ಪಂಪಭಾರತ : ಗದ್ಯಾನುವಾದ - ಪಂಚಮಾಶ್ವಾಸಂ

ಪಂಚಮಾಶ್ವಾಸಂ

ಕಂ|| ಶ್ರೀ ವೀರಶ್ರೀ ಕೀರ್ತಿ
ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|
ಭಾವಿಸಿದ ಪೆಂಡಿರೆನಿಸಿದ
ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧

ಎಂಬ ಬಗೆಯೊಳ್ ಸುಭದ್ರೆ ಪ
ಲುಂಬಿ ಮನಂಬಸದೆ ತನುವನಾಱಸಲಲರಿಂ|
ತುಂಬಿಗಳಿಂ ತಣ್ಣೆಲರಿಂ
ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಳ್|| ೨

ತಳತಳಿಸಿ ಪೊಳೆವ ಮಾವಿನ
ತಳಿರ್ಗಳಶೋಕೆಗಳ ಮಿಸುಪ ಲತೆಗಳ ನೆಲೆ ಬ|
ಳ್ವಳ ಬಳೆದ ಬೇಟದುರುಳಿಯ
ಬಳಗಮಿದೆಂದೆಳೆಯಳೆಳಸಿ ತಳವೆಳಗಾದಳ್|| ೩

ಕೊಳದ ತಡಿವಿಡಿದು ಬೆಳೆದೆಳ
ದಳಿರ್ಗಳಶೋಕೆಗಳ ಲತೆಯ ಮನೆಗಳೊಳೆ ತೆಱಂ|
ಬೊಳೆವಲರ ಬಸದೆ ಸುೞವಳಿ
ಗಳ ಬಳಗದ ದನಿಗೆ ಕಿನಿಸಿ ಕಿಂಕಿಱವೋದಳ್|| ೪

ಸುರಯಿಯ ಬಿರಿಮುಗುಳ್ಗಳ ಪೊರೆ
ವೊರೆಯೊಳ್ ಪೊವೊರಕನಲ್ಲದಲ್ಲುಗುವ ರಜಂ|
ಬೊರೆದು ಪರಕಲಿಸಿದಳಿಕುಳ
ಪರಿಕರಮುಮನತನುಶಿಖಿಯ ಕಿಡಿಗಳೆ ಗೆತ್ತಳ್|| ೫

ವ|| ಅಂತು ನನೆಯ ಕೊನೆಯ ತಳಿರ ನಿಱದಳಿರ ಮುಗುಳ ಬಿರಿಮುಗುಳ ಮಿಡಿಯ ಕಿಱುಮಿಡಿಯ ಬಲ್ಮಿಡಿಗಳೊಳೆಱಗಿ ತುಱುಗಿದ ಬನಮಂ ಪೊಕ್ಕಲ್ಲಿಯುಂ ಮೆಯ್ಯನಾಱಸಲಾಱದೆ ಪೂತ ಚೂತಲತೆಗಳೊಳ್ ತಳ್ಪೊಯ್ದ ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳ್ಗಳೊಳ್ ತುಱುಗಿದದಿರ್ಮುತ್ತೆಯ ಸುತ್ತಿನೊಳೆಸೆದುಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನೊಳಗುಮಾಡಿ-

೧. ಲಕ್ಷ್ಮಿ, ಜಯಲಕ್ಷ್ಮಿ, ಕೀರ್ತಿಲಕ್ಷ್ಮಿ, ವಾಕ್‌ಲಕ್ಷ್ಮಿ ಎಂಬ ಸ್ತ್ರೀಯರು ತನ್ನನ್ನು ಯಾವಾಗಲೂ ಧ್ಯಾನಿಸುತ್ತಿರುವ ಸ್ತ್ರೀಯರು ಎಂಬ ಸೌಭಾಗ್ಯವನ್ನುಳ್ಳ ಅರ್ಜುನನು ನನ್ನನ್ನು ಪ್ರೀತಿಸುತ್ತಾನೆಯೋ ಇಲ್ಲವೋ? ೨. ಎಂಬ ಮನಸ್ಸಿನಿಂದ ಕೂಡಿದ ಸುಭದ್ರೆಯು ಹಲುಬಿ ಮನಸ್ಸನ್ನು ಎರಡು ಭಾಗ ಮಾಡದೆ (ಏಕಮನಸ್ಕಳಾಗಿ) ಶರೀರದ (ವಿರಹದ) ಸಂತಾಪವನ್ನು ಆರಿಸಿಕೊಳ್ಳಲು ಹೂವಿನಿಂದಲೂ ದುಂಬಿಗಳಿಂದಲೂ ತಂಗಾಳಿಯಿಂದಲೂ ತುಂಬಿದ ತಿಳಿನೀರಿನ ಕೊಳಗಳಿಂದಲೂ ಸೊಗಯಿಸುವ ವನವನ್ನು ಪ್ರವೇಶಿಸಿದಳು. ೩. ತಳತಳ ಎಂದು ಹೊಳೆಯುವ ಮಾವಿನ ಚಿಗುರುಗಳ, ಅಶೋಕ ವೃಕ್ಷಗಳ, ಹೊಳೆಯುವ ಬೆಳ್ಳಿ ಮೋಡಗಳ ಈ ಪ್ರದೇಶವು ಅತ್ಯತಿಶಯವಾಗಿ ಬೆಳೆಯುವ ಪ್ರೇಮದುಂಡೆಗಳ ಸಮೂಹವೆಂದು ಬಾಲೆಯಾದ ಸುಭದ್ರೆಯು ತಳವೆಳಗಾದಳು. ೪. ಸರೋವರದ ದಡವನ್ನೇ ಅನುಸರಿಸಿ ಬೆಳೆದ ಎಳೆಯ ಚಿಗುರನ್ನುಳ್ಳ ಅಶೋಕ ಮರಗಳ ಲತಾಗೃಹಗಳಲ್ಲಿಯೇ ವಿಧವಿಧವಾಗಿ ಹೊಳೆಯುವ ಹೂವುಗಳಿಗೆ ಮುತ್ತಿ ಸುತ್ತಾಡುವ ದುಂಬಿಗಳ ಧ್ವನಿಗೆ ಕೋಪಿಸಿ ಕಿರಿಕಿರಿಯಾದಳು. ೫. ಸುರಗಿಯ ಹೂವಿನ ಅರಳಿದ ಮೊಗ್ಗುಗಳ ಒತ್ತಾದ ಪದರಗಳಲ್ಲಿ ಲಘುವಾಗಿ ಹೊರಳಾಡಿ ಅಲ್ಲಿ ಸುರಿಯುವ ಪರಾಗದಿಂದ ಲೇಪಿಸಲ್ಪಟ್ಟು ಹಾರಾಡುತ್ತಿರುವ ದುಂಬಿಯ ಸಮೂಹದ ಪರಿವಾರವನ್ನು ಕೂಡ ಮದನಾಗ್ನಿಯ ಕಿಡಿಗಳೆಂದೇ (ಸುಭದ್ರೆಯು) ಭಾವಿಸಿದಳು. ವ|| ಹಾಗೆ ಹೂವಿನ, ರೆಂಬೆಗಳ, ಚಿಗುರಿನ, ನಿರಿಯಾಗಿರುವ ಚಿಗುರುಗಳ, ಭಾರದಿಂದ ಬಗ್ಗಿ ಕಿಕ್ಕಿರಿದ ವನವನ್ನು ಪ್ರವೇಶಿಸಿ ಅಲ್ಲಿಯೂ ಶರೀರತಾಪವನ್ನು ಆರಿಸಲಾರದೆ ಹೂವನ್ನು ಬಿಟ್ಟಿರುವ ಮಾವಿನ ಬಳ್ಳಿಗಳಿಗೆ ತಗುಲಿಸಿದ ಹೊಸ ಮುತ್ತಿನ ಹೊದಿಕೆಯಲ್ಲಿ ಬಿರಿದ ಮೊಗ್ಗುಗಳಲ್ಲಿ ಸೇರಿಕೊಂಡಿರುವ ಅದಿರ್ಮುತ್ತೆಯ ಹೂವಿನ ಬಳಸಿನಲ್ಲಿ ಪೂರ್ಣವಾದ ಆಶ್ರಯವನ್ನು ಪಡೆದ ಒತ್ತಾಗಿರುವ ಚಂದ್ರಕಾಂತ ಶಿಲೆಯಿಂದ ಕೂಡಿದ ಒಂದು ಮಾಧವೀ

ಮ|| ಇದಿರೊಳ್ ಕಟ್ಟಿದ ತೋರಣಂ ನಿಱದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ|
ನ್ಮದ ಭೃಂಗಧ್ವನಿ ಮಂಗಳಧ್ವನಿಯೆನಲ್ ಸಾಲ್ವನ್ನೆಗಂ ತಾನೆ ತ
ಕ್ಕುದು ಕಾಮಂಗೆ ವಿವಾಹಮಂಟಪಮೆನಲ್ಕಾ ಮಾದವೀಮಂಟಪಂ|| ೬

ವ|| ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕಳ್ಕಿ ವನದುರ್ಗಂಬುಗುವಂತೆ ಪೊಕ್ಕದಳಗೆ ಕಪ್ಪುರವಳುಕಿನ ಜಗಲಿಯನಗಲಿತಾಗಿ ಸಮೆದು ಚಂದನದೆಳದಳಿರ್ಗಳಂ ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಂಗಳುಮಂ ಯವ ಕಳಿಕೆಗಳೊಳ್ ಸಮೆದ ಕಟಿಸೂತ್ರಮುಮಂ ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನದಱ ಬಿರಿಮುಗುಳ್ಗಳೊಳ್ ಚಿತ್ರಿಸಿದ ಕರ್ಣಪೂರಮುಮಂ ಬಿಳಿಯ ತಾವರೆಯೆಳಗಾವಿನಸಿಯ ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ ಕಪ್ಪುರವಳುಕಿನ ಲಂಗಣಮುಮಂ ತೊಟ್ಟು ಕುಳಿರ್ಕೋೞ್ಪ ಚಂದನರಸಮನೆರ್ದೆಯೊಳಂ ಮೆಯ್ಯೊಳಂ ತಳ್ಕಿಱದು ಕರಿಯ ಕರ್ಬಿನ ಕಾವಿನೆಳ ಮೈಂದವಾೞೆಯೆಲೆಯೆ ಬಿಜ್ಜಣಿಗೆಗಳಿಂ ಬೀಸಲ್ವೇೞ್ದು ತಣ್ಬುಗೆಯ್ಯೆ ಮನದ ಮೆಯ್ಯ ಸಂತಾಪದೊಳ್ ಬಿಸುಸುಯ್ದು ಬಿಸುಪಿನೊಳನಿತುಮಂ ಗೆಲ್ದು-

ಉ|| ಕೆಂದಳಿರ್ವಾಸು ಸೇಕದ ತೊವಲ್ಗೆಣೆಯಾಯ್ತು ಮೃಣಾಳ ನಾಳವೊಂ
ದೊಂದಡೆವೊತ್ತಿ ಪತ್ತಿದುವು ಸೂಸುವ ಶೀತಳವಾರಿ ಮೈಯ್ಯನೆ|
ಯ್ತಂದಿರದೆತ್ತ ಬತ್ತಿದುವು ತಚ್ಛಶಿಕಾಂತಶಿಳಾತಳಂ ಸಿಡಿ
ಲ್ದಂದೊಡೆದತ್ತಿದೇಂ ಬಿಸಿದೊ ಬೇಟದ ಬೆಂಕೆ ಮೃಗಾಂಕವಕ್ತ್ರೆಯಾ|| ೭

ಚಂ|| ಅರಿಗನ ಬೇಟದೊಂದೆ ಪೊಸಬೇಟದ ಕೇಸುರಿಯಿಂದಮೆಯ್ದೆ ದ
ಳ್ಳುರಿ ನೆಗೆದಂದು ಕೆಂದಳಿರ ಪಾಸುಗಳಿಂ ಕುಳಿರ್ವಾಲಿನೀರ್ಗಳಿಂ|
ತುರಿಪದೆ ಸೂಸುತುಂ ಕೆಳದಿಯರ್ ನದಿಪುತ್ತಿರೆ ನೋಡೆ ದಾಹಮೋ
ತ್ತರಿಸಿದುದೊಂದು ಪೊನ್ನ ಸಲಗಿರ್ಪವೊಲಿರ್ದುದು ಮೆಯ್ ಸುಭದ್ರೆಯಾ|| ೮

ಮದನ ದವಾನಲಾರ್ಚಿ ತನುವಂ ಸುಡೆ ತಳ್ತೆಮೆಯೊಳ್ ಪಳಂಚಿ ಬೀ
ಗಿದ ಬೆಳರ್ವಾಯೊಳುಚ್ಚಳಿಸಿ ತುಂಗ ಕುಚಂಗಳ ಪೊಯ್ಲೆಳೆತ್ತಲುಂ|
ಕೆದಱ ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದೊಯ್ಯನೊಯ್ಯನೆ
ಯ್ದಿದುವು ವಿಲೋಲನೇತ್ರ ಜಲಬಿಂದುಗಳಾಕೆಯ ನಿಮ್ನನಾಭಿಯಂ|| ೯

ಮಂಟಪವನ್ನು ಕಂಡಳು ೬. ಇದಿರಿನಲ್ಲಿ ಕಟ್ಟಿದ ತೋರಣದಂತೆ ಚಿಗುರು ಕಾಣುತ್ತಿರಲು ಹೂಗೊಂಚಲು, ಎಲ್ಲೆಲ್ಲಿಯೂ ಎತ್ತಿ ಕಟ್ಟಿದ ಹೂವಿನ ಮಾಲೆಯಂತಿರಲು ಹೂವಿನ ಪರಾಗದ ಕೆಂಪು ರಮ್ಯವಾಗಿರುವ ದಿಕ್ಕಿನ ಕಾಂತಿ, ಹಾಗಿರಲು ಮಧುಮತ್ತವಾದ ದುಂಬಿಗಳ ಧ್ವನಿಯೇ ಮಂಗಳವಾದ್ಯ ಎನ್ನುವಂತೆ ಆ ಮಾಧವೀ ಮಂಟಪವು ಇದೇ ಮದನನ ವಿವಾಹ ಮಂಟಪವಾಗುವುದಕ್ಕೆ ಯೋಗ್ಯವಾದುದು ಎನ್ನುವಂತೆ ಪ್ರಕಾಶಮಾನವಾಗಿದ್ದಿತು. ವ|| ಕಾಮನ ಕೋಟಲೆಗೆ ಹೆದರಿ ಕಾಡಿನ ಕೋಟೆಯನ್ನು ಪ್ರವೇಶಿಸುವ ಹಾಗೆ ಆ ಮಾಧವೀ ಲತಾ ಮಂಟಪವನ್ನು ಪ್ರವೇಶಿಸಿ ಅದರಲ್ಲಿ ಕರ್ಪೂರದ ಹಳುಕಿನ ಜಗುಲಿಯನ್ನು ವಿಸ್ತಾರವಾಗಿ ನಿರ್ಮಿಸಿದಳು. ಶ್ರೀಗಂಧದ ಎಳೆಯ ಚಿಗುರುಗಳನ್ನು ಹಾಸಿದಳು. ಮಲ್ಲಿಗೆಯ ಹೂವುಗಳನ್ನು ಹರಡಿದಳು. ತಾವರೆಯ ದಂಟಿನಿಂದ ಮಾಡಿದ ತಂತಿಬಳೆಗಳನ್ನೂ ಗೋದುವೆಯ ಮೊಳಕೆಗಳಿಂದ ಮಾಡಿದ ಉಡಿದಾರವನ್ನೂ ಕರ್ಪೂರದ ತಿರುಳಿನಿಂದ ರಚಿಸಿದ ಹಾರವನ್ನೂ ಕನ್ನೆ ದಿಲೆಯ ಕಾವಿನಲ್ಲಿ ಮೇಳಿಸಿದ ಕಾಲಂದಿಗೆಯನ್ನೂ ಧರಿಸಿದಳು. ಅದರ ಬಿರಿದ (ಅರಳಿದ) ಮೊಗ್ಗುಗಳಲ್ಲಿ ಚಿತ್ರಿಸಿದ ಕಿವಿಯ ಅಲಂಕಾರವನ್ನು ಬಿಳಿಯ ತಾವರೆಯ ಎಳೆಯ ದಂಟಿನ ನೂಲಿನಲ್ಲಿ ಪೋಣಿಸಿದ ದಪ್ಪ ಮಲ್ಲಿಗೆಯ ಬಿರಿ ಮುಗುಳಿನ ಅಡ್ಡಿಕೆಯನ್ನೂ ಕರ್ಪೂರದ ಹಳುಕಿನ ಹಾರವನ್ನೂ ತೊಟ್ಟಳು. ವಿಶೇಷ ತಂಪಾಗಿರುವ ಶ್ರೀಗಂಧದ ರಸವನ್ನು ಶರೀರದಲ್ಲೆಲ್ಲ ಲೇಪಿಸಿಕೊಂಡಳು. ಕರಿಯ ಕಬ್ಬಿನ ಕಾವಿನ ಎಳೆಯದಾದ ಮಹೇಂದ್ರ ಬಾಳೆಯ ಎಲೆಯ ಬೀಸಣಿಗೆಗಳಿಂದ ಬೀಸಹೇಳಿ ತಂಪನ್ನುಂಟುಮಾಡಲು ಮನಸ್ಸಿನ ಮತ್ತು ಶರೀರದ ಸಂತಾಪದಿಂದ ನಿಟ್ಟುಸಿರನ್ನು ಬಿಟ್ಟಳು. ಆ ಶಾಖದಲ್ಲಿ ಅಷ್ಟು ಶೈತ್ಯೋಪಕರಣಗಳನ್ನು ಮೀರಿಸಿ ೭. ಆ ಕೆಂಪು ಚಿಗುರಿನಿಂದ ಮಾಡಿದ ಹಾಸಿಗೆಯು ಬಿಸಿ ನೀರು ಚಿಮುಕಿಸಿದ ಚಿಗುರಿಗೆ ಸಮಾನವಾಯಿತು. ತಾವರೆಯ ದಂಟೊಂದೊಂದು ತಳಹತ್ತಿಕೊಂಡು ಮೈಗೆ ಅಂಟಿಕೊಂಡವು. ಮೇಲೆ ಚೆಲ್ಲಿದ ತಣ್ಣಗಿರುವ ನೀರು ನಿಧಾನವಾಗಿ ಹರಿದು ಎಲ್ಲಿಯೋ ಬತ್ತಿಹೋಯಿತು. ಆ ಚಂದ್ರಕಾಂತ ಶಿಲಾತಳವು ಸಿಡಿದು ಒಡೆದುಹೋಯಿತು. ಆ ಚಂದ್ರವದನೆಯಾದ ಸುಭದ್ರೆಯ ವಿರಹಾಗ್ನಿಯಿದು ಎಷ್ಟು ಬಿಸಿಯಾದುದೋ? ೮. ಅರ್ಜುನನ ಮೇಲಿನ ಪ್ರೇಮದ ಒಂದು ಹೊಸ ಅನುಭವದ ಒಂದು ಕೆಂಪುಜ್ವಾಲೆಯು ಚಿಮ್ಮಿದಾಗ ಅವಳ ಸಖಿಯರು ಕೆಂಪು ಚಿಗುರಿನ ಹಾಸಿಗೆಯಿಂದಲೂ ತಂಪಾಗಿರುವ ಮಂಜಿನ ನೀರಿನಿಂದಲೂ ಆರಿಸಲು ಪ್ರಯತ್ನಿಸಿದರೂ ಎಲ್ಲರೂ ನೋಡುತ್ತಿರುವ ಹಾಗೆಯೇ ಆ ಉರಿಯು ಮತ್ತೂ ಅಭಿವೃದ್ಧಿಯಾಯಿತು. ಸುಭದ್ರೆಯ ಶರೀರವು ಕಾಸಿದ ಚಿನ್ನದ (ಅಪರಂಜಿಯ) ಸಲಾಕೆಯ ಹಾಗಿದ್ದಿತು. ೯. ಕಾಮವೆಂಬ ಕಾಡುಗಿಚ್ಚಿನ

ನಗೆಮೊಗಮಂ ಪೊದಳ್ದಲರ್ದ ತಾವರೆಯೆಂಬ ವಿಮೋಹದಿಂ ಮೊಗಂ
ಬುಗಲೊಡಮಾ ತಳೋದರಿಯ ಸುಯ್ಗಳ ಬೆಂಕೆಯೊಳಿಚ್ಚೆಗೆಟ್ಟು ತೊ|
ಟ್ಟಗೆ ಕೊಳೆ ಮುಂದೆ ಬಿೞ್ದು ಮಗುೞು ಸತಿಯಿಕ್ಕಿದ ಕಣ್ಣ ನೀರ ಧಾ
ರೆಗಳೊಳೆ ನಾಂದೆಲರ್ಚಿ ಪೊದಳ್ದೊರ್ಮೆಯೆ ಪಾಱದುವುನ್ಮದಾಳಿಗಳ್|| ೧೦

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುರ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕಾರ ಕೃಷ್ಣ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿತ ಜನನಿಚಯ ನಿಚಿತ ಮಾನಸೋನ್ಮತ್ತ ಕಾಮಿನೀ ಗಂಡೂಪ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುತುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದೆವಂದು-

ಚಂ|| ಬಿರಿದಲರೊಳ್ ತೆಱಂಬೊಳೆವ ತುಂಬಿ ತಳಿರ್ತೆಳಮಾವು ಮಾವಿನಂ
ಕುರಮನೆ ಕರ್ಚಿ ಬಿಚ್ಚೞಪ ಕೋಗಿಲೆ ಕಂಪನವುಂಕಿ ಪೊತ್ತು ನಿ|
ತ್ತರಿಪೆರಲೆಂಬಿವೇವುವೊ ಮದೀಯ ಮನೋಗತ ಕಾಮ ರಾಗ ಸಾ
ಗರದೊದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ|| ೧೧

ವ|| ಎನುತ್ತುಂ ಬಂದು ಬಿರಿದ ಬಿರಿಮುಗುಳ್ಗಳೊಳೆಱಗಿ ತುಱುಗಿದಶೋಕಲತೆಯನ್ನೞ್ಕರ್ತು ನೋಡಿ-

ಚಂ|| ಅಲರಲರ್ಗಣ್ ಮುಗುಳ್‌ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ
ಗೊಲೆ ಮೊಲೆ ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್ ನಯಂ ನಯಂ|
ನೆಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋ
ಮಲಲತೆ ಪೇೞಮೆನ್ನಿನಿಯಳಂ ಮಗೊಂಡುದೊ ಸೂಗೊಂಡುದೋ|| ೧೨

ಜ್ವಾಲೆಯು ಶರೀರವನ್ನು ವ್ಯಾಪಿಸಲು ಸುಭದ್ರೆಯ ಚಂಚಲವಾದ ಕಣ್ಣೀರಿನ ಹನಿಗಳು ಮುಚ್ಚಿರುವ ರೆಪ್ಪೆಯನ್ನು ತಗುಲಿ ಬಿಳಿಚಿಕೊಂಡಿರುವ ತುಟಿಯಲ್ಲಿ ಚಿಮ್ಮಿ ನೆಗೆದು ಎತ್ತರವಾದ ಸ್ತನಗಳ ಬಡಿತದಿಂದ ಎಲ್ಲ ಕಡೆಯೂ ಚೆದುರಿ ತ್ರಿವಳಿಗಳ ತೊಡಕುಗಳಲ್ಲಿ ಸೇರಿಕೊಂಡು ನಿಧಾನವಾಗಿ ಆಕೆಯ ಆಳವಾದ ಹೊಕ್ಕುಳನ್ನು ಸೇರಿದುವು. ೧೦. ಸೊಕ್ಕಿದ ದುಂಬಿಗಳು ಸುಭದ್ರೆಯ ಮುಖವನ್ನು ಚೆನ್ನಾಗಿ ಅರಳಿದ ತಾವರೆಯೆಂಬ ಭ್ರಾಂತಿಯಿಂದ ಪ್ರವೇಶಿಸಲು ಆ ತಳೋದರಿಯಾದ ಸುಭದ್ರೆಯ ಉಸಿರಿನ ಬೆಂಕಿಯಲ್ಲಿ ಆಶಾಭಂಗವಾಗಿ ಕಾವು ಹತ್ತಲು ಮುಂದೆ ಬಿದ್ದು ಪುನ ಆ ಸತಿಯು ಸುರಿದ ಕಣ್ಣೀರಿನ ಧಾರೆಗಳಲ್ಲಿ ನೆನೆದು ಚೇತರಿಸಿಕೊಂಡು ಇದ್ದಕ್ಕಿದ್ದ ಹಾಗೆಯೇ ಹಾರಿದುವು. ವ|| ಹಾಗೆ ಬಾಲೆಯು ಕಾದ ಧೂಳಿನಲ್ಲಿ ಬಿಸುಟ ಎಳೆಯ ಬಾಳೆಯ ಹಾಗೆ ಸುರತಮಕರಧ್ವಜನಾದ ಅರ್ಜುನನಲ್ಲಿ ಉಂಟಾದ ವಿರಹದಿಂದ ಮಮ್ಮಲಮರುಗುತ್ತಿದ್ದಳು. ಆ ಕಡೆ ಮನುಜ ಮನೋಜನಾದ ಅರ್ಜುನನೂ ಕೂಡ ಮದನತಾಪವನ್ನು ಸಹಿಸಲಾರದೆ ದುಖಿಸಿ ಕೃಷ್ಣನ ಕಣ್ಣನ್ನು ತಪ್ಪಿಸಿಕೊಂಡು ವಿಜೃಂಭಿಸುತ್ತಿರುವ ಹೊಸತಾವರೆಯ ಸಮೂಹದಿಂದ ಆಕರ್ಷಿಸಲ್ಪಟ್ಟ ದುಂಬಿಗಳಿಂದ ರಮ್ಯವಾದುದೂ ಮರಳಿನ ಸಮೀಪ ಸ್ಥಳದಲ್ಲಿ ಇಡಲ್ಪಟ್ಟು ವಿರಹಿಜನಗಳ ಸಮೂಹದಲ್ಲಿ ಸೇರಿಕೊಂಡಿರುವ ಮನಸ್ಸುಳ್ಳ ಸ್ತ್ರೀಯರು ಮುಕ್ಕುಳಿಸಿದ ಮದ್ಯದಿಂದ ರೋಮಾಂಚಗೊಂಡ ಬಕುಳದ ಮೊಗ್ಗನ್ನುಳ್ಳುದೂ ಅರಳಿದ ಹೂವುಗಳಿಂದ ಕೂಡಿದ ಅಶೋಕವೃಕ್ಷಗಳನ್ನುಳ್ಳದೂ ರಮಣಿಯರ ರಮಣೀಯವಾದ ಕಾಲಂದಿಗೆಯ ಶಬ್ದದಿಂದ ರಮ್ಯವೂ ದಟ್ಟವೂ ಹೂವಿನ ಪರಾಗಗಳಿಂದ ಮಾಸಲಾದ ಮರಳಿನಿಂದ ಬಿಳುಪಾಗಿ ಮಾಡಲ್ಪಟ್ಟ ಭೂಭಾಗವನ್ನುಳ್ಳುದೂ ಅರಳಿರುವ ಚಿಗುರುಗಳ ಲೀಲೆಗೊಳಗಾದ ಮದಿಸಿರುವ ಕೋಗಿಲೆಗಳಿಗೆ ಉಲ್ಲಾಸವನ್ನುಂಟುಮಾಡುವುದೂ ತುಂತುರುಮಳೆಯಿಂದ ದೀರ್ಘವಾದ ಮೋಡ ಕವಿದ ದಿನದಂತಿರುವುದೂ ಆದ ವನವನ್ನು ಅರ್ಜುನನು ಸಮೀಪಿಸಿದನು. ೧೧. ಅರಳಿದ ಪುಷ್ಪದಲ್ಲಿ ವಿಧವಿಧವಾಗಿ ಹೊಳೆಯುವ ದುಂಬಿಯೂ ಚಿಗುರಿದ ಎಳೆಮಾವೂ ಮಾವಿನ ಮೊಳಕೆಯನ್ನೇ ಕಚ್ಚಿ ಉತ್ಸಾಹಗೊಳ್ಳುವ ಕೋಗಿಲೆಯೂ ವಾಸನೆಯನ್ನು ತನ್ನಲ್ಲಿ ಅಡಕಿಕೊಂಡು ಹೊತ್ತು ದಾಟಿ ಬರುವ ಗಾಳಿಯೂ (ವಿರಹ ಪರಿಹಾರಕ್ಕೆ) ಏನುಮಾಡಬಲ್ಲವು. ನನ್ನ ಮನಸ್ಸಿನಲ್ಲಿ ಸೇರಿರುವ ಮನ್ಮಥಪ್ರೇಮಸಾಗರದ ಅಭಿವೃದ್ಧಿಗೆ ಸುಭದ್ರೆಯ ನೋಟವೆಂಬ ಬೆಳದಿಂಗಳಿನ ಸಹಾಯವೊಂದೆ ಸಾಲದೆ ವ|| ಎನ್ನುತ್ತ ಬಂದು ಅರಳಿದ ಬಿರಿಮುಗುಳಿನಿಂದ ಬಾಗಿ ಕಿಕ್ಕಿರಿದಿದ್ದ ಅಶೋಕದ ಬಳ್ಳಿಯನ್ನು ಪ್ರೀತಿಸಿ ನೋಡಿ ೧೨. ಈ ಬಳ್ಳಿಯ ಹೂವು ಅವಳ ಹೂವಿನಂತಿರುವ ಕಣ್ಣು, ಇದರ ಮೊಗ್ಗು ಅವಳ ನಗೆ, ಇದರ ಬಳ್ಳಿ ಅವಳ ತೊಡೆಗಳು, ಇಲ್ಲಿಯ ದುಂಬಿ ಅವಳ ಮುಂಗುರುಳುಗಳು, ಇಲ್ಲಿಯ ಚಿಗುರು ಅವಳ ಅಂಗೈ, ಗೊಂಚಲು ಸ್ತನಗಳು, ಈ ಬಳ್ಳಿಯ ಕೆಂಪು ಬಣ್ಣ

ವ|| ಎಂದು ಕಿಱದಾನುಂ ಬೇಗಮಱ ಮರುಳಾದಂತಾ ಲತೆಯೊಳ್ ಪೞಗಾಳೆಗಂಗಾದಿ ಬರೆವರೆ ಕಾಮದೇವನಿಮ್ಮಾವಿನ ನನೆಯನಂಬುಗಳುಮನವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡೆ-

ಚಂ|| ಅಸಿಯಳನೊಲ್ಗು ಮೊಲ್ಲನಣಮೆನ್ನದೆ ರೂಪನೆ ನೋಡಿ ಕೂಡಲಾ
ಟಿಸಿ ಪರಿದೆಯ್ದಿ ಪತ್ತಿದಲರ್ಗಣ್ಗಳನೇನುಮನೆನ್ನದಂತುಪೇ|
ಕ್ಷಿಸಿ ಮನಮೆಲ್ಲಮಂ ಕವರ್ದಪಂ ತನುವಂ ಬಡಮಾಡಿ ಕಾಡಿ ದಂ
ಡಿಸಿದಪನಂಗಜನ್ಮನ ಕವರ್ತೆಯ ದಂಡದ ಪಾಂಗಿದೆಂತುಟೋ|| ೧೩

ವ|| ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊೞಲ್ದು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ-

ಚಂ|| ಉರಿವೆರ್ದೆಯಾ ಚಿಂತಿಪ ಮನಂ ಗುಡಿಗಟ್ಟೆ ಮರಲ್ದು ನೋಡುವ
ಚ್ಚರಿಯೊಳೆ ಬೆಚ್ಚ ಕಣ್ಮಲರ್ಗೆ ಸಂತಸದಾಗರಮಾಗೆ ಬೇಟದೊಳ್|
ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತೆನಗೀಗಳೀ ವನಾಂ
ತರದೊಳೆ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ|| ೧೪

ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತೆಱದ ಬೇಟದ ಪಡೆಮಾತುಗಳಂ ಕೇಳ್ದಲ್ಲಿಯಾರಾನುಮೆಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು-

ಚಂ|| ಪಡಿದೆವಂದದಿಂದಮೆರ್ದೆಯುಂ ತೆದತ್ತು ಪೊದಳ್ದ ಸಂಕೆಯಿಂ
ನಡುಕಮುಮಾಗಳುಬ್ದದಿಗಮಾದುದು ಸಾಧ್ವಸದಿಂ ಬೆಮರ್ ಬೆಮ|
ರ್ವೆಡೆಗಳಿನುಣ್ಮಿ ಪೊಣ್ಮಿದುದು ಕಣ್ ನಡೆ ನೋಡದೆ ತಪ್ಪು ನೋಡಿ ನಾ
ಣೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ|| ೧೫

ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಯೊಳ್ ಮೂಡಿ ಮುೞುಗಾಡಿದರಂತೆ ಕಿಱದು ಬೇಗಮನಿರ್ತು ತನ್ನಿಂತ ತಾನೆ ಚೇತರಿಸಿ ಸುಭದ್ರೆಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇೞ್ಗೆವಾಡಿವದ ಸಸಿಯಂತೆ ಸೊಗೆಯಿಸುವಸಿಯಳಂ ಕಂಡು-

ಅವಳ ಕೆಂಪು ಬಣ್ಣ, ಅವಳ ತೆಳುವಾದ ಉಗುರುಗಳು ಇದರ ಎಳೆಯದಾದ ಕೊನೆಗಳು, ಕುಡಿಗಳು ಅವಳ ತೋಳುಗಳು; ಬಳ್ಳಿಯ ನಯ ಸುಭದ್ರೆಯ ನಯ, ಇದರ ರೀತಿ, ಅವಳ ರೀತಿ, ಇಲ್ಲಿಯ ಹದವಾದ ಹಣ್ಣುಗಳು ಹೊಳೆಯುವ ತುಟಿಗಳು ಬೇರೆಯಿಲ್ಲ, ಈ ಬಳ್ಳಿಯು ನನ್ನ ಪ್ರಿಯೆಯನ್ನು ಮರೆಯಾಗಿಟ್ಟುಕೊಂಡಿದೆಯೋ ಇಲ್ಲವೇ ಅವಳ ಸರ್ವಸ್ವವನ್ನೂ ಸೂರೆಗೊಂಡಿದೆಯೋ? (ಬಳ್ಳಿಗೆ ಸ್ವತ ಇಷ್ಟೆಲ್ಲ ಸೌಂದರ್ಯವೆಲ್ಲಿ ಬರಬೇಕು?) ವ|| ಎಂದು ಸ್ವಲ್ಪಕಾಲ ಜ್ಞಾನಶೂನ್ಯನಾದ ಹುಚ್ಚನಂತೆ ಆ ಬಳ್ಳಿಯೊಡನೆ ಹುಚ್ಚುಮಾತನಾಡಿ ಬರುತ್ತಿರಲು ಕಾಮದೇವನು ಸಿಹಿಮಾವಿನ ಹೂವುಗಳನ್ನು ಬಾಣಗಳನ್ನಾಗಿಯೂ ಅದರ ಬಲಿತ ಹೀಚುಗಳನ್ನು ಮಣ್ಣಿನುಂಡೆಯನ್ನಾಗಿಯೂ ಮಾಡಿ ಅವನನ್ನು ಹೊಡೆದು ಕಾಡಿದನು. ೧೩. ಕೃಶಾಂಗಿಯಾದ ಸುಭದ್ರೆಯನ್ನು ಇವನು ಪ್ರೀತಿಸುತ್ತಾನೆಯೇ ಇಲ್ಲವೇ ಎಂಬುದೇನನ್ನೂ ಸ್ವಲ್ಪವೂ ಯೋಚಿಸದೇ ರೂಪವನ್ನೇ ನೋಡಿ ಸೇರಿಸಲು ಆಶೆಪಟ್ಟು ಓಡಿಬಂದು ಅಂಟಿಕೊಂಡಿರುವ ಕಣ್ಣುಗಳನ್ನೂ ಏನೂ ಹೇಳದೆ ಉಪೇಕ್ಷಿಸಿ ಮನ್ಮಥನು ಮನಸ್ಸೆಲ್ಲವನ್ನೂ ಸೂರೆಮಾಡುತ್ತಾನೆ. ಶರೀರವನ್ನು ಕೃಶವನ್ನಾಗಿ ಮಾಡಿ ಕಾಡಿ ಶಿಕ್ಷಿಸುತ್ತಾನೆ. ಮನ್ಮಥನ ಈ ಸೂರೆಯ ಈ ಶಿಕ್ಷೆಯ ರೀತಿ ಅದೆಂತಹುದೊ ! ವ|| ಎಂದು ನಂದನವನದ ಸಮೀಪ ಪ್ರದೇಶಗಳಲ್ಲಿ ಮನ್ಮಥನಿಗೆ ಅನನಾಗಿ ಸುತ್ತಿ ತೊಳಲಿ ನೋಡುತ್ತ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದಳು ೧೪. ಉರಿಯುತ್ತಿರುವ ನನ್ನ ಎದೆಯು ಸಮಾಧಾನಗೊಳ್ಳುವ ಹಾಗೆ, ಚಿಂತಿಸುತ್ತಿರುವ ನನ್ನ ಮನಸ್ಸು ಉತ್ಸಾಹಗೊಳ್ಳುವ ಹಾಗೆ, ಪುನ ನೋಡಬೇಕೆಂಬ ಆಶ್ಚರ್ಯದಿಂದಲೇ ಮುಚ್ಚಿಕೊಂಡಿರುವ ನನ್ನ ಕಣ್ಣಿಗೆ ಸಂತೋಷಸ್ಥಾನವಾಗುವ ಹಾಗೆ ವಿರಹದಿಂದ ಬಿರಿಯುತ್ತಿರುವ ಶರೀರವು ಇದ್ದಕ್ಕಿದ್ದ ಹಾಗೆ, ರೋಮಾಂಚಗೊಳ್ಳುವ ಹಾಗೆ ನನ್ನ ಅದೃಷ್ಟದಿಂದ ಹೀಗೆ ಇಲ್ಲಿಯೇ ನನ್ನ ಮನೋರಥಕ್ಕೆ ಜನ್ಮಭೂಮಿಯಾದ ಸುಭದ್ರೆಯನ್ನು ಕಾಣಲು ಸಾಧ್ಯವಾಗುತ್ತದೆಯೇ? ವ|| ಎಂಬುದಾಗಿ ಯೋಚಿಸುತ್ತ ಆಕೆ ಇದ್ದ ಮಾಧವೀಮಂಟಪದ ಹತ್ತಿರಕ್ಕೆ ಬಂದು ಅಲ್ಲಿ ಅದೇತೆರನಾದ ವಿರಹವಾರ್ತೆಯನ್ನು ಕೇಳಿ ನಮ್ಮಂತಹವರೂ ಇಲ್ಲಿ ಯಾರಾದರೂ ಇದ್ದಿರಬಹುದು ಎನ್ನುತ್ತ ಬರುತ್ತಿರುವ ಅರ್ಜುನನನ್ನು ಸುಭದ್ರೆಯು ಇದ್ದಕ್ಕಿದ್ದ ಹಾಗೆ ನೋಡಿದಳು. ೧೫. ಪಡೆಮೆಚ್ಚೆಗಂಡನಾದ ಅರ್ಜುನನ್ನು ನೋಡಿದ ತಕ್ಷಣವೇ ಆ ಸತಿಗೆ ಬಾಗಿಲು ತೆರೆಯುವಂತೆ ಎದೆಯು ತೆರೆಯಿತು, ಉಂಟಾದ ಸಂದೇಹದಿಂದ ನಡುಕವೂ ವಿಶೇಷವಾಗಿ ತಲೆದೋರಿತು; ಸಡಗರದಿಂದ ಬೆವರು, ಬೆವರುವ ಕಡೆಗಳಿಂದ ಹೆಚ್ಚಿ ಹೊರಸೂಸಿತು ;

ಚಂ|| ಸರಸ ಮೃಣಾಳನಾಳವಳಯಂಗಳೊಳುಜ್ಜ್ವಳ ವೃತ್ತ ಮೌಕ್ತಿಕಾ
ಭರಣ ಗಣಂಗಳೊಳ್ ಶಶಿಕರಂಗಳೊಳಾಱದೆ ಬೇಟದೊಳ್ ಕನ|
ಲ್ದುರಿವೆರ್ದೆ ನೋಡ ನೋಡಲೊಡನಾಱದುದೇನಮರ್ದಿಂದೆ ತೊಯ್ದು ಕ
ಪ್ಪುರವಳುಕಿಂದಜಂ ಕಡೆದು ಕಂಡರಿಪಂ ವಲಮೆನ್ನ ನಲ್ಲಳಂ|| ೧೬

ಉ|| ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಪನಾ
ಳ್ದತ್ತು ದುಕೂಲದೊಂದು ಮಡಿವಾಸಿದ ಮಾೞ್ಕೆವೊಲಾಯ್ತು ಮೆಯ್ಯನಿ|
ಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱದಂತೆ ಕಾಮನ
ಚ್ಚೊತ್ತಿದ ಬೇಟದಚ್ಚುಗಳ ಮಾೞ್ಕೆಯೊಳಿರ್ದುದು ಮೆಯ್ ಸುಭದ್ರೆಯಾ|| ೧೭

ವ|| ಅದಱನೀಕೆಯುಮೆನಗೆರಡಱಯದ ನಲ್ಲ ಮನಂದೋಱುವುದು ಸಲ್ಗೆದೋಱುವುದು ಮಾವುದು ದೋಸಮೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಚಿ ಪೋಗಲೆಂದೆೞ್ದ ಕನ್ನೆಯಂ ಚೂತಲತಿಕೆಯಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತೆಂದಳ್-

ಚಂ|| ಮದನನ ಕಾಯ್ದು ಮಾಣ್ಗೆ ಸರಸೀರುಹಜನ್ಮನ ಮೆಚ್ಚು ತೀರ್ಗೆ ಕೊ
ಳ್ಗುದಿ ಮನದಿಂದಮಿಂದು ಪೊಱಮಾಱುಗೆ ಚಂದ್ರಕರಂಗಳಿಂದು ತ|
ಣ್ಣಿದುವೆರ್ದೆಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ
ಟದೊಳಿನಿದಕ್ಕೆ ಮತ್ಸಖಿಗೆ ಬೇ ಪಳಾಳದೊಳೇಂ ಗುಣಾರ್ಣವಾ|| ೧೮

ಬೆಳಗುವ ಸಾಂದ್ರಚಂದ್ರಕಿರಣಾಳಿಗಳೋಳಿಗಳಿಂದಮೆತ್ತಮು
ಜ್ಜ್ವಳಿಸುವಿರುಳ್ಗಳಂ ಕಳೆದುಮೆಯ್ದೆ ತಳಿರ್ತೆಳಮಾವುಮಂ ಮನಂ|
ಗೊಳೆ ನಡೆ ನೋಡಿಯುಂ ಕಿವಿಯನಿಂದೊಳದಿಂಚರಕಾಂತುಮಿಂತು ಕೋ
ಮಳೆಯಸು ಮತ್ತವಿಯೊಡಲೊಳಿರ್ದುದಿದೆಮ್ಮಯ ಸೈಪು ಭೂಪತೀ|| ೧೯

ವ|| ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಂದಾ ವನಾಂತರಾಳಕ್ಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು-

ಕಣ್ಣುಗಳ ಲಜ್ಜೆಯಿಂದ ನೇರವಾಗಿ ನೋಡದೆ ತಪ್ಪು (ಓರೆ) ದೃಷ್ಟಿಯಿಂದ ನೋಡಿದುವು. ವ|| ಆಗ ಸುರತಮಕರಧ್ವಜನಾದ ಅರ್ಜುನನೂ ಕೂಡ ಮನ್ಮಥನ ಅಮೃತಸಮುದ್ರದಲ್ಲಿ ಮೂಡಿ ಮುಳುಗಿದವರ ಹಾಗೆ ಕೆಲವು ಕಾಲವಿದ್ದು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೆ ನೋಡಿ ತನ್ನಲ್ಲುಂಟಾದ ವಿರಹದಿಂದ ಕೃಶನಾಗಿ ಶುಕ್ಲಪಕ್ಷದ ಪಾಡ್ಯದ ಚಂದ್ರನ ಹಾಗೆ ಸೊಗಯಿಸುವ ಕೃಶಾಂಗಿಯನ್ನು ಕಂಡು- ೧೬. ಚಂದ್ರಕಿರಣಗಳಿಂದ ಕಡಮೆಯಾಗದೆ ವಿರಹದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆಯು ರಸಯುಕ್ತವಾದ ತಾವರೆಯ ದಂಟಿನ ಕಂಕಣಗಳಿಂದಲೂ ಹೊಳೆಯುವ ದುಂಡು ಮುತ್ತಿನ ಒಡವೆಗಳಿಂದಲೂ ಕೂಡಿದ ಸುಭದ್ರೆಯನ್ನು ನೋಡಿದೊಡನೆಯೇ ಆರಿ ಹೋಯಿತು; ನಿಜವಾಗಿಯೂ ಬ್ರಹ್ಮನು ಈ ನನ್ನ ಪ್ರಿಯಳನ್ನು ಅಮೃತದಲ್ಲಿ ನೆನೆಸಿ ಕರ್ಪೂರದ ಹಳುಕಿನಿಂದ ಕಡೆದು ಕೊರೆದಿದ್ದಿರಬೇಕು. ೧೭. ದುಂಡಾದ ಮೊಲೆಗಳಿಂದ ಉದುರಿದ ಶ್ರೀಗಂಧದಿಂದ ಚಿಗುರಿನ ಹಾಸಿಗೆಯು ಬಿಳಿಯ ಬಣ್ಣವನ್ನು ತಾಳಿದೆ. ರೇಷ್ಮೆಯ ಮಡಿವಸ್ತ್ರವು ಮಾಸಿದ ವಸ್ತ್ರದಂತಾಗಿದೆ. (ಹಾಸಿಗೆಯ ಮೇಲ) ಮೈಯನ್ನಿಟ್ಟಿರಲಾಗಿ ಆ ಸುಭದ್ರೆಯ ಮೈಯಿ ಕೆಂಪು ಚಿಗುರುಗಳು ಮುದ್ರೆಗಳಿಂದ ಅಚ್ಚೊತ್ತಿದ ಹಾಗೆ ಅಂಟಿಕೊಂಡು ಮನ್ಮಥನು ಮುದ್ರಿಸಿದ ಪ್ರೇಮಮುದ್ರೆಗಳಂತಿವೆ. ವ|| ಆದುದರಿಂದ ಈಕೆಯು ನನಗೆ ನೈಜವಾದ ಮನಸ್ಸನ್ನು ತೋರಿಸುವುದರಲ್ಲಿಯೂ ಸಲಿಗೆಯನ್ನು ತೋರಿಸುವುದರಲ್ಲಿಯೂ ದೋಷವೇನಿದೆ? ಎಂದು ಆಕೆ ಕುಳಿತಿದ್ದ ಚಿಗುರುಹಾಸಿಗೆಯಲ್ಲಿಯೇ ಕುಳಿತನು. ಲಜ್ಜೆಪಟ್ಟು ಹೋಗಲೆಂದು ಎದ್ದ ಕನ್ಯೆಯನ್ನು ಚೂತಲತಿಕೆಯೆಂಬ ಸಖಿಯು ಗದರಿಸಿ ಕುಳ್ಳಿರಿಸಿ ಗಂಧೇಭವಿದ್ಯಾಧರನಾದ ಅರ್ಜುನನನ್ನು ಕುರಿತು ಹೀಗೆಂದಳು- ೧೮. ಮನ್ಮಥನ ಕೋಪ ನಿಲ್ಲಲಿ; ಬ್ರಹ್ಮನು ಆಶೆ ತೀರಲಿ, ಹೃದಯದ ವಿರಹತಾಪ ಮನಸ್ಸಿನಿಂದ ಹೊರಹೋಗಲಿ, ಚಂದ್ರಕಿರಣಗಳು ಇಂದು ಹೃದಯಕ್ಕೆ ತಂಪನ್ನುಂಟುಮಾಡುವುದಾಗಲಿ. ಕೆಂದಳಿರ ಹಾಸಿಗೆಯ ತಾಪವು ಹೋಗಲಿ. ನಿನ್ನನ್ನು ಸೇರುವುದರಿಂದ ನನ್ನ ಸಖಿಗೆ ಸವಿಯುಂಟಾಗಲಿ, ಗುಣಾರ್ಣವನೇ ಇತರ ವ್ಯರ್ಥಾಲಾಪದಿಂದ ಏನು ಪ್ರಯೋಜನ? ೧೯. ಅರ್ಜುನ! ಪ್ರಕಾಶಮಾನವೂ ದಟ್ಟವೂ ಆದ ಚಂದ್ರಕಿರಣಗಳ ಸಮೂಹದಿಂದ ಎಲ್ಲೆಡೆಯೂ ವಿಜೃಂಭಿಸುವ ರಾತ್ರಿಗಳನ್ನು ಕಳೆದು ಸಂಪೂರ್ಣವಾಗಿ ಚಿಗುರಿದ ಎಳೆಯ ಮಾವಿನ ಮರಗಳನ್ನು

ಮ|| ಕುಡಲಿರ್ಪಂ ಬಲದೇವನೆನ್ನನುಜೆಯಂ ದುರ್ಯೋಧನಂಗಾನೊಡಂ
ಬಡೆನೀವೞಯದಾಗಳುಂ ನಿನಗೆ ದಲ್ ಪದ್ಮಾಸನಂ ತಾನೆ ನೇ|
ರ್ಪಡಿಸಲ್ ಕೂಡಿದನಿರ್ಪುದಲ್ತು ನಯಮಿನ್ನೀ ಪೊೞ್ತೆ ಪೊೞುಗೆ ನೀ
ನೊಡಗೊಂಡುಯ್ವುದು ಕನ್ನೆಯಂ ತಡೆಯದಿರ್ ವಿದ್ವಿಷ್ಟವಿದ್ರಾವಣಾ|| ೨೦

ವ|| ಅಂತು ಪೋಗೆವೋಗೆ ಬಲದೇವನನುಮತದೊಳ್ ಪೆಱಗಂ ತಗುಳ್ವ ಯಾದವ ಬಲಮುಂಟಪ್ಪೊಡದನಂಬುಗಾಣಿಸಲ್ ನೀನೆ ಸಾಲ್ವೆಯುೞದುದಂ ಮಾಣಿಸಲಾನೆ ಸಾಲ್ವೆನಿದುವೆ ಮುಹೂರ್ತಮಾಗೆ ನಡೆವುದೆಂದು ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ ದಿವ್ಯರಥಮನೆಸಗಲ್ ದಾರುಕನೆಂಬ ಸಾರಥಿಯನೀವುದುಮಾ ರಥಮಂ ಮನೋರಥನಂ ಬೆರಸೇಱ ಚೂತಲತಿಕೆವೆರಸು ಸುಭದ್ರೆಯನೇಱಲ್ವೇೞ್ದುದಾತ್ತನಾರಾಯಣಂ ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಕೊಂಡು ಬೀೞ್ಕೊಂಡಿಂದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯ್ದನನ್ನೆಗಮಿತ್ತ ಬಲದೇವಂ ಸುಭದ್ರೆಯಂ ಸಾಮಂತಚೂಡಾಮಣಿಯುಯ್ದನೆಂಬುದಂ ಕೇಳ್ದು-

ಮ|| ಉಱದೆನ್ನಂ ಕುಡಲಿರ್ದ ಕೂಸನೊಡಗೊಂಡುಯ್ವಾತನಂ ತಾಗಿ ತ
ಳ್ತಿಱಯಲ್ ಕೋಡಗಗಟ್ಟುಗಟ್ಟಿ ತರಲಿನ್ನಾರಾರ್ಪರಂತಪ್ಪ ಪೊ|
ಚ್ಚಱಸಾಮಂತರೆ ಪೋಗಿಮೆಂದು ಪಲರಂ ಪೇೞುಗಳೆಯ್ತಂದರಂ
ತೊಕೊಳ್ವಂತಿರೆ ಕೊಂಡುವಂದರಿಗನೆಚ್ಚುಗ್ರೇಷು ಧಾರಾಜಳಂ|| ೨೧

ವ|| ಆಗಳ್ ತನ್ನ ಪೇೞ್ದ ನಾಯಕರ ಸಾವಂ ಕೇಳ್ದು ಯಾದವಬಲ ಜಳನಿವೆರಸು ವಿಳಯಕಾಲ ಜಳನಿಯಂತೆ ತೆರಳಲ್ ಬಗೆದ ಬಲದೇವನಂ ವಾಸುದೇವನಿಂತೆಂದಂ-

ಮ|| ಕುಲಮಂ ಪೇೞ್ವೊಡೆ ಸೋಮವಂಶತಿಲಕಂ ಬಿಲ್ಲಾಳ್ತನಂಬೇೞ್ವೊಡು
ಜ್ವಲ ತೀವ್ರಾಸ್ತ್ರನಿಘಾತಪಾತಿತ ರಿಪುವ್ಯೂಹಂ ಬಲಂಬೇೞೆ ದೋ|
ರ್ವಲದೊಳ್ ಕೇಳ್ ನಿನಗಂ ಬಲಸ್ಥನೊಡೆಯಂ ಕೂಸಿಂಗೆ ಕೊಂಡುಯ್ವುದೇ
ಚಲಮೇ ದೋಷಮದರ್ಕೆ ನೀನ್ ಮುಳಿವುದೇ ನೀನ್ ಪೇೞ್ವೊಡಾನ್ ಸಾಲೆನೇ|| ೨೨

ತೃಪ್ತಿಯಾಗುವ ಹಾಗೆ ದೀರ್ಘವಾಗಿ ನೋಡಿಯೂ ಹಿಂದೋಳರಾಗದ ಇಂಪಾದ ಧ್ವನಿಗೆ ಕಿವಿಗೊಟ್ಟೂ ಈ ಕೋಮಳೆಯಾದ ಸುಭದ್ರೆಯ ಪ್ರಾಣವು ಈ ಶರೀರದಲ್ಲಿಯೇ ಇದ್ದುದು ನಮ್ಮ ಅದೃಷ್ಟವೆಂದೇ ಹೇಳಬೇಕು. ವ|| ಎನ್ನುವಷ್ಟರಲ್ಲಿ ಅರ್ಜುನ ಸುಭದ್ರೆಯರ ವಿರಹತಾಪಕ್ಕೆ ಸಂಬಂಧಪಟ್ಟ ಮಾತುಗಳನ್ನು ಕಿವಿಯಿಂದ ಕಿವಿಗೆ ಕೇಳಿ ಸಂತೋಷಪಟ್ಟು ಶ್ರೀಕೃಷ್ಣನು ಕಪಟೋಪಾಯವುಳ್ಳವನಾದುದರಿಂದ ಆ ವನದ ಮಧ್ಯಭಾಗಕ್ಕೆ ಒಬ್ಬನೇ ಬಂದು ಮಾಧವೀಮಂಟಪವನ್ನು ಪ್ರವೇಶಿಸಿ ಅವರಿಬ್ಬರ ಲಜ್ಜೆಯನ್ನೂ ನಡುಕವನ್ನೂ ಹೋಗಲಾಡಿಸಿ ಹೇಳಿದನು. ೨೦. ಬಲರಾಮನು ನನ್ನ ತಂಗಿಯನ್ನು ದುರ್ಯೋಧನನಿಗೆ ದಾನಮಾಡಲಿದ್ದಾನೆ. ನಾನು ಅದಕ್ಕೆ ಒಪ್ಪುವುದಿಲ್ಲ. ನಿನಗೇ ದಾನಮಾಡಬೇಕೆಂಬುದು ನನ್ನ ನಿಶ್ಚಯ. ಇದನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಬ್ರಹ್ಮನು ನಿಮ್ಮಿಬ್ಬರನ್ನೂ ಒಟ್ಟಿಗೆ ಸೇರಿಸಿದ್ದಾನೆ. ಇನ್ನು ಮೇಲೆ ಇಲ್ಲಿರುವುದು ನೀತಿಯಲ್ಲ. ಈ ಹೊತ್ತೆ ಹೊತ್ತಾಗಿ ಅಂದರೆ ಈಗಲೇ ಕನ್ಯೆಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟುಹೋಗು, ವಿದ್ವಿಷ್ಟವಿದ್ರಾವಣನಾದ ಅರ್ಜುನನೇ ತಡಮಾಡಬೇಡ. ವ|| ಹಾಗೆ ಹೋಗುವಾಗಲೂ ಬಲರಾಮನ ಅಭಿಪ್ರಾಯದಂತೆ ಬೆನ್ನಟ್ಟಿಬರುವ ಯಾದವ ಬಲವುಂಟಾದರೂ ಅದಕ್ಕೆ ಬಾಣಪ್ರಯೋಗ ಮಾಡಲು ನೀನು ಶಕ್ತನಾಗಿದ್ದೀಯೆ. ಉಳಿದುದನ್ನು ತಪ್ಪಿಸಲು ನಾನು ಬಲ್ಲೆ, ಇದನ್ನೇ ಸುಮುಹೂರ್ತವನ್ನಾಗಿ ಎಣಿಸಿ ಹೊರಡು ಎಂದು ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವಗಳೆಂಬ ನಾಲ್ಕು ಕುದುರೆಗಳನ್ನು ಹೂಡಿದ್ದ ದಿವ್ಯರಥವನ್ನೂ ಅದನ್ನು ನಡೆಯಲು ದಾರುಕನೆಂಬ ಸಾರಥಿಯನ್ನೂ ಕೊಟ್ಟನು. ಆ ರಥವನ್ನು ಅರ್ಜುನನು ಸಂತೋಷದಿಂದ ಚೂತಲತಿಕೆಯೊಡಗೂಡಿ ಸುಭದ್ರೆಯನ್ನು ಹತ್ತಲು ಹೇಳಿ ನಾರಾಯಣನು ಹರಸಿದ ಹರಕೆಗಳನ್ನು ಅಂಗೀಕರಿಸಿ ಅವನಿಂದ ಅಪ್ಪಣೆಪಡೆದು ಇಂದ್ರಪ್ರಸ್ಥದ ದಾರಿಯಲ್ಲಿ ಸುಖಪ್ರಯಾಣಮಾಡಿದನು. ಅಷ್ಟರಲ್ಲಿ ಈಕಡೆ ಬಲರಾಮನು ಸುಭದ್ರೆಯನ್ನು ಸಾಮಂತಚೂಡಾಮಣಿಯಾದ ಅರ್ಜುನನು ಕರೆದುಕೊಂಡು ಹೋದನೆಂಬುದನ್ನು ಕೇಳಿ- ೨೧. “ನನ್ನನ್ನು ಲಕ್ಷ್ಯಮಾಡದೆ ದಾನಮಾಡಲಿದ್ದ ಹೆಣ್ಣನ್ನು ಜೊತೆಯಲ್ಲಿ ಕೊಂಡು ಹೋದವನನ್ನು ಎದುರಿಸಿ ಹೋರಾಡಲೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿ ತರಲೂ ಯಾರು ಸಮರ್ಥರಾಗಿರುತ್ತಾರೆ, ಅಂತಹ ಪರಾಕ್ರಮವುಳ್ಳ ಶೂರಸಾಮಂತರೇ ಹೋಗಿ” ಎಂದು ಹಲವರನ್ನು ನೇಮಿಸಲು (ಹಾಗೆ ಬಂದು) ಎದುರಿಸಿದವರನ್ನು ಅರ್ಜುನನು ಪ್ರಯೋಗಿಸಿದ ಭಯಂಕರವಾದ ಬಾಣಗಳ ಧಾರಾಪ್ರವಾಹವು ನದಿಯು ನುಗ್ಗುವ ಹಾಗೆ ಆಕ್ರಮಿಸಿ ಕೊಂದಿತು. ವ|| ಆಗ ತಾನು ನಿಯಮಿಸಿದ ನಾಯಕರ ಸಾವನ್ನು ಕೇಳಿ ಯಾದವ ಬಲಸಮುದ್ರದೊಡಗೂಡಿ ಪ್ರಳಯಕಾಲದ ಸಮುದ್ರದಂತೆ ಹೊರಡಲು ಯೋಚಿಸಿದ ಬಲರಾಮನನ್ನು ವಾಸುದೇವನು ಹೀಗೆಂದನು – ೨೨. ಕುಲವನ್ನು ಹೇಳುವುದಾದರೆ ಚಂದ್ರವಂಶದಲ್ಲಿ ಶ್ರೇಷ್ಠನಾದವನಾಗಿದ್ದಾನೆ. ಪರಾಕ್ರಮವನ್ನು

ವ|| ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನಿತ್ತ ವಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದನೇಕ ಸಹಕಾರಶೋಕಾನೋಕಹನಂದನವನಪ್ರಸ್ಧಮನಿಂದ್ರ ಪ್ರಸ್ಥಮನೆಯ್ದೆವಂದು ಮುನ್ನಮೆ ತನ್ನ ಬರವನಱದು ಪೊೞಲೊಳಷ್ಟಶೋಭೆಯಂ ಮಾಡಿ ತನಗಿದಿರ್ವಂದ ಕೊಂತಿಯ ಧರ್ಮಪುತ್ರ ಭೀಮಸೇನಾದಿಗಳ ಪಾದ ಪದ್ಮಂಗಳಂ ತನ್ನ ಕರಕಮಲಂಗಳಿಂದರ್ಚಿಸಿ ತದೀಯಾಶೀರ್ವಚನಂಗಳನಾಂತು ತನಗೆ ಪೊಡಮಟ್ಟ ನಕುಲ ಸಹದೇವಂ ಪರಸಿ ಪುನಪುನರಾಲಿಂಗನಂಗೆಯ್ದು ಮುಹುರ್ಮುಹುರಾಳೋಕನಂಗೆಯ್ಯುತ್ತುಂ ಬಂದು ದಿವಿಜೇಂದ್ರ ವಿಳಾಸದಿಂ ಪೊೞಲಂ ಪುಗೆ-

ಕಂ|| ಪರಸುವ ಪುರಜನದೊದವಿದ
ಪರಕೆಗಳಂಬುನಿನಾದಮಂ ಮಿಗೆ ತಮ್ಮ|
ಯ್ವರುಮೊಡನೆ ಮೆದು ಪರಮಾ
ನುರಾಗದಿಂ ಬಂದು ಪೊಕ್ಕರಂದರಮನೆಯಂ|| ೨೩

ವ|| ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನನಗಲ್ಲ ಪನ್ನೆರಡು ಮಾಸದೊಳಾದ ದಿಗ್ವಿಜಯ ಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮ ಮಿತ್ರತ್ವಮು ಮನಱದು ಸಂತಸಂಬಟ್ಟು ತಮ್ಮನಿಬರುಮೇಕಸ್ಥರಾಗಿ-

ಮ|| ಎರೆದಿಂತಟ್ಟಲೇವೇೞ್ಪ ಕನ್ನೆ ಬೞಯಂ ಬಂದಳ್ ಮರುಳ್ದಂಬುಜೋ
ದರನಿಂತಟ್ಟಿದನಿಂತು ನೋಂತರೊಳರೇ ಸೈಪಿಂಗೆ ನಾಮಿನ್ನಿಳಾ|
ಧರನುಂ ಯಾದವ ವಂಶಜರ್ವೆರಸು ಬರ್ಪಂತಟ್ಟಿ ಮಾೞ್ಪಂ ಮನೋ
ಹರಮಪ್ಪಂತು ವಿವಾಹಮಂಗಳಮನೆಂದಂದಟ್ಟಿದರ್ ದೂತರಂ|| ೨೪

ವ|| ಅಟ್ಟಿದೊಡವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು ತಮ್ಮ ಬಂದ ಕಜ್ಜಮನೊಡಂಬಡಿಸಿ ಯಾದವರ್ವೆರಸು ಮುಂದಿಟ್ಟೊಡಗೊಂಡು ಬರೆ ಬರವನಱದು ಪಾಂಡವರಯ್ವರುಮಿದಿರ್ವೋಗಿ ಯಥೋಚಿತ ಪ್ರತಿಪತ್ತಿಗಳಿಂ ಕಂಡು ಪೊೞಲ್ಗೊಡಗೊಂಡು ಬಂದು ಶುಭದಿನ ನಕ್ಷತ್ರ ಯೋಗಕರಣಂಗಳಂ ನಿಟ್ಟಿಸಿ-

ಹೇಳುವುದಾದರೆ ತನ್ನ ತೀಕ್ಷ್ಣಬಾಣಗಳ ಹೊಡೆತದಿಂದ ಶತ್ರುವ್ಯೂಹವನ್ನು ಕೆಡವಿದ ಸಾಮರ್ಥ್ಯವುಳ್ಳವನಾಗಿದ್ದಾನೆ. ಬಲವನ್ನು ಹೇಳುವುದಾದರೆ ಬಾಹುಬಲದಲ್ಲಿ ನಿನಗಿಂತಲೂ ಬಲಿಷ್ಠನಾದವನು; ನಮ್ಮ ಕೂಸಿಗೆ ಒಡೆಯನಾಗಿ ಕೊಂಡುಹೋಗಲಿ, ಹಟವೇತಕ್ಕೆ? ದೋಷವೇನು? ಅದಕ್ಕೆ ನೀನು ಕೋಪಿಸುವುದೇ? ನೀನು ಹೋರಾಡು ಎಂದು ಆಜ್ಞೆ ಮಾಡುವುದಾದರೆ ಅವನೊಡನೆ ಯುದ್ಧಮಾಡಲು ನಾನೇ ಸಮರ್ಥನಲ್ಲವೇ? ವ|| ಎಂದು ಬಲರಾಮನ ಮನಸ್ಸಿನಲ್ಲುಂಟಾದ ಕೋಪವೆಂಬ ಬೆಂಕಿಯನ್ನು ತನ್ನ ಮೃದುಮಧುರ ವಚನರಸಚನಾಜಲಗಳನ್ನು ಸಿಂಪಿಸಿ ನಂದಿಸಿದನು. ಈ ಕಡೆ ವಿಕ್ರಮಾರ್ಜುನನು ಕೆಲವು ದಿವಸಗಳಲ್ಲಿ ಅನೇಕ ಮಾವಿನ ಮತ್ತು ಅಶೋಕಮರಗಳುಳ್ಳ ವನಗಳಿಂದ ಕೂಡಿದ ಇಂದ್ರಪ್ರಸ್ಥಪುರವನ್ನು ಸೇರಿದನು. ಮೊದಲೇ ತಾನು ಬರುವುದನ್ನು ತಿಳಿದು ಪಟ್ಟಣವನ್ನು ಎಂಟು ವಿಧವಾದ ಅಲಂಕಾರಗಳಿಂದ ಅಲಂಕರಿಸಿತ್ತು. ತನಗಿದಿರಾಗಿ ಬಂದ ಕುಂತೀದೇವಿ, ಧರ್ಮರಾಜ, ಭೀಮಸೇನನೇ ಮೊದಲಾದವರ ಪಾದಕಮಲಗಳನ್ನು ತನ್ನ ಕಮಲಹಸ್ತಗಳಿಂದ ಪೂಜೆಮಾಡಿ ಅವರ ಆಶೀರ್ವಾದಗಳನ್ನು ಪಡೆದನು. ತನಗೆ ನಮಸ್ಕಾರ ಮಾಡಿದ ನಕುಲ ಸಹದೇವರನ್ನು ಹರಸಿ ಪುನ ಪುನ ಆಲಿಂಗನಮಾಡಿಕೊಂಡು ಪುನ ಪುನ ನೋಡುತ್ತ ದೇವೇಂದ್ರ ವೈಭವದಿಂದ ಪಟ್ಟಣವನ್ನು ಪ್ರವೇಶಿಸಿದನು- ೨೩. ಆಗ ಪಟ್ಟಣಿಗರು ಹರಸಿದ ಹರಕೆಗಳು ಸಮುದ್ರಘೋಷವನ್ನು ಮೀರಿರಲು ತಾವಯ್ದುಜನರೂ ಅತ್ಯಂತ ಸಂತೋಷದಿಂದ ಅರಮನೆಯನ್ನು ಪ್ರವೇಶಿಸಿದರು. ವ|| ಹಾಗೆ ಅರಮನೆಯನ್ನು ಪ್ರವೇಶಿಸಿ ಧರ್ಮರಾಜನನ್ನು ಅಗಲಿಹೋದ ಹನ್ನೆರಡು ತಿಂಗಳುಗಳಲ್ಲಿ ನಡೆದ ದಿಗ್ವಿಜಯದ ವಿಷಯವನ್ನೂ ಸುಭದ್ರಾಪಹರಣವನ್ನೂ ಎಲ್ಲರೂ ಕೇಳಿದರು. ಪುರುಷೋತ್ತಮನಾದ ಶ್ರೀಕೃಷ್ಣನ ಉತ್ತಮ ಸ್ನೇಹಸ್ವಭಾವವನ್ನು ತಿಳಿದು ಸಂತೋಷಪಟ್ಟರು. ತಾವೈದು ಜನವೂ ಒಮ್ಮನಸ್ಸಿನಿಂದ. ೨೪. ನಮಗೆ ದಾನವಾಗಿ ಕೊಡಿ ಎಂದು ದೂತರ ಮೂಲಕ ಪ್ರಾರ್ಥಿಸಿ ಪಡೆಯಬೇಕಾದ ಕನ್ಯೆಯು ತಾನಾಗಿಯೇ ಜೊತೆಯಲ್ಲಿಯೇ ಬಂದಿದ್ದಾಳೆ. ಕೃಷ್ಣನೇ ಹೀಗೆ ಕಳುಹಿಸಿಕೊಟ್ಟಿದ್ದಾನೆ. ಇಂತಹ ಅದೃಷ್ಟಶಾಲಿಗಳಾದವರು (ವ್ರತ ಮಾಡಿರುವವರು) ಬೇರೆ ಯಾರಿದ್ದಾರೆ. ನಾವು ಇನ್ನು ಯಾದವರೊಡಗೂಡಿ ಕೃಷ್ಣನು ಬರುವ ಹಾಗೆ ದೂತರನ್ನು ಕಳುಹಿಸಿ ಮನೋಹರವಾಗಿರುವ ರೀತಿಯಲ್ಲಿ ಮದುವೆಯ ಮಂಗಳವನ್ನು ಮಾಡೋಣ ಎಂದು ದೂತರನ್ನು ಅಟ್ಟಿದರು. ವ|| ಅವರು ಹೋಗಿ ಬಲರಾಮನನ್ನೂ ವಾಸುದೇವನನ್ನೂ ಕಂಡು ತಾವು ಬಂದ ಕಾರ್ಯಕ್ಕೆ ಅವರು ಒಪ್ಪುವ ಹಾಗೆ ಮಾಡಿ ಯಾದವರೊಡಗೂಡಿ ಅವರನ್ನೇ ಮುಂದುಮಾಡಿಕೊಂಡು ಬಂದರು. ಅವರು ಬರುವುದನ್ನು ತಿಳಿದು ಪಾಂಡವರೈದು ಮಂದಿಯೂ ಅವರಿಗಿದಿರಾಗಿ ಹೋಗಿ ಸೂಕ್ತವಾದ ಸತ್ಕಾರಗಳಿಂದ ಕಂಡು ಪಟ್ಟಣಕ್ಕೆ ಜೊತೆಯಲ್ಲಿ ಕರೆದುಕೊಂಡು ಬಂದರು.

ಮ|| ಪಸುರ್ವಂದರ್ ಪರೆ ವೇದಪಾರಗರವಂ ಕಣ್ಬೇಟದುದ್ದಾನಿಯಂ
ಪಸರಂ ಗೆಯ್ದವೊಲಪ್ಪ ಪೊಚ್ಚಱ ಮಹಾ ಸಾಮಂತ ಸೀಮಂತಿನೀ|
ಪ್ರಸರಂ ಮಂಗಳ ತೂರ್ಯನಾದಮೆಸೆಯುತ್ತಿರ್ಪನ್ನೆಗಂ ಚಕ್ರಿ ರಾ
ಗಿಸಿ ಕೆಯ್ನೀರೆದಂ ಗುಣಾರ್ಣವ ಮಹೀಪಾಲಂಗಮಾ ಕನ್ನೆಯಂ|| ೨೫

ವ|| ಅಂತವರಿರ್ವರ ಬೇಟಮೆಂಬ ಲತೆಯ ಬೆಳಸಿಂಗೆ ಪೊರೆವಂತೆ ಕೆರೆದು ಬಿಯಮಂ ಮೆದು-

ಪಿರಿಯಕ್ಕರಂ|| ತೊಟ್ಟ ತುಡುಗೆಗಳ್ ಕೌಸ್ತುಭರತ್ನಮನೋರೆಂದೆ ಮಸುಳಿಸೆ ಪಾಲ್ಗಡಲೊಳ್
ಪುಟ್ಟಿದಾನೆಯನಾನೆಗಳ್ ಗೆಲೆವರೆ ಕುದುರೆಗಳ್ ಕುದುರೆಯಂ ಕೀೞುಡೆ|
ತೊಟ್ಟ ಮದನನ ಪೂಗಣೆಗೆಣೆಯಾಗೆ ಗಣಿಕೆಯರ್ ಗಣಿದಮಂ ಬಗೆಯದಿಂತು
ಕೊಟ್ಟಂ ತಂಗೆಗೆ ಬೞವೞಯೆಂದಿಂತು ಸರ್ವಸ್ವಮೆಲ್ಲಮಂ ಪುರುಷೋತ್ತಮಂ|| ೨೬

ವ|| ಅಂತು ಬೞವೞಗೊಟ್ಟಿಂಬೞಯಂ ಧರ್ಮಪುತ್ರಂ ಬಲದೇವನನೆನಿತಾನುಮುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ದ್ವಾರಾವತಿಗೆ ಕೞಪಿದನಾ ವಿವಾಹೋತ್ಸವಾನಂತರದೊಳ್-

ಚಂ|| ತಳಿರ್ಗಳ ಪಾಸಿನೊಳ್ ಪೊರಳುತಿರ್ದೞಲಂ ಕಿಡೆ ಸೋಂಕೆ ಸೋಂಕುಗಳ್
ಕಳೆದುವು ಮೆಯ್ಯ ಸುಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್|
ಕಳೆದುವು ನಾಣುಮಂ ಕಿಱದು ಜಾಣುಮನೞ್ಕಱನೀವ ಚುಂಬನಂ
ಕಳೆದುವು ಗರ್ವಮಂ ಕಳೆದುವಂತವರಿರ್ವರ ಮನ್ಮಥದ್ರವಂ|| ೨೭

ಮಾಲಿನಿ|| ಅಭಿನವ ಮದಲೇಖಾ ಲಾಲಿತಂ ವಿಭ್ರಮ ಭ್ರೂ
ರಭಸ ಗತಿವಿಳಾಸಂ ದೀಪ್ತ ಕಂದರ್ಪ ದರ್ಪ||
ಕ್ಷುಭಿತ ಗಳನಿನಾದಂ ಪ್ರಸುರದ್ಘರ್ಮವಾರಿ
ಪ್ರಭವಮೆಸೆದುದಂತಾ ಕಾಂತೆಗಾ ಕಾಂತಸಂಗಂ|| ೨೮

ವ|| ಅಂತು ಕಾಮದೇವನುಂ ರತಿಯುಂ ವಸಿಷ್ಠನುಮರುಂಧತಿಯುಮೀಶ್ವರನುಂ ಪಾರ್ವತಿಯುಮೆನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನುರಾಗಮಂ ಪಡೆಯೆ ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ್ ತೋ-

ಶುಭಕರವಾದ ದಿನ, ನಕ್ಷತ್ರಯೋಗ ಕರಣಗಳನ್ನು ನೋಡಿ- ೨೫. ಹಸಿರುವಾಣಿಯ ಚಪ್ಪರ, ಹಸೆಯಮಣೆ, ಪಂಡಿತರ ವೇದಘೋಷ ಇವು ಕಣ್ಣಿಗೆ ತೃಪ್ತಿಯನ್ನುಂಟುಮಾಡುತ್ತಿರಲು ಅಂಗಡಿಯ ಸಾಲಿನ ಹಾಗೆ ಶೂರರ, ಮಹಾ ಸಾಮಂತರ, ಸುಮಂಗಲೀಸ್ತ್ರೀಯರ ಸಮೂಹವು ಓಳಿಗೊಂಡಿರಲು ಮಂಗಳವಾದ್ಯ ಧ್ವನಿ ಘೋಷಿಸುತ್ತಿರಲು ಶ್ರೀಕೃಷ್ಣನು ಪ್ರೀತಿಯಿಂದ ಗುಣಾರ್ಣವ ಮಹಾರಾಜನಿಗೆ (ಅರ್ಜುನನಿಗೆ) ಕನ್ಯೆಯಾದ ಸುಭದ್ರೆಯನ್ನು ಧಾರಾಪೂರ್ವಕ ದಾನಮಾಡಿಕೊಟ್ಟನು. ವ|| ಹಾಗೆ ಅವರಿಬ್ಬರ ಪ್ರೇಮವೆಂಬ ಬಳ್ಳಿಗೆ ಹೊಯ್ ನೀರೆರೆಯುವಂತೆ ಧಾರಾಜಲವನ್ನು ಕೊಟ್ಟು ಯಥೇಚ್ಛವಾಗಿ ದ್ರವ್ಯವನ್ನು ದಾನಮಾಡಿದನು. ೨೬. ವಿಷ್ಣುವಿನ ಹೃದಯದಲ್ಲಿರುವ ಕೌಸ್ತುಭರತ್ನವನ್ನೂ ಕಾಂತಿಹೀನವನ್ನಾಗಿ ಮಾಡುವ ಅನೇಕ ಆಭರಣಗಳನ್ನೂ ಐರಾವತವನ್ನೂ ಕೀಳ್ಮಾಡುವ ಆನೆಗಳನ್ನೂ ಉಚ್ಚೆ

ಶ್ರವಸ್ಸನ್ನು ತಿರಸ್ಕರಿಸುವ ಕುದುರೆಗಳನ್ನೂ ಮನ್ಮಥನ ಪುಷ್ಪಬಾಣಗಳಂತಿರುವ ವೇಶ್ಯಾಸ್ತ್ರೀಯರನ್ನೂ ಅಸಂಖ್ಯಾತವಾಗಿ ಕೃಷ್ಣನು ತಂಗಿಗೆ ಬಳುವಳಿಯಾಗಿ ಕೊಟ್ಟನು. ವ|| ಹಾಗೆ ಬಳುವಳಿ ಕೊಟ್ಟ ಬಳಿಕ ಧರ್ಮರಾಜನು ಬಲರಾಮನನ್ನು ಅನೇಕ ಉಚಿತ ಸತ್ಕಾರಗಳಿಂದ ಸಂತೋಷಪಡಿಸಿ ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟನು. ಆ ಮದುವೆಯ ಮಹೋತ್ಸವವಾದ ಮೇಲೆ ೨೭. ಅರ್ಜುನ ಸುಭದ್ರೆಯರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಚಿಗುರಿನ ಹಾಸಿಗೆಯಲ್ಲಿ ಹೊರಳುತ್ತಿದ್ದ ದುಖವನ್ನು ಅವರ ಪರಸ್ಪರ ಸ್ಪರ್ಶಗಳು ಕಳೆದುವು; ಶರೀರದ ಉಸುರಿನ ಬೆಂಕಿಯನ್ನು ಅವರ ಬಿಗಿಯಾಗಿ ಅಪ್ಪಿದ ಆಲಿಂಗನಗಳು ಕಳೆದುವು. ಲಜ್ಜೆಯನ್ನೂ ಜಾಣ್ಮೆಯನ್ನೂ ಅವರ ಪರಸ್ಪರ ಪ್ರೀತಿಯಿಂದ ಕೊಡುತ್ತಿರುವ ಮುತ್ತುಗಳು ಹೋಗಲಾಡಿಸಿದುವು. ಅವರಿಬ್ಬರ ಮದನೋದಕವು ಅವರ ಹೆಮ್ಮೆಯನ್ನು ಕಳೆದವು. ೨೮. ಹೊಸದಾದ ಮದಲೇಖೆಯಿಂದ ಲಾಲಿಸಲ್ಪಟ್ಟ, ಸುಂದರವಾದ ಹುಬ್ಬಿನ ವೇಗವಾದ ವಿಲಾಸವನ್ನುಳ್ಳ ಹೆಚ್ಚಾದ ಕಾಮಗರ್ವದಿಂದ ಕೆರಳಿದ ಕೊರಳಿನ ಶಬ್ದವನ್ನುಳ್ಳ ಪ್ರಕಾಶಮಾನವಾದ ಬೆವರುಗಳನ್ನು ಹುಟ್ಟಿಸುವ ಆ ಪ್ರಿಯನ ಸಮಾಗಮವು ಆ ಸುಭದ್ರೆಗೆ ಸಂತೋಷವನ್ನುಟುಮಾಡಿತು. ವ|| ಮನ್ಮಥನೂ ರತಿಯೂ, ವಸಿಷ್ಠನೂ ಅರುಂಧತಿಯೂ ಈಶ್ವರನೂ ಪಾರ್ವತಿಯೂ ಎನ್ನಿಸಿ ಸಮಾನವಾದ ರೂಪ, ಸಮಾನವಾದ ಶಕ್ತಿ, ಸಮಾನವಾದ ಸುರತಕ್ರೀಡೆಗಳಲ್ಲಿ ಸಮಾನವಾದ ಪ್ರೀತಿಯನ್ನು ಪಡೆಯುತ್ತಾ

ಕಂ|| ಒಟ್ಟಜೆಯಿಂ ಭಾರತದೊಳ್
ಕಟ್ಟಾಳ್ಗಳನಿಱದು ತವಿಸಲಾ ಜೆಟ್ಟಿಗರಂ|
ಪುಟ್ಟಿದನೆಂಬವೊಲದಟಂ
ಪುಟ್ಟಿದನಭಿಮನ್ಯು ಕಲಿತನಂ ಪುಟ್ಟುವವೋಲ್|| ೨೯

ವ|| ಅಂತಾತಂ ಪುಟ್ಟುವುದುಂ ತಮಗೆ ಸಂತಸಂ ಪುಟ್ಟಿ ಸುಖಮಿರ್ಪನ್ನೆಗಂ-

ಚಂ|| ಅಗರುವ ಮೆಚ್ಚುವಚ್ಚ ಸಿರಿಕಂಡದೊಳಗ್ಗಲಿಸಿತ್ತು ಸೂಡು ಶ
ಯ್ಯೆಗಳ ಬಿಯಕ್ಕೆ ಜೊಂಪದಲರ್ವಾಸುಗಳೊಳ್ ನೆಲಸಿತ್ತು ಪೂತ ಗೊ|
ಜ್ಜಗೆಗಳ ಸಿಂದುರಂಗಳೊಳಗೋಗರಗಂಪನೆ ಬೀಱುತಿರ್ಪ ಮ
ಲ್ಲಿಗೆಯೊಳರಲ್ದ ಸಂಪಗೆಯೊಳಗ್ಗಲಿಸಿತ್ತು ಬಸಂತಮಾಸದೊಳ್|| ೩೦

ಉ|| ಮುಂ ಮಹಿಯೆಲ್ಲಮಂ ಶಿಶಿರರಾಜನೆ ಬಿಚ್ಚತಮಾಳ್ದನೀಗಳಾ
ತಂ ಮಿಡುಕಲ್ಕೆ ಸಲ್ಲಿರದೆ ಪೋಪುದದೇಕೆನೆ ಕಾಮದೇವನಿ|
ತ್ತಂ ಮಧು ಪೆತ್ತನೀ ನೆಲನನಿಂತಿದು ಪತ್ತಳೆಯೆಂದು ಸಾಱುವ
ದಂ ಮಿಗೆ ಕರ್ಚಿ ಪಾಱದುವು ಕೆಂದಳಿರಂ ಗಿಳಿವಿಂಡಿನೋಳಿಗಳ್|| ೩೧

ಚಂ|| ಕೆೞಗಣ ಕೆಂದಳಿರ್ ಪುದಿದ ಮೇಗಣ ಪಂದಳಿರೊಂದಿದೊಂದು ಕೆ
ಯ್ಗೞದ ಪಸುರ್ಪುಮಂ ಪೊಳೆವ ಕೆಂಪುಮನಾಳ್ದಿರೆ ಬೇಟದೊಳ್ ಕನ|
ಲ್ದುೞದ ವಿಯೋಗಿಯಳ್ಳೆರ್ದೆಯನಾಯ್ದದನಾಟಿಸಲೆಂದೆ ಮನ್ಮಥಂ
ಘೞಯಿಸಿ ಕೆಂಪುವಾಸಿದವೊಲಿರ್ದುವು ಮಾಮರಗಳ್ ಬಸಂತದೊಳ್|| ೩೨

ಚಂ|| ಪರೆಯೆ ಪಸುರ್ಪು ಬೆಳ್ಪಡರೆ ಬಲ್ಮುಗುಳೊಳ್ ಪೊರೆದೋ ತೆಂಬೆರಲ್
ಪೊರೆವೊರೆಯಂ ಸಡಿಲ್ಚೆ ನಡು ಪೊಂಗಿರೆ ಮಲ್ಲಿಗೆಗಳ್ ಬಸಂತದೊಳ್|
ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ಬಸಂತದೊಳ್
ಬಿರಿದುವಂದೆಂತೊ ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ ವೇಳೆಗೊಂಡುದೋ|| ೩೩

ಸುಖವಾಗಿರಲು ಸುಭದ್ರೆಗೆ ಗರ್ಭ ಚಿಹ್ನೆಗಳು ತೋರಿದುವು. ೨೯. ಪರಾಕ್ರಮದಿಂದ ಭಾರತ ಯುದ್ಧದಲ್ಲಿ ಅತ್ಯಂತ ಶೂರರಾದ ವೀರನನ್ನು ಕತ್ತರಿಸಿ ನಾಶಪಡಿಸುವುದಕ್ಕೆ ಹುಟ್ಟಿದನೆಂಬ ಹಾಗೆ ಪರಾಕ್ರಮಶಾಲಿಯಾದ ಅಭಿಮನ್ಯುವು ಪರಾಕ್ರಮವೇ ಮೂರ್ತಿವತ್ತಾಗಿ ಹುಟ್ಟುವ ಹಾಗೆ ಹುಟ್ಟಿದನು. ವ|| ಆತನು ಹುಟ್ಟಲಾಗಿ ತಮಗೆ ಸಂತೋಷವೂ ಹುಟ್ಟಿ ಸುಖವಾಗಿರುವಷ್ಟರಲ್ಲಿ ೩೦. ವಸಂತಋತು ಪ್ರಾಪ್ತವಾಯಿತು. ಚಳಿಗಾಲದಲ್ಲಿ ಶಾಖಕ್ಕಾಗಿ ಉಪಯೋಗಿಸುತ್ತಿದ್ದ ಅಗರುವಿನಲ್ಲಿದ್ದ ತೃಪ್ತಿಯು ಸ್ವಚ್ಛವಾದ ಶ್ರೀಗಂಧದ ಲೇಪನದಲ್ಲಿ ಅತಿಶಯವಾಯಿತು. ಬೆಚ್ಚನೆಯ ಹಾಸಿಗೆಯಲ್ಲಿದ್ದ ಬಯಕೆಯು ಗೊಂಚಲಾಗಿರುವ ಹೂವಿನ ಹಾಸಿಗೆಯಲ್ಲಿ ನೆಲೆಸಿತು. ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧುವಾರ ಹೂವುಗಳಲ್ಲಿದ್ದ ಆಸಕ್ತಿ ಮಿಶ್ರಗಂಧವನ್ನು ಬೀರುತ್ತಿರುವ ಮಲ್ಲಿಗೆಯಲ್ಲಿಯೂ ಅರಳಿದ ಸಂಪಗೆಯಲ್ಲಿಯೂ ಅತಿಶಯವಾಯಿತು. ೩೧. ಮೊದಲು ಭೂಮಿಯನ್ನೆಲ್ಲ ಮಾಗಿಯ ಕಾಲವೆಂಬ ರಾಜನು ತಾನೇ ತಾನಾಗಿ ಆಳಿದನು. ಈಗ ಆತನು ಚಲಿಸಲು ಸಾಧ್ಯವಿಲ್ಲ ಇರದೆಹೋಗಬೇಕು. ಅದೇಕೆಂದರೆ ಈ ಭೂಮಿಯನ್ನು ಮನ್ಮಥನು ಕೊಟ್ಟನು, ವಸಂತರಾಜನು ಪಡೆದನು. ಇದು ಹೀಗೆ ರಾಜಶಾಸನ (ಓಲೆಯಪತ್ರ) ಎಂದು ಡಂಗುರ ಹೊಡೆಯುವ ರೀತಿಯಲ್ಲಿ ಗಿಳಿಯ ಹಿಂಡಿನ ಸಾಲುಗಳು ಕೆಂಪಾದ ಚಿಗುರುಗಳನ್ನು ಕಚ್ಚಿಕೊಂಡು ಹಾರಿದುವು. ೩೨. ಕೆಳಭಾಗದ ಕೆಂಪು ಚಿಗುರಿನಿಂದ ಕೂಡಿದ ಮೇಲುಭಾಗದ ಹಸರು ಚಿಗುರು ಒಂದಕ್ಕೊಂದು ಕೂಡಿಸಿಕೊಂಡು ಅತಿಶಯವಾದ ಹಸಿರು ಬಣ್ಣವನ್ನೂ ಹೊಳೆಯುವ ಕೆಂಪು ಬಣ್ಣವನ್ನೂ ಹೊಂದಿರಲು ವಿರಹದಿಂದ ಕೆರಳಿ ಉಳಿದುಕೊಂಡ ವಿರಹಿಯ ನಡುಗುವ ಎದೆಯನ್ನು ಆಯ್ದುಕೊಂಡು ಅದನ್ನು ಬಯಸಲಿ ಎಂದೇ ಮನ್ಮಥನು ಅದನ್ನು ಸೇರಿಸಿ ಕೆಂಪು ಬಣ್ಣವನ್ನು ಹಾಸಿದ ಹಾಗೆ ಮಾವಿನ ಮರಗಳು ವಸಂತ ಕಾಲದಲ್ಲಿ ರಮ್ಯವಾಗಿದ್ದುವು. ೩೩. ವಸಂತಕಾಲದಲ್ಲಿ ಮಲ್ಲಿಗೆಯ ಹಸಿರು ಬಣ್ಣ ಹೋಗಿ ಬಲಿತ ಮೊಗ್ಗುಗಳಲ್ಲಿ ಬಿಳಿಯ ಬಣ್ಣವು ಕೂಡಿದವು. ದಳದ ಪದರಗಳು ತೋರುತ್ತಿರಲು ತಂಗಾಳಿಯು ಆ ದಳದ ಪದರಗಳನ್ನು ಸಡಲಿಸಿದವು. ಮೊಗ್ಗಿನ ಮಧ್ಯಭಾಗವು ಉಬ್ಬಿ ಮಲ್ಲಿಗೆಯು ಅರಳಿರಲು ಪ್ರಿಯರನ್ನು ನೆನಸಿಕೊಂಡ ವಿರಹಿಗಳ ಹೃದಯಗಳು ಒಡೆದುವು. ಮಲ್ಲಿಗೆಯ ಅರಳುವಿಕೆಗೆ ಪ್ರಿಯ ಮೃದುಹೃದಯವೂ ಸಮಯಪಾಲನೆ ಮಾಡಿವೆ ! ೩೪. ಹೂವಿನ

ನನೆಯೆಳಗಂಪನೆತ್ತಿಯುಮಣಂ ನನೆ ನಾಱದರಲ್ದನೇಕ ಕೋ
ಕನದ ವನಂಗಳೊಳ್ ಸುೞದು ತಣ್ಣಸಮಾಗದೆ ಕೂಡೆ ಬಂದ ಮಾ|
ವಿನ ಪೊಸ ಪೂವಿನೊಳ್ ಪೊರೆದು ಪೊಣ್ಮಿದ ಕಂಪು ಮೊಗಂಗಳಂ ಚಳಿ
ಲ್ಲೆನೆ ಕೊಳೆ ಪೊಯ್ಯೆ ತೀಡಿದುದು ತೆಂಕಣ ಗಾಳಿ ವಸಂತಮಾಸದೊಳ್|| ೩೪

ಮುಗುಳ್ವದನಾದ ಸಂಪಗೆ ಮಡಲ್ತದಿರ್ಮುತ್ತೆ ಮರಲ್ದರಲ್ದ ಮ
ಲ್ಲಿಗೆ ನನೆಗರ್ಚಿ ಕಾಕಳಿಯೊಳಾಣತಿಗೆಯ್ವ ಮದಾಳಿ ಪೋ ಪುಗಲ್|
ಪುಗಲೆನುತಿರ್ಪ ಪಕ್ಕಿ ಮನುಮಂ ಕವರುತ್ತಿರೆ ಯೋಗಿಗಂ ವಿಯೋ
ಗಿಗಮರಿದಾಯ್ತು ಪೊಕ್ಕ ಪುಗಿಲಿಂತು ವಸಂತಕ ಚಕ್ರವರ್ತಿಯಾ|| ೩೫

ವ||ಅಂತು ಭುವನಕ್ಕೆಲ್ಲಮೊಸಗೆವರ್ಪಂತೆ ಬಂದ ವಸಂತದೊಳೊಂದು ದಿವಸಮನ್ನವಾಸದೋಲಗದೊಳುದಾತ್ತನಾರಾಯಣನುಂ ನಾರಾಯಣನುಮಿರ್ದಲ್ಲಿಗೊರ್ವಂ-

ಕಂ|| ತೊಟ್ಟೆಕ್ಕವಡಂ ಮರವಿಲ್
ಕಟ್ಟಿದ ಪಣೆಕಟ್ಟು ಬೇಂಟೆವ ದೊರೆಯೊಳೊಡಂ|
ಬಟ್ಟಸಿಯ ಸುರಗಿ ದಳಿವದ
ತೊಟ್ಟಂಗಿಗೆ ತನ್ನೊಳಮರೆ ಬೇಂಟೆಯನೊರ್ವಂ|| ೩೬

ಬಂದು ಪೊಡವಟ್ಟು ಕಂಡಿಂ
ತೆಂದಂ ಪೊಲನುಡುಗಿ ಬಂದುದುಡಿದುದು ಪುಲ್ ಕಾ|
ಡುಂ ದಲೆಲೆಯಿಕ್ಕಿ ಘಳಿಲೆನೆ
ನಿಂದುವು ತಣಿದುವು ಮೃಗಂಗಳೆತ್ತಲುಮೀಗಳ್|| ೩೭

ಸುೞಯದು ಗಾಳಿ ಮೃಗಂ ಕೆ
ಯ್ವಱಗಳ ಮೇತದೊಳೆ ತಣಿದಪುವು ಪಂದಿಗಳುಂ|
ಪೞ ನವಿರಿಕ್ಕಿದುವಾಳಂ
ಪೞು ಪರಿದಾಡಲ್ ಕರಂ ಬೆಡಂಗವನಿಪತೀ|| ೩೮

ಬರವಂ ಕಾಡಂ ಬೇಗೆಗೆ
ಕರಮಱದೆರಡುಂ ಮೃಗಗಳುಂ ತಣ್ಬುೞಲೊಳ್|
ನೆರೆದೊಡವಂದುವು ತಪ್ಪದಿ
ದರಿಕೇಸರಿ ಕಂಡು ಮೆಚ್ಚುವೈ ಕೋಳ್ಪಾಂಗಂ|| ೩೯

ಎಳೆಯ ವಾಸನೆಯನ್ನು ಧರಿಸಿಯೂ ಹೂವಿನ ವಾಸನೆಯಿಂದ ಗಂಧಯುಕ್ತವಾಗದೆ ಅರಳಿದ ತಾವರೆಯ ವನಗಳಲ್ಲಿ ಸುತ್ತಾಡಿಯೂ ತಂಪಾಗಿ ಆಗದೆ ಕೂಡಲೆ ಬಂದ ಹಣ್ಣಾದ ಮಾವಿನ ಮರದ ಹೊಸ ಹೂಗಳಲ್ಲಿ ಸೇರಿಕೊಂಡು ಅದರಿಂದ ಹೊರಹೊಮ್ಮಿದ ಸುವಾಸನೆಯು ಮುಖಗಳನ್ನು ಚಳಿಲ್ಲನೆ ಆಕ್ರಮಿಸಿ ಅಪ್ಪಳಿಸುವಂತೆ ವಸಂತಮಾಸದಲ್ಲಿ ತೆಂಕಣಗಾಳಿ ಬೀಸಿತು. ೩೫. ಮೊಗ್ಗಿನ ಹದಕ್ಕೆ ಬಂದ ಸಂಪಗೆಯೂ ಹಬ್ಬಿದ ಅದಿರ್ಮುತ್ತೆಯೂ ಚೆನ್ನಾಗಿ ಅರಳಿದ ಮಲ್ಲಿಗೆಯೂ ಹೂವನ್ನು ಕಚ್ಚಿಕೊಂಡು ಇಂಪಾದ ಧ್ವನಿಯಲ್ಲಿ ಆಲಾಪನೆ ಮಾಡುತ್ತಿರುವ ಸೊಕ್ಕಿದ ದುಂಬಿಯೂ, ಹೋಗಿ ಪ್ರವೇಶಿಸಿರಿ, ಪ್ರವೇಶಿಸಿರಿ ಎನ್ನುತ್ತಿರುವ ಕೋಗಿಲೆಪಕ್ಷಿಯೂ ಮನಸ್ಸನ್ನು ಸೂರೆಗೊಳ್ಳುತ್ತಿರಲು ಯೋಗಿಗೂ ವಿಯೋಗಿಗೂ ವಸಂತ ಚಕ್ರವರ್ತಿಯ ಪ್ರವೇಶವು ಸಹಿಸಲಸಾಧ್ಯವಾಯಿತು. ವ|| ಹಾಗೆ ಲೋಕಕ್ಕೆಲ್ಲ ಹಬ್ಬ ಬರುವ ಹಾಗೆ ಬಂದ ವಸಂತ ಕಾಲದಲ್ಲಿ ಒಂದು ದಿವಸ ಭೋಜನಶಾಲೆಯ ಸಭೆಯಲ್ಲಿ ಅರ್ಜುನನೂ ಕೃಷ್ಣನೂ ಇದ್ದ ಸ್ಥಳಕ್ಕೆ ೩೬. ತೊಟ್ಟ ಎಕ್ಕಡ, ಕಟ್ಟಿದ ಮರದ ಬಿಲ್ಲು, ಕಟ್ಟಿದ ಹಣೆಯ ಕಟ್ಟು, ಬೇಟೆಯ ಪರೆ (ತಮಟೆ) ಸರಿಯಾಗಿ ಹೊಂದಿಕೊಂಡಿರುವ ಸಣ್ಣ ಕತ್ತಿ, ಉತ್ತರೀಯದಿಂದ ಕೂಡಿದ ಅಂಗಿ ಇವುಗಳಿಂದ ಕೂಡಿದ ಬೇಟೆಗಾರನೊಬ್ಬನು ೩೭. ಬಂದು ನಮಸ್ಕಾರ ಮಾಡಿ ಹೀಗೆಂದನು: ಹೊಲಗಳಲ್ಲಿ ಕಾಳು ಕಡ್ಡಿಗಳನ್ನು ಬಿಡಿಸಿಯಾಯಿತು. ಹುಲ್ಲೊಕ್ಕಣೆಯೂ ಆಯಿತು. ಕಾಡು ನಿಜವಾಗಿಯೂ ಎಲೆ ಬಿಟ್ಟು ಚಿಗುರಿ ನಿಂತಿವೆ. ಎಲ್ಲ ಕಡೆಯಲ್ಲಿಯೂ ಈಗ ಮೃಗಗಳು ತೃಪ್ತಿಪಟ್ಟಿವೆ. ೩೮. ರಾಜನೇ ಈಗ ಗಾಳಿ ಬೀಸುವುದಿಲ್ಲ, ಮೃಗಗಳು ಹೊಲದ ದಾರಿಯಲ್ಲಿರುವ ಮೇವುಗಳಿಂದಲೇ ತೃಪ್ತಿಪಡುತ್ತಿವೆ. ಹಂದಿಗಳೂ ತಮ್ಮ ಹಳೆಯ ಕೂದಲುಗಳನ್ನು ವಿಶೇಷವಾಗಿ ಬೀಳಿಸಿಕೊಂಡಿವೆ. ಕಾಡು ಈಗ ಓಡಾಡಲು ಅತ್ಯಂತ ಸೊಗಸಾಗಿದೆ. ೩೯. ಮೃಗಗಳ ಬರುವಿಕೆಯನ್ನೂ ಕಾಡಿನ ಸ್ವರೂಪವನ್ನೂ ಚೆನ್ನಾಗಿ ತಿಳಿದು ಎರಡು ಜಿಂಕೆಗಳೂ ತಂಪಾದ ಮರಗಳ

ಈ ಪದ್ಯದ ಅರ್ಥ ಮತ್ತು ಅನ್ವಯ ಸ್ಪಷ್ಟವಾಗಿಲ್ಲ. ಏನೋ ಪಾಠದೋಷವಿರಬೇಕು.

ಕಾಡೊಡಮ ವೇಳೆ ಸಲೆ ಕೆ
ಯ್ಗೂಡಿದುದೆನೆ ನೆಲದೊಳಿರ್ದ ನೆಲ್ಲಿಯ ಕಾಯುಂ|
ನೋಡ ನೆಲಮುಟ್ಟಲೞಯೊ
ಳಾಡುವೊಡೀ ದೆವಸಮಲ್ತೆ ಬೇಂಟೆಯ ದೆವಸಂ|| ಎ ೪೦

ವ|| ಮತ್ತಂ ಬೇಂಟೆ ಜಾಱಲ್ಲದೆ ಬೇಂಟೆಯ ಮಾತಂ ಬಿನ್ನಪಂಗೆಯ್ವೆಂ-

ಪಿರಿಯಕ್ಕರ|| ಆಡಲಾಡಿಸಲ್ ಪಾೞಯಂ ನಿಱಸಲುಂ ಪರಿಗೊಳಲ್ ತೊವಲಿಕ್ಕ ಲೊಳಗಂಬರಲ್
ಕಾಡ ಬೇಲಿಯಂ ಮಾರ್ಕಾಂಡನಱಯಲುಂ ಮೂಡಿಗೆ ಕಕ್ಕುಂಬಂ ಸುೞಸಿ ಜೊಂಪಂ|
ಬೀಡು ಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮೆಂದೆಡೆಯಱದುಂ
ಮಾಡಲ್ ಮಾಡಿಸಲ್ ಪಡೆ ಮೆಚ್ಚೆ ನೀಂ ಬಲ್ಲೆ ನೀಂ ಮೆಚ್ಚೆ ಹರಿಗ ಕೇಳಾನೆ ಬಲ್ಲೆಂ|| ೪೧

ಕಂ|| ಮೃಗದೊಲವರಮುಮನರಸನ
ಬಗೆಯುಮನಱದಲಸದೆಳಸಲೋಲಗಿಸಲ್ ನೆ|
ಟ್ಟಗೆ ಬಲ್ಲನುಳ್ಳೊಡವನ
ಲ್ತೆ ಗುಣಾರ್ಣವ ಬೇಂಟೆಕಾಱನೊಲಗಕಾಱಂ|| ೪೨

ಪಿರಿಯಕ್ಕರ|| ಮೃಗಮಂ ಗಾಳಿಯನಿರ್ಕೆಯಂ ಪಕ್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ
ಪುಗಿಲಂ ಪೋಗಂ ಬಾರಿಯಂ ಸನ್ನೆಯಂ ನೂಱುವಮರ್ಚುವ ನಿಲ್ವೆಡೆಯಂ|
ಬಗೆಯಂ ತೆಗೆಯನಲ್ಲಾಟಮಂ ಕಾಟಮಂ ನೋವುದಂ ಸಾವುದನೆಲ್ಲಂದದಿಂ
ಬಗೆದಾಗಳರಸರೊಳೆಲ್ಲ ಕೇಳ್ ನೀಂ ಬಲ್ಲೆ ಬೇಂಟೆಕಾಱರೊಳೆಲ್ಲವಾನೆ ಬಲ್ಲೆಂ|| ೪೩

ವ|| ಮತ್ತಂ ನೆಲನುಂ ಗಾಳಿಯುಂ ಕೆಯ್ಯುಂ ಮೃಗಮುಮನಱದು ಕಾಲಾಳೊಳಂ ಕುದುರೆಯೊಳಮೊಳಗಂ ಬರಲಾನೆ ಬಲ್ಲೆನಿದು ಪೆರ್ವೇಂಟೆಯಂದಂ ದೀವದ ಬೇಂಟೆಯಂ ಬಿನ್ನಪಂಗೆಯ್ವೊಡೆ ಗಾಳಿಯುಂ ಕೞವುಮುೞವುಂ ಕಾಂಪು ಮೇಪುಂ ತೋಡುಂ ಬೀಡುಂ ದೆಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಱುಂ ಕೆದಱುಂ ಪೆರ್ಚುಂ ಕುಂದುಮನಱದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಮಡಂಗಲುಮಡಂಗಿಸಲುಮೊಡ್ಡಲು ಮೊಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಮೇಱದುದನೇಱಸಲುಂ ಜಾಣನಾಗಿ ಮೂಱು ಕೊಂಬುಮನಾಱು ನಾಣ್ಪೋಗುಮನೆರೞ್ಪಜ್ಜೆಯುಮಂ ಮೂಱು

ತೋಪಿನಲ್ಲಿ ಸೇರಿ ಜೊತೆಗೂಡಿ ಬಂದಿವೆ. ಇದು ಸುಳ್ಳಲ್ಲ ಅರ್ಜುನನೇ ಮೃಗವು ಸಿಕ್ಕಿಬೀಳುವ ರೀತಿಯನ್ನು ನೀನು ಮೆಚ್ಚುತ್ತೀಯೆ. ೪೦. ಕಾಡಿನಲ್ಲಿ ಸಂಗ್ರಹಿಸಬೇಕಾದ ವಸ್ತು, ಅದನ್ನು ಸಂಗ್ರಹಿಸಬೇಕಾದ ಕಾಲ ಇವೆರಡೂ ಕೈಗೂಡಿದೆಯೆನ್ನಲು ನೆಲದಲ್ಲಿ ಬಿದ್ದಿರುವ ನೆಲ್ಲಿಯ ಕಾಯೇ ಸಾಕ್ಷಿ. ನೆಲವನ್ನು ಮುಟ್ಟಿ ಆಟ ಆಡುವ ಪಕ್ಷದಲ್ಲಿ ಬೇಟೆಗೆ ಈ ದಿನವೇ ಯೋಗ್ಯವಾದ ದಿನವಲ್ಲವೇ? ವ|| ಬೇಟೆಯ ವಿಷಯವಾದ ಸುಳ್ಳು ಸಂದೇಶಗಳಿಲ್ಲದ ಬೇಟೆಯ ಫಲಾಫಲಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ೪೧. ಬೇಟೆಯಾಡುವುದಕ್ಕೂ ಆಡಿಸುವುದಕ್ಕೂ ಕ್ರಮವನ್ನು ಸ್ಥಾಪಿಸುವುದಕ್ಕೂ ಓಡುವುದಕ್ಕೂ ಚಿಗುರನ್ನು ಹಾಕುವುದಕ್ಕೂ ಒಳಗೆ ಪ್ರವೇಶಿಸುವುದಕ್ಕೂ ಕಾಡಿನ ಎಲ್ಲೆಯನ್ನೂ ಎದುರು ಕಾಡನ್ನೂ ತಿಳಿಯುವುದಕ್ಕೂ ಬತ್ತಳಿಕೆ ಕಕ್ಕುಂಬ (?)ಗಳನ್ನು ಸುಳಿಸಿ ಇದು ಜೊಂಪ (?) ಇದು ಬೀಡುಬಿಡಲು ಯೋಗ್ಯವಾದ ಸ್ಥಳ, ಇದು ಬಾಳೆ, ತೆಂಗು ಇರುವ ಸ್ಥಳ ಇದು, ಮೃಗಗಳು ನೀರು ಕುಡಿಯಲು ಬರುವ ಸ್ಥಳ ಎಂದು ಜಾಣ್ಮೆಯಿಂದರಿದು ಸೈನ್ಯವೆಲ್ಲ ಮೆಚ್ಚುವ ಹಾಗೆ ಮಾಡುವುದಕ್ಕೂ ಕೂಡಿಸುವುದಕ್ಕೂ ಸಮರ್ಥನಾಗಿದ್ದೀಯೆ. ಎಲೈ ಅರಿಗನೇ ನೀನು ಮೆಚ್ಚುವ ಹಾಗೆ ಮಾಡಲು ನಾನು ಬಲ್ಲೆ. ೪೨. ಪ್ರಾಣಿಗಳ ಮನಸ್ಸಿನ ಪಕ್ಷಪಾತವನ್ನೂ ಅರಸನ ಅಭಿಪ್ರಾಯವನ್ನೂ ತಿಳಿದು ಉದಾಸೀನ ಮಾಡದೆ ನೇರವಾಗಿ ಸೇವೆ ಮಾಡುವುದನ್ನು ತಿಳಿದಿರುವವನಲ್ಲವೇ ನಿಜವಾದ ಬೇಟೆಗಾರನೂ ಸೇವಾಳುವೂ ಆಗಿರುವವನು! ೪೩. ಪ್ರಾಣಿಗಳ ಸ್ವಭಾವವನ್ನೂ ಗಾಳಿ ಬೀಸುವ ದಿಕ್ಕನ್ನೂ ಪ್ರಾಣಿಗಳಿರುವ ಸ್ಥಳವನ್ನೂ ಅವು ಮಲಗುವ ಎಡೆಯನ್ನೂ ಅವುಗಳ ಸಂಖ್ಯೆಯನ್ನೂ ಅವು ನುಸುಳುವ ಕಂಡಿ ಪ್ರತಿಕಂಡಿಗಳನ್ನೂ ಅವುಗಳ ಪ್ರವೇಶ ಮತ್ತು ನಿರ್ಗಮನಗಳನ್ನೂ ಅವುಗಳಿಗೆ ಉಪಯೋಗಿಸಬೇಕಾದ ಸಂಜ್ಞೆಗಳನ್ನೂ ಅವುಗಳು ಸೇರುವ ನಿಲ್ಲುವ ಸ್ಥಳವನ್ನೂ ಅವುಗಳ ಆಸಕ್ತಿ ವಿರಕ್ತಿಗಳನ್ನೂ ಅವುಗಳ, ಚಲನೆ, ಹಿಂಸೆ, ಯಾತನೆ ಸಾವುಗಳನ್ನೂ ಎಲ್ಲ ರೀತಿಯಿಂದಲೂ ಯೋಚಿಸಿದಾಗ ರಾಜರುಗಳಲ್ಲೆಲ್ಲ ನೀನೂ ಬೇಟೆಗಾರರಲ್ಲೆಲ್ಲ ನಾನೂ ಸಮರ್ಥರಾದವರೆಂಬುದನ್ನು ನೀನೆ ತಿಳಿದಿದ್ದೀಯೆ. ವ|| ಅಲ್ಲದೆ ನೆಲದ ಏರು ತಗ್ಗುಗಳನ್ನೂ ಗಾಳಿಯು ಬರುವ ದಿಕ್ಕನ್ನೂ ಹೆಜ್ಜೆಯ ಗುರುತುಗಳನ್ನೂ ಮೃಗಗಳನ್ನೂ ತಿಳಿದು ಪದಾತಿಸೈನ್ಯ ಮತ್ತು ಈ ಪದ್ಯವೂ ಸರಿಯಾಗಿ ಅರ್ಥವಾಗುತ್ತಿಲ್ಲ.

ಪೊೞ್ತುಮಂ ಮೃಗದ ಮೂಱರವುಮ ನಾಱುರಯ್ಕೆಯುಮಂ ಗಾಳಿಯುಮನೆಱಂಕೆಯುಮಂ ಬಲ್ಲನಾಗಿ ನಂಬಿದ ಬರವುಮಂ ನಂಬದ ಬರವುಮನಱದು ಮಲೆದುದಂ ಮಲೆಯಿಸಲುಂ ಮಲೆದುದಂ ತೊಲಗಿಸಲುಂ ನಂಬದುದಂ ನಂಬಿಸಲುಂ ನಂಬಿದುದಂ ಬಿಡಿಸಲುಮೊಳಪುಗುವುದರ್ಕೆಡೆ ಮಾಡಲುಮೆಡೆಯಾಗದ ಮೃಗಮನವುಂಕಿಸಲುಮೊಲ್ದುಮೊಲ್ಲದ ನಲ್ಲರಂತೆ ಮಿಡುಕಿಸಲುಂ ಪಣಮುಡಿದರಂತಡ್ಡಂ ಮಾಡಲುಮೆಸೆದ ದೆಸೆಗಳ್ಗೋಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳಾನೆ ಬಲ್ಲೆಂ-

ಕಂ|| ಬರೆದಂತೆ ಬೆನ್ನ ಕರ್ಪೆಸೆ
ದಿರೆ ಸೂಚಮನುರ್ಚಿ ಪುಲ್ಲೆಗಾಟಿಸಿ ಮಲೆತ|
ರ್ಪೆರಲೆಯ ಸೋಲಮನೞಯೊ
ಳರಿಕೇಸರಿ ನಿಂದು ನೋೞ್ದುದೊಂದರಸ್ತಲೇ|| ೪೪

ಪದಮುಮನಿಂಬುಮನಣಮಱ
ಯದದೇವುದು ಬದ್ದೆ ಬೆಳ್ಮಿಗಂ ಪಜ್ಜೆದಲೆಂ|
ಬುದನೆರಡುಮನಱವಾತನೆ
ಚದುರಂ ಚದುರಂಗೆ ಬದ್ದೆ ವಜ್ಜೆಗಳೊಳವೇ|| ೪೫

ವ|| ಮತ್ತಂ ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ವೆಂ-

ಪಿರಿಯಕ್ಕರ|| ನೆಲನಂ ನಿಱುಗೆಯಂ ನಡೆವೊಂದು ಪದಮುಮಂ ಸೋವಳಿ ಮೇವಳಿ ಬಿಸುವಳಿಯಂ
ಬಲಮಂ ಶಕುನಮನೊಳ್ಳಿತ್ತುಪಾಯಮಂ ಪಿಡಿವಂದೀತನೆ ವಂದಿ ಕುರುಡು ಕುಂಟೆಂ|
ದಲಸದಱದಿಂತು ಬಲ್ಮೆಗೆ ಬೆರಲೆತ್ತಿ ಪಜ್ಜೆಯಂ ನೆಲೆಗಳಂ ಕಿಡಲೀಯದೆ
ಸಿಲೆಯ ಮೇಲಾದೊಡಂ ಶಕುನಮಂ ನಿಱಪಂತೆ ನಿಱಸುವೆಂಪ ಪಂದಿಯಂ ನೀಂ ಮೆಚ್ಚಲು|| ೪೬

ವ|| ಮತ್ತಂ ಪಂದಿವೇಂಟೆಯ ನಾಯೆಂತಪ್ಪುವೆಂದೊಡಸಿಯ ನಡುವುಮಗಲುರಮುಂ ತಳ್ತು ಕಟ್ಟಿದ ಕಿವಿಯುಂ ಪುರ್ವುಂ ತೋರಮಾಗಿ ನಿರ್ಮಾಂಸಮಪ್ಪ ಕಾಲ್ಗಳುಂ ನೆಲನಂ ಮುಟ್ಟದುಗುರ್ಗಳುಮನುಳ್ಳುದಾಗಿ ಜಾತ್ಯಶ್ವದಂತೆ ಬೇಗಮಾಗಿ ಕೋಳಿ ಕಾಳಿಕಾಱನಂತೆ ಬಱಯಱವಿಡಿದು ತುಂಬಿನ ನೀರನುರ್ಚಿದಾಗಳಡೆ ಪರಿದು ಮನ್ನೆಯರಂತೆ ಕಾದಿಯಲಸದೆ ಸೂಳೆಯಂತೆ ಕೋಳಂ ಪಟ್ಟಟ್ಟಿಸದೆ

ಕುದುರೆಯ ಸೈನ್ಯಗಳ ಮಧ್ಯೆ ನಾನು ಬರಲು ಸಮರ್ಥ. ಇದು ಹೆಬ್ಬೇಟೆಯ ರೀತಿ; ಮೃಗಗಳನ್ನು ಒಡ್ಡಿ ಆಕರ್ಷಿಸುವ ದೀವಕ ಬೇಟೆಯನ್ನು ವಿಜ್ಞಾಪಿಸಿಗೊಳ್ಳುವುದಾದರೆ ಗಾಳಿಯ ದಿಕ್ಕನ್ನೂ ಪ್ರಾಣಿಗಳ ಹೋಗುವಿಕೆ ಮತ್ತು ಉಳಿಯುವಿಕೆಗಳನ್ನೂ ರಕ್ಷಣೆ ಮತ್ತು ಮೇವುಗಳನ್ನೂ ತೊಡುವುದನ್ನೂ ಬಿಡುವುದನ್ನೂ ದಿಕ್ಕುಗಳನ್ನೂ ಸಂಕೇತಸ್ಥಳಗಳನ್ನೂ ಆಸಕ್ತಿ ಭಯಗಳನ್ನೂ ಪೋಗುಮೇಗುಗಳನ್ನೂ (?) ಹೆದರಿಕೆ ಬೆದರಿಕೆಗಳನ್ನೂ ಹೆಚ್ಚು ಕುಂದುಗಳನ್ನೂ ತಿಳಿದು ಅವುಗಳನ್ನು ಕಾಣಲು ಕಾಣಿಸಲು ಅವುಗಳ ಮೇಲೆ ರೇಗಲೂ ಅವುಗಳನ್ನು ರೇಗಿಸಲೂ ಅವಿತುಕೊಳ್ಳಲೂ ಅವಿತುಕೊಳ್ಳಿಸಲೂ ಒಡ್ಡಲು ಒಡ್ಡಿಸಲೂ ಪ್ರವೇಶ ಮಾಡಿಸಲೂ ಬೇರೆಡೆಯಲ್ಲಿ ಉಳಿಯುವ ಹಾಗೆ ಮಾಡಲೂ ಕಾಣದಿರುವುದನ್ನು ಕಾಣಿಸಲೂ ತಡೆಯುವುದಕ್ಕಾಗದುದನ್ನು ತಡೆಯಲೂ ಹತ್ತದೆ ಇರುವುದನ್ನು ಹತ್ತಿಸಲೂ ಚಾತುರ್ಯದಿಂದ ಅವುಗಳ ಮೂರು ಸಂಕೇತ ಸ್ಥಳಗಳನ್ನೂ ಆರು ಬಗೆಯ ರತಿಕ್ರೀಡೆಯನ್ನೂ ಎರಡು ಹೆಜ್ಜೆಯನ್ನೂ ಮೂರು ಹೊತ್ತನ್ನೂ ಮೃಗದ ಮೂರು ಸ್ಥಿತಿಗಳನ್ನೂ ಆರು ಪೋಷಣಾಕ್ರಮವನ್ನೂ ಗಾಳಿಯನ್ನೂ ರಕ್ಕೆಯನ್ನೂ ತಿಳಿದವನಾದ ಕಾರಣ ಅಪಾಯವಿಲ್ಲವೆಂದು ನಂಬಿ ಬರುವ ಪ್ರಾಣಿಯನ್ನೂ ಸಂದೇಹದಿಂದ ಬರುವ ಪ್ರಾಣಿಯನ್ನೂ ತಿಳಿದು ಕೆರಳದೇ ಇರುವುದನ್ನು ಕೆರಳಿಸಲೂ ಕೆರಳಿರುವುದನ್ನು ತೊಲಗಿಸಲೂ ನಂಬದೇ ಇರುವುದನ್ನು ನಂಬಿಸಲೂ ನಂಬಿದುದನ್ನು ಬಿಡಿಸಲೂ ಒಳಗೆ ಪ್ರವೇಶ ಮಾಡುವುದಕ್ಕೆ ಅವಕಾಶಮಾಡಲೂ ಅನವಾಗದ ಮೃಗವನ್ನು ಅನ ಮಾಡಿಕೊಳ್ಳಲೂ ಪ್ರೀತಿಸಿಯೂ ಪ್ರೀತಿಸದ ಪ್ರೇಮಿಗಳ ಹಾಗೆ ವ್ಯಥೆಪಡಿಸಲೂ ಜೂಜಿನಲ್ಲಿ ಒತ್ತೆಯನ್ನು ಸೋತವರಂತೆ ಅಡ್ಡಗಟ್ಟಲೂ ಎಸೆದ ದಿಕ್ಕಿಗೆ ಓಡಿಸಲೂ ಕುಮಾರಸ್ವಾಮಿಯ (ಷಣ್ಮುಖನ) ಮತ್ತು ನಿಮ್ಮ ಸಾಕ್ಷಿಯಾಗಿ ನಾನೇ ಸಮರ್ಥನಾಗಿದ್ದೇನೆ. ೪೪. ಅರ್ಜುನನೇ ಚಿತ್ರಿಸಿದ ಹಾಗೆ ಬೆನ್ನಿನ ಮಚ್ಚೆಯು ಪ್ರಕಾಶಿಸುತ್ತಿರಲು ಹುಲ್ಲಿನ ಊಬುಗಳನ್ನು ಮುರಿದು ಹೆಣ್ಣಿನ ಜಿಂಕೆಗಾಗಿ ಬಯಸಿ ಔದ್ಧತ್ಯದಿಂದ ಬರುತ್ತಿರುವ ಗಂಡುಜಿಂಕೆಯ ಮೋಹವನ್ನು ಪ್ರೀತಿಯಿಂದ ನೋಡುವುದು ರಾಜರಿಗೆ ಯೋಗ್ಯವಾದ ವಿನೋದವಲ್ಲವೇ? ೪೫. ಪಾದವನ್ನೂ ಅದರ ವಿಸ್ತಾರವನ್ನೂ ಸ್ವಲ್ಪವೂ ತಿಳಿಯದ ಆ ಪ್ರೌಢಿಮೆಯೆಂತಹುದು? ಅಂಜುವ ಮೃಗ ಅದರ ನಿಜವಾದ ಹೆಜ್ಜೆ ಎರಡನ್ನೂ ತಿಳಿದವನೇ ಚತುರ. ಜಾಣನಿಗೂ ತಿಳಿಯದ ಪ್ರೌಢವಾದ ಹೆಜ್ಜೆಯ ಗುರುಗಳುಂಟೆ? ವ|| ಇನ್ನು ಹಂದಿಯ ಬೇಟೆಯ ಮಾತನ್ನು ವಿಜ್ಞಾಪಿಸಿಕೊಳ್ಳುತ್ತೇನೆ- ೪೬. ಹಂದಿಯನ್ನು ಹಿಡಿಯುವಾಗ ನೆಲವನ್ನೂ ನಿಂತ ಸ್ಥಳವನ್ನೂ ನಡೆಯುವ ರೀತಿಯನ್ನೂ ಹಿಡಿಯುವ ಕ್ರಮವನ್ನೂ ಮೇಯುವಿಕೆಯನ್ನೂ ಒಟ್ಟುಗೂಡಿಸು

ತಕ್ಕನಂತೆ ನಂಬಿಸಿಯ ಮೊತ್ತರದಂತೊತ್ತಿಯು ಮುರಿಯಳುರ್ವಂತಳುರ್ದುಕೊಳ್ವುದಿದು ಪಂದಿವೇಂಟೆಯ ನಾಯ್ ಮತ್ತಂ ಕಿಱುವೇಂಟೆಯ ನಾಯಂ ಕೊಂಡುಂ ಜಾಱಯುಂ ನೆಲನುಂ ಪೊೞ್ತುಂ ಪೊಲನುಮನಱದು ಬೞಯೊಳ್ ಪೊಸತುಂ ಪೞದುಮನಱದು ಪರಿಯಿಸಲ್ ನೀನೆ ಬಲ್ಲೆಯದನಾನೆ ಬಲ್ಲೆನೆಂದು ಬಿನ್ನಪಂಗೆಯ್ವೆನಂತುಮಲ್ಲದೆ ಬಲ್ಮೆಗಂ ಬಸನಕ್ಕಂ ಸವಿಯಪ್ಪ ಕಿಱುವೇಂಟೆಯುಂ ಪೆರ್ವೇಂಟೆಯುಮಲ್ಲದುೞದ ಬೇಂಟೆಯಂ ಬೇಂಟೆಯೆನ್ನೆಂ-

ಪಿರಿಯಕ್ಕರ|| ಪಸಿವು ದೊರೆಕೊಳ್ಗುಮುಣಿಸುಗಳಿನಿಕೆಯ್ಗುಮಾವಂದದೊಳ್ ಕನಲ್ದಾದ ಮೆಯ್ಯ
ನಸಿಯನಾಗಿಪುದುಳಿದುವಪ್ಪುವು ಬಗೆಗೊಳಲಪ್ಪುದು ಮೃಗದ ಮೆಯ್ಯೊಳ್|
ನಿಸದಮೆಸೆವುದಂ ಬಲ್ಲಾಳ ಬಿಲ್ಬಲ್ಮೆ ತನ್ನೊಳಮಿಸುತೆ ಲೇಸಪ್ಪುದು
ಬಸನಮೆಂದಱಯದೇಳಿಸುವರ್ ಬೇಂಟೆಯಂ ಬೇಂಟೆಯೆ ಬಿನದಂಗಳರಸಲ್ತೇ|| ೪೭

ವ|| ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗ ವ್ಯಾಯಾಮ ಕಾರ್ತಿಕೇಯಂ ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದಟ್ಟಿ ನಾರಾಯಣನುಂ ತಾನುಮಂತಪುರ ಪರಿವಾರಂಬೆರಸು ಬೇಂಟೆಗೆ ಪೊಱಮಟ್ಟು ಪರಿಯ ತಾಣಕ್ಕೆ ವಂದು ಬೇಲಿಯ ಕೆಲದೊಳಲ್ಲದೆ ಪೆಱಗಣುಲಿಪಿಂಗಮುಳ್ಳೊಳಕ್ಕಂ ಗೆಂಟಾಗಿ ಬೀಡಂ ಬಿಡಿಸಿ ಬೇಂಟೆಕಾಱನ ಸಮೆದ ಮಕರತೋರಣಮುಮಂ ಗುಣಣೆಯ ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ ಮಾಡದ ನೆಲೆಯ ಚೌಪಳಿಗೆಗಳುಮನವಱ ಮೇಲಿರ್ದೆಲೆಯಡಕೆಯುಮಂ ತೆಂಗಿನೆಳನೀರುಮಂ ಕೊಳಲಿಂಬಪ್ಪಂತಿರೆ ಮಾಡಿ ನಟ್ಟ ಕೌಂಗಿನ ತೆಂಗಿನ ಮರಂಗಳುಮಂ ಪಣ್ವೆರಸು ನಟ್ಟ ಮೈಂದವಾೞೆಗಳುಮಂ ತೊವಲ್ವೆರಸು ನಟ್ಟಾಲಂಗಳುಮನಮರೆ ಮಾಡಿದ ಬಟ್ಟುಳಿಯ ಕಕ್ಕುಂಬ ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ ಪಲವುಂ ತೆಱದ ಪಲವುಂ ಪೊಯಾಗಿ ಕಟ್ಟಿದ ಬಲೆಗಳುಮಂ ಪಡಿಗಳನಮರ್ಚಿ ಬಿಲ್ಲುಂ ಕುದುರೆಯುಂ ಕಾಲಾಳುಂ ನಾಯ್ಗಳುಮಂ ತಿಣ್ಣಿಮಿರಿಸಿ ಕೆಯ್ಯಂ ನೇಣುಮನಳವಿಯೊಳ್ ಕೂಡಿ ನಡೆಯಗ್ವೇೞ್ದು

ವಿಕೆಯನ್ನೂ ಶಕ್ತಿಯನ್ನೂ ಶಕುನಸಂಕೇತಗಳನ್ನೂ ಒಳ್ಳೆಯ ಉಪಾಯಗಳನ್ನೂ (ಉಳ್ಳವನು) ಇವನೇ (ಎಂಬ ಪ್ರೌಢಿಮೆಯನ್ನು ಪಡೆದಿದ್ದೇನೆ). ಹಂದಿಯು ಕುರುಡು ಅಥವಾ ಕುಂಟು ಎಂದು ಉದಾಸೀನಮಾಡದೆ ನನ್ನ ಶಕ್ತಿಯನ್ನು ಪ್ರದರ್ಶಿಸಿ ಹೆಜ್ಜೆಯ ಗುರುಗಳನ್ನು ಅವುಗಳ ವಸತಿಗಳನ್ನು ಕೆಡಿಸದೆ ಕಲ್ಲಿನ ಮೇಲಾದರೂ ಸಂಕೇತವನ್ನು ಸ್ಥಾಪಿಸುವ ಹಾಗೆ ನೀನು ಮೆಚ್ಚುವಂತೆ ಹಂದಿಯನ್ನು ನಿಲ್ಲಿಸುತ್ತೇನೆ.

ವ|| ಮತ್ತು ಹಂದಿಯ ಬೇಟೆಯ ನಾಯಿಯು ಎಂತಹುದು ಎಂದರೆ ತೆಳುವಾದ ಸೊಂಟ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿಗಳು ಬಾಗಿದ ಹುಬ್ಬು, ದಪ್ಪವಾಗಿ ಮಾಂಸವಿಲ್ಲದ ಕಾಲುಗಳು, ನೆಲವನ್ನು ಮುಟ್ಟದ ಉಗುರು ಇವುಗಳಿಂದ ಕೂಡಿ ಜಾತಿಯ ಕುದುರೆಯಂತೆ ವೇಗವಾಗಿ ನಡೆದು ಶಾಕ್ತೇಯಮತದ ವಂಚಕನಂತೆ ತನ್ನ ಮಾರ್ಗವನ್ನು ಹಿಡಿದು, ತೂಬಿನ ನೀರಿನ ಹಾಗೆ ಸಡಿಲ ಮಾಡಿದ ತಕ್ಷಣವೇ ಅಡ್ಡವಾಗಿ ಹರಿದು, ಮಾನ್ಯರ ಸೇವಕನಂತೆ ಕಾದಲು ಆಲಸ್ಯ ಪಡದೆ ಸೂಳೆಯಂತೆ ಸುಲಿಗೆಗೊಂಡು ಓಡಿಸದೆ, ಯೋಗ್ಯನಂತೆ ನಂಬಿಸಿ ಒತ್ತರದಂತೆ (?) ಒತ್ತಿ ಉರಿಯು ಹರಡುವಂತೆ ಹರಡಿಕೊಳ್ಳುವುದು. ಇದು ಹಂದಿಬೇಟೆಯಲ್ಲಿ ಉಪಯೋಗಿಸುವ ನಾಯಿಯ ಲಕ್ಷಣ. ಇನ್ನು ಕಿರುಬೇಟೆಯ ನಾಯನ್ನು ತೆಗೆದುಕೊಂಡು ಸಡಿಲ ಮಾಡಿದ ನೆಲದ ಸ್ವರೂಪವನ್ನು ಹೊತ್ತನ್ನೂ ಹೊಲವನ್ನೂ ತಿಳಿದು ದಾರಿಯಲ್ಲಿಯೇ ಹೊಸದು ಹಳೆಯದೆಂಬುದನ್ನು ತಿಳಿದು ಹರಿಯಿಸಲು ನೀನೇ ಶಕ್ತನೆಂಬುದನ್ನು ನಾನು ಬಲ್ಲೆ. ಅಲ್ಲದೆ ಶಕ್ತಿಪ್ರದರ್ಶನಕ್ಕೂ ಸವಿಯಾಗಿರುವ ಕಿರುಬೇಟೆಯ್ನೂ ಹೆಬ್ಬೇಟೆಯನ್ನೂ ಬಿಟ್ಟು ಉಳಿದ ಬೇಟೆಯನ್ನು ಬೇಟೆಯೆಂದೇ ನಾನು ಕರೆಯುವುದಿಲ್ಲ. ೪೭. ಬೇಟೆಯಿಂದ ಹಸಿವುಂಟಾಗುತ್ತದೆ. ಆಹಾರ ರುಚಿಯಾಗುತ್ತದೆ. ಯಾವ ರೀತಿಯಲ್ಲಾದರೂ ಕೆರಳಿ ಕೊಬ್ಬಿದ ಬೊಜ್ಜು ಕರಗುತ್ತದೆ. ಉಳಿದುವೂ ಆಗುತ್ತದೆ. ಮೃಗಗಳ ಶರೀರ ಮತ್ತು ಮನಸ್ಸಿನ ಅರಿವುಂಟಾಗುತ್ತದೆ. ಪರಾಕ್ರಮಶಾಲಿಯ ಬಿಲ್ಲಿನ ಪ್ರೌಢಿಮೆ ನಿಶ್ಚಯವಾಗಿಯೂ ಪ್ರಕಾಶಿಸುತ್ತದೆ. ಬಾಣಪ್ರಯೋಗ ಮಾಡುವುದರಿಂದ ತನಗೂ ಒಳ್ಳೆಯದಾಗುತ್ತದೆ. ತಿಳಿಯದವರು ಬೇಟೆಯನ್ನು ವ್ಯಸನವೆಂದು ಕರೆಯುತ್ತಾರೆ. ಬೇಟೆಯು ವಿನೋದಗಳ ರಾಜನಲ್ಲವೆ? ವ|| ಎಂದು ವಿಜ್ಞಾಪನಮಾಡಿದ ಬೇಟೆಯವನಿಗೆ ಮೃಗಗಳಿಗೆ ವ್ಯಾಯಾಮ ಮಾಡಿಸುವುದರಲ್ಲಿ ಷಣ್ಮುಖನಂತಿರುವ ಅರ್ಜುನನು (ಅರಿಕೇಸರಿಯು) ಬಹುಮಾನವನ್ನಿತ್ತು ಚಿಗುರನ್ನು ಹಾಕು ಎಂದು ಮೊದಲು ಹೇಳಿಕಳುಹಿಸಿದನು. ಕೃಷ್ಣನೂ ತಾನೂ ರಾಣಿವಾಸದ ಪರಿವಾರದೊಡನೆ ಹೊರಟು ಬೇಟೆಯ ಪ್ರವೇಶಸ್ಥಳಕ್ಕೆ ಬಂದರು. ಬೇಲಿಯ ಪಕ್ಕದಲ್ಲಿಯೇ ಅಲ್ಲದೆ ಹಿಂದುಗಡೆಯ ಸದ್ದಿಗೂ ಗಲಭೆಗೂ ದೂರವಾಗಿ ಪಾಳೆಯವನ್ನು ಬಿಡಿಸಿದರು. ಬೇಟೆಗಾರನು ಸಿದ್ಧ ಮಾಡಿದ್ದ ಮಕರತೋರಣ, ನೃತ್ಯಶಾಲೆ, ಪಾಕಶಾಲೆ, ಸ್ನಾನಗೃಹ, ಅಂತಪುರ, ಹೂವಿನ ಚಪ್ಪರ, ಚಿಗುರಿನ ಹಂದರ, ಉಪ್ಪರಿಗೆಯ ಮನೆಯ ತೊಟ್ಟಿಗಳು, ಅವುಗಳ ಮೇಲಿದ್ದ, ಎಲೆಯಡಿಕೆ, ತೆಂಗಿನ ಎಳನೀರುಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ ಮಾಡಿ ನೆಟ್ಟಿರುವ, ಅಡಕೆ ಮತ್ತು ತೆಂಗಿನ ಮರಗಳು ಹಣ್ಣಿನಿಂದ ಕೂಡಿ ನೆಟ್ಟಿರುವ ಮಹೇಂದ್ರ ಬಾಳೆ, ಚಿಗುರಿನಿಂದ ಕೂಡಿ ನೆಟ್ಟಿರುವ ಆಲದ ಮರ, ಗಾಢವಾಗಿ ಸೇರಿಕೊಂಡಿರುವ ಬಟ್ಟುಳಿಯ (?) ಕಕ್ಕುಂಬದ (?) ಗೊಂಚಲುಗಳಿಂದ ಮಾಡಿದ ಬತ್ತಳಿಕೆ ಬಾವುಟ ತೆರೆಗಳು

ಬೇಂಟೆವಸದನಂಗೊಂಡು ಕಂಡಿಯ ಬಾಗಿಲೊಳುದಾತ್ತನಾರಾಯಣನುಂ ನಾರಾಯಣನುಮಿರ್ದು ಪುಗಿಲ ಪುಲ್ಲೆಯ ಮೊದಲುರಮುಮಂ ಪೆಱಗಣ ಪುಲ್ಲೆಯ ನಡುವುಮನಯ್ದಳ್ ಮೂಱುವಂ ಮೂಳೆರಡು ಮನೆರಡಳೊಂದುಮನೆಚ್ಚು ಬಿಲ್ಲ ಬಲ್ಮೆಯಂ ಮೆದು-

ಕಂ|| ಮುಂದಣ ಮಿಗಮಂ ಕೞಪದೆ
ಸಂದಿಸಿ ಬೞಗೊಳ್ವ ಮಿಗಮುಮಂ ಕೞಪದೆ ತಾ|
ನೊಂದಳವಿದಪ್ಪದೆಚ್ಚು ಬ
ಲಿಂದಮನಿಂ ಬಿಲ್ಲ ಬಲ್ಮೆಯಂ ಪೊಗೞಸಿದಂ|| ೪೮

ವ|| ಮತ್ತಂ ಬೆರ್ಚಿ ಪೊಳೆದು ಪರಿವ ಪೊಳೆವುಲ್ಲೆಗಳುಮಂ ತಲೆಯಂ ಕುತ್ತಿ ವಿಶಾಲಂಬರಿವ ಕರಡಿಗಳುಮನಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವೆಯ್ಗಳುಮಂ ತಡಂಮೆಟ್ಟಿ ಪರಿವ ಕಡವಿನ ಕಾಡೆಮ್ಮೆಯ ಮರೆಯ ಪಿಂಡುಗಳು ಮನಳವಿದಪ್ಪದೊಂದೊಂದ ನಿಸುವಂತೆ ಪಲವನೆಚ್ಚು ನೆಲಂ ಬಿರಿಯೆ ಗಜಱ ಗರ್ಜಿಸಿ ಪಾಯ್ವ ಸಿಂಗಂಗಳುಮಂ ಕಂಡು-

ಕಂ|| ಆಸುಕರಂ ಗಡ ತಮಗತಿ
ಭಾಸುರ ಮೃಗರಾಜ ನಾಮಮುಂ ಗಡಮೆಂದಾ|
ದೋಸಕ್ಕೆ ಮುಳಿದು ನೆಗೞ್ದರಿ
ಕೇಸರಿ ಕೇಸರಿಗಳನಿತುಮಂ ತಳ್ತಿಱದಂ|| ೪೯

ಇಱದವಱ ನೆತ್ತರೊಳ್ ತ
ಳ್ಕಿಱದಂ ತನ್ನುರಮನುರು ಗಜಂಗಳನಾಟಂ|
ದಱಸಿ ಕೊಲುತಿರ್ಪವೆಂಬೀ
ಕಱುಪಿನೊಳರಿಗಂಬರಂ ಗಜಪ್ರಿಯರೊಳರೇ|| ೫೦

ವ|| ಅಂತು ನರ ನಾರಾಯಣರಿರ್ವರುಮನವರತ ಶರಾಸಾರ ಶೂನ್ಯೀಕೃತ ಕಾನನಮಾಗೆಚ್ಚು ಮೃಗವ್ಯ ವ್ಯಾಪಾರದಿಂ ಬೞಲ್ದು ಮನದಂತೆ ಪರಿವ ಜಾತ್ಯಶ್ವಂಗಳನೇಱ ಬರೆವರೆ-

ಹಲವು ರೀತಿಯ ಹಲವು ಹೊರೆಗಳಾಗಿ ಕಟ್ಟಿದ ಬಲೆಗಳು ಬಾಗಿಲುಗಳನ್ನು (ಭದ್ರಪಡಿಸಿ) ಸೇರಿಸಿ, ಬಿಲ್ಲ, ಕುದುರೆ ಕಾಲಾಳು ನಾಯಿ ಹೆಚ್ಚು ಸಂಖ್ಯೆಯ ಕೋಲು ಹಗ್ಗ ಮೊದಲಾದುವನ್ನೆಲ್ಲ ಸರಿಯಾದ ಪ್ರಮಾಣದಲ್ಲಿ ಸೇರಿಸಿ ನಡೆಯಹೇಳಿ ಬೇಟೆಯ ಉಡುಪನ್ನು (ಅಲಂಕಾರವನ್ನು) ತೊಟ್ಟು ಮೃಗವು ಹೊರಗೆ ಬರುವ ಸ್ಥಳದಲ್ಲಿ ಬಾಗಿಲಲ್ಲಿ ಅರ್ಜುನ ಕೃಷ್ಣರು ನಿಂತು ಬೇಟೆಗೆ ಪ್ರಾರಂಭಮಾಡಿದರು. ಪ್ರವೇಶ ಮಾಡುವ ಜಿಂಕೆಯ ಎದೆಯ ಮೊದಲ ಭಾಗವನ್ನು ಹೊರಗಣ ಹುಲ್ಲೆ ಮಧ್ಯಭಾಗವನ್ನೂ ಅಯ್ದರಲ್ಲಿ ಮೂರನ್ನೂ ಮೂರಲ್ಲಿ ಎರಡನ್ನೂ ಎರಡಲ್ಲಿ ಒಂದನ್ನೂ ಹೊಡೆದು ತಮ್ಮ ಬಿಲ್ವಿದ್ಯೆಯ ಪ್ರೌಢಿಮೆಯನ್ನು ಪ್ರಕಾಶಪಡಿಸಿದರು. ೪೮. ಮುಂದೆ ಬಂದ ಮೃಗವನ್ನೂ ಸಾಯಿಸದೆ ಅದನ್ನು ಅನುಸರಿಸಿ ಹಿಂದೆ ಬಂದ ಮೃಗವನ್ನೂ ಕೊಲ್ಲದೆ ತಾನು ಒಂದು ಅಳತೆಯನ್ನೂ ತಪ್ಪದೆ ಅರ್ಜುನನು ಬಾಣಪ್ರಯೋಗಮಾಡಿ ಕೃಷ್ಣನು ತನ್ನ ಬಿಲ್ವಿದ್ಯೆಯನ್ನು ಹೊಗಳುವ ಹಾಗೆ ಮಾಡಿದನು. ವ|| ಪುನ ಹೆದರಿ ಹೊಳೆದು ಹರಿಯುವ ಜಿಂಕೆಗಳನ್ನೂ ತಲೆತಗ್ಗಿಸಿಕೊಂಡು ದೂರವಾಗಿ ಹರಿಯುವ ಕರಡಿಗಳನ್ನೂ ಅಡಗಿಸಿ ಹರಿಯುವ ಹುಲಿಗಳನ್ನೂ ಮೆಟ್ಟಿ ಓಡಿಹೋಗುವ ಮುಳ್ಳು ಹಂದಿಗಳನ್ನೂ ಅಡ್ಡಗಟ್ಟಿ ಉದ್ದವಾಗಿ ಕಾಲಿಟ್ಟು ಹರಿಯುವ ಕಡವೆ ಮತ್ತು ಕಾಡೆಮ್ಮೆಯ ಮರಿಗಳ ಹಿಂಡುಗಳನ್ನು ಅಳತೆದಪ್ಪದೆ ಒಂದೊಂದನ್ನೂ ಹೊಡೆಯುವ ಹಾಗೆ ಹಲವನ್ನು ಹೊಡೆದು ಕೆಡವಿದನು. ಭೂಮಿಯು ಬಿರಿದುಹೋಗುವ ಹಾಗೆ ಆರ್ಭಟದಿಂದ ಘರ್ಜನೆಮಾಡಿಕೊಂಡು ಮುನ್ನುಗ್ಗುತ್ತಿರುವ ಸಿಂಹಗಳನ್ನು ಕಂಡು- ೪೯. ಇವು ಅತಿಕ್ರೂರವಾದುವು ಆದರೂ ಬಹು ಪ್ರಸಿದ್ಧವಾದ ಮೃಗರಾಜನೆಂಬ ಹೆಸರು ಇವಕ್ಕೆ ಇದೆಯಲ್ಲವೆ? ಎಂದು ಆ ದೋಷಗಳಿಗಾಗಿ ಕೋಪಿಸಿಕೊಂಡು ಪ್ರಸಿದ್ಧನಾದ ಅರಿಕೇಸರಿಯು ಕೇಸರಿ (ಸಿಂಹ)ಗಳಷ್ಟನ್ನೂ ಎದುರಿಸಿ ಕೊಂದನು (ಕತ್ತರಿಸಿದನು). ೫೦. ಅವುಗಳ ರಕ್ತದಿಂದ ತನ್ನ ಎದೆಯನ್ನು ಲೇಪನ ಮಾಡಿಕೊಂಡನು. ಈ ಸಿಂಹಗಳು ಶ್ರೇಷ್ಠವಾದ ಆನೆಗಳನ್ನೂ ಮೇಲೆಬಿದ್ದು ಹಿಂಸಿಸಿ ಕೊಲ್ಲುತ್ತಿವೆ ಎಂಬ ಈ ಕೋಪದಲ್ಲಿ ಅರಿಕೇಸರಿಯ ಮಟ್ಟಕ್ಕೆ ಬರುವ ಗಜಪ್ರಿಯರು (ಆನೆಯನ್ನು ಪ್ರೀತಿಸುವವರು) ಇದ್ದಾರೆಯೇ? ವ|| ಹಾಗೆ ನರನಾರಾಯಣರಿಬ್ಬರೂ ಎಡಬಿಡದ ಬಾಣಗಳ ಮಳೆಯಿಂದ ಕಾಡುಗಳನ್ನೆಲ್ಲ ಬರಿದು ಮಾಡಿ ಹೊಡೆದು ಬೇಟೆಯ ಕಾರ್ಯದಿಂದ ಬಳಲಿ ತಮ್ಮ ಮನಸ್ಸಿನಷ್ಟೇ ವೇಗದಿಂದ ಹರಿಯುವ ಜಾತಿ

ಚಂ|| ಜವಮುೞದೊಂದು ಸೋಗೆನವಿಲೊಯ್ಯನೆ ಕರ್ಕಡೆಗಾಸಿಯಾಗಿ ಪಾ
ಱುವುದುಮಿದೆನ್ನ ನಲ್ಲಳ ರತಿಶ್ರಮವಿಶ್ಲಥ ಕೇಶಪಾಶದೊಳ್|
ಸವಸವನಾಗಿ ತೋಱದಪುದೆಂಬುದೆ ಕಾರಣದಿಂದದಂ ಗುಣಾ
ರ್ಣವನಿಡಲೊಲ್ದನಿಲ್ಲ ಹಯವಲ್ಗನಸಂಚಳ ರತ್ನಕುಂಡಳಂ|| ೫೧

ವ|| ಅಂತು ಬೇಂಟೆಯಾಡಿ ಬೞಲ್ದು ಬೇಸಗೆಯ ನಡುವಗಲೊಳ್ ವನಕ್ರೀಡೆಗಂ ಜಲಕ್ರೀಡೆಗಮಾಸಕ್ತರಾಗಿ ಯಮುನಾನದೀತಟ ನಿಕಟವರ್ತಿಗಳಾದರಲ್ಲಿ

ಚಂ|| ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ
ಸುರಿವಲರೋಳಿ ತದ್ವನಲತಾಂಗಿಯ ಸೂಸುವ ಸೇಸೆಯಾಯ್ತು ಭೃಂ|
ಗರವಮದೊಂದು ಮಂಗಳರವಕ್ಕೆಣೆಯಾಯ್ತು ಮನೋನುರಾಗದಿಂ
ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮೆಚ್ಚೆಗಂಡನಂ|| ೯೨

ಕಂ|| ಯಮುನಾನದೀ ತರಂಗಮ
ನಮುಂಕಿ ವನಲತೆಯ ಮನೆಗಳಂ ಸೋಂಕಿ ವನ|
ಭ್ರಮಣ ಪರಿಶ್ರಮಮಂ ಮು
ನ್ನಮೆ ಕಳೆದುದು ಬಂದದೊಂದು ಮಂದಶ್ವಸನಂ|| ೫೩

ವ|| ಅಂತು ಕಾಳಿಂದೀಜಲ ಶಿಶಿರಶೀಕರವಾರಿ ಚಾರಿಯುಂ ಮೃಗಯಾ ಪರಿಭ್ರಮ ಶ್ರಮೋತ್ಥಿತ ಸ್ವೇದಜಲ ಲವಹಾರಿಯುಮಾಗಿ ಬಂದ ಮಂದಾನಿಲಕ್ಕೆ ಮೆಯ್ಯನಾಱಸುತ್ತುಮಾ ಪುಣ್ಯನದಿಯನೆಯ್ದೆವಂದು ತನ್ನ ಬಾಳ ನೀರಂತೆ ಕಱಂಗಿ ಕರ್ಗಿದ ನೀರಂ ನೋಡಿ ವಿಕ್ರಮಾರ್ಜುನಂ ಕಾಳಾಹಿಮಥನನ ಮೊಗಮಂ ನೋಡಿ-

ಕಂ|| ತನ್ನೊಳಗಣ ಪನ್ನಗನಂ
ಮುನ್ನೀನ್ ಪಿಡಿದೊಗೆಯೆ ಕಾಯಲಾಱದೆ ಪಿರಿದುಂ|
ಬನ್ನದ ಕರ್ಪೆಸೆದುದು ತೊ
ಗಿನ್ನುಂ ಹರಗಳ ತಮಾಳ ನೀಳಚ್ಛವಿಯಿಂ|| ೫೪

ತಡಿವಿಡಿದು ಪೂತ ಲತೆಗಳ
ನೊಡನೊಡನೆಲರಲೆಯೆ ಬಿಡದೆ ಸುರಿವಲರ್ಗಳನಂ|
ದೆಡೆಗುಡದೆ ನೂಂಕಿ ಮೆಲ್ಲನೆ
ತಡಿಯಂ ಸಾರ್ಚಿದಪುದಿದಱ ಬಂಬಲ್ದೆರೆಗಳ್|| ೫೫

ಕುದುರೆಗಳನ್ನು ಹತ್ತಿಬಂದರು. ೫೧. ಅಲ್ಲಿ ಕಕ್ಕಡೆ (ಮುಳ್ಳುಗೋಲು)ಯೆಂಬ ಆಯುಧದಿಂದ ಪೆಟ್ಟುತಿಂದು ಶಕ್ತಿಗುಂದಿ ಒಂದು ಗಂಡುನವಿಲು ನಿಧಾನವಾಗಿ ಹಾರುತ್ತಿತ್ತು. ಅದನ್ನು ನೋಡಿ ಅರ್ಜುನನು ಇದು ನನ್ನ ಪ್ರಿಯಳಾದ ಪ್ರಿಯಳಾದ ಸುಭದ್ರೆಯ ರತಿಕ್ರೀಡೆಯ ಕಾಲದಲ್ಲಿ ಬಿಚ್ಚಿಹೋದ ತುರುಬಿನ ಗಂಟಿಗೆ ಸಮಾವಾಗಿ ತೋರುತ್ತಿದೆ ಎಂಬ ಕಾರಣದಿಂದ ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ ಅರ್ಜುನನು ಅದನ್ನು ಹೊಡೆಯಲು ಒಪ್ಪಲಿಲ್ಲ ವ|| ಹಾಗೆ ಬೇಟೆಯಾಡಿ ಬಳಲಿ ಆ ಬೇಸಗೆಯ ನಡುಹಗಲಿನಲ್ಲಿ ವನಕ್ರೀಡೆಗೂ ಜಲಕ್ರೀಡೆಗೂ ಆಸೆಪಟ್ಟವರಾಗಿ ಯಮುನಾನದೀದಡಕ್ಕೆ ಬಂದರು. ಅಲ್ಲಿ ೫೨. ತೇಗು, ಹೊಂಗೆ, ತಾಳೆ, ಶ್ರೀಗಂಧ ಮತ್ತು ನಂದನವೃಕ್ಷಗಳ ಸಮೂಹಗಳಿಂದ ಸುರಿಯುತ್ತಿರುವ ಪುಷ್ಪರಾಶಿಯು ಆ ವನಲಕ್ಷ್ಮಿಯು ಚೆಲ್ಲುತ್ತಿರುವ ಅಕ್ಷತೆಯಾಯಿತು. ದುಂಬಿಗಳ ಧ್ವನಿಯು ಮಂಗಳವಾದ್ಯಕ್ಕೆ ಸಮಾನವಾಯಿತು. ಮದಿಸಿದ ಕಳಹಂಸಧ್ವನಿಯು ಪಡೆಮೆಚ್ಚೆ ಗಂಡನಾದ ಅರ್ಜುನನನ್ನು ಪ್ರೀತಿಯಿಂದ ಕರೆಯುವ ಹಾಗಾಯಿತು. ೫೩. ಯಮುನಾ ನದಿಯ ಅಲೆಗಳನ್ನು ಅದುಮಿ ಕಾಡಿನ ಬಳ್ಳಿ ಮನೆಗಳನ್ನು ಮುಟ್ಟಿ ಬಂದ ಒಂದು ಮಂದಮಾರುತವು (ಅವರು) ಕಾಡಿನಲ್ಲಿ ಅಲೆದ ಆಯಾಸವನ್ನು ಮೊದಲೇ ಪರಿಹರಿಸಿತು. ವ|| ಯಮುನಾನದಿಯ ನೀರಿನ ತಂಪಾದ ತುಂತುರುಗಳ ಮೇಲೆ ಸಂಚಾರ ಮಾಡಿದುದೂ ಬೇಟೆಯ ಅಲೆದಾಟದ ಆಯಾಸದಿಂದುಂಟಾದ ಬೆವರಿನ ಕಣಗಳನ್ನು ಹೋಗಲಾಡಿಸಿದುದೂ ಆಗಿ ಬಂದ ಮಂದಮಾರುತಕ್ಕೆ ಶರೀರವನ್ನು ಒಡ್ಡುತ್ತಾ ಆ ಪುಣ್ಯನದಿಯ ಸಮೀಪಕ್ಕೆ ಬಂದು ತನ್ನ ಕತ್ತಿಯ ಕಾಂತಿಯಂತೆ ಕಪ್ಪಾಗಿ ಕರ್ರಗಿದ್ದ ನೀರನ್ನು ನೋಡಿ ವಿಕ್ರಮಾರ್ಜುನನು ಕಾಳಿಂಗಮರ್ದನನಾದ ಕೃಷ್ಣನನ್ನು ಕುರಿತು- ೫೪. ತನ್ನಲ್ಲಿದ್ದ ಕಾಳಿಂಗಸರ್ಪವನ್ನು ಮೊದಲು ನೀನು ಹಿಡಿದೆತ್ತಿ ಎಸೆಯಲು ಅದನ್ನು ರಕ್ಷಿಸಲಾರದೆ ಆ ನದಿಗೆ ವಿಶೇಷವಾಗಿ ಅಂದುಂಟಾದ ಸೋಲಿನ ಕರಿಯಬಣ್ಣವು ಇಂದೂ ಇನ್ನೂ ಶಿವನ ಕಂಠದಂತೆಯೂ ಹೊಂಗೆಯ ಮರದಂತೆಯೂ ಈ ನದಿಯಲ್ಲಿ ಕಪ್ಪು ಕಾಂತಿಯಿಂದ ಪ್ರಕಾಶಿಸುತ್ತಿದೆ. ೫೫. ದಡವನ್ನನುಸರಿಸಿ ಹೂಬಿಟ್ಟಿರುವ ಲತೆಗಳನ್ನು ಆಗಾಗ ಗಾಳಿಯು ಅಲುಗಿಸಲು ಅದರಿಂದ ಸುರಿಯುವ ಹೂವುಗಳನ್ನು ಒಂದೇ

ವಿದಳಿತ ನುತ ಶತಪತ್ರದ
ಪುದುವಿನೊಳಿರದಗಲೆವೋದ ಹಂಸನನಱಸಲ್|
ಪದೆದೆಳಸುವ ಪೆಣ್ಣಂಚೆಯ
ಪದ ಕೊರಲಿಂಚರದ ಸರಮೆ ಸವಿ ಕಿವಿಗಿದಳ್|| ೫೬

ಕಂ|| ನೆಯಲರ್ದಂಭೋರುಹದಲ
ರ್ದುಱುಗಲನೆಲೆದೊಗೆದುವೆಸೆಯೆ ಜಲದೇವತೆಗಳ್||
ನಿಱವಿಡಿದುಡಲ್ ನಿಮಿರ್ಚಿದ
ಕುಱುವಡಿಯ ತರಂಗದಂತೆ ಬಂಬಲ್ದೆರೆಗಳ್|| ೫೭

ಚಂ|| ತುರಗಚಯಂಗಳಂತಿರೆ ತರಂಗಚಯಂ ಚಮರೀರುಹಂಗಳಂ|
ತಿರೆ ಕಳಹಂಸೆ ಬೆಳ್ಗೊಡೆಗಳಂತಿರೆ ಬೆಳ್ನೊರೆ ಗೊಟ್ಟಿ ಗಾಣರಂ|
ತಿರೆ ಮಱದುಂಬಿ ಮೇಳದವರಂತಿರೆ ಸಾರಿಕೆ ರಾಜಗೇಹದಂ
ತಿರೆ ಕೊಳನಲ್ಲಿ ತಾಮರಸರಂತಿರೆ ತಾಮರಸಂಗಳೊಪ್ಪುಗುಂ|| ೫೮

ವ|| ಎಂದು ಭಾಸ್ಕರತನೂಜೆಯನುಭಯತಟ ನಿಕಟ ಕುಸುಮನಿವಹ ತತ್ಪರಾಗ ಪಟಳ ಪಿಶಂಗ ತರತ್ತರಂಗ ಸರೋಜೆಯಂ ಮೆಚ್ಚಿ ಪೊಗೞ್ದು ಜಲಕ್ರೀಡೆಯಾಡಲ್ ಬಗೆದು ತಾನುಮನಂತನುಮಂತಪುರಪರಿವಾರಂ ಬೆರಸು-

ಕಂ|| ಒತ್ತಿದ ತಳ್ಕೆತ್ತಿದ ತೞೆ
ಮುತ್ತಿನ ಪೊಸದುಡಿಗೆ ತಳಿರ ಸೋರ್ಮುಡಿ ಮನಮಂ|
ಪತ್ತಿಸಿ ಜೊತ್ತಿಸೆ ಮದನೋ
ನ್ಮತ್ತೆಯರವಯವದೆ ಬಂದರರಸಿಯರರೆಬರ್|| ೫೯

ಇದು ಮೃದು ಕಳಹಂಸದ ರವ
ಮಿದು ನೂಪುರ ನಿನದಮಿದು ರಥಾಂಗಯುಗಂ ಮ|
ತ್ತಿದು ಕುಚಯುಗಮಿದು ಸರಸಿಜ
ಮಿದು ಮೊಗಮೆನಿಸಿದುದು ನೆರೆದ ಪೆಂಡಿರ ತಂಡಂ|| ೬೦

ಸಮನಾಗಿ ಇದರ ಸಾಲಾದ ಅಲೆಗಳು ಮೃದುವಾಗಿ ದಡವನ್ನು ಸೇರಿಸುತ್ತವೆ. ೫೬. ಅರಳಿದ ಪ್ರಸಿದ್ಧವಾದ ತಾವರೆಯ ಹುದುವಿನ ಆಶ್ರಯದಲ್ಲಿರದೆ ಅಗಲಿಹೋದ ಗಂಡು ಹಂಸಪಕ್ಷಿಯನ್ನು ಹುಡುಕಲು ಆಶೆಪಟ್ಟು ಕೂಗುವ ಹೆಣ್ಣುಹಂಸದ ಹದವಾದ ಕೊರಲಿನ ಇಂಪಾದ ಧ್ವನಿಯೇ ಇಲ್ಲಿ ಕಿವಿಗಿಂಪಾದ ಸ್ವರವಾಗಿದೆ. ೫೭. ಜಲದೇವತೆಗಳು ಉಡಲು ಎತ್ತಿದ ಸೀರೆಯ ನಿರಿಗೆಗಳು ಚಿಮ್ಮುವಂತೆ ಅಲೆಗಳ ಸಮೂಹವು ತಾವರೆಗಳ ಮೇಲಿಂದ ಹಾರಿದುವು. ೫೮. ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು ಕಳಹಂಸವು ಚಾಮರಗಳಂತಿರಲು ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು ದುಂಬಿಯ ಮರಿಗಳು ಗಾಯಕಗೋಷ್ಠಿಯಂತಿರಲು ಹೆಣ್ಣು ಗಿಳಿಯು ಸಖಿಯಂತಿರಲು ಅಲ್ಲಿಯ ಕೊಳವು ಅರಮನೆಯಂತಿರಲು ತಾವರೆಗಳು ತಾವೇ ಅರಸರಾಗಿರುವ ಹಾಗೆ ಪ್ರಕಾಶಿಸುತ್ತಿವೆ. ವ|| ಎಂದು ಎರಡು ಸಮೀಪದ ಮರಗಳಿಂದ ಉದುರಿದ ಹೂವಿನ ಪರಾಗರಾಶಿಯಿಂದ ಪಿಶಂಗ (ಕಪ್ಪುಮಿಶ್ರವಾದ ಕೆಂಪುಬಣ್ಣ)ವಾಗಿ ಮಾಡಲ್ಪಟ್ಟ ಚಂಚಲವಾದ ಅಲೆಗಳಿಂದ ಕೂಡಿದ ಕಮಲವನ್ನು ಸೂರ್ಯಪುತ್ರಿಯಾದ ಯುಮುನಾನದಿಯನ್ನು ಮೆಚ್ಚಿ ಹೊಗಳಿ ತಾನೂ ಕೃಷ್ಣನೂ ಅಂತಪುರಪರಿವಾರದೊಡನೆ ಕೂಡಿ ನೀರಾಟವಾಡಲು ಬಯಸಿದರು. ೫೯. ಲೇಪನಮಾಡಿಕೊಂಡಿರುವ ಶ್ರೀಗಂಧಾದಿಲೇಪನವೂ ಎತ್ತಿ ಹಿಡಿದಿರುವ ಛತ್ರಿಗಳೂ ಮುತ್ತಿನ ಹೊಸಒಡವೆಗಳೂ ಚಿಗುರಿನಿಂದ ಅಲಂಕರಿಸಿದ ಜಾರುಗಂಟೂ ಮನಸ್ಸನ್ನು ಪ್ರವೇಶಿಸಿ ಆಕರ್ಷಿಸುತ್ತಿರಲು ಕಾಮದಿಂದ ಹುಚ್ಚೆದ್ದ ಕೆಲವರು ರಾಣಿಯರು ಲೀಲೆಯಿಂದ ಅಲ್ಲಿಗೆ ಬಂದರು. ೬೦. ಅಲ್ಲಿ ನೆರೆದ ಹೆಂಗಸರ ಸಮೂಹವು ಇದು ಮೃದುವಾದ ಕಳಹಂಸಧ್ವನಿ; ಇದು ಕಾಲ್ಗಡಗದ ಶಬ್ದ; ಇದು ಚಕ್ರವಾಕಪಕ್ಷಿಗಳ ಜೋಡಿ, ಇದು ಮೊಲೆಗಳ ಜೋಡಿ, ಇದು ಕಮಲ, ಇದು ಮುಖ ಎನ್ನಿಸಿತು. ವ|| ಹಾಗೆ ಮನ್ಮಥನ ಮನೋರಾಜ್ಯವೇ ಬರುವಂತೆ ಬಂದು ಗುಂಪು ಗುಂಪಾದ ರಮಣೀಯರಾದ ಆ ಸ್ತ್ರೀಜನರೊಡನೆ ಕೂಡಿ ನೀರಿಗೆ ಪಂಚರತ್ನಗಳನ್ನು ಹರಡಿಸಿ ಶ್ರೀಗಂಧದ ವಾಸನೆಯನ್ನು ಕುಂಕುಮಕೇಸರಿ ಮತ್ತು ಕಸ್ತೂರಿಯ ಬಗ್ಗಡಗಳನ್ನು ಕದಡಿ ನದಿಯನ್ನು ಪ್ರವೇಶಿಸಿದರು. ೬೧. ನೀಲರತ್ನದ, ಬೆಳ್ಳಿಯ, ಸೌಂದರ್ಯವನ್ನು ಹೋಲುವ ಕಣ್ಣುಗಳನ್ನುಳ್ಳ ಈ ಕೋಮಲೆಯರ ಮುಂದೆ ನಾವು ಹೀನವಾಗಿ ಕಾಣಿಸಿಕೊಳ್ಳಲಾರೆವು ಎಂದು ಅಲ್ಲಿದ್ದ ಎಳೆಯ ಮೀನುಗಳು ಆ ಬಾಲೆಯರು

ವ|| ಅಂತು ಮದನನ ಮನೋರಾಜ್ಯಮೆ ಬರ್ಪಂತೆ ಬಂದು ತಂಡತಂಡದೆ ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಂ ಕೆದಱಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ-

ಕಂ|| ನೀಲದ ಬೆಳ್ಳಿಯ ಗಾಡಿಯು
ಮೀ ಲಲಿತಾಂಗಿಯರ ಕಣ್ಗೆ ಪೋಲ್ತುಂ ನಾಂ ಕ|
ಣ್ಗೇಳಿದಮಾಗಿರೆವೆಂದೆಳ
ವಾಳೆಗಳೋಡಿದುವು ಬಾಲೆಯರ್ ಪುಗುವಾಗಳ್|| ೬೧

ವ|| ಅಂತು ಪೊಕ್ಕಾಗಳ್-

ಕಂ|| ಆದಲೆ ನೀರ್ ಗುಂಡಿತ್ತೆಂ
ದೀದಲೆಯೊಳೆ ನಿಂದು ಸತಿಗೆ ಹರಿಗಂ ತೋಱು|
ತ್ತಾದರದೆ ಜಾನುದಘ್ನಮು
ರೋದಘ್ನಂ ಕಂಠದಘ್ನಮೆಂಬಳವಿಗಳಂ|| ೬೨

ವ|| ಅಂತು ಜಗುನೆಯ ಮಡುವಂ ತಮ್ಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳಮರೆ ಬಗಿದೊಗೆದ ಮೊಲೆಗಳಳ್ಳೇಱ ನೊಳಳ್ಳಾಡಿ ತಳ್ಳಂಕಗುಟ್ಟಿ ನೀರಾಟಮಾಡುವಾಗಳ್-

ಚಂ|| ಪೊಸತಲರ್ದೊಂದು ತಾವರೆಯೆಗೆತ್ತು ಮುಖಾಬ್ಜಮನೊಂದು ತುಂಬಿ ಚುಂ
ಬಿಸೆ ಸತಿ ಬೆರ್ಚಿ ಪೆಳ್ಪಳಿಸಿ ನೋೞ್ಪದುಮಾಕೆಯ ಕಣ್ಣ ಬೆಳ್ಪುಗಳ್|
ಪಸರಿಸೆ ತುಂಬಿಗಳ್ ಕುವಲಯಂಗಳರಳ್ದುವೆ ಗೆತ್ತು ಮತ್ತೆಯುಂ
ಮುಸುಱುವುದುಂ ಗುಣಾರ್ಣವನನಾಗಳವಳ್ ಭಯದಿಂದಮಪ್ಪಿದಳ್|| ೬೩

ಅಸಿಯಳವುಂಕಿ ಕೆಂದಳದೊಳೊತ್ತುವ ನೀರ್ ಮೊಗಮಂ ಪಳಂಚೆ ಬಂ
ಚಿಸಲಿನಿಸಾನುಮಂ ಮುೞುಗಿದಾಗಡೆ ಭೋಂಕನೆ ಬಂದು ಬಾಳೆವಿನ್|
ಮುಸುಱ ನಿರಂತರಂ ಕರ್ದುಕೆ ಸತ್ಕವಿಯೊಳ್ ಸಮನಾಗಿ ಮಾರ್ಗಮಂ
ಪೊಸಯಿಸಿ ದೇಸಿಯಂ ಪೊಸತುಮಾಡಿದಳೊರ್ವಳಪೂರ್ವರೂಪದಿಂ|| ೬೪

ಕಂ|| ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿಯ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ವಿಂಗಳ್|| ೬೫

ಕೊಳವನ್ನು ಪ್ರವೇಶಿಸಿದಾಗ ಓಡಿಹೋದುವು. ವ|| ಹಾಗೆ ಪ್ರವೇಶಿಸಿದಾಗ- ೬೨. ಆ ಕಡೆಯಲ್ಲಿ ನೀರು ಆಳವಾಗಿದೆ ಎಂದು ಅರ್ಜುನನು ಈ ಕಡೆಯಲ್ಲಿಯೇ ನಿಂತು ಸುಭದ್ರೆಗೆ ಮೊಳಕಾಲವರೆಗೆ ಮುಳುಗುವ ಎದೆಯವರೆಗೆ ಮುಳುಗುವ ಕತ್ತಿನವರೆಗೆ ಮುಳುಗುವ ಪ್ರಮಾಣಗಳನ್ನು ಆದರದಿಂದ ತೋರಿಸಿದನು. ವ|| ಯುಮುನಾನದಿಯ ಮಡುವನ್ನು ಆ ರಾಣಿಯರು ತಮ್ಮ ದಪ್ಪವಾದ ಪಿರ್ರೆಗಳ ತಾಗುವಿಕೆಯಿಂದ ಭಾಗಮಾಡಿ ಮೊಲೆಗಳ ಘಟ್ಟಣೆಯಿಂದ ತುಳುಕಾಡಿ ಜಲಕ್ರೀಡೆಯಾಡಿದರು. ೬೩. ಮುಖಕಮಲಗಳನ್ನು ಒಂದು ದುಂಬಿಯು ಒಂದು ಹೊಸದಾಗಿ ಅರಳಿದ ಕಮಲವೆಂದೇ ಭ್ರಮಿಸಿ ಮುತ್ತಿಡಲು ಆ ಸತಿಯು ಹೆದರಿ ಭಯದಿಂದ ನೋಡುತ್ತಿರಲು ಅವಳ ಕಣ್ಣಿನ ಬಿಳಿಯ ಬಣ್ಣವು ಪ್ರಸರಿಸಲು ಅದನ್ನು ದುಂಬಿಗಳ ಅರಳಿದ ಕನ್ನೆ ದಿಲೆಗಳೆಂದೇ ಭ್ರಾಂತಿಗೊಂಡು ಪುನ ಮುತ್ತಲು ಅವಳು ಭಯದಿಂದ ಗುಣಾರ್ಣವನನ್ನು ಆಲಿಂಗನ ಮಾಡಿಕೊಂಡಳು. ೬೪. ಕೃಶಾಂಗಿಯಾದ ಒಬ್ಬಳು ಕೆಂಪಾದ ತನ್ನ ಅಂಗೈಯಿಂದ ಅಮುಕಿ ಚೆಲ್ಲಿದ ನೀರು ತನ್ನ ಮುಖವನ್ನು ತಗುಲಲು ಮತ್ತೊಬ್ಬಳು ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗಲೆ ಒಂದು ಬಾಳೆಯ ಮೀನು ಇದ್ದಕ್ಕಿದ್ದ ಹಾಗೆ ಬಂದು ಮುತ್ತಿಕೊಂಡು ಒಂದೇ ಸಮನಾಗಿ ಕಚ್ಚಲು ಅವಳು ಸತ್ಕವಿಗೆ ಸಮನಾಗಿ ಮಾರ್ಗೀಶೈಲಿಯನ್ನು ಹೊಸದಾಗಿಸಿ ದೇಸೀಶೈಲಿಯ ಸೌಂದರ್ಯವನ್ನು ಅಪೂರ್ವರೀತಿಯಿಂದ ಹೊಸತು ಮಾಡಿದಳು.

೬೫. ಆ ಸಮಸ್ತ್ರ ಸ್ತ್ರೀ ಸಮೂಹವು ಲೇಪನ ಮಾಡಿಕೊಂಡಿದ್ದ ಕಸ್ತೂರಿಯಿಂದಲೂ ತುರುಬಿನ ಹೂಗಳ ಪರಾಗಗಳಿಂದಲೂ ವಾಸನೆ ಈ ಪದ್ಯದ ಅರ್ಥವು ಸ್ಪಷ್ಟವಾಗಿಲ್ಲ.

ಮುಡಿ ಬಿಡೆ ಪರೆದೆಸೞ್ಗಳ ಪೊಸ
ದುಡುಗೆಯ ಮುತ್ತುಗಳ ಕುಚದ ಸಿರಿಕಂಡದ ಬೆ|
ಳ್ಪೊಡನೊಡನೆಸೆದಿರೆ ಜಗುನೆಯ
ಮಡು ಗಂಗೆಯ ಮಡುವನಿನಿಸನನುಕರಿಸಿರ್ಕುಂ|| ೬೬

ವ|| ಅಂತು ನಾಡೆಯುಂ ಪೊೞ್ತು ಜಲಕೇಳೀ ಲೀಲೆಯೊಳ್ ಮೆದು ನಿಮಿರ್ದ ಕುರುಳ್ಗಳುಂ ಕೆಂಪೇಱದ ಕಣ್ಗಳುಂ ಬೇಳ್ಪೇಱದ ಬಾಯ್ದೆಗಳುಂ ಪಳಂಚಿದ ಬಣ್ಣಂಗಳುಮೆಸೆಯೆ ಸೊಗಯಿಸುವ ನಿಜ ವಧೂಜನಂ ಬೆರಸು ಪೊಱಮಟ್ಟಾಗಳ್-

ಕಂ|| ತೆಱಪುವಡೆದಂಗಜಂ ಕೆ
ಯ್ಸೆಗೊಳೆ ನೋಟಕರ ಮನಮನಾಗಳ್ ಕೊಳದಿಂ|
ಪೊಱಮಡೆ ಜಿಗಿಲ್ತು ಪತ್ತಿದ
ಕುಱುವಡಿಗಳೆ ಮೆದುವವರ ನಾಣ್ಗಳ ತೆಱಪಂ|| ೬೭

ವ|| ಆಗಳ್ ಮಡಿಯ ಭಂಡಾರದ ಮಾಣಿಕ್ಯ ಭಂಡಾರದ ನಿಯೋಗಿಗಳ್ ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳೊಟ್ಟಿದ ದೇವಾಂಗವಸ್ತ್ರಂಗಳುಮನನೇಕವಿಧದ ತುಡುಗೆಗಳು ಮನೆನಿತಾನುಂ ತೆಱದ ಸುಗಂಧದ್ರವ್ಯಂಗಳುಮನರಸಿಯರ್ಗಮರಸುಮಕ್ಕಳ್ಗುಮಿತ್ತು ತಾಮಿರ್ವರುಂ ಉಟ್ಟುಂ ತೊಟ್ಟುಂ ಪೂಸಿಯುಂ ನೆಯೆ ಕೆಯ್ಗೆಯ್ದು ದಿವ್ಯಾಹಾರಂಗಳನಾರೋಗಿಸಿ ಕೆಯ್ಗಟ್ಟಿಕೊಂಡು ತಂಬುಲಂಗೊಂಡಿಂ ಬೞಯಮಚ್ಯುತಂ ವಿಕ್ರಮಾರ್ಜುನನ ಕೆಯ್ಯಂ ಪಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಂಗಳಂ ತೋಱಲೆಂದು-

ಉ|| ಕೊಂದೆನವುಂಕಿ ಸಂದ ಖರಧೇನುಕರಂ ಮುಳಿಸಿಂದಮಿಲ್ಲಿ ಕಾ
ಳಿಂದಿಯ ಪಾವನಪ್ಪಳಿಸಿದೆಂ ಪಿಡಿದೀ ಸಿಲೆಯಲ್ಲಿ ಮತ್ತಮಾ|
ಟಂದರನುಗ್ರದೈತ್ಯರನಳುರ್ಕೆಯಿನಿಕ್ಕಿದೆನಿಲ್ಲಿ ಮುನ್ನಮೆಂ
ದಂದು ಗುಣಾರ್ಣವಂಗೆ ಮಧು ಕೈಟಭಹಾರಿ ತೊೞಲ್ದು ತೋಱದಂ|| ೬೮

ವ|| ಅಂತಾ ವನಾಂತರಾಳಮಂ ತೊೞಲ್ದು ತೋಱುತ್ತಿರ್ಪನ್ನೆಗಮನೂನದಾನಿಯದಾನದುದ್ದಾನಿಯ ದಾನಮನಾನಲಾನಲ್ಲದೆ ಪೆಱರ್ ನೆಯರೆಂಬಂತೆ ತೊಟ್ಟನೆ ಕಟ್ಟಿದಿರೊಳ್-

ಮಾಡಲ್ಪಟ್ಟ ನೀರಿನ ಕದಡವೆಂಬ ಮದ್ಯಸೇವನೆಯಿಂದ ಮೀನುಗಳು ಸೊಕ್ಕಿ ಬೆಂಡಿನಂತೆ ಅಸ್ತವ್ಯಸ್ತವಾದುವು. ೬೬. ಆ ಸ್ತ್ರೀಯರ ಬಿಚ್ಚಿ ಹೋದ ತುರುಬಿನಿಂದ ಚೆದುರಿದ ಹೂವಿನ ದಳಗಳಿಂದಲೂ, ಹೊಸ ಒಡವೆಗಳ ಮುತ್ತುಗಳಿಂದಲೂ ಮೊಲೆಗೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧದಿಂದಲೂ ಬಿಳಿಯ ಬಣ್ಣವನ್ನು ಹೊಂದಿ ಯಮುನೆಯ ಮಡು (ಬಿಳುಪಾಗಿರುವ) ಗಂಗೆಯ ಮಡುವನ್ನು ಸ್ವಲ್ಪ ಹೋಲುತ್ತಿತ್ತು. ವ|| ಹಾಗೆ ಬಹಳ ಹೊತ್ತು ಜಲಕ್ರೀಡೆಯ ಆಟದಲ್ಲಿ ಮೆರೆದು ನೇರವಾಗಿ ನಿಂತ ಕೂದಲುಗಳೂ ಕೆಂಪು ಹತ್ತಿದ ಕಣ್ಣುಗಳೂ ಬಿಳಿಚಿಕೊಂಡಿರುವ ತುಟಿಗಳೂ ತಗಲಿ ಅಂಟಿಕೊಂಡಿರುವ ಬಣ್ಣದ ಸೀರೆಗಳೂ ರಮಣೀಯವಾಗಿರಲು ಸೊಗಸಾಗಿ ಕಾಣುತ್ತಿರುವ ತಮ್ಮ ಸ್ತ್ರೀಜನಗಳೊಜನೆ ಕೃಷ್ಣಾರ್ಜುನರು (ನೀರಿನಿಂದ) ಹೊರಟುಬಂದರು. ೬೭. ಮನ್ಮಥನು ಅವಕಾಶವನ್ನು ಪಡೆದು ನೋಟಕರ ಮನಸ್ಸನ್ನು ಸೆರೆಹಿಡಿಯುತ್ತಿರಲು ಕೊಳದಿಂದ ಸ್ತ್ರೀಯರು ಹೊರಗೆ ಬಂದರು. ಅವರ ಶರೀರಕ್ಕೆ ಅಂಟಿಕೊಂಡಿದ್ದ ಚಿಕ್ಕ ಸ್ನಾನಶಾಟಿಗಳೇ ಅವರ ರಹಸ್ಯಸ್ಥಾನಗಳ ವಿಸ್ತಾರವನ್ನು ಪ್ರಕಟಿಸಿದುವು. ವ|| ಆಗ ವಸ್ತ್ರಭಂಡಾರ ಮಾಣಿಕ್ಯ ಭಂಡಾರಗಳ ಅಕಾರಿಗಳು ತಂದು ಮುಂದೆ ಚಿನ್ನದ ತಟ್ಟೆಗಳಲ್ಲಿ ರಾಶಿ ಹಾಕಿದ ರೇಷ್ಮೆ ವಸ್ತುಗಳನ್ನೂ ಅನೇಕ ವಿಧವಾದ ಆಭರಣಗಳನ್ನೂ ಎಷ್ಟೋ ರೀತಿಯ ಸುಗಂಧದ್ರವ್ಯಗಳನ್ನೂ ರಾಣಿಯರಿಗೂ ರಾಜಕುಮಾರರಿಗೂ ಕೊಟ್ಟು ತಾವಿಬ್ಬರೂ ವಸ್ತ್ರಗಳನ್ನು ತೊಟ್ಟು ವಾಸನಾದ್ರವ್ಯವನ್ನು ಲೇಪಿಸಿಕೊಂಡು ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡರು. ಆಹಾರಗಳನ್ನು ಭುಂಜಿಸಿ ಕೈಗಂಧವನ್ನೂ ಲೇಪಿಸಿ ತಾಂಬೂಲ ಸ್ವೀಕರಿಸಿದ ಮೇಲೆ ಕೃಷ್ಣನು ಅರ್ಜುನನ ಕಯ್ಯನ್ನು ಹಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಗಳನ್ನು ತೋರಲೆಂದು ಹೊರಟನು. ೬೮. ಪ್ರಸಿದ್ಧರಾದ ಖರಧೇನು ಕುಂಭರೆಂಬ ರಾಕ್ಷಸರನ್ನು ಇಲ್ಲಿ ಒತ್ತಿ ಕೋಪದಿಂದ ಕೊಂದೆನು. ಯಮುನಾನದಿಯಲ್ಲಿದ್ದ ಕಾಳಿಂಗನೆಂಬ ಹಾವನ್ನು ಹಿಡಿದು ಈ ಕಲ್ಲಿನ ಮೇಲೆ ಅಪ್ಪಳಿಸಿದೆನು. ಮತ್ತು ಹಿಂದಿನ ಕಾಲದಲ್ಲಿ ಮೇಲೆಬಿದ್ದ ಭಯಂಕರರಾದ ರಾಕ್ಷಸರನ್ನು ಪರಾಕ್ರಮದಿಂದ ಇಲ್ಲಿ ಇಕ್ಕಿದೆನು ಎಂದು ಆ ದಿನ ಗುಣಾರ್ಣವನಾದ ಅರ್ಜುನನಿಗೆ, ಮಧುಕೈಟಭರಿಗೆ ಶತ್ರುವಾದ ಕೃಷ್ಣನು ಸುತ್ತಾಡಿ ತೋರಿಸಿದನು. ವ|| ಹಾಗೆ ವನದ ಒಳಭಾಗವನ್ನು ತೊಳಲಿ ತೋರುತ್ತಿರುವಷ್ಟರಲ್ಲಿ ಕುಂದಿಲ್ಲದೆ ದಾನಮಾಡುವವನ ದಾನವನ್ನು ಸ್ವೀಕರಿಸಿದುದಕೆ

ಕಂ|| ಉರಿವುರಿಯನೆ ತಲೆನವಿರನು
ಕರಿಸಿರೆ ಸಂತಪ್ತ ಕನಕವರ್ಣಮುಮುರಿಯೊಂ|
ದುರುಳಿವೊಲಿರೆ ಜಠರಾನಳ
ನುರಿವಿನಮಂತೊರ್ವನುರಿಯ ಬಣ್ಣದ ಪಾರ್ವಂ|| ೬೯

ವ|| ಅಂತು ವರ್ಪನಂ ಕಂಡು ಸಾಮಂತಚೂಡಾಮಣಿ ತನ್ನೊಳಿಂತೆಂದು ಬಗೆದಂ-

ಕಂ|| ತಪ ನಿಯಮ ನಿಯತನೀ ಬ
ರ್ಪ ಪಾರ್ವನೇನೞ ತನಗದಂ ಬೇಡಿದೊಡಿ|
ನ್ನಪಗತದುರಿತರ್ ಸಂಪೂ
ರ್ಣಪುಣ್ಯರಾನಲ್ಲದಿಲ್ಲ ಪೇೞು ಪೆಱರೊಳರೇ|| ೭೦

ವ|| ಎಂಬನ್ನೆಗಂ ಸಾಮಂತ ಚೂಡಾಮಣಿಯನೆಯ್ದೆವಂದು ನಾಲ್ಕುಂ ವೇದಂಗಳೊಳ್ ನಾಲ್ಕುಂ ಋಚಂಗಳಂ ಪೇೞ್ದು ಸಿತ ದೂರ್ವಾಂಕುರ ವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಮೆನೆ-

ಚಂ|| ಮಣಿ ಕನಕಾದಿ ವಸ್ತುಗಳನೊಂದುಮನೊಲ್ಲೆನವೇವುವಾದವಿ
ನ್ನುಣಿಸೆನಗೞ ಮೆಯ್ ಪಸಿದು ಜೊಮ್ಮನೆ ಪೋದಪುದೆನ್ನ ವೇೞ್ಪುದಂ|
ತಣಿಯುಣಲೀವೊಡೀವುದೆನೆ ಪಾರ್ಥನದೇವಿರಿದಿತ್ತೆನಾವುದು
ಣ್ಬುಣಿಸೆನೆ ಪೇೞ್ವೆನೆಂಬ ಪದದೊಳ್ ನರಕಾಂತಕನಗ್ನಿದೇವನಂ|| ೭೧

ವ|| ಕಾಣಲೊಡಮಱದು ಶರಣಾಗತಜಳನಿಯನೆಯ್ದೆ ವಂದನೀ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನನಿತ್ತಿಯೆನೆ-

ಚಂ|| ಪಸಿದುಣವೇಡಿದಂ ಬಡವನಾನುಣಲಿತ್ತೆನದಲ್ಲದಿಲ್ಲಿ ದಲ್
ಕುಸುರಿಯ ಮಾತುಗಾಣೆನೆನೆ ಕೇಳ್ದು ಮುರಾಂತಕನೇಂ ತಗುಳ್ದೆ ಯಿ|
ನ್ನುಸಿರದಿರೀವ ಮಾತನಿವನುಣ್ಬುದು ಖಾಂಡವವಿತನಗ್ನಿ ಮುಂ
ಪುಸಿದಿವನಿಂತೆ ಪಾಯಿಸಿದನಿಂದ್ರನೊಳಾದಿ ನರೇಂದ್ರರೆಲ್ಲರಂ|| ೭೨

ನಾನಲ್ಲದೆ ಬೇರೆಯವರು ಸಮರ್ಥರಾಗಲಾರರು ಎನ್ನುವ ಹಾಗೆ ಕಟ್ಟಿದಿರಿನಲ್ಲಿ- ೬೯. ಉರಿಯುತ್ತಿರುವ ಜ್ವಾಲೆಯನ್ನೇ ತಲೆಯ ಕೂದಲು ಅನುಕರಿಸುತ್ತಿರಲು ಅವನ ಪುಟವಿಟ್ಟ ಚಿನ್ನದ ಹೊಂಬಣ್ಣವು ಬೆಂಕಿಯ ಒಂದು ಉಂಡೆಯಂತಿರಲು ಜಠರಾಗ್ನಿಯ ಉರಿಯಿಂದ ಕೂಡಿ (ಹಸಿವಿನಿಂದ ಕೂಡಿದ) ಬೆಂಕಿಯ ಬಣ್ಣದ ಬ್ರಾಹ್ಮಣನೊಬ್ಬನು ವ|| ಬರುತ್ತಿರುವುದನ್ನು ಕಂಡು ಸಾಮಂತಚೂಡಾಮಣಿ ತನ್ನಲ್ಲಿ ಹೀಗೆಂದು ಯೋಚಿಸಿದನು. ೭೦. ತಪಸ್ಸಿನ ನಿಯಮದಲ್ಲಿ ಆಸಕ್ತನಾದ, ಎದುರಿಗೆ ಬರುತ್ತಿರುವ ಈ ಬ್ರಾಹ್ಮಣನು ತನ್ನ ಇಷ್ಟಾರ್ಥವೇನೆಂಬುದನ್ನು ನನ್ನಲ್ಲಿ ತಿಳಿಸುವುದಾದರೆ ನನಗಿಂತ ಪುಣ್ಯಶಾಲಿಗಳು ಮತ್ತಾರೂ ಇಲ್ಲ. ವ|| ಎನ್ನುವಷ್ಟರಲ್ಲಿ ಅವನು ಸಾಮಂತ ಚೂಡಾಮಣಿಯವರ ಅರ್ಜುನನ ಸಮೀಪಕ್ಕೆ ಬಂದು ನಾಲ್ಕು ವೇದಗಳಿಂದಲೂ ನಾಲ್ಕು ಋಕ್ಕುಗಳನ್ನು ಹೇಳಿ ಬಿಳಿಯ ಗರಿಕೆಯ ಮೊಳಕೆಯಿಂದ ಕೂಡಿದ ಆಶೀರ್ವಾದರೂಪವಾದ ಶೇಷಾಕ್ಷತೆಯನ್ನು ಕೊಟ್ಟು ಮುಂದೆ ನಿಂತನು. ಅರ್ಜುನನು ನಿಮ್ಮಿಷ್ಟಾರ್ಥವೇನು ಕೇಳಿಕೊಳ್ಳಿ ಎಂದನು. ೭೧. ಮಣಿಕನಕಾದಿ ವಸ್ತುಗಳಾವುದನ್ನೂ ಅಪೇಕ್ಷಿಸುವುದಿಲ್ಲ ; ಅವು ಏನು ಮಹಾದೊಡ್ಡವು; ಸಂಪೂರ್ಣವಾದ ರುಚಿಕರವಾದ ಊಟ ನನಗೆ ಈಗ ಬೇಕು, ಶರೀರವು ಹಸಿವಿನಿಂದ ಜೊಮ್ಮುಹಿಡಿದು ಹೋಗಿದೆ; ನನಗೆ ಬೇಕಾದ ತೃಪ್ತಿಕರವಾದ ಊಟವನ್ನು ಕೊಡುವುದಾದರೆ ಕೊಡಿ ಎನ್ನಲು ಪಾರ್ಥನು ಇದೇನು ದೊಡ್ಡದು, ಕೊಟ್ಟಿದ್ದೇನೆ. ಯಾವುದು ನೀವು ಊಟ ಮಾಡುವ ಆಹಾರ ಎಂದು ಕೇಳಿದನು. ‘ಹೇಳುತ್ತೇನೆ’ ಎನ್ನುವಷ್ಟರಲ್ಲಿ ನರಕಾಂತಕನಾದ ಶ್ರೀಕೃಷ್ಣನು ಅಗ್ನಿದೇವನನ್ನು

ವ|| ಕಂಡು, ತಕ್ಷಣವೇ ಗುರುತಿಸಿ ಶರಣಾಗತ ಸಮುದ್ರನಾದ ಅರ್ಜುನನ ಸಮೀಪಕ್ಕೆ ಬಂದು ‘ಈ ಬಕವೇಷಿಯು ನಿನ್ನನ್ನು ಏನು ಬೇಡಿದನು, ನೀನು ಇವನಿಗೆ ಏನನ್ನು ಕೊಡುತ್ತೇನೆಂದೆ’ ಎಂದು ಕೇಳಿದನು. ೭೨. ‘ಬಡವನು ಹಸಿದು ಊಟವನ್ನು ಬೇಡಿದನು; ನಾನು ಕೊಡುತ್ತೇನೆಂದೆ, ಅದಲ್ಲದೆ ಇನ್ನು ಮತ್ತಾವ ಚಮತ್ಕಾರದ ಮಾತನ್ನೂ ಕಾಣೆ ಎಂದನು. ಕೃಷ್ಣನು “ನೀನು ಏನು ಮಾಡಿದೆ? ಇನ್ನು ಮೇಲೆ ಕೊಡುವ ಮಾತನ್ನೇ ಆಡಬೇಡ. ಇವನು ಊಟ ಮಾಡುವುದು ಖಾಂಡವವನವನ್ನು, ಈತನು ಅಗ್ನಿದೇವ; ಹಿಂದೆ ಇವನು ಹೀಗೆಯೇ ಸುಳ್ಳು ಹೇಳಿ ಆದಿಕಾಲದ ರಾಜರನ್ನೆಲ್ಲ ದೇವೇಂದ್ರನಲ್ಲಿ ಹೋರಾಡುವಂತೆ ಮಾಡಿದನು. ವ|| ಈತನು ಹೋತನ ಮುಖದ ಹುಲಿ (ಕಪಟಿ). ಬಿಳಿಯದನ್ನು ಕರಿಯದನ್ನಾಗಿ ಮಾಡುವವನು (ಮೋಸಗಾರ) ಈತನ ಮಾತು ಮಾತಲ್ಲ” ಎಂದನು.

ವ|| ಈತನಜಮುಖವ್ಯಾಘ್ರಂ ಶ್ವೇತ ಕೃಷ್ಣಕಾರಕನೀತನ ಮಾತು ಮಾತಲ್ಲವೆಂದೊಡಾ ಮಾತು ತನ್ನಂ ಮೂದಲಿಸಿದಂತಾಗೆ ವಿದ್ವಿಷ್ಟವಿದ್ರಾವಣನಿಂತೆಂದಂ-

ಚಂ|| ಎರೆದನ ಪೆಂಪುವೇೞ್ವೊಡನಲಂ ಪೊಣರ್ವಾತನ ಪೆಂಪುವೇೞ್ವೊಡಾ
ಸುರಪತಿ ಕೊಟ್ಟ ತಾಣದೆಡೆವೇೞ್ವೊಡಮಾ ಯಮುನಾನದೀ ತಟಾಂ|
ತರಮೊಸೆದಿತ್ತನಾನೆರೆಯೆ ಕೇಳ್ವನಿಳಾಧರನೀನದರ್ಕೆ ಮಾ
ತೆರಡಣಮಾಡಲಾಗದಿರು ಸೈಪಿನೊಳಲ್ಲದೆ ಕೂಡಿ ಬರ್ಕುಮೇ|| ೭೩

ಮ|| ದನುಜಾರೀ ದಿವಿಜೇಂದ್ರ ಶಾಶ್ವತಗುಣಾ ನಿನ್ನಳ್ಕದೇಂ ಬೇಡಿದಾ
ನನಲಂ ತೀರ್ಥ ಸವಿಪಮಂಬುನಿವಹ ವ್ಯಾಳೋಳ ಕಾಳಿಂದಿಯಾ|
ವನಮುಂ ಕೇಳ್ದುವು ಭೂತಮಯ್ದುಮಱಗುಂ ಕೊಟ್ಟಿರ್ದುದಾದಂತಱಂ
ದೆನಗಿಂ ಮಾಣ್ಬುದು ಸೂೞೆ ಖಾಂಡವಮನಾಂ ತಳ್ವಿಲ್ಲದಿಂದೂಡುವೆಂ|| ೭೪

ಉ|| ಒತ್ತಿ ತಱುಂಬಿ ನಿಂದ ರಿಪು ಭೂಜ ಸಮಾಜದ ಬೇರ್ಗಳಂ ನಭ
ಕ್ಕೆತ್ತದೆ ಬಂದು ತನ್ನ ಮವೊಕ್ಕೊಡೆ ಕಾಯದೆ ಚಾಗದೊಳ್ಪಿನ|
ಚ್ಚೊತ್ತದೆ ಮಾಣ್ದು ಬಾೞ್ವ ಪುೞುವಾನಸನೆಂಬನಜಾಂಡಮೆಂಬುದೊಂ
ದತ್ತಿಯ ಪೆಣ್ಣೊಳಿರ್ಪ ಪುೞುವಲ್ಲದೆ ಮಾನಸನೇ ಮುರಾಂತಕಾ|| ೭೫

ವ|| ಎಂದು ಮಱುಮಾತಿಂಗೆಡೆಯಿಲ್ಲದಂತಿರೆ ನುಡಿದ ಪಡೆಮೆಚ್ಚೆ ಗಂಡನ ಗಂಡವಾತುಮಂ ನನ್ನಿವಾತುಮಂ ಮುರಾಂತಕಂ ಮೆಚ್ಚಿ-

ಮ|| ಸಮಕಟ್ಟಿಂಗೊರೆಗಾರುಮಿಲ್ಲರಿಗ ಕೇಳ್ ನಿನ್ನೊಳ್ ಸಮಂ ಧಾತ್ರಿಯೊಳ್
ಹಿಮಕೃದ್ಭೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲ|
ಕ್ಕುಮೆ ಮತ್ತೊರ್ವನೊಳಾಗದೆಂತೆನೆ ಸಮಸ್ತೋರ್ವೀಧರಾಶೇಷ ಶೇ
ಷ ಮಹಾ ನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ|| ೭೬

ಚಂ|| ಮುನಿಯಿಸಿದಂ ಕರಂ ರಿಡಿಯನಪ್ಪುದು ಬೇೞ್ಪನ ಬೇೞ್ಪ ವಸ್ತು ಕಾಂ
ಚನಗಿರಿಯಿಂದಮಗ್ಗಳಮೆನಿಪ್ಪುದದಾದೊಡಮೇನೊ ಜೀವಮು|
ಳ್ಳಿನಮಿಱದರ್ಥಮುಳ್ಳಿನೆಗಮಿತ್ತು ನೆಗೞ್ತೆಯನಾಂಪುದೆಂಬ ಪೆಂ
ಪಿನ ಸಮಕಟ್ಟು ಕಣ್ಗೆ ದೊರೆಯಾರರಿಕೇಸರಿ ನಿನ್ನವೋಲ್ ಪೆಱಂ|| ೭೭

ಆ ಮಾತು ತನ್ನನ್ನು ಮೂದಲಿಸಿದ ಹಾಗಾಗಲು ವಿದ್ವಿಷ್ಟವಿದ್ರಾವಣನಾದ ಅರ್ಜುನನು ಹೀಗೆಂದನು. ೭೩. ಬೇಡಿದವನ ಹಿರಿಮೆಯನ್ನು ಹೇಳುವುದಾದರೆ ಅಗ್ನಿದೇವ, ಯುದ್ಧಮಾಡುವವನ ಹಿರಿಮೆಯನ್ನು ಹೇಳುವುದಾದರೆ ಸಾಕ್ಷಾತ್ ದೇವೇಂದ್ರ, ಕೊಟ್ಟ ಸ್ಥಳವನ್ನು ಹೇಳುವುದಾದರೆ ಪವಿತ್ರವಾದ ಯಮುನಾನದೀದಡಪ್ರದೇಶ; ಪ್ರೀತಿಯಿಂದ ಕೊಟ್ಟವನು ನಾನು; ಪ್ರಾರ್ಥನೆಯನ್ನು ಕೇಳುವಾಗ ಸಾಕ್ಷಿಯಾಗಿದ್ದವನು ಭೂಧರನಾದ ನೀನು; ಅದಕ್ಕೆ ಸ್ವಲ್ಪವೂ ಎರಡು ಮಾತನಾಡಕೂಡದು; ಇಂತಹ ಸಂದರ್ಭವು ಅದೃಷ್ಟದಿಂದಲ್ಲದೆ ಕೂಡಿಬರುತ್ತದೆಯೇ? ೭೪. ರಾಕ್ಷಸವೈರಿಯಾದ ಶ್ರೀಕೃಷ್ಣನೇ, ದೇವೇಂದ್ರನಂತೆ ಶಾಶ್ವತವಾದ ಗುಣಗಳುಳ್ಳವನೇ, ನಿನ್ನ ಹೆದರಿಕೆಯೇನು? ಬೇಡಿದವನು ಅಗ್ನಿ, ಪುಣ್ಯತೀರ್ಥಕ್ಕೆ ಸಮೀಪದಲ್ಲಿ, ಜಲರಾಶಿಯಿಂದ ಸಂಚರಿಸುತ್ತಿರುವ ಯಮುನಾನದಿಯ ಸಮೀಪವಿರುವ ಈ ಕಾಡುಗಳೂ ನಾನಾಡಿದ ಮಾತುಗಳನ್ನು ಕೇಳಿವೆ. ನಾನು ಮಾತು ಕೊಟ್ಟಿರುವುದನ್ನು ಪಂಚಭೂತಗಳೂ ತಿಳಿದಿವೆ. ಆದುದರಿಂದ ಅದನ್ನು ತಪ್ಪುವುದು ನನಗೆ ಕ್ರಮವೇ? ಖಾಂಡವವನವನ್ನು ನಾನು ತಡೆಯಿಲ್ಲದೆ ಉಣಿಸುತ್ತೇನೆ. ೭೫. ಮೇಲೆಬಿದ್ದು ಅಡ್ಡಗಟ್ಟಿ ನಿಂತ ಶತ್ರುಗಳೆಂಬ ಮರಗಳ ಸಮೂಹದ ಬೇರುಗಳನ್ನು ಮೂಲೋತ್ಪಾಟನೆ ಮಾಡದೆ, ಬಂದು ತನಗೆ ಶರಣಾಗತರಾದವರನ್ನು ರಕ್ಷಿಸದೆ, ತ್ಯಾಗದ ಒಳ್ಳೆಯ ಗುಣವನ್ನು ಮುದ್ರಿಸದೆ ತಪ್ಪಿ ಬಾಳುವ ಹುಳುವಿಗೆ ಸಮಾನವಾದ ಮನುಷ್ಯನು ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿರುವ ಹುಳುವಲ್ಲದೇ ಮನುಷ್ಯನೇ ಮುರಾಂತಕಾ? ವ|| ಎಂದು ಪ್ರತ್ಯುತ್ತರ ಕೊಡುವುದಕ್ಕೆ ಅವಕಾಶವಿಲ್ಲದಂತೆ ಮಾತನಾಡಿದ ಪಡೆಮೆಚ್ಚೆಗಂಡನಾದ ಅರ್ಜುನನ ಪರಾಕ್ರಮದ ಮಾತನ್ನೂ ಸತ್ಯವಾಕ್ಕನ್ನೂ ಮುರಾಂತಕನು ಮೆಚ್ಚಿದನು. ವ|| ಎಲೈ ಅರಿಗನೇ ಕೇಳು, ಈ ಭೂಮಿಯಲ್ಲಿ ನಿನ್ನ ಹೋಲಿಕೆಗೂ ಸಮಾನತೆಗೂ ಬರುವವರು ಯಾರೂ ಇಲ್ಲ ; ಹಿಮವತ್ಪರ್ವತದಂತಿರುವ ನಿನ್ನ ಗುಣರಾಶಿಯನ್ನು ಮತ್ತೊಬ್ಬನಲ್ಲಿ ಕಾಣಲಾಗುವುದಿಲ್ಲ ಸಮಸ್ತ ಭೂಮಂಡಲವನ್ನು ಧರಿಸಿರುವ ಆದಿಶೇಷನೆಂಬ ಮಹಾಸರ್ಪದ ಹೆಡೆಯಲ್ಲಿರುವ ರತ್ನಕಾಂತಿಯನ್ನು ಮಿಂಚುಹುಳುವಿನಲ್ಲಿ ಕಾಣಬಹುದೇ? ೭೭. ನಿನ್ನನ್ನು ರೇಗಿಸಿದವನು ವಿಶೇಷ ದೊಡ್ಡವನಹುದು. ಬೇಡುವವನು ಬೇಡಿದ ವಸ್ತು

ವ|| ಎಂದು ತನಗೆ ಕೊಟ್ಟ ಕೋಡಿಂಗೊಡಂಬಟ್ಟ ದಿತಿಜಕುಲದಾವಾನಲನುಮನರಾತಿ ಕಾಲಾನಲನುಮನನಲನಿಷ್ಟಾರ್ಥಸಿದ್ಧಿಯಕ್ಕು ಮೆಂದು ಪರಸಿ ಮನಪವನವೇಗದಿಂ ಪಾಲ್ಗಡಲನೆಯ್ದಿ ತನ್ನ ಬಯ್ತಿಟ್ಟ ದಿವ್ಯ ಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯ ರಥಮುಮಂ ದಚಿ ಗಂಡಸ್ಥಮಪ್ಪ ಗಾಂಡೀವಮೆಂಬ ಬಿಲ್ಲುಮಂ ದಿವ್ಯಶರಂಗಳೊಳ್ ತೆಕ್ಕನೆ ತೀವಿದ ತವದೊಣೆಗಳುಮಂ ತಂದೆನ್ನ ಪ್ರತಿಜ್ಞೆಯಂ ತೀರ್ಚುವೊಡಮಿಂದ್ರನಂ ಗೆಲ್ವೊಡಮಿವನಮೋಘಂ ಕೆಯ್ಕೊಳಲ್ವೇೞ್ಕುಮೆಂದೊಡತಿರಥಮಥನನಗ್ನಿದೇವಂಗೆ ಪೊಡವಟ್ಟು ಕೆಯ್ಕೊಂಡು ಬೃಹಂದಳನೆಂಬ ಸಾರಥಿವೆರಸು ರಥಮನೇಱಲೊಡಂ-

ಉ|| ಪಾವಕನೞ ಖಾಂಡವಮನುಂಡಪನರ್ಜುನನೂಡಿದಷ್ಟನೈ
ರಾವತವಾಹನಂ ನೆದು ಸಾಧನ ಸಂಯುತನಾಂಪನಲ್ಲಿ ನಾ|
ನಾ ವಿಧ ಯುದ್ಧಮುಂಟೆನುತೆ ಶೈಬ್ಯ ಬಳಾಹಕ ಮೇಘವರ್ಣ ಸು
ಗ್ರೀವ ಹಯಂಗಳಿಂದೆಸೆವುದಂ ರಥಮಂ ಹರಿ ತಾನುಮೇಱದಂ|| ೭೮

ವ|| ಅಂತು ದಾರುಕಂ ರಥಮಂ ಚೋದಿಸಲೊಡಂ-

ಕಂ|| ಚೋದಿಸುವುದುಮಿರ್ವರ ರಥ
ಚೋದಕರವರೆರಡು ರಥದ ಗಾಲಿಯ ಕೋಳಿಂ|
ದಾದ ರಜಪಟಲಂ ಕವಿ
ದಾದಮೆ ತೀವಿದುದು ದಿವಿಜವಧುವಿರ ಕಣ್ಣೊಳ್|| ೭೯

ವ|| ಅಂತೆಯ್ದಿ ಯಮುನಾನದಿಯ ತೆಂಕಣ ದೆಸೆಯೊಳ್ ನೂಱು ಯೋಜನದಗಲದೊಳಮನಿತೆ ನೀಳದೊಳಂ ನೆದು-

ಮ|| ಕಕುಭಾಶೋಕ ಕದಂಬ ಲುಂಗ ಲವಲೀ ಭೂಜಾರ್ಜುನಾನೋಕಹ
ಪ್ರಕರಂ ಪುಷ್ಟಿತ ಹೇಮಪಂಕಜ ರಜಸ್ಸಂಸಕ್ತ ಭೃಂಗಾಂಗನಾ|
ನಿಕರಂ ಸಾರಸ ಹಂಸ ಕೋಕಿಳ ಕುಳಧ್ವಾನೋತ್ಕರಂ ಚೆಲ್ವನಾ
ಯ್ತು ಕರಂ ಸಕ್ತನಿಳಿಂಪ ದಂಪತಿಗಳಿಂದಾ ನಂದನಂ ನಂದನಂ|| ೮೦

ವ|| ಎನೆ ಸೊಗಯಿಸುವ ಖಾಂಡವವನಮಂ ವನರುಹನಾಭಂ ವಿಕ್ರಮಾರ್ಜುನಂಗೆ ತೊೞಲ್ದು ತೋಱ-

ಮೇರುಪರ್ವತಕ್ಕಿಂತಲೂ ಅತಿಶಯವಾದುದು. ಆದರೇನು? ಪ್ರಾಣವಿರುವವರೆಗೂ ಶೌರ್ಯಪ್ರದರ್ಶನ ಮಾಡಿ ಧನವಿರುವವರೆಗೂ ದಾನಮಾಡಿ ಪ್ರಸಿದ್ಧಿಯನ್ನು ಪಡೆಯಬೇಕೆಂಬ ಹಿರಿಯ ಗುರಿ ನಿನ್ನ ದೃಷ್ಟಿಗಿದೆ. ನಿನಗೆ ಸಮಾನರಾದವರು ಯಾರಿದ್ದಾರೆ? ವ|| ಎಂದು ತನಗೆ ಕೊಟ್ಟ ದಾನಕ್ಕೆ ಒಡಂಬಟ್ಟು ರಾಕ್ಷಸರ ಕುಲಕ್ಕೆ ಕಾಡುಗಿಚ್ಚಿನಂತಿರುವ ಕೃಷ್ಣನನ್ನೂ ಶತ್ರುಗಳಿಗೆ ಪ್ರಳಯಾಗ್ನಿಯಂತಿರುವ ಅರ್ಜುನನನ್ನೂ ಅಗ್ನಿಯು ‘ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿ’ ಎಂದು ಹರಸಿ ಮನೋವಾಯುವೇಗದಿಂದ ಕ್ಷೀರಸಮುದ್ರವನ್ನು ಸೇರಿ ಅಲ್ಲಿ ತಾನು ಬಚ್ಚಿಟ್ಟಿದ್ದ ದೈವಾಂಶಸಂಭೂತಗಳಾದ ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥವನ್ನೂ ದಚಿಯ ಕಪೋಲಪ್ರದೇಶದಿಂದ ರಚಿತವಾದ ಗಾಂಡೀವವೆಂಬ ಬಿಲ್ಲನ್ನೂ ದಿವ್ಯವಾದ ಬಾಣಗಳಿಂದ ಪೂರ್ಣವಾಗಿ ತುಂಬಿದ ಅಕ್ಷಯತೂಣೀರಗಳನ್ನೂ (ಬತ್ತಳಿಕೆಗಳನ್ನೂ) ತಂದು ತನ್ನ ಪ್ರತಿಜ್ಞೆಯನ್ನು ತೀರಿಸುವುದಕ್ಕೂ ಇಂದ್ರನನ್ನು ಗೆಲ್ಲುವುದಕ್ಕೂ ಅಮೋಘವಾದ ಇವುಗಳನ್ನು ಸ್ವೀಕರಿಸಬೇಕು ಎಂದು ಹೇಳಲು ಅತಿರಥಮಥನನಾದ ಅರ್ಜುನನು ಅಗ್ನಿದೇವನಿಗೆ ನಮಸ್ಕಾರ ಮಾಡಿ ಅವನ್ನು ಸ್ವೀಕರಿಸಿ ಬೃಹಂದಳನೆಂಬ ಸಾರಥಿಯೊಡನೆ ರಥವನ್ನು ಹತ್ತಿದನು. ೭೮. ಅಗ್ನಿಯು ಖಾಂಡವವನ್ನು ಸುಟ್ಟು ಉಣ್ಣುತ್ತಾನೆ, ಅರ್ಜುನನು ಉಣಿಸುತ್ತಾನೆ. ಐರಾವತವಾಹನನಾದ ಇಂದ್ರನು ಸೈನ್ಯಸಮೇತನಾಗಿ ಪ್ರತಿಭಟಿಸುತ್ತಾನೆ. ಇಲ್ಲಿ ನಾನಾವಿಧವಾದ ಯುದ್ಧವುಂಟು ಎನ್ನುತ್ತ ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವವೆಂಬ ಕುದುರೆಗಳಿಂದ ಪ್ರಕಾಶಮಾನವಾದ ರಥವನ್ನು ಕೃಷ್ಣನು ತಾನೂ ಹತ್ತಿದನು. ವ|| ದಾರುಕನು ರಥವನ್ನು ನಡೆಸಿದನು. ೭೯. ಸಾರಥಿಗಳು ಚೋದಿಸಲು ಎರಡು ರಥದ ಗಾಲಿಗಳ ಆಕ್ರಮಣದಿಂದಾದ ಧೂಳಿನ ಸಮೂಹವು ಮುತ್ತಿ ಮುಸುಕಿ ದೇವಸ್ತ್ರೀಯರ ಕಣ್ಣಲ್ಲಿ ವಿಶೇಷವಾಗಿ ತುಂಬಿತು. ವ|| ಯಮುನಾನದಿಯ ದಕ್ಷಿಣದಿಕ್ಕಿನಲ್ಲಿ ನೂರು ಯೋಜನದಗಲವೂ ಅಷ್ಟೇ ಉದ್ದವೂ ಆಗಿತ್ತು ಆ ಖಾಂಡವವನ.

೮೦. ಕೆಂಪುಮತ್ತಿ, ಅಶೋಕ, ಕದಂಬ, ಮಾತುಲುಂಗ, ಅರನೆಲ್ಲಿ, ಬಿಳಿಯಅತ್ತಿ ಮೊದಲಾದ ಮರಗಳ ಸಮೂಹಗಳಿಂದಲೂ ಪುಷ್ಪಭರಿತವಾದ ಹೊಂದಾವರೆಯ ಧೂಳಿನಲ್ಲಿ ಹೊರಳಾಡಿರುವ ಹೆಣ್ಣುದುಂಬಿಗಳ ಗುಂಪುಗಳಿಂದಲೂ ಬಕ, ಹಂಸ, ಕೋಗಿಲೆ ಮೊದಲಾದ ಪಕ್ಷಿಸಮೂಹದ ಶಬ್ದರಾಶಿಯಿಂದಲೂ ಆನಂದವನ್ನುಂಟುಮಾಡುವ ಆ ಖಾಂಡವವನವು ಪರಸ್ಪರ ಆಸಕ್ತರಾದ ದೇವದಂಪತಿಗಳಿಂದಲೂ ಸುಂದರವಾಗಿ ಕಂಡಿತು. ವ|| ಖಾಂಡವವನವನ್ನು ಶ್ರೀಕೃಷ್ಣನು ವಿಕ್ರಮಾರ್ಜುನನಿಗೆ ಸುತ್ತಾಡಿ ತೋರಿಸಿದನು.

ಮ|| ಅಲರಂ ನೋಯಿಸದೊಯ್ಯನೊಯ್ಯನಳಿಗಳ್ ಬಂಡುಣ್ಬುವಾಟಂದು ಬಂ
ದಲೆಯಲ್ಕಣ್ಮದು ಗಾಳಿ ಸೂರ್ಯಕಿರಣಾನೀಕಕ್ಕಮೆಂದಪ್ಪೊಡಂ|
ಸಲವಿಲ್ಲುದ್ಧತ ಸಿದ್ಧ ಖೇಚರರೆ ತಾಮಾಳ್ವೇರಿಯಾಗಿಂತು ನಿ
ಚ್ಚಲುಮೋರಂತಿರೆ ಕಾವರೀ ದೊರೆತು ಕಾಪೀ ನಂದನಕ್ಕಿಂದ್ರನಾ|| ೮೧

ಉ|| ಒಮ್ಮೆ ತೊೞಲ್ದು ನೋಡಿ ಬನಮಂ ಮಘವಂ ಶಚಿ ಪೂತ ಚೂತಮಂ
ನೆರ್ಮಿದಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ|
ಸೋರ್ಮುಡಿಯೊಳ್ ತಗುಳ್ಚಿದೊಡೆ ಸೂೞನೆ ಬಾರಿಸಿದಂ ದಲೆಂದೊಡಿಂ
ಕೂರ್ಮೆಯ ಮಾತು ಮೆಚ್ಚುವನಿತರ್ಕೆ ಬಳಾರಿ ಮುರಾಸುರಾರಿಯೇಂ|| ೮೨

ಕಂ|| ಇಂತಪ್ಪ ಬನಮನಿದನಿ
ನ್ನೆಂತನಲನನೂಡಲೆಂದು ಪೂಣ್ದಯ್ ಮುಂ ಪೂ|
ಣ್ದಂತೂಡು ಪೂಡು ಶಿತಶರ
ಸಂತತಿಯಂ ಬಿಲ್ಲೊಳೇಕೆ ನೀಂ ತಡೆದಿರ್ಪಯ್|| ೮೩

ಪರಮಾಣುವನಿತು ಬನದೊಳ್
ಚರಾಚರಂ ಪೋಗೆ ತಣಿಯನನಲನದರ್ಕಾಂ|
ನೆರಮಪ್ಪೆನುಗ್ರ ಕಿನ್ನರ
ಸುರ ದನುಜೋರಗರ ಕದನಮೇಂ ನಿನಗರಿದೇ|| ೮೪

ವ|| ಎಂಬುದುಮಂತೆ ಗೆಯ್ವೆನೆನ್ನ ಸಾಹಸಮಂ ನೋಡಿಮೆಂದು ವಿಕ್ರಾಂತ ತುಂಗನುತ್ತುಂಗ ಭುಜಪರಿಘದೆರಡು ದೆಸೆಯೊಳಂ ತವದೊಣೆಗಳಂ ಬಿಗಿದು ಗಾಂಡೀವಮನೇಱಸಿ ನೀವಿ ಜೇವೊಡೆದು ದಿವ್ಯಾಸ್ತ್ರಂಗಳಂ ಪಿಡಿದು ಕೆಯ್ತೀವಿಕೊಂಡಗ್ನಿದೇವನಂ ನೋಡಿ-

ಉ|| ಓಡುಗೆ ನಿಮ್ಮ ಮೆಯ್ಯ ಪಸಿವಾಂತ ವಿರೋಗಳೆನ್ನ ಕೆಯ್ಯೊಳ
ೞiಡುಗೆ ಕೊಳ್ಳಿಮಣ್ಣಿಮೆನೆ ಕೇಳ್ದನಲಂ ಪರಸುತ್ತಮಾ ಲಯ|
ಕ್ರೀಡೆಯೊಳೀ ಚರಾಚರಮುಮಂ ಸುಡುವಂದಿನ ಮೆಯ್ಗಮಗ್ಗಳಂ
ಮಾಡಿ ತಗುಳ್ದು ನೀಳ್ದು ಬಳೆದರ್ವಿಸೆ ಪರ್ವಿದನಾ ವನಾಂತಮಂ|| ೮೫

೮೧. ಇಲ್ಲಿ ದುಂಬಿಗಳು ಹೂವನ್ನು ನೋಯಿಸದೆ ಮಕರಂದಪಾನಮಾಡುತ್ತವೆ. ಗಾಳಿಯು ನುಗ್ಗಿ ವೇಗವಾಗಿ ಬೀಸುವುದಿಲ್ಲ, ಸೂರ್ಯನ ಕಿರಣಸಮೂಹಗಳೂ ಎಂದೂ ಇಲ್ಲಿಗೆ ಪ್ರವೇಶಿಸುವುದಿಲ್ಲ. ಗರ್ವಿಷ್ಠರಾದ ಸಿದ್ಧಖೇಚರರೇ ರಕ್ಷಕರಾಗಿ ಇದನ್ನು ನಿತ್ಯವೂ ಒಂದೇ ಕ್ರಮದಿಂದ ಕಾಯುತ್ತಿದ್ದಾರೆ. ಇಂದ್ರನ ಖಾಂಡವವನಕ್ಕೆ ರಕ್ಷಣೆ ಈ ರೀತಿಯಾಗಿ ಬಲಿಷ್ಠವಾಗಿದೆ. ೮೨. ಒಂದು ಸಲ ಇಂದ್ರನು ಶಚೀದೇವಿಯೊಡಗೂಡಿ ವನವನ್ನು ಸುತ್ತಾಡಿ ಬರುತ್ತಿದ್ದಾಗ ಹೂವಿನಿಂದ ಕೂಡಿದ ಮಾವಿನ ಮರವನ್ನು ಆಶ್ರಯಿಸಿದ್ದ ಅಶೋಕ ಬಳ್ಳಿಯನ್ನು ನೋಡಿ ಅದರ ಚಿಗುರನ್ನು ಶಚಿಯು ಕೊಯ್ದು ಪ್ರೀತಿಯಿಂದ ತನ್ನ ದೀರ್ಘವಾದ ತುರುಬಿನಲ್ಲಿ ಮುಡಿದುಕೊಳ್ಳಲು ಇಂದ್ರನು ಸೂಳ್ ಎಂದು ಶಬ್ದಮಾಡಿ ತಡೆದನು ಎಂಬುದು ನಿಜ ಎಂದು ಹೇಳುವಾಗ ಆ ವನದ ವಿಷಯದಲ್ಲಿ ಅವನ ಅಭಿಮಾನ ಎಷ್ಟಿರಬೇಕು? ಪ್ರೀತಿಯ ಮಾತನ್ನು ಕೇಳಿ ಮೆಚ್ಚುವುದಕ್ಕೆ ಇಂದ್ರನು ಕೃಷ್ಣನೆಂದು ತಿಳಿದೆಯಾ? ೮೩. ಹೀಗಿರುವ ಈ ವನವನ್ನು ಅಗ್ನಿ ಉಣಲೆಂದು ಹೇಗೆ ಪ್ರತಿಜ್ಞೆ ಮಾಡಿದೆ? ಮೊದಲು ಪ್ರತಿಜ್ಞೆ ಮಾಡಿದ ಹಾಗೆ ಉಣಿಸು, ಏಕೆ ತಡಮಾಡುತ್ತೀಯೆ? ಬಿಲ್ಲಿನಲ್ಲಿ ಹರಿತವಾದ ಬಾಣಸಮೂಹವನ್ನು ಸಂಧಾನಮಾಡು. ೮೪. ಈ ವನದಲ್ಲಿ ಪರಮಾಣುವಷ್ಟು ಚರಾಚರ ಪ್ರಾಣಿಗಳು ಹೊರಗೆ ಹೋದರೂ ಅಗ್ನಿಯು ತೃಪ್ತಿಪಡಲಾರ. ಅದಕ್ಕೆ ನಾನು ಸಹಾಯಕನಾಗಿದ್ದೇನೆ. ಭಯಂಕರರಾದ ಕಿನ್ನರರು, ದೇವತೆಗಳು, ರಾಕ್ಷಸರು, ನಾಗರು ಇವರೊಡನೆ ಯುದ್ಧ ಮಾಡುವುದು ನಿನಗೆ ಅಸಾಧ್ಯವೇ? ವ|| ಅರ್ಜುನನು ಹಾಗೆಯೇ ಮಾಡುತ್ತೇನೆಂದನು. ನನ್ನ ಪರಾಕ್ರಮವನ್ನು ನೋಡಿ ಎಂದು ಉತ್ತಮಪರಾಕ್ರಮಿಯಾದ ಅರ್ಜುನನು ತನ್ನ ಎತ್ತರವಾದ ಗದೆಯಂತಿರುವ ಎರಡು ಭುಜಗಳಲ್ಲಿಯೂ ಅಕ್ಷಯತೂಣೀರಗಳನ್ನು ಬಿಗಿದುಕೊಂಡು ಗಾಂಡೀವವೆಂಬ ಬಿಲ್ಲಿಗೆ ಹೆದೆಯೇರಿಸಿ ನೀವಿ ಜಡಿದು ಶಬ್ದಮಾಡಿನೋಡಿ ದಿವ್ಯಾಸ್ತ್ರಗಳನ್ನು ಕಯ್ಯಲ್ಲಿ ಹಿಡಿದು ಅಗ್ನಿದೇವನನ್ನು ನೋಡಿ- ೮೫. ನಿಮ್ಮ ಶರೀರದ ಹಸಿವು ಓಡಲಿ; ಪ್ರತಿಭಟಿಸಿದ ನಿಮ್ಮ ಶತ್ರುಗಳು ನಮ್ಮ ಕಯ್ಯಲ್ಲಿ ನಾಶವಾಗಲಿ; ತೆಗೆದುಕೊಳ್ಳಿ, ಉಣ್ಣಿ ಎನ್ನಲು ಅವರನ್ನು ಹರಸುತ್ತ ಪ್ರಳಯಕಾಲದಲ್ಲಿ ಈ ಚರಾಚರವನ್ನೆಲ್ಲ ಸುಡುವ ಅಂದಿನ ಶರೀರವನ್ನೂ

ಮ|| ಫಳ ಕರ್ಪೂರ ಲವಂಗ ಲುಂಗ ಲವಳೀ ಹಿಂತಾಳ ತಾಳೀ ತಮಾ
ಳ ಳತಾ ಸುಂದರ ನಂದನಕ್ಕಳುರೆ ಮುಂ ತನ್ನರ್ಚಿಗಳ್ ಬಂದು ಮೊ|
ಕ್ಕಳಮೆತ್ತಂ ಸುರಿಯುತ್ತುಮಿರ್ಪ ರಸಮಂ ಮುಂ ಪೀರ್ದುಕೊಂಡಂ ಮನಂ
ಗೊಳೆ ಸಪ್ತಾರ್ಚಿ ಪೊದಳ್ದು ನೀಳ್ದೊಸಗೆಯಿಂದಾಪೋಶನಂಗೊಳ್ವವೋಳ್|| ೮೬

ಕಂ|| ನನೆಕೊನೆಯ ತಳಿರ ಪೂವಿನ
ಬನಮನಿತುಂ ಶಿಖಿಗಳಳುರೆ ಬೆಂಕೆಯ ಪೊಯ್ದು|
ರ್ವಿನೊಳೆ ಕೊರಗಿರ್ದ ಲತೆಗಳ
ಕೊನೆಗೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ|| ೮೭

ವ|| ಆಗಳಾ ಬನಮನಿಂದ್ರನ ಬೆಸದೊಳ್ ಕಾವ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಬಲಮನಿತುಮೊಂದಾಗಿ ವಿಕ್ರಮಾರ್ಜುನನೊಳ್ ತಾಗೆ-

ಕಂ|| ಕೊಂಡಪುದುರಿ ಬನಮನದಂ
ಕಂಡೆಂತಿರಲಕ್ಕುಮೆಂದು ತಾಗಿದ ನೆಗೞ್ದೊ|
ಳ್ಗಂಡರ ಗಂಡೋಡುವಿನಂ
ಕೊಂಡುವು ಗಾಂಡೀವಮುಕ್ತ ಬಾಣಗಣಂಗಳ್|| ೮೮

ವ|| ಅಂತು ಕಾದೆ ವಿದ್ವಿಷ್ಟವಿದ್ರಾವಣನ ಮೊನೆಯಂಬಿನಂಬೇಱಂಗಳ್ಕಿ ಹತವಿಹೆತ ಕೋಳಾಹಳರಾಗಿ ಸಿದ್ಧರಸಿದ್ಧರಾಗೆಯುಂ ಕಿನ್ನರರಿನ್ನಾರ ಮಯಂ ಪುಗುವಮೆನೆಯುಂ ಕಿ ಪುರುಷರ್ ಕಾಪುರುಷರಂತೆ ಬಾಯಂ ಬಿಡೆಯುಂ ಗಂಧರ್ವರ್ ಗರ್ವಮನುೞ ದೊಂದೊರ್ವರುಂ ಮಿಗೆಯೋಡೆಯುಂ ವಿದ್ಯಾಧರರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡೆ-

ಕಂ|| ನಾಗರ ಖಂಡಂಗಳನಾ
ನಾಗರ ಖಂಡದೊಳೆ ತೊಡರೆ ನರನಿಸುವುದುಮಾ|
ನಾಗರ ಖಂಡಂಗಳುಮಂ
ನಾಗರ ಖಂಡಮುಮನಳುರ್ದು ಕೊಂಡಂ ದಹನಂ|| ೮೯

ವಿರಹಿಗಳ ಸುಯ್ಯ ಬೆಂಕೆಯೊ
ಳಿರದೊಣಗಿದುವಕ್ಕುವಿಗಳೆನಲುರಿವುರಿಯಿಂ|
ಕರಿಮುರಿಕನಾದುವುನ್ಮದ
ಪರಭೃತ ಷಟ್ಚರಣ ರಾಜಕೀರಕುಲಂಗಳ್|| ೯೦

ಮೀರಿದ ಆಕಾರವನ್ನು ಧರಿಸಿ ನೀಳವಾಗಿ ಬೆಳೆದು ಸುಡುವುದಕ್ಕಾಗಿ ಆ ವನದ ಒಳಭಾಗವನ್ನೆಲ್ಲ ಆಕ್ರಮಿಸಿದನು. ೮೬. ಫಲಿಸಿರುವ ಕರ್ಪೂರ, ಲವಂಗ, ಮಾದಲ, ಅರನೆಲ್ಲಿ, ಹಿಂತಾಳ, ತಾಳೆ, ಹೊಂಗೆಯಬಳ್ಳಿ ಇವುಗಳಿಂದ ಸುಂದರವಾಗಿದ್ದ ವನವನ್ನು ಮೊದಲೇ ತನ್ನ ಉರಿಯ ಜ್ವಾಲೆಗಳು ಹರಡಿರಲು ಮುಂದುವರಿದು ದೀರ್ಘವಾಗಿ ಬೆಳೆದು ಸಂತೋಷದಿಂದ ಆಪೋಶನವನ್ನು ತೆಗೆದುಕೊಳ್ಳುವ ಹಾಗೆ ವಿಶೇಷವಾಗಿ ಸುರಿಯುತ್ತಿರುವ ಮರದ ರಸವನ್ನು ಅಗ್ನಿಯು ತೃಪ್ತಿಯಾಗುವಷ್ಟು ಹೀರಿದನು. ೮೭. ಮೊಗ್ಗಿನ, ಟಿಸಿಲಿನ, ಚಿಗುರಿನ, ಹೂವಿನ ಆ ವನವನ್ನೆಲ್ಲ ಬೆಂಕಿಯ ಜ್ವಾಲೆಗಳು ವ್ಯಾಪಿಸಲು ಬೆಂಕಿಯು ಹೊಡೆದ ರಭಸದಲ್ಲಿಯೇ ಬಾಡಿದ ಬಳ್ಳಿಗಳ ಕವಲು ಕವಲುಗಳನ್ನೇ ಅಗ್ನಿಯು ಸುಟ್ಟು ತುತ್ತತುದಿಯನ್ನೂ ಆಕ್ರಮಿಸಿದನು. ವ|| ಆಗ ಅವನನ್ನು ಇಂದ್ರನ ಆಜ್ಞೆಯಂತೆ ರಕ್ಷಿಸುತ್ತಿದ್ದ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಸೈನ್ಯವಷ್ಟೂ ಒಂದಾಗಿ ವಿಕ್ರಮಾರ್ಜುನನನ್ನು ಬಂದು ತಾಗಿದುವು.

೮೮. ಬೆಂಕಿಯು ವನವನ್ನು ಸುಡುತ್ತಿದೆ. ಅದನ್ನು ನೋಡಿಯೂ ಹೇಗೆ ಸುಮ್ಮನಿರುವುದು ಎಂದು ಪ್ರತಿಭಟಿಸಿದ ಪ್ರಸಿದ್ಧವಾದ ಶೂರರ ಪೌರುಷವು ಪಲಾಯನ ಮಾಡುವ ಹಾಗೆ ಗಾಂಡೀವದಿಂದ ಬಿಡಲ್ಪಟ್ಟ ಬಾಣಸಮೂಹಗಳು ಅವರನ್ನು ಆಹುತಿಗೊಂಡವು. ವ|| ಹಾಗೆ ಕಾದಲು ವಿದ್ರಾವಣನ ಮೊನಚಾದ ಬಾಣದ ಬಿಲ್ಲಿನ ಯುದ್ಧದ ನಾನಾ ವಿಧವಾದ ಹೊಡೆತ ಮರುಹೊಡೆತಗಳ ಕೋಲಾಹಲದಲ್ಲಿ ಸಿದ್ಧರು ಸಿದ್ಧತೆಯಿಲ್ಲದವರಾದರು, ಕಿನ್ನರರು ಇನ್ನು ಯಾರ ಮರೆಯನ್ನು ಹೋಗೋಣವೆಂದು ಯೋಚಿಸಿದರು, ಕಿಂಪುರುಷರು ಅಲ್ಪಮನುಷ್ಯರಂತೆ ಹಾಹಾಕಾರಪಟ್ಟರು. ಗಂಧರ್ವರು ತಮ್ಮ ಆತ್ಮಗರ್ವವನ್ನು ಬಿಟ್ಟು ಒಬ್ಬೊಬ್ಬರನ್ನೂ ಮೀರಿಸಿ ಓಡಿದರು. ವಿದ್ಯಾಧರರು ತಿರಸ್ಕೃತರಾದರು. ಪನ್ನಗರು ಪರಾಕ್ರಮದಿಂದ ಬಂದು ಎದುರಿಸಿದರು. ೮೯. ಅಲ್ಲಿ ಬೆಳೆದ ಹಸಿಯ ಶುಂಠಿಯ ಚೂರುಗಳೂ ಆ ಸರ್ಪಗಳ ಚೂರುಗಳಲ್ಲಿಯೇ ಸಿಕ್ಕಿಕೊಳ್ಳುವಂತೆ ಅರ್ಜುನನು ಬಾಣಪ್ರಯೋಗ ಮಾಡಲು ಆ ಹಸಿರು ಶುಂಠಿಯ ಚೂರುಗಳನ್ನೂ ಸರ್ಪಗಳ ಚೂರುಗಳನ್ನೂ ಅಗ್ನಿಯು ವ್ಯಾಪಿಸಿ ಸುಟ್ಟನು. ೯೦. ಮದಿಸಿದ ಕೋಗಿಲೆ ದುಂಬಿ ಮತ್ತು ಅರಗಿಳಿಗಳ ಸಮೂಹಗಳು

ಉರಿ ಕೊಳೆ ದೆಸೆಗಾಣದೆ ದೆಸೆ
ವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂ|
ಬೆರಸೊಳ ನೆಗೆದುದಾ ವನ
ಕರಿ ಶರಭ ಕಿಶೋರ ಕಂಠಗರ್ಜನೆ ಬನದೊಳ್|| ೯೧

ಸಂಗತ ಧೂಮಾವಳಿಯನಿ
ಭಂಗಳೆ ಗೆತ್ತೊಳಱ ಪಾಯ್ದು ಪೊಗೆ ಪುಗೆ ಕಣ್ಣಂ|
ಸಿಂಗಂಗಳಳುರೆ ಗರ್ಜಿಸಿ
ಲಂಗಿಸಿ ಪುಡಪುಡನೆ ಪುೞ ಸತ್ತುವು ಪಲವುಂ|| ೯೨

ವ|| ಮತ್ತಮಲ್ಲಿ ಕೆಲವು ಲತಾಗೃಹಂಗಳೊಳಂ ಧಾರಾಗೃಹಂಗಳೊಳಂ-

ಕಂ|| ಒಡನಳುರೆ ಕಿರ್ಚು ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ|
ದೊಡಗಳೆದರೋಪರೋಪರೊ
ಳೊಡಸಾಯಲ್ ಪಡೆದರಿನ್ನವುಂ ಸಯ್ಪೊಳವೇ|| ೯೩

ವ|| ಅಂತು ಖಾಂಡವವನಮೆಲ್ಲಮನನಲಂ ಪ್ರಳಯಕಾಳಾನಳನಂತಳುರ್ದು ಕೊಳೆ ಬಳಸಿ ಬಂದು ಕಾವ ನಾರಾಯಣನ ಸುದರ್ಶನಮೆಂಬ ಚಕ್ರದ ಕೋಳುಮಂ ವಿಕ್ರಮಾರ್ಜುನನ ದಿವ್ಯಾಸ್ತ್ರಂಗಳ ಕೋಳುಮನಗ್ನಿದೇವನ ಶಿಖಾಕಳಾಪದ ಕೋಳುಮನೆಂತಾನುಂ ಬಂಚಿಸಿ ಬಲೆ ಪಱದ ಕೋಕನಂತೊರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು-

ಮಲ್ಲಿಕಾಮಾಲೆ|| ದೇವ ಬಿನ್ನಪಮಿಂದು ಖಾಂಡವಮಂ ಕೃಶಾನು ತಗುಳ್ದು ನಾ
ನಾ ವಿಧಂ ಸುಡೆ ನೋಡಲಾರದೆ ತಳ್ತ ದೇವರ ಕಾಪಿನಾಳ್|
ದೇವ ಕಿನ್ನರ ಪನ್ನಗಾವಳಿ ಮೊಟ್ಟನಪ್ಪಿನಮೆಚ್ಚು ಕೊಂ
ದೇವರೆಂದಱದಿರ್ದನೊರ್ವನಗುರ್ವು ಪರ್ವಿರೆ ದೇವರಂ|| ೯೪

ಕಂ|| ಎರಡು ರಥಮೊಳವು ನೋಟ
ಕ್ಕೆರಡಳವನೊಂದು ರಥಮೆ ತೋಟಿಗೆ ಪಲವಾ|
ಗಿರೆ ಪರಿದು ಕಣ್ಣೊಳಿನ್ನುಂ
ತಿರಿದಪುದುರಿದಪುದು ನಮ್ಮ ಬನಮೆನಿತನಿತುಂ|| ೯೫

ತಮ್ಮನ್ನು ಅಗಲಿದ ಪ್ರೇಮಿಗಳ ಬಿಸಿಯುಸಿರಿನ ಬೆಂಕಿಯಲ್ಲಿ ಒಣಗಿದುವೋ ಎನ್ನುವ ಹಾಗೆ ಉರಿಯುವ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಿಮುರುಕಾದುವು. ೯೧. ಬೆಂಕಿಯು ಆಕ್ರಮಿಸಲು ಏನುಮಾಡಬೇಕೆಂದು ತೋಚದೆ ದಿಕ್ಕುದಿಕ್ಕಿಗೆ ಓಡಿ ಮರಗಳನ್ನು ಕೆಳಗುರುಳಿಸಿ ಭಯದಿಂದ ಕೂಗಿಕೊಳ್ಳಲು ಕಾಡಾನೆಯ ಶರಭಗಳ ಮರಿಗಳ ಕೊರಳ ಗರ್ಜನೆ ಆ ಕಾಡಿನಲ್ಲಿ ಚಿಮ್ಮಿ ಹಾರಿದುವು. ೯೨. ಒಟ್ಟಾದ ಹೊಗೆಯ ಸಮೂಹವನ್ನು ಆನೆಯೆಂದು ಭ್ರಾಂತಿಸಿ ಸಿಂಹಗಳು ಕೂಗಿಕೊಂಡವು. ಮೇಲೆ ಹಾಯ್ದು ಹೊಗೆಯು ಕಣ್ಣನ್ನು ವ್ಯಾಪಿಸಲು ಗರ್ಜನೆಮಾಡಿ ನೆಗೆದು ಪುಡಪುಡನೆ ಸುಟ್ಟು ಸತ್ತುಹೋದವು. ವ|| ಅಲ್ಲಿಯ ಕೆಲವು ಬಳ್ಳಿ ಮನೆಯಲ್ಲಿಯೂ ಧಾರಾಗೃಹಗಳಲ್ಲಿಯೂ ೯೩. ಉರಿಯು ತಮ್ಮನ್ನು ಒಟ್ಟಿಗೆ ಸುಡಲು ತಮ್ಮ ತೋಳುಗಳನ್ನು ಸಡಿಲಿಸಿದೆ ಆ ಪ್ರಿಯಪ್ರೇಯಸಿಯರು ಜೊತೆಯಲ್ಲಿಯೇ ಪ್ರಾಣವನ್ನು ಕಳೆದರು. ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು. ಇದಕ್ಕಿಂತ ಬೇರೆ ಅದೃಷ್ಟವೂ ಉಂಟೇ? ವ|| ಹೀಗೆ ಖಾಂಡವವನವೆಲ್ಲವನ್ನೂ ಅಗ್ನಿಯು ಪ್ರಳಯಕಾಲದ ಬೆಂಕಿಯಂತೆ ಸುಟ್ಟು ತಾನು ಭುಂಜಿಸುತ್ತಿರಲು ಸುತ್ತಲೂ ಬಳಸಿ ಬಂದು ರಕ್ಷಣೆ ಮಾಡುತ್ತಿರುವ ಕೃಷ್ಣನ ಸುದರ್ಶನವೆಂಬ ಚಕ್ರದ ಆಕ್ರಮಣವನ್ನೂ ವಿಕ್ರಮಾರ್ಜುನನ ದಿವ್ಯಾಸ್ತ್ರಗಳ ಆಕ್ರಮಣವನ್ನೂ ಅಗ್ನಿದೇವನ ಜ್ವಾಲೆಗಳ ಸಮೂಹದ ಆಕ್ರಮಣವನ್ನೂ ಹೇಗೋ ವಂಚಿಸಿ ಬಲೆಯಿಂದ ತಪ್ಪಿಸಿಕೊಂಡ ಕೋಕಪಕ್ಷಿಯಂತೆ ಆ ತೋಟದ ಕಾವಲುಗಾರನೊಬ್ಬನು ಹೋಗಿ ದೇವೇಂದ್ರನನ್ನು ಕಂಡು- ೯೪. ಸ್ವಾಮಿ ವಿಜ್ಞಾಪನೆ, ಈ ದಿನ ಖಾಂಡವವನವನ್ನು ಅಗ್ನಿಯು ವ್ಯಾಪಿಸಿ ನಾನಾ ರೀತಿಯಾಗಿ ಸುಡಲು ನೋಡಲಾರದೆ ಎದುರಿಸಿದ ಸ್ವಾಮಿಯ ಕಾವಲುಗಾರರಾದ ದೇವ ಕಿನ್ನರ ಪನ್ನಗಾವಳಿಯನ್ನು ನಾಶವಾಗುವ ಹಾಗೆ ಹೊಡೆದು ಕೊಂದು ಪ್ರಭುವಾದ ನಿಮ್ಮನ್ನು ‘ಏನು ಮಾಡಬಲ್ಲರವರು’ ಎಂದು ಅಹಂಕಾರಮಗ್ನನಾಗಿ ನಿಂತಿದ್ದಾನೆ.

೯೫. ನೋಟಕ್ಕೆ ಎರಡು ರಥಗಳಿವೆ. ಅದರಲ್ಲಿ ಒಂದು ರಥವೇ ಯುದ್ಧದಲ್ಲಿ ಅನೇಕ ರಥವಾಗಿರುವಂತೆ ಹರಿದು ಇನ್ನೂ ಕಣ್ಣಿನಲ್ಲಿ

ವ|| ಎಂಬುದುಂ ಪೌಳೋವಿ ಪತಿ ತನ್ನ ದಿವ್ಯಜ್ಞಾನದೊಳ್ ನೋಡಿ ಚಕ್ರಿಯುಂ ವಿಕ್ರಮಾರ್ಜುನನುಮಪ್ಪುದನಱದು ಗಜಱ ಗರ್ಜಿಸಿ ವಿಳಯ ಕಾಳಾಂಬುದದಂತೆ ಮೊೞಗುಮಂ ಸಿಡಿಲ ಬಳಗಮನೊಳಕೊಂಡ ದ್ರೋಣ ಮಹಾದ್ರೋಣ ಪುಷ್ಕಳಾವರ್ತ ಸುವರ್ತಕಂಗಳೆಂಬ ಮುಗಿಲ್ಗಳಂ ಬೆಸಸಿದಾಗಳವು ವಿಂಧ್ಯಾಚಳಕೂಟ ಕೋಟಿಗಳೆ ಕಿೞ್ತೆೞ್ದುಬರ್ಪಂತೆ ಬಂದು ದೆಸೆಗಳೆಲ್ಲಮಂ ಮುಸುರಿ ಕೞ್ತಲಿಸಿ ಕವಿದು-

ಚಂ|| ಕವಿದುವು ಸಪ್ತಸಾಗರ ಜಲಂಗಳೆ ಲೋಕಮನೀಗಳೆಂಬಿನಂ
ಕವಿದು ಮುಗಿಲ್ಗಳಲ್ಲಿ ಕಯುತ್ತಿರೆ ಪಾವಕನುರ್ಕುಗೆಟ್ಟಿದೆಂ|
ತುವೊ ತೊದಳಾಯ್ತು ದಾನಮೆನೆ ಮಾರುತಬಾಣದೆ ಮೇಘಮಾಲಿಕಾ
ನಿವಹಮನೆಚ್ಚು ಕೂಡೆ ಶರಪಂಜರಮಂ ಪಡೆದಂ ಗುಣಾರ್ಣವಂ|| ೯೬

ವ|| ಅಂತು ಪುಂಖಾನುಪುಂಖಮಾಗೆ ಪಾಯ್ವ ಶರಸಂಧಾನದೊಳೆಡೆವಱಯದಂತೆರಡುಂ ಕೆಯ್ಯೊಳ್ ತೋಡುಂ ಬೀಡುಂ ಕಾಣಲಾಗದಂತಿಸೆ ತುಱುಗಿ ಕವಿವಂಬಿನ ಮೞೆಯೆ ಮೞೆಯಂ ಮಾಣಿಸೆ ದಿವ್ಯಾಸ್ತ್ರಂಗಳಿಂ ನೂಱು ಯೋಜನದಳವಿಯ ಖಾಂಡವವನವೆಲ್ಲಮಂ ತಟ್ಟಿ ಮೆಡಱ ಮಶಕ ಮಾತ್ರಮಪ್ಪೊಡಂ ಮಿಸುಕಲ್ ಛಿದ್ರಮಿಲ್ಲದಂತಾಗೆ ಶರಪಂಜರದೊಳ್ ಮುಚ್ಚಿ ಮುಸುಕಿದಾಗಳಭಿನವ ಜೀಮೂತವಾಹನನ ದಿವ್ಯಾಸ್ತ್ರದ ಕೋಳ್ಗಿರಲಾಱದೆ ಜೀಮೂತಂಗಳೆಲ್ಲಂ ತೆರಳ್ಪೋಡಿದೊಡಗ್ನಿದೇವನಾವಗೆಯ ಕಿರ್ಚಿನಂತೊಳಗೊಳಗಳುರ್ದು

ಕಂ|| ವನ ಖಗ ಮೃಗ ವನ ತರು
ವನಚರ ವನ ವನಜ ನಿವಹಮುಳ್ಳನಿತುಂ ಸೀ|
ರನಿತುಮಣಮುೞದುದಿಲ್ಲೆಂ
ಬಿನಮುಂಡಂ ದಹನನಳುರ್ದು ಖಾಂಡವವನಮಂ|| ೯೭

ವ|| ಅಂತಾ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ ವಿಸ್ಮಯಮಾಗೆಮಯನೆಂಬ ದಾನವವಿಶ್ವಕರ್ಮಂ ನೆಗೆದುರಿವುರಿಮಾಲೆಗಳಂ ಗದೆಯೊಳ್ ಬೀಸುತ್ತುಂ ಪೊಱಮಡೆ ಪೊಱಮಡಲೀಯದೆ-

ಕಂ|| ಒಂದು ದೆಸೆಯೊಳ್ ತಗುಳ್ವ ಮು
ಕುಂದನ ಕರಚಕ್ರಮೊಂದು ದೆಸೆಯೊಳ್ ನರನೆ|
ಚ್ಚೊಂದು ಶರಮೊಂದು ದೆಸೆಯೊಳ್
ಕುಂದದೆ ದಹನಾರ್ಚಿ ಸುತ್ತಿ ಮುತ್ತುವ ಪದದೊಳ್|| ೯೮

ತಿರುಗುತ್ತದೆ. ನಮ್ಮ ತೋಟವೆಷ್ಟಿತ್ತೊ ಅಷ್ಟೂ ಉರಿಯುತ್ತಿದೆ. ವ|| ಎಂದು ಹೇಳಲು ಶಚೀಪತಿಯಾದ ಇಂದ್ರನು ತನ್ನ ದಿವ್ಯಜ್ಞಾನದಿಂದ ನೋಡಿ ಅವರಿಬ್ಬರೂ ಶ್ರೀಕೃಷ್ಣಾರ್ಜುನರಾಗಿದ್ದುದನ್ನು ತಿಳಿದು ರೇಗಿ ಗರ್ಜಿಸಿ ಪ್ರಳಯಕಾಲದ ಮೋಡದಂತೆ ಗುಡುಗು ಸಿಡಿಲುಗಳ ಸಮೂಹವನ್ನೊಳಗೊಂಡ ದ್ರೋಣ, ಮಹಾದ್ರೋಣ, ಪುಷ್ಕಳಾವರ್ತ, ಸಂವರ್ತಕಗಳೆಂಬ ಮೋಡಗಳಿಗೆ ಅಗ್ನಿಯನ್ನು ನಾಶಪಡಿಸಲು ಆಜ್ಞೆಮಾಡಿದನು. ಅವು ವಿಂಧ್ಯಪರ್ವತದ ಕೋಟ್ಯಂತರ ಶಿಖರಗಳೇ ಕಿತ್ತೆದ್ದು ಬರುವ ಹಾಗೆ ಬಂದು ದಿಕ್ಕುಗಳೆಲ್ಲವನ್ನೂ ಮುಸುಕಿ ಕತ್ತಲಿಸಿ ಕವಿದು- ೯೬. ಲೋಕವನ್ನೆಲ್ಲ ಏಳುಸಾಗರಗಳ ನೀರುಗಳೇ ಮುಚ್ಚಿಕೊಂಡವೊ ಎನ್ನುವ ಹಾಗೆ ಮೋಡಗಳು ಮಳೆಯನ್ನು ಸುರಿಸಿದುವು. ಅಗ್ನಿಯು ಶಕ್ತಿಗುಂದಿ ಹೇಗೋ ದಾನವು ಸುಳ್ಳಾಯಿತು ಎನ್ನಲು ಅರ್ಜುನನು ವಾಯವ್ಯಾಸ್ತ್ರದಿಂದ ಮೇಘಮಾಲೆಗಳ ಸಮೂಹವನ್ನು ಹೊಡೆದೋಡಿಸಿ ತಕ್ಷಣವೇ ಒಂದು ಬಾಣದ ಪಂಜರವನ್ನು ನಿರ್ಮಿಸಿದನು. ವ|| ಪುಂಖಾನುಪುಂಖವಾಗಿ ತೋಡುಬೀಡುಗಳು ಕಾಣದಷ್ಟು ವೇಗದಿಂದ ಎರಡು ಕೈಗಳಿಂದಲೂ ಏಕಪ್ರಕಾರವಾಗಿ ಪ್ರಯೋಗಮಾಡಿದ ಬಾಣಗಳಿಂದ ಮಳೆಯನ್ನು ಅರ್ಜುನನ್ನು ನಿಲ್ಲಿಸಿದನು. ದಿವ್ಯಾಸ್ತ್ರದಿಂದ ನೂರುಯೋಜನವಿಸ್ತಾರವುಳ್ಳ ಖಾಂಡವವನವೆಲ್ಲವನ್ನೂ ತಟ್ಟಿಯ ಹಾಗೆ ಹೆಣೆದು ಸೊಳ್ಳೆಯಂತಹ ಪ್ರಾಣಿಯೂ ಚಲಿಸಲು ರಂಧ್ರವಿಲ್ಲದ ಹಾಗೆ ಬಾಣದ ಪಂಜರದಲ್ಲಿ ಮುಚ್ಚಿ ಮುಸುಕಿದನು. ಅಭಿನವ ಜೀಮೂತವಾಹನನಾದ ಅರ್ಜುನನ ದಿವ್ಯಾಸ್ತ್ರದ ಆಕ್ರಮಣವನ್ನು ಸಹಿಸಲಾರದೆ ಮೋಡಗಳೆಲ್ಲವೂ ಚಲಿಸಿ ಹೋದವು. ಅಗ್ನಿದೇವನು ಕುಂಬಾರರ ಆವಿಗೆಯ ಬೆಂಕಿಯಂತೆ ಒಳಗೊಳಗೇ ವ್ಯಾಪಿಸಿ ಸುಟ್ಟನು- ೯೭. ಕಾಡಿನಪಕ್ಷಿ, ಮೃಗ, ಮರ, ಪ್ರಾಣಿ, ತಾವರೆಗಳ ಸಮೂಹದಲ್ಲಿ ಒಂದು ಸಣ್ಣ ನೀರಿನಷ್ಟೂ ಉಳಿಯಲಿಲ್ಲವೆನ್ನುವ ಹಾಗೆ ಅಗ್ನಿಯು ವ್ಯಾಪಿಸಿ ಖಾಂಡವನವನ್ನೆಲ್ಲ ತಿಂದು ಬಿಟ್ಟನು. ವ|| ಹಾಗೆ ಆ ವನಪ್ರದೇಶವೆಲ್ಲ ಉರಿಗೆ ಅನವಾದ ಸಂದರ್ಭದಲ್ಲಿ ಆಶ್ಚರ್ಯವಾಗುವ ಹಾಗೆ ಮಯನೆಂಬ ರಾಕ್ಷಸ ಶಿಲ್ಪಿಯು ಮೇಲೆದ್ದು ಹಾರಿ ಚಿಮ್ಮುತ್ತಿದ್ದ ಜ್ವಾಲೆಗಳ ಸಮೂಹಗಳನ್ನು ತನ್ನ ಗದೆಯಿಂದ ಬೀಸುತ್ತ ಹೊರಗೆ ಬಂದನು. ಅದಕ್ಕೆ ಅವಕಾಶಕೊಡದೆ- ೯೮. ಒಂದು ಕಡೆ ಅಟ್ಟಿಬರುವ ಕೃಷ್ಣನ ಕಯ್ಯ ಸುದರ್ಶನಚಕ್ರವೂ ಮತ್ತೊಂದು ಕಡೆ ಅರ್ಜುನನು ಹೂಡಿದ ಬಾಣವೂ ಬೇರೊಂದೆಡೆಯಲ್ಲಿ ಸ್ವಲ್ಪವೂ ಕಡಿಮೆಯಾಗದ

ಶರಣಕ್ಕೆನಗರಿಕೇಸರಿ
ಯೆರಡು ಪದಾಂಬುಜಮುವಿಗಳೆಂಬುದಮಾಗಳ್|
ಹರಿ ಚಕ್ರಂ ಕೊಳ್ಳದೆ ನರ
ಶರಮುರ್ಚದೆ ದಹನಶಿಖೆಗಳಳುರದೆ ಅವನಂ|| ೯೯

ವ|| ಆಗಳ್ ಮಯಂ ವಿಸ್ಮಯಂಬಟ್ಟು ಪೊಡವಟ್ಟು ಪೋದನಾಗಳಾ ವನಾಂತರಾಳದೊಳಿರ್ಪ ತಕ್ಷಕನ ಮಗನಪ್ಪಶ್ವಸೇನನೆಂಬ ಪನ್ನಗಂ ತನ್ನ ತಾಯಂ ತನ್ನ ಬಾಲಮಂ ಕರ್ಚಲ್ವೇೞ್ದು ದಹನಾರ್ಚಿಗಳಿಂ ಬರ್ದುಂಕಿ ನೆಗೆದು ಪಾಱುವಾಗಳದನೆರೞ್ಖಂಡಮಪ್ಪಿನಮಾಖಂಡಳ ತನಯನಿಸುವುದುಂ ತನ್ನ ಬಾಲಂಬೆರಸುರಿಯೊಳ್ ಬಿೞ್ದು ಮಿಡುಮಿಡುಮಿಡುಕುತಿರ್ದ ಜನನಿಯಂ ಕಂಡು ಪಾವುಗಳುಳ್ಳ ಪಗೆಯಂ ಮಯವೆಂಬುದಂ ನನ್ನಿಮಾಡಿ-

ಕಂ|| ಪಗೆ ಸಾಱುವುದುಂ ಕೊಲ್ಲೆಂ
ಪದೆ ಸಾಱದ ನಿನ್ನನಾರ ಮಯಂ ಪೊಕ್ಕುಂ|
ಪಗೆಯಂ ನೆಱಪೆನೆ ನೆಱಪುವ
ಬಗೆಯೊಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ|| ೧೦೦

ವ|| ಅಂತಶ್ವಸೇನನರ್ಧಾವಲಿಕಮೆಂಬಮೋಘಾಸ್ತ್ರಮಾಗಿ ಕರ್ಣನ ದೊಣೆಯೊಳಿರ್ದನಿತ್ತ ಖಾಂಡವವನದೊಳಗೆ ಮಂದಪಾಲನೆಂಬ ಮುನಿಗಮೊಂದು ಲಾವಗೆಗಂ ಪುಟ್ಟಿದ ನಾಲ್ಕುಂ ಲಾವಗೆಗಳಗ್ನಿಸೂಕ್ತಂಗಳನೋದುತ್ತುಮದಿರದಿದಿರಂ ಬರೆ ಮೆಚ್ಚಿ ಬರವನಗ್ನಿದೇವಂ ಬೇಡಿಕೊಳ್ಳಿಮೆಂದೊಡೆಮ್ಮನ್ವಯಕ್ಕೆ ನೀನ್ ತಣ್ಣಿದೆಯಾಗೆಂದು ಬೇಡುವುದುಂ ತದಸ್ತುವೆಂದನಿತ್ತಲಿಂದ್ರಂ ತನ್ನ ಬಲಮೆಲ್ಲಮಳ್ಕಿಮೆಳ್ಕಿ ದಂತಾದುದೆಂಬುದಂ ಕೇಳ್ದು-

ಚಂ|| ಮಗನೆನಗೆಂದು ಪೇೞು ಪಿಡಿದು ಕಟ್ಟದೆ ಮಾಣ್ಬೆನೆ ಪಾರ್ಥನಂ ಧರಿ
ತ್ತಿಗೆ ಗುರುವೆಂದು ವಜ್ರದೊಳುರುಳ್ಚದೆ ಮಾಣ್ಬೆನೆ ಚಕ್ರಿಯಂ ಕರಂ|
ಬಗೆಯದೆ ಗೊಡ್ಡಮಾಡಿದರ್ಗೆ ತಕ್ಕುದನೀಗಳೆ ಮಾೞ್ಪೆನೆಂದು ತೊ
ಟ್ಟಗೆ ಪೊಱಮಟ್ಟನೇಱ ನಿಜವಾಹನಮಂ ದಿವದಿಂ ಸುರಾಪಂ|| ೧೦೧

ವ|| ಅಂತು ದೇವನಿಕಾಯಂ ಬೆರಸು ಯುದ್ಧಸನ್ನದ್ಧನಾಗಿ ಪರಸೈನ್ಯ ಭೈರವನೊಳಿಱವೆನೆಂಬ ಪೞುವಗೆಯೊಳ್ ಭೈರವಂಬಾಯ್ವಂತೆ ಬಂದು ನಿಂದ ಪುರಂದರನಲ್ಲಿಗೆ ಸರಸಿಜಸಂಭವಂ ಬಂದು ಮಾರ್ಕೊಂಡು-

ಉರಿಯ ಜ್ವಾಲೆಯೂ ಸುತ್ತಿ ಮುತ್ತಿದುವು. ೯೯. ತಕ್ಷಣವೇ ಮಯನು ‘ಅರಿಕೇಸರಿಯ ಎರಡು ಪಾದಕಮಲಗಳೆ ನನಗೆ ಶರಣು ಎಂದನು. ಒಡನೆಯೇ ಕೃಷ್ಣನ ಸುದರ್ಶನವು ಪ್ರಯೋಗವಾಗದೆ ನಿಂತಿತು. ಅರ್ಜುನನ ಬಾಣಗಳು ಬೇಸಲಿಲ್ಲ. ಅಗ್ನಿಜ್ವಾಲೆಗಳು ಸುಡಲಿಲ್ಲ. ವ|| ಮಯನು ಆಶ್ಚರ್ಯಪಟ್ಟು ನಮಸ್ಕಾರ ಮಾಡಿ ಹೊರಟು ಹೋದನು. ಆಗ ಆ ಕಾಡಿನ ಮಧ್ಯದಲ್ಲಿದ್ದ ತಕ್ಷಕನ ಮಗನಾದ ಅಶ್ವಸೇನನೆಂಬ ಹಾವು ತನ್ನ ತಾಯಿಯನ್ನು ತನ್ನ ಬಾಲವನ್ನು ಕಚ್ಚಿಕೊಳ್ಳುವಂತೆ ಹೇಳಿ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ನೆಗೆದು ಹಾರುವಾಗ ಅದನ್ನು ಇಂದ್ರನಂದನನಾದ ಅರ್ಜುನನು ಎರಡುತುಂಡಾಗುವ ಹಾಗೆ ಹೊಡೆದನು. ಬಾಲದೊಡನೆ ಬೆಂಕಿಯಲ್ಲಿ ಬಿದ್ದು ಮಿಡುಮಿಡುಕುತ್ತಿದ್ದ ತನ್ನ ತಾಯಿಯನ್ನು ಕಂಡು ಕೆರಳಿತು. ಹಾವುಗಳು ತಮ್ಮಲ್ಲಿರುವ ದ್ವೇಷವನ್ನು ಮರೆಯುವುದಿಲ್ಲ ಎಂಬುದನ್ನು ಸತ್ಯವನ್ನಾಗಿ ಮಾಡುವಂತೆ ೧೦೦. ತನ್ನ ಶತ್ರುತ್ವವನ್ನು ಸಾರಿ ಹೇಳಲು ಅರ್ಜುನನು ಅದನ್ನು ಕುರಿತು ‘ದ್ವೇಷವನ್ನು ಸಾರಿದ ನಿನ್ನನ್ನು ಕೊಲ್ಲುವುದಿಲ್ಲ. ಯಾರ ಆಶ್ರಯವನ್ನಾದರೂ ಪಡೆದು ದ್ವೇಷವನ್ನು ತೀರಿಸು’ ಎಂದನು. ಅದನ್ನು ಪೂರೈಸುವ ಮನಸ್ಸಿನಿಂದ ಕೋಪಿಸಿಕೊಂಡು ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದನು. ವ|| ಹಾಗೆ ಅಶ್ವಸೇನನು ಅರ್ಧಾವಲೀಕವೆಂಬ ಅಮೋಘವಾದ ಬಾಣವಾಗಿ ಕರ್ಣನ ಬತ್ತಳಿಕೆಯಲ್ಲಿದ್ದನು. ಈ ಕಡೆ ಖಾಂಡವವನದಲ್ಲಿ ಮದನಪಾಲನೆಂಬ ಋಷಿಗೂ ಒಂದು ಲಾವುಕಪಕ್ಷಿಗೂ ಹುಟ್ಟಿದ ನಾಲ್ಕು ಲಾವುಕಹಕ್ಕಿಗಳು ಅಗ್ನಿಸೂತ್ರಮಂತ್ರಗಳನ್ನು ಜಪಿಸುತ್ತ ಬೆಂಕಿಗೆ ಹೆದರದೆ ಎದುರಾಗಿ ಬರಲು ಅವುಗಳ ಬರುವಿಕೆಗೆ ಸಂತೋಷಪಟ್ಟು ಅಗ್ನಿದೇವನು (ನಿಮಗೆ ಬೇಕಾದ) ವರವನ್ನು ಕೇಳಿಕೊಳ್ಳಿ ಎನ್ನಲು ‘ನಮ್ಮ ವಂಶಕ್ಕೆ ನೀನು ಹಿತವಂತನಾಗು’ ಎಂದು ಬೇಡಿಕೊಂಡವು. ಅಗ್ನಿಯು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟನು. ಈ ಕಡೆ ಇಂದ್ರನು ತನ್ನ ಬಲವೆಲ್ಲ ನಾಶವಾಗಿ ಸಾರಿಸಿದಂತಾಯಿತೆಂಬುದನ್ನು ಕೇಳಿದನು. ೧೦೧. ‘ನನ್ನ ಮಗನೆಂದು ಅರ್ಜುನನನ್ನು ಹಿಡಿದು ಕಟ್ಟದೆ ಬಿಡುತ್ತೇನೆಯೇ? ಲೋಕಗುರುವೆಂದು ಕೃಷ್ಣನನ್ನು ವಜ್ರಾಯುಧದಿಂದ ಉರುಳಿಸದೆ ಬಿಡುತ್ತೇನೆಯೇ? ನನ್ನನ್ನು ಸ್ವಲ್ಪವೂ ಲಕ್ಷಿಸದೆ ಚೇಷ್ಟೆಮಾಡಿದವರಿಗೆ ಯೋಗ್ಯವಾದುದನ್ನು ಈಗಲೇ ಮಾಡುತ್ತೇನೆ’ ಎಂದು ಇದ್ದಕ್ಕಿದ್ದ ಹಾಗೆ ದೇವೇಂದ್ರನು ತನ್ನ ವಾಹನವಾದ ಐರಾವತವನ್ನು ಹತ್ತಿ ಸ್ವರ್ಗದಿಂದ ಹೊರಟನು. ವ|| ದೇವತೆಗಳ

ಚಂ|| ಬನಮನೆ ಕಾಯಲೆಂದಿಱವೆಯಪ್ಪೊಡೆ ಮುನ್ನಮೆ ಪೋದುದಂದು ಪಾ
ರ್ಥನೊಳೆನಗೇವಮೆಂಬ ಬಗೆಯುಳ್ಳೊಡೆ ನಿನ್ನಯ ಪುತ್ರನಚ್ಯುತಂ|
ಗಿನಿಸೆರ್ದೆ ನೋವೆಯಪ್ಪೊಡದು ಕೂಡದು ಮೂವರೊಳೊರ್ವನೆಮ್ಮ ಮಾ
ತಿನಿತೆ ಗುಣಾರ್ಣವಂಗೆ ಕುಡು ಗೆಲ್ಲಮನಿಂತಿದೆ ಕಜ್ಜದುಜ್ಜುಗಂ|| ೧೦೨

ವ|| ಎಂದು ಕಮಲಾಸನನಾಸೆದೋಱ ನುಡಿದುಳ್ಳುದನೆ ನುಡಿದೊಡಂತೆಗೆಯ್ವೆನೆಂದು-

ಚಂ|| ಸುರಿವರಲೊಂದು ಬೆಳ್ಸರಿಯದಾತ್ಮತನೂಭವನುತ್ತಮಾಂಗದೊಳ್
ದೊರೆಕೊಳೆ ನಿಲ್ಲದಲ್ಲಿ ಕುಸುಮಂ ಕೆಲವಲ್ಲುಗೆ ತನ್ನ ರತ್ನವಿ|
ಸುರಿತ ಕಿರೀಟಮಂ ಕವಿದು ತಾನೆ ನರಂಗೆ ಕಿರೀಟಿ ನಾಮಮಂ
ಸರಸದಿನಾಗಳುಚ್ಚರಿಸಿ ಸಾಹಸಮಂ ಪೊಗೞ್ದಂ ಸುರಾಪಂ|| ೧೦೩

ವ|| ಅಂತು ಪೊಗೞ್ದು ಖಾಂಡವವನದಹನದೊಳಾದ ಪೊಗೆಯೊಳಮಲ್ಲಿಯ ಮಹಾನಾಗಂಗಳ ವಿಷಂಬೆರಸು ಸುಯ್ವ ಸುಯ್ಯ ಪೊಗೆಯೊಳಂ ಕಱಂಗಿ ಕೞದ ಮೆಯ್ಯುಮಂ ಪ್ರಚಂಡ ಗಾಂಡೀವ ವ್ಯಾಘಾತದೊಳಿಂದ್ರನೀಲಂಗಳನಡಸಿದಂತಪ್ಪ ಮುಂಗೆಯ್ಯಮುಂ ಕಂಡು ಕೃಷ್ಣನೆಂಬ ಪೆಸರನಿಟ್ಟನಾಗಳ್ ಬ್ರಹ್ಮಂ ಬ್ರಹ್ಮಾಯುವಕ್ಕೆಂದು ಪರಸಿದನೀಶ್ವರಂ ನೀನುದಾರಮಹೇಶ್ವರ ನಪ್ಪುದಱಂ ನಿನಗಮೆನಗ ಮೇತಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದನಂತು ಮೂದೇವರುಂ ಪರಸಿ ನಿಜನಿವಾಸಂಗಳ್ಗೆ ಪೋದರಾಗಳ್-

ಚಂ|| ಅನಿತಿನಿತೆನ್ನದಾಂತ ಸುರ ಪನ್ನಗ ಕಿನ್ನರ ಸೈನ್ಯಮೆಲ್ಲಮಂ
ಬಿನ ಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳೆಂ
ಬಿನಿತುಮವೞ ತೞ್ಗೆ ನುಡಿಯಂ ನುಡಿದಂತೆ ನೆಗೞ್ಚಲಗ್ನಿದೇ
ವನನಮರೇಂದ್ರನಂದನಮನೂಡಿದನಂದಮರೇಂದ್ರನಂದನಂ|| ೧೦೪

ಸಮೂಹವನ್ನು ಕೂಡಿಕೊಂಡು ಯುದ್ಧಕ್ಕೆ ಸಿದ್ಧನಾಗಿ ಪರಸೈನ್ಯಭೈರವನಾದ ಅರ್ಜುನನೊಡನೆ ಯುದ್ಧ ಮಾಡುತ್ತೇನೆಂಬ ಕೆಟ್ಟಮನಸ್ಸಿನಿಂದ ಭೈರವನು ಹಾಯ್ದುನುಗ್ಗುವ ಹಾಗೆ ಬಂದು ನಿಂತ ಇಂದ್ರನ ಹತ್ತಿರಕ್ಕೆ ಬ್ರಹ್ಮನು ಬಂದು ಅವನನ್ನು ತಡೆದು ೧೦೨. “ನೀನು ವನವನ್ನು ರಕ್ಷಿಸುವುದಕ್ಕಾಗಿ ಯುದ್ಧಮಾಡುವುದಾದರೆ ಅದು ಮೊದಲೇ ನಾಶವಾಗಿದೆ. ಪಾರ್ಥನಲ್ಲಿ ನಿನಗೆ ದ್ವೇಷವಿದೆಯೆನ್ನುವುದಾದರೆ ಅವನು ನಿನ್ನ ಮಗ; ಕೃಷ್ಣನ ವಿಷಯದಲ್ಲಿ ಹೃದಯವೇದನೆ (ಕೋಪ)ಯಿರುವುದಾದರೆ ಅದು ಕೂಡದು. ಅವನು ತ್ರಿಮೂರ್ತಿಗಳಲ್ಲೊಬ್ಬ, ನಮ್ಮ ಮಾತಿಷ್ಟೆ ; ಗುಣಾರ್ಣವನಾದ ಅರ್ಜುನನಿಗೆ ಜಯವನ್ನು ಕೊಡು. ಈಗ ಮಾಡಬೇಕಾದ ಕಾರ್ಯವಿಷ್ಟೆ.” ೧೦೩. ಎಂದು ಬ್ರಹ್ಮನು ಇಂದ್ರನಿಗೆ ಆಶೆದೋರಿಸಿ ಮಾತನಾಡಿ ವಾಸ್ತವಾಂಶವನ್ನು ತಿಳಿಸಲು (ಇಂದ್ರನು) ಹಾಗೆಯೇ ಮಾಡುತ್ತೇನೆಂದು ತನ್ನ ಮಗನಾದ ಅರ್ಜುನನ ತಲೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಹೂಗಳು ಆ ಸ್ಥಳದಲ್ಲಿಯೇ ನಿಲ್ಲದೆ ಪಕ್ಕದಲ್ಲಿ ಬೀಳುತ್ತಿರಲು ಇಂದ್ರನು ತಾನೇ ರತ್ನಕಾಂತಿಯಿಂದ ಕೂಡಿದ ತನ್ನ ಕಿರೀಟವನ್ನು ಅರ್ಜುನನ ತಲೆಯ ಮೇಲಿಟ್ಟು ಅರ್ಜುನನಿಗೆ ‘ಕಿರೀಟಿ’ ಎಂಬ ಹೆಸರನ್ನು ಸರಸವಾಗಿ ಇಟ್ಟು ಅವನ ಸಾಹಸವನ್ನು ಹೊಗಳಿದನು. ವ|| ಖಾಂಡವವನದಹನದಿಂದುಂಟಾದ ಹೊಗೆಯಿಂದಲೂ ಅಲ್ಲಿಯ ಮಹಾಸರ್ಪಗಳ ವಿಷಮಿಶ್ರವಾಗಿ ಉಸಿರಾಡುವ ಗಾಳಿಯಿಂದಲೂ ಕಪ್ಪುಕಪ್ಪಾದ ಶರೀರವನ್ನೂ ಮಹಾಶಕ್ತಿಯುಕ್ತವಾದ ಗಾಂಡೀವದ ಪೆಟ್ಟಿನಿಂದ ಇಂದ್ರನೀಲರತ್ನಗಳು ಸೇರಿಕೊಂಡ ಹಾಗಿರುವ ಮುಂಗಯ್ಯನ್ನೂ ಕಂಡು ಇಂದ್ರನು ಅರ್ಜುನನಿಗೆ ಕೃಷ್ಣನೆಂಬ ಹೆಸರಿಟ್ಟನು. ಬ್ರಹ್ಮನು ನಿನಗೆ ದೀರ್ಘಾಯುವಾಗಲಿ ಎಂದು ಹರಸಿದನು. ಈಶ್ವರನು ನೀನು ಉದಾರಮಹೇಶ್ವರನಾಗಿರುವುದರಿಂದ ನಿನಗೂ ನನಗೂ ಯಾವುದರಲ್ಲಿಯೂ ವ್ಯತ್ಯಾಸವೂ ಭೇದವೂ ಇಲ್ಲ ಎಂದನು. ಹಾಗೆ ತ್ರಿಮೂರ್ತಿಗಳೂ ಅರ್ಜುನನನ್ನು ಹರಸಿ ತಮ್ಮ ವಾಸಸ್ಥಳಗಳಿಗೆ ಹೋದರು. ೧೦೪. ಅಷ್ಟಿಷ್ಟೆನ್ನದೆ ಪ್ರತಿಭಟಿಸಿದ ದೇವತೆಗಳ ನಾಗರರ ಕಿನ್ನರರ ಸೈನ್ಯವೆಲ್ಲವೂ ತನ್ನ ಬಾಣದ ಹೊಡೆತಕ್ಕೆ ಸಿಕ್ಕಿ ಚೆಲ್ಲಾಪಿಲ್ಲಿಯಾಗಿ ಕೆಳಗುರುಳಲು ಬಳ್ಳಿವನೆ ಕೃತಕಪರ್ವತ ಎಂಬಿವೆಲ್ಲ ನಾಶವಾಗಿ ತಗ್ಗಿದರೂ ತಾನಾಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅಗ್ನಿದೇವನಿಗೆ ಇಂದ್ರನ ಉದ್ಯಾನವಾದ ಖಾಂಡವವನವನ್ನು ಅರ್ಜುನನು ಉಣಿಸಿದನು. ವ|| ಆಗ ಸ್ವಾಹಾದೇವಿಯ ಪತಿಯಾದ ಅಗ್ನಿಯು ಇಷ್ಟಾರ್ಥವನ್ನು ಪೂರ್ಣವಾಗಿ ಪಡೆದವನಾಗಿ ಖಟ್ವಾಂಗನೆಂಬ ರಾಜನ ಯಜ್ಞದಲ್ಲಿ ಅವನು ತಂದಿದ್ದ ತುಪ್ಪದ ಸಮುದ್ರವನ್ನು ಕುಡಿದುದರಿಂದ ಉಂಟಾದ ರೋಗವು ಇಂದು ಪರಿಹಾರವಾಯಿತು ಎಂದು ರೋಗರಹಿತನಾಗಿ ವಿಶೇಷ ಸಂತೋಷದಿಂದು ಕೂಡಿ ಆಶೀರ್ವದಿಸಿ ಹೋದನು. ಆಗ ಕೃಷ್ಣಾರ್ಜುನರಿಬ್ಬರೂ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಸೇರಿದರು.

ವ|| ಆಗಳ್ ಸ್ವಾಹಾಂಗನಾನಾಥಂ ಸಂಪೂರ್ಣ ಮನೋರಥನಾಗಿ ಖಟ್ವಾಂಗನೆಂಬರಸನ ಯಜ್ಞದೊಳಾತನ ತಂದ ಘೃತಸಮುದ್ರಮಂ ಕುಡಿದೊಡಾದ ರೋಗಮಿಂದು ಪೋದುದೆಂದು ನೀರೋಗನಾಗಿ ಮಹಾನುರಾಗಂಬೆರಸು ಪರಸಿ ಪೋದನಾಗಳಿರ್ವರುಮಿಂದ್ರಪ್ರಸ್ಥಕ್ಕೆಯ್ದೆವಂದು-

ಚಂ|| ಇದಿರ್ವರೆ ಧರ್ಮಜಂ ಬೆರಸು ತನ್ನೊಡವುಟ್ಟಿದರೆಯ್ದೆ ತಳ್ತು ಕ
ಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ|
ಸುದತಿಯರಿಕ್ಕೆ ಚಾಮರಸಮನಂಗನೆಯರ್ ನಿಜಕೀರ್ತಿ ಲೋಕಮಂ
ಪುದಿದಿರೆ ಪೊಕ್ಕನಂದು ನಿಜಮಂದಿರಮಂ ಪರಸೈನ್ಯಭೈರವಂ|| ೧೦೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪಂಚಮಾಶ್ವಾಸಂ

೧೦೫. ಆಗ ತನ್ನ ಒಡಹುಟ್ಟಿದವರು ಧರ್ಮರಾಯನೊಡಗೂಡಿ ಇದಿರಾಗಿ ಬರಲು ಕಟ್ಟಿದ ತೋರಣವೂ ಇಟ್ಟ ರಂಗವಲ್ಲಿಯೂ ತನ್ನ ಕೀರ್ತಿಯ ದಾಂಗುಡಿಗಳಂತಿರಲು ಸ್ತ್ರೀಯರು ಅಕ್ಷತೆಗಳನ್ನು ಚೆಲ್ಲುತ್ತಿರಲು ಅಂಗನೆಯರು ಚಾಮರವನ್ನು ಬೀಸುತ್ತಿರಲು ತನ್ನ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸುತ್ತಿರಲು ಅಂದು ಪರಸೈನ್ಯಭೈರವನಾದ ಅರ್ಜುನನು ತನ್ನ ಅರಮನೆಯನ್ನು ಪ್ರವೇಶಿಸಿದನು.

ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಅಯ್ದನೆಯ ಆಶ್ವಾಸ.
 ***********




 ***********

ಕಾಮೆಂಟ್‌ಗಳಿಲ್ಲ: