ ಬೆಳಕನ್ನು ಕೀಳುಮಾಡಿ ಥಳಥಳನೆ ಹೊಳೆಯಲು ತಮ್ಮ ಕಾಂತಿಯು ಅತ್ಯಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಪ್ರಕಾಶಿಸಿದುವು. ೪೮. ಆತನ ಬಾಣಸಮೂಹವು ದೀಪದ ಕುಡಿಯ ಕೆಂಪುಬಣ್ಣದಿಂದ ಕೆಂಪಾಗಿ ಶತ್ರುರಾಜರ ರಕ್ತಜಲವನ್ನು ಕುಡಿಯದಿದ್ದರೂ ಅದಕ್ಕೆ ಮೊದಲೇ ಅವು ಕುಡಿದಿದ್ದಂತೆ ಶೋಭಾಯಮಾನವಾಗಿದ್ದುವು. ವ|| ಹಾಗೆ ಈ ರಾತ್ರಿಯನ್ನು ಅರ್ಜುನನು ಯುದ್ಧೋದ್ಯೋಗದಲ್ಲಿಯೇ ಕಳೆದು ಬೆಳಗಿನ ಜಾವದಲ್ಲಿ ಬೀಡು ಬೀಡುಗಳಲ್ಲೆಲ್ಲ ಅಲೆದು ‘ಏಕೆ ಸುಮ್ಮನಿದ್ದೀರಿ ಎದ್ದು ಸಿದ್ಧರಾಗಿ’ ಎಂದನು. ೪೯. ಗುಂಪುಗುಂಪಾಗಿ ಕೋಪಿಸಿಕೊಂಡು ಸಾರಿ ಹೇಳುತ್ತಿರುವ ಅನೇಕ ಸೇನಾನಾಯಕರ ಮಾತುಗಳು ಮನಸ್ಸನ್ನು ಸೆಳೆಯುತ್ತಿರಲು, ಕಡಿವಾಣವನ್ನು ತೊಡಿಸುವ, ಯುದ್ಧಕ್ಕೆ ಅಣಿಮಾಡುತ್ತಿರುವ, ಕೆಲಸದಲ್ಲಿರುವವರನ್ನು ಹುಚ್ಚು ಹಿಡಿದವರ ಹಾಗೆ ಹೆದರಿಸುತ್ತಿರುವ ಆ ಸೈನ್ಯವು ವೇಗದಲ್ಲಿ ಮಂದರಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಗಭೀರನಾದವನ್ನು ಅಂಗೀಕಾರಮಾಡಿತು. ೫೦. ನಾನಾವಿಧವಾದ ಅಸ್ತ್ರಶಸ್ತ್ರಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವ ವೀರಭಟರ ಸಮೂಹವು ಭಯವಾಗುವ ಹಾಗೆ ಬೀಸುತ್ತಿರುವ ಆವುತಿಯೆಂಬ ಆಯುಧದ ಕರೆಯೆಂಬ ಕೆಸರಿನಲ್ಲಿಯೇ ಹೆಚ್ಚಾದ ಕತ್ತಲೆಯು ಹರಿತವಾದ ಶಸ್ತ್ರ ಸಮೂಹಗಳ ಕಾಂತಿಯೊಡನೆ ಚೆನ್ನಾಗಿ ಬೆಸೆದುಕೊಂಡು ಕಾಂತಿಯುಕ್ತವಾಗಿ ಭಯವನ್ನೂ ಆಶ್ಚರ್ಯವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿರಲು

ವ|| ಅಂತೆರಡುಂ ಪಡೆಗಳುಂ ಪಣ್ಣಪಣ್ಣನೆ ಪಣ್ಣಿ ಕಾಳೆಗಕ್ಕೆ ನಡೆಯಲೊಡರಿಸಿದಾಗಳ್-

ಕಂ|| ಲೋಕೈಕಚಕ್ಷು ನವ ಕಮ
ಲಾಕರ ಬಾಂಧವನನೇಕ ದಿತಿಸುತ ಸಮರಾ|
ನೀಕ ಭಯಂಕರನೆರಡುಮ
ನೀಕಂಗಳನಡರೆ ನೋಡುವಂತುದಯಿಸಿದಂ|| ೫೧

ವ|| ಆಗಳೇಱಸಿದ ಬಿಸುಗೆಗಳುಮಿಕ್ಕಿದ ಲೋಹವಕ್ಕರೆಗಳುಮುರ್ಚಿದ ಮೊಗವಡಂಗಳುಂ ಕಟ್ಟಿದ ಪೞಯಿಗೆಗಳುಮೊಟ್ಟಿದ ಮೂವತ್ತೆರಡಾಯುಧಂಗಳುಂ ಬೆರಸೆಱಂಕೆವೆರಸಿದ ಕುಲಗಿರಿಗಳೆ ತಳರ್ವಂತೆ ತಳರ್ವ ಮದಾಂಧಗಂಧಸಿಂಧುರಂಗಳುಮಂ ಚಕ್ರಚೀತ್ಕೃತ ನಾದದೊಳ್ ದಿಕ್ಚಕ್ರಮುಮಂ ಚಕ್ರಘಾತದೊಳ್ ಧರಾಚಕ್ರಮನಾಕ್ರಮಿಸಿ ನಿಶಾತಹೇತಿಗರ್ಭಂಗಳುಮನೇಕ ಪ್ರಕಾರ ಕೇತನ ವಾಜಿರಾಜಿಗಳುಮಾಗಿ ದೊಮ್ಮಳಿಸಿ ನಡೆವ ರಥಂಗಳುಮಂ ಕಣ್ಣುಂ ಖುರಮುಂ ತೋ ಪಕ್ಕರೆಯಿಕ್ಕಿ ಪೊಳೆವ ಪೊನ್ನ ಪರ್ಯಾಣಂಗಳುಮೆಸೆಯೆ ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ ಮಿಡುಮಿಡುಕನೆ ಮಿಡುಕುವ ಸಿಡಿಲೇೞ್ಗೆಯುಮಂ ಕೋಳ್ಮಸಗಿದ ಪುಲಿಯ ಪಿಂಡುಗಳುಮನನುಕರಿಸಿ ನಡೆವಣಿಯ ಸಂದಣಿಯುಮಂ ಕಾೞ್ತುಱು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷ್ಮರ ಪೇೞ್ದೋಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೊಡ್ಡಿ ನಿಂದಾಗಳ್-

ಚಂ|| ಜಲಶಯನೋದರಾಂತರದಿನೀ ತ್ರಿಜಗಂ ಪೊಱಮಟ್ಟುದೀಗಳೆಂ
ಬುಲಿ ಸಲೆ ತಮ್ಮ ತಮ್ಮ ಶಿಬಿರಂಗಳಿನುಗ್ರ ಚತುರ್ಬಲಂಗಳಂ|
ಪಲವುಮನೊಂದೆ ಮಾಡಿ ದೆಸೆಗಳ್ ಮಸುಳಲ್ ನಡೆತಂದರಾಜಿಗಿ
ರ್ವಲದಲರಾತಿನಾಯಕರುಮೊರ್ಬರನೊರ್ಬರೆ ಗೆಲ್ವ ತಕ್ಕಿನೊಳ್|| ೫೨

ವ|| ಆಗಳ್ ಕೌರವಬಲದ ಸೇನಾನಾಯಕಂ ಗಾಂಗೇಯನಡ್ಡಮಾಗೆ ತನ್ನೊಡ್ಡಿದ ಮಕರವ್ಯೂಹದ ಮೊನೆಯೊಳ್ ಸುತ್ತಿಱದೆತ್ತಿದ ಪೊನ್ನ ತೊಳಪ ಪೞಯಿಗೆಗಳುಂ ಮೆವ ಬೆಳ್ಳಿಯ ರಥಮುಮಾ ರಥದೊಳೊಡಂಬಡೆ ಪೂಡಿದ ಕುದುರೆಗಳುಂ ಜೋಲ್ದ ಪುರ್ವನೆತ್ತಿ ಕಟ್ಟಿದ ಲಲಾಟಪಟ್ಟದೊಳಿಟ್ಟಳಮೊಪ್ಪುವ ಬೀರವಟ್ಟಮುಮಸದಳಮೆಸೆಯೆ ದಿವ್ಯಕವಚಮಂ ತೊಟ್ಟು ಪರಶುರಾಮಂ ಬಾೞ್ಗೆಂದು ಪ್ರಚಂಡ ಕೋದಂಡಮಂ ಕೊಂಡು ಪಾಂಡವಬಲಮಂ ಮಾರ್ಕೊಂಡು ನಿಂದಾಗಳ್ ಶ್ವೇತನುಮಾ ವ್ಯೂಹಕ್ಕೆ ಪ್ರತಿವ್ಯೂಹಮಾಗಿ ಸೂಚೀವ್ಯೂಹಮನೊಡ್ಡಿ ಕನಕಕವಚಾಲಂಕೃತ ಶರೀರನುಮಾರೂಢ ಸಮರ ರಸನುಮುಪಾರೂಢ ಕನಕರಥನುಮಾಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗದಿರದಿದಿರ್ಚಿ ನಿಂದಾಗಳ್-

ಪಾಂಡವ ಕೌರವರ ಭಯಂಕರವಾದ ಸೈನ್ಯಗಳು ಯುದ್ಧಕ್ಕೆ ಸಿದ್ಧವಾದುವು. ವ|| ಹಾಗೆ ಎರಡು ಸೈನ್ಯಗಳೂ ಮೆಲ್ಲಮೆಲ್ಲನೆ ಯುದ್ಧಸನ್ನದ್ಧವಾಗಿ ಯುದ್ಧಕ್ಕೆ ಹೊರಡಲು ಪ್ರಾರಂಭಿಸಿದಾಗ ಸೂರ್ಯೋದಯವಾಯಿತು. ೫೧. ಲೋಕಚಕ್ಷುಸ್ಸೂ, ಕಮಲಬಾಂಧವನೂ ಭಯಂಕರನೂ ಆದ ಸೂರ್ಯನು ಎರಡು ಸೈನ್ಯಗಳನ್ನು ಮೇಲಿಂದ ನೋಡುವಂತೆ ಉದಯಿಸಿದನು. ವ|| ಆಗ ಎತ್ತಿ ಕಟ್ಟಿದ ಅಂಬಾರಿಗಳು, ಹಾಕಿರುವ ಲೋಹದ ಪಕ್ಷರಕ್ಷೆಗಳು, ಬಿಚ್ಚಿರುವ ಮೊಗವಾಡಗಳು, ಕಟ್ಟಿದ ಧ್ವಜಗಳು ರಾಶಿಮಾಡಿರುವ ಮೂವತ್ತೆರಡಾಯುಧಗಳು ಇವುಗಳಿಂದ ಕೂಡಿ ರೆಕ್ಕೆಗಳಿಂದ ಕೂಡಿದ ಕುಲಪರ್ವತಗಳೇ ನಡೆಯುವಂತೆ ಮದಾಂಧವಾದ ಆನೆಗಳು ನಡೆದುವು. ಚಕ್ರದ ಚೀತ್ಕಾರ ಶಬ್ದದಿಂದ ದಿಕ್ಕುಗಳ ಸಮೂಹವನ್ನೂ, ಚಕ್ರಗಳ ಹೊಡೆತದಿಂದ ಭೂಮಂಡಲವನ್ನೂ ಆಕ್ರಮಿಸಿ ಹರಿತವಾದ ಆಯುಧಗಳನ್ನೊಳಗೊಂಡು ನಾನಾ ರೀತಿಯ ಬಾವುಟ ಮತ್ತು ಕುದುರೆಗಳ ಸಮೂಹಗಳನ್ನುಳ್ಳುದಾಗಿ ಸಡಗರದಿಂದ ತೇರುಗಳು ನಡೆದುವು. ಕಣ್ಣು ಗೊರಸುಗಳನ್ನುಳಿದು ಪಾರ್ಶ್ವಕ್ಕೆ ಹಾಕಿದ ಗುಳದಿಂದಲೂ ಹೊಳೆಯುತ್ತಿರುವ ಚಿನ್ನದ ಜೀನುಗಳಿಂದಲೂ ಅಲಂಕರಿಸಲ್ಪಟ್ಟ ಬಿಸಿಲ್ಗುದುರೆಗಳ ಹಾಗೆ ಹೊಳೆಯುತ್ತಿರುವ ವೇಗಶಾಲಿಗಳಾದ ಕುದುರೆಗಳು ಮುಂದುವರಿದುವು. ವಿಶೇಷವಾಗಿ ಪ್ರಕಾಶಿಸುತ್ತಿರುವ ಸಿಡಿಲಿನ ವೈಭವವನ್ನೂ ಕೋಪಗೊಂಡ ಹುಲಿಗಳ ಹಿಂಡನ್ನೂ ಅನುಕರಿಸುತ್ತಿರುವ ಕಾಲಾಳುಗಳ ಸಮೂಹ ಮುಂದೆ ನಡೆಯಿತು. ಕಾಡ ಹಸು ರೇಗಿದ ಹಾಗೆ ರೇಗಿರುವ ಧರಿಸಲಸಾಧ್ಯವಾದ ಬಿಲ್ಲಾಳಿನ ಸೈನ್ಯವೂ ಮುನ್ನುಗ್ಗಿತು. ಎರಡು ಸೈನ್ಯವೂ ಶ್ವೇತ ಮತ್ತು ಭೀಷ್ಮರು ಆಜ್ಞೆ ಮಾಡಿದ ರೀತಿಯಲ್ಲಿ ನಡೆದು ಕುರುಕ್ಷೇತ್ರದ ರಣರಂಗದಲ್ಲಿ ಸೇರಿರಲು ಅವು ಚಿತ್ರದಲ್ಲಿ ಬರೆದ ಹಾಗೆ ಕಂಡವು. ೫೨. ವಿಷ್ಣುವಿನ ಗರ್ಭದಿಂದ ಈಗ ಮೂರುಲೋಕಗಳೂ ಹೊರಹೊರಟವು ಎಂಬ ಮಾತು ಸಲ್ಲುತ್ತಿರಲು ದಿಕ್ಕುಗಳು ಕಾಂತಿಹೀನವಾಗುತ್ತಿರಲು ಎರಡು ಸೈನ್ಯದ ಶತ್ರುನಾಯಕರೂ ಒಬ್ಬರನ್ನೊಬ್ಬರು ಗೆಲ್ಲುವ ಸಾಮರ್ಥ್ಯದಿಂದ ಯುದ್ಧಕ್ಕೆ ನಡೆದು ಬಂದರು. ವ|| ಆಗ ಕೌರವ ಸೈನ್ಯದ ನಾಯಕನಾದ ಭೀಷ್ಮನು ತಾನು ಅಡ್ಡಲಾಗಿ ಮೊಸಳೆಯ ಆಕಾರದ ಸೈನ್ಯರಚನೆಯನ್ನು ಒಡ್ಡಿದನು. ಅದರ ಮುಂಭಾಗದಲ್ಲಿ ಸುತ್ತಲೂ ಎತ್ತಿ ಕಟ್ಟಿರುವ ಪ್ರಕಾಶಮಾನವಾದ ಚಿನ್ನದ ಬಾವುಟಗಳೂ ಶೋಭಾಯಮಾನವಾಗಿರುವ ಬೆಳ್ಳಿಯ ತೇರು, ಆ ರಥಕ್ಕೆ ಹೊಂದಿಕೊಳ್ಳುವ ಹಾಗೆ

ಕಂ|| ಶ್ವೇತನ ಗಂಗಾಜಾತನ
ಮಾತನೆ ಪಾರ್ದೆರಡುಮೊಡ್ಡಣಂ ಕಾದಲ್ಕೆಂ|
ದೀ ತೆಱದಿನೊಡ್ಡಿ ನಿಂದುವು
ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ|| ೫೩

ವ|| ಆಗಳ್ ಧರ್ಮಪುತ್ರಂ ಪುರುಷೋತ್ತಮನ ಮೊಗಮಂ ನೋಡಿ ಕೌರವ ಬಲದೊಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರ ಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿ-

ಕಂ|| ಕೆಂಬಣ್ಮದ ಕುದುರೆಗಳೊಳೊ
ಡಂಬಡೆ ನಿಜರಜತರಥಮಗುರ್ವುರ್ವರೆಯಂ|
ತಿಂಬೆ ಕಶಳಧ್ವಜಂ ಮಿಳಿ
ರ್ದಂಬರಮಂ ಬಳಸೆ ನಿಂದನಾತಂ ದ್ರೋಣಂ|| ೫೪

ಆತನ ಸಾರೆ ಕಮಂಡಲು
ಕೇತನಮಂಬರಮನಡರೆ ಚತುರಂಗ ಬಲೋ|
ಪೇತನತಿ ಧವಳ ರಥನಭಿ
ಜಾತಂ ಕ್ಷತ್ರಿಯರನುಱದ ಕಲಿ ಕೃಪನಾತಂ|| ೫೫

ವ|| ಮತ್ತಿತ್ತ ಗಾಂಗೇಯನ ದಕ್ಷಿಣೋಪಾಂತದೊಳ್ ಕರ್ಗನೆ ಕರ್ಗಿದ ಸಮದ ಗಜಘಟಾಟೋಪದ ನಡುವೆ-

ಕಂ|| ಸರದದ ಮುಗಿಲನೆ ಬಿಡದನು
ಕರಿಸುವ ಧವಳಾಶ್ವದಿಂದಮೆಸೆದೊಪ್ಪುವ ಲೋ|
ಹ ರಥಮದು ಪುಲಿಯ ಪೞಯಿಗೆ
ವೆರಸು ತೞತ್ತೞಸೆ ನಿಂದನಾತಂ ಶಲ್ಯಂ|| ೫೬

ವ|| ಮತ್ತಿತ್ತ ಗಂಗಾಸುತನ ವಾಮಭಾಗದೊಳಂಬರಭಾಗಮಂ ಕಟ್ಟಿ ಮೆಡಱದಂತಾಗಿ ತನ್ನ ರಥದೊಳೊಟ್ಟಿದ ಕೆಯ್ದುಗಳ ಬೆಳಗೆ ಬೆಳಗಾಗೆ-

ಹೂಡಿರುವ ಕುದುರೆಗಳು ಸಿದ್ಧವಾಗಿದ್ದುವು. ಜೋತು ಹೋಗಿರುವ ಹುಬ್ಬನ್ನು ಎತ್ತಿ ಕಟ್ಟಿರುವ ಹಣೆಯಲ್ಲಿ ಸೊಗಸಾಗಿ ಪ್ರಕಾಶಿಸುತ್ತಿರುವ ವೀರಪಟ್ಟವು ಅತಿಶಯವಾಗಿ ಮೆರೆಯುತ್ತಿರಲು ದಿವ್ಯವಾದ ಕವಚವನ್ನು ತೊಟ್ಟು ‘ಪರಶುರಾಮನು ಬಾಳಲಿ’ ಎಂದು ತನ್ನ ಆಚಾರ್ಯವನ್ನು ನೆನೆದನು. ಭಯಂಕರವಾದ ಬಿಲ್ಲನ್ನು ಹಿಡಿದು ಪಾಂಡವಸೈನ್ಯವನ್ನು ಪ್ರತಿಭಟಿಸಿ ನಿಂತನು. ಈ ಕಡೆ ಶ್ವೇತನೂ ಆ ಮಕರವ್ಯೂಹಕ್ಕೆ ಪ್ರತಿಯಾಗಿ ಸೂಜಿಯ ಆಕಾರದ ಸೇನಾರಚನೆಯನ್ನು ಒಡ್ಡಿದನು. ಚಿನ್ನದ ಕವಚದಿಂದ ಅಲಂಕೃತವಾದ ಶರೀರವುಳ್ಳವನೂ ಯುದ್ಧೋತ್ಸಾಹದಿಂದ ಕೂಡಿದವನೂ ಆಗಿ ಕೈಲಾಸವಾಸಿಯಾದ ಈಶ್ವರನಿಗೆ ನಮಸ್ಕರಿಸಿ ಬಿಲ್ಲನ್ನು ಹಿಡಿದು ಭೀಷ್ಮನಿಗೆ ಹೆದರದೆ ಎದುರಿಸಿ ನಿಂತನು. ೫೩. ಶ್ವೇತ ಮತ್ತು ಭೀಷ್ಮರ ಆಜ್ಞೆಯನ್ನೇ ನಿರೀಕ್ಷಿಸುತ್ತ ಎರಡು ಸೈನ್ಯವೂ ಯುದ್ಧ ಮಾಡುವುದಕ್ಕಾಗಿ ಈ ರೀತಿಯಲ್ಲಿ ನಿಂತಿರಲು ಕೆಸರಿನ ಮೇಲೆ ಹರಡಿದ ಕಡಿತದಂತೆ ನೆಲವು ನಡುಗುತ್ತಿತ್ತು. ವ|| ಆಗ ಧರ್ಮರಾಜನು ಕೃಷ್ಣನ ಮುಖವನ್ನು ನೋಡಿ ಕೌರವ ಸೇನಾವ್ಯೂಹದ ಒಡೆಯರಾದವರಿವರಾರು ಎಂದು ಪ್ರಶ್ನಿಸಿದನು. ಮಕರವ್ಯೂಹದ ತಲೆಯ ಪ್ರದೇಶದಲ್ಲಿ (ಮುಂಭಾಗದಲ್ಲಿ) ಯುದ್ಧ ಸನ್ನದ್ಧನಾಗಿ. ೫೪. ತನ್ನ ಬೆಳ್ಳಿಯ ತೇರು ಕೆಂಪು ಬಣ್ಣದ ಕುದುರೆಗಳಿಂದ ಒಪ್ಪಿರಲು ಭಯಂಕರನಾದ ಕಳಶ ಚಿಹ್ನೆಯುಳ್ಳ ಬಾವುಟವು ಚಲಿಸುತ್ತ ಆಕಾಶವನ್ನು ಬಳಸಿರುವಂತೆ ನಿಂತಿರುವವನು ದ್ರೋಣಾಚಾರ್ಯ ೫೫. ಅವನ ಪಕ್ಕದಲ್ಲಿಯೇ ಕಮಂಡಲು ಗುರುತಿನ ಬಾವುಟವು ಆಕಾಶವನ್ನು ವ್ಯಾಪಿಸಿರಲು ಚತುರಂಗಸೈನ್ಯದಿಂದ ಕೂಡಿರುವವನೂ ಅತ್ಯಂತ ಬಿಳುಪಾದ ತೇರನ್ನುಳ್ಳವನೂ ಒಳ್ಳೆಯ ಕುಲದಲ್ಲಿ ಹುಟ್ಟಿದವನೂ ಕ್ಷತ್ರಿಯರನ್ನು ಲಕ್ಷ್ಯಮಾಡದವನೂ ಶೂರನೂ ಆದವನು ಕೃಪಾಚಾರ್ಯ. ವ|| ಮತ್ತು ಈ ಕಡೆ ಭೀಷ್ಮನ ಬಲಗಡೆಯ ಪಕ್ಕದಲ್ಲಿ ಬಹಳ ಕಪ್ಪಾದ ಮದ್ದಾನೆಗಳ ಸಮೂಹದ ಆರ್ಭಟದ ನಡುವೆ ೫೬. ಶರತ್ಕಾಲದ ಮೋಡವನ್ನೇ ಅನುಕರಿಸುತ್ತಿರುವ ಬಿಳಿಯ ಕುದುರೆಗಳಿಂದ ಪ್ರಕಾಶಿಸುತ್ತಿರುವ ಆ ಲೋಹ ರಥದಲ್ಲಿ ಹುಲಿಯ ಬಾವುಟದಿಂದ ಕೂಡಿ ಥಳಥಳಿಸುತ್ತ ನಿಂತಿರುವವನು ಶಲ್ಯ, ವ|| ಮತ್ತು ಈ ಕಡೆ ಭೀಷ್ಮನ ಎಡಪಾರ್ಶ್ವದಲ್ಲಿ ಆಕಾಶ ಭಾಗವನ್ನು ತಡಿಕೆಯಿಂದ ಹೆಣೆದ ಹಾಗೆ ಮಾಡಿ

ಕಂ|| ಕ ಕೊರಲೊಳ್ ಕಣ್ಣೊಸಲೊಳ್
ಪೆ ಮಕುಟದೊಳುಗ್ರಧನು ಕರಾಗ್ರದೊಳಿರೆಯ|
ಳ್ಳಿಱಯೆ ಹರಿಕೇತು ನಭದೊಳ್
ಮಿಱುಗುವ ಚೆಂಬೊನ್ನ ರಥದನಶ್ವತ್ಥಾಮಂ|| ೫೭

ವ|| ಆ ರುದ್ರಾವತಾರನ ಕೆಲದೊಳ್ ಕಿಕ್ಕಿಱಗಿಱದ ತೞೆದುಱುಗಲ ನಡುವೆ ಪೊನ್ನ ರಥಮನೇಱ ನಿಂದಂ ಭೂರಿಶ್ರವನಾತನ ಕೆಲದೊಳ್ ಬಾಳಬಟ್ಟಂ ತೂಂತಿಟ್ಟಂತೆ ಸಂದಣಿಸಿ ನಿಂದ ಗೋಪಕುಮಾರರಣಿಯ ನಡುವೆ ಪೊನ್ನ ರಥಮನೇಱ ನಿಂದಾತನೆನ್ನ ತಮ್ಮಂ ಕೃತವರ್ಮನಾತನ ಕೆಲದೊಳೊಂದಕ್ಷೋಹಿಣೀ ಬಲಂಬೆರಸು ಸುತ್ತಿಱದು ಕನಕ ದಂಡ ಮಂಡಿತ ವಿಚಿತ್ರಾತಪತ್ರಂಗಳ ನಡುವೆ ಮಣಿಮಕುಟ ಮರೀಚಿಗಳ್ ಪೊಳೆಯೆ ನಾನಾ ವಾಹನಂಗಳನೇಱ ನಿಂದರ್ ಜಯತ್ಸೇನ ಕಾಂಭೋಜ ಸುದಕ್ಷಿಣ ದಂಡಧಾರ ಶತದಂಡಧರರವರ ಕೆಲದೊಳ್ ನೀಳ ಶ್ರುತಾಯುಧ ನಿಯುತಾಯುಧಾಚ್ಯುತಾಯುಧರೆಂಬರವರ ಕೆಲದೊಳ್ ನಿಲೆ ಬಲದ ಸೆಕೋಲೊಳೊಂದ ಕ್ಷೋಹಿಣೀಬಲಂಬೆರಸುಮಯ್ವತ್ತುಸಾಸಿರ ಮದದಾನೆವೆರಸು ನಿಂದಂ ಸುಯೋಧನನಣುಗ ಮಯ್ದುನುಂ ಸಿಂಧು ದೇಶಾಶ್ವರಂ ಜಯದ್ರಥನಾತನ ಕೆಲದೊಳ್ ಮಕರಮಸ್ತಕಭೂಮಿಯೊಳ್ ಕರಟತಟಗಳಿತ ಮದಜಳಧಾರಾಪೂರ ಪರಿಪ್ಲಾವಿತ ಸಕಳ ಭೂತಳಮಪ್ಪ ನಾಲ್ಕು ಲಕ್ಕ ಭದ್ರಹಸ್ತಿಯುಮನೊಂದು ಮಾಡಿ ಘಟೆಯ ಮೊನೆಯೊಳ್ ದಿಗ್ಗಜೇಂದ್ರಮೆನಿಸಿದ ಸುಪ್ರತೀಕ ಗಜೇಂದ್ರಮನೇಱ ನಿಂದಾತನಿಂದ್ರನ ಕೆಳೆಯಂ ಭಗದತ್ತನಾತನ ಕೆಲದೊಳೊಂದು ಲಕ್ಕ ಕುದುರೆಯುಮಱುವತ್ತು ಸಾಸಿರ ರಥಮುಮೊಂದ ಕ್ಷೋಹಿಣಿಯ ಕಾಲಾಳ್ವೆರಸು ನಿಂದರ್ ಸೋಮದತ್ತ ಬಾಹ್ಲೀಕರವರ ಕೆಲದೊಳ್ ದೇವೇಂದ್ರಂಗೆ ಪಗೆವರಾಗಿ ವಿಕ್ರಮಾರ್ಜುನನ ಕೆಯ್ಯೊಳ್ ಸತ್ತ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರ್ ವೃದ್ಧ ವೈರಮಂ ನೆರೆದು ತ್ರಿಗರ್ತಾಶ ಸುಶರ್ಮ ಪ್ರಭೃತಿಗಳುಂ ಸಂಸಪ್ತಕುರಮಾಗಿ ಪುಟ್ಟಿ ಮೂರು ಕೋಟಿಯುಮಱುವತ್ತು ಸಾಸಿರ ದೈತ್ಯಪ್ರಧಾನನಾಯಕರುಮರ್ಜುನನೊಳ್ ಕಾದುವ ಬೆಸನಂ ದುರ್ಯೋಧನನೊಳ್ ಬೇಡಿ ಪಡೆದು ಪದಿನೆಂಟು ಕೋಟಿ ರಥಂಬೆರಸು ಬೇಡ್ಡಿ ನಿಂದರ್ ಮತ್ತಿತ್ತ ಚತುರಂಗಬಳಜಳನಿಯ ನಡುವೆ ಕಳಿಂಗರಾಜ ವಂಗ ಕೊಂಗ ದೇಶಾಶ್ವರ ರೆಣ್ಬತ್ತುಸಾಸಿರ ಗಜಘಟೆಗಳುಂ ಮೂಱುಲಕ್ಕ ರಥಮುಮಱವತ್ತು ಕೋಟಿ ಪದಾತಿಯುಂ ಬೆರಸು ನಿಂದರ್ ಮತ್ತಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರನ ಮಕ್ಕಳಳಂಭೂಷ ಹಲಾಯುಧ ಮುಸಲಾಯುಧ ಕಾಳ ನೀಳ ಪ್ರಮುಖ ರೂಕ್ಷರಾಕ್ಷಸ ಬಲಂಬೆರಸು ಸುತ್ತಿಱದು ಬಳಸಿಯುಮಿರೆ ದುಶ್ಶಾಸನಂ ಮೊದಲಾಗೆ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮಱುವತ್ತು ಸಾಸಿರ ರಥಮುಂ ಪದಿನೆಂಟು ಸಾಸಿರ

ತನ್ನ ರಥದಲ್ಲಿ ರಾಶಿ ಹಾಕಿದ ಆಯುಧಗಳ ಬೆಳಕೇ ಬೆಳಕಾಗಿರಲು ೫೭. ಕತ್ತಿನಲ್ಲಿ ಕರಿಯ ಮಚ್ಚೆ ಹಣೆಯಲ್ಲಿ ಕಣ್ಣು ಕಿರೀಟದ ತುದಿಯಲ್ಲಿ ಚಂದ್ರ ಕೈಯಲ್ಲಿ ಉಗ್ರವಾದ ಬಿಲ್ಲು ಇವುಗಳಿಂದ ಕೂಡಿ ಆಕಾಶದಲ್ಲಿ ಸಿಂಹಧ್ವಜವು ಮಿಡುಕುತ್ತಿರುವ ಪ್ರಕಾಶವಾದ ಹೊಂಬಣ್ಣದ ತೇರಿನಲ್ಲಿರುವವನು ಅಶ್ವತ್ಥಾಮ. ವ|| ಆ ರುದ್ರಾವತಾರನ ಪಕ್ಕದಲ್ಲಿ ಒಟ್ಟಾಗಿ ಸೇರಿಕೊಂಡಿರುವ ಛತ್ರಿಗಳ ಸಮೂಹದ ಮಧ್ಯದಲ್ಲಿ ಚಿನ್ನದ ರಥವನ್ನು ಹತ್ತಿ ನಿಂತಿರುವವನು ಭೂರಿಶ್ರವ; ಆತನ ಪಕ್ಕದಲ್ಲಿ ಆಕಾಶ ಪ್ರದೇಶವನ್ನು ತೂತುಮಾಡಿದ ಹಾಗೆ ಗುಂಪುಕೂಡಿಸಿ ನಿಂತಿರುವ ಗೋಪಕುಮಾರರ ಸೈನ್ಯದ ನಡುವೆ ಚಿನ್ನದ ತೇರನ್ನು ಹತ್ತಿ ನಿಂತಿರುವವನು ನನ್ನ ತಮ್ಮನಾದ ಕೃತವರ್ಮ, ಆತನ ಪಕ್ಕದಲ್ಲಿ ಒಂದಕ್ಷೋಹಿಣೀ ಸೈನ್ಯದಿಂದ ಕೂಡಿ ಸುತ್ತಲೂ ವ್ಯಾಪಿಸಿ ಚಿನ್ನದ ದಂಡಿಗೆಯಿಂದಲಂಕೃತವಾದ ಚಿತ್ರಖಚಿತವಾದ ಛತ್ರಿಗಳ ನಡುವೆ ರತ್ನಖಚಿತವಾದ ಕಿರೀಟವು ಹೊಳೆಯುವ ಹಾಗೆ ಅನೇಕ ವಿಧವಾದ ವಾಹನಗಳನ್ನು ಹತ್ತಿ ನಿಂತಿರುವವರು ಜಯತ್ಸೇನ, ಕಾಂಭೋಜ, ಸುದಕ್ಷಿಣ, ದಂಡಧಾರ, ಶತದಂಡಧರರು. ಅವರ ಪಕ್ಕದಲ್ಲಿ ಬಲದಂಚಿನಲ್ಲಿ ಒಂದಕ್ಷೋಹಿಣೀ ಸೈನ್ಯದಿಂದಲೂ ಐಯ್ವತ್ತು ಸಾವಿರ ಮದ್ದಾನೆಯಿಂದಲೂ ಕೂಡಿ ನಿಂತಿರುವವನು ದುರ್ಯೋಧನ ಪ್ರೀತಿಯ ಮೈದುನನೂ ಸಿಂಧುದೇಶಾಶ್ವರನೂ ಆದ ಜಯದ್ರಥ. ಆತನ ಪಕ್ಕದಲ್ಲಿ ಮಕರವ್ಯೂಹದ ಮುಂಭಾಗದಲ್ಲಿ ಕಪೋಲಪ್ರದೇಶದಿಂದ ಧಾರಾಕಾರವಾಗಿ ಹರಿಯುತ್ತಿರುವ ಮದೋದಕದಿಂದ ತೊಳೆಯಲ್ಪಟ್ಟ ಭೂಮಿಯನ್ನುಳ್ಳ ನಾಲ್ಕು ಲಕ್ಷ ಭದ್ರಜಾತಿಯ ಆನೆಗಳನ್ನು ಒಟ್ಟುಗೂಡಿಸಿಕೊಂಡು ಅವುಗಳ ಮುಂಭಾಗದಲ್ಲಿ ದಿಗ್ಗಜವೆಂದು ಪ್ರಸಿದ್ಧಿಗೊಂಡಿರುವ ಸುಪ್ರತೀಕವೆಂಬ ಆನೆಯನ್ನು ಹತ್ತಿ ನಿಂತಿರುವವನು ಇಂದ್ರನ ಸ್ನೇಹಿತನಾದ ಭಗದತ್ತ. ಆತನ ಪಕ್ಕದಲ್ಲಿ ಒಂದು ಲಕ್ಷ ಕುದುರೆಯನ್ನು ಅರವತ್ತು ಸಾವಿರ ರಥವನ್ನು ಒಂದು ಲಕ್ಷ ಕಾಲಾಳನ್ನು ಕೂಡಿಕೊಂಡು ನಿಂತವರು ಸೋಮದತ್ತ ಬಾಹ್ಲಿಕರು. ಅವರ ಪಕ್ಕದಲ್ಲಿ ದೇವೇಂದ್ರನಿಗೆ ಶತ್ರುಗಳಾಗಿ ವಿಕ್ರಮಾರ್ಜುನನ ಕಯ್ಯಲ್ಲಿ ಸತ್ತ ನಿವಾತಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರು ಹಳೆಯ ಶತ್ರುತ್ವವನ್ನು ನೆನೆಸಿಕೊಂಡು ಈಗ ತ್ರಿಗರ್ತಾಶ, ಸುಶರ್ಮರೇ ಮೊದಲಾದವರಾಗಿಯೂ ಸಂಸಪ್ತಕರಾಗಿಯೂ ಹುಟ್ಟಿ ಬಂದಿರುವ ಮೂರುಕೋಟಿ ಅರವತ್ತು ಸಾವಿರ ರಾಕ್ಷಸಮುಖ್ಯರಾದ ನಾಯಕರು ಅರ್ಜುನನೊಡನೆ ಯುದ್ಧ ಮಾಡುವ ಕಾರ್ಯವನ್ನು ದುರ್ಯೋಧನನಲ್ಲಿ ಬೇಡಿ ಪಡೆದು ಹದಿನೆಂಟು ಕೋಟಿ ರಥದಿಂದ ಕೂಡಿ ಪ್ರತ್ಯೇಕವಾಗಿ ಸನ್ನದ್ಧರಾಗಿ ನಿಂತಿದ್ದಾರೆ. ಅಲ್ಲದೆ ಈ ಕಡೆ ಚತುರಂಗ ಸೇನಾಸಮುದ್ರದ ಮಧ್ಯದಲ್ಲಿ ಕಳಿಂಗ ಕೊಂಗ ವಂಗಾಶರು ಎಂಬತ್ತು ಸಾವಿರ ಆನೆಯ ಗುಂಪುಗಳನ್ನೂ ಮೂರುಲಕ್ಷ ರಥವನ್ನೂ ಅರವತ್ತು ಕೋಟಿ ಕಾಲಾಳು ಸೈನ್ಯವನ್ನೂ ಕೂಡಿ ನಿಂತಿದ್ದಾರೆ.

ಮದಾಂಧಗಂಧಸಿಂಧುರಂಗಳುಂ ಬೆರಸು ಪೊಯ್ವ ಪಂಚಮಹಾಶಬ್ದಂಗಳ್ ಕಾಳ ನೀಳ ಜಳಧರಂಗಳ್ ಮೊೞಗುವಂತೆ ಮೊೞಗೆ ಗಗನತಳಂ ತಳಿರ್ತಂತೆ ಪೊಳೆದು ಮಿಳಿರ್ವ ಪಾಳಿ ಮಹಾಧ್ವಜಂಗಳುಂ ಗಗನಸಿಂಧು ಫೇನ ಪಟಳ ಶಂಖ ಸಂಕಾಶ ಪಾಂಡು ಛತ್ರಚಾಮರಂಗಳುಂ ಪೆಱವುಂ ರಾಜಚಿಹ್ನಂಗಳುಮೆಸೆಯೆ-

ಚಂ|| ಕನಕ ಗಿರೀಂದ್ರ ರುಂದ್ರ ಶಿಖರಸ್ಥಿತ ಬಾಳದಿನೇಶಬಿಂಬಮಂ
ನೆನೆಯಿಸೆ ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ ಭೀ|
ಮನ ಮೊನೆಯಂ ವನೀಪಕರನಾರಯಲಟ್ಟಿ ಯುಗಾಂತರ್ವಾ ಭೋಂ
ಕೆನೆ ತಳರ್ವಂದದಿಂ ತಳರಲಟ್ಟಿಪನಲ್ತೆ ಫಣೀಂದ್ರಕೇತನಂ|| ೫೮

ಕಂ|| ಸೆಕೋಲ್ ಸೆಕೋಲಿಂ ಪ
ತ್ತಱುಗಾವುದ ಬಲದ ಪವಣನನಿತಿನಿತೆಂದಾ|
ನಱಯೆಂ ದೇವಾಸುರರೊಳ
ಮಱಯೆಂ ಕಂಡಿನಿತು ಬಲಮನಾನವನಿಪತೀ|| ೫೯

ವ|| ಎಂದು ನಾಮುಂ ನಮ್ಮ ಬಲದ ನಾಯಕರನೆಡೆಯಱದೊಡ್ಡುವಮೆಂದು ದ್ರೋಣನ ಮೊನೆಗಱುವತ್ತು ಸಾಸಿರ ರಥಂಬೆರಸು ಧೃಷ್ಟದ್ಯುಮ್ನನುಮನಶ್ವತ್ಥಾಮನ ಮೊನೆಗೆ ನಾಲ್ವತ್ತು ಸಾಸಿರ ರಥಂ ಬೆರಸು ಶಿಖಂಡಿಯುಮಂ ಕೃತವರ್ಮನ ಮೊನೆಗೊಂದಕ್ಷೋಹಿಣೀ ಬಲಂ ಬೆರಸು ಸಾತ್ಯಕಿಯುಮಂ ದುರ್ಯೋಧನನ ಮೊನೆಗೊಂದು ಕೋಟಿ ರಥಮುಮೊಂದು ಲಕ್ಕ ಭದ್ರಹಸ್ತಿಯುಂ ಬೆರಸು ಭೀಮನುಮಂ ಬೃಹದಬಳನ ಮೊನೆಗೆ ಮೂವತ್ತು ಸಾಸಿರ ರಥಂಬೆರಸಭಿಮನ್ಯುವುಮಂ ದುಶ್ಶಾಸನನ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ನಕುಲನುಮಂ ಶಕುನಿಯ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ಸಹದೇವನುಮಂ ಕೃಪನ ಮೊನೆಗೊಂದಕ್ಷೋಹಿಣೀ ಬಲಂಬೆರಸು ಕೇಕಯರುಮಂ ಸಿಂಧುರಾಜನ ಮೊನೆಗೊಂದಕ್ಷೋಹಿಣೀ ಬರಂಬೆರಸು ದ್ರುಪದನುಮಂ ಭಗದತ್ತನ ಮೊನೆಗೊಂದಕ್ಷೋಹಿಣೀ ಬಲಂಬೆರಸು ವಿರಾಟನುಮಂ ಜಟಾಸುರ ಬಕಾಸುರರ ಮಕ್ಕಳಳಂಭೂಷ ಹಳಾಯುಧ ಮುಸಳಾಯುಧ ಕಾಳ ನೀಳ ನಕ್ತಂಚರರ ಮೊನೆಗೊಂದಕ್ಷೋಹಿಣೀ ಬಲಂಬೆರಸು ಘಟೋತ್ಕಚನುಮಂ ವಿಂದನ ಮೊನೆಗೆ ಪದಿನೆಂಟು ಸಾಸಿರ ರಥಮುಮೊಂದುಲಕ್ಕ ಮದದಾನೆಯುಂ

ಅಲ್ಲದೆ ಕ್ಷೇಮಧೂರ್ತಿಯೂ ಭೀಮನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳನೀಳರೇ ಮೊದಲಾದವರೂ ಕ್ರೂರರಾಕ್ಷಸಸೈನ್ಯದೊಡನೆ ಸುತ್ತಲೂ ವ್ಯಾಪಿಸಿ ಬಳಸಿ ನಿಂತಿದ್ದಾರೆ. ದುಶ್ಶಾಸನನೇ ಮೊದಲಾದ ನೂರು ಜನ ಮಕ್ಕಳೂ ಅರವತ್ತು ಸಾವಿರ ರಥದಿಂದಲೂ ಹದಿನೆಂಟು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳಿಂದಲೂ ಕೂಡಿ ಪಂಚಮಹಾಶಬ್ದಗಳು ಪ್ರಳಯಕಾಲದ ಕರಿಯ ಮೋಡಗಳು ಮೊಳಗುವ ಹಾಗೆ ಮೊಳಗುತ್ತಿರಲು ಆಕಾಶ ಪ್ರದೇಶವೇ ಚಿಗುರಿದ ಹಾಗೆ ಹೊಳೆದು ಚಲಿಸುತ್ತಿರುವ ಧ್ವಜ ಮಹಾಧ್ವಜಗಳೂ ದೇವಗಂಗಾನದಿಯ ನೊರೆ ಮತ್ತು ಶಂಖಗಳಿಗೆ ಸಮಾನವಾದ ಬಿಳಿಯ ಬಣ್ಣದಿಂದ ಕೂಡಿದ ಛತ್ರಚಾಮರಗಳೂ ಇನ್ನೂ ಇತರ ರಾಜ್ಯಚಿಹ್ನೆಗಳೂ ಪ್ರಕಾಶಿಸುತ್ತಿರಲು- ೫೮. ಮೇರುಪರ್ವತದ ವಿಶಾಲವಾದ ಶಿಖರದ ಮೇಲಿರುವ ಬಾಲಸೂರ್ಯನ ಬಿಂಬವನ್ನು ಜ್ಞಾಪಕಕ್ಕೆ ತರುತ್ತ ತನ್ನ ಸುವರ್ಣರಥದಲ್ಲಿದ್ದುಕೊಂಡು ವೈಭವದಿಂದ ಭೀಮನ ಯುದ್ಧರೀತಿಯನ್ನು ವಿಚಾರಮಾಡಿ ಬರಲು ಗೂಢಚಾರರನ್ನು ಕಳುಹಿಸಿ, ಪ್ರಳಯಕಾಲದ ಸಮುದ್ರವು ಇದ್ದಕ್ಕಿದ್ದ ಹಾಗೆ ಚಲಿಸುವಂತೆ ಚಲಿಸಲು ದುರ್ಯೋಧನನು (ಸಂದೇಶವನ್ನು) ಕಳುಹಿಸಿದನು. ೫೯. ಒಂದು ಪಕ್ಕದ ಅಂಚಿನಿಂದ ಇನ್ನೊಂದು ಪಕ್ಕದ ಅಂಚಿನವರೆಗಿರುವ ಹತ್ತಾರು ಗಾವುದ ವಿಸ್ತಾರವಾದ ಪ್ರದೇಶದಲ್ಲಿರುವ ಸೈನ್ಯದ ಪ್ರಮಾಣವನ್ನು ಅಷ್ಟಿಷ್ಟೆಂದು ನಾನು ಹೇಳಲಾರೆ, ರಾಜನೇ ದೇವಾಸುರರ ಯುದ್ಧದಲ್ಲಿಯೂ ಇಷ್ಟು ಸೈನ್ಯವನ್ನು ನಾನು ಕಂಡಿರಲಿಲ್ಲ. ವ|| ಎಂದು ನಾವೂ ನಮ್ಮ ಸೈನ್ಯದ ನಾಯಕರನ್ನು ವಿಚಾರಮಾಡಿ ಒಡ್ಡೋಣ ಎಂದನು. ದ್ರೋಣನ ಸೈನ್ಯಕ್ಕೆ ಪ್ರತಿಯಾಗಿ ಅರವತ್ತು ಸಾವಿರ ರಥದೊಡನೆ ಕೂಡಿದ ಧೃಷ್ಟದ್ಯುಮ್ನನನ್ನು ಗೊತ್ತುಮಾಡಿದನು. ಅಶ್ವತ್ಥಾಮನ ಸೈನ್ಯಕ್ಕೆ ನಲವತ್ತು ಸಾವಿರ ತೇರಿನಿಂದ ಕೂಡಿದ ಶಿಖಂಡಿಯನ್ನು ನೇಮಿಸಿದನು. ಕೃತವರ್ಮನ ಕಾಳಗಕ್ಕೆ ಒಂದಕ್ಷೋಹಿಣೀ ಸೈನ್ಯದಿಂದ ಕೂಡಿದ ಸಾತ್ಯಕಿಯನ್ನು ನಿಯಮಿಸಿದನು. ದುರ್ಯೋಧನನೊಡನೆ ಯುದ್ಧ ಮಾಡುವುದಕ್ಕೆ ಒಂದು ಕೋಟಿ ರಥವನ್ನೂ ಒಂದುಲಕ್ಷ ಉತ್ತಮಜಾತಿಯ ಆನೆಗಳನ್ನೂ ಒಳಗೊಂಡ ಭೀಮನನ್ನು ಸಿದ್ಧಪಡಿಸಿದನು. ಬೃಹದ್ಬಳನನ್ನು ಎದುರಿಸುವುದಕ್ಕೆ ಮೂವತ್ತು ಸಾವಿರ ರಥದಿಂದ ಕೂಡಿದ ಅಭಿಮನ್ಯವೂ ದುಶ್ಶಾಸನನ ಕಾಳಗಕ್ಕೆ ನಲವತ್ತು ಸಾವಿರ ರಥದಿಂದ ಕೂಡಿದ ನಕುಲನೂ ಕೃಪನೊಡನೆ ಯುದ್ಧ ಮಾಡುವುದಕ್ಕೆ ಒಂದಕ್ಷೋಹಿಣೀ ಬಲದಿಂದ ಕೂಡಿದ ಕೇಕಯರೂ ಸೈಂಧವನ ಯುದ್ಧಕ್ಕೆ ಒಂದಕ್ಷೋಹಿಣೀ ಬಲದಿಂದ ಕೂಡಿದ ದ್ರುಪದನೂ ಸಿದ್ಧರಾದರು. ಭಗದತ್ತನ ಸೈನ್ಯಕ್ಕೆ ಒಂದಕ್ಷೋಹಿಣೀ ಬಲದೊಡನೆ ವಿರಾಟನೂ ಬಕಾಸುರನ ಮಕ್ಕಳಾದ ಅಳಂಬೂಷ ಹಳಾಯುಧ ಮುಸಳಾಯುಧ ಕಾಳನೀಳರಾಕ್ಷಸರ ಮೊನೆಗೆ ಒಂದಕ್ಷೋಹಿಣೀ ಬಲದಿಂದ ಕೂಡಿದ ಘಟೋತ್ಕಚನೂ ನೇಮಕರಾದರು.

ಬೆರಸು ಕೊಂತಿಯ ಮಾವನಪ್ಪ ಕೊಂತಿಭೋಜನುಮಂ ವಿಂದಾನುವಿಂದರ ಮೊನೆಗಱುವತ್ತು ಸಾಸಿರ ರಥಂಬೆರಸು ನಾಗಕುಮಾರನನಂತ ಬಲಸಮನ್ವಿತನಿಳಾವಂತನುಮಂ ಭೂರಿಶ್ರವನ ಮೊನೆಗೆ ನಾಲ್ವತ್ತು ಸಾಸಿರ ರಥಮುಂ ನಾಲ್ವತ್ತು ಸಾಸಿರ ಮದಹಸ್ತಿಗಳುಂ ಬೆರಸು ಮದಗಜಾರೂಢನುತ್ತರನುಮಂ ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರ ಮೊನೆಗಱವತ್ತು ಸಾಸಿರ ರಥಂಬೆರಸು ಸುತ ಸೋಮಕ ಪ್ರಮುಖರಪ್ಪ ಪಂಚಪಾಂಡವರುಮಂ ಪೇೞ್ದು ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂವರಕ್ಷೋಹಿಣೀಪತಿಗಳ ಮೊನೆಗೆ ಮೂಱುಕೋಟಿ ರಥಂಬೆರಸು ಪಾಂಡ್ಯ ಶ್ರೀಜಯ ಸೋಮಕರಂ ಪೇೞ್ದು ವೀರ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ಮಹೀಪಾಳರ ಮೊನೆಗೆರಡು ಕೋಟಿ ರಥಂಬೆರಸು ಹೈಹಯರಂ ಪೇೞ್ದು ನೀಳನನಱುವತ್ತು ಸಾಸಿರ ಭದ್ರಹಸ್ತಿವೆರಸು ತನ್ನ ಚಕ್ರರಕ್ಷೆಗೆ ಪೇೞ್ದು ಸಂಸಪ್ತಕರ ಪದಿನೆಂಟು ಕೋಟಿ ರಥಕ್ಕರಿಕೇಸರಿಯ ರಥಮನೊಂದನೆ ಪೇೞ್ದು ಯುಷ್ಠಿರಂ ಶಲ್ಯನ ಮೊನೆಗೆ ನೆದು ನಿಂದು ಕೆಯ್ವೀಸುವಾ ಪ್ರಸ್ತಾವದೊಳ್ ‘ಶೂರಂ ಭೇದೇನ ಯೋಜಯೇತ್’ ಎಂಬ ನಯಮಂ ಕೆಯ್ಕೊಂಡು ವಿನಯಮನೆ ಮುಂದಿಟ್ಟು-

ಕಂ|| ಬಳಮೆರಡುಂ ತನ್ನನೆ ಮಿಳ
ಮಿಳ ನೋಡೆ ನರೇಂದ್ರನೊಂದೇ ರಥದಿಂದಸುಹೃ|
ದ್ಬಳಮನಿರದೆಯ್ದಿ ಭೀಷ್ಮರ
ಚಳಣಯುಗಕ್ಕೆಱಗೆ ನಿನಗೆ ಜಯಮಕ್ಕೆಂದಂ|| ೬೦

ವ|| ಎಂದು ಭೀಷ್ಮರ್ ತಮ್ಮ ಮೊಮ್ಮನ ವಿನಯಕ್ಕೆ ಮೆಚ್ಚಿ ಪರಸೆ ಪರಕೆಯಂ ಕೆಯ್ಕೊಂಡು-

ಕಂ|| ಗುರು ಕೃಪ ಗುರುಸುತ ಶಲ್ಯರ
ಚರಣಂಗಳ್ಗೆಱಗಿ ಪೋಗಿ ಪೊಡೆವಡುವುದುಮಾ|
ದರದಿಂದಂ ನಲ್ಮೆಯೊಳಂ
ಪರಸಿ ಮನಗೊಂಡು ನುಡಿದರವರಾ ನೃಪನಂ|| ೬೧

ನಿನ್ನ ಬರವಿಂದವೆಮ್ಮ ಮ
ನನ್ನಿನಗೆಱಗಿದುದು ಜಯಮುಮೆಮ್ಮೀ ದೆಸೆಯಿಂ|
ದನ್ನಿನಗೆ ಸಾರ್ಗೆ ಪೋಗೆನೆ
ಮನ್ನಿಸಿ ಗುರುಜನಮನಾಗಳಂತಕನತನಯಂ|| ೬೨

ವಿಂದನೊಡನೆ ಯುದ್ಧಮಾಡುವುದಕ್ಕೆ ಹದಿನೆಂಟು ಸಾವಿರ ರಥವೂ ಒಂದು ಲಕ್ಷ ಮದ್ದಾನೆಗಳೂ ಕೂಡಿದ ಕುಂತಿಯ ಮಾವನಾದ ಕುಂತಿಭೋಜನು ಸಿದ್ಧನಾದನು. ವಿಂದಾನುವಿಂದರ ಸೈನ್ಯಕ್ಕೆ ಅರವತ್ತು ಸಾವಿರರಥದೊಡಗೂಡಿ ನಾಗಕುಮಾರನನ್ನೂ ಅನಂತಬಲದಿಂದ ಕೂಡಿದ ಇಳಾವಂತನನ್ನೂ ಭೂರಿಶ್ರವನೊಡನೆ ಯುದ್ಧ ಮಾಡುವುದಕ್ಕೆ ನಲವತ್ತು ಸಾವಿರ ತೇರುಗಳನ್ನೂ ನಲವತ್ತು ಸಾವಿರ ಮದ್ದಾನೆಗಳನ್ನೂ ಕೂಡಿ ಮದ್ದಾನೆಯನ್ನೇರಿದ್ದ ಉತ್ತರನನ್ನೂ ಏರ್ಪಡಿಸಿದನು. ದುರ್ಯೋಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರು ಜನಗಳ ಯುದ್ಧಕ್ಕೆ ಅರವತ್ತು ಸಾವಿರ ತೇರಿನೊಡನೆ ಕೂಡಿದ ಸುತ ಸೋಮಕರೇ ಮುಖ್ಯರಾದ ಪಂಚಪಾಂಡವರನ್ನು ನೇಮಿಸಿದನು. ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂರುಮಂದಿ ಅಕ್ಷೋಹಿಣೀಪತಿಗಳ ಯುದ್ಧಕ್ಕೆ ಮೂರುಕೋಟಿ ರಥಗಳಿಂದ ಕೂಡಿದ ಪಾಂಡ್ಯ ಶ್ರೀಜಯ ಸೋಮಕರನ್ನೂ ಗೊತ್ತುಮಾಡಿದನು. ವೀರರಾದ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ರಾಜರುಗಳ ಬಲಕ್ಕೆ ಎರಡುಕೋಟಿ ರಥಗಳಿಂದ ಕೂಡಿದ ಹೈಹಯರನ್ನು ನಿಯಮಿಸಿದನು. ಅರವತ್ತು ಸಾವಿರ ಭದ್ರಗಜಗಳೊಡನೆ ನೀಲನನ್ನು ತನ್ನ ಸೇನಾರಕ್ಷಣೆಗೆ ಇರಹೇಳಿದನು. ಸಂಸಪ್ತಕರ ಹದಿನೆಂಟುಕೋಟಿ ರಥಕ್ಕೆ ಅರಿಕೇಸರಿಯ (ಅರ್ಜುನ) ರಥವೊಂದನ್ನೇ ಸಿದ್ಧಪಡಿಸಿದನು. ಧರ್ಮರಾಯನು ತಾನೇ ಶಲ್ಯನ ಇದಿರಾಗಿ ನಿಂತನು. ‘ಶೂರನನ್ನು ಭೇದೋಪಾಯದಿಂದಲೇ ಗೆಲ್ಲಬೇಕು’ ಎಂಬ ನೀತಿಯನ್ನು ಅಂಗೀಕರಿಸಿ ವಿನಯವನ್ನೇ ಮುಂದು ಮಾಡಿಕೊಂಡು ೬೦. ಎರಡು ಬಲವೂ ತನ್ನನ್ನೇ ಮಿಟಮಿಟನೆ ನೋಡುತ್ತಿರಲು ಧರ್ಮರಾಯನು ಸಾವಕಾಶಮಾಡದೆ ಒಂದೇ (ಏಕಾಕಿಯಾಗಿ) ತೇರಿನಿಂದ ಶತ್ರುಸೈನ್ಯವನ್ನು ಸೇರಿ ಭೀಷ್ಮರ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ಅವರು ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದರು. ವ|| ಆ ಹರಕೆಯನ್ನು ಸ್ವೀಕರಿಸಿದನು. ೬೧. ದ್ರೋಣ ಕೃಪ ಅಶ್ವತ್ಥಾಮ ಶಲ್ಯರ ಪಾದಗಳಿಗೂ ಹಾಗೆಯೇ ಹೋಗಿ ನಮಸ್ಕಾರಮಾಡಿದನು. ಅವರೂ ಆದರದಿಂದಲೂ ಸದ್ಭಾವದಿಂದಲೂ ಹರಸಿ ತೃಪ್ತರಾಗಿ ರಾಜನನ್ನು ಕುರಿತು ಹೇಳಿದರು. ೬೨. ನಿನ್ನ ಬರುವಿಕೆಯಿಂದ ನಮ್ಮ ಮನಸ್ಸು ನಿನ್ನ ಕಡೆಗೆ ಓಸರಿಸಿತು. ಹಾಗೆಯೇ ನಮ್ಮ ಕಡೆಯಿಂದ ನಿನಗೂ ಜಯವು ಉಂಟಾಗುತ್ತದೆ

ವ|| ಮಗುೞ್ದು ತನ್ನೊಡ್ಡಣಕ್ಕೆ ಬರುತ್ತುಂ ದುರ್ಯೋಧನನ ತಮ್ಮನಪ್ಪ ಯುಯುತ್ಸುವಂ ಕಂಡು-

ಚಂ|| ಪವನಜನಿಂದೆ ಕೌರವಕುಲಂ ಪಡಲಿಟ್ಟವೊಲಕ್ಕುಮಾದೊಡಿ
ನ್ನವರವರಾರುವಿಲ್ಲಣಮೆ ಸಂತತಿ ಕೆಟ್ಟಪುದಿಲ್ಲಿ ಕಾವೆನೀ|
ಬವರದೊಳೀಗಳಾನಿವನನೆಂದು ನೃಪಂ ದಯೆಯಿಂದಮಾ ಯುಯು
ತ್ಸುವನೊಡಗೊಂಡು ಬಂದನೆನಿತಾದೊಡಮೇಂ ಪ್ರಭು ಪೊಲ್ಲಕೆಯ್ಗುಮೇ|| ೬೩

ವ|| ಅಂತಾ ಯುಯುತ್ಸುವನೊಡಗೊಂಡು ಬಂದು ಧರ್ಮಪುತ್ರನುತ್ಸಾಹದೊಳಿರ್ಪ ಪದದೊಳ್ ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋಱ-

ಚಂ|| ಅದಿರದಿದಿರ್ಚಿ ತಳ್ತಿಱಯಲೀ ಮಲೆದೊಡ್ಡಿದ ಚಾತುರಂಗಮೆಂ
ಬುದು ನಿನಗೊಡ್ಡಿ ನಿಂದುದಿದನೋವದೆ ಕೊಲ್ವಡೆ ನೀನುಮೆನ್ನ ಕ|
ಜ್ಜದೊಳೆಸಗೆಂದು ಸೈತಜಿತನಾದಿಯ ವೇದರಹಸ್ಯದೊಳ್ ನಿರಂ
ತದ ಪರಿಚರ್ಯೆಯಿಂ ನೆಯೆ ಯೋಜಿಸಿದಂ ಕದನತ್ರಿಣೇತ್ರನಂ|| ೬೪

ವ|| ಆಗಳ್ ಪರಸೈನ್ಯಭೈರವಂ ಪುರಾಣಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು ರಿಪುಪಕ್ಷಕ್ಷಯಕರಮಪ್ಪ ವಿಶ್ವಕರ್ಮ ನಿರ್ಮಿತಮಾದ ತನ್ನ ದಿವ್ಯರಥಮಂ ಮನೋರಥಂ ಬೆರಸು ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱು ಸೂೞು ಬಲವಂದು ಪೊಡಮಟ್ಟು ಬೞಯಂ ತಾನೇಱ ವಜ್ರಕವಚಮಂ ತೊಟ್ಟು ತವದೊಣೆಗಳನೆರಡುಂ ದೆಸೆಯೊಳಂ ಬಿಗಿದು ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಂಗೆಯ್ದು ದ್ರೋಣಂ ಬಾೞ್ಗೆಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಱಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪ್ತಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವೇೞುಗಳ್-

ಮ||ಸ್ರ|| ಕುಳಶೈಳೇಂದ್ರಂಗಳಂಭೋನಿಗಳಖಿಳ ದಿಗ್ದಂತಿಗಳ್ ವಿಶ್ವಧಾತ್ರೀ
ವಳಯಂ ಪಾತಾಳಮೂಲಂ ಸಕಲ ಭುವನಮೊಂದೊಂದಳ್ ಕೇಣಿಗೊಂಡು|
ಚ್ಚಳಿಸಲ್ ಸೂಸಲ್ ಪಳಂಚಲ್ ಸಿಡಿದೊಡೆದಳಱಲ್ ಪಾಱ ಜೀೞಲಂದು
ಮ್ಮಳಿಸುತ್ತತ್ತಿರ್ದರಾವಂ ಹರಿಗನೊಳಿದಿರಂ ಮೀಱ ಮಾಱುಂಪ ಗಂಡಂ|| ೬೫

ವ|| ಎಂಬನ್ನೆಗಂ ಪ್ರಳಯಕಾಲ ಜಾತೋತ್ಪಾತ ವಾತ ನಿರ್ಘಾತದಿಂದಮಳ್ಳಾಡಿ ತಳ್ಳಂಕಂಗುಟ್ಟುವ ಜಳನಿಗಳಂತೆ ಮೇರೆದಪ್ಪಲ್ ಬಗೆವುಭಯಸೈನ್ಯಂಗಳಂ ಕಂಡತ್ತ ರಾಜರಾಜನು ಮಿತ್ತ ಧರ್ಮರಾಜನುಮೊಡನೊಡನೆ ಕೆಯ್ವೀಸಿದಾಗಳ್-

ಹೋಗು ಎಂದರು. ಧರ್ಮರಾಜನು ತಮ್ಮ ಹಿರಿಯರನ್ನು ಗೌರವಿಸಿ ವ|| ತನ್ನ ಸೈನ್ಯಕ್ಕೆ ಹಿಂತಿರುಗಿ ಬರುತ್ತ ದಾರಿಯಲ್ಲಿ ದುರ್ಯೋಧನನ ತಮ್ಮನಾದ ಯುಯುತ್ಸುವನ್ನು ಕಂಡನು. ೬೩. ಹೇಗೂ ಭೀಮನಿಂದ ಕೌರವಕುಲವು ನಾಶವಾದಂತಾಗುತ್ತದೆ. ಅವರ ಕಡೆಯವರಾರೂ ಇಲ್ಲದಂತಾಗುತ್ತದೆ. ಸಂತತಿಯು ಸಂಪೂರ್ಣವಾಗಿ ನಾಶವಾಗುತ್ತದೆ. ಈ ಯುದ್ಧದಲ್ಲಿ ಇವನನ್ನಾದರೂ ರಕ್ಷಿಸುತ್ತೇನೆ ಎಂದು ರಾಜನು ದಯೆಯಿಂದ ಆ ಯುಯುತ್ಸುವನ್ನು ಒಡಗೊಂಡು ಬಂದನು. ಪ್ರಭುವಾದವನು ಕೆಟ್ಟದ್ದನ್ನು ಮಾಡುತ್ತಾನೆಯೇ? ವ|| ಯುಯುತ್ಸುವನ್ನು ಒಡಗೊಂಡು ಬಂದು ಧರ್ಮರಾಜನು ಉತ್ಸಾಹದಿಂದಿರುವ ಸಮಯದಲ್ಲಿ ವಿಕ್ರಮಾರ್ಜುನನ ಮನಸ್ಸಿನಲ್ಲುಂಟಾದ ವ್ಯಾಮೋಹವನ್ನು ಕಳೆಯುವುದಕ್ಕಾಗಿ ಕೃಷ್ಣನು ವಿಶ್ವರೂಪವನ್ನು ತೋರಿದನು. ೬೪. “ಹೆದರದೆ ಎದುರಿಸಿ ಪ್ರತಿಭಟಿಸಿ ಯುದ್ಧಮಾಡಲು ಮಲೆತು ಚಾಚಿದ ಈ ಚತುರಂಗ ಸೈನ್ಯವು ನಿನಗೆ ಪ್ರತಿಭಟಿಸಿ ನಿಂತಿದೆ. ಇದನ್ನು ಕೊಲ್ಲಬೇಕಾದರೆ ನೀನು ನಾನು ಹೇಳಿದ ರೀತಿಯಲ್ಲಿ ಕೆಲಸ ಮಾಡು” ಎಂದು ಶ್ರೀಕೃಷ್ಣನು ನೇರವಾಗಿ ಆದಿಕಾಲದಿಂದ ಬಂದ ವೇದ ರಹಸ್ಯವನ್ನು ಮನದಟ್ಟಾಗುವಂತೆ ಉಪದೇಶಿಸಿ ಅರ್ಜುನನನ್ನು ಯುದ್ಧಕಾರ್ಯದಲ್ಲಿ ನಿಯೋಜಿಸಿದನು. ವ|| ಆಗ ಅರ್ಜುನನು ಪುರಾಣಪುರುಷನಾದ ಶ್ರೀಕೃಷ್ಣನಿಗೆ ನಮಸ್ಕಾರಮಾಡಿ ಶತ್ರುಪಕ್ಷವನ್ನು ನಾಶಮಾಡುವ ಶಕ್ತಿಯನ್ನುಳ್ಳವಿಶ್ವಕರ್ಮನಿಂದ ನಿರ್ಮಿತವಾದ ತನ್ನ ದಿವ್ಯರಥವನ್ನು ಶ್ರೀಕೃಷ್ಣನನ್ನು ಮೊದಲು ಹತ್ತಲುಹೇಳಿ ಅದನ್ನು ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದ ಬಳಿಕ ತಾನೂ ಹತ್ತಿದನು. ವಜ್ರಕವಚವನ್ನು ಧರಿಸಿದನು. ಅಕ್ಷಯತೂಣೀರ (ಬತ್ತಳಿಕೆ)ಗಳನ್ನು ಎರಡು ಕಡೆಯಲ್ಲಿಯೂ ಬಿಗಿದುಕೊಂಡನು. ದ್ರೋಣಾಚಾರ್ಯರಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ ‘ದ್ರೋಣಾಚಾರ್ಯರು ಬಾಳಲಿ’ ಎಂದು ಪ್ರಾರ್ಥಿಸಿದನು. ಮಹಾಪ್ರಚಂಡವಾದ ತನ್ನ ಗಾಂಡೀವವೆಂಬ ಬಿಲ್ಲಿಗೆ ಹೆದೆಯನ್ನೇರಿಸಿ ನೀವಿ ಟಂಕಾರಮಾಡಿದನು. ದೇವದತ್ತ ಶಂಖವನ್ನು ಊದಿ ಸಂಸಪ್ತಕರ ಸೈನ್ಯದ ಕಡೆಗೆ ತೇರನ್ನು ನಡೆಸುವಂತೆ ಕೃಷ್ಣನಿಗೆ ಹೇಳಿದನು. ೬೫. ಕುಲಪರ್ವತಗಳೂ, ಸಮುದ್ರಗಳೂ, ದಿಗ್ಗಜಗಳೂ, ಸಮಗ್ರಭೂಮಂಡಲವೂ ಪಾತಾಳಲೋಕದ ತಳಭಾಗವೂ ಸಮಸ್ತಲೋಕಗಳೂ ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ, ಚೆಲ್ಲಾಡಿ, ತಾಗಿ, ಸಿಡಿಲೊಡೆದು, ನಡುಗಿ, ಹಾರಿ, ಜೀರೆಂದು ಶಬ್ದಮಾಡಿ ವ್ಯಾಕುಲಪಟ್ಟವು. ಅರ್ಜುನನಿಗೆ ಇದಿರಾಗಿ ಪ್ರತಿಭಟಿಸುವ ಶೂರನು ಯಾವನಿದ್ದಾನೆ? ವ|| ಎನ್ನುವಷ್ಟರಲ್ಲಿ ಪ್ರಳಯಕಾಲದಲ್ಲಿ ಹುಟ್ಟಿ ಮೇಲಕ್ಕೆ ನೆಗೆದ

ಕಂ|| ಪೂರ್ವಾಪರ ಜಳನಿಗಳ
ಗುರ್ವಿಸುವಿನಮೊಂದನೊಂದು ತಾಗುವವೊಲಗು|
ರ್ವುರ್ವಿರೆ ಪರ್ವಿ ಚತುರ್ವಲ
ಮೇರ್ವೆಸದಿಂದಂದು ಬಂದು ತಾಗಿತ್ತಾಗಳ್|| ೬೬

ಘಟೆಯ ದೞದುಲಿವು ಲಯ ಘನ
ಘಟೆಗಳ ಮೊೞಗೆನಿಸೆ ಪೊಟ್ಟಗೊಡೆದತ್ತು ರಟ|
ತ್ಪಟು ಪಟಹ ಶಂಖ ಭೇರಿಯ
ಚಟುವಳಿತದಿಂದಟಳಪಟಳಮಂಬರಪಟಳಂ|| ೬೭

ಕರಿ ತುರಗ ರಥ ಪದಾತಿಯ
ಚರಣಾಸಂಘಾತ ಜಾತ ರಜಮಾಜಸ್ರಂ|
ನೆರೆದಂಬರಕೊಗೆಯಲ್ ಬಳ
ಭರದಿಂ ಧರೆಯೆೞ್ದು ಪಾಱುವಂತಾಯ್ತಾಗಳ್|| ೬೮

ಸಮರ ರಸಪ್ರಿಯರೊಳ್ ಸ
ತ್ತ್ವಮುಮಿಳೆಯೊಳ್ ರಜಮುಮೊದವೆ ರಣಗೞ್ತಲೆಯೊಳ್|
ತಮಮುಂ ಮಿಗೆ ಸತ್ತ್ವ ರಜ
ಸ್ತಮಂಗಳುಂ ಕಾಣಲಾದುವೆರಡುಂ ಪಡೆಯೊಳ್|| ೬೯

ಪಡೆಯ ಪೊಗಗಿದು ಶೇಷಂ
ಪೆಡೆಗಳನುಡುಗುವುದುಮೆಳೆ ಬೊದಿಲ್ಲೆನೆ ಬಿೞ್ದ|
ತ್ತಡಿಗಿಡೆ ಕೂರ್ಮನ ಬೆನ್ನಂ
ದೊಡೆದು ಸಿಡಿಲ್ದೊಡನೆ ನುಚ್ಚುನೂಱಪ್ಪಿನೆಗಂ|| ೭೦

ವ|| ಅಂತು ನೆಲನುಮಾಕಾಶಮೊಂದೊಂದಳ್ ತಾಗಿದ ಬೇಗದೊಳಂಬರಂ ಬರಂ ನೆಗೆದ ಧೂಳಿಯೊಳ್ ದೆಸೆಯಱಯದೆಯುಂ ತಮ್ಮ ಬಲಮಂ ಮಾರ್ವಲಮನಱಯದೆಯುಂ ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದಚ್ಚುಮಿಟ್ಟು ಮಿದು ತಱದು ಘಟ್ಟಿಸೆಯುಮಾಂಕೆಗೊಂಡು ಕಿಱದುಪೊೞ್ತು ಕಾದೆ ಕಾದೆ ಸುರಿವ ಬಿಸುನೆತ್ತರ ಸರಿಯೊಳಮಂಬಿನ ಸರಿಯೊಳಮಂಬಿರಿವಿಟ್ಟು ಪಾಯ್ವ ಮದಗಜಂಗಳ ಮದಜಲದೊಳಂ ಬಲದ ಕಳಕಳಕ್ಕೆ ಮಸಗಿ ದೆಸೆಯಱಯದೆಯುಂ ಪಱಯೆ ಘಟ್ಟಿಸಿದ ಕೀಳ ಘಟ್ಟಣೆಯೊಳ್

ಗಾಳಿಯ ಹೊಡೆತದಿಂದ ಅಲುಗಿ ಕ್ಷೋಭೆಗೊಂಡ ಸಮುದ್ರದಂತೆ ಎಲ್ಲೆಯನ್ನು ಮೀರಲು ಯೋಚಿಸುತ್ತಿರುವ ಎರಡು ಕಡೆಯ ಸೈನ್ಯಗಳನ್ನೂ ಕಂಡು ಈ ಕಡೆ ಚಕ್ರವರ್ತಿಯಾದ ದುರ್ಯೋಧನನೂ ಆ ಕಡೆ ಧರ್ಮರಾಜನೂ ಯುದ್ಧ ಸೂಚಕವಾಗಿ ಕೈಬೀಸಿದರು. ೬೬. ಪೂರ್ವ ಪಶ್ಚಿಮ ಸಮುದ್ರಗಳು ಭಯವನ್ನುಂಟುಮಾಡುತ್ತ ಒಂದನ್ನೊಂದು ತಗಲುವ ಹಾಗೆ ಭಯಂಕರವಾದ ಚತುರಂಗಸೇನೆಗಳು ಉತ್ಸಾಹದಿಂದಲೂ ಯುದ್ಧೋದ್ಯೋಗದಿಂದಲೂ ಬಂದು ಸಂಘಟಿಸಿದುವು. ೬೭. ಆನೆಯ ಸೈನ್ಯದ ಘೀಂಕಾರ ಶಬ್ದವು ಪ್ರಳಯಕಾಲದ ಮೋಡಗಳ ಸಮೂಹದ ಗುಡುಗೆನ್ನಿಸಿತು. ಉಗ್ರವಾಗಿ ಶಬ್ದಮಾಡುತ್ತಿರುವ ದಮಟೆ, ಶಂಖ, ನಗಾರಿಯ ಧ್ವನಿಯಿಂದ ಅತಲವೆಂಬ ಪಾತಾಳ ಲೋಕದ ಮಾಳಿಗೆಯೂ ಆಕಾಶದ ಮೇಲ್ಚಾವಣಿಯೂ ಏಕಕಾಲದಲ್ಲಿ ಒಡೆದು ಹೋದುವು. ೬೮. ಆನೆ ಕುದುರೆ ತೇರು ಕಾಲಾಳುಗಳ ಪಾದಘಟ್ಟಣೆಯಿಂದ ಉಂಟಾದ ಧೂಳು ಒಟ್ಟಿಗೆ ಕೂಡಿ ಆಕಾಶಕ್ಕೆ ಹಾರಲು ಸೈನ್ಯದ ಭಾರದಿಂದ ಭೂಮಿಯೇ ಎದ್ದು ಹಾರುವ ಹಾಗಾಯಿತು. ೬೯. ಯುದ್ಧಾಸಕ್ತರಾದವರಲ್ಲಿ ಸತ್ತ್ವಗುಣವೂ (ಶಕ್ತಿಯೂ) ಭೂಮಿಯಲ್ಲಿ ರಜೋಗುಣವೂ (ಧೂಳೂ) ರಣಗತ್ತಲೆಯಲ್ಲಿ ತಮೋ ಗುಣವೂ (ಕತ್ತಲೆ) ಉಂಟಾಗಲು ಎರಡು ಸೈನ್ಯಗಳಲ್ಲಿಯೂ ಸತ್ತ್ವರಜಸ್ತಮೋಗುಣಗಳು ತೋರಿಬಂದುವು. ೭೦. ಸೈನ್ಯಗಳ ಭಾರಕ್ಕೆ ಹೆದರಿ ಆದಿಶೇಷನು ಹೆಡೆಗಳನ್ನು ಸಂಕೋಚ ಮಾಡಿಕೊಂಡನು. ಭೂಮಿಯು ಬೊದಿಲ್ಲೆಂದು ಬಿದ್ದಿತು. ತಳಭಾಗವು ನಷ್ಟವಾಗಲು ಆಮೆಯ ಬೆನ್ನು ಒಡೆದು ತಕ್ಷಣ ನುಚ್ಚುನೂರಾಯಿತು. ವ|| ಹಾಗೆ ಭೂಮ್ಯಾಕಾಶಗಳು ಒಂದೊಂದರಲ್ಲಿ ತಗುಲಿದ ವೇಗದಲ್ಲಿ ಆಕಾಶದವರೆಗೆ ಹಾರಿದ ಧೂಳಿನಿಂದ ದಿಕ್ಕು ಕಾಣದೆಯೂ ತಮ್ಮ ಪಕ್ಷ ಪ್ರತಿಪಕ್ಷಗಳನ್ನರಿಯದೆಯೂ ಚತುರಂಗ ಸೈನ್ಯವು ತಮ್ಮ ಮೊದಲಿನ ವ್ಯವಸ್ಥೆ ತಪ್ಪಿಹೋಗಿ ಹುಡುಕಾಡುತ್ತ ಥಟ್ ಪೊಟ್ಟೆಂದು ಹೊಡೆದು ಇಟ್ಟು ಕತ್ತರಿಸಿ ತರಿದು ಪ್ರತಿಭಟಿಸಿ ಕೆಲವು ಕಾಲ ಯುದ್ಧ ಮಾಡಿದರು. ಸುರಿಯುತ್ತಿರುವ ಬಿಸಿರಕ್ತದ ಮಳೆ, ಬಾಣವರ್ಷದಿಂದ ಪ್ರವಾಹವಾಗಿ ಹರಿಯುವ ಮದ್ದಾನೆಗಳ ಮದೋದಕ, ಸೈನ್ಯದ ಗದ್ದಲಕ್ಕೆ ರೇಗಿ ದಿಕ್ಕು ತೋಚದಂತೆ ಓಡಿ ತಗುಲಿದ ಕಡಿವಾಣದ ಸಂಘರ್ಷಣೆಯಿಂದ ಪೂರ್ಣವಾಗಿ ಸೀಳಿದ

ಪೊಟ್ಟಗೊಡೆದ ತಾಳುಗೆಗಳ ರುರಜಲದೊಳ್ ಬೆರಸಿ ಪದಗೆಂಪನಾಳ್ದ ಜಾತ್ಯಶ್ವದ ಲಾಳಾಜಳದೊಳಂ ನೆಲದೊಳೊಗೆವ ರಜಂ ಮೊದಲ್ಮೂಲಂಗಿಡೆಯುಂ ತಿಱದಿಕ್ಕಿದಂತೆ ತಲೆಗಳ್ ಪಱದುರುಳ್ದೊಡೆ ಪೆರ್ಮರಂಗಳ ಪೋೞ್ಗಳೊಳಗಣಿಂದಮೊಗೆದ ಕೇಸುರಿಗಳ ಬಳಗದಂತಟ್ಟೆಗಳಿಂದ ಬರಂಬರಂ ನೆಗೆದು ಪಾಱುವ ನೆತ್ತರ ಸುಟ್ಟುರೆಗಳಿಂದಂ ಮೇಗೆ ನೆಗೆದ ರಜಂ ಮಸುಳನಾಗೆ ದೆಸೆಯಱದು ತಮ್ಮ ಬಲಮುಮಂ ಮಾರ್ವಲಮುಮನಱದು ನವರುರಜಳ ಚಳತ್ಸೇಚನದೊಳ್ ಘಟ್ಟಿಸಿ ಸಿಂದುರದೊಳ್ ನೆಲಗಟ್ಟಿಸಿದಂತಿರ್ದ ರಂಗಭೂಮಿಯೊಳೆರಡುಂ ಪಡೆಯ ನಾಯಕರ್ ಬಿಲ್ಗಾಳೆಗಂಗಾದುವಾಗಳ್-

ಕಂ|| ಪಿಡಿಕೆಯ್ ತೀವಿದ ಕೂರ್ಗಣೆ
ಮಡಕಾಲ್ವರಮಲೆವ ಕಚ್ಚೆ ನಿಡಿಯಸಿಯೊ ಕ|
ರ್ಪಿಡಿದ ಪಣೆಗಟ್ಟು ಕೆಯ್ಪೊಡೆ
ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್|| ೭೧

ಶರಸಂಧಾನಂ ನಿಟ್ಟಿಸ
ಲರಿದೆಂಬಿನಮೆರಡು ಬಲದ ಕಡುವಿಲ್ಲರ್ ಭೋ|
ರ್ಗರೆದಿಸೆ ಕೂರ್ಗಣೆಯೊಳ್ ಪಂ
ದರಿಕ್ಕಿದಂತಾಯ್ತು ಗಗನಮಂಡಳಮೆಲ್ಲಂ|| ೭೨

ಗಱಸನ್ನೆಗೆಯ್ದು ತೆಗೆನೆ
ದೆಱಗಿ ಪರಂಕಲಿಸಿ ಪರ್ಮಿ ಕೂಕಿಱದಿಸೆ ಕೆಂ|
ಗಱಯ ಮೊನೆಯಂಬುಗಳ್ ಕ
ಣ್ದೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ|| ೭೩

ಅರಿವ ನಡುವುಡಿವ ನೇರ್ಗೋ
ಲ್ವರಿದುರ್ಚುವ ನಟ್ಟು ತೊನೆವ ಕಣೆಗಳ್ಗೆ ಸೊಗಂ|
ದಿರಿಯದಿದಿರಿದಿರನದಿರದೆ
ಸುರಿಗಿಱವಂತೆಚ್ಚರಂಬನಂಬಟ್ಟುವಿನಂ|| ೭೪

ಪಿಡಿಕೆಯ್ಯ ದೊಣೆಯ ಪೊದೆಯಂ
ಬಿಡೆ ಮುಡಿವಿನಮೆಚ್ಚು ಸುರಿಗೆಗಿೞದಿರಿದಿರಂ|
ಪಡೆ ಪೆಣೆದಿಱದುಂ ಬಿಲ್ವಡೆ
ಪಡೆದುದು ಭೋರ್ಗರೆದು ಪರಿವ ನೆತ್ತರ ಕಡಲಂ|| ೭೫

ನಾಲಗೆಗಳ ರಕ್ತ, ಹದವಾದ ಕೆಂಪು ಬಣ್ಣವನ್ನು ತಾಳಿದ ಜಾತಿಕುದುರೆಗಳ ಜೊಲ್ಲು ರಸ, ಇವುಗಳಿಂದ ನೆಲದಿಂದ ಹೊರಟ ಧೂಳಿನ ಮೂಲವು ನಾಶವಾಯಿತು. (ನೆಲವು ಒದ್ದೆಯಾದುದರಿಂದ ಧೂಳೇಳುವುದೂ ನಿಂತುದರಿಂದ) ಕತ್ತರಿಸಿ ಹಾಕಿದ ತಲೆಗಳು ಹರಿದು ಹಾರಲು ದೊಡ್ಡ ಮರಗಳ ಹೋಳುಗಳ ಒಳಭಾಗದಿಂದ ಹುಟ್ಟಿದ ಕೆಂಪುಜ್ವಾಲೆಯ ಸಮೂಹದಂತೆ ಮುಂಡಗಳಿಂದ ಆಕಾಶದವರೆಗೆ ಚಿಮ್ಮಿ ಹಾರುವ ರಕ್ತದಿಂದ ಕೂಡಿದ ಸುಂಟರುಗಾಳಿಯಿಂದ ಮೇಲೆ ಎದ್ದಿದ್ದ ಧೂಳೂ ಮಾಯವಾಯಿತು. ಧೂಳು ಅಡಗಲಾಗಿ ದಿಕ್ಕುಗಳನ್ನು ತಿಳಿದು ತಮ್ಮ ಸೈನ್ಯವನ್ನೂ ಪರಸೈನ್ಯವನ್ನೂ ತಿಳಿದು ಹೊಸದಾದ ರಕ್ತವನ್ನು ಚಿಮಿಕಿಸುವುದರಿಂದ ದಮ್ಮಸ್ಸು ಮಾಡಿ ಕೆಂಪು ಕಾವಿಕಲ್ಲನ್ನು ನೆಲಕ್ಕೆ ಹಾಸಿದಂತಿದ್ದ ಯುದ್ಧಭೂಮಿಯಲ್ಲಿ ಎರಡು ಸೈನ್ಯದ ನಾಯಕರು ಬಿಲ್ಲಿನ ಕಾಳಗವನ್ನು ಕಾದಿದರು.

೭೧. ಕೈತುಂಬ ತುಂಬಿದ ಹರಿತವಾದ ಬಾಣ, ಮೊಳಕಾಲುವರೆಗೆ ಜೋಲಾಡುವ ವೀರಗಚ್ಚೆ, ದೀರ್ಘವಾದ ಕತ್ತಿಯ ಒರೆ, ಕಪ್ಪಾದ ಹಣೆಗಟ್ಟು, ಕೈಚೀಲ ಇವು ಬೆಡಗನ್ನು ಹುಟ್ಟಿಸುತ್ತಿರಲು ಬಿಲ್ಗಾರರು ಪರಸ್ಪರ ಹೆಣೆದುಕೊಂಡು ಹೊಡೆದಾಡಿದರು. ೭೨. ಬಾಣವನ್ನು ಹೂಡುವುದನ್ನು ನೋಡಲಸಾಧ್ಯವೆನ್ನುವ ಹಾಗೆ ಎರಡು ಸೈನ್ಯದ ಗಟ್ಟಿಗರಾದ ಬಿಲ್ಗಾರರು ಶಬ್ದಮಾಡಿ ಹೊಡೆಯಲಾಗಿ ಆಕಾಶಮಂಡಳವೆಲ್ಲ ಚಪ್ಪರ ಹಾಕಿದಂತಾಯಿತು. ೭೩. ಹರಿತವಾದ ಬಾಣಗಳಿಂದ ಗರಿಸನ್ನೆ ಮಾಡಿ ದೀರ್ಘವಾಗಿ ಸೆಳೆದು ವಿಸ್ತಾರವಾಗಿ ಹರಡಿ ಹಬ್ಬಿ ಆರ್ಭಟಮಾಡಿ ಬಾಣಪ್ರಯೋಗ ಮಾಡಲು ಕೆಂಪಾದ ಗರಿಯನ್ನುಳ್ಳ ಬಾಣಗಳು ಯುದ್ಧ ಮಾಡುತ್ತಿರುವ ಶೂರರಾದ ಬಿಲ್ಗಾರರನ್ನು ಕಣ್ಣು ತೆರೆಯುವ ಹಾಗೆ ಮಾಡಿದುವು. ೭೪. ಕತ್ತರಿಸುವ, ನಾಟುವ, ಒಡೆದು ಹಾಕುವ, ನೇರವಾದ ಬಾಣಗಳು ಹಾರಿ ಸೀಳುವ, ನಾಟಿ ತೂಗುವ ಬಾಣಗಳಿಗೆ ಮುಖವನ್ನು ತಿರುಗಿಸಿಕೊಳ್ಳದೆ ಪ್ರತಿಭಟಿಸುವುದಕ್ಕೆ ಹೆದರದೆ ಕತ್ತಿಯಿಂದ ಹೊಡೆದ ಹಾಗೆ ಬಾಣವನ್ನು ಬಾಣವು ಹಿಂಬಾಲಿಸುವ ಹಾಗೆ ಹೊಡೆದರು. ೭೫. ಕಯ್ಯಲ್ಲಿ ಹಿಡಿದಿರುವ ಬತ್ತಳಿಕೆಯ ಹೊದೆಯಂಬುಗಳು ಸಂಪೂರ್ಣವಾಗಿ

ವ|| ಅಂತುಭಯಬಲ ಧನುರ್ಧರಬಲಂಗಳುಮೞ ಮೞದಾಗಳ್-

ಚಂ|| ತೊಳಗುವ ಬಾಳ್ ತೞತ್ತೞಪ ಕಕ್ಕಡೆ ಬುಂಭುಕದೊಳ್ ತಗುಳ್ದು ಪ
ಜ್ಜಳಿಸುವ ಪಂಚರಾಯುಧಮಗುರ್ವಿಸುವಾವುತಿ ಪೂಸಿದಂತಿರಿ|
ಟ್ಟಳಮಮರ್ದಿರ್ದ ಮಾಳಜಿಗೆ ಪಕ್ಕರೆಯಿಕ್ಕಿದ ಜಾಯಿಲಂ ಭಯಂ
ಗೊಳಿಸೆ ಕಡಂಗಿ ತಾಗಿದುದಸುಂಗೊಳೆ ತುಂಗ ತುರಂಗ ಸಾಧನಂ|| ೭೬

ವ| ಅಂತು ವಿಳಯಕಾಳದ ಕಾೞರ್ಚಿನ ಬೇಗ ಸಾರ್ವಂತಿರ್ವಲದಳವುಂ ಕಿರ್ಚುಂ ಕಿಡಿಯುಮಾಗೆ ತಾಗಿದಾಗಳ್-

ಚಂ|| ಪಸುಗೆ ನೆಲಂ ಜಲಂ ಹಯದೊಡಂಬಡು ವಂಚನೆ ಕೇಣಮಾಸನಂ
ಕೊಸೆ ದೆಸೆ ದಿಟ್ಟಿ ಮುಟ್ಟಿ ಕೆಲಜಂಕೆ ನಿವರ್ತನೆ ಕಾಣ್ಕೆ ಪರ್ವಿದೇ|
ರ್ವೆಸನದೊಳಾದ ಬಲ್ಮೆಯೊಳೊಡಂಬಡೆ ತಳ್ತಿಱವಲ್ಲಿ ಮಿಂಚಿನೊಳ್
ಮುಸುಕಿದ ಮಾಯಾಯ್ತು ಸಮರಾಂಗಣಮುಳ್ಕುವ ಬಾಳ್ಗಳುಳ್ಕದಿಂ|| ೭೭

ಕರ ಕರವಾಳಘಾತದೊಳರಾತಿಯ ಪಂದಲೆ ಪಂಚರಾಯುಧಂ
ಬೆರಸೆಸೆವಟ್ಟೆ ತೊಟ್ಟ ಕವಚಂಬೆರಸೇಱದ ವಾಜಿ ಲೋಹವ|
ಕ್ಕರೆವೆರಸೊಂದೆ ಸೂೞೊಳೆ ಪಡಲ್ವಡೆ ದೋರ್ವಲದುರ್ವು ಬೀರದೊಳ್
ಪೊರೆದಿರೆ ಬಿನ್ನಣಂ ನೆಗೞೆ ತಳ್ತಿಱದರ್ ಕೆಲರಾಜಿರಂಗದೊಳ್|| ೭೮

ಕಂ|| ಪಿಡಿದುದಿರ್ವ ಬಾಳ ಕಿಡಿಗಳ
ನೊಡನೊಡನರೆವೊತ್ತಿ ತೊಟ್ಟ ಸನ್ನಣವುರಿಯ|
ಲ್ಕೊಡರಿಸಿದೊಡವಱ ಪರ್ವಂ
ಬಿಡೆಯರಿದರಿಸಮಿತಿಯೊಡನೆ ಕಾದಿದರರೆಬರ್|| ೭೯

ಚಂ|| ಭುಗಭುಗನುರ್ಚಿ ಪಾಯ್ವ ಬಿಸುನೆತ್ತರ ಸುಟ್ಟುರೆಯಂ ನೆಲಕ್ಕೆ ಪ
ರ್ದುಗಳುಗಲೀಯದವ್ವಳಿಸಿ ಪೀರ್ವಿನಮೊರ್ಮೆಯೆ ಪೊಯ್ವ ಪೊಯ್ಗಳಿಂ|
ನೆಗೆದು ಮುಗಿಲ್ಗಳಿಟ್ಟೆಡೆಗಳೊಳ್ ತಲೆಗಳ್ ತೊಡರ್ದಿರ್ದ ಜೇನಪು
ಟ್ಟಿಗಳನೆ ಪೋಲ್ತುವೇಂ ಕಲಹಮಚ್ಚರಿಯಾಯ್ತೊ ತುರಂಗಸೈನ್ಯದೊಳ್|| ೮೦

ಮುಗಿಯುವವರೆಗೂ ಪ್ರಯೋಗಮಾಡಿ ಅದು ಮುಗಿಯಲು ಕತ್ತಿಯನ್ನು ಸೆಳೆದು ಎದುರೆದುರಿಗೆ ಬಂದು ಸೈನ್ಯದಲ್ಲಿ ಹೆಣೆದುಕೊಂಡು ಬಿಲ್ಗಾರರು ಆರ್ಭಟಮಾಡಿ ರಕ್ತ ಸಮುದ್ರವನ್ನು ಹರಿಯಿಸಿದರು. ವ|| ಹಾಗೆ ಎರಡು ಸೈನ್ಯದ ಬಿಲ್ಗಾರ ಸೈನ್ಯವೂ ಸತ್ತು ನಾಶವಾಗಲು ೭೬. ಹೊಳೆಯುತ್ತಿರುವ ಕತ್ತಿ, ತಳತಳಿಸುತ್ತಿರುವ ಮುಳ್ಳುಗೋಲು, ಕುಚ್ಚಿಲಿನಲ್ಲಿ ಸೇರಿ ಪ್ರಜ್ವಲಿಸುವ ಪಂಚರಾಯುಧ, ಹೆದರಿಸುವ ಆವುತಿ, ಲೇಪಮಾಡಿದಂತೆ ಒತ್ತಾಗಿ ಸೇರಿರುವ ಮಾಳಜಿಗೆ, ಜೀನುಹಾಕಿದ ಜಾತಿಯ ಕುದುರೆಗಳು -ಇವು ಭಯವನ್ನುಂಟುಮಾಡಲು ಕುದುರೆಯ ಸೈನ್ಯವು ಪ್ರಾಣವನ್ನಪಹರಿಸುವ ಹಾಗೆ ತಾಗಿದು. (ಟಿ|| ಇಲ್ಲಿ ಬರುವ ಪಂಚರಾಯುಧ, ಆವುತಿ, ಮಾಳಜಿಗೆ ಮೊದಲಾದುವುಗಳ ಅರ್ಥ ಅನಿರ್ದಿಷ್ಟ) ವ|| ಹಾಗೆ ಪ್ರಳಯಕಾಲದ ಕಾಡುಗಿಚ್ಚಿನ ಬೆಂಕಿಯು ಬರುವ ಹಾಗೆ ಎರಡು ಸೈನ್ಯದ ಸಾಮರ್ಥ್ಯವೂ ಕಿಚ್ಚು ಕಿಡಿಯಾಗಿ ದಳ್ಳಿಸಿ ತಾಗಿತು. ೭೭. ವಿಭಾಗ, ನೆಲ, ಜಲ, ಕುದುರೆಗಳ ಹೊಂದಾಣಿಕೆ, ಮೋಸ, ಮಾತ್ಸರ್ಯ, ಔದಾಸೀನ್ಯ, ವಾಹನದ ಆರೋಹಣ, ದಿಕ್ಕು ದೃಷ್ಟಿ ಮುಷ್ಟಿ, ಮುನ್ನುಗ್ಗುವಿಕೆ, ಹೆದರಿಸುವಿಕೆ, ಹಿಂದಿರುಗುವಿಕೆ, ಪುನ ಕಾಣಿಸಿಕೊಳ್ಳುವಿಕೆ ಇವು ವ್ಯಾಪ್ತವಾದ ಯುದ್ಧಕಾರ್ಯದ ಬಲ್ಮೆಯಲ್ಲಿ ಸಮನ್ವಯವಾಗಿರುವಂತೆ ಸೇರಿಕೊಂಡಿರಲು ತಾಗಿ ಯುದ್ಧಮಾಡುವಾಗ ಆ ಯುದ್ಧರಂಗವು ಪ್ರಕಾಶಮಾನವಾದ ಕಾಂತಿಯಿಂದ ಮಿಂಚಿನಲ್ಲಿ ಮುಸುಕಿದಂತಾಯಿತು. ೭೮. ಕೈಗತ್ತಿಯ ಪೆಟ್ಟಿನಿಂದ ಕೂಡಿದ ಶತ್ರುವಿನ ಹಸಿಯ ತಲೆ ಪಂಚರಾಯುಧದಿಂದ ಕೂಡಿದ ಪ್ರಕಾಶಮಾನವಾದ ಮುಂಡ, ಧರಿಸಿದ ಕವಚದೊಡನೆ ಕೂಡಿ ಹತ್ತಿರುವ ಕುದುರೆ, ಕಬ್ಬಿಣದ ಗಾಳ ಸಮೇತವಾಗಿ ಒಂದೇ ಬಾರಿಗೆ ಕೆಳಗೆ ಬೀಳಲು ಬಾಹುಬಲದ ಆಕ್ಯವು ಪರಾಕ್ರಮದಲ್ಲಿ ತೋರಿ ಬರುತ್ತಿರಲು ಪ್ರೌಢಿಮೆಯು ಉಂಟಾಗುವ ಹಾಗೆ ಕೆಲವರು ಯುದ್ಧರಂಗದಲ್ಲಿ ಬೆರಸಿ ಹೊಯ್ದಾಡಿದರು. ೭೯. ಎಡಬಿಡದೆ ಸುರಿಯುತ್ತಿರುವ ಕತ್ತಿಯ ಕಿಡಿಗಳಿಂದ ತಕ್ಷಣವೇ ಅರ್ಧ ಹತ್ತಿಕೊಂಡ ತೊಟ್ಟ ಕವಚವು ಉರಿಯುವುದಕ್ಕೆ ಮೊದಲಾಗಲು ಆ ಕವಚಗಳ ಜೋಡಣೆಯನ್ನು ಬಿರಿಯುವಂತೆ ಕತ್ತರಿಸಿ ಅನೇಕರು ಶತ್ರುಸಮೂಹದೊಡನೆ ಕಾದಿದರು. ೮೦. ಭುಗಭುಗನೆ ಸೀಳಿಕೊಂಡು ಹಾಯುವ ಬಿಸಿರಕ್ತದ ಪ್ರವಾಹವನ್ನು ನೆಲಕ್ಕೆ ಬೀಳಲು ಬಿಡದಂತೆ ಹದ್ದುಗಳು ಮೇಲಕ್ಕೆ ಹಾರಿ ಕುಡಿಯುತ್ತಿದ್ದುವು. ಒಂದೇ ಸಲ ಹೊಡೆದ ಹೊಡತದಿಂದ ಮೋಡಗಳ ಸಂದುಗಳೊಳಕ್ಕೆ

ವ|| ಅಂತೆರಡುಂ ಬಲದ ದೞಂಗಳ್ ಕೋಲಾಟಮಾಡುವಂತೆ ಕಿಱದಾನುಂ ಬೇಗಂ ತಟ್ಟುಪೊಟ್ಟೆಂದು ಕೋಲ್ಕುಟ್ಟಿ ಪತ್ತೆಂಟು ಸಾಸಿರ ಕುದುರೆಯಟ್ಟೆಯುಮೇೞೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ಕಾದಿ ಬಸಮೞದು ಪೆಱಪಿಂಗಿ ನಿಂದಾಗಳ್ ಪ್ರಳಯದುರಿಯನುರುಳಿ ಮಾಡಿದಂತಾನುಂ ಬಡವಾಗ್ನಿಯನನುವಿಸಿದಂತಾನುಂ ಬಱಸಿಡಿಲ ಕಿಡಿಗಳ ಬಳಗಮನೊಳಗು ಮಾಡಿದಂತಾನುಂ ಗೊಂದಣಿಸಿ ಸಂದಣಿಸಿ ನಿಂದಣಿಯನೆರಡುಂ ಬಲದ ಕಡಿತಲೆಯ ನಾಯಕರ್ ಕೆಯ್ಕೊಂಡು ಬಳ್ಳುಗೆಡೆದೆಕ್ಕೆವಾಱುವಾಱ ಪಲಗೆವಾಡಿ ಗೂಳಿಸೊರ್ಕಿ ಮಾರ್ಕೊಂಡು ಕಾದೆ-

ಕಂ|| ಪುಸಿ ನಸುವಂಚನೆ ನೋರ್ಪನು
ವಸಿದಗಲಿತು ತಕ್ಕುದಕ್ಕು ಪಗೆ ಕೆಯ್ಬಗೆ ಕೆ|
ಯ್ಕುಸುರಿ ನುಸುಳೆಂಬ ಕೇಣದ
ಕುಸುರಿಯನಱದಱದು ಮೆದು ನೆದುಱದರೆಬರ್|| ೮೧

ಬಱಸಿಡಿಲೆಱಪಂತಿರೆ ಬಂ
ದೆಱಗಿದರಂ ತಳ್ತು ಬಾಳ ಕೀೞ್ಮೊನೆಯಿಂ ತ
ಳ್ತಱದಱದುಬ್ಬರಮೆಂಬಿವ
ನಱದಿಱದಿರ್ ಪೆಣಬಣಂಬೆಗಳ್ ನೆಗೆವಿನೆಗಂ|| ೮೨

ಚಾರಿಸಿ ಬಾಳಾಗಮಮವ
ತಾರಂ ಗೆಯ್ದಂತೆ ಕಾಲದಂತಕನನೆ ಪೋ|
ಲ್ತಾರುತ್ತುಂ ಕವಿವದಟರ
ನೋರೊಂದೋರೊಂದೆವೊಯ್ದು ಕೊಂದರ್ ಪಲರಂ|| ೮೩

ಬಾಳ್ವಾಳ್ಗಳ ಘಟ್ಟಣೆಯೊಳ್
ಬಳ್ವಳ ಬಳೆದೊಗೆದು ನೆಗೆದ ಕಿಡಿಗಳ ಬಂಬ|
ಲ್ಗಳ್ವೆರಸು ಪೊಳೆದು ನೆಗೆದುದು
ಬಾಳ್ವೊಗೆ ಕಾಱಮುಗಿಲ್ ಬಳ್ಳಿಮಿಂಚಿನಿಂದುಳ್ಕುವವೋಲ್|| ೮೪

ತಲೆ ನೆಲದೊಳುರುಳ್ದೊಡಂ ಮೆ
ಯ್ಗಲಿಯೊರ್ವಂ ಪಿಡಿದು ತಲೆಯನಿಟ್ಟಟ್ಟೆಯೊಳ|
ಗ್ಗಲಿಸಿದ ಮುಳಿಸಿಂ ಮಾಟದ
ತಲೆಯಿಟ್ಟಾಡುವನನಿನಿಸು ಪೋಲ್ತನುಗೆಯ್ದಂ|| ೮೫

ಹಾರಿ ಸಿಕ್ಕಿಕೊಂಡಿರುವ ತಲೆಗಳು ಜೇನಿನ ಗೂಡುಗಳನ್ನೇ ಹೋಲಿದುವು. ಕುದುರೆಯ ಸೈನ್ಯದಲ್ಲಿ ಕಾಳಗವು ಎಷ್ಟು ಆಶ್ಚರ್ಯಕರವಾಯಿತೋ? ವ|| ಹಾಗೆ ಎರಡು ಸೈನ್ಯದ ಸಾಮಾನ್ಯದಳಗಳೂ ಕೋಲಾಟವಾಡುವ ಹಾಗೆ ಸ್ವಲ್ಪ ಹೊತ್ತುಥಾಟ್ ಪೆಟ್ ಎಂದು ಬಾಣಗಳಿಂದ ಹೊಡೆದಾಡಲು ಹತ್ತೆಂಟುಸಾವಿರ ಕುದುರೆಯ ಶರೀರಗಳು ನಾಶವಾದವು. ಏಳೆಂಟು ಸಮುದ್ರಗಳು ಸಮುದ್ರವನ್ನೂ ಮುಂದಕ್ಕೆ ನೂಕುವಂತೆ ಹರಿದುವು. ಅಶ್ವಾರೋಹಿಗಳು ಕಾದಿ ಶಕ್ತಿಗುಂದಿ ಹಿಂಜರಿದು ನಿಂದಾಗ ಎರಡು ಪಕ್ಷದ ಕತ್ತಿಯ ನಾಯಕರು ಪ್ರಳಯಕಾಲದ ಉರಿಯನ್ನು ಉಂಡೆಮಾಡಿದ ಹಾಗೂ ಬಡಬಾಗ್ನಿಯನ್ನು ಒಟ್ಟುಗೂಡಿಸಿದ ಹಾಗೂ ಬರಸಿಡಿಲಿನ ಕಿಡಿಗಳ ಸಮೂಹವನ್ನು ತನ್ನಲ್ಲಿ ಸೇರಿಕೊಂಡ ಹಾಗೂ ಗುಂಪಾಗಿ ಒಂದುಕೂಡಿ ನಿಂತ ಸೇನೆಯ ಸಾಲನ್ನು ವಹಿಸಿಕೊಂಡು ನರಿಯಂತೆ ಕೂಗಿ ಒಂದೇ ನೆಗೆತವನ್ನು ಹಾರಿ ಕತ್ತಿಗಳನ್ನು ಝಳಪಿಸಿ ಸೊಕ್ಕಿನಿಂದ ಪ್ರತಿಭಟಿಸಿ ಕಾದಿದರು. ೮೧. ಪುಸಿ, ನಸುವಂಚನೆ, ನೋರ್ಪನುವಿಸಿದಗಲಿತು, ತಕ್ಕುದಕ್ಕು, ಪಗೆ, ಕಯ್ಬಗೆ, ಕಯ್ಕುಸುರಿ, ನುಸುಳು, ಎನ್ನುವ ಮಾತ್ಸರ್ಯದ ಸೂಕ್ಷ್ಮ ವಿವರವನ್ನು ತಿಳಿದು ದಕ್ಷತೆಯಿಂದ ಹೊಡೆದು ಕೆಲವರು ಉತ್ಸಾಹಶೂನ್ಯರಾಗದೆ ಹೊಯ್ದಾಡಿದರು. ೮೨. ಬರಸಿಡಿಲು ಮೇಲೆ ಬೀಳುವಂತೆ ಮೇಲೆ ಬಿದ್ದವರನ್ನು ಸಂಸಿ ಕತ್ತಿಯ ಕೆಳತುದಿಯಿಂದ ಚೂರುಚೂರಾಗಿ ತರಿದು ಉಬ್ಬರ (?) ವೆಂಬುದನ್ನು ತಿಳಿದು ಹೆಣದ ರಾಶಿಗಳು ಬೀಳುವವರೆಗೆ ಹೊಡೆದಾಡಿದರು. ೮೩. ಶಸ್ತ್ರಶಾಸ್ತ್ರವೇ ಅವತಾರಮಾಡಿದ ಹಾಗೆ ಕತ್ತಿಯನ್ನು ಝಳಪಿಸಿ ಪ್ರಳಯಕಾಲದ ಯಮನ ಹಾಗೆ ಆರ್ಭಟ ಮಾಡುತ್ತ ಮೇಲೆ ಬೀಳುವ ಪರಾಕ್ರಮಶಾಲಿಗಳನೇಕರನ್ನು ಒಂದೊಂದೇ ಸಲ ಹೊಡೆದು ಕೊಂದರು. ೮೪. ಕತ್ತಿಕತ್ತಿಗಳ ತಗಲುವಿಕೆಯಿಂದ ಹುಟ್ಟಿ ಹೆಚ್ಚಿ ಮೇಲಕ್ಕೆ ಹಾರಿದ ಕಿಡಿಗಳ ಸಮೂಹದಿಂದ ಕೂಡಿದ ಕತ್ತಿಯ ಹೊಗೆಯು ಮಳೆಗಾಲದ ಮೋಡವು ಬಳ್ಳಿಮಿಂಚಿನಿಂದ ಪ್ರಕಾಶಿಸುವ ಹಾಗೆ ಹೊಳೆದು ಮೇಲಕ್ಕೆ ಹಬ್ಬಿತು. ೮೫. ತಲೆಯು ನೆಲದಲ್ಲಿ ಉರುಳಿದರೂ ಶೂರನೊಬ್ಬನು ಆ

ಈ ಪದ್ಯದಲ್ಲಿ ಸುರಗಿಕಾಳಗದ ಹಲವು ಪರಿಭಾಷಾ ಶಬ್ದಗಳಿವೆ. ಅವುಗಳ ಅರ್ಥ ಸ್ಪಷ್ಟವಲ್ಲದುದರಿಂದ ಪದ್ಯದ ಅರ್ಥವೂ ಅಸ್ಪಷ್ಟ.

ವ|| ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱದುಪೊೞ್ತು ಕಾದಿ ನಿಂದಾಗಳ್-

ಉ|| ಮಾರುತ ಘಾತ ಸಂಚಳಿತ ಕೇತು ಸಮೂಹಮುದಗ್ರ ಚಕ್ರ ಚೀ
ತ್ಕಾರಮುದಾರ ವೀರಭಟ ಸಿಂಹನಿನಾದ ವಿಮಿಶ್ರಿತೋತ್ಕಟ|
ಜ್ಯಾರಾವಮಂಬರತರಮನಳ್ಳಿಱದವ್ವಳಿಪನ್ನೆಗಂ ಶಾರಾ
ಸಾರದಗುರ್ವು ಪರ್ವಿನಿಲೆ ತಾಗಿದುವುಗ್ರರಥಂ ರಥಾಳಿಯೊಳ್|| ೮೬

ವ|| ಅಂತು ತಾಗಿದಾಗಳ್

ಚಂ|| ಕುದುರೆಯ ಬಣ್ಣದಿಂ ರಥದ ತೋರ್ಕೆಯಿನೆತ್ತಿದ ಚಿತ್ರಕೇತು ವೃಂ
ದದ ಕುಱುಪಿಂದುದಗ್ರ ರಥಚೋದಕ ಚಿಹ್ನದಿನಾತನೀತನೆಂ|
ಬುದನಱದೊರ್ವರೊರ್ವರನೆ ಮಚ್ಚರದಿಂ ಗಱಸನ್ನೆಗೆಯ್ದಿದಿ
ರ್ಚಿದ ಪದದೊಳ್ ಪತತ್ರಿಮಯಮೆಂಬಿನಿತಾಯ್ತು ಸಮಸ್ತ ದಿಕ್ತಟಂ|| ೮೭

ಕಂ|| ಪರಶು ಶರ ನಿಕರದಿಂ ಕು
ಮ್ಮರಿಗಡಿದವೊಲೊಡನೆ ಕಡಿಯೆ ರಥಿಗಳ್ ರಥದಿಂ|
ಧರೆಗಿೞದು ವಿರಥರತಿರಥ
ರರೆಬರ್ ಮೇಲ್ವಾಯ್ದು ರಥಿಗಳಂ ಸುರಿಗಿಱದರ್|| ೮೮

ತೇರಂ ಪಾಯಿಸಿ ನೋಯಿಸಿ
ಪಾರುವ ಕುದುರೆಗಳನರೆಬರೆರ್ದೆಯುರಿಯೆಚ್ಚರ್|
ಸಾರಥಿಯ ರಥಿಯ ತಲೆಗಳ
ನೋರೊಂದಸ್ತ್ರದೊಳೆ ಪಾಱ ಜೀೞನೆಗಂ|| ೮೯

ನೆತ್ತರ ಕೆಸಳ್ ಗಾಲಿಗ
ಳೆತ್ತಂ ತಳರದೆ ಜಿಗಿಲ್ತು ನಿಲೆ ಧರೆಗಿೞದಾ|
ರ್ದೆತ್ತಿ ಪರಿಯಿಸಿದರೇಂ ಮೆ
ಯ್ವೆತ್ತುದೊ ರಥಕಲ್ಪಮಲ್ಲಿ ಸೂತರ್ ಕೆಲಬರ್|| ೯೦

ವ|| ಅಂತುಭಯ ವರೂಥಿನಿಯ ವರೂಥಂಗಳ್ ಮಲ್ಲಾಮಲ್ಲಿಯಾಗೆ ಕಾದುವಾಗಳ್-

ತಲೆಯನ್ನು ಹಿಡಿದು ಮುಂಡದಲ್ಲಿಟ್ಟುಕೊಂಡು ಅಕವಾದ ಕೋಪದಿಂದ ಕೃತಕವಾದ ತಲೆಯನ್ನು ಧರಿಸಿ ಆಟವಾಡುವವನನ್ನು ಸ್ವಲ್ಪಮಟ್ಟಿಗೆ ಅನುಕರಿಸಿ ಕಾದಿದನು. ವ|| ಹಾಗೆ ಸೇನಾಸಮೂಹವು ಭಯಪಡದೆ ಮತ್ಸರಿಸಿ ಜಗಳವಾಡಿ ಸ್ವಲ್ಪ ಕಾಲ ಕಾದಿ ನಿಂತರು. ೮೬. ಗಾಳಿಯ ಹೊಡೆತದಿಂದ ಚಲಿಸುತ್ತಿರುವ ಬಾವುಟಗಳ ಸಮೂಹವೂ ಎತ್ತರವಾದ ಚಕ್ರಗಳ ಚೀತ್ಕಾರ ಶಬ್ದವೂ ಶ್ರೇಷ್ಠರಾದ ವೀರಭಟರ ಸಿಂಹನಾದದಿಂದ ಕೂಡಿದ ಅತ್ಯಕವಾದ ಬಿಲ್ಲಿನ ಹೆದೆಯ ಟಂಕಾರಧ್ವನಿಯೂ ಆಕಾಶಪ್ರದೇಶದ ಒಳಭಾಗವನ್ನು ನಡುಗುವಂತೆ ಮಾಡಿ ಪ್ರವೇಶಿಸಿದುವು. ಬಾಣದ ಮಳೆಯು ವಿಶೇಷವಾಗಿ ಹಬ್ಬು ಹರಿಯಿತು. ಭಯಂಕರವಾದ ರಥಗಳು ರಥಸಮೂಹದೊಡನೆ ತಾಗಿದುವು. ವ|| ಹಾಗೆ ತಾಗಿದಾಗ- ೮೭. ಕುದುರೆಯ ಬಣ್ಣದಿಂದಲೂ ರಥಗಳ ತೋರಿಕೆಯಿಂದಲೂ ಎತ್ತಿ ಕಟ್ಟಿರುವ ಚಿತ್ರಖಚಿತವಾದ ಧ್ವಜಗಳ ಗುರುತಿನಿಂದಲೂ ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದಲೂ ಪರಸ್ಪರ ಪರಿಚಯ ಮಾಡಿಕೊಂಡು (ಗುರುತು ಹಿಡಿದು) ಒಬ್ಬರನೊಬ್ಬರು ಮತ್ಸರದಿಂದ ಬಾಣದ ಗರಿಯ ಮೂಲಕ ಸನ್ನೆಮಾಡಿ ಎದುರಿಸಿದ ಸಂದರ್ಭದಲ್ಲಿ ಸಮಸ್ತವಾದ ದಿಕ್ತಟವೂ ಬಾಣಮಯವೆನ್ನುವ ಹಾಗಾಯಿತು. ೮೮. ಕೊಡಲಿಯಾಕಾರದ ಬಾಣಗಳ ಸಮೂಹದಿಂದ ಕಾಡಿನ ಮರಗಳನ್ನು ತರಿಯುವಂತೆ ತಕ್ಷಣವೇ ತರಿದುಹಾಕಲು ರಥದಲ್ಲಿದ್ದವರು ಭೂಮಿಗಿಳಿದು ರಥವಿಲ್ಲದ ಅನೇಕ ಅತಿರಥರ ಮೇಲೆ ಬಿದ್ದು ರಥದಲ್ಲಿದ್ದವರನ್ನು ಕತ್ತಿಯಿಂದ ಕತ್ತರಿಸಿದರು. ೮೯. ಕೆಲವರು ತೇರನ್ನು ಹರಿಯಿಸಿ ಹಾರುತ್ತಿರುವ ಕುದುರೆಗಳನ್ನು ನೋಯಿಸಿ ಸಾರಥಿಯ ಮತ್ತು ರಥದೊಳಗಿರುವವನ ತಲೆಗಳನ್ನು ಒಂದೇ ಬಾಣದಿಂದ ಹಾರಿ ಜೀರೆಂದು ಶಬ್ದ ಮಾಡುವ ಹಾಗೆ ಹೊಡೆದರು. ೯೦. ರಕ್ತದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿ ಯಾವ ಕಡೆಯೂ ಚಲಿಸದೆ ಅಂಟಿಕೊಂಡು ನಿಲ್ಲಲು ಭೂಮಿಗಿಳಿದು ಆರ್ಭಟಮಾಡಿ ಕೆಲವರು ಸೂತರು ಎತ್ತಿ ಹರಿಯುವ ಹಾಗೆ ಮಾಡಿದರು. ಆ ಸಮಯದಲ್ಲಿ ಅಲ್ಲಿ ಅವರ ರಥಕಲ್ಪಕೌಶಲವು ಅದ್ಭುತವಾಗಿದ್ದಿತು. ವ|| ಹಾಗೆ ಎರಡುಸೈನ್ಯದ ತೇರುಗಳು ಪರಸ್ಪರ

ಮ|| ಉಡಿದಿರ್ದಚ್ಚೞದೀಸು ತೞದ ನೊಗಂ ಜೀೞ್ದ ಚಕ್ರಂ ಸಿಡಿಲ್
ಪೊಡೆದಂತೊರ್ಮೆಯೆ ಸೂಸಿ ಪಾಱದ ಮಡಂ ನುರ್ಗಾದ ಕೀಲ್ ಸಾಯಕಂ|
ನಡೆ ನೊಂದೆಯ್ದೆ ಸುರುಳ್ದುರುಳ್ದ ತುರಗಂ ಸುರ್ಕಿರ್ದ ಸೂತಂ ಕಡಲ್
ಕಡಲಂ ಮುಟ್ಟಿ ತೆರಳ್ವ ನೆತ್ತರ ಪೊನಲ್ ಕಣ್ಗೊಂಡುದುಗ್ರಾಜಿಯೊಳ್|| ೯೧

ವ|| ಅಂತು ಪತ್ತೆಂಟು ನೆತ್ತರ ಕಡಲ್ ಕಡಲನಟ್ಟೆಯುಂ ವರೂಥಯೂಥಂಗಳಳ್ಕಿ ಮೆಳ್ಕಿದಂತಾದಾಗಳ್-

ಉ|| ಇಕ್ಕಿದ ಲೋಹವಕ್ಕರೆಯ ಕರ್ಪುಗಳಿಂ ಕವಿತರ್ಪ ವಿಂಧ್ಯ ಶೈ
ಲಕ್ಕೆಣೆಯಾಗೆ ಜೋದರಿಸುವಂಬಿನ ಬಲ್ಸರಿ ತಿಣ್ಣಮಾಗಿ ಕೆ|
ಯ್ಮಿಕ್ಕು ವಿರೋ ಸಾಧನ ಘಟಾಳಿಯನೋಡಿಸಲಾಗಳಾರ್ದು ಬಿ
ಟ್ಟಕ್ಕಿದರುಗ್ರ ಸಿಂಧುರ ಘಟಾವಳಿಯಂ ಮುಳಿಸಿಂ ನಿಷಾದಿಗಳ್|| ೯೨

ಶಾ|| ಆದಿತ್ಯಂ ಮಸುಳ್ವನ್ನೆಗಂ ಧ್ವಜ ಘಟಾಟೋಪಂಗಳಿಂದಂ ಲಯಾಂ
ಭೋದಂಗಳ್ ಕವಿವಂತೆವೋಲ್ ಕವಿವುದುಂ ಕಾಲ್ಗಾಪು ಕಾಲ್ಗಾಪಿನೊಳ್|
ಜೋದರ್ ಜೋದರೊಳಾನೆಯಾನೆಯೊಳಗುರ್ವಪ್ಪನ್ನೆಗಂ ಕಾದೆ ಕ
ಣ್ಗಾದಂ ಚೆಲ್ವೆಸೆದತ್ತು ಮೂಱು ನೆಲೆಯಿಂ ಮಾದ್ಯದ್ಗಜೇಂದ್ರಾಹವಂ|| ೯೩

ವ|| ಅಂತಾ ದಂತಿಘಟೆಗಳನಾರೋಹಕರ್ ತೋಱಕೊಟ್ಟೊಂದೊಂದರ್ಕೆ ಮೊಗಂಬುಗಿಸಿದಾಗಳುಭಯವ್ಯಾಳದಂತಿ ವಧ್ಯಕ್ರಮಂಗಳೊಳ್ ಭಾರ್ಗವರ್ ಸುರಿಗಿಱವಂತಿಱಯೆ ಸೂಸುವ ಕೆನ್ನೆತ್ತರ್ ಕೞಲ್ದುದಿರ್ವ ಸಕ್ಕದ ಸಿಪ್ಪುಗಳುಂ ಸಿಡಿಲ್ದು ಜೀೞ್ವ ಕೋೞ್ಕಳುಮಗುರ್ವಂ ಪಡೆಯೆ-

ಚಂ|| ನಡುವ ಸರಲ್ಗೆ ಮೆಯ್ಯೊಳಗಡಂಗುವ ಸಂಕುಗೆ ದಿಂಕುಗೊಳ್ವ ಕ
ಕ್ಕಡೆಗಿದಿರುರ್ಚುವಿಟ್ಟಿಗಿದಿರಾನೆಯ ಕೋೞ್ಕಳ ಕೋಳ್ಗೆ ನೊಂದು ಬಾ|
ಯ್ವಿಡದಿನಿಸಪ್ಪೊಡಂ ಪೆಳಱದಳ್ಕದೆ ಪಾವಿನಲಿಟ್ಟವೋಲ್ ಪೊಡ
ರ್ಪುಡುಗದೆ ಬಿೞ್ದುವಿರ್ದ ನೆಲೆಯಿಂ ಕೆಳವುನ್ಮದ ಗಂಧಸಿಂಧುರಂ|| ೯೪

ಎದುರೆದುರಿಗೆ ಯುದ್ಧ ಮಾಡುತ್ತಿರಲು ೯೧. ಒಡೆದುಹೋದ ಅಚ್ಚಿನ ಮರವೂ ನಾಶವಾದ ಇರಚಿನ ಮರವೂ ತಗ್ಗಿಹೋದ ನೊಗವೂ ಜೀರೆಂದು ಶಬ್ದಮಾಡುತ್ತಿರುವ ಚಕ್ರಗಳೂ ಸಿಡಿಲು ಹೊಡೆದ ಹಾಗೆ ಒಂದೇ ಸಲ ಹಾರಿದ ಪಾರೆಯ ಮರವೂ ಜಜ್ಜಿಹೋದ ಕೀಲೂ, ಬಾಣವು ನಾಟಲಾಗಿ ನೊಂದು ಸಂಪೂರ್ಣವಾಗಿ ಸೊರಗಿಕೊಂಡು ಬಿದ್ದ ಕುದುರೆಯೂ ಸಮುದ್ರವು ಸಮುದ್ರವನ್ನು ಮುಟ್ಟುವಂತೆ ಹರಿದ ರಕ್ತಪ್ರವಾಹವೂ ಯುದ್ಧಭೂಮಿಯಲ್ಲಿ ಭಯಂಕರವಾಗಿ ಕಂಡವು. ವ|| ಹಾಗೆ ಹತ್ತೆಂಟು ಸಮುದ್ರವನ್ನು ಹಿಮ್ಮೆಟ್ಟಿಸಲು ರಥಸಮೂಹಗಳು ಸಂಪೂರ್ಣವಾಗಿ ನಾಶವಾದವು. ೯೨. ತೊಡಿಸಿದ ಗುಳದಿಂದ ಕೂಡಿದ ಕಪ್ಪುಬಣ್ಣದ ಆನೆಗಳು ಮೇಲೆ ಕವಿದುಬೀಳುವ ವಿಂಧ್ಯಪರ್ವತಕ್ಕೆ ಸಮಾನವಾಗಿರಲು ಮಾವಟಗರು ಪ್ರಯೋಗಿಸುವ ಬಾಣದ ಬಲವಾದ ಮಳೆಯು ಅಕವಾಗಿ ಕೈಮೀರಿ ಶತ್ರುಪಕ್ಷದ ಆನೆಯ ಸಮೂಹವನ್ನು ಓಡಿಸಲು ಆಗ ಘಟ್ಟಿಯಾಗಿ ಕೂಗಿಕೊಂಡು ಮಾವಟಿಗರು ಭಯಂಕರವಾದ ಆನೆಯ ಸಮೂಹವನ್ನು ಛೂಬಿಟ್ಟರು. ೯೩. ಸೂರ್ಯನು ಕಾಂತಿಹೀನನಾಗುವ ಹಾಗೆ ಧ್ವಜದಿಂದ ಕೂಡಿದ ಆನೆಗಳು ವಿಜೃಂಭಣೆಯಿಂದ ಪ್ರಳಯಕಾಲದ ಮೋಡಗಳು ಮುತ್ತುವ ಹಾಗೆ ಮುತ್ತಲು ಪದಾತಿ ಸೈನ್ಯವು ಪದಾತಿಗಳೊಡನೆಯೂ ಮಾವಟಿಗರು ಮಾವಟಿಗರೊಡನೆಯೂ ಭಯವುಂಟಾಗುವ ಹಾಗೆ ಕಾದುತ್ತಿರಲು ಆ ಮದ್ದಾನೆಗಳ ಕಾಳಗವು ಮೂರು ಅವಸ್ಥೆಗಳಲ್ಲಿಯೂ ಕಣ್ಣಿಗೆ ಸುಂದರವಾಗಿದ್ದಿತು. ವ|| ಹಾಗೆ ಆ ಮಂದೆಯ ಸಮೂಹಗಳನ್ನು ಮೇಲಿದ್ದ ಮಾವಟಿಗರು ಛೂಬಿಟ್ಟು ಒಂದಕ್ಕೊಂದಕ್ಕೆ ವಿದಾಯಮಾಡಿಸಿದಾಗ ಎರಡು ಕಡೆಯ ತುಂಟಾನೆಗಳೂ ಕೊಲ್ಲುವ ವಿಧಾನಗಳಲ್ಲಿ ಧನುರ್ಧರರು ಕತ್ತಿಯಿಂದ ಇರಿಯುವಂತೆ ಇರಿಯಲು ಚೆಲ್ಲುವ ರಕ್ತವೂ ಸಡಿಲವಾಗಿ ಕೆಳಗೆ ಬೀಳುವ ಕಟವಾಯಿಚಪ್ಪುಗಳೂ ಜೀರೆಂದು ಸಿಡಿಯುವ ಕೊಂಬುಗಳೂ ಭಯವನ್ನುಂಟುಮಾಡಿದುವು. ೯೪. ಶರೀರದೊಳಕ್ಕೆ ನಾಟಿಕೊಳ್ಳುವ ಬಾಣಗಳಿಗೂ ಮೆಯ್ಯೊಳಕ್ಕೆ ಹೋಗಿ ಅಡಗಿಕೊಳ್ಳುವ ಕಠಾರಿಗಳಿಗೂ ಹಾರಿ ಬರುವ ಮುಳ್ಳು ಕೋಲುಗಳಿಗೂ ಎದುರಾಗಿ ಚುಚ್ಚಿ ಬರುತ್ತಿರುವ ಈಟಿಗಳಿಗೂ ಆನೆಯ ಕೊಂಬುಗಳ ತಿವಿತಕ್ಕೂ ನೊಂದು ಕೂಗಿಕೊಳ್ಳದೆ ಸ್ವಲ್ಪವೂ ಹೆದರದೆ ಶಕ್ತಿಗುಂದದೆ ಹಾವಿನಿಂದ

ಕಂ|| ಪಾಱುವ ಪಾಱುಂಬಳೆ ಕೊಳೆ
ಜೀೞ್ದಂಬರಕೆ ತಲೆ ಸಿಡಿಲ್ದೊಡಮಾ ಕಾ|
ಯ್ಪಾಱದೆ ಹರಣಂಗೆಯ್ದುವು
ಜಾಱಲ್ಲದೆ ಜೋದರಟ್ಟೆಗಳ್ ಕೆಲವಾಗಳ್|| ೯೫

ಚಂ|| ಕಣಕೆನೆ ಚಕ್ರತೀವ್ರ ತಲೆ ಪೋದೊಡೆ ಜೋದರಟ್ಟೆ ಸಂ
ದಣಿಸಿದ ಬಂಧದಿಂ ಬಿಸುಗೆಯೊಳ್ ನೆಲಸಿರ್ದೆಸೆದಾಡೆ ನಟ್ಟ ಕೂ|
ರ್ಗಣೆವೆರಸಿರ್ದ ಕೂರ್ಗಣೆಗಳುಚ್ಚಳಿಸುತ್ತಿರೆ ಸುಯ್ದು ಪುಣ್ಣತಿಂ
ಥಿಣಿಗಳಿನಂದಗುರ್ವುವೆರಸಾಡಿದುವೊಂದೆರಡಾನೆಯಟ್ಟೆಗಳ್|| ೯೬

ಕಂ|| ಆನಿರೆಯೇನಿಱವುದು ಗಡ
ಮೀ ನಾಲ್ಕುಂ ಬಲಮಿದಲ್ತೆ ಪರಿಭವಮೆನಗಂ|
ದೇನುಂ ಮಾಣದೆ ಭೀಮನ
ನೂನಬಲಂ ಬಂದು ತಾಗಿದಂ ಕುರುಬಲದೊಳ್|| ೯೭

ವ|| ಅಂತು ಕುರುಬಲದ ಕರಿಘಟೆಗಳಂ ನುಂಗುವಂತೆ ದೆಸೆದೆಸೆಗೆ ಮಿಳಿರ್ದು ಮಿಳ್ಳಿಸಿದ ಸಿಂಗದ ಪೞವಿಗೆಯುಂ ಕುರುಬಲಕ್ಕೆ ಮಿೞ್ತು ಪಲ್ಮೊರೆವಂತೆ ಮೊರೆದು ಪರಿವ ತನ್ನ ಕಿಸುವೊನ್ನ ರಥಮುಂ ಭಯಂಕರಾಕಾರಮಾಗೆ ಪಗೆವರ ಗಂಟಲನೊತ್ತುವಂತೆ ಪೌಂಡ್ರಮೆಂಬ ಶಂಖಮನೊತ್ತಿ ಮುಂದೊಡ್ಡಿದೊಡ್ಡೆಲ್ಲಮನಂಬಿನ ಬಂಬಲೊಳೆ ಪಡಲ್ವಡಿಸುತ್ತುಂ ಬರ್ಪ ಭೀಮಸೇನಂಗೆ ದುರ್ಯೋಧನನ ದಿರದಿದಿರಾಂತಾಗಳ್-

ಉ|| ಎಂತಿದಿರಾಂತೆಯಂತೆ ಕಲಿಯಾಗೊಳಸೋರದಿರೆಂದು ಭೀಮನೋ
ರಂತೆ ಕನಲ್ದು ತಿಣ್ಣಮಿಸೆ ಪಾಯ್ವ ಸರಲ್ಗಳನೆಯ್ದಲೀಯದಾಂ|
ತಾಂತು ನಿರಂತರಂ ತಱದು ಸೂತನನಾತನ ವಾಜಿಯಂ ಮಹೀ
ಶಂ ತೆಗೆದೆಚ್ಚನಚ್ಚ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ|| ೯೮

ಕಂ|| ಇಸೆ ಮಸಗಿ ಭೀಮನೀರ
ಯ್ದು ಶಿತಾಸ್ತ್ರದಿನುರುಳೆ ಸೂತನುಡಿಯೆ ರಥಂ ಕೀ|
ಲಿಸೆ ಕುದುರೆ ಮುಱಯೆ ಪೞವಿಗೆ
ಮಸಕದಿನೆಚ್ಚೆಚ್ಚನೊಂದೆ ಸರಲೊಳ್ ನೊಸಲಂ|| ೯೯

ಹೊಡೆದ ಹಾಗೆ ಸಾಮರ್ಥ್ಯವನ್ನು ಕಡಿಮೆಮಾಡಿಕೊಳ್ಳದೆ ಕೆಲವು ಮದ್ದಾನೆಗಳು ತಾವಿದ್ದ ಸ್ಥಳದಿಂದಲೇ ಉರುಳಿದುವು. ೯೫. ಹಾರಿ ಬರುವ ಚಕ್ರಾಯುಧವು ತಲೆಗಳನ್ನು ಕತ್ತರಿಸಿ ಜೀರೆಂದು ಶಬ್ದಮಾಡುತ್ತ ಆಕಾಶಕ್ಕೆ ಸಿಡಿದರೂ ಮಾವಟಿಗರ ಕೆಲವು ಮುಂಡಗಳು ಆಗ ಉತ್ಸಾಹಗುಂದದೆ ಹಿಂಜರಿಯದೆ ಶತ್ರುಗಳ ಪ್ರಾಣಾಪಹಾರ ಮಾಡಿದುವು. ೯೬. ಹರಿತವಾದ ಚಕ್ರಾಯುಧದ ಪೆಟ್ಟಿನಿಂದ ತಲೆಗಳು ಕಣಕ್ಕೆಂದು ಕತ್ತರಿಸಿ ಹೋದರೂ ಮಾವಟಿಗರ ಮುಂಡಗಳು ಗುಂಪಾಗಿ ಸೇರಿ ಅಂಬಾರಿಯಲ್ಲಿಯೇ ಇದ್ದು ಸೊಗಸಾಗಿ ನೆಗೆದು ಕುಣಿದುವು. ಹರಿತವಾದ ಬಾಣಗಳು ನಾಟಿಕೊಂಡಿದ್ದರೂ ತೀವ್ರ ಬಾಣಗಳು ಮೇಲಕ್ಕೆದ್ದು ಹಾರುತ್ತಿದ್ದರೂ ಆರುತ್ತಿದ್ದ ಹುಣ್ಣಿನ ಸಮೂಹಗಳು ಭಯಂಕರವಾಗಿ ಕಾಣುತ್ತಿದ್ದರೂ ಒಂದೆರಡು ಆನೆಯ ಮುಂಡಗಳು ಅದ್ಭುತವಾಗಿ ಕುಣಿದಾಡಿದುವು. ವ|| ಹಾಗೆ ಎರಡು ಸೈನ್ಯದ ಆನೆಯ ಸಮೂಹಗಳು ತಗುಲಿ ಅಪ್ಪಳಿಸಿ ಹೊಡೆಯಲು ಬಿಸಿರಕ್ತದ ಜರಿಗಳು ಉಬ್ಬಿ ಹರಿದುವು. ದೊಡ್ಡ ಝರಿಗಳಿಂದ ಕೂಡಿದ ಕೆಂಪುಕಲ್ಲಿನ ಬೆಟ್ಟಗಳಂತೆ ಆನೆಗಳು ಕೆಳಗೆ ಬಿದ್ದು ನಾಶವಾಗಿ ರಾಶಿಯಾದುವು. ೯೭. ‘ಈ ಚತುರಂಗಬಲವು ನಾನಿದ್ದರೂ ಯುದ್ಧ ಮಾಡುತ್ತದೆಯಲ್ಲವೇ? ಇದಲ್ಲವೇ ನನಗೆ ಅವಮಾನಕರ’ ಎಂದು ಯಾವುದನ್ನೂ ಲಕ್ಷಿಸದೆ ಸ್ವಲ್ಪವೂ ಕಡಿಮೆಯಿಲ್ಲದ ಶಕ್ತಿಯುಳ್ಳ ಭೀಮನು ಕೌರವಸೈನ್ಯವನ್ನು ಬಂದು ತಾಗಿದನು. ವ|| ಕೌರವಸೈನ್ಯದ ಆನೆಗಳ ಸಮೂಹವನ್ನು ನುಂಗುವ ಹಾಗೆ ದಿಕ್ಕುದಿಕ್ಕಿಗೂ ಕಂಪಿಸಿ ಚಲಿಸುತ್ತಿದ್ದ ಸಿಂಹಧ್ವಜವೂ ಕೌರವಸೈನ್ಯಕ್ಕೆ ಮೃತ್ಯುದೇವತೆಯೇ ಹಲ್ಲುಕಡಿಯುವಂತೆ ಶಬ್ದಮಾಡಿಕೊಂಡು ಬರುತ್ತಿದೆಯೋ ಎಂಬಂತೆ ಹರಿದು ಬರುತ್ತಿದ್ದ ತಾಮ್ರದ ತೇರೂ ಭಯಂಕರವಾಗಿರಲು ಶತ್ರುಗಳ ಗಂಟಲನ್ನು ಒತ್ತುವ ಹಾಗೆ ಪೌಂಡ್ರವೆಂಬ ಶಂಖವನ್ನು ಊದುತ್ತ, ಮುಂದೆ ಒಡ್ಡಿದ್ದ ಸೈನ್ಯವೆಲ್ಲವನ್ನೂ ಬಾಣಗಳ ಸಮೂಹದಿಂದ ಕೆಳಗೆ ಉರುಳಿಸುತ್ತ ಬರುತ್ತಿದ್ದ ಭೀಮಸೇನನಿಗೆ ಹೆದರದೆ ದುರ್ಯೋಧನನು ಪ್ರತಿಭಟಿಸಿದನು- ೯೮. ಹೇಗೆ ಎದುರಿಸಿದೆಯೋ ಹಾಗೆಯೇ ಶೂರನೂ ಆಗು; ಹಿಂಜರಿಯಬೇಡ ಎಂದು ಭೀಮನು ಒಂದೇ ಸಮನಾಗಿ ಕೋಪಿಸಿಕೊಂಡು ಬಲವಾಗಿ ಬಾಣಪ್ರಯೋಗ ಮಾಡಲು (ಹಾಗೆ) ಹಾರಿಬರುತ್ತಿದ್ದ ಬಾಣಗಳು ತನ್ನಲ್ಲಿಗೆ ಬರಲು ಅವಕಾಶಮಾಡದೆ ದುರ್ಯೋಧನನು ಅದನ್ನು ಪ್ರತಿಭಟಿಸಿ ಒಂದೇ ಸಮನಾಗಿ ಕತ್ತರಿಸಿ (ಭೀಮನ) ಸಾರಥಿಯನ್ನೂ ಆತನ ಕುದುರೆಯನ್ನೂ ಬಾಣದಿಂದ ಹೊಡೆದು ಸ್ವಚ್ಛವಾದ ಬಿಸಿರಕ್ತದ ಪ್ರವಾಹವನ್ನು ಹರಿಯಿಸಿದನು. ೯೯. ಹಾಗೆ ಹೊಡೆಯಲಾಗಿ ಭೀಮನು ರೇಗಿ ಹರಿತವಾದ ಹತ್ತು ಬಾಣಗಳಿಂದ ಸೂತನು ಉರುಳುವ ಹಾಗೆಯೂ ರಥವೂ ಒಡೆದುಹೋಗುವ ಹಾಗೆಯೂ ಕುದುರೆಯು ಮೊಳೆಯಿಂದ

ಪಟ್ಟಂಗಟ್ಟಿದ ನೊಸಲಂ
ನಟ್ಟ ಸರಲ್ವಿಡಿದು ನೆತ್ತರಂಬಿವಿವಿಡೆ ಕ|
ಣ್ಗೆಟ್ಟಿರ್ದ ನೃಪನನಂಕದ
ಕಟ್ಟಾಳ್ಗಳ್ ಕಾದು ಕಳಿಪೆ ದುರ್ಯೋಧನನಂ|| ೧೦೦

ವ|| ಆಗಳವನನುಜರ್ ನೂರ್ವರುಂ ಬಂದು ತನ್ನನೊರ್ವನಂ ತಾಗಿದೊಡನಿಬರುಮಂ ವಿರಥರ್ಮಾಡಿ ಭಾರತಮನಿಂದೆ ಸಮೆಯಿಸುವೆನೆಂದು ಕೋದಂಡಮಂ ಬಿಸುಟು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು-

ಚಂ|| ಕುರುಬಲಮಂ ಪಡಲ್ವಡಿಪ ತಕ್ಕಿನೊಳೆಯ್ತರೆ ಬರ್ಪ ಭೀಮನಂ
ಬರೆ ಬರಲೀಯದಿರ್ದವರನಾ ಪದದೊಳ್ ಪೆಱಗಿಕ್ಕಿ ಗಂಧಸಿಂ|
ಧುರ ಘಟೆ ನಾಲ್ಕು ಕೋಟಿವೆರಸಾಗಡೆ ಬಂದು ಕಳಿಂಗರಾಜನಾಂ
ತಿರೆ ಪಗೆ ಕೆಯ್ಗೆವಂದು ಬರ್ದುಕಾಡಿದ ಬಲ್ಮುಳಿಸಿಂ ವೃಕೋದರಂ|| ೧೦೧

ವ|| ಅಂತು ಕಳಿಂಗರಾಜ ಮತ್ತಮಾತಂಗಘಟೆಗಳ ಮೇಲೆ ಮುಳಿಸಂ ಕಳೆವೆನೆಂದು ಸಿಂಹನಾದದಿನಾರ್ದು-

ಮ|| ಗಜೆಯಂ ಭೋರೆನೆ ಪರ್ವಿ ಬೀಸಿ ಕಡುಪಿಂದೆಯ್ತಂದು ಮಾಱುಂತ ಸಾ
ಮಜಸಂಘಾತಮನೊಂದುಗೊಳ್ಳೆರಡುಗೊಳ್ಳೆಂದುರ್ವಿ ಪೊಯ್ವೊಂದು ಪೊ|
ಯ್ಗೆ ಜವಂಗುಂದಿ ಸಿಡಿಲ್ದು ಮುನ್ನಡಿಗುರುಳ್ತರ್ಪನ್ನೆಗಂ ಬೀೞೆ ದಿ
ಗ್ಗಜಮಂ ಪೋಲ್ವ ಗಜಂಗಳಂ ಪಲವುಮಂ ಕೊಂದು ಮರುನ್ನಂದನಂ|| ೧೦೨

ಕಂ|| ಬಡಿಗೊಳೆ ಬಿದು ಬಿಬ್ಬರ ಬಿರಿ
ದೊಡನುಗೆ ಪೊಸಮುತ್ತು ಕೋಡನೂಱ ಮದೇಭಂ|
ಕೆಡೆದುವು ಕೊಲ್ಲದಿರೆಂದಿರ
ದಡಿಗೆಱಗುವ ತೆಱನನಿನಿಸನನುಕರಿಸುವಿನಂ|| ೧೦೩

ವ|| ಅಂತು ಪತ್ತೆಂಟುಸಾಸಿರಮಾನೆಯಂ ಪಡಲ್ವಡಿಸಿಯುಂ ಸೈರಿಸಲಾಱದೆ-

ಮ|| ಪಿಡಿದೊಂದೊಂದಱ ಗಾತ್ರಮಂ ತಿರಿಪಿಕೊಂಡೊಂದೊಂದಳ್ ಪೊಯ್ದುಮೆ
ಲ್ವಡಗಪ್ಪನ್ನೆಗಮೆತ್ತಿಕೊಂಡಸಗವೊಯ್ವೊಯ್ಲೊಳ್ ತಡಂಬೊಯ್ದುಮು|
ಳ್ಳಡುಗುಂ ನೆತ್ತರುಮೆಲ್ವುಮೆಲ್ಲ ದೆಸೆಗಂ ಜೀೞ್ದು ಪಾ ಬ
ಲ್ದಡಿಗಂ ಬೀಸಿಯುಮೊಂದು ಕೋಟಿವರೆಗಂ ಕೊಂದಂ ಮದೇಭಂಗಳಂ|| ೧೦೪

ನಾಟಿಕೊಂಡಹಾಗೆಯೂ ಧ್ವಜವು ಮುರಿದು ಹೋಗುವ ಹಾಗೆಯೂ ಹೊಡೆದು ಕೋಪದಿಂದ ಒಂದೇ ಬಾಣದಿಂದ ದುರ್ಯೋಧನನ ಹಣೆಗೆ ಹೊಡೆದನು. ೧೦೦. ಪಟ್ಟಕಟ್ಟಿದ ಹಣೆಯನ್ನನುಸರಿಸಿ ನಾಟಿದ ಬಾಣವನ್ನು ಅನುಸರಿಸಿ ರಕ್ತವು ಧಾರಾಕಾರವಾಗಿ ಹರಿಯಲು ಕಣ್ಣು ಕಾಣದೆ ಇದ್ದ ರಾಜನನ್ನು ಪ್ರಸಿದ್ಧರಾದ ಶೂರರು ರಕ್ಷಿಸಿ ಶಿಬಿರಕ್ಕೆ ಕಳುಹಿಸಿದರು. ವ|| ಆಗ ಅವನ ನೂರು ತಮ್ಮಂದಿರೂ ಬಂದು ತನ್ನೊಬ್ಬನನ್ನು ತಾಗಲು ಅಷ್ಟು ಜನವನ್ನೂ ರಥದಿಂದ ಉರುಳಿಸಿ ಭಾರತಯುದ್ಧವನ್ನು ಈ ದಿನವೇ ಮುಗಿಸಿಬಿಡುತ್ತೇನೆ ಎಂದು ಬಿಲ್ಲನ್ನು ಬಿಸಾಡಿ ಗದಾದಂಡವನ್ನು ದಂಡದಂತಿರುವ ತನ್ನ ತೋಳಿನಲ್ಲಿ ಅಳವಡಿಸಿಕೊಂಡನು. ೧೦೧. ಕೌರವಸೈನ್ಯವನ್ನು ಉರುಳಿಸುವ ಸಾಮರ್ಥ್ಯದಿಂದ ಬರುತ್ತಿದ್ದ ಭೀಮಸೇನನನ್ನು ಬರುವುದಕ್ಕೆ ಅವಕಾಶಮಾಡದೆ ಅಲ್ಲಿದ್ದವರನ್ನು (ಅಲ್ಲಿಂದ) ಹೊರಕ್ಕೆ ತಳ್ಳಿ ಶ್ರೇಷ್ಠವಾದ ನಾಲ್ಕುಕೋಟಿ ಮದ್ದಾನೆಗಳೊಡಗೂಡಿ ಕಳಿಂಗರಾಜನು ಬಂದು ಎದುರಿಸಿದನು. ಶತ್ರುವು ಕೈಗೆ ಸಿಕ್ಕಿಯೂ ನುಣುಚಿಕೊಂಡು ವಿಶೇಷ ಕೋಪವನ್ನು ಭೀಮನು- ವ|| ಕಳಿಂಗರಾಜನ ಮದ್ದಾನೆಗಳ ಸಮೂಹದ ಮೇಲೆ ತೀರಿಸಿಕೊಳ್ಳುತ್ತೇನೆ ಎಂದು ಸಿಂಹಗರ್ಜನೆಯಿಂದ ಆರ್ಭಟಿಸಿದನು. ೧೦೨. ಭೀಮನು ಗದೆಯನ್ನು ಭೋರೆಂದು ವಿಸ್ತಾರವಾಗಿ ಬೀಸಿ ಕ್ರೌರ್ಯದಿಂದ ಬಂದು ಪ್ರತಿಭಟಿಸಿದ ಆನೆಗಳ ಸಮೂಹವನ್ನು ಒಂದು ತಕ್ಕೊ, ಎರಡು ತಕ್ಕೋ ಎಂದು ಉಬ್ಬಿ ಹೊಡೆಯುವ ಹೊಡೆತಕ್ಕೆ ಆನೆಗಳು ತಮ್ಮ ವೇಗವನ್ನು ಕಳೆದುಕೊಂಡು ಸಿಡಿದು ಮೊದಲೇ ಅಡಿಗುರುಳುವ ಹಾಗೆ ಉರುಳಲು ದಿಗ್ಗಜಗಳಂತಿದ್ದ ಅನೇಕ ಆನೆಗಳನ್ನು ಕೊಂದನು. ೧೦೩. ಭೀಮನ ಗದೆಯ ಪೆಟ್ಟಿನಿಂದ ಕುಂಭಸ್ಥಳವು ಸಂಪೂರ್ಣವಾಗಿ ಬಿರಿದುಹೋಯಿತು. ಜೊತೆಯಲ್ಲಿಯೇ (ಕುಂಭಸ್ಥಳದಲ್ಲಿದ್ದ) ಹೊಸಮುತ್ತುಗಳು ಚೆಲ್ಲಾಡಿದುವು. ಮದ್ದಾನೆಗಳು ಕೊಂಬನ್ನು ಕೆಳಕ್ಕೆ ಊರಿ ‘ನಮ್ಮನ್ನು ಕೊಲ್ಲಬೇಡ’ ಎಂದು ಭೀಮನ ಕಾಲಿಗೆ ಬೀಳುವ ರೀತಿಯನ್ನು ಸ್ವಲ್ಪ ಮಟ್ಟಿಗೆ ಅನುಕರಿಸುತ್ತ ಬಿದ್ದುವು. ವ|| ಹಾಗೆ ಹತ್ತೆಂಟು ಸಾವಿರ ಆನೆಗಳನ್ನೂ ನಾಶಪಡಿಸಿದರೂ ತೃಪ್ತಿಹೊಂದದೆ ೧೦೪. ಒಂದು ಆನೆಯ

ಮ|| ಸಿಡಿಲಂತೊರ್ಮೆಯೆ ಪೊಯ್ಯೆ ಪೊಯ್ದ ಭರದಿಂದೊಂದಾನೆ ತೋಲ್ ನೆತ್ತರೆ
ಲ್ವಡಗೊಂದೊಂದಳೊಂದುಮೊಂದದೆ ಗದಾನಿರ್ಘಾತದಿಂ ಮಾಯಮಾ|
ದೊಡೆ ಪೋ ತಪ್ಪಿದೆನೆಂದು ಪಲ್ಮೊರೆದಗುರ್ವಪ್ಪನ್ನೆಗಂ ಮೀಸೆಯಂ
ಕಡಿದಂ ತೋಳ್ವಲದೇೞ್ಗೆ ಮೆಚ್ಚುವನಿತರ್ಕುಗ್ರಾಜಿಯೊಳ್ ಭೀಮನಾ|| ೧೦೫

ಕಂ|| ಧ್ವಜಮುಂ ಬಿಸುಗೆಯುಮೇಱ
ರ್ದ ಜೋದರುಂ ಬೆರಸು ಗಜೆಯನರಿಗಜಘಟೆಯಂ|
ಗಿಜಿಗಿಜಿಯಾಗಿರೆ ಪೊಯ್ದೊಡೆ
ಗುಜುಗುಜುಗೊಂಡಾರ್ದರಮರರಂಬರತಳದೊಳ್|| ೧೦೬

ವ|| ಅಂತು ಗಾಳಿಗೊಡ್ಡಿದ ಘನಘಟೆಯಂತೆ ತನಗೊಡ್ಡಿದ ಕಳಿಂಗರಾಜ ಮತ್ತಮಾತಂಗ ಘಟೆಗಳಂ ಕೞಕುೞಂ ಮಾಡಿದನನ್ನೆಗಮಿತ್ತ ಶಲ್ಯನ ಮೊನೆಯೊಳ್ ಧರ್ಮಪುತ್ರಂ ಕಾದಿ ನಾಲ್ಕು ಕಲ್ಲಂಬುಗಳಿಂದಾತನ ವರೂಥ ಸೂತಕೇತನಂಗಳಂ ಕಡಿದು-

ಕಂ|| ಉರಮಂ ಬಿರಿವಿನಮಿಸೆ ಮ
ದ್ರರಾಜನಳಿಯನ ಪರಾಕ್ರಮಕ್ಕೊಸೆದು ಮೊಗಂ|
ಮುರಿಯದೆ ಪೆಱತುಂ ರಥಮಂ
ತರಿಸಿ ಕನಲ್ದಡರ್ದು ಕದನಕಾಗಳೆ ನೆದಂ|| ೧೦೭

ಮುಱದು ರಥಮಂ ರಥಾಶ್ವಮ
ನುಱದೆರಡುಂ ಶರದೆ ನಾಲ್ಕಱಂ ಸೂತನನೊಂ|
ದಱಕೆಯ ಸರಲೊಳ್ ಮಾಣದೆ
ತಱದಂ ಪೞವಿಗೆಯನೇಂ ಕೃತಾಸ್ತ್ರನೊ ಶಲ್ಯಂ|| ೧೦೮

ವ|| ಅಂತು ವಿರಥನಂ ಮಾಡಿ ಧರ್ಮಪುತ್ರನಂ ಪಿಡಿಯಲೆಯ್ತರ್ಪ ಮದ್ರರಾಜನಂ ಪನ್ನಿರ್ಛಾಸಿರಮಾನೆವೆರಸು ನೃಪನ ಚಕ್ರರಕ್ಷಕಂ ನೀಳನೆಡೆಗೊಂಡು ತಾಗಿದಾಗಳ್-

ಶರೀರವನ್ನು ಹಿಡಿದುಕೊಂಡು ವೇಗವಾಗಿ ತಿರುಗಿಸಿ ಒಂದರೊಡನೆ ಒಂದನ್ನು ಎಲುಬೂ ಮಾಂಸವೂ ಆಗುವ ಹಾಗೆ ಹೊಡೆದು ಮೇಲಕ್ಕೆತ್ತಿಕೊಂಡು ಅಗಸನು ಒಗೆಯುವ ರೀತಿಯಲ್ಲಿ ಬಿರುಸಾಗಿ ಮೇಲಕ್ಕೆತ್ತಿ ಒಗೆದು ಒಳಗಿದ್ದ ಮಾಂಸವೂ ರಕ್ತವೂ ಎಲುಬುಗಳೂ ಜೀರೆಂದು ಶಬ್ದಮಾಡುತ್ತ ಎದ್ದು ಎಲ್ಲ ದಿಕ್ಕುಗಳಿಗೂ ಹಾರಿ ನೆಗೆಯುವ ಹಾಗೆ ಬೀಸಿ ಪರಾಕ್ರಮಶಾಲಿಯಾದ ಭೀಮನು ಒಂದುಕೋಟಿ ಲೆಕ್ಕದವರೆಗಿನ ಮದ್ದಾನೆಗಳನ್ನು ಕೊಂದನು.- ೧೦೫. ಸಿಡಿಲಿನ ಹಾಗೆ ಒಂದೇ ಸಲ ಹೊಡೆಯಲು ಹೊಡೆದ ವೇಗಕ್ಕೆ ಆನೆಯ ಚರ್ಮ ರಕ್ತ ಎಲುಬು ಮಾಂಸಗಳು ಒಂದರಲ್ಲಿ ಒಂದು ಸೇರಿರದೆ ಗದೆಯ ಪೆಟ್ಟಿನಿಂದ ಮಾಯವಾಗಲು ಭೀಮನು ‘ಛೀ ತಪ್ಪುಮಾಡಿದೆ’ ಎಂದು ಹಲ್ಲುಕಡಿದು ಭಯಂಕರವಾದ ಆ ಯುದ್ಧರಂಗದಲ್ಲಿ ತನ್ನ ಬಾಹುಶಕ್ತಿಯ ಏಳಿಗೆಯನ್ನು ಮೆಚ್ಚುವಷ್ಟು ಭಯಂಕರವಾದ ರೀತಿಯಲ್ಲಿ ಮೀಸೆಯನ್ನು ಕಡಿದನು. ೧೦೬. ಧ್ವಜದಿಂದಲೂ ಅಂಬಾರಿಯನ್ನು ಹತ್ತಿದ್ದ ಯೋಧರಿಂದಲೂ ಕೂಡಿದ ಸಮೂಹವನ್ನು ಗದೆಯಿಂದ ಅಜ್ಜಿಗುಜ್ಜಾಗುವ ಹಾಗೆ ಹೊಡೆಯಲು ಆಕಾಶಪ್ರದೇಶದಲ್ಲಿ ದೇವತೆಗಳು (ಗುಂಪುಕೂಡಿ) ಪಿಸುಗುಟ್ಟುತ್ತ ಆರ್ಭಟ ಮಾಡಿದರು. ವ|| ಹಾಗೆ ಗಾಳಿಗೆ ಎದುರಾದ ಮೋಡಗಳ ಸಮೂಹದ ಹಾಗೆ ತನಗೆ ಎದುರಾದ ಕಳಿಂಗರಾಜನ ಮದ್ದಾನೆಗಳ ಸಮೂಹವನ್ನು ಚೆಲ್ಲಾಪಿಲ್ಲಿಮಾಡಿದನು. ಅಷ್ಟರಲ್ಲಿ ಈಕಡೆ ಶಲ್ಯನ ಯುದ್ಧದಲ್ಲಿ ಧರ್ಮರಾಜನು ಕಾದಿ ನಾಲ್ಕು ಮೊನಚಾದ ಬಾಣಗಳಿಂದ ಅವನ ತೇರು ಸಾರಥಿ ಧ್ವಜಗಳನ್ನು ಕತ್ತರಿಸಿದನು. ೧೦೭. ಎದೆಯು ಬಿರಿದು ಹೋಗುವ ಹಾಗೆ ಹೊಡೆಯಲು ಶಲ್ಯನು ಅಳಿಯನಾದ ಧರ್ಮರಾಜನ ಪರಾಕ್ರಮಕ್ಕೆ ಸಂತೋಷಪಟ್ಟು ಮುಖ ತಿರುಗಿಸದೆ ಬೇರೊಂದು ರಥವನ್ನುತರಿಸಿ ಕೋಪದಿಂದ ಹತ್ತಿ ಆಗಲೇ ಯುದ್ಧಕ್ಕೆ ಸಿದ್ಧವಾದನು. ೧೦೮. ಶಲ್ಯನು ಅವನ ತೇರನ್ನು ಮುರಿದು ವೇಗವಾಗಿ ಎರಡು ಬಾಣಗಳಿಂದ ರಥದ ಕುದುರೆಯನ್ನೂ ನಾಲ್ಕರಿಂದ ಸಾರಥಿಯನ್ನೂ ಒಂದು ಪ್ರಸಿದ್ಧವಾದ ಬಾಣದಿಂದ ಧ್ವಜವನ್ನೂ ಬಿಡದೆ ತರಿದು ಹಾಕಿದನು. ಶಲ್ಯನು ಶಸ್ತ್ರವಿದ್ಯೆಯಲ್ಲಿ ಮಹಾಪಂಡಿತನಷ್ಟೆ ! ವ|| ಹಾಗೆ ತೇರಿರದವನನ್ನಾಗಿ ಮಾಡಿ ಧರ್ಮರಾಜನನ್ನು ಹಿಡಿಯಲು ಬರುತ್ತಿದ್ದ ಶಲ್ಯನನ್ನು ರಾಜನ ಸೇನಾಪತಿ

ಕಂ|| ಮೃಗರಾಜನಖರ ಬಾಣಾ
ಳಿಗಳಿಂ ತೆಗೆನೆದು ಶಲ್ಯನುಱದಿಸೆ ಬಿದುವಂ|
ಮೃಗರಾಜಂಗಳೆ ಪೋೞ್ವವೊ
ಲಗಲ್ವಿನಂ ಪೋೞ್ದುವುಗ್ರ ಬಾಣಾವಳಿಗಳ್|| ೧೦೯

ವ|| ಅಂತಾ ದಂತಿಘಟೆಯಂ ಪಡಲ್ವಡಿಸಿ ನೀಳನೇಱದಾನೆಯುಮನೂಱ ಕೊಂಡೆಚ್ಚಾಗಳ್-

ಕಂ|| ಪೆಱಗಿಡುವ ದಂತಿಯಂ ಕಲಿ
ನಿಱಸಿ ಚಲಂ ನೆಲಸೆ ತೋಱಕುಡುವುದುಮಾಗಳ್|
ಪೊಱಮುಯ್ವುವರಂ ತೆಗೆನೆ
ದುಱದೆಚ್ಚಂ ಶಲ್ಯನಾಂತ ನೀಳನ ತಲೆಯಂ|| ೧೧೦

ವ|| ಅಂತು ನೀಳಂ ನೀಳಗಿರಿಯ ಮೇಗಣಿಂ ಬಱಸಿಡಿಲ್ ಪೊಡೆಯೆ ಕೆಡೆವ ಮೃಗರಾಜನಂತೆ ಹಸ್ತಿಮಸ್ತಕದಿಂ ಕೆಡೆವುದುಮತ್ತ ಭೂರಿಶ್ರವನ ಮೊನೆಯೊಳ್ ಕಾದುತ್ತಿರ್ದುತ್ತರಂ ನಾಲ್ವತ್ತು ಸಾಸಿರಮಾನೆವೆರಸರಸನಂ ಪೆಱಗಿಕ್ಕಿ ಬಂದಾಂತಾಗಳ್-

ಚಂ|| ನಗೆ ಪಗೆವಾಡಿ ಗೋಗ್ರಹಣದೊಳ್ ಪೊಱಮಾಱದ ಬನ್ನಮೊಂದು ನೆ
ಟ್ಟಗೆ ಮನಮಂ ಪಳಂಚಲೆಯೆ ಮಾಣದೆ ಶಲ್ಯನನಂದಶಲ್ಯನಂ|
ಬಗೆವವೊಲೇಳಿದಂ ಬಗೆದು ದಂತಿಯನಾಗಡೆ ತೋಱಕೊಟ್ಟು ತೊ
ಟ್ಟಗೆ ರಥಮಂ ಪಡಲ್ವಡಿಸಿ ಪೊೞ್ದನರಾತಿಯನಸ್ತ್ರಕೋಟಿಯಿಂ|| ೧೧೧

ವ|| ಅಂತುತ್ತರಂ ತನಗಳವುಮದಟುಂ ರಾಜೋತ್ತರಮಾಗೆ ಕಾದಿದೊಡೆ ಶಲ್ಯಂ ವಿರಥನಾಗಿ ಸಿಗ್ಗಾಗಿ-

ಉ|| ತಾರಕನಂ ಗುಹಂ ಮುಳಿದು ಶಕ್ತಿಯಿನಾಂತಿಡುವಂತರಾತಿ ಸಂ
ಹಾರಕವಪ್ಪ ವಿಸುರಿತ ಶಕ್ತಿಯಿನಾತನನಿಟ್ಟು ಖೞ್ಗದಿಂ|
ವಾರಣಮಂ ಪಡಲ್ವಡಿಸಿ ತಾಂ ಪೆಱಪಿಂಗುವುದುಂ ಬಲಕ್ಕೆ ಹಾ
ಹಾ ರವಮುಣ್ಮೆ ದಂತಿರವೆರಸಾಜಿಯೊಳುತ್ತರನೞ ತೞದಂ|| ೧೧೨

ವ|| ಅಂತುತ್ತರನಂ ಜವಂಗೆ ಪೊಸತಿಕ್ಕುವಂತಿಕ್ಕಿ ಬಸವೞದ ಶಲ್ಯನಂ ಕೃತವರ್ಮಂ ತನ್ನ ರಥಮನೇಱಸಿಕೊಂಡು ನಿಂದನನ್ನೆಗ ಮಿತ್ತಲಮರಾಪಗಾಸುತನ ಮೊನೆಯೊಳ್ ಭರಂಗೆಯ್ದು ಕಾದುವ ಸೇನಾನಾಯಕಂ ಶ್ವೇತಂ ತನ್ನ ತಮ್ಮನತೀತನಾದುದಂ ಕೇಳ್ದು-

ಯಾದ ನೀಲನು ಮಧ್ಯೆ ನುಗ್ಗಿ ಹನ್ನೆರಡು ಸಾವಿರ ಆನೆಗಳೊಡನೆ ಕೂಡಿ ಪ್ರತಿಭಟಿಸಿದನು. ೧೦೯. ಸಿಂಹದ ಉಗುರಿನಂತಿದ್ದ ಬಾಣಗಳ ಸಮೂಹದಿಂದ ಶಲ್ಯನು ದೀರ್ಘವಾಗಿ ಸೆಲೆದು ಹೊಡೆಯಲಾಗಿ ಕುಂಭಸ್ಥಳಗಳನ್ನು ಸಿಂಹಗಳೇ ಸೀಳುವ ಹಾಗೆ ಆ ತೀಕ್ಷ್ಣವಾದ ಬಾಣಸಮೂಹಗಳು (ಕುಂಭಸ್ಥಳಗಳನ್ನು) ಬೇರೆಯಾಗುವ ಹಾಗೆ (ಹೋಳಗಳಾಗುವ ಹಾಗೆ) ಸೀಳಿ ಹಾಕಿದುವು. ವ|| ಹಾಗೆ ಆ ಆನೆಯ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವ ಹಾಗೆ ಮಾಡಿ ನೀಲನು ಹತ್ತಿದ ಆನೆಯನ್ನೂ ಬಲವಾಗಿ ಅಮುಕಿ ಹೊಡೆದನು.

೧೧೦. ಹಿಮ್ಮೆಟ್ಟುತ್ತಿದ್ದ ಆನೆಯನ್ನು ಶೂರನಾದ ನೀಲನು ನಿಲ್ಲಿಸಿ ಹೆಚ್ಚಿನ ಛಲದಿಂದ ಅದನ್ನು ಶಲ್ಯನ ಮೇಲೆ ಛೂಬಿಡಲು ಆಗ ಶಲ್ಯನು ಭುಜದವರೆಗೆ ಬಾಣಗಳನ್ನು ಸೆಳೆದು ತನ್ನನ್ನು ಪ್ರತಿಭಟಿಸಿದ ನೀಲನ ತಲೆಯನ್ನು ಸಾವಕಾಶಮಾಡದೆ- ವೇಗವಾಗಿ ಹೊಡೆದನು. ವ|| ನೀಲನು ಬರಸಿಡಿಲು ಹೊಡೆಯಲು ನೀಲಪರ್ವತದ ಮೇಲಿನಿಂದ ವೇಗವಾಗಿ ಕೆಳಗುರುಳುವ ಸಿಂಹದ ಹಾಗೆ ಆನೆಯ ಕುಂಭಸ್ಥಳದಿಂದ ಕೆಡೆದನು. ಆಕಡೆ ಭೂರಿಶ್ರವನ ಯುದ್ಧದಲ್ಲಿ ಕಾದುತ್ತಿದ್ದ ಉತ್ತರನು ನಲವತ್ತುಸಾವಿರ ಆನೆಯೊಡನೆ ಕೂಡಿ ಬಂದು ರಾಜನನ್ನು ಹಿಂದಿಕ್ಕಿ ಪ್ರತಿಭಟಿಸಿದನು. ೧೧೧. ಗೋಗ್ರಹಣಕಾಲದಲ್ಲಿ ಶತ್ರುಸೈನ್ಯವು ನುಗ್ಗುವ ಹಾಗೆ ಬೆನ್ನಿತ್ತುಹೋದ ಅವಮಾನವು ನೇರವಾಗಿ ತನ್ನ ಮನಸ್ಸನ್ನು ತಗುಲಿ ವೇದನೆಯನ್ನುಂಟುಮಾಡುತ್ತಿರಲು ತಡೆಯದೆ ಉತ್ತರನು ಶತ್ರುರಾಜನನ್ನು ಅಸ್ತ್ರರಹಿತನಾದವನನ್ನು ನೋಡುವ ಹಾಗೆ ಉದಾಸೀನದಿಂದ ಕಡೆಗಣಿಸಿ ನೋಡಿ (ತನ್ನ) ಆನೆಯನ್ನು ಅವನ ಮೇಲೆ ಛೂಬಿಟ್ಟು ಒಮ್ಮೆಯೇ ತೇರಿನಿಂದ ಕೆಳಗುರುಳಿಸಿ ಶತ್ರುವನ್ನು ಬಾಣಸಮೂಹದಿಂದ ಹೂಳಿದನು. ವ|| ಹಾಗೆ ಉತ್ತರನು ತನಗೆ ಪರಾಕ್ರಮವೂ ಶಕ್ತಿಯೂ ಚಂದ್ರನಂತೆ ಅಭಿವೃದ್ಧಿಯಾಗುವ ಹಾಗೆ ಕಾದಲು ಶಲ್ಯನು ರಥಹೀನನಾಗಿ ಅವಮಾನಗೊಂಡು- ೧೧೨. ಹಿಂದೆ ತಾರಕಾಸುರನನ್ನು ಷಣ್ಮುಖನು ಎದುರಿಸಿ ಶಕ್ತ್ಯಾಯುಧದಿಂದ ಹೊಡೆದ ಹಾಗೆ ಶತ್ರುಸಂಹಾರವೂ ಕಾಂತಿಯುಕ್ತವೂ ಆದ ಶಕ್ತ್ಯಾಯುಧದಿಂದ ಉತ್ತರನನ್ನು ಹೊಡೆದು ಆತನ ಆನೆಯನ್ನು ಕೆಳಗುರುಳಿಸಿದನು. ಪಾಂಡವಸೈನ್ಯದಲ್ಲಿ ಹಾ ಹಾ ರವವನ್ನುಂಟುಮಾಡಿ ಶಲ್ಯನು ಹಿಂದಿರುಗುತ್ತಿರಲು ಯುದ್ಧದಲ್ಲಿ ಉತ್ತರನು ಆನೆಯೊಡನೆ ಸತ್ತು ಕೆಳಗುರುಳಿದನು (ಕುಸಿದನು). ವ|| ಉತ್ತರನನ್ನು ಯಮನಿಗೆ ಹೊಸದಾಗಿ ಬಲಿ ಕೊಡುವ ಹಾಗೆ ಬಲಿಕೊಟ್ಟು ಶಕ್ತಿಗುಂದಿದ ಶಲ್ಯನನ್ನು ಕೃತವರ್ಮನು

ಚಂ|| ಪ್ರಳಯಪಯೋವೋಲಳುರ್ದು ಪೆಂಕುಳಿಗೊಂಡ ಮದೇಭವೈರಿವೋಲ್
ಕೆಳರ್ದು ಲಯಾಗ್ನಿವೋಲಳುರ್ದು ಮದ್ರಮಹೀಶನನೆಯ್ದೆ ತಾಗೆ ಬ|
ಳ್ವಳ ಬಳೆದತ್ತು ಶಲ್ಯನೊಳೆ ಕಾಳೆಗಮೀಗಳೆನುತ್ತುಮಂತೆ ಕೆ
ಯ್ಕೊಳಲಹಿಕೇತು ಸಿಂಧುತನಯಂಬೆರಸಾಗಡೆ ಬಂದು ತಾಗಿದಂ|| ೧೧೩

ವ|| ಇತ್ತ ಧರ್ಮಪುತ್ರನುಂ ವಿರಾಟ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಕೇಕಯ ಸಾತ್ಯಕಿ ನಕುಳ ಸಹದೇವ ಸೌಭದ್ರ ಪ್ರಮುಖ ನಾಯಕರ್ವೆರಸು ರಣಪಟಹಂಗಳಂ ನೆಗೞ್ಚೆ ಕೃಪ ಕೃತವರ್ಮ ವಿವಿಂಶತಿ ವಿಕರ್ಣ ಚಿತ್ರಸೇನ ಸೋಮದತ್ತ ಭಗದತ್ತ ಬಾಹ್ಲೀಕ ಭೂರಿಶ್ರವ ಪ್ರಭೃತಿಗಳ್ ಗಱಸನ್ನೆಗೈದು ಕಾದುವಾಗಳ್-

ಚಂ|| ನಡುವ ಸರಲ್ ಸರಲ್ಕೊಳೆ ಸುರುಳ್ವ ಹಯಂ ಹಯದುಳ್ಗರುಳ್ಗಳೊಳ್
ತೊಡರ್ವ ಭಟರ್ ಭಟರ್ಕಳೊಳೆ ತೊೞ್ತುೞಮಾೞ್ಪ ರಥಂ ರಥಕ್ಕೆ ವಾ|
ಯ್ದಡಿಗಿಡೆ ಮೆಯ್ವೊಣರ್ಚುವ ಮಹಾರಥರಾಜಿಯೊಳಂತಗುರ್ವಿನ
ಚ್ಚುಡಿದಿರೆ ಕಾದಿ ಬಿಚ್ಚೞಸಿದರ್ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ|| ೧೧೪

ವ|| ಅಂತೆರಡುಂ ಪಡೆಯ ನಾಯಕರೊರ್ವರೊರ್ವರೊಳ್ ತಲೆಮಟ್ಟು ಕಾದುವಾಗಳ್ ಶ್ವೇತಂ ತನ್ನ ತಮ್ಮನೞವಿನೊಳಾದ ಮುಳಿಸಿನೊಳ್ ಕಣ್ಗಾಣದೆ ಶಲ್ಯನಂ ಮುಟ್ಟೆವಂದು-

ಚಂ|| ಮುಳಿಸಿನೊಳೆಯ್ದೆ ಕೆಂಪಡರ್ದ ಕಣ್ಗಳಿನೊರ್ಮೆಯೆ ನುಂಗುವಂತಸುಂ
ಗೊಳೆ ನಡೆ ನೋಡಿ ಮಾಣದುರಮಂ ಬಿರಿಯೆಚ್ಚೊಡೆ ಸೂಸಿ ಪಾಯ್ವಸೃ|
ಗ್ಜಳಮವನುಗ್ರ ಕೋಪಶಿಖಿ ತಳ್ತಳುರ್ವಂತೆವೊಲಾಗೆ ಶಲ್ಯನಾ
ಗಳೆ ರಣದೊಳ್ ನೆಱಲ್ದೊಡವನಂ ಪೆಱಗಿಕ್ಕಿ ಸುರಾಪಗಾತ್ಮಜಂ|| ೧೧೫

ವ|| ಅಂತು ಪ್ರಳಯಕಾಲದಂದು ಮೂಡುವ ಪನ್ನಿರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ತನ್ನೊಳಳವಡಿಸಿಕೊಂಡು-

ತನ್ನ ರಥದಲ್ಲಿ ಹತ್ತಿಕೊಂಡು ತಾನು ಯುದ್ಧಕ್ಕೆ ನಿಂತನು. ಅಷ್ಟರಲ್ಲಿ ಈಕಡೆ ಭೀಷ್ಮನು ಯುದ್ಧದಲ್ಲಿ ಆರ್ಭಟಿಸಿ ವೇಗದಿಂದ ಯುದ್ಧಮಾಡುತ್ತಿದ್ದ ಸೇನಾನಾಯಕನಾದ ಶ್ವೇತನು ತನ್ನ ತಮ್ಮನು ಸತ್ತುಹೋದುದನ್ನು ಕೇಳಿದನು- ೧೧೩. ಪ್ರಳಯಕಾಲದ ಸಮುದ್ರದಂತೆ ವ್ಯಾಪಿಸಿ ಹುಚ್ಚುಹಿಡಿದ ಸಿಂಹದಂತೆ ಪ್ರಳಯಾಗ್ನಿಯಂತೆ ಹರಡಿ ಶಲ್ಯರಾಜನನ್ನು ವೇಗದಿಂದ ಬಂದು ತಾಗಿದನು. ಈಗ ಶಲ್ಯನಲ್ಲಿ ಯುದ್ಧವು ಅಕವಾಗಿ ಬೆಳೆದಿದೆ ಎಂದು ಹೇಳುತ್ತ ದುರ್ಯೋಧನನು ಆ ಯುದ್ಧಭಾರವನ್ನು ತಾನೇ ವಹಿಸುವುದಕ್ಕಾಗಿ (ಶಲ್ಯನನ್ನು ರಕ್ಷಿಸುವುದಕ್ಕಾಗಿ) ಭೀಷ್ಮನೊಡನೆ ಅಲ್ಲಿಗೆ ಬಂದು ತಾಗಿದನು. ವ|| ಈಕಡೆ ಧರ್ಮರಾಜನೂ ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಕೇಕಯ, ಸಾತ್ಯಕಿ, ನಕುಲ, ಸಹದೇವ, ಅಭಿಮನ್ಯುವೇ ಮೊದಲಾದ ನಾಯಕರೊಡಗೂಡಿ ಯುದ್ಧರಂಗಕ್ಕೆ ಬಂದು ರಣಭೇರಿಯನ್ನು ಹೊಡೆಯಿಸಿದನು. ಕೃಪ, ಕೃತವರ್ಮ, ವಿವಿಂಶತಿ, ವಿಕರ್ಣ, ಚಿತ್ರಸೇನ, ಸೋಮದತ್ತ, ಭಗದತ್ತ, ಬಾಹ್ಲಿಕ, ಭೂರಿಶ್ರವರೇ ಮೊದಲಾದ ಪ್ರತಿಪಕ್ಷದವರು ಬಾಣದ ಗರಿಗಳಿಂದಲೇ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ೧೧೪. ಬಾಣಗಳು ನಾಟಿಕೊಂಡವು. ಕುದುರೆಗಳು ಸುರುಳಿಕೊಂಡು ಬಿದ್ದುವು. ಅವುಗಳ ಒಳಗರುಳಿನಲ್ಲಿ ಶೂರರು ಸಿಕ್ಕಿಕೊಂಡರು. ತೇರು ಹರಿದು ಅವರನ್ನು ಅಜ್ಜುಗುಜ್ಜಿ ಮಾಡಿದವು. ಮಹಾರಥರು ನುಗ್ಗಿ ತೇರನ್ನೆಡವಿ ಮುರಿದು ಬಿದ್ದು ಬಿಸಿರಕ್ತದ ಪ್ರವಾಹವು ಹರಿಯುವವರೆಗೆ ಅದ್ಭುತವಾಗಿ ಯುದ್ಧಮಾಡಿದರು. ವ|| ಹಾಗೆ ಎರಡುಸೈನ್ಯದ ನಾಯಕರೂ ಪರಸ್ಪರ ಪ್ರತ್ಯಕ್ಷವಾಗಿ ಯುದ್ಧಮಾಡುತ್ತಿದ್ದಾಗ ಶ್ವೇತನು ತನ್ನ ತಮ್ಮನ ಸಾವಿನಿಂದ ಆದ ಕೋಪದಿಂದ ಮುಂದಾಲೋಚನೆಯಿಲ್ಲದೆ ಶಲ್ಯನ ಸಮೀಪಕ್ಕೆ ಬಂದನು. ೧೧೫. ಕೋಪದಿಂದ ವಿಶೇಷವಾಗಿ ಕೆಂಪೇರಿದ್ದ ಕಣ್ಣುಗಳಿಂದ ಒಂದೇಸಲ ನುಂಗುವಹಾಗೆಯೂ ಪ್ರಾಣಾಪಹಾರ ಮಾಡುವ ಹಾಗೆಯೂ ದೀರ್ಘವಾಗಿ (ಗುರಿಗಟ್ಟಿ) ನೋಡಿ ಅಷ್ಟಕ್ಕೇ ಬಿಡದೆ ಎದೆಯು ಸೀಳುವ ಹಾಗೆ ಹೊಡೆದನು. (ಅದರಿಂದ) ರಕ್ತಪ್ರವಾಹವು ಹರಿಯಿತು. ಅವನ ತೀಕ್ಷ್ಣವಾದ ಕೋಪಾಗ್ನಿಯು ಸೇರಿ ವ್ಯಾಪಿಸಿದ ಹಾಗಾಯಿತು. ಶಲ್ಯನು ಆಗಲೇ ಯುದ್ಧದಲ್ಲಿ ನಿಶ್ಚೇಷ್ಟನಾದನು. ಭೀಷ್ಮನು ಅವನನ್ನು ಹಿಂದಿಕ್ಕಿ ತಾನು ಮುನ್ನುಗ್ಗಿದನು. ವ|| ಪ್ರಳಯಕಾಲದ ದ್ವಾದಶಾದಿತ್ಯರ ತೇಜಸ್ಸನ್ನು ಮಹೇಶ್ವರನ ಭಯಂಕರವಾದ ಅಟಾಟೋಪವನ್ನು ಯುಗಾಂತದ ಯಮನ ರೇಗುವಿಕೆಯನ್ನು ತನ್ನಲ್ಲಿ

ಚಂ|| ಖರ ಕಿರಣ ಪ್ರಚಂಡ ಕಿರಣಾವಳಿ ಲೋಕಮನೆಯ್ದೆ ಪರ್ವುವಂ
ತಿರೆ ಕಡುಕೆಯ್ದು ತನ್ನೆರಡು ಕೆಯ್ಯೊಳಮೆಚ್ಚ ಶರಾಳಿಗಳ್ ಭಯಂ|
ಕರತರಮಾಗೆ ಭೂಭುವನಮೆಲ್ಲಮನೊರ್ಮೆಯೆ ಸುತ್ತಿ ಮುತ್ತಿ ಕೊಂ
ಡಿರೆ ದೆಸೆಗಾಣಲಾಗದು ದಲಾ ರಣಗೞ್ತಲೆ ಮಂದಮಾದುದೋ|| ೧೧೬

ವ|| ಎಂಬಿನಮಂಬಿನ ಬಂಬಲೊಳಂ ಜೋಡಾಗಿ ಕೋಡನೂಱ ಕೆಡೆದ ಗಜ ವ್ರಜಂಗಳ ಡೊಣೆವುಗಳಿಂದೊತು ಪರಿವ ನೆತ್ತರ ಕಡಲ್ಗಳುಂ ನೆತ್ತರ ಕಡಲ್ಗಲೊಳ್ ಮಿಳಿರ್ವ ಪೞವಿಗೆಗಳ್ ತಲೆದೋ ಮುೞುಂಗಿದ ರಥಂಗಳುಂ ರಥಂಗಳ ಗಾಲಿಗಳ್ಗಡ್ಡಮಾಗಿ ಬಿೞರ್ದ ಮದಹಸ್ತಿಗಳುಂ ಮದಹಸ್ತಿಮಸ್ತಕಂಗಳನೋಸರಿಸಿ ರಥಮಂ ಪರಿಯಿಸುವ ರಥಚೋದಕರುಂ ರಥಚೋದಕರ ಬಿಟ್ಟ ಬಾಯ್ ಬಿಟ್ಟಂತಿರೆ ಬಿಟ್ಟ ತಮ್ಮ ಕರುಳ್ಗಳೊಳ್ ತವೆ ತೊಡರ್ದು ಕೀೞಂ ಕರ್ಚಿ ದಿಂಡುಮಗುಳ್ದು ಕೆಡೆವ ಜಾತ್ಯಶ್ವಂಗಳುಂ ಜಾತ್ಯಶ್ವಂಗಳ ಪೆಣದ ತಿಂತಿಣಿಯೊಳ್ ತೊಡರ್ದೆಡಪುತ್ತುಮಾಡುವ ಸುಭಟರಟ್ಟೆಗಳುಂ ಸುಭಟರಟ್ಟೆಗಳನೆೞ್ಬಟ್ಟಿ ಕುಟ್ಟುವ ತೊಂಡು ಮರುಳ್ಗಳುಂ ಮರುಳ್ಗಳಾಟಮಂ ಪಳಪಳನೆಮೆಯಿಕ್ಕದೆ ನೋಡಿ ಮುಗುಳ್ನಗೆ ನಗುವ ವೀರಭಟರ ಪಂದಲೆಗಳುಮಗುರ್ವುಮದ್ಭುತ ಭಯಾನಕ ವೀರ ಬೀಭತ್ಸ ರೌದ್ರ ರಸಂಗಳಂ ಪುದುಂಗೊಳಿಸೆ ಗಾಂಗೇಯಂ ನಾಡೆಯುಂ ಪೋೞ್ತು ಕಾದೆ-

ಮ|| ಪಟ್ಟಂಗಟ್ಟಿದಿಳಾನಾಥರೆ ಪಯಿಂಛಾಸಿರ್ವರೊಳ್ಳಾನೆಗಳ್
ಪಟ್ಟಂಗಟ್ಟಿದುವೊಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ ಪಡ|
ಲ್ವಟ್ಟೞ್ಕೂಡಿದುವೊಂದೆ ಬಿಲ್ಗೆನೆ ನದೀಪುತ್ರಂಗೆ ಪೇೞುರ್ ಚಲಂ
ಬಟ್ಟುಂ ಮಾರ್ಮಲೆದಂಬುದೊಟ್ಟುಮುೞವರ್ ಸಂಗ್ರಾಮರಂಗಾಗ್ರದೊಳ್|| ೧೧೭

ವ|| ಎಂಬನ್ನೆಗಂ ಶ್ವೇತನುಮನವರತ ಶರಾಸಾರದಿಂ ಕುರುಬಲಮೆಲ್ಲಮನರೆದು ಸಣ್ಣಿಸಿದಂತೆ ಮಾಡಿ ತವೆ ನೆರವಿಯನೆನಿತಂ ಕೊಂದೊಡಮೇವಂದಪುದೆಂದು ಗಾಂಗೇಯಂಗದಿರದಿದಿರಂ ಮಾರ್ಕೊಂಡು ಬಿಲ್ವೊಯ್ದು ನಿಂದಾಗಳ್-

ಉ|| ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪೆರ್ದೆಗೊಳ್ವುದುಂ ನದೀ
ಜಾತನುದಾತ್ತ ಭಕ್ತಿಯಳೆ ಕೆಯ್ಮುಗಿದಾಗಳಿದೆಂತೊ ನಿಮ್ಮ ಪೆ|
ರ್ಮಾತಿನ ಬೀರಮೀಯೆಡೆಗೆವಂದುದೆ ಮುಪ್ಪಿನೊಳೆಯ್ದೆ ಲೋಕ ವಿ
ಖ್ಯಾತರಿರಾಗಿ ಕೆಯ್ದುವಿಡಿವಲ್ಲಿಯೆ ಕಾಲ್ವಿಡಿಯಲ್ಕೆ ತಕ್ಕುದೇ|| ೧೧೮

ಅಳವಡಿಸಿಕೊಂಡನು. ೧೧೬. ಸೂರ್ಯನ ತೀಕ್ಷ್ಣವಾದ ಕಿರಣಸಮೂಹಗಳು ಲೋಕವನ್ನೆಲ್ಲ ಪೂರ್ಣವಾಗಿ ಆವರಿಸುವ ಹಾಗೆ ವೇಗಶಾಲಿಯಾದ ತನ್ನ ಎರಡು ಕೈಗಳಿಂದಲೂ ಬಿಟ್ಟ ಬಾಣಸಮೂಹಗಳು ಅತ್ಯಂತ ಭಯಂಕರವಾಗಿ ಪ್ರಪಂಚವೆಲ್ಲವನ್ನೂ ಒಟ್ಟಿಗೆ ಸುತ್ತಿಮುತ್ತಿಕೊಂಡುವು. ಆ ಯುದ್ಧದ ಕತ್ತಲೆಯಿಂದ ನಿಜವಾಗಿಯೂ ದಿಕ್ಕೇ ಕಾಣದಂತಾಯಿತು. ಆ ರಣಗತ್ತಲೆ ಅತ್ಯಂತ ಸಾಂದ್ರವಾಗಿತ್ತು. ವ|| ಬಾಣಗಳ ಸಮೂಹದಿಂದ ಜೊತೆ ಜೊತೆಯಾಗಿ ಕೊಂಬನ್ನೂರಿ ಕೆಡೆದಿದ್ದ ಆನೆಗಳ ಗಾಯದ ಡೊಗರುಗಳಿಂದ ಜಿನುಗಿ ಹರಿಯುವ ರಕ್ತದ ಸಮುದ್ರಗಳೂ, ರಕ್ತಸಮುದ್ರದಲ್ಲಿ ಚಲಿಸುತ್ತಿರುವ ಬಾವುಟಗಳ ತುದಿಗಳು ಮಾತ್ರ ತೋರುತ್ತ ಮುಳುಗಿದ್ದ ತೇರುಗಳೂ ತೇರುಗಳಿಗೆ ಅಡ್ಡವಾಗಿ ಬಿದ್ದಿದ್ದ ಮದ್ದಾನೆಗಳೂ ಮದ್ದಾನೆಗಳ ತಲೆಗಳನ್ನು ಒಂದು ಕಡೆಗೆ ಓಸರಿಸಿ ತೇರನ್ನು ಹರಿಯಿಸುವ ಸಾರಥಿಗಳೂ ಸಾರಥಿಗಳು ಬಿಟ್ಟ ಬಾಯಿ ಬಿಟ್ಟ ಹಾಗೆ ತಮ್ಮ ಕರುಳುಗಳೂ ಸೇರಿಕೊಂಡ ಹಾಗೆಯೇ ಕಡಿವಾಣವನ್ನು ಕಚ್ಚಿಕೊಂಡು ರಾಶಿರಾಶಿಯಾಗಿ ಬಿದ್ದಿದ್ದ ಉತ್ತಮವಾದ ಜಾತ್ಯಶ್ವಗಳೂ ಜಾತಿಕುದುರೆಗಳ ಸಮೂಹದಲ್ಲಿ ಸೇರಿಕೊಂಡು ಎಡವುತ್ತ ಆಡುತ್ತಿರುವ ಶೂರರ ಮುಂಡಗಳೂ ಆ ಶೂರರ ಮುಂಡಗಳನ್ನು ಎಬ್ಬಿಸಿ ಓಡಿಸಿ ಬಡಿಯುತ್ತಿರುವ ತುಂಟ ಪಿಶಾಚಿಗಳ ಆಟವನ್ನು ಪಳಪಳನೆ ರೆಪ್ಪೆಬಡಿಯದೆ ನೋಡಿ ಹುಸಿನಗೆ ನಗುವ ಪರಾಕ್ರಮಶಾಲಿಗಳ ಹಸಿಯ ತಲೆಗಳೂ ಭಯ, ಆಶ್ಚರ್ಯ, ಅದ್ಭುತ, ಭಯಾನಕ, ವೀರ, ಬೀಭತ್ಸ, ರೌದ್ರರಸಗಳನ್ನು ಒಟ್ಟುಗೂಡಿಸಿದ್ದಂತೆ ಕಾಣುತ್ತಿತ್ತು. ೧೧೭. ಭೀಷ್ಮನ ಒಂದೇ ಬಿಲ್ಲಿಗೆ ಪಟ್ಟಾಭಿಷಿಕ್ತರಾದ ಹತ್ತು ಸಾವಿರ ಚಕ್ರವರ್ತಿಗಳೂ ಪಟ್ಟಾಭಿಷಿಕ್ತವಾದ ಒಂದು ಲಕ್ಷ ಭದ್ರಗಜಗಳೂ (ಮಂಗಳಕರವಾದ ಆನೆ) ಹತ್ತೆಂಟುಲಕ್ಷ ಕುದುರೆಗಳೂ ಕೆಳಗುರುಳಿ ನಾಶವಾದುವು ಎನ್ನಲು ಯುದ್ಧದಲ್ಲಿ ಪಣದೊಟ್ಟು (ಹಟಮಾಡಿ) ಭೀಷ್ಮನಿಗೆ ಪ್ರತಿಭಟಿಸಿ ಬಾಣಪ್ರಯೋಗಮಾಡಿ ಉಳಿಯುವವರು ಯಾರಿದ್ದಾರೆ? ವ|| ಎನ್ನುತ್ತಿರುವಲ್ಲಿ ಶ್ವೇತನೂ ಒಂದೇ ಸಮನಾದ ಬಾಣದ ಮಳೆಯಿಂದ ಕೌರವಸೈನ್ಯವನ್ನೆಲ್ಲ ಅರೆದು ಪುಡಿಮಾಡಿದಂತೆ ಮಾಡಿ ನಾಶಪಡಿಸಿ ಈ ಸಾಮಾನ್ಯ ಸೈನ್ಯವಷ್ಟನ್ನೂ ಕೊಂದರೆ ಏನು ಪ್ರಯೋಜನ ಎಂಬುದಾಗಿ ಭೀಷ್ಮನಿಗೆ ಹೆದರದೆ ಇದಿರಾಗಿ ಪ್ರತಿಭಟಿಸಿ ಬಿಲ್ಲನ್ನು ಸೆಳೆದು ನಿಂತನು- ೧೧೮. ಶ್ವೇತನ ಬಿಲ್ಲಿನಲ್ಲಿದ್ದ ಮಹಾಶಿವನ ಆಕಾರವು ತನ್ನ ಹೃದಯವನ್ನು ಸೂರೆಗೊಂಡಿತು. ಭೀಷ್ಮನು ಅತ್ಯಂತ ಶ್ರೇಷ್ಠವಾದ ಭಕ್ತಿಯಿಂದ ಕೈಮುಗಿದನು. (ಶ್ವೇತನು ಅವರನ್ನು ಕುರಿತು) ಇದೇನಿದು? ನಿಮ್ಮ ಪ್ರಸಿದ್ಧವಾದ ಪರಾಕ್ರಮವು ಮುಪ್ಪಿನಲ್ಲಿ ಈ ಸ್ಥಿತಿಗೆ ಬಂದಿತೇ?

ಚಂ|| ಎನಗೆ ರಣಾಗ್ರದೊಳ್ ಪೊಣರ್ವೊಡಂಕದ ಪೊಂಕದ ಸಿಂಧುಪುತ್ರನೊ
ರ್ವನೆ ದೊರೆಯೆಂದು ನಿಮ್ಮೊಳೆ ವಲಂ ತಱಸಂದಿಱಯಲ್ಕೆ ಪೂಣ್ದೆನಾ|
ನೆನಗಿಱವೞಯಂ ಕಿಡಿಸಿ ನಿಮ್ಮಳವಂ ಪೆಱಗಿಕ್ಕಿ ನೀಮುಮಿಂ
ತಿನಿತೆರ್ದೆಗೆಟ್ಟಿರಿಂ ತುೞಲ ಸಂದರನಾರುಮನೆಂತು ನಂಬುವರ್|| ೧೧೯

ವ|| ಎಂದು ತನ್ನಂ ನೋಯೆ ನುಡಿದೊಡೆ ಸಿಂಧುಪುತ್ರನಿಂತೆಂದಂ-

ಮ|| ನಿನಗೇನೆಂದೊಡಮೆಂದುದೊಪ್ಪಿದಪುದಂತೇಕೆನ್ನನಿನ್ನೀ ಶರಾ
ಸನದೊಳ್ ಶೂಲಕಪಾಲಪಾಣಿ ದಯೆಯಿಂ ಬಂದಿರ್ದನುಂತಾನುಮಿಂ|
ತಿನಿತಂ ನೀಂ ನುಡಿವನ್ನೆಗಂ ತಡೆವೆನೇ ತ್ರೈಲೋಕ್ಯನಾಥಂ ಕಣಾ
ವಿನಮನ್ಮಸ್ತಕನಾದೆನಣ್ಮುವೊಡೆ ನೀನೀ ದೇವನಂ ತೋಱುವೈ|| ೧೨೦

ಕಂ|| ಇಱವಂತು ನಿನಗೆ ಮನದೊಳ್
ತಱಸಲವುಂಟಪ್ಪೊಡೆಲವೊ ದೇವೇಶನನೇಂ|
ಸೆವಿಡಿದೆ ತೊಲಗು ದೇವನ
ಮಯಂ ಬೞಕಱಯಲಕ್ಕುಮೆನಗಂ ನಿನಗಂ|| ೧೨೧

ವ|| ಎಂಬುದುಂ ಶ್ವೇತನಿಂತೆಂದಂ-

ಉ|| ಕಾಗೆವೊಲಿಂತು ಬಿಲ್ಗೆ ಕರಮಂಜುವಿರಂಜಲಿಮಾ ತ್ರಿಣೇತ್ರನಂ
ಪೋ ಗೆಡೆಗೊಂಡು ಕಾದುವೆನೆ ಕಾದೆನಿದಂ ಹರನಿತ್ತನೆಂದು ನೋ|
ಡಾಗಡುಮೞಯಿಂ ಪಿಡಿವೆನಕ್ಕಟ ನಿಮ್ಮನದಿರ್ಪುವಲ್ಲಿ ಚಾ
ಪಾಗಮಮೇವುದಂತೆನಗೆ ಬಿಲ್ವರಮಾಜಿಯೊಳಾಂಪ ಗಂಡರಾರ್|| ೧೨೨

ಮ|| ಬಿಸುಟೆಂ ಬಿಲ್ಲನದೇವುದೆಂದು ಕಡುಪಿಂದೀಡಾಡಿ ಸೂರ್ಯಪ್ರಭಾ
ಪ್ರಸರಂಗಳ್ ಮಸುಳ್ವನ್ನೆಗಂ ಪೊಳೆವುದೊಂದಂ ಶಕ್ತಿಯಂ ಕೊಂಡಗು|
ರ್ವಿಸಿ ಗಾಂಗೇಯನನಿಟ್ಟನಿಟ್ಟೊಡದನೀರಯ್ದಸ್ತ್ರದಿಂದೆಚ್ಚು ಖಂ
ಡಿಸಿ ಪೇರಾಳ ತಿಱದಿಕ್ಕಿದಂತೆ ತಲೆಯಂ ಪೋಗೆಚ್ಚನಾ ಶ್ವೇತನಾ|| ೧೨೩

ಪೂರ್ಣವಾಗಿ ಲೋಕಪ್ರಸಿದ್ಧವಾಗಿರುವ ನೀವು ಶಸ್ತ್ರಗ್ರಹಣ ಮಾಡಬೇಕಾದ ಕಾಲದಲ್ಲಿ ಶರಣಾಗತರಾಗುವುದು ಯೋಗ್ಯವೇ?

೧೧೯. ಯುದ್ಧಮುಖದಲ್ಲಿ ಕಾದಬೇಕಾದರೆ ಪ್ರಸಿದ್ಧನೂ ಗರ್ವಿಷ್ಠನೂ ಆದ ಭೀಷ್ಮನೊಬ್ಬನೇ ನನಗೆ ಸಮಾನನಾದವನು ಎಂದು ಪೂರ್ಣವಾಗಿ ನಿಷ್ಕರ್ಷೆ ಮಾಡಿಕೊಂಡು ಯುದ್ಧ ಮಾಡುವುದಕ್ಕೆ ನಾನು ಪ್ರತಿಜ್ಞೆ ಮಾಡಿ ಬಂದೆ. ನನಗುಂಟಾದ ಯುದ್ಧೋತ್ಸಾಹವನ್ನು ಕೆಡಿಸಿ ನಿಮ್ಮ ಪರಾಕ್ರಮವನ್ನು ಹಿಂದುಮಾಡಿ ನೀವೂ ಹೇಗೆ ಧೈರ್ಯಹೀನರಾಗಿದ್ದೀರಿ. ಇನ್ನು ಮೇಲೆ ಪರಾಕ್ರಮಶಾಲಿಗಳನ್ನು ಯಾರನ್ನಾದರೂ ಹೇಗೆ ನಂಬುವುದು? ವ|| ಎಂದು ತನಗೆ ನೋವುಂಟಾಗುವ ಹಾಗೆ ನುಡಿಯಲು ಭೀಷ್ಮನು ಹೇಳಿದನು- ೧೨೦. ನೀನು ಏನು ಹೇಳಿದರೂ ನಿನಗೆ ಒಪ್ಪುತ್ತದೆ. ಏಕೆನ್ನುವೆಯಾ? ನಿನ್ನ ಈ ಬಿಲ್ಲಿನಲ್ಲಿರುವ ಶೂಲಕಪಾಲಪಾಣಿಯಾದ ಈಶ್ವರನು ದಯೆಯಿಂದ ಕಾಣಿಸಿಕೊಂಡಿದ್ದಾನೆ. ಹಾಗಿಲ್ಲದ ಪಕ್ಷದಲ್ಲಿ ನೀನು ಇಷ್ಟು ಹರಟುವವರೆಗೆ ತಡೆಯುತ್ತಿದ್ದೆನೇ? ಶಿವನು ಮೂರುಲೋಕದ ಒಡೆಯನಲ್ಲವೇ? ಆದುದರಿಂದ ನಮಸ್ಕಾರ ಮಾಡಿದೆ. ನಾನು ಯುದ್ಧ ಮಾಡುವುದಕ್ಕೆ ಬರಲು ನೀನು ಈಶ್ವರದೇವನನ್ನು ತೋರಿಸುತ್ತೀಯೆ.

೧೨೧. ನಿನಗೆ ಮನಸ್ಸಿನಲ್ಲಿ ಯುದ್ಧಮಾಡುವ ನಿಶ್ಚಯವೇ ಇದ್ದರೆ ದೇವಶ್ರೇಷ್ಠನಾದ ಈಶ್ವರನನ್ನೇಕೆ ಮರೆಹಿಡಿದಿದ್ದೀಯೆ? ದೇವನ ಆಶ್ರಯವನ್ನು ಬಿಟ್ಟು ಕಳೆ. ಬಳಿಕ ನನಗೂ ನಿನಗೂ ಇರುವ ಅಂತರವನ್ನು ತಿಳಿಯಲು ಸಾಧ್ಯವಾಗುತ್ತದೆ. ವ|| ಎನ್ನಲು ಶ್ವೇತನು ಹೀಗೆಂದನು. ೧೨೨. ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ, ಛೀ ಆ ಮುಕ್ಕಣ್ಣನನ್ನು ಆಶ್ರಯಿಸಿ ಕಾದುತ್ತೇನೆಯೆ? ನಾನು! ಇಲ್ಲ. ಇದು ಈಶ್ವರದತ್ತವೆಂಬ ಪ್ರೀತಿಯಿಂದ ಮಾತ್ರ ಇದನ್ನು ಯಾವಾಗಲೂ ಧರಿಸಿದ್ದೇನೆ. ಅಯ್ಯೋ ನಿಮ್ಮನ್ನು ಅಡಗಿಸುವುದಕ್ಕೆ ಧನುರ್ವಿದ್ಯೆ ತಾನೆ ಏಕೆ ನನಗೆ? ಅಲ್ಲದೆ ನಾನು ಬಿಲ್ಲನ್ನು ಹಿಡಿದರೆ ನನ್ನನ್ನು ಪ್ರತಿಭಟಿಸುವ ಶೂರನೂ ಇದ್ದಾನೆಯೇ? ೧೨೩. ಇದೋ ಬಿಲ್ಲನ್ನು ಬಿಸುಟಿದ್ದೇನೆ. ಅದರಿಂದೇನಾಗಬೇಕು ಎಂದು ವೇಗದಿಂದ ಎಸೆದು ಸೂರ್ಯಕಾಂತಿ ಸಮೂಹವನ್ನೂ ಮಸಕುಮಾಡುವಷ್ಟು ಕಾಂತಿಯುಕ್ತವಾದ ಒಂದು ಶಕ್ತಾಯುಧವನ್ನು ತೆಗೆದುಕೊಂಡು ಆರ್ಭಟಮಾಡಿ ಹೊಡೆದನು. ಆ ಹಿರಿಯನು (ಭೀಷ್ಮನು) ಅದನ್ನು

ಕಂ|| ಶ್ವೇತನ ಬೀರಮನುಪಮಾ
ತೀತಮನೀ ಧರೆಗೆ ನೆಗೞೆ ನೆಗೞ್ದುದನಿದನಾಂ|
ಪಾತಾಳಕ್ಕಱಪುವೆನೆಂ
ಬೀ ತೆಱದೊಳೆ ದಿನಪನಪರಜಲನಿಗಿಱದಂ|| ೧೨೪

ವ|| ಆಗಳೆರಡುಂ ಪಡೆಯ ನಾಯಕರಪಹಾರತೂರ್ಯಂಗಳಂ ಬಾಜಿಸಿ ತಮ್ಮ ತಮ್ಮ ಬೀಡುಗಳ್ಗೆ ಪೋದರನ್ನೆಗಮಿತ್ತ ಸಂಸಪ್ತಕಬಲಮನೆಲ್ಲಮನೊಂದೆ ರಥದೊಳಾದಿತ್ಯ ನಸುರರನದಿರ್ಪುವಂತಾಟಂದು ವಿಕ್ರಮಾರ್ಜುನನುಮರಾತಿಕಾಳಾನಳನುಮತಿರಥ ಮಥನನುಂ ರಿಪುಕುರಂಗಕಂಠೀರವನುಂ ಸಾಹಸಾಭರಣನುಮಮ್ಮನ ಗಂಧವಾರಣನುಂ ಪಡೆಮಚ್ಚೆಗಂಡನುಂ ಪರಸೈನ್ಯಭೈರವನುಮೆಂಬ ಪೆಸರ್ಗಳನನ್ವರ್ಥಂ ಮಾಡಿ-

ಚಂ|| ನೆರೆದನುರಾಗದಿಂ ಪಡೆಯ ಪಾಡಿಯ ಬೀರರ ಪೆಂಡಿರೞ್ಕಱಂ
ಪರಸಿಯೊಱಲ್ತು ಸೇಸೆಗಳನಿಕ್ಕೆ ಮುರಾರಿಯ ಪಾಂಚಜನ್ಯ ವಿ|
ಸುರಿತ ರವಂ ಜಯತ್ಸೋವದ ಘೋಷಣೆಯಂತಿರೆ ಪೊಕ್ಕನಾತ್ಮ ಮಂ
ದಿರಮನುದಾತ್ತಚಿತ್ತನವನೀತಳ ಪೂಜ್ಯಗುಣಂ ಗುಣಾರ್ಣವಂ|| ೧೨೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ದಶಮಾಶ್ವಾಸಂ

ಹತ್ತು ಬಾಣಗಳಿಂದ ಹೊಡೆದು ಕತ್ತರಿಸಿ ಆ ಶ್ವೇತನ ತಲೆಯನ್ನು ತಿರುಪಿ (ಜಿಗಟಿ) ಕತ್ತರಿಸಿದಂತೆ ಹೊಡೆದು ಹಾಕಿದನು. ೧೨೪. ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವನ್ನು ನಾನು ಪಾತಾಳಕ್ಕೂ ತಿಳಿಸುತ್ತೇನೆ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು. ವ|| ಆಗ ಎರಡು ಸೈನ್ಯದ ನಾಯಕರೂ ಯುದ್ಧವನ್ನು ನಿಲ್ಲಿಸಲು ಸೂಚಕವಾದ ವಾದ್ಯಗಳನ್ನು ಬಾಜಿಸಿ ತಮ್ಮ ತಮ್ಮ ಬೀಡುಗಳಿಗೆ ಹೋದರು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯವೆಲ್ಲವನ್ನೂ ಒಂದೇ ತೇರಿನಲ್ಲಿ ಕುಳಿತು ಸೂರ್ಯನು ರಾಕ್ಷಸರನ್ನು ಅಡಗಿಸುವಂತೆ ಶತ್ರುಗಳ ಮೇಲೆ ಬಿದ್ದು ಅರ್ಜುನನೂ ಕೂಡಿ ತನ್ನ ಅರಾತಿಕಾಳಾನಳ, ಅತಿರಥಮಥನ, ರಿಪುಕುರಂಗ ಕಂಠೀರವ, ಸಾಹಸಾಭರಣ, ಗಂಧವಾರಣ, ಪಡೆಮೆಚ್ಚಗಂಡ, ಪರಸೈನ್ಯಭೈರವ ಎಂಬ ತನ್ನ ಹೆಸರುಗಳನ್ನು ಸಾರ್ಥಕವಾಗುವಂತೆ (ಅರ್ಥಕ್ಕನುಗುಣವಾಗುವಂತೆ) ಮಾಡಿದನು. ೧೨೫. ಸೈನ್ಯಸಮೂಹದಲ್ಲಿದ್ದ ವೀರಸ್ತ್ರೀಯರು ಸಂತೋಷದಿಂದ ಒಟ್ಟುಗೂಡಿ ಪ್ರೀತಿಯಿಂದ ಹರಸಿ ಸೇಸೆಯನ್ನಿಕ್ಕಿದರು. ಶ್ರೀಕೃಷ್ಣನ ಪಾಂಚಜನ್ಯವೆಂಬ ಶಂಖದ ವಿಜೃಂಭಿತ ಧ್ವನಿಯು ವಿಜಯೋತ್ಸವದ ಡಂಗುರದಂತಿತ್ತು. ಉದಾತ್ತಚಿತ್ತನೂ ಭೂಮಂಡಲದಲ್ಲಿ ಪೂಜಿಸಲ್ಪಡುವ ಗುಣಗಳಿಂದ ಕೂಡಿದವನೂ ಆದ ಗುಣಾರ್ಣವನು ತನ್ನ ಮಂದಿರವನ್ನು ಪ್ರವೇಶಿಸಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ‘ವಿಕ್ರಮಾರ್ಜುನ ವಿಜಯ’ದಲ್ಲಿ ಹತ್ತನೆಯ ಆಶ್ವಾಸ.
***********




*******

ಕಾಮೆಂಟ್‌ಗಳಿಲ್ಲ: