ಪಂಪಭಾರತ : ಗದ್ಯಾನುವಾದ - ಷಷ್ಠಮಾಶ್ವಾಸಂ

                                               ಷಷ್ಠಮಾಶ್ವಾಸಂ
ಕಂ|| ಶ್ರೀ ರಮಣೀರಮಣಂಗರಿ
ನಾರೀ ವೈಧವ್ಯ ದಿವ್ಯ ದೀಕ್ಷಾ ದಕ್ಷಂ|
ಗಾರೆಣೆ ಹರಿಗಂಗೀಗಡೆ
ಬಾರಿಸು ನೀಂ ನಿನ್ನ ಮಗನನಂಧನರೇಂದ್ರಾ|| ೧

ಕಾದುದು ಸರಣ್ಗೆವಂದರ
ನಾದುದು ಕಾಲಾಗ್ನಿಬಲವದರಿನೃಪತಿಗೆ ಕಾ|
ಪಾದುದು ನೆಲಕ್ಕೆ ತೋಳ್ವಲ
ವಿ ದೊರೆತೆನೆ ಮರುಳೆ ಹರಿಗನೊಳ್ ಪಗೆಗೊಳ್ವಾ|| ೨

ವ|| ಎಂದೆನಿತಾನುಂ ತೆಱದೊಳೆ ಸಾಱಯುಂ ಕೀಱಯುಂ ನುಡಿದೊಡೆ ಧೃತರಾಷ್ಟ್ರಂ ಮಗನಲ್ಲಿಗೆ ವಂದು ಜಡಿದು ನುಡಿದುಮೇಗೆಯ್ದು ಮೊಡಂಬಡಿಸಲಾಱದಿದೆ ಯುಷ್ಠಿರಂ ತಲೆಗವಿವನಲ್ಲದೆಯುಮೇವದೊಳ್ ತಲೆಗವಿದು ಸಿಗ್ಗಂ ಕೊಂಡಾಡಿ ನೆತ್ತಮನಾಡಿ-

ಕಂ|| ವ್ಯಾಳ ಗಜಂಗಳನಗ್ಗದ
ಸೂಳೆಯರೊಕ್ಕನಲನರ್ಘ್ಯ ವಸ್ತುಗಳನಿಳಾ|
ಪಾಳಂ ಸೇಲ್ತೊಡೆ ಜೂದಿನ
ಕೇಳಿಯನಾ ಕೇಳಿಯನಿತಳ್ ಮಾಣಿಸಿದರ್|| ೩

ವ|| ಮಾಣಿಸಿದೊಡೆ ಮಾಣದೆ ರಪಣಮಂ ತೋಱಯುಮೊತ್ತೆಯನುಗ್ಗಡಿಸಿಯುಮಾಡಿಮೆನೆ ಪೆಱತೇನುಮುಪಾಯಮಿಲ್ಲದೆಮ್ಮಾಳ್ವ ನೆಲನೊತ್ತೆಯೆಂದೊಡೆ ಬಗೆದು ನೋಡ್ ಗೆಲ್ದಿಂ ಬೞಯಂ ಮುದುಗಣ್ಗಳ್ ಮಗುೞ ಕುಡಿಸುವರೆಂಬ ಬಗೆಯೊಳಂ ವಿಕ್ರಮಾರ್ಜುನನುಂ ಭೀಮನುಂ ಯಮಳರುಮೆೞೆದುಕೊಳ್ವರೆಂಬ ಸಂಕೆಯೊಳಮಂತಲ್ತು ನಿನ್ನನ ನ್ನಿಯೊಳಂ ವರ್ಷಾವಯೊಳಲ್ಲದೆ ನೆಲನನೊತ್ತೆವಿಡಿಯೆನೆಂದೊಡೆ ಧರ್ಮಪುತ್ರಂ ಪನ್ನೆರಡು ವರುಷಂಬರಂ ನಾಡಂ ಪುಗರಣ್ಯದೊಳಿರ್ಪಂತುಮಜ್ಞಾತವಾಸಮೆಂದೊಂದು ವರುಷದೊಳಾರಾನು ಮಱದರಪ್ಪೊಡೆ ಮತ್ತಂ ದ್ರಾದಶಾಬ್ದಂಬರಂ ನಾಡ ದೆಸೆಯಂ ನೋಡದಂತಾಗೆಯೊಂದೆ ಪಲಗೆಯೊಳೆ ಗೆಲ್ಲಸೋಲಮಪ್ಪಂತು ನನ್ನಿ ನುಡಿದು ನೆಲನನೊತ್ತೆಯಿಟ್ಟಾಡಿ-

೧. ‘ಐಶ್ವರ್ಯಲಕ್ಷ್ಮೀಪತಿಯೂ ಶತ್ರುರಾಜಸ್ತ್ರೀಯರಿಗೆ ವೈಧವ್ಯದೀಕ್ಷೆಯನ್ನು ಕೊಡುವ ಶಕ್ತಿಯುಳ್ಳವನೂ ಆದ ಅರಿಕೇಸರಿಗೆ ಸಮಾನರಾದವರಾರು? ಕುರುಡ ದೊರೆಯೇ ನಿನ್ನ ಮಗನನ್ನು ಈ ಜೂಜಿನ ಕಾರ್ಯದಿಂದ ನಿವಾರಿಸುವವನಾಗು’. ೨. ಅರ್ಜುನನ ತೋಳಿನ ಬಲವು ಶರಣಾಗತರನ್ನು ರಕ್ಷಿಸಿತು. ಬಲಿಷ್ಠರಾದ ಶತ್ರುರಾಜರಿಗೆ ಕಾಲಾಗ್ನಿಯಾಯಿತು. ಭೂಮಿಗೆ ರಕ್ಷಣೆಯಾಯಿತು. ಅವನ ಬಾಹುಬಲವು ಇಂತಹುದು ಎಂದು ತಿಳಿದೂ ಹುಚ್ಚ! ಅರ್ಜುನನಲ್ಲಿ ಹಗೆಗೊಳ್ಳುತ್ತೀಯಾ? ವ|| ಎಂದು ಎಷ್ಟೋ ರೀತಿಯಲ್ಲಿ ಸಾರಿ ಸ್ಪಷ್ಟವಾಗಿ ಕೋಪದಿಂದಲೂ ಬಲಾತ್ಕಾರದಿಂದಲೂ ಭೀಷ್ಮರು ಹೇಳಿದರು. ಧೃತರಾಷ್ಟ್ರನು ಮಗನ ಹತ್ತಿರಕ್ಕೆ ಬಂದು ಗದರಿಸಿ ಬಯ್ದು ಹೇಳಿ ಏನೂ ಮಾಡಿದರೂ ಒಪ್ಪಿಸಲಾಗಲಿಲ್ಲ. ಧರ್ಮರಾಜನು (ಸಾಮಾನ್ಯವಾಗಿ) ತಲೆತಗ್ಗಿಸುವವನಲ್ಲವಾದರೂ ತನಗುಂಟಾದ ಸೋಲಿನಲ್ಲಿ ತಲೆತಗ್ಗಿಸಿ ನಾಚಿಕೆಯಿಂದ ಪಗಡೆಯಾಟವಾಡಿ- ೩. ಭಯಂಕರವಾದ (ತುಂಟಾದ) ಆನೆಗಳನ್ನೂ ಶ್ರೇಷ್ಠರಾದ ದಾಸಿಯರನ್ನೂ ಕುಟುಂಬಗಳನ್ನೂ ಬೆಲೆಯಿಲ್ಲದ ವಸ್ತುಗಳನ್ನೂ ಸೋತನು. ಜೂಜಿನಾಟವನ್ನು ಆ ಆಟಕ್ಕೆ ನಿಲ್ಲಿಸಿದರು. ವ|| ಹಾಗೆ ನಿಲ್ಲಿಸಿದರೂ ದುರ್ಯೋಧನನು ನಿಲ್ಲಿಸಲು ಇಷ್ಟಪಡದೆ ಪದಾರ್ಥಗಳನ್ನು ತೋರಿಸಿಯೂ ಒತ್ತೆಗಳನ್ನು ಕೂಗಿ ಹೇಳುತ್ತಲೂ ಆಡಿ ಎನ್ನಲು ಬೇರೆ ಉಪಾಯವಿಲ್ಲದೆ ಧರ್ಮರಾಜನು ‘ನಾವು ಆಳುತ್ತಿರುವ ರಾಜ್ಯವೇ ಒತ್ತೆ’ಯೆಂದೊಡನೆಯೇ ಯೋಚನೆಮಾಡಿ ಗೆದ್ದ ಬಳಿಕ (ಇದನ್ನು) ಈ ಮುದಿಕಣ್ಗಳು ಪುನ ಹಿಂದಕ್ಕೆ ಕೊಡಿಸಿಬಿಡುತ್ತಾರೆಂಬ ಯೋಚನೆಯಿಂದಲೂ ಅರ್ಜುನಭೀಮನಕುಳರು ಸೆಳೆದುಕೊಳ್ಳುತ್ತಾರೆಂಬ ಸಂದೇಹದಿಂದಲೂ ದುರ್ಯೋಧನನು (ಧರ್ಮರಾಜನನ್ನು ಕುರಿತು) ಹಾಗಲ್ಲ ನಿನ್ನ ಮಾತಿನಲ್ಲಿ ನಂಬಿಕೆಯಿಲ್ಲದಿಲ್ಲ. ಆದರೂ ವರ್ಷದ ಕಾಲನಿರ್ದಿಷ್ಟವಾದಲ್ಲದೆ ನಿನ್ನ ಭೂಮಿಯನ್ನು ಒತ್ತೆಯಾಗಿ ಸ್ವೀಕರಿಸುವುದಿಲ್ಲ ಎನ್ನಲು ಧರ್ಮರಾಜನು ‘ಹನ್ನೆರಡು ವರ್ಷದವರೆಗೆ ನಾಡನ್ನು ಪ್ರವೇಶಮಾಡದೆ ಕಾಡಿನಲ್ಲಿರುತ್ತೇವೆ. ಒಂದು ವರ್ಷ ಅಜ್ಞಾನತವಾಸ ಮಾಡುತ್ತೇವೆ. ಆ ಅಜ್ಞಾತವಾಸವೆಂಬ ಒಂದು ವರ್ಷದಲ್ಲಿ ಯಾರಾದರೂ ತಿಳಿದರಾದರೆ ಪುನ ಹನ್ನೆರಡು ವರ್ಷದವರೆಗೆ ರಾಜ್ಯದ ಕಡೆಗೆ ನೋಡುವುದಿಲ್ಲ. ಒಂದು ಹಲಗೆ(ಆಟ)

ಕಂ|| ಆ ಪಲಗೆಯುಮಂ ಸೋಲ್ತು ಮ
ಹೀಪತಿ ಚಲದಿಂ ಬೞಕ್ಕೆ ಸೋಲ್ತಂ ಗಡಮಾ|
ದ್ರೌಪದಿಯುಮನೇನಾಗದೊ
ಪಾಪದ ಫಳಮೆಯ್ದೆವಂದ ದೆವಸದೊಳಾರ್ಗಂ|| ೪

ವ|| ಅಂತು ದುರ್ಯೋಧನನಜಾತಶತ್ರುವಿನ ಸರ್ವಸ್ವಮೆಲ್ಲಮಂ ಗೆಲ್ದು ಗೆಲ್ದ ಕಸವರ ಮೆಲ್ಲಂ ಬಂದುದು ಪಾಂಚಾಳರಾಜತನೂಜೆ ಯೊರ್ವಳ್ ಬಂದಳಿಲ್ಲಾಕೆಯಂ ತನ್ನಿಮೆಂದು ಯುಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನಱದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ ದುಶ್ಶಾಸನನುಮಂ ಪೇೞ್ದೊಡವಂದಿರಾಗಳೆ ಬೀಡಿಂಗೆವರಿದು ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆನೆಯುಮೊತ್ತಂಬದಿಂದೊಳಗಂ ಪೊಕ್ಕು ಪಾಂಚಾಳಿಯಂ ಕಣ್ಗಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು-

ಮ|| ಮನದೊಳ್ ನೊಂದಮರಾಪಗಾಸುತ ಕೃಪ ದ್ರೋಣಾದಿಗಳ್ ಬೇಡವೇ
ಡೆನೆಯುಂ ಮಾಣದೆ ತೋೞ್ತೆ ತೊೞ್ತುವೆಸಕೆಯ್ ಪೋ ಪೋಗು ನೀನೆಂದು ಬ|
ಯ್ದೆನಿತಾನು ತೆಱದಿಂದಮುಟ್ಟುದುವರಂ ಕೆಯ್ವಂದು ದುಶ್ಶಾಸನಂ
ತನಗಂ ಮೆಲ್ಲನೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣೆಯಾ|| ೫

ವ|| ಅಂತು ಕೃಷ್ಣೆಯ ಕೃಷ್ಣಕಬರೀಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಣೋರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ ದುಶ್ಶಾಸನನುಮಂ ಕಣ್ಕೆತ್ತಿ ಕಿಱುನಗೆ ನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು ಕಣ್ಗಳಿಂ ನೆತ್ತರ್ ತುಳುಂಕೆ-

ಉ|| ಕೋಪದ ಪೆರ್ಚಿನೊಳ್ ನಡುಗುವೂರುಯುಗಂ ಕಡುಪಿಂದರಲ್ವ ನಾ
ಸಾಪುಟಮೆಕ್ಕೆಯಿಂ ಪೊಡರ್ವ ಪುರ್ವು ಪೊದಳ್ದ ಲಯಾಂತಕ ತ್ರಿಶೂ|
ಲೋಪಮ ಭೀಷಣ ಭ್ರುಕಟಿ ಮುನ್ನಮೆ ರೌದ್ರ ಗದಾಯುಧಂಬರಂ
ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ|| ೬

ಯಲ್ಲಿಯೇ ಗೆಲುವು ಸೋಲುಗಳನ್ನು ನಿಷ್ಕರ್ಷಿಸೋಣ’ ಎಂದು ಹೇಳಿ ರಾಜ್ಯವನ್ನು ಒತ್ತೆಯಿಟ್ಟು ಆಡಿ ೪. ಆ ಹಲಗೆಯನ್ನೂ ಸೋತನು. ಧರ್ಮರಾಜನು ಅಷ್ಟಕ್ಕೇ ಬಿಡದೆ ಬಳಿಕ ಹಟದಿಂದ ದ್ರೌಪದಿಯನ್ನೂ ಸೋತನು. ಪಾಪದ ಫಲ ಕೂಡಿಬಂದ ದಿವಸ ಯಾರಿಗೆ ಏನು ತಾನೇ ಆಗುವುದಿಲ್ಲ. ವ|| ಹಾಗೆ ದುರ್ಯೋಧನನು ಶತ್ರು ಹುಟ್ಟದೆಯೇ ಇರುವ (ಸರ್ವಸಖನಾದ) ಯುಷ್ಠಿರನ ಸರ್ವಸ್ವವನ್ನೂ ಗೆದ್ದು, ಗೆದ್ದ ಬೆಲೆಯುಳ್ಳ ವಸ್ತುಗಳೆಲ್ಲವೂ ಬಂದುವು. ದ್ರೌಪದಿಯೊಬ್ಬಳು ಮಾತ್ರ ಬಂದಿಲ್ಲ. ಆಕೆಯನ್ನು ತನ್ನಿಯೆಂದು ಧರ್ಮರಾಜನು ಕೊಟ್ಟ ಸತ್ಯವಾಕ್ಕಿನ ಬಲದಿಂದಲೇ ತನಗೆ ಆಜ್ಞೆಗೆ ಕೇಡಿಲ್ಲವೆಂದು ತಿಳಿದು ಉತ್ತಮವಲ್ಲದ ತುಂಟಾಟವಾಡಲು (ಚೇಷ್ಟೆ ಮಾಡಲು) ಯೋಚಿಸಿ ಕರ್ಣನ ಸೇವಕನಾದ ಪ್ರಾತಿಕಾಮಿಯೆಂಬುವನಿಗೂ ತನ್ನ ತಮ್ಮನಾದ ದುಶ್ಶಾಸನನಿಗೂ ಆಜ್ಞೆ ಮಾಡಿದನು. ಅವರು ಆಗಲೇ ಅವಳ ಅಂತಪುರಕ್ಕೆ ಓಡಿಹೋಗಿ ‘ರಸಜ್ವಲೆಯಾಗಿದ್ದೇನೆ ಮುಟ್ಟಕೂಡದು’ ಎಂದರೂ ಬಲಾತ್ಕಾರದಿಂದ ಒಳಗೆ ಪ್ರವೇಶಿಸಿ ದ್ರೌಪದಿಯನ್ನು ಭಯಪಡುವಂತೆ ಗದರಿಸಿ ಅವಳ ತುರುಬನ್ನು ಹಿಡಿದು ಆ ಮನೆಯ ಮಧ್ಯಭಾಗದಿಂದ ದುರ್ಯೋಧನನ ಸಭಾಮಂದಿರದ ಮಧ್ಯಭಾಗಕ್ಕೆ ಸೆಳೆದು ತಂದರು. ೫. ಭೀಷ್ಮಕೃಪ ದ್ರೋಣಾದಿಗಳು ಮನಸ್ಸಿನಲ್ಲಿ ದುಖಪಟ್ಟು ಬೇಡಬೇಡವೆಂದರೂ ಬಿಡದೆ ‘ದಾಸಿ, ನಡೆ, ನೀನು ತೊತ್ತಿನ ಕೆಲಸಮಾಡು ಹೋಗು, ಹೋಗು’ ಎಂದು ಎಷ್ಟೋ ರೀತಿಯಲ್ಲಿ ಬಯ್ದು ಉಟ್ಟ ಸೀರೆಯವರೆಗೆ ಕೈಹಾಕಿ ತನಗೆ ಮೃತ್ಯು ಸಮೀಪವಾಗಿರಲು ದುಶ್ಶಾಸನನು ದ್ರೌಪದಿಯ ತುರುಬನ್ನು ಹಿಡಿದು ಸೆಳೆದನು. ವ|| ಹಾಗೆ ದ್ರೌಪದಿಯ ಕಪ್ಪಾದ ಮುಡಿಯ ಗಂಟನ್ನು ನೀಚವಾದ ರೀತಿಯಲ್ಲಿ ಹಿಡಿದು ಸೆಳೆದು ಕಾಳಸರ್ಪವನ್ನು ಹಿಡಿದ ಪೆಚ್ಚನಂತೆ ಸುಮ್ಮನೆ ಬೆವರುತ್ತಿದ್ದ ದುಶ್ಶಾಸನನೂ ಕಣ್ಸನ್ನೆಮಾಡಿ (ಹಾಸ್ಯದಿಂದ) ಹುಸಿನಗೆನಗುವ ಅಹಿತರ ಮುಖವನ್ನೂ ತಮ್ಮಣ್ಣನ ಖಿನ್ನವಾದ ಮುಖವನ್ನೂ ಭೀಮನು ನೋಡಿದನು. ಕಣ್ಣಿನಲ್ಲಿ (ಕೋಪದಿಂದ) ರಕ್ತವು ತುಳುಕಿತು. ೬. ಕೋಪದ ಆಕ್ಯದಿಂದ ಎರಡು ತೊಡೆಗಳೂ ನಡುಗಿದುವು. ವೇಗದಿಂದ (ಭಯಂಕರವಾಗಿ) ಮೂಗಿನ ಹೊಳ್ಳೆಗಳು ಅರಳಿದುವು. ಪ್ರಳಯಕಾಲದ ಯಮನ ತ್ರಿಶೂಲಕ್ಕೆ ಸಮಾನವೂ ಭಯಂಕರವೂ ಆದ ಹುಬ್ಬು ಗಂಟಿಕ್ಕಿತು. ಮೊದಲೇ ಭಯಂಕರವಾದ ಭೀಮಸೇನನ ಅಗುಳಿಯಂತಿರುವ ತೋಳುಗಳು ಗದೆಯ ಕಡೆ ತಿರುಗಿ

ಮ|| ನೆಲನಂ ನುಂಗುವ ಮೇರುವಂ ಪಿಡಿದು ಕೀೞುಶಾಗಜೇಂದ್ರಂಗಳಂ
ಚಲದಿಂ ಕಟ್ಟುವ ಸಪ್ತ ಸಪ್ತಿಯನಿಳಾಭಾಗಕ್ಕೆ ತರ್ಪೊಂದು ತೋ|
ಳ್ವಲಮುಂ ಗರ್ವಮುಮುಣ್ಮಿ ಪೊಣ್ಮೆ ಮನದೊಳ್ ಕೋಪಾಗ್ನಿ ಕೆಯ್ಗಣ್ಮಿ ಕ
ಣ್ಮಲರೊಳ್ ಬಂದಿರೆ ನೋಡಿದಂ ಕಲುಷದಿಂ ಗಾಂಡೀವಿ ಗಾಂಡೀವಮಂ|| ೭

ಕಂ|| ಪ್ರಕುಷಿತ ಮೃಗಪತಿ ಶಿಶು ಸ
ನ್ನಿಕಾಶರತಿ ವಿಕಟ ಭೀಷಣ ಭ್ರೂ ಭಂಗರ್|
ನಕುಲ ಸಹದೇವರಿರ್ವರು
ಮಕಾಲ ಕಾಲಾಗ್ನಿರೂಪಮಂ ಕೆಯ್ಕೊಂಡರ್|| ೮

ವ|| ಅಂತು ವಿಳಯಕಾಲಜಳನಿಗಳಂತೆ ಮೇರೆದಪ್ಪಲ್ ಬಗೆದ ತನ್ನ ನಾಲ್ವರ್ ತಮ್ಮಂದಿರ ಮುನಿದ ಮೊಗಮಂ ಕಂಡು ತನ್ನ ನುಡಿದ ನನ್ನಿಯ ಕೇಡಂ ಬಗೆದರೆಂದು ಕಟಾಕ್ಷ ವಿಕ್ಷೇಪದಿಂ ಬಾರಿಸೆ-

ಮ|| ಅನಿತೊಂದುರ್ಕಿನೊಳುರ್ಕಿ ಕೌರವ ಖಳರ್ ಪಾಂಚಾಳರಾಜಾತ್ಮಜಾ
ನನ ಪದ್ಮಗ್ಲಪನೈಕ ಕಾರಣಪರರ್ ತಾಮಾಗೆಯುಂ ಮತ್ತಮ|
ಣ್ಣನ ಕಣ್ಸನ್ನೆಗೆ ವಿಱಲಣ್ಮದೆ ಸಮಂತಿರ್ದರ್ ಪೃಥಾಪುತ್ರರಂ
ತಿನಿತೊಂದಾದೊಡಮೇಂ ಮಹಾಪುರುಷರಾಜ್ಞಾಲಂಘನಂಗೆಯ್ವರೇ|| ೯

ವ|| ಆಗಳ್ ದ್ರೌಪದಿ ತನ್ನ ಕೇಶಪಾಶಮಂ ದುಶ್ಶಾಸನಂ ಪಿಡಿದು ತೆಗೆದನೆಂಬ ಸಿಗ್ಗಗ್ಗಳಂ ಪೆರ್ಚೆ ಸಭೆಯೊಳಿಂತೆಂದಳ್-

ಕಂ|| ಮುಡಿಯಂ ಪಿಡಿದೆೞೆದವನಂ
ಮಡಿಯಿಸಿ ಮತ್ತವನ ಕರುಳ ಪಿಣಿಲಿಂದೆನ್ನಂ|
ಮುಡಿಯಿಸುವಿನೆಗಂ ಮುಡಿಯಂ
ಮುಡಿಯೆಂ ಗಡ ಕೇಳಿವಿಗಳಾನ್ ನುಡಿ ನುಡಿದೆಂ|| ೧೦

ವ|| ಎಂಬುದುಂ ಭೀಮಸೇನನಾ ಮಾತಂ ಕೇಳ್ದು ಸೈರಿಸಲಾಱದೆ-

ಉ|| ಆಱದ ಕೋಪ ಪಾವಕನಿನಣ್ಣನ ನನ್ನಿಯನಿಲ್ಲಿ ವಿಱುವೆಂ
ವಿನೆನುತ್ತುಮಿರ್ಪ ಪದದಲ್ಲಿಯೆ ನೋಡೆ ಮರುಳ್ಗೆ ಧೂಪಮಂ|
ತೋಱದ ಮಾೞ್ಕೆಯಿಂ ದ್ರುಪದರಾಜಸುತಾ ವಚನಂಗಳಲ್ಲಿ ಮೆ
ಯ್ದೋ ಮರುತ್ಸುತಂ ನುಡಿದನಾ ಸಭೆಯೊಳ್ ನವ ಮೇಘನಾದದಿಂ|| ೧೧

ಶತ್ರುಗಳ (ಕತ್ತನ್ನು ಹಿಡಿಯುವಂತಾಯಿತು). ೭. ಭೂಮಿಯನ್ನು ನುಂಗುವ, ಮೇರುಪರ್ವತವನ್ನು ಹಿಡಿದು ಕೀಳುವ, ದಿಗ್ಗಜಗಳನ್ನು ಹಟದಿಂದ ಕಟ್ಟುವ, ಸೂರ್ಯನನ್ನು ಭೂಭಾಗಕ್ಕೆ ತರುವ, ಬಾಹುಬಲವೂ ಅಹಂಕಾರವೂ ಚಿಮ್ಮಿ ಹೊಮ್ಮಲು ಕೋಪದ ಬೆಂಕಿಯು ಮಿತಿಮೀರಿ ಹೂವಿನಂತಿದ್ದ ಕಣ್ಣಿನಲ್ಲಿ ಬಂದಿರಲು ಅರ್ಜುನನು ಕೋಪದಿಂದ ತನ್ನ ಗಾಂಡೀವವನ್ನು ನೋಡಿದನು. ೮. ವಿಶೇಷವಾಗಿ ಕೋಪಗೊಂಡಿರುವ ಸಿಂಹದ ಮರಿಗೆ ಸಮಾನರೂ ಅತ್ಯಂತ ವಿಕಟವೂ ಭಯಂಕರವೂ ಹುಬ್ಬಿನ ಗಂಟುಳ್ಳವರೂ ಆದ ನಕುಲ ಸಹದೇವರಿಬ್ಬರೂ ಅಕಾಲದಲ್ಲಿ ಬರುವ ಪ್ರಳಯಾಗ್ನಿರೂಪವನ್ನು ತಾಳಿದರು. ವ|| ಹಾಗೆ ಪ್ರಳಯಕಾಲದ ಸಮುದ್ರಗಳ ಹಾಗೆ ಎಲ್ಲೆಮೀರಲು ಯೋಚಿಸಿದ ತನ್ನ ನಾಲ್ಕು ತಮ್ಮಂದಿರ ಕೋಪಗೊಂಡ ಮುಖಗಳನ್ನು ನೋಡಿ ಧರ್ಮರಾಜನು ತಾನಾಡಿದ ಸತ್ಯದ ಕೇಡನ್ನು ಯೋಚಿಸಿದ್ದಾರೆಂದು ತಿಳಿದು ಕಣ್ಸನ್ನೆಯಿಂದಲೇ ನಿವಾರಿಸಿದನು. ೯. ಅಷ್ಟೊಂದು ಗರ್ವದಲ್ಲಿ ಉಬ್ಬಿ ದುಷ್ಟಕೌರವರು ದ್ರೌಪದಿಯ ಮುಖಕಮಲವು ಬಾಡುವುದಕ್ಕೆ ಮುಖ್ಯ ಕಾರಣರಾದರೂ ಅಣ್ಣನಾದ ಧರ್ಮರಾಜನ ಕಣ್ಸನ್ನೆಗೆ ಮೀರಲು ಸಮರ್ಥರಾಗದೆ ಪಾಂಡವರು ಸುಮ್ಮನೆ ಶಾಂತಿಯಿಂದಿದ್ದರು. ಮಹಾಪುರುಷರಾದವರು ಹಿರಿಯರ ಆಜ್ಞೆಯನ್ನು ದಾಟುತ್ತಾರೆಯೇ? ವ|| ಆಗ ದುಶ್ಶಾಸನನು ತನ್ನ ಕೂದಲಿನ ಗಂಟನ್ನು ಹಿಡಿದು ಸೆಳೆದನೆಂಬ ನಾಚಿಕೆಯು ವಿಶೇಷವಾಗಿ ಹೆಚ್ಚಲು ದ್ರೌಪದಿಯು ಸಭೆಯಲ್ಲಿ ಹೀಗೆಂದಳು.

೧೦. ಮುಡಿಯನ್ನು ಹಿಡಿದೆಳೆದವನನ್ನು ಕೊಂದು ಅವನ ಕರುಳಿನ ಜಡೆಯಿಂದ (ಸಮೂಹ) ನನ್ನ ಮುಡಿಯನ್ನು ಮುಡಿಯಿಸುವವರೆಗೂ ಆ ಮುಡಿಯನ್ನು ಪುನ ಮುಡಿಯುವುದಿಲ್ಲ; ಕೇಳಿ, ನೀವೆಲ್ಲ ಕೇಳಿ ನಾನು ಪ್ರತಿಜ್ಞೆ ಮಾಡಿದ್ದೇನೆ ಎಂದಳು. ವ|| ಭೀಮಸೇನನು ಆ ಮಾತನ್ನು ಕೇಳಿ ಸೈರಿಸಲಾರದೆ- ೧೧. ಕಡಿಮೆಯಾಗದ ಕೋಪಾಗ್ನಿಯಿಂದ ಅಣ್ಣನ ಸತ್ಯವಾಕ್ಕನ್ನು ಮೀರಲೇ ಬೇಡವೇ ಎನ್ನುತ್ತಿದ್ದ ಸಮಯದಲ್ಲಿಯೇ ಮರುಳಿಗೆ ಧೂಪವನ್ನು ತೋರಿಸಿದ ರೀತಿಯಿಂದ ದ್ರೌಪದಿಯ ಮಾತುಗಳು ಅಲ್ಲಿ ಕಾಣಿಸಿಕೊಳ್ಳಲು ಭೀಮಸೇನನು

ಮ|| ಮುಳಿಸಿಂದಂ ನುಡಿದೊಂದು ನಿನ್ನ ನುಡಿ ಸಲ್ಗಾರಾಗದೆಂಬರ್ ಮಹಾ
ಪ್ರಳಯೋಲ್ಕೋಪಮ ಮದ್ಗದಾಹತಿಯಿನತ್ಯುಗ್ರಾಜಿಯೊಳ್ ಮುನ್ನವಿ|
ಖಳ ದುಶ್ಶಾಸನನಂ ಪೊರಳ್ಚಿ ಬಸಿಱಂ ಪೋೞಕ್ಕಿ ಬಂಬಲ್ಗರು
ಳ್ಗಳಿನಾನಲ್ತೆ ವಿಳಾಸದಿಂ ಮುಡಿಯಿಪಂ ಪಂಕೇಜಪತ್ರೇಕ್ಷಣೇ|| ೧೨

ಮ||ಸ್ರ|| ಕುಡಿವೆಂ ದುಶ್ಶಾಸನೋರಸ್ಥಳಮನಗಲೆ ಪೋೞುರ್ದು ಕೆನ್ನೆತ್ತರಂ ಪೊ
ಕ್ಕುಡಿವೆಂ ಪಿಂಗಾಕ್ಷನೂರುದ್ವಯಮನುರು ಗದಾಘಾತದಿಂ ನುಚ್ಚು ನೂಱು|
ಗೊಡೆವೆಂ ತದ್ರತ್ನ ರಶ್ಮಿ ಪ್ರಕಟ ಮಕುಟಮಂ ನಂಬು ನಂಬೆನ್ನ ಕಣ್ಣಿಂ
ಕಿಡಿಯುಂ ಕೆಂಡಂಗಳುಂ ಸೂಸಿದಪುವಹಿತರಂ ನೋಡಿ ಪಂಕೇಜವಕ್ತ್ರೇ|| ೧೩

ಮ|| ಮುಳಿಸಂ ಮಾಡಿಯುಮೇವಮಂ ಪಡೆದುಮಿನ್ನೀ ಪಂದೆಗಳ್ ಪ್ರಾಣದಿಂ
ದೊಳರಿನ್ನುಂ ತಲೆ ಮತ್ತಮಟ್ಟೆಗಳ ಮೇಲಿರ್ದಪ್ಪುವೆಂದಂತೆ ದಲ್|
ಮುಳಿಸಿಲ್ಲಣ್ಣನ ನನ್ನಿಯೆಂಬುದನೆ ಪೇೞೇವೇೞ್ದುವಿ ಕೌರವ
ರ್ಕಳನುಂತಿನ್ನೆಗಮುರ್ಚಿ ಮುಕ್ಕದೆ ಸಡಿಲ್ದೀ ಭೀಮನೇಂ ಮಾಣ್ಗುಮೇ|| ೧೪

ವ|| ಎಂದು ಪಾಂಚಾಳರಾಜತನೂಜೆಯ ಮನಮನಾ ನುಡಿದು ಮತ್ತಮಿಂತೆಂದಂ-

ಮ|| ಸುರಸಿಂಧುಪ್ರಿಯಪುತ್ರ ಕೇಳ್ ಕಳಶಜಾ ನೀಂ ಕೇಳ್ ಕೃಪಾ ಕೇಳ ಮಂ
ದರದಿಂದಂಬುಯಂ ಕಲಂಕಿದಸುರಪ್ರಧ್ವಂಸಿವೋಲ್ ಬಾಹುಮಂ||
ದರದಿಂ ವೈರಿಬಲಾಬ್ಧಿ ಘೂರ್ಣಿಸೆ ಬಿಗುರ್ತೀ ಕೌರವರ್ ಕೂಡೆ ನೂ
ರ್ವರುಮಂ ಕೊಲ್ವೆನಿದೆನ್ನ ಪೂಣ್ಕೆ ನುಡಿದೆಂ ನಿವಿ ಸಭಾಮಧ್ಯದೊಳ್|| ೧೫

ವ|| ಎಂದು ವಿಳಯಕಾಳಜಳಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊೞಗಿದಂತಾನುಂ ಗಜಱ ಗರ್ಜಿಸಿ ನುಡಿದು ಮಹಾಪ್ರತಿಜ್ಞಾರೂಢನಾದ ಭೀಮಸೇನನ ನುಡಿಯಂ ಕೇಳ್ದು ಕೌರವರ್ ಕಡಲ ನಡುವಣ ಪರ್ವತದಂತಳ್ಳಾಡೆ ಕುರುವೃದ್ಧನುಂ ಬುದ್ಧಿವೃದ್ಧನುಮಪ್ಪ ಗಾಂಗೇಯ ಧೃತರಾಷ್ಟ್ರಂಗಿಂತೆಂದಂ-

ಆ ಸಭೆಯಲ್ಲಿ ಹೊಸಗುಡುಗಿನ ಶಬ್ದದಿಂದ ಹೇಳಿದನು. ೧೨. ಕೋಪದಿಂದ ನೀನು ಆಡಿದ ಮಾತು ಸಲ್ಲಲಿ, ಯಾರು ಬೇಡವೆನ್ನುತ್ತಾರೆ. ಮಹಾಪ್ರಳಯಕಾಲದ ಉಲ್ಕೆಗೆ (ಬೆಂಕಿಯ ಕೊಳ್ಳಿ) ಸಮಾನವಾದ ನನ್ನ ಗದೆಯ ಪೆಟ್ಟಿನಿಂದ ಅತಿಭಯಂಕರವಾದ ಯುದ್ಧದಲ್ಲಿ ಮೊದಲು ದುಶ್ಶಾಸನನನ್ನು ಹೊರಳಿಸಿ ಹೊಟ್ಟೆಯನ್ನು ಸೀಳಿ ಹೆಣೆದುಕೊಂಡಿರುವ ಕರುಳಿನಿಂದ ಎಲೌ ಕಮಲದಳದ ಹಾಗೆ ಕಣ್ಣುಳ್ಳ ದ್ರೌಪದಿಯೇ ವೈಭವದಿಂದ ನಾನೇ ಮುಡಿಯಿಸುತ್ತೇನಲ್ಲವೇ? ೧೩. ದುಶ್ಶಾಸನನ ಎದೆಯನ್ನು ಅಗಲವಾಗಿ ಹೋಳುಮಾಡಿ ರಕ್ತವನ್ನು ಕುಡಿಯುತ್ತೇನೆ. ಮೇಲೆಬಿದ್ದು ದುರ್ಯೋಧನನ ಎರಡುತೊಡೆಗಳನ್ನೂ ಶ್ರೇಷ್ಠವಾದ ನನ್ನ ಗದೆಯ ಪೆಟ್ಟಿನಿಂದ ಒಡೆಯುತ್ತೇನೆ. ರತ್ನಕಾಂತಿಗಳಿಂದ ಪ್ರಕಾಶವಾದ ಅವನ ಕಿರೀಟವನ್ನು ನುಚ್ಚುನೂರಾಗುವಂತೆ ಪುಡಿಮಾಡುತ್ತೇನೆ. ದ್ರೌಪದಿ ಈ ನನ್ನ ಮಾತನ್ನು ನಂಬು, ನಂಬು; ಶತ್ರುಗಳನ್ನು ನೋಡಿ ನನ್ನ ಕಣ್ಣಿನಿಂದ ಕಿಡಿಯೂ ಕೆಂಡಗಳೂ ಚೆಲ್ಲುತ್ತಿವೆ. ೧೪. ನಮಗೆ ಇಷ್ಟು ಕೋಪವನ್ನುಂಟುಮಾಡಿದರೂ ದುಖವನ್ನು ಬರಿಸಿಯೂ ಇನ್ನೂ ಈ ಹೇಡಿಗಳು ಜೀವದಿಂದಿದ್ದಾರೆ. ಇನ್ನೂ ಅವರ ತಲೆಗಳು ಅವರು ಮುಂಡಗಳ ಮೇಲಿವೆ ಎನ್ನುವುದು ಕೋಪವಿಲ್ಲವೆಂದೇ ಅರ್ಥಮಾಡುವುದಿಲ್ಲವೇ? ಅಣ್ಣನ ಸತ್ಯವೆಂಬುದೊಂದು ಇಲ್ಲದಿದ್ದರೆ ಏನು ಹೇಳಿದರೂ ಈ ಕೆರಳಿದ ಭೀಮನು ಇಷ್ಟು ಹೊತ್ತಿಗೆ ಸುಲಿದು ಬಾಯಿಗೆ ಹಾಕಿಕೊಳ್ಳದೆ ಬಿಡುತ್ತಿದ್ದೇನೆ? ವ|| ಎಂದು ದ್ರೌಪದಿಯ ಮನಸ್ಸಮಾಧಾನವಾಗುವ ಹಾಗೆ ನುಡಿದು ಪುನ ಹೀಗೆಂದನು- ೧೫. ಭೀಷ್ಮರೇ ಕೇಳಿ, ದ್ರೋಣರೇ ಕೇಳಿ, ಕೃಪರೇ ಕೇಳಿ, ಮಂದರಪರ್ವತದಿಂದ ಕ್ಷೀರಸಮುದ್ರವನ್ನು ಕಲಕಿದ ನಾರಾಯಣನ ಹಾಗೆ ನನ್ನ ತೋಳೆಂಬ ಮಂದರದಿಂದ ಘೋಷಿಸುತ್ತಿರುವ ಶತ್ರುಸೇನಾಸಮುದ್ರವನ್ನು ಕಡೆದು ಮದಿಸಿರುವ ಈ ನೂರು ಕೌರವರನ್ನೂ ಒಟ್ಟಿಗೆ ಕೊಲ್ಲುತ್ತೇನೆ. ನಿಮ್ಮ ಈ ಸಭೆಯ ಮಧ್ಯದಲ್ಲಿ ಈ ನನ್ನ ಪ್ರತಿಜ್ಞೆಯನ್ನು ತಿಳಿಸಿದ್ದೇನೆ. ವ|| ಎಂದು ಪ್ರಳಯಕಾಲದ ಸಮುದ್ರಘೋಷದಂತೆ ಪರ್ವತವು ಅಪ್ಪಳಿಸಿದ ಭೂಮಿಯ ಗುಡುಗಿನಂತೆ ಆರ್ಭಟಿಸಿ ಗರ್ಜನೆಮಾಡಿ ನುಡಿದು ಮಹಾಪ್ರತಿಜ್ಞೆಯನ್ನು ಅಂಗೀಕರಿಸಿದ ಭೀಮಸೇನನ ಮಾತನ್ನು ಕೇಳಿ ಕೌರವರು ಸಮುದ್ರಮಧ್ಯದ ಪರ್ವತದಂತೆ ನಡುಗಿದರು. ಕೌರವರಲ್ಲಿ

ಚಂ|| ಭರತ ಯಯಾತಿ ಕುತ್ಸ ಪುರುಕುತ್ಸ ಪುರೂರವರಿಂದಮಿನ್ನೆಗಂ
ಪರಿವಿಡಿಯಿಂದೆ ಬಂದ ಶಶಿವಂಶಮದೀಗಳಿವಂದಿರಿಂದೆ ನಿ|
ತ್ತರಿಸುವುದಕ್ಕುಮೆಂದೆ ಬಗೆದಿರ್ದೊಡೆ ಕೀಲೊಳೆ ಕಿಚ್ಚು ಪುಟ್ಟಿ ಭೋ
ರ್ಗರೆದುರಿದಂತೆ ನಿನ್ನ ಮಗನಿಂದುರಿದತ್ತಿದನಾರೊ ಬಾರಿಪರ್|| ೧೬

ವ|| ಎಂದೞಲ್ದು ಧೃತರಾಷ್ಟ್ರನೊಳ್ ನುಡಿಯೆ ಕುಂಭಸಂಭವಾಶ್ವತ್ಥಾಮ ಕೃಪ ವಿದುರಾದಿಗಳ್ ನೀಮೆನಿತು ನುಡಿದೊಡಮಾನೆಯ ಕೋಡು ಬಾಗದೆಂಬಂತೆ ದುರ್ಯೋಧನನುದ್ವೃತ್ತತೆಯುಮಂ ಭೀಮಸೇನನ ಮಹಾಪ್ರತಿಜ್ಞೆಯುಮನಾರ್ಗಂ ಬಾರಿಸಲ್ಬಾರದು ಕೆಯ್ಗೞದ ಮನೆವಾೞ್ತೆ ಬುದ್ಧಿವೇೞಲೆಡೆಯಿಲ್ಲ ತಾಮುಂ ತಾಮುಮಱವರ್ ಬನ್ನಿಮೆಂದು ನಿಜನಿವಾಸಂಗಳ್ಗೆ ಪೋದರಾಗಳ್ ಭೀಮಸೇನಂ ಧರ್ಮಪುತ್ರಂಗೆಂದನುಪ್ಪಿಕ್ಕಿದೊಡೆ ತುಪ್ಪದ ಮೆಳ್ಪಡಿತೆಂಬಂತೆ ನಮ್ಮ ಕೆಮ್ಮನಿರ್ಪಿರವಿದೇ ಕಾರಣಂ ಬನ್ನಿ ಪೋಪಮೆಂದರಮನೆಯಂ ಪೊಱಮಟ್ಟು ಬರೆ ಧೃತರಾಷ್ಟ್ರಂ ದುರ್ಯೋಧನನೇಗೆಯ್ದುಮೊಡಂಬಡಿಸಲಾಱದಿರೆಯುಂ ದ್ರೌಪದಿ ಪರಸ್ತ್ರೀಯಂ ನಮ್ಮ ಮನೆಯೊಳಿರಿಸುವುದು ಚಿತಮಲ್ಲೆಂದು ಕೞಪಿದೊಡೆ ಪಾಂಚಾಳರಾಜತನೂಜೆವೆರಸು ಬಿನ್ನ ಬಿನ್ನನೆ ಪೊೞಲಂ ಪೊಱಮಡೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಸೈರಿಸಲಾಱದೆ ತಮ್ಮೊಳಿಂತೆಂದರ್-

ಕಂ|| ಏದೊರೆಯಂ ಯಮನಂದನ
ನೇದೊರೆಯಂ ಭೀಮಸೇನನೇದೊರೆಯಂ ಕಂ|
ಜೋದರನ ಮೈದುನಂ ತಾ
ಮೇದೊರೆಯರಮಳ್ಗಳವರ್ಗವಿ ಯಿರವಾಯ್ತೇ|| ೧೭

ಜೂದಾಡಿ ಸೋಲ್ತು ನನ್ನಿಗೆ
ಮೇದಿನಿಯಂ ಕೊಟ್ಟು ಪಾಂಡುನಂದನರೀಗಳ್|
ಪೋದೊಡಮೇನ್ ತಿಣುಕಾಗದೆ
ಪೋದಪುದೇ ನಮ್ಮ ನೃಪತಿಗವು ತವುದಲೆಯೊಳ್|| ೧೮

ಜೂದಿನ ಗೆಲ್ಲದೊಳಾದೀ
ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದು|
ಜ್ಜೋದನನದೇನದೇಂ ಮರು
ಳಾದನೊ ಬಡಿಗಂಡನಿಲ್ಲ ಪಾಲನೆ ಕಂಡಂ|| ೧೯

ಹಿರಿಯನೂ ಆದ ಭೀಷ್ಮನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು. ೧೬. ಭರತ ಯಯಾತಿ ಕುತ್ಸ ಪುರೂರವರಿಂದ ಹಿಡಿದು ಇಲ್ಲಿಯವರೆಗೂ ಕ್ರಮವಾಗಿ ನಡೆದುಬಂದ ಚಂದ್ರವಂಶವು ಈಗ ಈ ಕೌರವರಿಂದ ಮುಂದೆ ಅಭಿವೃದ್ಧಿಯಾಗುತ್ತದೆ ಎಂದು ಯೋಚಿಸುತ್ತಿರಲು ಅದಕ್ಕೆ ವಿರೋಧವಾಗಿ ಕೀಲಿನಲ್ಲಿಯೇ ಬೆಂಕಿಹುಟ್ಟಿ ಶಬ್ದಮಾಡಿ ಉರಿಯುವ ಹಾಗೆ ನಿನ್ನ ಮಗನಿಂದ ನಮ್ಮ ವಂಶವೇ ಸುಟ್ಟು ಹೋಗುತ್ತದೆ. ಇದನ್ನು ನಿವಾರಿಸುವವರು ಯಾರಿದ್ದಾರೆ? ವ|| ಎಂದು ದುಖಿಸಿ ಧೃತರಾಷ್ಟ್ರನಲ್ಲಿ ಹೇಳಲು, ದ್ರೋಣ ಅಶ್ವತ್ಥಾಮ ಕೃಪವಿದುರರೇ ಮೊದಲಾದವರು ನೀವೆಷ್ಟು ಹೇಳಿದರೂ ಆನೆಯ ಕೊಂಬು ಬಗ್ಗುವುದಿಲ್ಲ ಎನ್ನುವ ಹಾಗೆ ದುರ್ಯೋಧನನ (ಕೆಡೆದು ನಿಲ್ಲುವಿಕೆ) ತುಂಟತನವನ್ನೂ ಭೀಮನ ಮಹಾಪ್ರತಿಜ್ಞೆಯನ್ನೂ ಯಾರಿಗೂ ತಪ್ಪಿಸಲಾಗುವುದಿಲ್ಲ ; ಕೈಮೀರಿದ ಮನೆವಾರ್ತೆಗೆ ಬುದ್ಧಿಹೇಳಲು ಅವಕಾಶವಿಲ್ಲ; ಅವರವರೇ ತಿಳಿಯಲಿ ಬನ್ನಿ ಎಂದು ತಮ್ಮ ಮನೆಗಳಿಗೆ ಹೋದರು. ಆಗ ಭೀಮಸೇನನು ಧರ್ಮರಾಜನಿಗೆ ಹೇಳಿದನು. ಉಪ್ಪನ್ನು ಬಡಿಸಿದರೆ ತುಪ್ಪಕ್ಕೆ ಮೋಸ ಎನ್ನುವ ಹಾಗೆ ನಾವು ಸುಮ್ಮನಿರುವುದರಿಂದ ಏನು ಪ್ರಯೋಜನ, ಬನ್ನಿ ಹೋಗೋಣ ಎಂದು ಅರಮನೆಯಿಂದ ಹೊರಟರು. ಧೃತರಾಷ್ಟ್ರನು ದುರ್ಯೋಧನನನ್ನು ಏನು ಮಾಡಿಯೂ ಒಪ್ಪಿಸಲಾರದಿದ್ದರೂ ಪರಸ್ತ್ರೀಯಾದ ದ್ರೌಪದಿಯನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವುದು ಯೋಗ್ಯವಲ್ಲವೆಂದು ಕಳುಹಿಸಿದನು. ದ್ರೌಪದಿಯೊಡನೆ ಪಾಂಡವರು ದುಖದಿಂದ ಪಟ್ಟಣವನ್ನು ಬಿಟ್ಟು ಹೊರಟರು. ಪಟ್ಟಣದ ಜನರೆಲ್ಲರೂ ಒಟ್ಟುಗೂಡಿ ಅವರು ಆ ಸ್ಥಿತಿಯಲ್ಲಿ ಹೋಗುತ್ತಿರುವುದನ್ನು ನೋಡಿ ದುಖಪಟ್ಟು ಹೀಗೆಂದರು- ೧೭. ಧರ್ಮರಾಜನೆಂತಹವನು-ಭೀಮಸೇನೆಂತಹವನು, ಕೃಷ್ಣನ ಮೈದುನನಾದ ಅರ್ಜುನನು ಎಂಥವನು; ಅವಳಿಗಳಾದ ನಕುಲಸಹದೇವರೆಂಥವರು. ಅವರಿಗೂ ಈ ಸ್ಥಿತಿಯಾಯ್ತೆ? ೧೮. ಜೂಜಾಡಿ ಸೋತು ಸತ್ಯಕ್ಕಾಗಿ ರಾಜ್ಯವನ್ನು ಕೊಟ್ಟು ಪಾಂಡವರು ಹೋದರೇನು? ರಾಜನಾದ ದುರ್ಯೋಧನನಿಗೆ ಕೊನೆಯಲ್ಲಿ ಇದು ಸ್ಪಷ್ಟವಾಗದೆ ಹೋಗುತ್ತದೆಯೇ? ೧೯. ಜೂಜಿನ ಗೆಲುವಿನಿಂದ ಬಂದ ಈ ರಾಜ್ಯವನ್ನು ನೋಡಿ ಮುಂದಾಗುವ ಕಾರ್ಯವನ್ನು ಕಾಣದೆ ದುರ್ಯೋಧನನು ಅದೇತಕ್ಕೆ ಅತ್ಯಂತ ಹುಚ್ಚನಾದ? ಮೇಲೆತ್ತಿದ

ಎನಿತಾನುಮಂದದಿಂ ಜೂ
ದನಿಕ್ಕೆಯುಂ ದ್ರುಪದಸುತೆಯನೆೞೆದುಯ್ಯೆಯುಮಿಂ|
ತಿನಿತೊಂದಾದುದು ದುಶ್ಶಾ
ಸನನಿಂದಂ ಶಕುನಿಯೆಂಬ ಬೆಳ್ಪೊಱಸಿಂದಂ|| ೨೦

ವ|| ಎಂದಿರ್ದರಿರ್ದಲ್ಲಿಯೆ ತಂತಮ್ಮ ಕಂಡುದನೆ ನುಡಿಯೆಯುಂ ಕೆಲರವರ ಪೋಗಿಂಗೞಲ್ದು ಕಣ್ಣ ನೀರನಿಕ್ಕೆಯುಂ ಕೆಲರ್ ಪರಸಿ ಸೇಸೆಯನಿಕ್ಕೆಯುಂ ಪೊೞಲಂ ಪೊಱಮಟ್ಟು ಪುರದ ಬಾಹಿಗೆಯನೆಯ್ದುವಾಗಳ್ ಗಾಂಗೇಯ ದ್ರೋಣ ಕೃಪ ವಿದುರಾದಿಗಳ್ ಕೊಂತಿವೆರಸೆಯ್ದೆವಂದು ಕಿಱದತರಮಂ ಕಳಿಪುತ್ತುಂ ಬರೆ ಧರ್ಮಪುತ್ರನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಮೆಂದೊಡನಿಬರುಂ ಮನಂ ಬಂಸಿದ ಮೋಹದಿಂ ಗೞಗೞನೆ ಕಣ್ಣ ನೀರ್ಗಳಂ ಸುರಿದು-

ಚಂ|| ಪುಗುವುದರಣ್ಯಮಿರ್ಪಿರವು ಪನ್ನೆರಡಬ್ದಮದಲ್ಲದಲ್ಲಿ ಕೋ
ೞಗದ ವನೇಚರಾಪರ ದಾಯಿಗರತ್ತಣಿನಪ್ಪಪಾಯ ಕೋ|
ಟಿಗೆ ಪವಣಿಲ್ಲ ಕಲ್ಪಿಗೆಡೆಯಾವುದೊ ಪಾೞಯ ಬಟ್ಟೆದಪ್ಪಿ ಮುಂ
ನೆಗೞ್ದೆಡೆಯಿಲ್ಲ ಪೋಗು ಜಯಮಕ್ಕೆ ಶುಭಂ ನಿಮಗಕ್ಕೆ ಮಂಗಳಂ|| ೨೧

ವ|| ಎಂದೊಡಲ್ಲಿರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕೆಯಾಗಿಯುಂ ಪಾೞಗೆ ಗೆಂಟಾಗಿಯುಂ ನೆಗೞ್ವಮಲ್ಲೆಂದು ಪೊಡವಟ್ಟು ಕೊಂತಿಯಂ ವಿದುರನ ಮನೆಯೊಳಿರಲ್ವೇೞ್ದು ಸುಭದ್ರೆಯನಭಿಮನ್ಯುವರೆಸು ನಾರಾಯಣನಲ್ಲಿಗೆ ದ್ವಾರಾವತಿಗೆ ಕಳಿಪಿ ನಿಜ ಪರಿಜನಂಬೆರಸು ಗಂಗೆಯಂ ಪಾಯ್ದದಱ ಪಡುವಣ ದೆಸೆಯ ಕಾಮ್ಯಕವನದ ಬಟ್ಟೆಯಂ ತಗುಳ್ದು ಪೋಗೆ ವೋಗೆ-

ಚಂ|| ದೆಸೆ ಪಸುರೇಱ ಪಚ್ಚೆಯೊಳೆ ಮುಚ್ಚಿ ಮುಸುಂಕಿದ ಮಾೞ್ಕೆಯಾದುದಾ
ಗಸಮಳಿ ನೀಳ ನೀಳ ಗಳಕಂಠ ತಮಾಳ ವಿನೀಳನೀರದ|
ಪ್ರಸರ ವಿಭಾಸಿಯಾದುದು ಸವಿರನುದಾರ ಕದಂಬ ಕೇತಕೀ
ಪ್ರಸರ ರಜಸ್ವರ ಪ್ರಕಟ ಪಾಂಸುಳಮಾದುದು ಮೇಘಕಾಲದೊಳ್|| ೨೨

ಚಂ|| ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂ
ತರಮೆಸೆದೊಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಮೊ|
ಪ್ಪಿರೆ ಪೊಸ ವೇಟಕಾಱರೆರ್ದೆಗಳ್ ಪೊಸ ಕಾರ ಪೊಡರ್ಪುಗಂಡದೇಂ
ಕರಿತುವದೇಂ ಕಲಂಕಿದುವದೇಂ ಕುೞಗೊಂಡುವದೇಂ ಕನಲ್ದುವೋ|| ೨೩

ಕೊಡಚಿ (ಬಡಿ)ಯನ್ನು ಕಾಣದೆ ಹಾಲನ್ನು ಮಾತ್ರ ಕಂಡನಲ್ಲ. ೨೦. ವಿವಿಧರೀತಿಯಲ್ಲಿ ಜೂಜನ್ನಾಡಿಸಿದುದೂ ದ್ರೌಪದಿಯನ್ನು ಎಳೆದು ಸೆಳೆದುದೂ ಇವೆಲ್ಲ ಆ ದುಶ್ಶಾಸನನಿಂದ ಮತ್ತು ಶಕುನಿಯೆಂಬ ಬುದ್ಧಿಯಿಲ್ಲದ ಪೊರಸಿನಿಂದ ಉಂಟಾಯಿತು. ವ|| ಎಂದು ಇದ್ದವರು ಇದ್ದ ಕಡೆಯಲ್ಲಿಯೇ ತಾವು ತಾವು ನೋಡಿದುದನ್ನು ನುಡಿಯುತ್ತಿದ್ದರು. ಕೆಲವರು ಪಾಂಡವರು ಹಾಗೆ ಹೋಗುತ್ತಿರುವುದನ್ನು ನೋಡಿ ಅತ್ತು ಕಣ್ಣೀರನ್ನು ಸುರಿಸಿದರು. ಮತ್ತೆ ಕೆಲವರು ಹರಸಿ ಅಕ್ಷತೆಯನ್ನಿಕ್ಕಿದರು. ಪಟ್ಟಣವನ್ನು ಬಿಟ್ಟು ಹೊರಟು ಹೊರಭಾಗವನ್ನು ಸೇರುವಾಗ ಭೀಷ್ಮ ದ್ರೋಣ ಕೃಪ ವಿದುರರೇ ಮೊದಲಾದವರು ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು ಧರ್ಮರಾಜನು ‘ನಮಗೆ ಯೋಗ್ಯವಾದ ಉಪದೇಶಮಾಡಿ ಹಿಂತಿರುಗಿ’ ಎಂದನು. ಅವರೆಲ್ಲರೂ ಆಕರ್ಷಿತರಾಗಿ ಮನಸ್ಸಿನ ಪ್ರೀತಿಯಿಂದ ಗಳಗಳನೆ ಕಣ್ಣೀರನ್ನು ಸುರಿಸಿದರು. ೨೧. ನೀವು ಪ್ರವೇಶಮಾಡಬೇಕಾಗಿರುವುದು ಕಾಡು, ಇರಬೇಕಾದ ಕಾಲ ಹನ್ನೆರಡುವರ್ಷ; ಅದಲ್ಲದೆಯೂ ಅಲ್ಲಿ ಕ್ರೂರಮೃಗಗಳ, ಬೇಡನಾಯಕರ, ದಾಯಾದಿಗಳ ಕಡೆಯಿಂದ ಬರುವ ಅಪಾಯ ಸಮೂಹಕ್ಕೆ ಅಳತೆಯೇ ಇಲ್ಲ; ಬುದ್ಧಿ ಹೇಳುವುದಕ್ಕೆ ಅವಕಾಶವೆಲ್ಲಿದೆ? ಧರ್ಮಮಾರ್ಗವನ್ನು ಬಿಟ್ಟು ನೀವು ಇದುವರೆಗೆ ನಡೆದ ಸಂದರ್ಭವೇ ಇಲ್ಲ ; ಧರ್ಮರಾಜ! ನಿನಗೆ ಶುಭವಾಗಲಿ ಮಂಗಳವಾಗಲಿ ಹೋಗಿಬಾ ಎಂದು ಆಶೀರ್ವದಿಸಿದರು. ವ|| ಧರ್ಮರಾಜನು ‘ನಾವು ಅಲ್ಲಿದ್ದರೂ ನಿಮ್ಮ ಮನಸ್ಸಿಗೆ ಅಸಹ್ಯವಾಗುವ ಹಾಗೆಯೂ ಧರ್ಮಕ್ಕೆ ದೂರವಾಗಿಯೂ ನಡೆಯುವವರಲ್ಲ’ ಎಂದು ಹೇಳಿ ನಮಸ್ಕಾರ ಮಾಡಿ ಕುಂತಿಯನ್ನು ವಿದುರನ ಮನೆಯಲ್ಲಿರಹೇಳಿ ಸುಭದ್ರೆಯನ್ನು ಅಭಿಮನ್ಯುವಿನೊಡನೆ ದ್ವಾರಾವತಿಗೆ ಕೃಷ್ಣನ ಹತ್ತಿರಕ್ಕೆ ಕಳುಹಿಸಿ, ತಮ್ಮ ಪರಿವಾರದೊಡನೆ ಮುಂದಕ್ಕೆ ನಡೆದರು. ಗಂಗಾನದಿಯನ್ನೂ ದಾಟಿ ಅದರ ಪಶ್ಚಿಮದಿಕ್ಕಿನಲ್ಲಿರುವ ಕಾಮ್ಯಕವನದ ಮಾರ್ಗವನ್ನನುಸರಿಸಿ ಹೋದರು. ೨೨. ಮಳೆಗಾಲವು ಪ್ರಾರಂಭವಾಯಿತು. ದಿಕ್ಕುಗಳು (ಪಚ್ಚೆ ಪೈರುಗಳಿಂದ) ಹಸಿರುಹತ್ತಲು ಪಚ್ಚೆಯ ರತ್ನದಿಂದ ಹೊದಿಸಿದ ಹಾಗಾಯಿತು. ಆಕಾಶವು ದುಂಬಿಯಂತೆ ಶಿವನ ಕೊರಳಿನಂತೆ, ಹೊಂಗೆಯ ಮರದಂತೆ ಕಪ್ಪಗಿರುವ ಅತ್ಯಂತ ನೀಲ ಬಣ್ಣದ ಮೋಡಗಳ ಸಮೂಹದಿಂದ ಪ್ರಕಾಶಮಾನವಾಯಿತು. ಗಾಳಿಯು ವಿಸ್ತಾರವಾಗಿ ಹಬ್ಬಿರುವ ಕದಂಬ ಮತ್ತು ಕೇದಗೆ ಹೂವುಗಳ ಸಮೂಹದಿಂದ ಹೊರಗೆ ಚೆಲ್ಲುತ್ತಿರುವ ಪರಾಗದಿಂದ ಕೂಡಿದುದಾಯಿತು. ೨೩. ಕಪ್ಪಾಗಿರುವ ಮೋಡಗಳಿಂದ ಆಕಾಶವೊಪ್ಪಿರಲು ಹೆಣ್ಣುನವಿಲುಗಳಿಂದ ಕಾಡಿನ ಮಧ್ಯಭಾಗವ

ವ|| ಅದಲ್ಲದೆಯುಂ-

ಮ|| ಭವ ಲಾಲಾಟವಿಲೋಚನಾಗ್ನಿಶಿಖೆಯಿಂ ಬೆಂದಳ್ಕಿ ಮತ್ತಂ ಮನೋ
ಭವನೆೞ್ಚತ್ತೊಡೆ ಕಾಮಕಾಂತೆ ಬೞಯಂ ತನ್ನಿಚ್ಚೆಯಿಂ ಮೆಚ್ಚಿ ಬ|
ಣ್ಣವುರಂ ತೀವಿದ ಮಾೞ್ಕೆಯಾಯ್ತು ನವಿಲಿಂ ಕುಂದಂಗಳಿಂದಿಂದ್ರಗೋ
ಪವಿಳಾಸಂಗಳಿನಾಳಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ|| ೨೪

ಚಂ|| ಪೊಳೆವಮರೇಂದ್ರಗೋಪದ ಪಸುರ್ತೆವುಲ್ಗಳ ತಳ್ತ ಕಾರ್ಮುಗಿ
ಲ್ಗಳ ಕಿಱುಗೊಂಕುಗೊಂಕಿದ ಪೊನಲ್ಗಳ ಕೆಂಪು ಪಸುರ್ಪು ಕರ್ಪು ಬೆ|
ಳ್ಪೊಳಕೊಳೆ ಶಕ್ರ ಕಾರ್ಮುಕ ವಿಳಾಸಮನೇನೆರ್ದೆಗೊಂಡು ಬೇಟದ
ತ್ತಳಗಮನುಂಟುಮಾಡಿದುದೊ ಕಾಮನ ಕಾರ್ಮುಕದಂತೆ ಕಾರ್ಮುಕಂ|| ೨೫

ವ|| ಅಂತು ತಮಗಿದಿರಂ ಬರ್ಪಂತೆ ಬಂದ ಪಯೋಧರಕಾಲದೊಳೆರಡು ತಡಿಯುಮಂ ಪೊಯ್ದು ಪರಿವ ತೊಗಳುಮಂ ತೊವಲ್ತು ಸೊಗಯಿಸುವಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ ಬಲಿಗೆದಱದಂತೆ ಉಪಾಶ್ರಯಂಬಡೆದಳಂಕರಿಸುವಿಂದ್ರಗೋಪಂಗಳುಮಂ ಕಿಸುಗಾಡ ನೆಲಂಗಳೆಳೆದಳಿರ ಬಣ್ಣಮಂ ಕೆಯ್ಕೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು ತಮ್ಮ ಕಣ್ಗಂ ಮನಕಂ ಸೊಗಯಿಸೆ ಪಯಣಂಬಂದು ಕಾಮ್ಯಕವನಮಂ ಪುಗುತಂದರದೆಂತೆಂದೊಡೆ-

ಮ|| ದೆಸೆಗೆತ್ತಂ ಗಜಱುತ್ತುಮಿರ್ಪ ಪುಲಿಯಿಂ ನೀಳಾಭ್ರಮಂ ದಂತಿಗೆ
ತ್ತು ಸಿಡಿಲ್ದಾಗಸಕೆಯ್ದೆ ಪಾಯ್ವ ಪಲವುಂ ಸಿಂಗಂಗಳಿಂದೆತ್ತಗು|
ರ್ವಿಸಿ ಪಾಯ್ವರ್ವಿಗಳಿಂ ಮದಾಂಧ ವನಗಂಧೇಭಂಗಳಿಂ ಕಣ್ಗಗು
ರ್ವಿಸೆಯುಂ ಚಿತ್ತದೊಳಂದು ಕಾಮ್ಯಕವನಂ ಮಾಡಿತ್ತತಿ ಪ್ರೀತಿಯಂ|| ೨೬

ವ|| ಅಂತು ಸೌಮ್ಯಭಯಂಕರಾಕರಾಮಪ್ಪ ಕಾಮ್ಯಕವನಮಂ ಪುಗುತಂದಲ್ಲಿ ತದ್ವನಾಪತಿಯಪ್ಪ ದೈತ್ಯಂ ಕಿವಿರನವರಂ ಪುಗಲೀಯದಡ್ಡಮಾಗಿರೆ-

ಒಪ್ಪಿರಲು ಆಗತಾನೆ ಕಾಣುತ್ತಿರುವ ಮೊಳೆಹಲ್ಲುಗಳಿಂದ (ಹುಲ್ಲಿನ ಮೊಳಕೆಗಳಿಂದ) ಭೂಮಿಯು ಒಪ್ಪಿರಲು ಹೊಸ ಪ್ರಿಯಪ್ರೇಯಸಿಯರ ಹೃದಯವು ಹೊಸಮಳೆಗಾಲದ ವೈಭವವನ್ನು ನೋಡಿ ಅದೆಷ್ಟು ಕರ್ರಗಾದುವೋ, ಅದೆಷ್ಟು ಕೆರಳಿದುವೋ; ಅದೆಷ್ಟು ಗುಳಿಗೊಂಡವೋ! ವ|| ಅಷ್ಟೇ ಅಲ್ಲದೆ ೨೪. ಮಳೆಗಾಲದಲ್ಲಿ ಭೂಮಂಡಲವು ನವಿಲುಗಳಿಂದಲೂ ಮೊಲ್ಲೆಯ ಹೂವಿನಿಂದಲೂ ಮಿಂಚುಹುಳಗಳ ವಿಲಾಸದಿಂದಲೂ ಆಲಿಕಲ್ಲುಗಳ ಹರುಳುಗಳಿಂದಲೂ ಕೂಡಿರಲು ಈಶ್ವರನ ಹಣೆಗಣ್ಣಿನ ಬೆಂಕಿಯ ಜ್ವಾಲೆಯಿಂದ ಸತ್ತ ಮನ್ಮಥನು ಪುನ ಸಜೀವನಾಗಲು ಅದರಿಂದ ಸಂತೋಷಗೊಂಡ ಕಾಮನ ಸತಿಯಾದ ರತಿಯು ತನ್ನಿಷ್ಟಬಂದಂತೆ ನೆಲಕ್ಕೆ ಹಾಸಿದ ವಿವಿಧ ಬಣ್ಣದ ವಸ್ತ್ರದಂತೆ ಭೂಮಿಯು ಪ್ರಕಾಶಿಸಿತು. ೨೫. ಹೊಳೆಯುವ ಮಿಂಚುಹುಳುಗಳ, ಹಸುರಾದ ಎಳೆಯ ಹುಲ್ಲುಗಳ, ಒತ್ತಾಗಿರುವ ಕರಿಯಮೋಡಗಳ, ಕಿರಿಕಿರಿದಾಗಿ ವಕ್ರವಾಗಿ ಹರಿಯುವ ಪ್ರವಾಹಗಳ ಕೆಂಪು ಹಸುರು ಬಿಳುಪು ಬಣ್ಣಗಳು ಒಟ್ಟಾಗಿ ಸೇರಿ ಕಾಮನಬಿಲ್ಲಿನ ಸೌಂದರ್ಯವನ್ನೂ ಒಳಕೊಂಡಿರಲು ಮಳೆಗಾಲದ ಪ್ರವೇಶವು ಕಾಮನಬಿಲ್ಲಿನಂತೆಯೇ ಮನಸ್ಸನ್ನಾಕರ್ಷಿಸಿ ಪ್ರೇಮಾಕ್ಯವನ್ನುಂಟುಮಾಡಿತು. ವ|| ಹಾಗೆ ತಮಗೆ ಎದುರಾಗಿ ಬರುವಂತೆ ಬಂದ ಮಳೆಗಾಲದಲ್ಲಿ ಎರಡುದಡವನ್ನು ಘಟ್ಟಿಸಿ ಹರಿಯುವ ನದಿಗಳನ್ನೂ ಚಿಗುರಿ ಸೊಗಯಿಸುವ ಕಾಡುಗಳನ್ನೂ ಹಸುರುಬಟ್ಟೆಯನ್ನು ಹರಡಿದಂತೆ ಹಸುರಾದ ನೆಲದಲ್ಲಿ ಪದ್ಮರಾಗರತ್ನದ ಹರಳುಗಳನ್ನು ಚೆಲ್ಲಿದಂತೆ ಅವಲಂಬನವನ್ನು ಪಡೆದು ಅಲಂಕಾರವಾಗಿರುವ ಮಿಂಚುಹುಳುಗಳನ್ನೂ ಕೆಂಪಗಿರುವ ಕಾಡುಗಳ ನೆಲಗಳ ಎಲೆಯ ಚಿಗುರಿನ ಬಣ್ಣವನ್ನು ಹೊಂದಿ ವಿರಹಿಗಳ ಮನಸ್ಸನ್ನು ಕೆರಳಿಸುವಂತೆ ಜಲಜಲನೆ ಹರಿಯುವ ಝರಿಗಳ ಪ್ರವಾಹವನ್ನೂ ನೋಡಿ ಕಣ್ಣಿಗೂ ಮನಸ್ಸಿಗೂ ಆನಂದವಾಗಿರಲು ಪಾಂಡವರು ಪ್ರಯಾಣಮಾಡಿ ಕಾಮ್ಯಕವನವನ್ನು ಪ್ರವೇಶ ಮಾಡಿದರು. ಅದು ಹೇಗಿತ್ತೆಂದರೆ- ೨೬. ಎಲ್ಲ ದಿಕ್ಕುಗಳಲ್ಲಿಯೂ ಗರ್ಜಿಸುತ್ತಿರುವ ಹುಲಿಗಳಿಂದಲೂ ನೀಲಾಕಾಶವನ್ನು ಆನೆಯೆಂದು ಭ್ರಮಿಸಿ ಸಿಡಿದು ಆಕಾಶಕ್ಕೆ ವಿಶೇಷವಾಗಿ ಹಾರುವ ಹಲವು ಸಿಂಹಗಳಿಂದಲೂ ಎಲ್ಲೆಲ್ಲಿಯೂ ಭಯವನ್ನುಂಟುಮಾಡಿ ಹರಿಯುವ ಬೆಟ್ಟದ ಝರಿಗಳಿಂದಲೂ ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ ಕಾಮ್ಯಕವನವು ಕಣ್ಣಿಗೆ ಭಯವನ್ನುಂಟುಮಾಡಿದರೂ ಮನಸ್ಸಿಗೆ ಅತ್ಯಂತ ಪ್ರೀತಿಯನ್ನುಂಟುಮಾಡಿತು. ವ|| ಹಾಗೆ ಸೌಮ್ಯವೂ ಭಯಂಕರವೂ ಆದ ಕಾಮ್ಯಕವನವನ್ನು ಪ್ರವೇಶಿಸಲು ಆ ಕಾಡಿಗೆ ಒಡೆಯನಾದ ಕಿಮ್ಮೀರನೆಂಬ ರಾಕ್ಷಸನು

ಮ|| ಮಸಿಯಂ ಪುಂಜಿಸಿದಂತುಟಪ್ಪ ತನು ನೀಳಾಂಭೋಧರಂ ದಾಡೆಗಳ್
ಪೊಸ ಮಿಂಚುಗ್ರ ವಿಲೋಚನಂ ದಿವಿಜ ಗೋಪಂ ಕಾರೊ ಮೇಣ್ ಕಾಳ ರ|
ಕ್ಕಸನೋ ಪೇೞೆನೆ ಬಂದು ತಾಗೆ ಗದೆಯಂ ಕೊಂಡೆಯ್ದೆ ಭೀಮಂ ಸಿಡಿ
ಲ್ದು ಸಿಡಿಲ್ ಪೊಯ್ದವೊಲಾಗೆ ಪೊಯ್ವನಿಳೆಯೊಳ್ ಕಿವಿರನಂ ವೀರನಂ|| ೨೭

ವ|| ಅಂತು ಕಿವಿರನಂ ಕೊಂದು ಕಾಮ್ಯಕವನಮಂ ಪೊಕ್ಕು ತದ್ವನ ತಪೋಧನರ ಗೋಷ್ಠಿಯೊಳಮಾಟವಿಕರಟ್ಟಟ್ಟಿಯೊಳಂ ತಮಗಿಂದ್ರಪ್ರಸ್ಥದ ರಾಜ್ಯಶ್ರೀಯಂ ಮಸುಳಿಸೆ-

ಪಿರಿಯಕ್ಕರ|| ಪಿರಿಯ ಮರಂಗಳೆ ಮಾಡಮಾಗೆ ಪೊಳೆವೆಳದಳಿರ್ಗಳೆ ಸೆಜ್ಜೆಯಾಗೆ
ಪಿರಿಯ ಮಡುಗಳೆ ಮಜ್ಜನಮಾಗೆ ಪೊಸ ನಾರೆ ದೇವಾಂಗವಸ್ತ್ರಮಾಗೆ|
ಪರೆದ ತಱಗೆಲೆಯೆ ಪರಿಯಣಮಾಗೆ ಪಣ್ಪಲಮೆತ್ತಿದ ಬೋನಮಾಗೆ
ಸಿರಿಯ ಮಹಿಮೆಯಂ ಮೆಯಲೇನಾರ್ತುದೊ ಬನದೊಳಿರ್ಪಿರವಾ ಪಾಂಡವರಾ|| ೨೮

ಉ|| ಪಾಸ ಸಿಂಹಪೀಠಮಳಿನೀರುತಿ ಮಂಗಳಗೀತಿ ಭೂತಳಂ
ಪಾಸು ಮೃಗವ್ರಜಂ ಪರಿಜನಂ ಪೊದಲಗಸಾಲೆ ಮೊಕ್ಕಳಂ|
ಬೀಸುವ ಗಾಳಿ ಚಾಮರದ ಗಾಳಿಯೆನಲ್ ದೊರೆವೆತ್ತದೇಂ ಸುಖಾ
ವಾಸ ನಿಮಿತ್ತವಾಯ್ತೊ ವನವಾಸನಿವಾಸಮೆ ಪಾಂಡುಪುತ್ರರಾ|| ೨೯

ವ|| ಅಂತು ಕಾಮ್ಯಕವನದೊಳಯ್ದು ವರುಷಮಿರ್ದಾಱನೆಯ ವರುಷದೊಳದಱ ಕೆಲದೊಳೊಂದಿ ಸಂದಿಸಿ ಗಗನತಳಮಂ ತಱುಂಬುವಂತಿರ್ದ ಶಿಖರಿಶಿಖರಂಗಳಿಂದಂ ದೆಸೆಗಳಂ ತಡವರಿಸಿ ಕೊಳ್ವಂತೆ ಬಳ್ವವ ಬಳೆದು ಸೊಗಯಿಸುವ ಪೆರ್ಮರಂಗಳಿಂದಂ ವನಲಕ್ಷ್ಮಿಯ ಗೋಮಂಡಲದಂತಿರ್ದ ಕಡವಿ ಕಾಡೆರ್ಮೆಯ ಪಿಂಡುಗಳಿಂದಂ ದೆಸೆಗಳ್ಗೆ ಬೆರ್ಚಿ ಮೂಂಕಿಱದ ವನಮಹಿಷಿಗಳಿಂ ಮದಹಸ್ತಿಯಂತೆ ಮರವಾಯ್ವ ಪುಲಿಗಳಿನತಿ ಭಯಂಕರಾಕಾರಮಪ್ಪ ದ್ವೈತವನಕ್ಕೆ ಬಂದು ತದ್ವನೋಪಕಂಠವರ್ತಿಗಳಪ್ಪ ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗೆದು-

ಅವರು ಪ್ರವೇಶ ಮಾಡುವುದಕ್ಕೆ ಅವಕಾಶಕೊಡದೆ ತಡೆದನು. ೨೭. ಮಸಿಯನ್ನು ಒಟ್ಟುಗೂಡಿಸಿದ ಹಾಗಿದ್ದ ಅವನ ಶರೀರವೇ ಕರಿಯಮೋಡ, ಕೋರೆಹಲ್ಲುಗಳೇ ಮಿಂಚು, ಭಯಂಕರವಾದ ಕಣ್ಣುಗಳೇ ಮಿಂಚುಹುಳುಗಳು, ಇದು ಮಳೆಗಾಲವೋ ಕಾಳರಾಕ್ಷಸನೋ ಎನ್ನುವ ಹಾಗೆ ಬಂದು ಮೇಲೆ ಬೀಳಲು ಭೀಮನು ಗದೆಯನ್ನು ತೆಗೆದುಕೊಂಡು ವಿಶೇಷವಾಗಿ ಆರ್ಭಟಿಸಿ ಸಿಡಿಲುಹೊಡೆದ ಹಾಗೆ ವೀರನಾದ ಕಿಮ್ಮೀರನನ್ನು ಹೊಡೆದು ಭೂಮಿಯಲ್ಲಿ ಕೆಡವಿದನು. ವ|| ಹಾಗೆ ಕಿಮ್ಮೀರನನ್ನು ಕೊಂದು ಕಾಮ್ಯಕವನವನ್ನು ಪ್ರವೇಶಿಸಿ ಆ ಕಾಡಿನಲ್ಲಿದ್ದ ತಪಸ್ವಿಗಳ ಗುಂಪಿನಲ್ಲಿಯೂ ಅಲ್ಲಿಯ ಕಾಡುಜನರ ಸೇವೆಗಳಲ್ಲಿಯೂ ಸುಖದಿಂದಿದ್ದರು. ಅಲ್ಲಿಯ ಸೌಖ್ಯವು ಅವರಿಗೆ ಇಂದ್ರಪ್ರಸ್ಥದ ರಾಜ್ಯವೈಭವವನ್ನು ಮರೆಯಿಸಿತು. ೨೮. ದೊಡ್ಡಮರಗಳೇ ಹಾಸುಗೆಯಾದವು, ಆಳವಾದ ಮಡುಗಳೇ ಸ್ನಾನ(ಗೃಹ) ವಾದುವು ಹೊಸ ನಾರೆ ರೇಷ್ಮೆಯ ಬಟ್ಟೆಯಾಯಿತು. ಹರಡಿದ ತರಗೆಲೆಯೇ ಊಟದ ತಟ್ಟೆಯಾಯಿತು. ಹಣ್ಣು ಹಂಪಲುಗಳೇ ಶ್ರೇಷ್ಠವಾದ ಭೋಜನವಾಯಿತು. ಪಾಂಡವರ ವನವಾಸವೂ ಐಶ್ವರ್ಯದ ಮಹತ್ವವನ್ನು ಪ್ರಕಟಿಸಲು ಸಹಾಯಕವಾಯಿತು.

೨೯. ಹಾಸು ಬಂಡೆಯೇ ಸಿಂಹಾಸನ, ದುಂಬಿಯ ಧ್ವನಿಯೇ ಮಂಗಳವಾದ್ಯ, ಭೂಮಿಯೇ ಹಾಸಿಗೆ, ಮೃಗಗಳ ಸಮೂಹವೇ ಪರಿಹಾರ, ಹೊದರುಗಳೇ ಸಭಾಸ್ಥಾನ, ವಿಶೇಷವಾಗಿ ಬೀಸುವ ಗಾಳಿಯೇ ಚಾಮರದ ಗಾಳಿ ಎನ್ನುವ ಹಾಗಿರಲು ಪಾಂಡವರ ವನವಾಸವೇ ರಾಜ್ಯಭಾರಕ್ಕೆ ಸಮಾನವಾಗಿ ಅವರ ಸುಖಾವಾಸಕ್ಕೆ ಕಾರಣವಾಯಿತು. ವ|| ಪಾಂಡವರ ಹಾಗೆ ಕಾಮ್ಯಕವನದಲ್ಲಿ ಅಯ್ದು ವರ್ಷಗಳ ಕಾಲವಿದ್ದರು. ಆರನೆಯ ವರ್ಷದಲ್ಲಿ ಅದರ ಪಕ್ಕದಲ್ಲಿಯೇ ಸೇರಿಕೊಂಡು ಆಕಾಶಪ್ರದೇಶವನ್ನು ಅಟ್ಟಿಹೋಗುವ ಹಾಗಿದ್ದ ಶಿಖರಗಳನ್ನುಳ್ಳ ಬೆಟ್ಟಗಳಿಂದಲೂ ದಿಕ್ಕುಗಳನ್ನೂ ಹುಡುಕುವಂತೆ ಕೊಬ್ಬಿ ಬೆಳೆದು ಸೊಗಯಿಸುತ್ತಿರುವ ದೊಡ್ಡ ಮರಗಳಿಂದಲೂ ವನಲಕ್ಷ್ಮಿಯ ಗೋವುಗಳ ಗುಂಪಿನ ಹಾಗಿರುವ ಕಡವು ಮತ್ತು ಕಾಡುಕೋಣಗಳ ಹಿಂಡುಗಳಿಂದಲೂ ದಿಕ್ಕುದಿಕ್ಕುಗಳಲ್ಲಿ ಹೆದರಿ ವಾಸನೆ ನೋಡಲು ಮೂಗನ್ನು ಚಾಚುತ್ತಿರುವ ಕಾಡೆಮ್ಮೆಗಳಿಂದಲೂ ಮದ್ದಾನೆಯಂತೆ ಬಂದು ಮರಕ್ಕೆ ತಗಲುವ ಹುಲಿಗಳಿಂದಲೂ ಅತ್ಯಂತ ಭಯಂಕರವಾಗಿರುವ ದ್ವೆ ತವನಕ್ಕೆ ಬಂದು ಆ ವನದ ಸಮೀಪದಲ್ಲಿರುವ ತಪಸ್ವಿಗಳ ಆಶ್ರಮಗಳಲ್ಲಿ ವಿಶ್ರಮಿಸಿಕೊಳ್ಳಲು

ಮ|| ಪುಗಲಿಲ್ಲೀ ಬನಮಾರ್ಗಮಿಂಬು ನೆಲಸಲ್ ನಾರುಂಟುಡಲ್ ಮೆಲ್ಲೆ ಕೊಂ
ಬುಗಳೊಳ್ ಪಣ್ಪಲಮುಂಟು ವಿಯೆ ಕುಡಿಯಲ್ ನೀರುಂಟು ಪದ್ಮಾಕರಾ|
ಳಿಗಳೊಳ್ ತಣ್ಪುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನ
ನ್ನಿಗೆ ಬನ್ನಂ ಬರಲೀಯದೀ ಬನದೊಳಿರ್ದೇಂ ಕಾಲಮಂ ಪಾರೆವೇ|| ೩೦

ವ|| ಎಂದು ತಮ್ಮೊಳಯ್ವರುಮೇಕ ಕಾರ್ಯಾಳೋಚನಪರರಾಗಿ ದ್ವೈತವನದೊಳದ್ವೈತ ಸಾಹಸರಿರ್ಪನ್ನೆಗಮೊಂದು ದಿವಸಂ ದುರ್ಯೋಧನನ ಮಯ್ದುನಂ ಸಿಂಧುದೇಶಾಶ್ವರಂ ಸೈಂಧವನವರಂ ಛಿದ್ರಿಸಲೆಂದು ಮೆಯ್ಗರೆದು ಬಂದು-

ಮ|| ಮೃಗಯಾಕ್ರೀಡೆಗೆ ಪಾಂಡುರಾಜತನಯರ್ ಪೋಪನ್ನೆಗಂ ಬಂದು ತೊ
ಟ್ಟಗೆ ಪಾಂಚಾಳಿಯನೆತ್ತಿ ತನ್ನ ರಥದೊಳ್ ತಂದಿಟ್ಟುಕೊಂಡುಯ್ದನ|
ನ್ನೆಗಮಂತಾ ಪಡೆಮಾತುಗಳೇಳ್ದತಿಬಳರ್ ಭೀಮಾರ್ಜುನರ್ ಕಾಯ್ದು ಕೆ
ಯ್ಮಿಗೆ ಬೆನ್ನಂ ಪರಿದೆತ್ತ ಪೋಪೆಯೆಲವೋ ಪೋ ಪೋಗಲೆಂದೆಯ್ದಿದರ್|| ೩೧

ವ|| ಅಂತೆಯ್ದಿ ತದ್ಗದಾಘಾತದೊಳಂ ಬಾಣಪಾತದೊಳಮವನ ರಥಮಂ ಶತಚೂರ್ಣಂ ಮಾಡಿ ಜಯದ್ರಥನಂ ಕೋಡಗಗಟ್ಟುಗಟ್ಟಿ ಬೆನ್ನಂ ಬಿಲ್ಲ ಕೊಪ್ಪಿನೊಳಿಱದು ನಡೆಯೆಂದು ನಡೆಯಿಸಿ ಪಾಂಚಾಳಿಯಂ ಲೀಲೆಯಿಂದೊಡಗೊಂಡು ಬೀಡಿಂಗೆ ವಂದಿ ಧರ್ಮಪುತ್ರಂಗೆ ತೋಱದೊಡೆ-

ಕಂ|| ಲಾಕ್ಷಾಗೃಹಮಂ ಪುಗಿಸಲು
ಮಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಪಿಂ|
ಗಾಕ್ಷಂಗೆವೇೞ್ದು ಸೈರಿಸ
ದಾಕ್ಷೇಪದಿನೆಮ್ಮನಿಲ್ಲಿ ಛಿದ್ರಿಸ ಬಂದೈ|| ೩೨

ವ|| ಎಂದು ನಿನ್ನಂ ಪರಿಭವಕ್ಕೆ ತಂದು ನಿನ್ನ ಯಶಮಂ ಕಿಡಿಸಿದೆವಿನ್ ಕೊಂದೊಡೇವಂದಪುದೆಂದು ದುರ್ಯೋಧನನಲ್ಲಿಗೆ ಪೋಗೆಂದು ಕಟ್ಟಿದ ಕಟ್ಟುಗಳಂ ಬಿಟ್ಟು ಕಳೆದೊಡೆ ಜಯದ್ರಥಂ ಸಿಗ್ಗಾಗಿ ಕೈಲಾಸದೊಳೀಶ್ವರಂಗೆ ತಪಂಗೆಯ್ದು ಮೆಚ್ಚಿಸಿ ಪಾಂಡವರನೊಂದು ದೆವಸದನುವರದೊಳ್ ಗೆಲ್ವೆನಕ್ಕೆಂದು ಬರಂಬಡೆದು ಪೋದನಿತ್ತ ದುರ್ಯೋಧನಂ ಸಮಸ್ತಸಾಧನಸಹಿತನಾಗಿ ಕಾಡೊಳ್ ಬೇಡರಂತೆ ತೊೞಲ್ವ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಮೆನ್ನನವರಿಂ ನೋಡಿಸುವುದವಿಯೆರಡೆ ಸಂಸಾರಫಲಮೆಂದು ನಾಗಪುರದಿಂ ಪೊಱಮಟ್ಟು ದುಶ್ಶಾಸನಾದಿಗಳಪ್ಪ ನೂರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಮೆಂಬ ಬೇಟದರಸಿಯರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳುಮಶ್ವತ್ಥಾಮ ಕರ್ಣ ಶಲ್ಯ ಶಕುನಿ ಸೈಂಧವ ಪ್ರಮುಖನಾಯಕರುಂಬೆರಸು ಬೇಂಟೆಯ ನೆವದಿಂ ಬಂದು ದ್ವೈತವನದ ಕೆಲದ ನಂದನವನದೊಳ್ ಪಾಂಡವರ್ಗೆ ಸಮೀಪಮಾಗೆ ಬೀಡು ಬಿಟ್ಟು ಪಾಡಿಸುತ್ತುಂ ಪೊಗೞಸುತ್ತಮಿರ್ದನನ್ನೆಗಂ ಪಗೆಯಿಱಯಬಂದರ ಮೂಗನರಿದರೆಂಬಂತನಿಬರಂ ಬಾಯಂ ಬಿಟ್ಟು

ಯೋಚಿಸಿದರು. ೩೦. ಈ ವನವು ಮತ್ತಾರಿಗೂ ಪ್ರವೇಶಿಸಲಾಗುವುದಿಲ್ಲ ; ಇರುವುದಕ್ಕೆ ಸ್ಥಳಾವಕಾಶವೂ ಉಡಲು ನಾರೂ ಉಂಟು; ಊಟಮಾಡಲು ಕೊಂಬೆಗಳಲ್ಲಿ ಹಣ್ಣು ಹಂಪಲುವುಂಟು; ಸ್ನಾನಮಾಡಲೂ ಕುಡಿಯಲೂ ಕೊಳಗಳಲ್ಲಿ ನೀರುಂಟು; ಹೊಂಬಣ್ಣದ ಬಳ್ಳಿವನೆಗಳಲ್ಲಿ ತಂಪುಂಟು; ಈ ವನದಲ್ಲಿ ನಮ್ಮ ಸತ್ಯಪರಿಪಾಲನೆಗೆ ಭಂಗಬರುವುದಿಲ್ಲ. ಈ ವನದಲ್ಲಿಯೇ ಇದ್ದು ಕಾಲಯಾಪನೆ ಮಾಡಬಹುದಲ್ಲವೇ ಎಂದು ಯೋಚಿಸಿ ವ|| ಅಯ್ವರೂ ಏಕಾಭಿಪ್ರಾಯವಾಗಿ ಅದ್ವಿತೀಯ ಬಲಶಾಲಿಗಳಾದ ಅವರು ಆ

ದ್ವೆ ತವನದಲ್ಲಿ ತಂಗಿದರು. ಅಷ್ಟರಲ್ಲಿ ಒಂದು ದಿವಸ ದುರ್ಯೋಧನನ ಮೈದುನನೂ ಸಿಂಧುದೇಶಾಪತಿಯೂ ಆದ ಸೈಂಧವನು ಅವರನ್ನು ಭೇದಿಸಬೇಕೆಂದು (ರಹಸ್ಯವನ್ನು ತಿಳಿಯಲೆಂದು) ಮೈಮರೆಸಿಕೊಂಡು ಬಂದನು. ೩೧. ಆ ಪಾಂಡುಪುತ್ರರು ಬೇಟೆಗೆ ಹೋಗಿರುವ ಸಮಯವನ್ನೇ ನೋಡಿ ಬಂದು ಇದ್ದಕ್ಕಿದ್ದ ಹಾಗೆ ದ್ರೌಪದಿಯನ್ನೆತ್ತಿ ತನ್ನ ರಥದಲ್ಲಿಟ್ಟುಕೊಂಡು ಹೋದನು. ಅಷ್ಟರಲ್ಲಿ ಆ ಸಮಾಚಾರವನ್ನು ಕೇಳಿ ಬಹುಸಾಹಸಿಗಳಾದ ಭೀಮಾರ್ಜುನರ ಕೋಪವು ಮಿತಿಮೀರಿರಲು ಅವನ ಬೆನ್ನಿನ ಹಿಂದೆಯೇ ಓಡಿ ಎಲ್ಲಿಗೆ ಹೋಗುತ್ತೀಯೋ ಹೋಗಬೇಡ, ಹೋಗಬೇಡ (ನಿಲ್ಲು) ಎಂದು ಅವನನ್ನು ಸಮೀಪಿಸಿದರು. ವ|| ತಮ್ಮ ಗದೆಯ ಪೆಟ್ಟಿನಿಂದಲೂ ಬಾಣ ಪ್ರಯೋಗದಿಂದಲೂ ಅವನ ತೇರನ್ನು ನೂರು ಚೂರುಮಾಡಿ ಸೈಂಧವನನ್ನು ಕಪಿಯನ್ನು ಬಿಗಿಯುವಂತೆ ಬಿಗಿದು ಅವನ ಬೆನ್ನನ್ನು ಬಿಲ್ಲಿನ ತುದಿಯಿಂದ ತಿವಿದು ಗಾಯಮಾಡಿ ನಡೆ ಎಂದು ನಡೆಯಿಸಿ ದ್ರೌಪದಿಯೊಡನೆ ಬೀಡಿಗೆ ಬಂದು ಧರ್ಮರಾಜನಿಗೆ ತೋರಿದರು. ೩೨. ‘ಅರಗಿನ ಮನೆಯನ್ನು ಪ್ರವೇಶಮಾಡಿಸಲೂ ಪಗಡೆಯಾಟದಿಂದ ರಾಜ್ಯವನ್ನು ಕಸಿದುಕೊಳಲೂ ದುರ್ಯೋಧನನಿಗೆ ಪ್ರೇರೇಪಿಸಿ (ಅಷ್ಟಕ್ಕೇ) ತೃಪ್ತಿಪಡದೆ ನಮ್ಮನ್ನು ದೌಷ್ಟ್ಯದಿಂದ ಇಲ್ಲಿಯೂ ಭೇದಿಸಲು ಬಂದೆಯಾ?’ ವ|| ‘ನಿನ್ನನ್ನು ಅವಮಾನ ಪಡಿಸಿ ನಿನ್ನ ಯಶಸ್ಸನ್ನು ಕೆಡಿಸಿದೆವು. ಇನ್ನು ನಿನ್ನನ್ನು ಕೊಂದರೆ ಏನು ಬರುತ್ತದೆ’, ದುರ್ಯೋಧನನ ಹತ್ತಿರಕ್ಕೆ ಹೋಗಿ ಬದುಕು ಎಂದು ಕಟ್ಟಿದ್ದ

ನೋಡೆ ಮೂಗನರಿದರೆಂಬಂತನಿಬರಂ ಬಾಯಂ ನೋಡೆ ನೋಡೆ ಪೂರ್ವಜನ್ಮದ ಪಗೆ ಚಿತ್ರಾಂಗದನೆಂಬ ಗಂಧರ್ವನಱುವತ್ತು ಕೋಟಿ ಗಾಂಧರ್ವಬಲಂಬೆರಸು ಬಂದು ದುರ್ಯೋಧನ ದುಶ್ಶಾಸನರಿರ್ವರುಮಂ ಕೋಡಗಗಟ್ಟುಗಟ್ಟಿ-

ಚಂ|| ಮಿಡುಕದೆ ಭೀಷ್ಮ ನೋಡುತಿರು ಕುಂಭಜ ಸುರ್ಕಿರು ಕರ್ಣ ಮಿಕ್ಕು ಮಾ
ರ್ನುಡಿಯದೆ ಮೂಗುವಟ್ಟಿರು ಗುರು ಪ್ರಿಯನಂದನ ಕೂಗಡಂಗದಿ|
ರ್ದೊಡೆ ಬರ್ದುಕಾವುದಿರ್ ಪೊಡರ್ದೊಡೀಗಡೆ ಕೊಂದಪೆನೆಂದು ಕೂಡೆ ಕ
ಣ್ಗಿಡೆ ಜಡಿದುಯ್ದನಾ ಖಚರನಿರ್ವರುಮಂ ಪರಮಾಣುಮಾರ್ಗದಿಂ|| ೩೩

ವ|| ಅಂತುಯ್ವುದುಂ ನೆಗೞ್ತೆಯ ಬೀರರೆಲ್ಲಂ ಬಡವರ ಪಿತರರಂತೆ ಮಿಳ್ಮಿಳ ನೋಡುತ್ತಿರೆ ಮಿಕ್ಕುದುಂಡರಂತೆ ತಲೆಯಂ ಬಾಗಿ ಬಿಲ್ಗಳಂ ಮುಂದಿಟ್ಟು ಬಿಲ್ಲುಂ ಬೆಱಗುಮಾಗಿರೆ ಸುಯೋಧನನ ಮಹಾದೇವಿ ಭಾನುಮತಿ ಬಾಯೞದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲ ಮೇಲೆ ಕವಿದುಪಟ್ಟು-

ಕಂ|| ನೋಂತರ ಪಗೆವರನೆೞಱ
ದಂತಾಯ್ತೆಂದಿರದೆ ಪುರುಷಕಾರದ ಪೆಂಪಂ|
ಚಿಂತಿಸಿ ತರಿಸಿ ಮಹೀಶನ
ನೆಂತಪ್ಪೊಡಮೆನಗೆ ಪುರುಷಭಿಕ್ಷಮನಿಕ್ಕಿಂ|| ೩೪

ವ|| ಎಂದು ಪುಯ್ಯಲಿಡುವ ಭಾನುಮತಿಯ ಪುಯ್ಯಲಂ ಕೇಳ್ದು ಸುಯೋಧನಂ ಬಂದ ವೃತ್ತಾಂತಮನಱದು-

ಮ|| ಪಿರಿದುಂ ಕಾಯ್ಪಿನೊಳೆಯ್ದೆ ಕಾಯ್ವ ಸಮಕಟ್ಟಿಂ ದೋಷಮಲ್ತಕ್ಕ ಮ
ಚ್ಚರಮಂ ಮೋಘಮೊಡಂಬಡುಂ ಕಲುಷಮುಂ ಮುನ್ನುಳ್ಳುದಂತೆತ್ತಿಯುಂ|
ಪೊರೆಯುಂ ಪಂತಮುಮಿಲ್ಲದಂತೆ ಮನದೊಳ್ ನಿಷ್ಕಾರಣಂ ಕಾಯ್ವರಂ
ಪರ ಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ|| ೩೫

ಕಟ್ಟುಗಳನ್ನೆಲ್ಲ ಬಿಚ್ಚಿ ಕಳುಹಿಸಲು ಸೈಂಧವನು ನಾಚಿಕೆಗೊಂಡು ಕೈಲಾಸದಲ್ಲಿ ಈಶ್ವರನನ್ನು ಕುರಿತು ತಪಸ್ಸುಮಾಡಿ ಮೆಚ್ಚಿಸಿ ‘ಪಾಂಡವರನ್ನು ಒಂದು ದಿನದ ಯುದ್ಧದಲ್ಲಿಯಾದರೂ ಗೆಲ್ಲುವಂತಾಗಲಿ’ ಎಂದು ವರವನ್ನು ಪಡೆದು ಹೋದನು. ಈ ಕಡೆ ದುರ್ಯೋಧನನು ಕಾಡಿನಲ್ಲಿ ಬೇಡರಂತೆ ತೊಳಲುತ್ತಿರುವ ಜ್ಞಾತಿಗಳ ಬಾಡಿ ಕೃಶವಾದ ಮುಖಗಳನ್ನು ನೋಡುವುದೂ ವೈಭವಯುಕ್ತವಾದ ತನ್ನನ್ನು ಅವರಿಂದ ನೋಡಿಸುವುದೂ ಇವೆರಡೇ ಸಂಸಾರದ ಫಲವೆಂದು (ಭಾವಿಸಿ) ಸಮಸ್ತ ಸಲಕರಣೆಗಳೊಡನೆ ಹಸ್ತಿನಾಪುರದಿಂದ ಹೊರಟು ದುಶ್ಶಾಸನನೇ ಮೊದಲಾದ ನೂರ್ವರು ತಮ್ಮಂದಿರನ್ನೂ ಭಾನುಮತಿ ಮತ್ತು ಚಂದ್ರಮತಿ ಎಂಬ ಇಬ್ಬರು ಪ್ರೀತಿಪಾತ್ರರಾದ ರಾಣಿಯರನ್ನು ಲಕ್ಷಣನೇ ಮೊದಲಾದ ನೂರುಜನ ಮಕ್ಕಳನ್ನೂ ಭೀಷ್ಮ, ದ್ರೋಣ ಕೃಪ ವಿದುರ ಮೊದಲಾದ ಪ್ರಭೃತಿಗಳನ್ನೂ ಅಶ್ವತ್ಥಾಮ, ಕರ್ಣ, ಶಲ್ಯ, ಶಕುನಿ ಸೈಂಧವನೇ ಮೊದಲಾದ ನಾಯಕರನ್ನೂ ಕೂಡಿಬೇಟೆಯ ನೆಪದಿಂದ ಬಂದು ದ್ವೆ ತವನದ ಪಕ್ಕದ ನಂದನವನದೊಳಗೆ ಪಾಂಡವರಿಗೆ ಸಮೀಪವಾಗಿರುವ ಹಾಗೆ ಬೀಡು ಬಿಟ್ಟನು. ತನ್ನ ವೈಭವವನ್ನು ಹಾಡಿಸುತ್ತಲೂ ಹೊಗಳಿಸುತ್ತಲೂ ಇದ್ದನು. ಅಷ್ಟರಲ್ಲಿ ‘ಹಗೆಯನ್ನು ಕೊಲ್ಲಲು ಬಂದವರ ಮೂಗನ್ನು ಕತ್ತರಿಸಿದರು’ ಎಂಬಂತೆ ಎಲ್ಲರೂ ಆಶ್ಚರ್ಯದಿಂದ ಬಾಯಿಬಿಟ್ಟುಕೊಂಡು ನೋಡುತ್ತಿದ್ದ ಹಾಗೆಯೇ ಹಿಂದಿನ ಜನ್ಮದ ಶತ್ರುವಾದ ಚಿತ್ರಾಂಗದನೆಂಬ ಗಂಧರ್ವನು ಅರುವತ್ತು ಕೋಟಿ ಗಂಧರ್ವಸೈನ್ಯದೊಡನೆ ಕೂಡಿ ಬಂದು ದುರ್ಯೋಧನ ದುಶ್ಶಾಸನರಿಬ್ಬರನ್ನೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿದನು. ೩೩. ‘ಭೀಷ್ಮ ಅಳ್ಳಾಡದೆ ನೋಡುತ್ತಿರು, ದ್ರೋಣನೇ ಮುದುರಿಕೊಂಡಿರು; ಕರ್ಣನೇ ಮೀರಿ ಮಾತನಾಡದೆ ಮೌನವಾಗಿರು; ಅಶ್ವತ್ಥಾಮ ನಿನ್ನ ಕೂಗು ಅಡಗದಿದ್ದರೆ ನಿನಗೆ ಬದುಕುವುದೆಲ್ಲಿ ಬಂತು, ಸುಮ್ಮನಿರು; ಜಂಬಮಾಡಿದರೆ ಈಗಲೆ ಕೊಲ್ಲುತ್ತೇನೆ’ ಎಂದು ಅವರೆಲ್ಲರೂ ಹೆದರುವಂತೆ ಬೆದರಿಸಿ ಇಬ್ಬರನ್ನೂ ಆ ಚಿತ್ರಾಂಗದನು ಆಕಾಶಮಾರ್ಗದಿಂದ ಎತ್ತಿಕೊಂಡು ಹೋದನು. ವ|| ಹಾಗೆ ಎತ್ತಿಕೊಂಡು ಹೋಗಲು ಪ್ರಸಿದ್ಧರಾದ ವೀರರೆಲ್ಲ ಬಡವರ ತಂದೆಯರಂತೆ ಮಿಟಮಿಟನೆ ನೋಡುತ್ತಿದ್ದರು. ಎಂಜಲನ್ನು ತಿಂದವರಂತೆ ತಲೆಯನ್ನು ತಗ್ಗಿಸಿಕೊಂಡರು. ಬಿಲ್ಲುಗಳನ್ನು ತಮ್ಮ ಮುಂದಿಟ್ಟುಕೊಂಡು ಆಶ್ಚರ್ಯಚಕಿತರಾಗಿ ಏನು ಮಾಡಲೂ ತೋರದಿದ್ದರು, ದುರ್ಯೋಧನನ ಮಹಾರಾಣಿಯಾದ ಭಾನುಮತಿಯು ಅಳುತ್ತಲೂ ಅರಚುತ್ತಲೂ ಬಂದು ಧರ್ಮರಾಜನ ಕಾಲಿನ ಮೇಲೆ ಕವಿದು ಬಿದ್ದಳು. ೩೪. ‘ತಾನೇ ಕೊಲ್ಲಬೇಕೆಂದು ವ್ರತಮಾಡುತ್ತಿದ್ದವರ ಹಗೆಯನ್ನು ಎತ್ತು ಇರಿದ ಹಾಗಾಯ್ತು ಎಂದು ಸುಮ್ಮನಿರದೆ ಪುರುಷಪ್ರಯತ್ನದ ವೈಭವವನ್ನು ಯೋಚಿಸಿ ಹೇಗಾದರೂ ಮಹಾರಾಜನನ್ನು ತರಿಸಿ ನನಗೆ ಪುರುಷಭಿಕ್ಷೆಯನ್ನು ಕೊಡಿ’ ವ|| ಎಂದು ಕೂಗಿಕೊಳ್ಳುತ್ತಿರುವ ಭಾನುಮತಿಯ ಗೋಳನ್ನು ಕೇಳಿ ದುರ್ಯೋಧನನು ಬಂದ ಕಾರಣವನ್ನು ತಿಳಿದು ೩೫. ಈಗ ವಿಶೇಷವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ ತಾಯಿ! ಅಸೂಯೆಯೂ ವ್ಯರ್ಥವಾದ ತೊಂದರೆಯೂ

ವ|| ಎಂದು ತನ್ನೊಳೆ ಬಗೆದು ಭಾನುಮತಿಯನಿಂತೆಂದಂ-

ಮ|| ಸುರಿಯಲ್ಬೇಡಮದರ್ಕೆ ಬಾಷ್ಪಜಳಮಂ ನಿನ್ನಾಣ್ಮನಂ ನಿನ್ನೊಳಿಂ
ದಿರದಾಂ ಕೂಡುವೆವೆಮ್ಮೊಳಾದ ಕಲಹಕ್ಕೆಂತಾದೊಡಂ ಕೇಳ ನೂ|
ರ್ವರೆ ದಲ್ ಕೌರವರಾಮುಮಯ್ವರೆ ವಲಂ ಮತ್ತೊರ್ವರೊಳ್ ತೊಟ್ಟ ಸಂ
ಗರರಂಗಕ್ಕೆ ಜಸಕ್ಕೆ ಕೂಡುವೆಡೆಯೊಳ್ ನೂಱಯ್ವರಾವಲ್ಲವೇ|| ೩೬

ವ|| ಎಂದು ಯುಷ್ಠಿರಂ ಪಾೞಯ ಪಸುಗೆಯನಱದು ನುಡಿದೊಡಾ ಪೂಣ್ದ ಬೆಸನಂ ಕರಮಾಸೆವಟ್ಟು ತನ್ನ ಕೆಲದೊಳಿರ್ದ ಸಾಹಸಾಭರಣನ ಮೊಗಮಂ ನೋಡಿ-

ಕಂ|| ಪಿಡಿದುಯ್ದುದು ಗಂಧರ್ವರ
ಪಡೆ ಗಡ ನಿಮ್ಮಣ್ಣನಂ ಸುಯೋಧನನನಿದಂ|
ಕಡೆಗಣಿಸಲಾಗ ನಮಗೀ
ಗಡೆ ಬೇಗಂ ಬಿಡಿಸಿ ತರ್ಪುದಾತನ ಸೆಯಂ|| ೩೭

ವ|| ಎಂಬುದುಂ ಮಹಾಪ್ರಸಾದಮಂತೆಗೆಯ್ವೆನೆಲ್ಲಿವೊಕ್ಕೊಡಂ ಕೊಂಡು ಬಂದೆಪೆನೆಂದು ಬಗೆಯದಿದಿರಂ ನೋಡುತ್ತಿರಿಮೆಂದು ತವದೊಣೆಗಳಂ ಬಿಗಿದು ಗಾಂಡೀವಮನೇಱಸಿ ನೀವಿ ಜೇವೊಡೆದು ಗಂಧರ್ವರ ಪೋಪ ಬೞಯಂ ಬೆಸಗೊಂಡು ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ತನ್ನ ಕಣ್ಣನಭಿಮಂತ್ರಿಸಿಕೊಂಡು ಪಾಱುವ ಗಂಧರ್ವಬಲಮಂ ಜಲಕ್ಕನೆ ಕಂಡು-

ಕಂ|| ಕೊಳ್ ಕೊಳ್ಳೆಂದೆಚ್ಚೊಡೆ ವಿಳ
ಯೋಳ್ಕದ ತೆಱದಿಂದೆ ಮುಸುಱ ದಿವ್ಯಾಸ್ತ್ರಚಯಂ|
ಗಳ್ ಕೊಳೆ ಗಾಂಧರ್ವಬಲಂ
ಗಳ್ ಕೆಡೆದುವು ಮಿಟ್ಟೆಗೊಂಡ ಚಿಟ್ಟೆಯ ತೆಱದಿಂ|| ೩೮

ದ್ವೇಷವೂ ದುರ್ಯೋಧನನಿಗೆ ಸಹಜವಾದುದೇ. ಅದನ್ನೇ ಅನುಸರಿಸಿಕೊಂಡು ನಾನು ದುಖದಿಂದ ನಿಷ್ಕಾರಣವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ. ಇತರರಿಗೆ ಹಿಂಸೆಮಾಡುವ ಸ್ವಭಾವವು ನನ್ನಿಂದ ದೂರವಿರಲಿ ಎಂಬ ಮಾತನ್ನು ನಾನು ಹಿಂದೆಯೇ ಕೇಳಿಲ್ಲವೇ? ವ|| ಎಂದು ತನ್ನಲ್ಲಿ ಯೋಚಿಸಿ ಭಾನುಮತಿಯನ್ನು ಕುರಿತು ಹೀಗೆಂದನು. ೩೬. ಇದಕ್ಕಾಗಿ ನೀನು ಕಣ್ಣೀರನ್ನು ಸುರಿಸಬೇಡ; ಸಾವಕಾಶಮಾಡದೆ ನಿನ್ನ ಗಂಡನನ್ನು ಈ ದಿನವೇ ತಂದು ಸೇರಿಸುವೆವು; ಕೇಳಮ್ಮ ನಮ್ಮ ಮನೆಯಲ್ಲಿಯೇ ಉಂಟಾದ ಜಗಳಕ್ಕೆ ಕೌರವರು ನೂರು ಜನ, ನಾವು ಅಯ್ದು ಜನವೇ ದಿಟ. ಆದರೆ ಮತ್ತೊಬ್ಬರಲ್ಲಿ ಉಂಟಾದ ಯುದ್ಧ ಸೇರುವ ಸಂದರ್ಭದಲ್ಲಿ ನಾವು ನೂರೈದು ಜನವಲ್ಲವೇ? ವ|| ಎಂದು ಧರ್ಮರಾಜನು ಧರ್ಮದ ವಿವೇಕವನ್ನು ತಿಳಿಯುವ ಹಾಗೆ ಹೇಳಿ ತಾನು ಪ್ರತಿಜ್ಞೆ ಮಾಡಿದ ಕಾರ್ಯವನ್ನು ಶೀಘ್ರವಾಗಿ ಸಾಸಲು ಮನಸ್ಸು ಮಾಡಿ ತನ್ನ ಪಕ್ಕದಲ್ಲಿದ್ದ ಸಾಹಸಾಭರಣನಾದ ಅರ್ಜುನನ ಮುಖವನ್ನು ನೋಡಿ- ೩೭. ನಿಮ್ಮಣ್ಣನಾದ ದುರ್ಯೋಧನನನ್ನು ಗಂಧರ್ವಸೈನ್ಯವು ಹಿಡಿದುಕೊಂಡು ಹೋಗಿದೆ. ನಾವು ಇದನ್ನು ಕಡೆಗಣಿಸಬಾರದು; ಈಗಲೇ ಬೇಗ ಆತನ ಬಂಧನವನ್ನು ಬಿಡಿಸಿ ತರತಕ್ಕದ್ದು. ವ|| ಎನ್ನಲು ಮಹಾಪ್ರಸಾದ, ಹಾಗೆಯೇ ಮಾಡುತ್ತೇನೆ; ಎಲ್ಲಿ ಹೊಕ್ಕಿದ್ದರೂ ಕೊಂಡುಬರುತ್ತೇನೆ, ಆ ವಿಷವಾಗಿ ಚಿಂತಿಸದೆ ನಿರೀಕ್ಷಣೆ ಮಾಡುತ್ತಿರಿ ಎಂದು ತನ್ನ ಅಕ್ಷಯತೂಣೀರವನ್ನು ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯನ್ನೇರಿಸಿ ನೀವು ಶಬ್ದಮಾಡಿ ನೋಡಿ ಗಂಧರ್ವರು ಹೋದ ದಾರಿಯನ್ನು ಹುಡುಕಿಕೊಂಡು ಹೊರಟನು. ಹಿಮವತ್ಪರ್ವತದಲ್ಲಿ ರಾಕ್ಷಸಿಯು ಕೊಟ್ಟ ಚಕ್ಷುಸಿಯೆಂಬ ವಿದ್ಯೆಯನ್ನು ತನ್ನ ಕಣ್ಣನ್ನು ಅಭಿಮಂತ್ರಿಸಿಕೊಂಡು ನೋಡಲು ಹಾರಿಹೋಗುತ್ತಿದ್ದ ಗಂಧರ್ವಸೈನ್ಯವನ್ನು ಸ್ಪಷ್ಟವಾಗಿ ಕಂಡನು. ೩೮. ತೆಗೆದುಕೊ ತೆಗೆದುಕೊ ಎಂದು ಹೊಡೆಯಲಾಗಿ ದಿವ್ಯಾಸ್ತ್ರಗಳ ಸಮೂಹವು ಪ್ರಳಯಕಾಲದ ಬೆಂಕಿಯ ಚೂರಿನಂತೆ ಮುತ್ತಿ ನಾಟಲಾಗಿ ಗಂಧರ್ವಸೈನ್ಯಗಳು ಮಣ್ಣು ಹೆಂಟೆಯು ತಗುಲಿದ ಚಿಟ್ಟೆಯ ಹುಳುವಿನ ಹಾಗೆ ಉರುಳಿ ಬಿದ್ದುವು. ವ|| ಅಲ್ಲಿ ಹದಿನಾಲ್ಕು ಸಾವಿರ ಗಂಧರ್ವರನ್ನು ಕೊಲ್ಲಲು ಚಿತ್ರಾಂಗದನು ಹೆದರಿ ನಿನ್ನ ಪ್ರೀತಿಪಾತ್ರವಾದ ಬಂದಿಯನ್ನು ತೆಗೆದುಕೋ ಎಂದು ದುರ್ಯೋಧನ ಮತ್ತು ದುಶ್ಶಾಸನರನ್ನು ಬಿಸಾಡಿದನು. ಅವರು ನೋಯುವುದಕ್ಕೆ ಅವಕಾಶ ಕೊಡದೆ ಭೂಮ್ಯಾಕಾಶಗಳ ಮಧ್ಯದಲ್ಲಿ ಬಾಣಗಳನ್ನು ವಿಧವಿಧವಾಗಿ ಪ್ರಯೋಗಮಾಡಿ ಮೆಟ್ಟಿಲುಗಳನ್ನು ಕಟ್ಟಿ ದುರ್ಯೋಧನ ದುಶ್ಶಾಸನರನ್ನು ಇಳಿಸಿ ಕಟ್ಟುಗಳನ್ನು ಬಿಡಿಸದೆಯೆ ಕರೆತಂದು ಧರ್ಮರಾಯನಿಗೆ ತೋರಿಸಿದನು. ಅವನು ಸಾಹಸಾಭರಣನ ಸಾಹಸವನ್ನು ಅಳತೆಯಿಲ್ಲದಷ್ಟು ಹೊಗಳಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಬಾಯಲ್ಲಿ ತಾಂಬೂಲವನ್ನು ಕೊಟ್ಟನು. ದ್ರೌಪದಿಯು ಶತ್ರುಗಳು ಕಟ್ಟುಗಳನ್ನು ಕಟ್ಟಿಸಿಕೊಂಡು

ವ|| ಅಂತಲ್ಲಿ ಪದಿನಾಲ್ಸಾಸಿರ್ವರ್ ಗಂಧರ್ವರಂ ಕೊಂದೊಡೆ ಚಿತ್ರಾಂಗದಂ ಬೆರ್ಚಿಕೊಳ್ ನಿನ್ನ ನಚ್ಚಿನ ಸೆಯನೆಂದು ಬಿಸುಟ್ಟೊಡೆ ನೋಯಲೀಯದೆ ನೆಲದಾಕಾಶದೆಡೆಯೊಳಂಬುಗಳುಂ ತರತರದಿಂದೆಚ್ಚು ಸೋಪಾನಂ ಮಾಡಿ ದುರ್ಯೋಧನ ದುಶ್ಶಾಸನರನಿೞಪಿ ಕಟ್ಟುಗಳುಂ ಬಿಡದೊಡಗೊಂಡು ಬಂದು ಧರ್ಮಪುತ್ರಂಗೆ ತೋಱದೊಡೆ ಸಾಹಸಾಭರಣನ ಸಾಹಸಮನಳವಲ್ಲದೆ ಪೋಗೞ್ದು ತೊಡೆಯನೇಱಸಿಕೊಂಡು ಬಾಯೊಳ್ ತಂಬುಲಂಗೊಟ್ಟಂ ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿರ್ದೇಳಿದಿಕ್ಕೆಗೆ ಸಂತಸಂಬಟ್ಟು ಸೈರಿಸಲಾಱದಿಂತೆಂದಳ್-

ಕಂ|| ಎಮ್ಮಂ ಪಿಡಿದೆೞೆವಂದಿನ
ನಿಮ್ಮದಟುಗಳೀಗಳೆತ್ತವೋದವೊ ಪಿಡಿವ|
ಟ್ಟಮ್ಮ ಬೞಲ್ದಿರೆ ಕಂಡಿರೆ
ನಿಮ್ಮಳವಂ ನಿಮಗವಿಗಳೀಯೆಡರಾಯ್ತೇ|| ೩೯

ವ|| ಎಂದು ಸಾಯೆ ಸರಸಂ ನುಡಿದು ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳೆದು ಭಾನುಮತಿಗೆ ನಿನ್ನಾಣ್ಮನುಮಂ ನಿನ್ನ ಮಯ್ದುನನುಮಂ ನೀನೊಪ್ಪುಗೊಳ್ಳೆಂಬುದುಂ ದುರ್ಯೋಧನಂದಾಡೆಗಳೆದ ಕುಳಿಕನಂತೆಯುಂ ಕೋಡುಡಿದ ಮದಹಸ್ತಿಯಂತೆಯುಂ ನಖಮುಡಿದ ಸಿಂಹದಂತೆಯುಂ ಗಳಿತಗರ್ವನಾಗಿ ಪಾಂಡವರ ಮೊಗಮಂ ನೋಡಲ್ ನಾಣ್ಚಿ ಮದಗಜಪುರಕ್ಕೆ ಪೋಗಿ ಜೂದಿನೊಳ್ ಗೆಲ್ದ ನೆಲನಂ ನಯಜ್ಞನಾಗಿ ತನ್ನೊಳ್ ಪತ್ತಿಸಿ ದುಶ್ಶಾಸನನಂ ಯುವರಾಜನಂ ಮಾಡಿ ನಿರ್ವ್ಯಾಜಮರಸುಗೆಯ್ಯುತ್ತುಮಿರ್ದನಿತ್ತ ಯುಷ್ಠಿರನಟ್ಟಿದ ಕಿರಾತದೂತಂ ತಾಪಸ ವ್ಯಾಜನಾಗಿ ಪೋಗಿ ಸುಯೋಧನನ ವಾರ್ತೆಯೆಲ್ಲಮುಮನಱದು ಬಂದಜಾತಕಶತ್ರುಗಿಂತೆಂದು ಬಿನ್ನಪಂಗೆಯ್ದಂ-

ಚಂ|| ಕಿವಿಗಿನಿದುಂ ನೃಪಂದೆ ಹಿತಮಂ ನುಡಿಯೆಲ್ಲಿಯುಮಿಲ್ಲ ಕೇಳ ಬಿ
ನ್ನವಿಸುವೆನೆನ್ನ ಕಂಡುದನೆ ಜೂದಿನೊಳುಕ್ಕೆವದಿಂದೆ ಗೆಲ್ದ ನಿ|
ನ್ನವನಿತಳಂ ಕರಾತಳದವೋಲ್ ತನಗಂ ಬೆಸಕೆಯ್ಯೆ ಕೆಯ್ಗೆ ಮಾ
ಡುವ ನಯಮಾ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ|| ೪೦

ಮ|| ಮೊದಲೊಳ್ ತಿಣ್ಣಮದೊಪ್ಪಿ ತಪ್ಪಿದುದನೀಯೆಂದಟ್ಟಿದಂ ದಂಡನ
ಟ್ಟದೆ ಸಾಮರ್ಥ್ಯದಿನಟ್ಟಿದೋಲೆಗೆ ಮಹಾಪ್ರತ್ಯಂತ ಭೂಪಾಳರ|
ಟ್ಟದ ಕಾಳಿಂಗ ಗಜೇಂದ್ರ ದಾನಜಲಧಾರಾಸಾರದಿಂ ನೋಡ ಕುಂ
ದಿದುದಿಲ್ಗೊಳ್ಗೆಸಱು ಸುಯೋಧನ ನೃಪದ್ವಾರೋಪಕಂಠಗಳೊಳ್|| ೪೧

ಕಂ|| ಕುಸಿದಂ ರಿಪುವಿಜಯದೆ ನಿ
ದ್ರಿಸಿದಂ ಕಂಡೆಂದಿನಂದಮಂ ತಪ್ಪಿದನಾ|
ಳ್ವೆಸಕಗಿಯೆ ನುಡಿದನೆಂಬೀ
ಪಿಸುಣನಣಂ ಕೇಳ್ದೆನಿಲ್ಲ ಬೀಡಿನೊಳವನಾ|| ೪೨

ಅವಮಾನ ಪಟ್ಟುದಕ್ಕೆ ಸಂತೋಷಪಟ್ಟು ಸಹಿಸಲಾರದೆ ಹೀಗೆಂದಳು- ೩೯. ನಮ್ಮನ್ನು ಹಿಡಿದೆಳೆದ ಆ ದಿನದ ನಿಮ್ಮ ಪರಾಕ್ರಮಗಳು ಈಗ ಎಲ್ಲಿಗೆ ಹೋದವು; ಅಪ್ಪ ಬಳಲಿದಿರಲ್ಲಾ; ನಿಮ್ಮ ಪರಾಕ್ರಮದ ಪ್ರಮಾಣವನ್ನು ತಿಳಿದುಕೊಂಡಿರಾ; ಛೀ, ನಿಮಗೂ ಈಗ ಈ ಪರಾಭವವುಂಟಾಯಿತೇ? ವ|| ಎಂದು ಸಾಯುವ ಹಾಗೆ ಹಾಸ್ಯಮಾಡಿ ಕಟ್ಟಿದ ಕಟ್ಟುಗಳನ್ನು ತಾನೇ ಬಿಚ್ಚಿ ಭಾನುಮತಿಗೆ ನಿನ್ನ ಗಂಡನನ್ನೂ ಮೈದುನನನ್ನೂ ಒಪ್ಪಿಸಿಕೊ ಎಂದಳು. ದುರ್ಯೋಧನನು ಹಲ್ಲುಕಿತ್ತ ಕ್ರೂರಸರ್ಪದಂತೆಯೂ ಕೊಂಬುಮುರಿದ ಮದ್ದಾನೆಯಂತೆಯೂ ಉಗುರು ಕತ್ತರಿಸಿದ ಸಿಂಹದಂತೆಯೂ ಗರ್ವಹೀನನಾಗಿ ಪಾಂಡವರ ಮುಖವನ್ನು ನೋಡಲು ನಾಚಿ ಹಸ್ತಿನಾಪುರಕ್ಕೆ ಹೋಗಿ ಜೂಜಿನಲ್ಲಿ ಗೆದ್ದ ರಾಜ್ಯವನ್ನು ನೀತಿಯುಕ್ತವಾಗಿ ಆಳುತ್ತಾ ದುಶ್ಶಾಸನನನ್ನೂ ಯುವರಾಜನನ್ನಾಗಿ ಮಾಡಿ ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಯುಷ್ಠಿರನು ಕಳುಹಿಸಿದ ಕಿರಾತದೂತನು ತಪಸ್ವಿ ವೇಷದಿಂದ ಹೋಗಿ ದುರ್ಯೋಧನನ ಸಮಾಚಾರವನ್ನೆಲ್ಲ ತಿಳಿದು ಬಂದು ಧರ್ಮರಾಯನಿಗೆ ವಿಜ್ಞಾಪಿಸಿದನು- ೪೦. ಒಂದೇ ಮಾತು ಕಿವಿಗಿಂಪಾಗಿಯೂ ಶ್ರೇಯಸ್ಕರವಾಗಿಯೂ ಇರಲು ಸಾಧ್ಯವಿಲ್ಲ. ನಾನು ಕಂಡುದನ್ನು ವಿಜ್ಞಾಪಿಸುತ್ತೇನೆ. ಜೂಜಿನಲ್ಲಿ ಮೋಸದಿಂದ ಗೆದ್ದ ನಿನ್ನ ರಾಜ್ಯವು ಅಂಗಯ್ಯಲ್ಲಿರುವ ಹಾಗೆ ತನಗೆ ಆಜ್ಞಾಧಾರಕವಾಗಿರುವ ಹಾಗೆ ಮಾಡಿಕೊಳ್ಳುವ ದುರ್ಯೋಧನನ ಆ ಹೊಸರಾಜನೀತಿ ಬೃಹಸ್ಪತಿಯನ್ನೂ ಮೀರಿಸಿದೆ. ೪೧. ಮೊದಲು ನಿಷ್ಕರ್ಷೆಯಿಂದ ಒಪ್ಪಿದುದನ್ನು ಕೊಡದೆ ತಪ್ಪಿದವರಿಗೆ ಸೈನ್ಯವನ್ನಟ್ಟದೆ ಕೊಡು ಎಂದು ಸಾಮದಿಂದ ಹೇಳಿ ಕಳುಹಿಸುವನು. ರಾಜ್ಯಾಕಾರದಿಂದ ಕಳುಹಿಸಿದ ಇವನ ಆಜ್ಞಾಪತ್ರಕ್ಕೆ ರಾಜ್ಯದ ಎಲ್ಲೆಡೆಗಳಲ್ಲಿದ್ದ ಸಾಮಂತರಾಜರು ಕಳುಹಿಸಿದ ಕಳಿಂಗ ದೇಶದ ಉತ್ತಮವಾದ ಆನೆಗಳ ಮದೋದಕದ ಧಾರಾಪ್ರವಾಹದಿಂದ ಉಂಟಾದ ಕೆಸರು ಆ ದುರ್ಯೋಧನ ರಾಜನ ಅರಮನೆಯ ಬಾಗಿಲುಗಳ ಸಮೀಪಪ್ರದೇಶದಲ್ಲಿ ಕಡಿಮೆಯೇ ಆಗಿಲ್ಲ. ೪೨. ಶತ್ರುವು ಆಡಿದ ಮಾತಿಗೆ ತಪ್ಪಿದ, ಗೆಲುವಿನಿಂದ ನಿದ್ರಿಸಿದುದನ್ನು ಕಂಡ, ಹಿಂದಿನಿಂದ

ನೆಗೞ್ದರಿಗನ ಸಾಹಸಮೊ
ರ‍್ಮೆಗೊರ‍್ಮೆ ಕೆಲದವರ ಮಾತಿನೊಳ್ ತನ್ನ ಮನಂ|
ಬುಗೆ ಮಂತ್ರಪದಕ್ಕುರಗಂ
ಸುಗಿವಂತೆವೊಲಗಿದು ಸುಗಿದು ತಲೆಗರೆದಿರ್ಪ|| ೪೩

ಅಱವಿಂತು ರಾಜಕಾರ್ಯದ
ತೆಱನೆನಗಱವಂತು ಮೊಗ್ಗೆ ದೇವರ ಮುಂದಾ|
ನಱಯೆಂ ಪಿರಿದುಂ ಗೞಪಲ್
ಮಱಸೊಂದಿದನಲ್ಲನಹಿತನೆೞ್ಚತ್ತಿರ್ದಂ|| ೪೪

ವ|| ಎಂದು ಬಿನ್ನಪಂಗೆಯ್ದು ಕಿರಾತದೂತಂ ಪೋಪುದುಮಾ ಮಾತೆಲ್ಲಮಂ ಕೇಳ್ದು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳ್-

ಚಂ|| ನುಡಿವೊಡೆ ರಾಜಕಾರ್ಯ ನಯಮೆತ್ತಬಲಾಜನದೊಂದು ಬುದ್ಧಿಯೆ
ತ್ತುಡುಪತಿವಂಶ ನೋಡುವೊಡಿದೊಂದಘಟಂ ಬಗೆವಾಗಳೆಂತು ಕೇಳ್|
ನುಡಿಯದೆ ಕೆಮ್ಮಗಿರ್ದೊಡಮಿರಲ್ಕಮಣವಿಯದೆ ನಿಮ್ಮೊಳೆನ್ನುಮಂ
ನುಡಿಯಿಸಿದಪ್ಪುವಾ ಕುರುಕುಳರ್ಕಳ್ ಗೆಯ್ದಪರಾಧಕೋಟಿಗಳ್|| ೪೫

ಕಂ|| ಆವಡವಿಗಳೊಳ್ ಪಣ್ಪಲ
ಮಾವಗಮೊಳವಲ್ಲಿಗಱಸಿ ಪರಿಪರಿದು ಕರಂ|
ತಾವಡಿಗೊಳ್ವೀ ಭೀಮನ
ಬೇವಸಮಿದು ನಿನ್ನ ಮನಮನೊನಲಿಸಿತಿಲ್ಲಾ|| ೪೬

ಉ|| ಪೋಗಿ ಸುಪರ್ವಪರ್ವತದ ಕಾಂಚನರೇಣುಗಳುಂ ಪರಾಕ್ರಮೋ
ದ್ಯೋಗದಿನೆತ್ತಿ ತಂದು ನಿನಗಿತ್ತದಟಂ ಬಡಪಟ್ಟು ಬೆಟ್ಟದೊಳ್|
ಪೋಗಿ ತೊೞಲ್ದು ನಾರ್ಗಳನುಡಲ್ ತರುತಿರ್ದೆಲೆ ಮಾಡಲಾರ್ತನಿ
ಲ್ಲಾಗಳೆ ಕೋಪಮಂ ನಿನಗೆ ಸಂಚಿತಶೌರ್ಯಧನಂ ಧನಂಜಯಂ|| ೪೭

ಕಂ|| ಕಾಯ ಕ್ಲೇಶದಿನಡವಿಯ
ಕಾಯಂ ಪಣ್ಣುಮನುದಿರ್ಪಿ ತಿಂದಗಲದೆ ನಿಂ|
ದೀ ಯಮಳರಾವ ತೆಱದಿಂ
ನೋಯಿಸರಯ್ ನಿನ್ನ ನನ್ನಿಕಾಱನ ಮನಮಂ|| ೪೮

ಇದ್ದ ರೀತಿಯನ್ನು ತಪ್ಪಿದ, ಸೇವೆಮಾಡುವ ವಿಷಯದಲ್ಲಿ ಕೆಟ್ಟಮಾತನಾಡಿದ ಎಂಬ ಈ ಚಾಡಿಮಾತುಗಳನ್ನೂ ಅವನ ಬೀಡಿನಲ್ಲಿ ಸ್ವಲ್ಪವೂ ಕೇಳಿಲ್ಲ. ೪೩. ಆದರೆ ಪ್ರಸಿದ್ಧನಾದ ಅರಿಕೇಸರಿಯ ಸಾಹಸವು ಒಂದೊಂದು ಸಲ ಪಕ್ಕದವರ ಮಾತಿನ ಮೂಲಕ ತನ್ನ ಮನಸ್ಸನ್ನು ಪ್ರವೇಶಿಸಲು ಮಂತ್ರಮುಗ್ಧವಾದ ಹಾರು ಹೆದರುವ ಹಾಗೆ ಹೆದರಿ ತಲೆಯನ್ನು ಬಗ್ಗಿಸಿಕೊಂಡಿರುತ್ತಾನೆ. ೪೪. ನನಗೆ ತಿಳಿದ ಸಮಾಚಾರವಿಷ್ಟು, ರಾಜಕಾರ್ಯದ ರೀತಿಯನ್ನು ತಿಳಿಯುವುದು ನನಗೆ ಸಾಧ್ಯವೇ? ಪ್ರಭುವಿನ ಮುಂದೆ ಹೆಚ್ಚಾಗಿ ಹರಟುವುದು ನನಗೆ ತಿಳಿಯದು; ಶತ್ರುವಾದ ದುರ್ಯೋಧನನು ಮೈಮರೆತಿಲ್ಲ ; ಎಚ್ಚರದಿಂದಿದ್ದಾನೆ. ವ|| ಎಂದು ಬಿನ್ನವಿಸಿ ಕಿರಾತದೂತನು ಹೋಗಲು ಆ ಮಾತೆಲ್ಲವನ್ನೂ ಕೇಳಿ ದ್ರೌಪದಿಯು ಧರ್ಮರಾಜನಿಗೆ ಹೀಗೆಂದಳು- ೪೫. ಹೇಳುವುದಾದರೆ ರಾಜಕಾರ್ಯದ ರೀತಿಯೆಲ್ಲಿ ಸ್ತ್ರೀಜನರ ಬುದ್ಧಿಯೆಲ್ಲಿ? ಎಲೈ ಚಂದ್ರವಂಶನಾದ ಧರ್ಮರಾಜನೇ ವಿಚಾರಮಾಡುವುದಾದರೆ ಈಗ ನಡೆದಿರುವ ಇದು (ಈ ಕೌರವರ ದುಶ್ಚೇಷ್ಟೆ) ವಂಶಕ್ಕೆ ಹೊಂದಿಕೊಳ್ಳದಿರುವ ವಿಷಯ (ಅಸಂಗತವಾದುದು) ಕೇಳು ಯೋಚನೆಮಾಡಿ ಹೀಗೂ ಮಾತನಾಡದೆ ಸುಮ್ಮನಿರಬೇಕೆಂದಿದ್ದರೂ ಇರುವುದಕ್ಕೆ ಅವಕಾಶಕೊಡದೆ ಆ ಕುರಕುಲದವರು ಮಾಡಿದ ಅಪರಾಧದ ಸಮೂಹಗಳು ನಿಮ್ಮಲ್ಲಿ ನನ್ನನ್ನು ಮಾತನಾಡುವಂತೆ ಮಾಡುತ್ತಿವೆ. ೪೬. ಯಾವ ಕಾಡುಗಳಲ್ಲಿ ಹಣ್ಣುಹಂಪಲುಗಳು ಯಾವಾಗಲೂ ಇರುತ್ತವೆ, ಅಲ್ಲಿಗೆ ಅದನ್ನು ಹುಡುಕಿಕೊಂಡು ಓಡಿ ಅಲೆಯುತ್ತಿರುವ ಈ ಭೀಮನ ಶ್ರಮವು ನಿನ್ನ ಮನಸ್ಸನ್ನು ಕೆರಳಿಸಿಲ್ಲವೇ? ೪೭. ಮೇರುಪರ್ವತಕ್ಕೆ ಹೋಗಿ ಪೌರುಷಪ್ರದರ್ಶನದಿಂದ ಚಿನ್ನದ ಕಣಗಳನ್ನು ನಿನಗೆ ತಂದುಕೊಟ್ಟು ಕೃಶವಾಗಿ ಬೆಟ್ಟದಲ್ಲಿ ತೊಳಲಿ ಉಡುವುದಕ್ಕೆ ನಾರುಗಳನ್ನು ತರುತ್ತಿರುವ ಶೌರ್ಯವನ್ನೇ ಕೂಡಿಟ್ಟ ಧನವಾಗಿ ಉಳ್ಳ ಪರಾಕ್ರಮಶಾಲಿಯಾದ ಧನಂಜಯನೂ (ಅರ್ಜುನನೂ) ನಿನಗೆ ಕೋಪವನ್ನುಂಟು ಮಾಡಲು ಶಕ್ತನಾಗಲಿಲ್ಲವೆ? ೪೮. ಶರೀರದ ಆಯಾಸದಿಂದ ಕಾಡಿನ ಕಾಯನ್ನೂ ಹಣ್ಣನ್ನೂ ಉದುರಿಸಿ ತಿಂದು ನಿಮ್ಮನ್ನು ಅಗಲದೆ

ಆ ದುಶ್ಶಾಸನನಿಂದೆನ
ಗಾದ ಪರಾಭವಮನೇನುಮಂ ಬಗೆಯದೊಡಿಂ|
ತಾದರಮೆ ತೊವಲ್ನಾರುಮ
ನಾದರದೇಂ ನಿನ್ನ ಮನಕೆ ಚಿಂತೆಯುಮಿಲ್ಲಾ|| ೪೯

ಎಮ್ಮಯ್ವರ ಬೇವಸಮಂ
ನೀಂ ಮನದೊಳ್ ನೆನೆಯೆಯಪ್ಪೊಡಂ ನಿನ್ನಿರವಂ|
ನೀಂ ಮರುಳೆ ಬಲೆಯದಂತುಂ
ಘುಮ್ಮೆಂಬಡವಿಯೊಳಡಂಗಿ ಚಿಂತಿಸುತಿರ್ಪಾ|| ೫೦

ಶಮಮನೆ ಕೆಯ್ಕೊಳ್ವೊಡೆ ಬಿ
ಲ್ಲುಮಂಬುಮಂ ಬಿಸುಟು ತಪಕೆ ನೀಂ ಬಗೆವೊಡೆ ವಿ||
ಕ್ರಮಮಂ ಪಗೆಯಂ ಕಿಡಿಸುವ
ಶಮದಿಂ ಮುನಿಗಾಯ್ತು ಸಿದ್ಧಿ ಭೂಪತಿಗಾಯ್ತೆ|| ೫೧

ತಪ್ಪುಮನೆ ನುಡಿಯೆನೆಂಬುದಿ
ದೊಪ್ಪದು ನಿನಗಹಿತರೆಯ್ದೆ ತಪ್ಪಿರ್ದರವರ್|
ತಪ್ಪಿದ ಬೞಕ್ಕೆ ತಪ್ಪಿದ
ತಪ್ಪೇಂ ಗಳ ನನ್ನಿಗೊಪ್ಪಮಲ್ಲದ ತಪ್ಪೇ|| ೫೨

ವ|| ಎಂದು ಪಾಂಚಾಳರಾಜತನೂಜೆಯ ಮಾತಿಂಗೆ ಬೆಂಬಲಂಬಾಯ್ದಂತೆ ಭೀಮಸೇನ ನಿಂತೆಂದಂ-

ಕಂ|| ನುಡಿಯದೆ ಪೆಱತಂ ದ್ರೌಪದಿ
ನುಡಿದಳ್ ತಕ್ಕುದನೆ ಕೇಳಿಮಿಂ ಕೇಳದಿರಿಂ|
ನುಡಿಯಲೆಡೆಯಿಲ್ಲ ನಿಮ್ಮಂ
ನುಡಿಯಿಸಿದಪುದೆನ್ನ ಮನದ ಮುನಿಸವನಿಪತೀ|| ೫೩

ನಾಲ್ಕುಂ ನೃಪವಿದ್ಯೆಯನಾ
ಡಲ್ ಕಲ್ತುಂ ನೆಯೆ ಕಲ್ತೆಯಿಲ್ಲಾಗದೆ ಸೋ|
ಲಲ್ಕೆ ನೃಪ ದೊರೆಯೆ ನೆಲನಂ
ವಲ್ಕಲವಸನಕ್ಕೆ ಮೆಯ್ಯನಾಂಪುದು ಪೆಂಪೇ|| ೫೪

ನಿಂತ ಈ ಯಮಳರೂ ಸತ್ಯಸಂಧಾನದ ನಿನ್ನಮನಸ್ಸನ್ನು ನೋಯಿಸುವುದಿಲ್ಲವೇ? ೪೯. ಆ ದುಶ್ಶಾಸನನಿಂದ ನನಗುಂಟಾದ ಅವಮಾನವೇನನ್ನೂ ಎಣಿಸದಿರುವ ನಿನಗೆ ಈ ತೊಗಲುನಾರುಗಳು ಆದರಕ್ಕೆ ಪಾತ್ರವಾದುವೇ? ಈ ಅನಾಸಕ್ತಿಯೇತಕ್ಕೆ? ನಿನ್ನ ಮನಸ್ಸಿಗೆ ಚಿಂತೆಯೇ ಇಲ್ಲವೇ? ೫೦. ನಮ್ಮಯ್ದುಜನಗಳ ಕಷ್ಟವನ್ನೂ ನೀನು ಮನಸ್ಸಿನಲ್ಲಿ ನೆನೆಯದಿದ್ದರೂ ಎಲೈ ಹುಚ್ಚೀ ನಿನ್ನ ಸ್ಥಿತಿಯನ್ನು ಯೋಚಿಸಿ ನೋಡು ಈ ಘುಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು ಚಿಂತಿಸುತ್ತಿರಬಹುದೇ? ೫೧. ನೀನು ಶಾಂತಿಗುಣವನ್ನೇ ಅಂಗೀಕರಿಸುವುದಾದರೆ ಬಿಲ್ಲನ್ನೂ ಬಾಣವನ್ನೂ ಬಿಸಾಡಿ ತಪಸ್ಸನ್ನೇ ಅಪೇಕ್ಷಿಸುವುದಾದರೆ ವಿಕ್ರಮವನ್ನೂ ದ್ವೇಷವನ್ನೂ ಹೋಗಲಾಡಿಸುವ ಶಾಂತಿಯಿಂದ ಋಷಿಗೆ ಸಿದ್ಧಿಯಾಗುತ್ತದೆಯೇ ವಿನಾ ರಾಜನಿಗೆ ಸಿದ್ಧಿಯಾಗುತ್ತದೆಯೇ (ಅಂದರೆ ಶಾಂತಿಯಿಂದ ಋಷಿಸಿದ್ಧಿಯಾಗುತ್ತದೆಯೇ ವಿನಾ ರಾಜಸಿದ್ಧಿಯಾಗುತ್ತದೆಯೇ?) ೫೨. ದೋಷವನ್ನೇ ಕುರಿತು ನಾನು ಮಾತನಾಡುವುದಿಲ್ಲವೆಂಬ ಮಾತು ಯೋಗ್ಯವಲ್ಲ ; ಶತ್ರುಗಳಾದವರು ತಪ್ಪು ಮಾಡಿದ್ದಾರೆ. ಅವರು ತಪ್ಪುಮಾಡಿದ ಬಳಿಕ ನೀನು ತಪ್ಪುಮಾಡಿದರೆ ಆ ತಪ್ಪು ನಿನ್ನ ಸತ್ಯಕ್ಕೆ ಒಪ್ಪದ ತಪ್ಪಾಗುತ್ತದೆಯೇ? ವ|| ಎಂಬುದಾಗಿ ಹೇಳಿದ ದ್ರೌಪದಿಯ ಮಾತಿಗೆ ಬೆಂಬಲ ಬರುವ ಹಾಗೆ ಭೀಮಸೇನನು ಹೀಗೆಂದನು- ೫೩. ದ್ರೌಪದಿಯು ಅನ್ಯಥಾ ನುಡಿಯದೆ ಯೋಗ್ಯವಾದುದನ್ನೇ ಹೇಳಿದಳು. ನೀವು ಕೇಳಿ, ಬಿಡಿ; ಇನ್ನು ಮಾತನಾಡುವುದಕ್ಕೆ ಅವಕಾಶವೇ ಅಲ್ಲ. ರಾಜನೇ, ನನ್ನ ಮನಸ್ಸಿನ ಕೋಪ ನನ್ನನ್ನೂ ಮಾತನಾಡುವ ಹಾಗೆ ಮಾಡುತ್ತದೆ. ೫೪. ರಾಜನಿಗೆ ಯೋಗ್ಯವಾದ ಸಾಮ, ದಾನ, ಭೇದ, ದಂಡಗಳೆಂಬ ನಾಲ್ಕುಪಾಯಗಳನ್ನೂ ತಿಳಿದಿದ್ದರೂ ನೀನು ಪೂರ್ಣವಾಗಿ ಕಲಿತವನಾಗಲಿಲ್ಲವಲ್ಲ ; ಭೂಮಿಯನ್ನು ಸೋಲುವುದುಚಿತವೇ?

ಉ|| ನನ್ನಿಗೆ ದಾಯಿಗಂಗೆಳೆಯನೊಪ್ಪಿಸಿದೆಂ ಗಡಿಮೆಂಬ ಮಾತುಗಳ್
ನಿನ್ನವು ಕೂರದರ್ ನೆಲನನೊಟ್ಟಜೆಯಿಂ ಕೊಳೆ ಕೊಟ್ಟು ಮುಟ್ಟುಗೆ|
ಟ್ಟಿನ್ನುಮರಣ್ಯದೊಳ್ ನಮೆದಪಂ ಯಮನಂದನನೆಂಬ ಬನ್ನಮುಂ
ಮುನ್ನಮೆ ಸೋಂಕಿ ಕಣ್ಮಲೆವ ಮಾತುಗಳೆಲ್ಲರ ಪೇೞ್ವ ಮಾತುಗಳ್|| ೫೫

ಕಂ|| ಸಲೆ ಸಂದಿರ್ಪತ್ತೊಂದುಂ
ತಲೆವರೆಗಂ ನಮಗೆ ಪರಿಭವಂ ಕೃಷ್ಣೆಯ ಮುಂ|
ದಲೆಯಂ ಪಿಡಿದೞೆವಲ್ಲಿಯೆ
ತಲೆವಿಡಿದರ್ ನಮ್ಮ ಬೀರಮಂ ಕೌರವರುಂ|| ೫೬

ಚಂ|| ಮಲೆ ಮಲೆದುರ್ಕಿ ಸೊರ್ಕಿ ಸಭೆಯೊಳ್ ಕುಲಂಪಾಸುಲನೀ ಶಿರೀಷ ಕೋ
ಮಲೆಯ ವಿಲೋಲ ನೀಲ ಕಬರೀಭರಮಂ ತೆಗೆವಾಗಳಲ್ಲಿ ಕೆ|
ಯ್ಯಲೆ ಸದೆದಂತೆ ಪತ್ತಿ ಬೆರಲಚ್ಚುಗಳಚ್ಚಿಱದಂತೆ ಕೊಂಕುಗಳ್
ತಲೆ ನವಿರೊಂದಿ ಮೂದಲಿಸುವಂತೆವೊಲಿರ್ದುವು ನಮ್ಮ ವೀರಮಂ|| ೫೭

ಮ|| ಅಸೀತೇಂದೀವರಲೋಲಲೋಚನೆಯನಂದಂತಾ ಸಭಾಮಧ್ಯದೊಳ್
ಪಸುವಂ ಮೋದುವವೋಲೆ ಮೋದೆಯುಮದಂ ಕಂಡಂತೆ ಪಲ್ಗರ್ಚಿ ಸೈ|
ಸಿರಿದೆಂ ನಿನ್ನಯ ನನ್ನಿಗಿನ್ನೆವರಮಾ ದುಶ್ಶಾಸನೋರಸ್ಥಳೋ
ಷ್ಣಸೃತಾಸೃಗ್ಜಲಪಾನಮಂ ಬಯಸಿ ಬಾಯ್ ತೇರೈಸೆ ಸೈತಿರ್ಪೆನೇ|| ೫೮

ವ|| ಎಂದು ಗದಾದಂಡಮಂ ಭುಜಾದಂಡದೊಳಳವಡಿಸಿಕೊಂಡು ಪಗೆವರಿರ್ದ ದೆಸೆಯಂ ನೋಡಿ ತಳಲರ್ ಬಗೆದ ಭೀಮಸೇನನಂ ಧರ್ಮಪುತ್ರಂ ಕೋಪತಾಪದಿಂ ಮಸಗಿದ ಮದಗಜಮನೆ ಮಾಣಿಸುವಂತೆಂತಾನುಂ ಮೃದುವಚನಂಗಳಿಂ ಮುಳಿಸನಾಱಸುತಿರ್ದನಿರ್ಪನ್ನೆಗಂ-

ಚಂ|| ಕನಕ ಪಿಶಂಗ ತುಂಗ ಜಟಿಕಾವಳಯಂ ಕುಡುಮಿಂಚಿನೋಳಿಯಂ
ನೆನೆಯಿಸೆ ನೀಲ ನೀರದ ತನುಚ್ಛವಿ ಭಸ್ಮ ರಜೋವಿಲಿಪ್ತಮಂ|
ಜನ ಗಿರಿಯಂ ಶರಜ್ಜಳಧರಂ ಕವಿದಂತಿರೆ ಚೆಲ್ವನಾಳ್ದು ಭೋಂ
ಕನೆ ನಭದಿಂದಮಂದಿೞದನಲ್ಲಿಗೆ ವೃದ್ಧ ಪರಾಶರಾತ್ಮಜಂ|| ೫೯

ಶರೀರಕ್ಕೆ ನಾರುಮಡಿಯನ್ನು ಧರಿಸಿರುವುದು ಹಿರಿಮೆಯೇ? (ನಾರುಮಡಿಗೆ ಮೆಯ್ಯನೊಡ್ಡುವುದು ವೈಭವವೇ) ೫೫. ಸತ್ಯಕ್ಕಾಗಿ ದಾಯಾದಿಗಳಿಗೆ ರಾಜ್ಯವನ್ನೂ ಒಪ್ಪಿಸಿದೆವು ಎಂಬುದು ನೀವು ಹೇಳುವ ಮಾತುಗಳು. ಹಿತವಲ್ಲದವರು ರಾಜ್ಯವನ್ನು ಪರಾಕ್ರಮದಿಂದ ಕಿತ್ತುಕೊಳ್ಳಲು ಸಾಧನಸಾಮಗ್ರಿಗಳನ್ನೆಲ್ಲ ನೀಗಿಕೊಂಡು (ನಿಸ್ಸಹಾಯಕನಾಗಿ) ಧರ್ಮರಾಯನು ಕಾಡಿನಲ್ಲಿ ನವೆಯುತ್ತಿದ್ದಾನೆ ಎಂಬ ಅವಮಾನಕರವಾದ ಎಲ್ಲರೂ ಹೇಳುವ ಮಾತುಗಳು ನಮ್ಮನ್ನು ಮೊದಲೇ ಸೋಂಕಿ ಕಣ್ಣನ್ನು ಕೆರಳಿಸುವಂತಹವುಗಳಾಗಿವೆ.

೫೬. ಪ್ರಸಿದ್ಧವಾದ ನಮ್ಮ ಇಪ್ಪತ್ತೊಂದು ತಲೆಮಾರಿನವರೆಗೂ ನಮಗೆ ಅವಮಾನವಾದ ಹಾಗೆಯೇ ಆಯಿತು. ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದಾಗಲೇ ಕೌರವರು ನಮ್ಮ ಪರಾಕ್ರಮವನ್ನೂ ಸೆರೆಹಿಡಿದರು. ೫೭. ಅಹಂಕಾರದಿಂದ ಮಲೆತು ಉಬ್ಬಿ ಸೊಕ್ಕಿ ಆ ಕುಲಕಳಂಕನಾದ ದುಶ್ಶಾಸನನು ಸಭೆಯಲ್ಲಿ ಬಾಗೆಯ ಹೂವಿನಂತೆ ಕೋಮಲವೂ ಮೃದುವೂ ಚಂಚಲವೂ ಕರ್ರಗೂ ಇರುವ ಕೇಶರಾಶಿಯನ್ನು ಎಳೆದಾಗ ಕಯ್ಯಲ್ಲಿಯೇ ಹೊಡೆದ ಹಾಗೆ ಬೆರಳಿನ ಗುರುತುಗಳು ಅಂಟಿಕೊಂಡು ಮುದ್ರಿಸುವ ಹಾಗೆ ಇರುವ ಕೊಂಕಾದ ಮುಂಗುರುಳು ತಲೆಯ ಕೂದಲುಗಳೊಡನೆ ಸೇರಿ ನಮ್ಮ ವೀರ್ಯವನ್ನು ಮೂದಲಿಸುವಂತಿವೆ.

೫೮. ಕನ್ನೆ ದಿಲೆಯಂತೆ ಚಂಚಲವಾದ ಕಣ್ಣುಳ್ಳ ದ್ರೌಪದಿಯನ್ನು ಆ ದಿನ ಆ ಸಭಾಮಧ್ಯದಲ್ಲಿ ಪಶುವನ್ನು ಹೊಡೆಯುವ ಹಾಗೆ ಹೊಡೆದುದನ್ನು ಕಂಡು ನಿನ್ನ ಸತ್ಯಕ್ಕಾಗಿ ಹಲ್ಲುಕಚ್ಚಿಕೊಂಡು ಇಲ್ಲಿಯವರೆಗೆ ಸಹಿಸಿದೆನು. ಆ ದುಶ್ಶಾಸನನ ಎದೆಯ ಬಿಸಿರಕ್ತವನ್ನು ಪಾನಮಾಡಲು ನನ್ನ ಬಾಯಿ ಬಯಸಿ ಆತುರ ಪಡುತ್ತಿರುವಾಗ ನಾನು ಇನ್ನು ಸುಮ್ಮನೆ ಇರುತ್ತೇನೆಯೇ? ವ|| ಎಂದು ತನ್ನ ಗದಾದಂಡವನ್ನು ಭುಜಾಂಡದಲ್ಲಿ ಅಳವಡಿಸಿಕೊಂಡು ಶತ್ರುಗಳಿದ್ದ ಕಡೆಯನ್ನು ನೋಡಿ ಹೊರಡಲು ಯೋಚಿಸಿದ ಭೀಮಸೇನನನ್ನು ಧರ್ಮರಾಜನು ಕೋಪಾಗ್ನಿಯಿಂದ ಕೆರಳಿದ ಮದಗಜವನ್ನು ಸಂತೈಸುವಂತೆ ಹೇಗೋ ಮೃದುವಾದ ಮಾತುಗಳಿಂದ ಸಮಾಧಾನಮಾಡಿದನು. ಅಷ್ಟರಲ್ಲಿ- ೫೯. ಹೊಂಬಣ್ಣದ ಎತ್ತರವಾದ ಜಟೆಯ ಸಮೂಹವೂ ಕುಡಿಮಿಂಚಿನ ಸಮೂಹವನ್ನು ಜ್ಞಾಪಿಸುತ್ತಿರಲು ವಿಭೂತಿಯಿಂದ ಲೇಪಿಸಿದ ಕೃಷ್ಣಮೇಘದಂತಿದ್ದ ಶರೀರಕಾಂತಿಯು ಅಂಜನಾದ್ರಿಯನ್ನು ಶರತ್ಕಾಲದ ಮೋಡಗಳು ಕವಿದಂತಿರಲು ಸೌಂದರ್ಯದಿಂದ

ವ|| ಅಂತು ನಭೋವಿಭಾಗದಿಂ ಧರಾವಿಭಾಗಕ್ಕಿೞತಂದ ಕೃಷ್ಣದ್ವೈಪಾಯನನಂ ಕಂಡಜಾತ ಶತ್ರು ತನ್ನೇಱದ ಸಟಿತ ಶಿಳಾತಳದ ಪಟ್ಟಕದಿಂದಿೞದು ನಿಜಾನುಜಸಹಿತಮಿದಿರ್ವಂದು ಧರಾತಳನಿಷ್ಠ ಲಲಾಟಪಟ್ಟಂ ಸಾಷ್ಟಾಂಗವೆಱಗಿ ಪೊಡವಟ್ಟು ತದೀಯಾಶೀರ್ವಾದಮನಾಂತು ತಚ್ಛಿಳಾತಳದೊಳ್ ಕುಳ್ಳಿರಿಸಿ ವನಕುಸುಮಂಗಳಿಂದರ್ಘ್ಯಮೆತ್ತಿ ಸರೋವರಜಲಂಗಳಂ ಪದ್ಮಪತ್ರ ಪುಟಂಗಳಿಂ ತಂದು ಪದಪದ್ಮಂಗಳಂ ಕರ್ಚಿ ತತ್ಪಾದ ಪವಿತ್ರೋದಕಂಗಳನನಿಬರು ಮುತ್ತಮಾಂಗದೊಳ್ ತಳಿದುಕೊಂಡಿರ್ದಾಗಳ್ ಸತ್ಯವತೀನಂದನಂ ತನ್ನ ಮಕ್ಕಳ ಸಾಯಸಂಗಳ್ಗೆ ಮನ್ಯುಮಿಕ್ಕು ಕಣ್ಣನೀರಂ ನೆಗಪೆ ಮಹಾಪ್ರಸಾದಮೆಂದು ಧರ್ಮನಂದನನಿಂತೆಂದಂ-

ಉ|| ನೀಗಿದುದೀಗಳೆಮ್ಮ ವನವಾಸಪರಿಶ್ರಮವಿಗಳಾಳ್ದೆವಾ
ಸಾಗರ ಮೇಖಳಾವೃತ ಧರಿತ್ರಿಯನೀಗಳಂಡಗಿತೆಮ್ಮ ಹೃ
ದ್ರೋಗಮನೇಕ ಮಂಗಳಪರಂಪರೆಗಳ್ ದೊರೆಕೊಂಡುವೀಗಳೇ
ನಾಗದೊ ಪೇೞು ಭವಚ್ಚರಣಪದ್ಮನಿರೀಕ್ಷಣದಿಂ ಮುನೀಶ್ವರಾ|| ೬೦

ಕಂ|| ಆಪತ್ಪಯೋಯೊಳಗ
ತ್ಯಾಪತ್ತಿಂದುಳ್ಕಿಮುೞ ನಮೆವೆಮಗೆ ಶರಣ್|
ಪಾಪಹರ ನೀಮೆ ಬಗೆದೆಮ
ಗಾಪತ್ಪ್ರತಿಕಾರಮಾವುದೀಗಳೆ ಬೆಸಸಿಂ|| ೬೧

ವ|| ಎಂಬುದುಮಾ ಮುನೀಂದ್ರನಾಮುಮಂತೆಂದೆ ಬಂದೆವೆಂದು-

ಕಂ|| ಸುರರ್ಗಮೃತಮನುಂತೆ ಕಳಾ
ತರದಿಂದಿತ್ತಸಿಯನಾದ ಚಂದ್ರನವೋಲ್ ಭೂ|
ಭರಮಂ ನನ್ನಿಗೆ ದಾಯಿಗ
ರ್ಗಿರದಿತ್ತೆರಡರೊತ್ತೆ ನೀನೆ ಧನ್ಯನೆಯಲ್ತೇ|| ೬೨

ನೀಂ ಬೇಮಗೆ ಸುಯೋಧನ
ನೇಂ ಬೇಯೆ ಕೂಸುತನದೊಳಾದೊಡಮಿನ್ನೇ|
ನೆಂಬುದೊ ಪಿರಿದೈವರೊಳಂ
ಪಂಬಲ್ ಗುಣಪಕ್ಷಪಾತಮಪ್ಪುದು ನಿಮ್ಮೊಳ್|| ೬೩

ವ|| ಎಂದು ತನ್ನ ವರ್ತನಮುಂ ಮೋಹಮನುಂಟುಮಾಡೆ ಮತ್ತಮುಂತೆಂದಂ-

ಕೂಡಿ ವೃದ್ಧನಾದ ವ್ಯಾಸಮಹರ್ಷಿಯು ಇದ್ದಕ್ಕಿದ್ದ ಹಾಗೆ ಆ ದಿನ ಆಕಾಶದಿಂದ ಅಲ್ಲಿಗೆ ಇಳಿದು ಬಂದನು. ವ|| ಹಾಗೆ ಆಕಾಶಭಂಗದಿಂದ ಭೂಭಾಗಕ್ಕೆ ಇಳಿದು ಬಂದ ವ್ಯಾಸಮಹರ್ಷಿಯನ್ನು ನೋಡಿ ಧರ್ಮರಾಯನು ತಾನು ಏರಿದ್ದ ಸಟಿಕಶಿಲಾತಳಪೀಠದಿಂದ ಕೆಳಗಿಳಿದು ತನ್ನ ತಮ್ಮಂದಿರೊಡನೆ ಇದಿರಾಗಿ ಬಂದು ಭೂಮಿಯಲ್ಲಿಟ್ಟ ಮುಖಮಂಡಲವುಳ್ಳವನಾಗಿ ಸಾಷ್ಟಾಂಗ ನಮಸ್ಕಾರಮಾಡಿ ಅವನ ಹರಕೆಗಳನ್ನು ಪಡೆದು ಆ ಶಿಲಾಪಟ್ಟದಲ್ಲಿಯೇ ಅವನನ್ನು ಕುಳ್ಳಿರಿಸಿ ಕಾಡುಹೂವುಗಳಿಂದ ಅರ್ಘ್ಯವನ್ನು ಕೊಟ್ಟು ಕಮಲದೆಲೆಗಳಲ್ಲಿ ಸರೋವರದ ನೀರನ್ನು ತಂದು ಪಾದಕಮಲಗಳನ್ನು ತೊಳೆದು ಆ ಪವಿತ್ರವಾದ ಪಾದೋದಕವನ್ನು ಎಲ್ಲರೂ ತಲೆಯಲ್ಲಿ ಧರಿಸಿಕೊಂಡರು. ವ್ಯಾಸಮಹರ್ಷಿಯು ತನ್ನ ಮೊಮ್ಮಕ್ಕಳ ವಿಶೇಷವಾದ ಆಯಾಸ(ಶ್ರಮ)ಕ್ಕಾಗಿ ದುಖಮೀರಿ ಕಣ್ಣ ನೀರನ್ನು ತುಂಬಿಕೊಂಡರು. ಅವರು ಬಂದುದು ಪರಮಾನುಗ್ರಹವೆಂದು ಧರ್ಮರಾಜನು ಅವರನ್ನು ಕುರಿತು ಹೀಗೆಂದನು- ೬೦. ಎಲೈ ಮುನೀಶ್ವರನೇ ನಿಮ್ಮ ಪಾದಕಮಲದ ದರ್ಶನದಿಂದ ನಮ್ಮ ವನವಾಸದ ಆಯಾಸಗಳೆಲ್ಲವೂ ಮಾಯವಾದುವು. ಸಾಗರವೆಂಬ ಒಡ್ಯಾಣದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ನಾವು ಈಗ ಆಳಿದವರಾದೆವು. ನಮ್ಮ ಹೃದಯಬೇನೆಗಳು ಅಡಗಿದುವು. ನಮಗೆ ಅನೇಕ ಶುಭಪರಂಪರೆಗಳುಂಟಾದವು. ಇನ್ನೇನುತಾನೆ ಆಗವು? ೬೧. ಆಪತ್ತುಗಳೆಂಬ ಸಮುದ್ರದಲ್ಲಿ ಅತಿಯಾದ ಅಪಾಯಗಳಿಂದ ಹೆದರಿ ಮುಳುಗಿ ಕೃಶವಾಗಿರುತ್ತಿರುವ ನಮಗೆ ಪಾಪ ಹೋಗಲಾಡಿಸುವ ನೀವೇ ಶರಣು(ಆಶ್ರಯ). ನೀವು ಯೋಚಿಸಿ ಈ ಆಪತ್ತಿಗೆ ಪರಿಹಾರವಾವುದೆಂಬುದನ್ನು ಈಗಲೆ ತಿಳಿಸಿ. ವ|| ಎನ್ನಲು ಆ ಋಷಿಶ್ರೇಷ್ಠನು ನಾವೂ ಅದಕ್ಕಾಗಿಯೇ ಬಂದಿದ್ದೇವೆ ಎಂದನು. ೬೨. (ಯಾವ ಪ್ರತಿಫಲವೂ ಇಲ್ಲದೆ) ಸುಮ್ಮನೆ ದೇವತೆಗಳಿಗೆ ತನ್ನ ಕಲಾಸಮೂಹಗಳಿಂದ ಅಮೃತವನ್ನು ಕೊಟ್ಟು ಕೃಶವಾದ ಚಂದ್ರನ ಹಾಗೆ ಸತ್ಯಕ್ಕಾಗಿ ದಾಯಾದ್ಯರಿಗೆ ಭೂಭಾರವನ್ನು ಕೊಟ್ಟು ಅಪಾಯಕ್ಕೊಳಗಾದ ನೀನೇ ಧನ್ಯನಲ್ಲವೇ? ೬೩. ಬಾಲ್ಯದಿಂದ ನಮಗೆ ನೀವೂ ಬೇರೆಯಿಲ್ಲ ಸುಯೋಧನನು ಬೇರೆಯಲ್ಲ ಈಗ ಹೇಳುವುದು ತಾನೆ ಏನಿದೆ. ನಿಮ್ಮ ಅಯ್ದು ಜನರಲ್ಲಿ ಗುಣಪಕ್ಷಪಾತದಿಂದ ನನ್ನ ಮೆಚ್ಚಿಗೆ (ನಿಮ್ಮಲ್ಲಿ) ಹೆಚ್ಚಾಗಿದೆ

ಕಂ|| ಪನ್ನೆರಡು ವರುಷದವಯು
ಮಿನ್ನೆಯಲ್ ಬಂದುದಹಿತನಿಳೆಯಂ ಕುಡನಾ|
ಸನ್ನಂ ಕಾಳೆಗಮಱಯಿರೆ
ಪನ್ನಗಕೇತನನ ಚಲದ ಕಲಿತನದಳವಂ|| ೬೪

ಅನವದ್ಯಂ|| ಪರಶುರಾಮನನಂಜಿಸಿ ಬೀರಕ್ಕಾಗರಮಾದ ನದೀಜನೇ
ದೊರೆಯನೇದೊರೆಯಂ ಗಳ ಕುಂಭಪ್ರೋದ್ಭವನಾತನ ಪುತ್ರನೇ|
ದೊರೆಯನೇದೊರೆಯಂ ಕೃಪನಂತಾ ಪಾೞಯೊಳಂಕದ ಕರ್ಣನೇ
ದೊರೆಯನಿಂತಿವರೊರ್ಬರಿನೊರ್ಬರ್ ಗರ್ವಿತರಗ್ಗಳಮಲ್ಲರೇ|| ೬೫

ಕಂ|| ಪ್ರಳಯದುರಿ ಕಾಳಕೂಟದ
ಗುಳಿಗೆ ಪುರಾಂತಕ ಲಲಾಟನೇತ್ರಾನಳನೊಂ|
ದಳವಿಗಮಗ್ಗಳಮವರ್ಗಳ
ಮುಳಿಸುಗಳುಂ ಮುಳಿದು ತುಡುವ ದಿವ್ಯೇಷುಗಳುಂ|| ೬೬

ವ|| ಅದು ಕಾರಣದಿಂದವರಂ ಗೆಲ್ವಾಗಳ್ ವಿಕ್ರಮಾರ್ಜುನನಲ್ಲದೆ ಗೆಲ್ಲನದಱಂದಾತಂಗೆ ದಿವ್ಯಾಸ್ತ್ರಂಗಳಂ ಪಡೆಯಲ್ವೇೞ್ಪುದದಂ ಪಡೆವುಪಾಯಮುಮಂ ಮಂತ್ರಮುಮನುಪದೇಶಂಗೆಯ್ಯಲ್ ಬಂದೆವೆಂದು ಯುಷ್ಠಿರಂಗೆ ವೇೞ್ದು ವಿಕ್ರಮಾರ್ಜುನಂಗೆ ಮಂತ್ರಾಕ್ಷರಂಗಳನುಪದೇಶಂಗೆಯ್ದು ಗುಹ್ಯಕನೆಂಬನಂ ಸ್ಮರಣಮಾತ್ರದೊಳ್ ಬರಿಸಿ ಸಾಹಸಾಭರಣನನಿಂದ್ರಕೀಲನಗೇಂದ್ರಮನೆಯ್ದಿಸಿ ಬರ್ಪುದೆಂದು ಪೇೞ್ವುದುಂ ಧರ್ಮಪುತ್ರನಾ ಮುನೀಂದ್ರಂಗೆ ಸಾಷ್ಟಾಂಗವೆಱಗಿ ಪೊಡವಡೆ ಪರಸಿ ಪಯೋಧರಪಥಕ್ಕೊಗೆದನಿತ್ತ ವಿಕ್ರಾಂತತುಂಗನುಂ ಧರ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ವೆನೆಂದಾಗಳ್ ಪಾಂಚಾಳರಾಜತನೂಜೆಯಿಂತೆಂದಳ್-

ಕಂ|| ಬಗೆಯದೆ ಮೆಯ್ಸೊಕಮಂ ಬಗೆ
ಪಗೆವರ ಕಡುವೆರ್ಚನೆನ್ನ ಪೂಣ್ಕೆಯನೆರ್ದೆಯೊಳ್|
ಬಗೆ ಮುನಿಯ ಮಂತ್ರಪದಮಂ
ಬಗೆ ಕೂಡುಗೆ ನಿನ್ನ ಬಗೆದ ಬಗೆಯೊಳ್ ಪಾರ್ಥಾ|| ೬೭

ವ|| ಎಂದು ಬುದ್ಧಿವೇೞ್ದು ಮನದೆಱಕಂ ಮನೋವೇಗದಿಂ ಪರಿಯೆ ಸೈರಿಸಲಾಱದೆ-

ವ|| ಎಂದು ಹೇಳಿ ತನ್ನ ನಡತೆಯನ್ನೂ ಮೋಹವನ್ನೂ ಸ್ಪಷ್ಟಪಡಿಸುವ ಹಾಗೆ ಪುನ ಹೀಗೆಂದನು- ೬೪. ಇನ್ನೇನು ಹನ್ನೆರಡು ವರ್ಷದ ಗಡುವು ಮುಗಿಯುತ್ತ ಬಂದಿದೆ. ಶತ್ರುವಾದ ಕೌರವನು ರಾಜ್ಯವನ್ನು ತಾನಾಗಿ ಕೊಡುವುದಿಲ್ಲ. ದುರ್ಯೋಧನನ ಹಟದ ಮತ್ತು ಪರಾಕ್ರಮದ ಪ್ರಮಾಣವು ನಿಮಗೆ ತಿಳಿಯದೇ? ೬೫. ಪರಶುರಾಮನನ್ನು ಹೆದರಿಸಿ ಪರಾಕ್ರಮಕ್ಕೆ ಆವಾಸಸ್ಥಾನವಾದ ಭೀಷ್ಮನು ಸಾಮಾನ್ಯನೇ? ಕುಂಭಸಂಭವನಾದ ದ್ರೋಣನು ಸಾಮಾನ್ಯನೇ? ಅವನ ಮಗನಾದ ಅಶ್ವತ್ಥಾಮನೇನು ಸಾಮಾನ್ಯನೇ, ಕೃಪನೇನು ಸಾಮಾನ್ಯನೇ? ಅದೇ ಕ್ರಮದಲ್ಲಿ ಶೂರನಾದ ಕರ್ಣನು ಯಾರಿಗೆ ಸಮಾನನು? ಈ ಗರ್ವಿಷ್ಠರಾದ ಇವರಲ್ಲಿ ಒಬ್ಬರಿಗಿಂತೊಬ್ಬರು ಮತ್ತೂ ಶ್ರೇಷ್ಠರು. ೬೬. ಅವರ ಕೋಪಗಳೂ ಕೋಪಿಸಿಕೊಂಡು ಪ್ರಯೋಗಿಸುವ ದಿವ್ಯಾಸ್ತ್ರಗಳೂ ಪ್ರಳಯಕಾಲದ ಬೆಂಕಿ ಕಾಳಕೂಟವೆಂಬ ವಿಷದ ಗುಳಿಗೆ ಈಶ್ವರನ ಹಣೆಗಣ್ಣಿನ ಅಗ್ನಿ ಇವುಗಳ ಪ್ರಮಾಣಕ್ಕಿಂತ ಅತಿಶಯವಾದುವು. ವ|| ಆದ ಕಾರಣದಿಂದ ಅವರನ್ನು ಗೆಲ್ಲಬೇಕಾದರೆ ವಿಕ್ರಮಾರ್ಜುನನಲ್ಲದವನು ಗೆಲ್ಲಲಾರ. ಆದುದರಿಂದ ಅವನನ್ನು ದಿವ್ಯಾಸ್ತ್ರಗಳನ್ನು ಗೆಲ್ಲುವಂತೆ ಹೇಳಬೇಕು. ಅದನ್ನು ಪಡೆಯುವ ಉಪಾಯವನ್ನೂ ಮಂತ್ರವನ್ನೂ ಉಪದೇಶ ಮಾಡುವುದಕ್ಕಾಗಿಯೇ ಬಂದಿದ್ದೇವೆ ಎಂಬುದಾಗಿ ಧರ್ಮರಾಜನಿಗೆ ಹೇಳಿ ವಿಕ್ರಮಾರ್ಜುನನಿಗೆ ಮಂತ್ರಾಕ್ಷರಗಳನ್ನು ಉಪದೇಶಮಾಡಿದರು. ಗುಹ್ಯಕನೆಂಬುವನನ್ನು ಸ್ಮರಿಸಿಕೊಳ್ಳುವುದರಿಂದಲೇ ಬರಮಾಡಿ ಸಾಹಸಾಭರಣನಾದ ಅರ್ಜುನನನ್ನು ಇಂದ್ರಕೀಲಪರ್ವತವನ್ನು ಸೇರಿಸಿ ಬರುವುದು ಎಂದು ಹೇಳಿದರು. ಧರ್ಮರಾಜನು ಋಷಿಶ್ರೇಷ್ಠನಿಗೆ ಸಾಷ್ಟಾಂಗಪ್ರಣಾಮ ಮಾಡಿ ನಮಸ್ಕರಿಸಲು ವ್ಯಾಸನು ಆಶೀರ್ವದಿಸಿ ಆಕಾಶಪ್ರದೇಶಕ್ಕೆ ತೆರಳಿದನು. ಈಕಡೆ ಪರಾಕ್ರಮದಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಅಪ್ಪಣೆಯನ್ನು ಕೇಳುತ್ತಿದ್ದೇನೆ ಎಂದು ಹೇಳಿದಾಗ ದ್ರೌಪದಿಯು ಹೀಗೆಂದಳು- ೬೭. ನಿನ್ನ ಶರೀರಸೌಖ್ಯವನ್ನು ಚಿಂತಿಸದೆ ಶತ್ರುಗಳ ಹೆಚ್ಚಿನ ಅಭಿವೃದ್ಧಿಯನ್ನೂ ನನ್ನ ಪ್ರತಿಜ್ಞೆಯನ್ನೂ ಋಷಿಯ ಮಂತ್ರೋಪದೇಶವನ್ನೂ ಹೃದಯದಲ್ಲಿ ಚಿಂತಿಸು, ಅರ್ಜುನ ನಿನ್ನ ಇಷ್ಟಾರ್ಥಸಿದ್ಧಿಯಾಗಲಿ ವ|| ಎಂದು ಬುದ್ಧಿಹೇಳಿ ಮನಸ್ಸಿನ

ಉ|| ಬಳ್ವಳ ನೀಳ್ದ ಕಣ್ಮಲರ ತಳ್ತೆಮೆಯಿಂ ಕರೆಗಣ್ಮಿ ಬೆಳ್ಗಡ
ಲ್ಗಳ್ವರಿಯಲ್ಕಮಾಟಿಸಿದೊಡೊಯ್ಯನೆ ಮಂಗಳ ಭಂಗ ಭೀತಿಯಂ|
ತಳ್ವದೆ ಮಾಡೆ ಬಾಷ್ಪಜಳಮಂ ಕಳೆದೞ್ಕಱನೀಯೆ ಸಂಬಳಂ
ಗೊಳ್ವವೊಲಾ ತಳೋದರಿಯ ಚಿತ್ತಮನಿೞ್ಕುೞಗೊಂಡನರ್ಜುನಂ|| ೬೮

ವ|| ಅಂತು ಯಾತ್ರೋದ್ಯುಕ್ತನಾಗಿ ಗುಹ್ಯಕನ ಪೆಗಲನೇಱ ಗಂಧೇಭ ವಿದ್ಯಾಧರಂ ವಿದ್ಯಾಧರನಂತೆ ಗಗನತಳಕ್ಕೊಗೆದು ಮಹೇಂದ್ರಕೀಲಾಭಿಮುಖನಾದಾಗಳ್-

ಚಂ|| ಕಡವಿನ ಕಂಪಡಂಗಿದುದು ಜಾದಿಯ ಕಂಪೊದವಿತ್ತು ಸೋಗೆಯು
ರ್ಕುಡುಗಿದುದಂಚೆಯುರ್ಕು ಪೊಸತಾಯ್ತು ಮುಗಿಲ್ಗಳ ಕರ್ಪುಪೀ ನಮೋ|
ಗಡಿಸಿದುದಿಂದುಮಂಡಳದ ಕರ್ಪೆಸೆದತ್ತು ಘನಾಗಮಂ ಮೊದ
ಲ್ಗಿಡೆ ಶರದಾಗಮಂ ನೆಯೆ ಪರ್ಬೆ ಸಮಸ್ತ ಮಹೀವಿಭಾಗಮಂ|| ೬೯

ಅಳಿ ಬಿರಿದಿರ್ದ ಜಾದಿಯೊಳೆ ಪಲ್ಮೊರೆಯುತ್ತಿರೆ ಹಂಸೆ ಪೂತ ಪೂ
ಗೊಳದೊಳೆ ರಾಗಿಸುತ್ತಿರೆ ಶುಕಾವಳಿ ಬಂಧುರ ಗಂಧಶಾಳಿ ಸಂ|
ಕುಳದೊಳೆ ಪಾಯ್ದು ವಾಯ್ದು ನಲಿಯುತ್ತಿರೆ ಸಾರೆ ಚಕೋರಮಿಂದುಮಂ
ಡಳ ಗಳಿತಾಮೃತಾಸವಮನುಂಡುಸಿರುತ್ತಿರೆ ಚೆಲ್ವು ಶಾರದಂ|| ೭೦

ಮ|| ಪುಳಿಯೊಳ್ ಕರ್ಚಿದ ಬಾಳ ಬಣ್ಣಮನೆ ಪೋಲ್ವಾಕಾಶಮಾಕಾಶಮಂ
ಡಳಮಂ ಪರ್ವಿದ ಬೆಳ್ಮುಗಿಲ್ ಮುಗಿಲ ಬೆಳ್ಪೊಳ್ಪೊಕ್ಕು ತಳ್ಪೊಯ್ಯೆ ಬ|
ಳ್ವಳ ನಿಳ್ದಿರ್ದ ದಿಶಾಳಿಶಾಳಿವನ ಗಂಧಾಂಧ ದ್ವಿರೇಫಾಳಿ ಕ
ಣ್ಗೊಳಿಸಿತ್ತೊರ್ಮೆಯ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ|| ೭೧

ವ|| ಆಗಳ್ ವಿಜಯಂ ತನ್ನ ವಿಜಯಶ್ರೀಯ ಬರವಿಂಗಿದಿರ್ವಂದಂತೆ ಬಂದ ಶರತ್ಕಾಲಶ್ರೀಯನುತ್ಕಂಠಿತಹೃದಯನಾಗಿ ಮೆಚ್ಚಿ ನೋಡುತ್ತುಂ ಬರ್ಪನ್ನೆಗಂ ಮುಂದೆ ಶಾರದ ನೀರದಂಗಳೆಲ್ಲಮೊಂದೆಡೆಗೆ ತೆರಳ್ದೊಟ್ಟಿ ಬೆಟ್ಟಾದಂತಿರ್ದ ನೀಹಾರಗಿರಿಯಂ ಕಂಡಿದಾವುದೆಂದು ಬೆಸಗೊಳೆ ಗುಹ್ಯಕನಿಂತೆಂದಂ-

ಪ್ರೀತಿಯು ಮನೋವೇಗದಿಂದ ಹರಿಯುತ್ತಿರಲು ಸಹಿಸಲಾರದೆ ೬೮. ಅತ್ಯಂತ ದೀರ್ಘವಾಗಿ ಬೆಳೆದಿರುವ ಹೂವಿನಂತಿರುವ ಕಣ್ಣುಗಳ ಮುಚ್ಚಿದ ರೆಪ್ಪೆಯಿಂದ ಎಲ್ಲೆ ಮೀರಿ ಬಿಳಿಯ ಕಾಂತಿ ಸಮುದ್ರವು ಹರಿಯುವುದಕ್ಕೆ ಬಯಸಲು ಅಮಂಗಳವಾಗುತ್ತದೆಯೆಂಬ ಭಯದಿಂದ ಕಣ್ಣೀರನ್ನು ಒರಸಿ ದ್ರೌಪದಿಯು ಒಂದು ಮುತ್ತನ್ನು ಕೊಡಲು (ಚುಂಬಿಸಲು) ಅವಳಿಂದ ದಾರಿಯ ಬುತ್ತಿಯನ್ನು ಪಡೆಯುವ ಹಾಗೆ ಆ ಕೃಶಾಂಗಿಯಾದ ದ್ರೌಪದಿಯ ಮನಸ್ಸನ್ನು ಅರ್ಜುನನು ಸೆಳೆದುಕೊಂಡನು. ವ|| ಹಾಗೆ ಪ್ರಯಾಣದಲ್ಲಿ ಯಕ್ಷನ ಹೆಗಲನ್ನೇರಿ ಗಂಧೇಭವಿದ್ಯಾಧರನಾದ ಅರ್ಜುನನು ವಿದ್ಯಾಧರನಂತೆ ಆಕಾಶಕ್ಕೆ ತೆರಳಿ ಮಹೇಂದ್ರಕೀಲದ ಕಡೆಗೆ ನಡೆದನು. ೬೯. ವರ್ಷಾಕಾಲವು ಕಳೆದು ಶರತ್ಕಾಲವು ಪ್ರಾಪ್ತವಾಗಲು ಕದಂಬಪುಷ್ಪಗಳ ವಾಸನೆಯು ಅಡಗಿಹೋಯಿತು. ಜಾಜಿಯ ವಾಸನೆಯು ಹೆಚ್ಚಿತು. ನವಿಲಿನ ವೈಭವವು ನಿಂತಿತು. ಹಂಸದ ವೈಭವವೂ ಹೊಸದಾಗಿ ಬಂದಿತು. ಮೋಡಗಳ ಕಪ್ಪು ಸಂಪೂರ್ಣವಾಗಿ ಹಿಂಜರಿಯಿತು. ಚಂದ್ರಮಂಡಲದ ಕಪ್ಪುಮಚ್ಚೆಯ ಪ್ರಕಾಶಮಾಯವಾಯಿತು. ೭೦. ದುಂಬಿಗಳು ಅರಳಿದ ಜಾಜಿಯಲ್ಲಿ ಝೇಂಕರಿಸಿದುವು. ಹಂಸಪಕ್ಷಿಯು ಸುಮಭರಿತವಾದ ಪುಷ್ಪಸರೋವರದಲ್ಲಿ ಸಂತೋಷಪಡುತ್ತಿತ್ತು. ಗಿಳಿಗಳ ಸಮೂಹವು ಮನೋಹರವಾದ ಸುಗಂಧದಿಂದ ಕೂಡಿದ ಬತ್ತದ ಸಮೂಹದಲ್ಲಿ ನುಗ್ಗಿ ನುಗ್ಗಿ ನಲಿದುವು. ಪಕ್ಕದಲ್ಲಿಯೇ ಚಕೋರ ಪಕ್ಷಿಯು ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತವೆಂಬ ಮಕರಂದವನ್ನುಂಡು ಶಬ್ದಮಾಡಿತು. ಇವುಗಳಿಂದ ಶರತ್ಕಾಲವು ಸುಂದರವಾಯಿತು. ೭೧. ಹುಳಿನೀರಿನಲ್ಲಿ ತೊಳೆದ ಕತ್ತಿಯ ನೀಲಿಯ ಬಣ್ಣವನ್ನೇ ಹೋಲುವ ಆಕಾಶ, ಆಕಾಶ ಪ್ರದೇಶವನ್ನು ಹಬ್ಬಿರುವ ಬಿಳಿಯ ಮೋಡ, ಮೋಡಗಳ ಬಿಳುಪು ಒಳಗೆಲ್ಲಾ ವ್ಯಾಪಿಸಿರಲು ವಿಸ್ತಾರವಾಗಿ ಹರಡಿದ್ದ ದಿಕ್ಕುಗಳ ಸಮೂಹ, ಶಾಳಿವನದ (ಬತ್ತದ ಗದ್ದೆಯ) ಸುವಾಸನೆಯಿಂದ ಸೊಕ್ಕಿರುವ ದುಂಬಿಗಳ ಸಮೂಹ ಇವುಗಳಿಂದ ಆಕರ್ಷಕವಾಗಿರುವ ಶರತ್ಕಾಲವು ಲೋಕಕ್ಕೆ ಕಣ್ಣು ಬರುವಂತೆ ಪ್ರಾಪ್ತವಾಯಿತು. ವ|| ಆಗ ಅರ್ಜುನನು ತನ್ನ ವಿಜಯಲಕ್ಷ್ಮಿಯ ಬರುವಿಕೆಯನ್ನು ಸ್ವಾಗತ ಮಾಡುವುದಕ್ಕೆ ಇದಿರಾಗಿ ಬಂದಂತೆ ಬಂದ ಶರತ್ಕಾಲಲಕ್ಷ್ಮಿಯನ್ನು ಸಂತುಷ್ಟ ಹೃದಯದಿಂದ ಮೆಚ್ಚಿ ನೋಡುತ್ತ ಬರುವಷ್ಟರಲ್ಲಿ ಮುಂದೆ ಶರತ್ಕಾಲದ ಮೋಡಗಳೆಲ್ಲ ಒಟ್ಟಾಗಿ ಸೇರಿ ಬೆಟ್ಟವಾದಂತೆ ಇದ್ದ ಹಿಮವತ್ಪರ್ವತವನ್ನು ನೋಡಿ ಇದು ಯಾವುದು ಎಂದು

ಮ|| ವಿದಳತ್ಕುಂದ ಶಶಾಂಕ ಶಂಖಧವಳಂ ಗಂಧೇಭ ದಾನಾಂಬು ಪೂ
ರ್ಣ ದರೀ ಸುಂದರ ಕಂದರಂ ಮೃಗಪತಿ ಪ್ರಧ್ವಾನ ಗರ್ಜದ್ಗುಹಂ|
ಮದಿರೋನ್ಮತ್ತ ನಿಳಿಂಪ ಕಿಂಪುರುಷ ಕಾಂತಾರಬ್ಧ ಸಂಗೀತಮೊ
ಪ್ಪಿದುದಲ್ತೇ ಸುರ ಸಿದ್ಧ ದಂಪತಿ ರತಿ ಶ್ರೀ ರಮ್ಯ ಹೈಮಾಚಳಂ|| ೭೨

ಕಂ|| ಲಳಿತೋತ್ಸವ ಧ್ವಜಾಂಶುಕ
ವಿಳಸನಮಂ ಮುಂದೆ ನಿನಗೆ ತೋರ್ಪಂತಿರೆ ಕ|
ಣ್ಗೊಳಿಸಿರ್ದುದು ನೋಡ ಹಿಮಾ
ಚಳ ಶಿಖರದ ಮೇಲೆ ಪಾಯ್ವ ಗಂಗಾಸ್ರೋತಂ|| ೭೩

ವ|| ಎಂದು ಗುಹ್ಯಕಂ ಹಿಮವನ್ಮಹೀಧರಮಂ ತೋಱುತ್ತುಂ ಬಂದು ಕೈಲಾಸ ಪರ್ವತಮಂ ಕಂಡು-

ಮ|| ಸ್ರ|| ಇದು ಕೈಲಾಸಂ ಭವಾನೀಧವನ ನೆಲೆ ಮನೋಜಾತನಂ ಬೂದಿಮಾಡಿ
ತ್ತಿದಳ್ ದಕ್ಷಾಧ್ವರಧ್ವಂಸಕನ ನೊಸಲ ಕಣ್ಣಾತನೊಳ್ ತನ್ನ ದೋರ್ಗ|
ರ್ವದಗುರ್ವಂ ಪ್ರಾಕಟಂ ಮಾಡುವ ಬಗೆಯೊಳಿದಂ ಪತ್ತಿ ಕಿೞ್ತೊತ್ತಿ ಪೊತ್ತೆ
ತ್ತಿದೊಡಿತ್ತಂ ಮೆಚ್ಚಿ ಲಂಕಾಪತಿಗೆ ಬರವಂ ರಾಗದಿಂ ನೀಳಕಂಠಂ|| ೭೪

ಚಂ|| ತೊ ತೊಯೆಂಬ ಮಾತನಿನಿತಿಲ್ಲದೊಡಾಂ ತೊವೆಂ ದಲೆಂದೊಡಾ
ತೊಯೊಳೆ ಪೋಯ್ತು ಸೂರುಳನೆ ಸೂರುಳವೇವುವೊ ನಂಬೆನೆಂಬುದುಂ|
ಕಗೊರಲಾತನಾತ್ಮ ವಿಟತತ್ತ್ವಮನುಂಟೊಡೆತಾಗಿ ಮಾಡಿ ಬಾಂ
ದೊಯನೆ ಪೊತ್ತು ಗೌರಿಗೆ ಕವಲ್ದೊಗೆಯ್ಸಿದನೀ ಪ್ರದೇಶದೊಳ್|| ೭೫

ವ|| ಎಂದು ಗುಹ್ಯಕಂ ಕೈಲಾಸಶೈಲದೆಲ್ಲೆಡೆಗಳುಮಂ ವಿಕ್ರಮಾರ್ಜುನಂಗೆ ತೋಱುತ್ತುಂ ಬಂದು-

ಪ್ರಶ್ನೆಮಾಡಿದನು. ಗುಹ್ಯಕನು ಹೀಗೆಂದು ಹೇಳಿದನು. ೭೨. ಅರಳುತ್ತಿರುವ ಮೊಲ್ಲೆಯ ಹೂವಿನಂತಿರುವ ಚಂದ್ರನಂತೆಯೂ ಶಂಖದಂತೆಯೂ ಬೆಳ್ಳಗಿರುವುದೂ ಮದ್ದಾನೆಗಳ ಮದೋದಕದಿಂದ ತುಂಬಿದ ದರಿಗಳಿಂದ ಕೂಡಿ ಮನೋಹರವಾಗಿರುವ ಕಣಿವೆಗಳನ್ನುಳ್ಳುದೂ ಸಿಂಹದ ಅತಿಶಯವಾದ ಶಬ್ದದಿಂದ ಕೂಡಿದ ಗರ್ಜನೆಯನ್ನುಳ್ಳ ಗುಹೆಯನ್ನುಳ್ಳುದೂ ಮದ್ಯಪಾನದ ಅಮಲೇರಿದ ದೇವತೆಗಳ ಮತ್ತು ಕಿಂಪುರುಷಸ್ತ್ರೀಯರಿಂದ ಪ್ರಾರಂಭಿಸಲ್ಪಟ್ಟ ಸಂಗೀತವನ್ನುಳ್ಳುದೂ ದೇವತೆಗಳು ಮತ್ತು ಸಿದ್ಧದಂಪತಿಗಳ ರತಿಕ್ರೀಡೆಯ ವೈಭವದಿಂದ ಮನೋಹರವಾಗಿರುವುದೂ ಆದ ಇದು ಹಿಮವತ್ಪರ್ವತ ಎಂದು ಹೇಳಿದನು. ೭೩. ಅದೋ ನಿನಗೆ ಶುಭೋತ್ಸವಸೂಚಕವಾದ ಬಾವುಟದ ಬಟ್ಟೆಯ ವಿಲಾಸವನ್ನು ನಿನ್ನೆದುರಿಗೆ ತೋರುವಂತೆ ಹಿಮವತ್ಪರ್ವತದ ಶಿಖರದ ಮೇಲೆ ಹರಿಯುತ್ತಿರುವ ಗಂಗಾಪ್ರವಾಹವು ಕಣ್ಣನ್ನು ಆಕಷಿಸುತ್ತಿದೆ ನೋಡು. ವ|| ಎಂದು ಗುಹ್ಯಕನು ಹಿಮಾಲಯಪರ್ವತವನ್ನು ತೋರಿಸುತ್ತ ಮುಂದೆ ಬಂದು ಕೈಲಾಸಪರ್ವತವನ್ನು ಕಂಡು- ೭೪. ಇದು ಕೈಲಾಸಪರ್ವತ; ಪಾರ್ವತೀಪತಿಯ ವಾಸಸ್ಥಾನ, ದಕ್ಷಬ್ರಹ್ಮನ ಯಜ್ಞವನ್ನು ನಾಶಮಾಡಿದ ಈಶ್ವರನ ಹಣೆಗಣ್ಣು ಮನ್ಮಥನನ್ನು ಬೂದಮಾಡಿದುದು ಇದರಲ್ಲಿಯೇ, ಶಿವನ ಮುಂದೆ ತನ್ನ ಬಾಹುಬಲದ ಅಹಂಕಾರವನ್ನೂ ಅತಿಶಯವನ್ನೂ ಪ್ರಕಟಿಸುವ ಆಶೆಯಿಂದ ಈ ಪರ್ವತವನ್ನೇ ಬೇರಿನಿಂದ ಕಿತ್ತು ಹೊತ್ತು ಮೇಲಕ್ಕೆತ್ತಲು ಈಶ್ವರನು ತೃಪ್ತನಾಗಿ ಲಂಕಾಪತಿಯಾದ ರಾವಣನಿಗೆ ಸಂತೋಷದಿಂದ ಇಲ್ಲಿ ವರಪ್ರದಾನ ಮಾಡಿದನು. ೭೫. ನದಿ (ಗಂಗಾನದಿ)ಯೆಂಬ ಮಾತನ್ನು ತಕ್ಷಣ ಬಿಟ್ಟುಬಿಡು. ಹಾಗಿಲ್ಲವಾದರೆ ನಾನು ಖಂಡಿತವಾಗಿಯೂ ನಿನ್ನನ್ನು ಬಿಟ್ಟುಬಿಡುತ್ತೇನೆ ಎಂದು (ಗೌರಿಯು ಸವತಿಮಾತ್ಸರ್ಯದಿಂದ) ಹೇಳಿದಳು. ಶಿವನು ಆ ನಿನ್ನ ಪ್ರತಿಜ್ಞೆಯು ಆ ನದಿಯ ಜೊತೆಯಲ್ಲಿಯೇ ಹೋಯಿತು, ಎಂದನು. ಗೌರಿಯು ಆ ಪ್ರತಿಜ್ಞೆಯದೇನು ನಾನು ನಂಬುವುದಿಲ್ಲ ಎನ್ನಲು ವಿಷಕಂಠನಾದ ಈಶ್ವರನು ಆ ಗೌರಿಯನ್ನು ನಂಬಿಸುವುದಕ್ಕಾಗಿಯೂ ತನ್ನ ವಿಟವಿದ್ಯೆಯನ್ನು ಪ್ರದರ್ಶಿಸುವುದಕ್ಕಾಗಿಯೂ ಗಂಗೆಯನ್ನು ತಲೆಯಲ್ಲಿ ಮರೆಮಾಡಿ ಇಟ್ಟುಕೊಂಡು ಈ ಸ್ಥಳದಲ್ಲಿ ಕವಲೊಡೆದ ಬೇರೆಯ ನದಿಯನ್ನುಂಟುಮಾಡಿದನು. ಅಂದರೆ ತಲೆಯಲ್ಲಿಯೇ ಗಂಗೆಯನ್ನಿಟ್ಟುಕೊಂಡು ಅದನ್ನು ತೊರೆದುಬಿಟ್ಟ ಹಾಗೆ ಅದರ ಕವಲೊಡೆದ ಒಂದೆರಡು ಪ್ರವಾಹವನ್ನು ಹೊರಕ್ಕೆ ಬಿಟ್ಟನು. ವ|| ಎಂದು ಗುಹ್ಯಕನು ಕೈಲಾಸಪರ್ವತದ ಎಲ್ಲಾ ಸ್ಥಳಗಳನ್ನೂ ಅರ್ಜುನನಿಗೆ ತೋರುತ್ತ

ಉ|| ಸಾಳ ತಮಾಳ ಕಾನನಭರೋದ್ಧತ ಸಿಂಧುರಕಂಠಗರ್ಜನಾ
ಭೀಳಮನಂಬರೇಚರವಧೂಕರಪಲ್ಲವಸಂಚಳಲ್ಲತಾಂ|
ದೋಳಮನಾಶ್ರಿತಾದ್ರಿ ನದ ಕೂಳಮನತ್ಯಧರೀಕೃತಾನ್ಯ ಕು
ತ್ಕೀಳಮನಿಂದುಕಾಂತ ಸುಸಲೀಳಮನೆಯ್ದಿನಿಂದ್ರಕೀಳಮಂ|| ೭೬

ಮ|| ಕಮಳಾಂತರ್ಗತ ಗಂಧ ಬಂಧು ನಯದಿಂ ಬಂದಪ್ಪಿಕೊಳ್ವಂತೆ ಗಾ
ಳಿ ಮನಂಗೊಂಡಿರೆ ತೀಡೆ ಭೃಂಗರುತಿಗಳ್ ಮಾಂಗಲ್ಯಗೇಯಂಗಳಂ|
ದಮನಂದೀಯೆ ಮಡಲ್ತು ಪೂತ ಲತೆಗಳ್ ಕೆಯ್ಗೆಯ್ದು ಪೂನೀಡಲ್ಕ
ರ್ಘ್ಯಮನೀವಂತೆವೊಲಾದುದದ್ರಿ ಹರಿಗಂಗಿಷ್ಟಾರ್ಥಸಂಸಿದ್ಧಿಯಂ|| ೭೭

ವ|| ಆಗಳ್ ಗುಹ್ಯಕನಿಂದ್ರಸುತನನಿಂದ್ರಕೀಲನಗೇಂದ್ರದ ಚಂದ್ರಕಾಂತಶಿಲಾ ತಲದೊಳಿೞಪಿ ಬೀಳ್ಕೊಂಡು ಪೋದನಿತ್ತ ವಿಕ್ರಮಾರ್ಜುನಂ ಪರಂತಪಂ ತಪೋನಿಯಮ ನಿಯಮಿತನಾಗಿ-

ಮ|| ಸ್ರ|| ಭಸಿತಂ ಕರ್ಪೂರ ಕಾಳಾಗರು ಬಹುಳ ರಜಂ ವಲ್ಕಲಂ ಕಲ್ಪವೃಕ್ಷ
ಪ್ರಸವಂ ಯಜ್ಞೋಪವೀತಂ ಕನಕ ಕಮಳನಾಳೋತ್ಕರಂ ನಿಚ್ಚನಿಚ್ಚಂ|
ಪೊಸತೆಂಬಂತಾಗೆ ಪಾರ್ಥಂಗೊಸೆದು ತುಡಲುಡಲ್ ಪೂಸಲುಂ ಸಾಲ್ವಿನಂ ಸಾ
ಸಿತುದ್ಯದ್ಭಕ್ತಿ ಭಾರಾನತ ವನವನಿತಾವೃಂದಮಾನಂದದಿಂದಂ|| ೭೮

ಚಂ|| ಅದಿರದ ಚಿತ್ತಮಳ್ಕದ ಮನಂ ಬಗೆಗೊಳ್ಳದ ಮೋಹಮೆತ್ತಿ ಕ
ಟ್ಟಿದ ಜಡೆ ತೊಟ್ಟ ರತ್ನಕವಚಂ ಕೊರಲೊಳ್ ಸಲೆ ಕೋದ ಬಿಲ್ ಪ್ರಯ|
ತ್ನದೆ ಬಿಗಿದಿರ್ದೆರೞ್ದೊಣೆ ಮಿಸುಪ್ಪಸಿಖೇಟಕಮಿಂತಿವೊಂದುಂ ಗುಂ
ದದೆ ನಿಲೆ ನೋೞ್ಪ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ|| ೭೯

ವ|| ಅಂತು ಪರಾಶರನಂದನನುಪದೇಶದೊಳ್ ತಪನಪ್ರಭಂ ತಪಂಗೆಯ್ಯಲ್ ತಗುಳ್ಪೊಡೆ-

ಬಂದನು. ೭೬. ಮುಂದೆ ಒತ್ತಾಗಿ ಬೆಳೆದ ತೆಂಗು ಮತ್ತು ಹೊಂಗೆಯ ಮರಗಳ ಕಾಡಿನಲ್ಲಿ ಎತ್ತರವಾಗಿ ಬೆಳೆದ ಮದ್ದಾನೆಗಳ ಕೊರಳಿನಿಂದ ಬರುತ್ತಿದ್ದ ಘೀಳಿಡುವಿಕೆಯಿಂದ ಭಯಂಕರವಾಗಿದ್ದರೂ ಆಕಾಶಗಾಮಿಗಳಾದ ಖೇಚರಸ್ತ್ರೀಯರ ಚಿಗುರಿನಂತಿರುವ ಕೈಗಳಿಂದ ಚಲಿಸಲ್ಪಟ್ಟ ಬಳ್ಳಿಗಳ ಉಯ್ಯಾಲೆಗಳನ್ನುಳ್ಳುದೂ (ತನ್ನ ಔನ್ನತ್ಯದಿಂದ) ಇತರ ಎಲ್ಲ ಪರ್ವತಗಳನ್ನೂ ಬಹು ಕೀಳನ್ನಾಗಿ ಮಾಡಿರುವುದೂ ಚಂದ್ರಕಾಂತಶಿಲೆಯ ಉಚ್ಚವೈಭವವನ್ನುಳ್ಳುದೂ ಆದ ಇಂದ್ರಕೀಲಪರ್ವತವನ್ನು ಅರ್ಜುನನು ಬಂದು ಸೇರಿದನು. ೭೭. ಕಮಲದ ಹೂವಿನಲ್ಲಿರುವ ವಾಸನೆಗೆ ಸ್ನೇಹಿತನಾದ ವಾಯುವು ವಿನಯದಿಂದ ಬಂದು ಆಲಿಂಗನ ಮಾಡಿಕೊಳ್ಳುವ ಹಾಗೆ ಆಹ್ಲಾದಕರವಾಗಿ ಬೀಸಲು ದುಂಬಿಯ ಶಬ್ದಗಳು ಮಂಗಳವಾದ್ಯದ ಸೊಗಸನ್ನುಂಟುಮಾಡುತ್ತಿರಲು ಹಬ್ಬಿ ಹೂವಿನಿಂದ ಕೂಡಿರುವ ಬಳ್ಳಿಗಳು ಅಲಂಕಾರ ಮಾಡಿಕೊಂಡು ಕೈಗೆ ನೀರನ್ನು ಕೊಡುವ ಹಾಗೆ ಹೂವನ್ನು ಕೊಡಲು ಅರ್ಜುನನಿಗೆ ಆ ಪರ್ವತವು ಇಷ್ಟಾರ್ಥಸಿದ್ಧಿಯನ್ನುಂಟು ಮಾಡುವ ಹಾಗೆ ಕಂಡಿತು. ವ|| ಆಗ ಗುಹ್ಯಕನು ಅರ್ಜುನನನ್ನು ಶ್ರೇಷ್ಠವಾದ ಇಂದ್ರಕೀಲಪರ್ವತದ ಚಂದ್ರಕಾಂತಶಿಲಾತಲದಲ್ಲಿ ಇಳಿಸಿ ಅವನ ಅಪ್ಪಣೆ ಪಡೆದು ಹೋದನು. ಈ ಕಡೆ ಶತ್ರುಗಳನ್ನು ಸುಡುವ ಸ್ವಭಾವವುಳ್ಳ ಅರ್ಜುನನು ತಪೋನಿಯಮ ನಿಷ್ಠನಾದನು. ೭೮. ಅರ್ಜುನನಲ್ಲುಂಟಾದ ಅತ್ಯತಿಶಯವಾದ ಭಕ್ತಿಯ ಭಾರದಿಂದ ನಮ್ರರಾದ ಅರಣ್ಯಾಭಿಮಾನಿ ದೇವತಾಸ್ತ್ರೀಯರ ಸಮೂಹವು ಅವನಿಗೆ ಪ್ರತಿನಿತ್ಯವೂ ಹೊಸಹೊಸದು ಎನ್ನುವ ಹಾಗೆ ಉಡಲು-ತೊಡಲು ಲೇಪನಮಾಡಿಕೊಳ್ಳಲು ಸಾಕಾಗುವಷ್ಟು ವಿಭೂತಿ, ಪಚ್ಚಕರ್ಪೂರ, ಕರಿಯ ಅಗರಿನ ಶ್ರೇಷ್ಠವಾದ ಧೂಳು, ಕಲ್ಪವೃಕ್ಷದ ತೊಗಟೆಯಿಂದ ಮಾಡಿದ ನಾರುಮಡಿ, ಹೊಂದಾವರೆಯ ದಂಟಿನ ನೂಲಿನ ಸಮೂಹದಿಂದ ಮಾಡಿದ ಜನಿವಾರ ಇವುಗಳನ್ನು ಒದಗಿಸಿಕೊಟ್ಟಿತು. ೭೯. ಚಂಚಲವಾಗದ ಬುದ್ಧಿ, ಭಯಪಡದ ಮನಸ್ಸು, ಹೃದಯವನ್ನು ಪ್ರವೇಶಿಸಿದ ಪ್ರೀತಿ (ವಿರಕ್ತಿ), ಎತ್ತಿಕಟ್ಟಿರುವ ಜಡೆ, ತೊಟ್ಟಿರುವ ರತ್ನಖಚಿತವಾದ ಕವಚ (ಮೈಜೋಡು), ಕತ್ತಿನಲ್ಲಿ ವಿಶೇಷವಾಗಿ ಪೋಣಿಸಿಕೊಂಡಿರುವ ಬಿಲ್ಲು, ಪ್ರಯತ್ನಪೂರ್ವಕವಾಗಿ ಬಿಗಿದುಕೊಂಡಿರುವ ಎರಡು ಬತ್ತಳಿಕೆ, ಪ್ರಕಾಶಮಾನವಾಗಿರುವ ಕತ್ತಿಗುರಾಣಿಗಳು ಇವು ಸ್ವಲ್ಪವೂ ಊನವಾಗಿರದೆ ನೆಲಸಿರಲು ನೋಡುವವರಿಗೆ ಅರ್ಜುನನು ಸೌಮ್ಯವಾಗಿಯೂ ಭಯಂಕರವಾಗಿಯೂ ಕಂಡನು. ವ|| ವ್ಯಾಸ ಮಹರ್ಷಿಯ ಉಪದೇಶದಿಂದ ಸೂರ್ಯನ ಕಾಂತಿಯನ್ನುಳ್ಳ ಅರ್ಜುನನು ತಪಸ್ಸು

ಚಂ|| ಕರಿಣಿಯ ಸೀಯನಪ್ಪ ಮೊಲೆವಾಲ್ಗೆ ತಗುಳ್ದುದು ತತ್ಕಿಶೋರ ಕೇ
ಸರಿ ಹರಿಪೋತಮಂ ಬೆದಱುತುಂ ಕರಿಪೋತಮವುಂಡುಗರ್ಚಿ ಕೇ|
ಸರಿಣಿಯ ಕೆಚ್ಚಲಂ ತುಡುಕುತುಂ ಪರಿದತ್ತು ಕುರಂಗಯೂಧದೊಳ್
ಬೆರಸಿದುವಂದು ಪೆರ್ಬುಲಿಗಳಿಂದ್ರತನೂಜತಪಪ್ರಭಾವದಿಂ|| ೮೦

ವ|| ಮತ್ತಮಾ ಗಿರೀಂದ್ರಕಂದರದೊಳ್ ತಪಂಗೆಯ್ವ ತಪೋಧನರ ತಪಂಗಳೆಲ್ಲಮಾತನ ತಪೋಮಯಶಿಖಿಗಳಿಂ ಬೆಂದು ಬೆಂದ ನುಲಿಯಂತೇತರ್ಕಂ ಮುಟ್ಟಿಲ್ಲದೆ ಮುಟ್ಟಗಿಡೆ ದೇವೇಂದ್ರಂ ತನಗಾದ ಹೃತ್ಕಂಪದೊಳಮಾಸನಕಂಪದೊಳಂ ನರೇಂದ್ರತಾಪಸಂ ತನ್ನಿಂದ್ರತ್ವಮಂ ಕೊಳಲೆಂದು ತಪಂಗೆಯ್ದಪನೆಂಬ ಸಂಕೆಯೊಳ್ ತಪೋವಿಘಾತಂ ಮಾಡಿಮೆಂದು ತನ್ನ ನೆಚ್ಚಿನಚ್ಚರಸೆಯರು ಮನಾಱುಂ ಋತುಗಳುಮಂ ಗಂಧರ್ವರುಮಂ ಕಾಮದೇವನಂ ದಂಡನಾಯಕಂ ಮಾಡಿ ಪೇೞುಗಳ್-

ಚಂ|| ವನರುಹಗರ್ಬನೆಂಬವನ ಮುನ್ನಿನ ಗೆಯ್ದ ತಪಂ ತಿಲೋತ್ತಮಾಂ
ಗನೆಯಿನದಂತುಟಾದುದೆನೆ ಮತ್ತಿನ ಬೂತು ತಂಪಗಳೆಮ್ಮ ಪು|
ರ್ವಿನ ಕಡೆಯೊಂದು ಜರ್ವಿನೊಳೆ ತೀರ್ವುವವಲ್ಲದೆ ದೇವ ಬೆಂಬಲಂ
ಮನಸಿಜನೀಗಳಾಱು ಋತುವುಂ ನೆರವೆಂದೊಡೆ ಸೋಲದಿರ್ಪರಾರ್|| ೮೧

ವ|| ಎಂದು ದೇವಪ್ಸರೋವೃಂದಮೆನಿತಾನುಮಂದದಿಂ ಪುರಂದರನ ಪಕ್ಕದೆ ಪೂಣ್ದು ಬಂದು ಗಗನತಳಮೆಲ್ಲಂ ತಮ್ಮ ತೊಟ್ಟ ದಿವ್ಯಾಭರಣಕಿರಣಂಗಳೊಳ್ ತೊಳಗಿ ಬೆಳಗೆ ಬಂದು ಮಹೀತಳಕ್ಕವತರಿಸಿ ನದನದೀಪುಳಿನಪರಿಸರಪ್ರದೇಶಂಗಳೊಳಂ ಕದಳೀವನಂಗಳೊಳಂ ಕನಕಲತಾಮಂಟಪಂಗಳೊಳಮಿಡಿದೆಡೆಗೊಳ್ ಪೂತ ಮಲ್ಲಿಗೆಯ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ಗಗನಮನಜನಿತಶ್ರಮವನಾ ಗಜನಮನಯರಾಱಸಿ ಪಾಲ್ಗಡಲೊಳ ಮಮರ್ದಿನೊಳಂ ಪುಟ್ಟಿದ ಕಳ್ಳ ಸೊರ್ಕಿನೊಳಮುಂತೆ ನಡುಗುವ ಬಡನಡುಗಳ್ಗೆ ನಡುಕಮುಮನುಂತೆ ಪೊಡರ್ವ ಪುರ್ವುಗಳ್ಗೆ ಪೊಡರ್ಪುಮನುಂತೆ ಸೊಗಯಿಸುವ ಬೆಳರ್ವಾಯ್ಗಳ್ಗೆ ತನಿಗೆತ್ತುಮನುಂತೆ ಪೊಳೆವ ನಿಡಿಯಲರ್ಗಣ್ಗಳ್ಗೆ ಮಳಮಳಿಪ ನೋಟಮುಮನುಂತೆ ತೊದಳಿಸುವ ನುಡಿವ ನುಡಿಗಳ್ಗೆ ತೊದಳುಮನೆಕ್ಕೆಯಿಂ ತಳೆಯೆ ನೆಯೆ ಕೆಯ್ಗೆಯ್ದು ಮುನ್ನಮಾಱುಂ ಋತುಗಳುಮಂ ನಿಮ್ಮ ನಿಮ್ಮ ಸ್ವರೂಪಂಗಳುಮನಾತನಿರ್ದಲ್ಲಿಗೆ ಪೋಗಿ ತೋಱಮೆಂದಾಗಳ್-

ಮಾಡಲು ಪ್ರಾರಂಭಿಸಿದನು. ೮೦. ಇಂದ್ರಪುತ್ರನಾದ ಅರ್ಜುನನ ತಪಸ್ಸಿನ ಪ್ರಭಾವದಿಂದ ಸಿಂಹದ ಮರಿಗಳು ಹೆಣ್ಣಾನೆಯ ಸಿಹಿಯಾದ ಮೊಲೆಹಾಲಿಗಾಗಿ ಅದರ ಹಿಂದೆಯೇ ಹೋದುವು. ಆನೆಯ ಮರಿಗಳು ಸಿಂಹದ ಮರಿಗಳನ್ನು ಹೆದರಿಸುತ್ತ ಅವಡುಗಚ್ಚಿ (ತುಟಿಯನ್ನು ಕಚ್ಚಿಕೊಂಡು) ಹೆಣ್ಣು ಸಿಂಹದ ಕೆಚ್ಚಲನ್ನು ಹಿಡಿದುಕೊಳ್ಳುತ್ತ ಓಡಿದುವು. ಹೆಬ್ಬುಲಿಗಳು ಜಿಂಕೆಯ ಸಮೂಹದಲ್ಲಿ ಬೆರಸಿಕೊಂಡವು. (ಅರ್ಜುನನ ತಪಪ್ರಭಾವದಿಂದ ಕಾಡುಪ್ರಾಣಿಗಳೂ ತಮ್ಮ ಸಹಜವೈರವನ್ನು ತೊರೆದು ನಿರ್ಭಯದಿಂದ ಸ್ನೇಹದಿಂದಿದ್ದುವು ಎಂಬುದು ಅಭಿಪ್ರಾಯ) ವ|| ಮತ್ತು ಆ ಪರ್ವತಶ್ರೇಷ್ಠದ ಕಣಿವೆಗಳಲ್ಲಿ ತಪಸ್ಸು ಮಾಡುತ್ತಿದ್ದ ತಪೋಧನರ ತಪಸ್ಸುಗಳೆಲ್ಲವೂ ಆತನ ತಪ್ಪಸ್ಸಿನಿಂದುಂಟಾದ ಬೆಂಕಿಯಿಂದ ಸುಟ್ಟುಹೋಗಿ ಸುಟ್ಟ ಹಗ್ಗದಂತೆ ಉಪಯೋಗವಿಲ್ಲದೆ ನಿಷ್ಪ್ರಯೋಜನವಾದುವು. ದೇವೇಂದ್ರನು ತನಗುಂಟಾದ ಎದೆ ನಡುಕದಿಂದಲೂ ಪೀಠದ ನಡುಗುವಿಕೆ (ಆಸನ ಕಂಪನ)ಯಿಂದಲೂ ಮನುಷ್ಯತಪಸ್ವಿಯು ತನ್ನಿಂದ ಪದವಿಯನ್ನು ಅಪಹರಿಸಲು ತಪಸ್ಸು ಮಾಡುತ್ತಿದ್ದಾನೆಂಬ ಸಂದೇಹದಿಂದ ಅವನ ತಪಸ್ಸಿಗೆ ವಿಘ್ನಮಾಡಿ ಎಂದು ತನಗೆ ಪರಮಪ್ರೀತಿಪಾತ್ರರಾದ ಅಪ್ಸರಸ್ತ್ರೀಯರನ್ನೂ ಆರು ಋತುಗಳನ್ನೂ ಗಂಧರ್ವರನ್ನೂ ಕಾಮದೇವನನ್ನು ದಂಡನಾಯಕನನ್ನಾಗಿ ಮಾಡಿ ಹೇಳಿಕಳುಹಿಸಿದನು- ೮೧. ಎಲೈ ಇಂದ್ರದೇವನೇ ಹಿಂದೆ ಬ್ರಹ್ಮನು ಮಾಡಿದ ತಪಸ್ಸು ತಿಲೋತ್ತಮೆಯೆಂಬ (ಒಬ್ಬ) ದೇವವೇಶ್ಯೆಯಿಂದ ಹಾಗೆ ಆಯಿತು (ನಷ್ಟವಾಯಿತು) ಎನ್ನುವಾಗ ಉಳಿದ ಪ್ರಾಣಿಗಳ ತಪಸ್ಸು ನಮ್ಮ ಹುಬ್ಬಿನ ಕೊನೆಯ ಒಂದು ಅಲುಗಾಟದಿಂದಲೇ ಮುಗಿದುಹೋಗುತ್ತವೆ. ಅಲ್ಲದೆ ಈಗ ಮನ್ಮಥನ ಬೆಂಬಲವೂ ಆರುಋತುಗಳ ಸಹಾಯವೂ ಇರುವಾಗ ಸೋಲದಿರುವವರಾರಿದ್ದಾರೆ? ವ|| ಎಂದು ದೇವಲೋಕದ ಅಪ್ಸರಸ್ತ್ರೀಯರ ಸಮೂಹವು ಇಂದ್ರನ ಹತ್ತಿರ ಎಷ್ಟೋ ರೀತಿಯಲ್ಲಿ ಪ್ರತಿಜ್ಞೆಮಾಡಿ ಬಂದು ಆಕಾಶಪ್ರದೇಶವೆಲ್ಲವೂ ತಾವು ಧರಿಸಿದ್ದ ದಿವ್ಯವಾದ ಒಡವೆಗಳ ಕಾಂತಿಯಿಂದ ಪ್ರಕಾಶಿಸುತ್ತಿರಲು ಭೂಮಿಗೆ ಇಳಿದು ಬಂದು ಗಂಡು ಮತ್ತು ಹೆಣ್ಣು ನದಿಗಳ ಮರಲುದಿಣ್ಣೆಗಳಲ್ಲಿಯೂ ಬಾಳೆಯ ತೋಟಗಳಲ್ಲಿಯೂ ಹೊಂಬಣ್ಣದ ಲತಾಮಂಟಪಗಳಲ್ಲಿಯೂ ಒತ್ತಾಗಿ ಸೇರಿ ಹೂ ಬಿಟ್ಟಿರುವ ಲತಾಗೃಹಗಳಲ್ಲಿಯೂ ಹೂವಿನಗೊಂಚಲುಗಳಲ್ಲಿಯೂ ಆಕಾಶದಲ್ಲಿ ಸಂಚರಿಸಿದುದರಿಂದುಂಟಾದ ಬಳಲಿಕೆಯನ್ನು ಆನೆಯಂತೆ ನಡಗೆಯುಳ್ಳ ಅಪ್ಸರಸ್ತ್ರೀಯರು ಪರಿಹರಿಸಿಕೊಂಡರು. ಕ್ಷೀರಸಮುದ್ರದಲ್ಲಿ ಹುಟ್ಟಿದ ಅಮೃತದಿಂದ ಉತ್ಪನ್ನವಾದ ಸೊಕ್ಕಿನಿಂದ (ಮದ್ಯಪಾನದಿಂದ) ಕೂಡಿದವರಾಗಿ ಸುಮ್ಮನೆ ನಡುಗುತ್ತಿರುವ ಕೃಶವಾದ ನಡುಗಳಿಗೆ ಮತ್ತಷ್ಟು ನಡುಕವನ್ನುಂಟುಮಾಡಿಕೊಂಡು, ಕುಣಿಯುತ್ತಿರುವ ದೀರ್ಘವಾದ ಹುಬ್ಬುಗಳಿಗೆ ಮತ್ತಷ್ಟು ಕುಣಿತವನ್ನು, ಮೊದಲೇ ಸೊಗಯಿಸುವ ಬಿಳಿಯ ಬಾಯಿಗಳಿಗೆ ಹೊಸದಾದ ಅದಿರಾಟವನ್ನು, ಹೊಳೆಯುತ್ತಿರುವ ದೀರ್ಘವಾದ

ಕಂ|| ಆಱುಂ ಋತುಗಳ ಪೂಗಳು
ಮಾಱುಂ ಋತುಗಳ ಪೊದಳ್ದ ಚೆಲ್ವುಗಳುಮಣಂ|
ಬೇಱಲ್ಲದೊಂದು ಸೂೞು ಮೆ
ಯ್ದೋಱದುವೊಡನೊಡನೆ ನೆಲದೊಳಂ ಗಗನದೊಳಂ|| ೮೨

ಮೆಯ್ದೋಱದೊಡವಡನೆಯೆ
ಮೆಯ್ದೋಱಲ್ ಬಗೆದನಂಗಜಂಗಮಲತೆಗಳ್|
ಮೆಯ್ದೋಱುವಂತೆ ಮೆಲ್ಲನೆ
ಮೆಯ್ದೋಱದರಮರಗಣಿಕೆಯರ್ ವಂದಾಗಳ್|| ೮೩

ಸಮದ ಗಜಗಮನೆಯರ್ ಮುಗಿ
ಲ ಮೇಲೆ ನಡೆಪಾಡುವಾಕೆಗಳ್ ತಮಗೆ ಧರಾ|
ಗಮನಂ ಪೊಸತಪ್ಪುದಱಂ
ದಮರ್ದಿರೆ ನಡೆ ನಡೆದು ನಡೆಯಲಾಱದೆ ಸುೞದರ್|| ೮೪

ಕಂ|| ಮುಡಿಯ ಕುಚಯುಗದ ಜಘನದ
ಕಡುವಿಣ್ಪಿಂ ಮಣಲೊಳೞ್ದು ಬರೆ ಮೆಲ್ಲಡಿಗಳ್|
ನಡೆಯದ ಬೇವಸಮಂ ತಾಂ
ನಡೆಯಿಸುವಂತವರ್ಗಳೊಯ್ಯನೊಯ್ಯನೆ ನಡೆದರ್|| ೮೫

ಮ|| ಮುಡಿಯಂ ಸೋಗೆಯೆಗೆತ್ತು ಸೋಗೆ ನಡೆಯಂ ಪೆಣ್ಣಂಚೆಗೆತ್ತಂಚೆ ಮೆ
ಲ್ನುಡಿಯಂ ಕೋಗಿಲೆಗೆತ್ತು ಕೋಗಿಲೆ ಘನೋತ್ತುಂಗ ಸ್ತನದ್ವಂದ್ವದಿ|
ಟ್ಟೆಡೆಯಂ ಕೋಕಮೆಗೆತ್ತು ಕೋಕಮಳಕಾನೀಕಂಗಳಂ ಸೊರ್ಕಿದಾ
ಱಡಿಗೆತ್ತಾಱಡಿ ಸುತ್ತುತುಂ ಬರೆ ಬನಂ ಬರ್ಪಂತೆ ಬಂದಾಕೆಗಳ್|| ೮೬

ವ|| ಅಂತು ನರೇಂದ್ರತಾಪಸನಂ ಸೋಲಿಸಲೆಂದು ವಂದಾಕೆಗಳ್ ತಾಮೆ ಸೋಲ್ತು ಮುಂದು ಮುಂದನೆ ಸುೞಯೆ-

ಚಂ|| ಮಗಮಗಿಸುತ್ತುಮಿರ್ಪ ಮೃಗನಾಭಿಯ ನೀರ್ದಳಿವಲ್ಲಿ ಕಂಪನಾ
ಳ್ದುಗುೞ್ದಸುತ್ತುಮಿರ್ಪ ಪದದೊಳ್ ಪದವಟ್ಟು ಪೊದಳ್ದು ತೋರ ಮ|
ಲ್ಲಿಗೆಯ ತುಱುಂಬು ರಾಹು ತವೆ ನುಂಗಿದ ಚಂದ್ರನನೊಯ್ಯನೊಯ್ಯನಂ
ದುಗುೞ್ವವೊಲೊಪ್ಪಿರಲ್ ಬಲದೊಳುರ್ವಸಿ ದೇಸಿಗೆ ದೇಸಿಯಾಡಿದಳ್|| ೮೭

ಹೂವಿನಂತಿರುವ ಕಣ್ಣುಗಳಿಗೆ ಕೆಂಪಾಗಿ ಕದಡಿದ ನೋಟವನ್ನು ಈಗಾಗಲೆ ಸುಮ್ಮನೆ ತೊದಳಿನಿಂದ ನುಡಿಯುತ್ತಿರುವ ತೊದಳುಮಾತಿಗೆ ಮತ್ತಷ್ಟು ತೊದಳುವಿಕೆಯನ್ನು ಏಕಕಾಲದಲ್ಲಿ ಕೂಡಿಕೊಳ್ಳುವಂತೆ ಪೂರ್ಣವಾಗಿ ಅಲಂಕರಿಸಿಕೊಂಡು ನಡೆಯುತ್ತಿರಲು ಆರು ಋತುಗಳೂ ತಮ್ಮ ತಮ್ಮ ಸ್ವರೂಪಗಳಿಂದ ಆತನಿದ್ದ ಸ್ಥಳಕ್ಕೆ ಹೋಗಿ ತೋರ್ಪಡಿಸಿಕೊಂಡವು. ೮೨. ಆರು ಋತುಗಳ ಹೂವುಗಳೂ ಆರು ಋತುಗಳಲ್ಲಿ ವ್ಯಾಪಿಸಿರುವ ಸೌಂದರ್ಯವೂ ಸ್ವಲ್ಪವೂ ಬೇರೆ ಬೇರೆಯಾಗಿರದೆ ಒಟ್ಟಿಗೇ ಒಂದೇ ಸಲ ಭೂಮಿಯಲ್ಲಿಯೂ ಆಕಾಶದಲ್ಲಿಯೂ ಕಾಣಿಸಿಕೊಂಡವು. ೮೩. ಆರು ಋತುಗಳೊಡನೆಯೇ ತಾವೂ ಕಾಣಿಸಿಕೊಳ್ಳಬೇಕೆಂದು ಭಾವಿಸಿ ಮನ್ಮಥನ ಜಂಗಮಲತೆಗಳು ಕಾಣಿಸಿಕೊಳ್ಳುವ ಹಾಗೆ ಅಪ್ಸರಸ್ತ್ರೀಯರೂ ಬಂದು ನಿಧಾನವಾಗಿ ಕಾಣಿಸಿಕೊಂಡರು. ೮೪. ಮೋಡಗಳ ಮೇಲೆ ನಡೆದಾಡುವ ಸ್ವಭಾವವುಳ್ಳ ಆ ಮದಗಜಮನೆಯರು ನೆಲದ ಮೇಲೆ ನಡೆಯುವುದು ತಮಗೆ ಹೊಸದಾದುದರಿಂದ ಪಾದಗಳು ನೆಲಕ್ಕೆ ಹತ್ತಿಕೊಂಡಿರಲು ನಡೆದೂ ನಡೆದೂ ನಡೆಯಲಸಮರ್ಥರಾಗಿ ಸುತ್ತಾಡಿದರು. ೮೫. ತುರುಬಿನ, ಮೊಲೆಗಳ, ಪಿರ್ರೆಗಳ, ಅತಿಯಾದ ಭಾರದಿಂದ ಅವರ ಮೃದುವಾದ ಪಾದಗಳು ಮರಳಿನಲ್ಲಿ ಹೂತುಹೋಗಲು ನಡೆಯಲು ಅಭ್ಯಾಸವಿಲ್ಲದ ತಮ್ಮ ಆಯಾಸವನ್ನು ಪ್ರದರ್ಶಿಸುವಂತೆ ಮೆಲ್ಲಮೆಲ್ಲಗೆ ನಡೆದರು. ೮೬. ತುರುಬಿನ ಗಂಟನ್ನು ಹೆಣ್ಣು ನವಿಲೆಂದು ಭ್ರಾಂತಿಗೊಂಡು ಗಂಡುನವಿಲೂ, ನಡಗೆಯನ್ನು ಹೆಣ್ಣು ಹಂಸವೆಂದು ಭ್ರಮಿಸಿ ಗಂಡುಹಂಸವೂ, ಮೃದುವಾದ ಮಾತನ್ನು ಹೆಣ್ಣುಕೋಗಿಲೆಯೆಂದು ಭಾವಿಸಿ ಗಂಡುಕೋಗಿಲೆಯೂ ದಪ್ಪವೂ ಎತ್ತರವೂ ಆದ ಮೊಲೆಗಳ ಒತ್ತಡವನ್ನು ಕಂಡು ಚಕ್ರವಾಕದ ಜೋಡಿಯೆಂದು ಭ್ರಮಿಸಿ ಚಕ್ರವಾಕವೂ, ಮುಂಗುರುಗಳ ಸಾಲನ್ನು ಸೊಕ್ಕಿದ ಹೆಣ್ಣುದುಂಬಿಯೆಂದೇ ಭ್ರಮಿಸಿ ಗಂಡುದುಂಬಿಗಳೂ ಆ ಅಪ್ಸರೆಯನ್ನು ಸುತ್ತಿಕೊಂಡು ಬರುತ್ತಿರಲು ಅವರು ವನವೇ ಬರುವ ಹಾಗೆ ಬಂದರು. ವ|| ಹಾಗೆ ರಾಜತಪಸ್ವಿಯನ್ನು ಸೋಲಿಸುವುದಕ್ಕಾಗಿ ಬಂದ ಅವರು ತಾವೇ ಸೋತು ಅವನ ಮುಂದು ಮುಂದಕ್ಕೆ ಸುಳಿದಾಡಿದರು. ೮೭. ಗಮಗಮಿಸುವ ಕಸ್ತೂರಿಯ ನೀರನ್ನು ಚಿಮುಕಿಸುವುದರಿಂದ ವಾಸನಾಯುಕ್ತವಾಗಿ ಸುಟಗೊಂಡು ಅರಳುತ್ತಿರುವ

ಚಂ|| ಪದ ಕೊರಲಿಂಪನಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊದ
ರ್ಕೊದಳೆೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ ಜಾಣನಾಂತು ಮೆ|
ಚ್ಚಿದ ತೆಱದಾಸೆವಟ್ಟಲಸದೆತ್ತಿದವೋಲ್ ದೊರೆವೆತ್ತು ದೂಱದಾ
ಱದ ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆದಂತೆ ಪಾಡಿದಳ್|| ೮೮

ನಡು ನಡುಗಲ್ಕೆ ಪುರ್ವು ಪೊಡರಲ್ಕೆ ಕುರುಳ್ ಮಿಳಿರಲ್ಕೆ ಬಾಯ್ ಬೆಡಂ
ಗಿಡಿದೆಳಸಲ್ ತೆರಳ್ತು ತುಡುಕಲ್ಕೆ ತಗುಳ್ದುದು ಕೆಂದನೀಕೆ ಕ|
ನ್ನಡಿಪಳೊ ಪಾಡಿದೀ ನೆವದಿನೆಂಬಿನೆಗಂ ದನಿಯಿಂಪು ಬೀಣೆಯಂ
ಮಿಡಿದವೊಲಾಗೆ ಗಾನದೊಳೊಡಂಬಡೆ ಮೇನಕೆ ಮುಂದೆ ಪಾಡಿದಳ್|| ೮೯

ಒದವಿದ ಕೆತ್ತ ಕಂಕಣದ ಪುರ್ವಿನ ಜರ್ವು ಲಯಕ್ಕೆ ಲಕ್ಕ ಲೆ
ಕ್ಕದ ಗತಿ ನಾಟಕಾಭಿನಯಮಾಯ್ತೆನೆ ಗೇಯದೊಳೀಕೆ ಸೊರ್ಕನಿ|
ಕ್ಕಿದಳೆನೆ ಕಳ್ಗೆ ಚಕ್ಕಣಮೆನಿಪ್ಪುದು ಸಾಗೆನಿಸಲ್ಕೆ ಸಾಲ್ವ ಸ
ಗ್ಗದ ಪೊಸ ದೇಸಿಯೋಳಿಗಳನೊರ್ವಳೊಱಲ್ದು ನೆಱಲ್ದು ಪಾಡಿದಳ್|| ೯೦

ಉ|| ಆಡದ ಮೆಯ್ಗಳಿಲ್ಲ ನಿಡುಮೆಯ್ಗಳುಮಾಡಿದುವಂತೆ ಮೆಟ್ಟುವಳ್
ನೋಡಿದರೆಲ್ಲರಂ ಪಿಡಿದು ಮೆಟ್ಟಿದಳಿಟ್ಟಳಮಾಯ್ತು ದೇಸಿ ಕೆ|
ಯ್ಗೂಡಿದುದಿಲ್ಲ ಮಾರ್ಗಮೆನೆ ವಿಸ್ಮಯಮಾಗಿರೆ ತನ್ನ ಮುಂದೆ ಬಂ
ದಾಡಿದಳಾ ತಿಳೋತ್ತಮೆಯನೊಲ್ದನುಮಿಲ್ಲ ನರೇಂದ್ರತಾಪಸಂ|| ೯೧

ಹೂವಿನಲ್ಲಿ ಹದವರಿತು ಸೇರಿ ಅಗಲವಾಗುತ್ತಿರುವ ದಪ್ಪಮಲ್ಲಿಗೆಯ ದಂಡೆಯು ತುರುಬಿನ ಮೇಲೆ ಗ್ರಹಣಕಾಲದಲ್ಲಿ ರಾಹುವು ಚಂದ್ರನನ್ನು ನಿಧಾನವಾಗಿ ಹೊರಚೆಲ್ಲುವ ಹಾಗೆ ಸೊಗಸಾಗಿರಲು ಬಲಗಡೆಯಲ್ಲಿ ಊರ್ವಶಿಯ ದೇಶೀಯನೃತ್ಯಕ್ಕಿಂತಲೂ ಉತ್ತಮವಾದ ನೃತ್ಯವನ್ನಾಡಿದಳು. ೮೮. ಹದವಾದ ಶಾರೀರವು ಇಂಪಿನಿಂದ ಕೂಡಿಕೊಂಡಿರಲು ಕೊಂಕು ನಯ ಗಮಕಗಳಿಂದ ಸುರಣೆಗೊಂಡ ಮಧುರವಾದ ಮಾತು ತಂತಿಎಳೆದ ಹಾಗೆ ಶ್ರುತಿಯಲ್ಲಿ ಸೇರಿಕೊಂಡಿರಲು ಜಾಣತನದಿಂದ ಕೂಡಿ ತಾನೆ ಮೆಚ್ಚಿ ಆಸೆಗೊಂಡು ರಾಗವನ್ನು ಎತ್ತಿಕೊಂಡು ಹಾಗೆ ಸ್ವಲ್ಪವೂ ಆಯಾಸ ಪಡದೆ ಮಧ್ಯಮಸ್ವರದಿಂದ ಹೃದಯಸ್ಪರ್ಶಿಯಾಗಿರಲು ಸರಸ್ವತಿಯೇ ಬಾಯಿತೆರೆದ ಹಾಗೆ ಮೇನಕೆಯು ಹಾಡಿದಳು. ೮೯. ಸೊಂಟವು ನಡುಗುತ್ತಿರಲು ಹುಬ್ಬುಗಳು ಅದುರುತ್ತಿರಲು ಮುಂಗುರುಳು ಅಲುಗಾಡುತ್ತಿರಲು ಬಾಯಿಸೌಂದರ್ಯದಿಂದ ಕೂಡಿ ತವಕಪಟ್ಟು ಹಿಡಿದುಕೊಳ್ಳುವುದಕ್ಕೆ ಓಡಿಬಂದಿತು. ಹಾಡಿದ ಈ ನೆಪದಿಂದ ಇವಳು ರತಿಪ್ರೇಮವನ್ನು ಪ್ರತಿಬಿಂಬಿಸುತ್ತಿದ್ದಾಳೆಯೋ ಎನ್ನುವ ಹಾಗೆ ಧ್ವನಿಯ ಮಾಧುರ್ಯವು ವೀಣೆಯನ್ನು ಮೀಟಿದ ಹಾಗೆ ಹೊಂದಿಕೊಂಡಿರಲು ಮೇನಕೆಯು ಮುಂದೆ ಬಂದು ಹಾಡಿದಳು. ೯೦. ಉಂಟಾದ ಬಳೆಗಳ ಚಲನೆಯೂ ಹುಬ್ಬಿನ ಅಲುಗಾಟವೂ ತಾಳದ ಲಯಕ್ಕನುಗುಣವಾಗಿ ಲಕ್ಷಸಂಖ್ಯೆಯ ಗತಿಯನ್ನುಳ್ಳ ನಾಟಕಾಭಿನಯವಾಯಿತೆನ್ನುವ ಹಾಗೆ ಹಾಡುಗಾರಿಕೆಯಲ್ಲಿ ಈಕೆ ಸೊಕ್ಕವನ್ನುಂಟುಮಾಡಿದಳು (ಕಿಣ್ವವನ್ನಿಕ್ಕಿದಳು- ಮದ್ಯಪಾನ ಮಾಡುವುದರಿಂದುಂಟಾಗುವ ಮೈಮರೆಯುವಿಕೆ). ಇವಳ ಗೀತವು ಮದ್ಯಕ್ಕೆ ಚಾಕಣವನ್ನು ಬೆರಸಿದ ಹಾಗಿದೆ. ಹಾಗೆನಿಸಿಕೊಳ್ಳಲೂ ಸಾಕು ಎನ್ನಿಸಿಕೊಳ್ಳುವ ಸ್ವರ್ಗದ ಹೊಸದೇಸಿರಾಗಗಳ ಸಮೂಹವನ್ನು ಒಬ್ಬಳು ಅಪ್ಸರಸ್ತ್ರೀ ಪ್ರೀತಿಯಿಂದ ಸ್ಥಿರವಾಗಿ ಹಾಡಿದಳು. ೯೧. ಶರೀರದ ಯಾವ ಭಾಗವೂ ಚಲಿಸದಿರಲಿಲ್ಲ ; ದೀರ್ಘವಾದ ಶರೀರವೂ ಹಾಗೆ ಪೂರ್ಣವಾಗಿ ಚಲಿಸಿತು. ಅವಳು ಪ್ರೇಕ್ಷಕರೆಲ್ಲರನ್ನು ಹಿಡಿದು ಮೆಟ್ಟಿದಳು; ಮಾರ್ಗಮಿಶ್ರವಿಲ್ಲದ ಇವಳ ದೇಶೀಯತೆ ಬಹು ರಮಣೀಯವಾಯಿತು; ಆದರೂ ಯಾರಿಗೂ ಅವಳು ಅನನಾಗಲಿಲ್ಲ ಎಂದು ಆಶ್ಚರ್ಯವಾಗುವ ಹಾಗೆ ತನ್ನ ಮುಂದೆ ನಾಟ್ಯವಾಡಿದ ತಿಲೋತ್ತಮೆಯನ್ನೂ ರಾಜತಾಪಸನಾದ ಅರ್ಜುನನು ಮೋಹಿಸಲಿಲ್ಲ. ವ|| ಹಾಗೆ ಆ ಅಪ್ಸರಸ್ತ್ರೀಯರು ಸಮೀಪದಲ್ಲಿಯೇ ಓಡಿಯಾಡಿಯೂ ಮನೋಹರವಾಗಿರುವ ಹಾಗೆ ಹಾಡಿಯೂ ಮನುಜಮಾಂಧಾತನಾದ ಅರ್ಜುನನನ್ನು ಸೋಲಿಸಲು ಅಶಕ್ತರಾಗಿ ಸಹಜಮನ್ಮಥನಾದ

ಇಲ್ಲಿಯ ಸೊರ್ಕು, ಚಕ್ಕಣ, ಸಾಗು ಎನ್ನುವ ಪದಗಳಿಗೆ ಸರಿಯಾದ ಅರ್ಥವಾಗಿಲ್ಲ. ಮದ್ಯಪಾನ ಮಾಡುವುದರಿಂದುಂಟಾಗುವ ಮೈಮರೆಯುವಿಕೆ, ಅಮಲೇರುವುದು ಎಂದು ಅರ್ಥವಾಗಬಹುದು.

ವ|| ಅಂತಾಕೆಗಳೆಡೆಯಾಡಿಯುಂ ಮನಂಗೊಳೆ ಪಾಡಿಯುಂ ಮನುಜಮಾಂಧಾತನಂ ಸೋಲಿಸಲಾಱದೆ ಸಹಜಮನೋಜನ ರೂಪಿಂಗಂ ಸುರತಮಕರಧ್ವಜನ ಸೌಂದರ್ಯಕ್ಕಂ ಗಂಧೇಭವಿದ್ಯಾಧರನ ಗಂಡಗಾಡಿಗಂ ತಾಮೆ ಸೋಲ್ತೆಯ್ದೆ ವಂದು-

ಕಂ|| ಬೂದಿ ಜೆಡೆ ಲಕ್ಕಣಂ ತಪ
ಕಾದುವೆರೞ್ದೊಣೆ ಶರಾಸನಂ ಕವಚಮಿವೆಂ|
ತಾದುವೊ ಮುತ್ತುಂ ಮೆೞಸುಂ
ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ|| ೯೨

ಚಂ|| ಕಡು ತಪದಿಂದೆ ನಿನ್ನ ಪಡೆವಾವುದೊ ಗಾವಿಲ ಸಗ್ಗಮಲ್ತೆ ಪೋ
ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮಲ್ತೆ ಸುಖಕ್ಕೆ ಪೇೞೊಡಂ|
ಬಡದವರಾರೊ ಪೆಂಡಿರೊಳಗಾರ್ ಪೆಱರಾಮೆ ದಲಾಮೆ ಬಂದು ಕಾ
ಲ್ವಿಡಿದಪೆವಿಂಬುಕೆಯ್ವೊಡಿವು ಮೆಲ್ಲಡಿಗಳ್ ಗಡ ಕರ್ಚು ಬೂದಿಯಂ|| ೯೩

ಕಂ|| ಕೋಕಿಳಕುಳಕಳ ಗಳನಿನ
ದಾಕುಳರವಮಿಂಪನಾಗಳುಂ ಪಡೆದುದು ನೋ|
ಡೀಕೆಗಳ ಚಳಿತ ಲುಳಿತ
ಭ್ರೂಕುಟಿಯೇ ಪರಮ ಸುಖದ ಕೋಟಿಯನೀಗುಂ|| ೯೪

ವ|| ಎಂದೆನಿತಾನುಂ ತೆಱದೊಳೞಪಿನ ಲಲ್ಲೆಯ ಚೆಲ್ಲದ ಪುರುಡಿನ ಮುಳಿಸಿನ ನೆವದ ಪಡೆಮಾತುಗಳುಂ ನುಡಿದುಂ ಕಾಲ್ವಿಡಿದುಮಚಳಿತಧೈರ್ಯನ ಮನಮಂ ಚಳಿಯಿಸಲಾಱದಚ್ಚರಸೆಯರಚ್ಚಿಗಂಗೊಂಡಂತಾಗೆಯುಂ ಗಂಧರ್ವರ್ ಗರ್ವಮನುೞದು ಪೋಗೆಯುಂ ಕಾಮದೇವನೇವಮಂ ಕೆಯ್ಕೊಂಡು ಸೀಂತಂತೆ ಮೊಗಮಾಡಿ ಪೋಗಿ ದೇವೇಂದ್ರನ ಮೊಗಮಂ ನೋಡಲ್ ನಾಣ್ಚಿರ್ದನಾಗಳಿಂದ್ರಂ ನರೇಂದ್ರತಾಪಸನ ಧೈರ್ಯಕ್ಕೆ ಮೆಚ್ಚಿ ಧರಾಮರವೇಷದೊಳಿಂದ್ರಕೀಲನಗೇಂದ್ರಮನಯ್ದೆವಂದು-

ಮ|| ಸ್ರ|| ಕಣಿಯಂ ಶೌರ್ಯಾಭಿಮಾನಕ್ಕೆಡಱದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ ಬ
ಲ್ಕಣಿಯಂ ಕಲ್ಹಾರ ಸಾರಾಮೃತ ಶಶಿ ವಿಶದಾತ್ಮೀಯವಂಶಕ್ಕೆ ಚೂಡಾ|
ಮಣಿಯಂ ತೀವ್ರ ಪ್ರತಾಪ ದ್ಯುಮಣಿಯನೆರೆದರ್ಥಿವ್ರಜಂಗಳ್ಗೆ ಚಿಂತಾ
ಮಣಿಯಂ ಸಾಮಂತಚೂಡಾಮಣಿಯನಣಿಯರಂ ಬಂದು ಕಂಡಂ ಸುರೇಂದ್ರಂ|| ೯೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನಪ್ರಸನ್ನಗಂಭೀರವಚನರಚನ

ಚತುರಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಸಪ್ತಮಾಶ್ವಾಸಂ

ಅರ್ಜುನನ ರೂಪಕ್ಕೂ ಸುರತ ಮಕರ ಧ್ವಜನಾದ ಅವನ ಸೌಂದರ್ಯಕ್ಕೂ ಗಂಧೇಭವಿದ್ಯಾಧರನ ಪೌರುಷದ ಸೊಬಗಿಗೂ ತಾವೇ ಸೋತು ಅವನ ಸಮೀಪಕ್ಕೆ ಬಂದು ಅವನನ್ನೇ ಪ್ರಶ್ನಿಸಿದರು. ೯೨. ವಿಭೂತಿ ಮತ್ತು ಜಡೆಯ ಲಕ್ಷಣಗಳು ತಪಸ್ಸಿಗೆ ಹೊಂದಿಕೊಳ್ಳುತ್ತವೆ. ಆದರೆ ಎರಡು ಬತ್ತಳಿಕೆ ಬಿಲ್ಲು ಕವಚ ಇವು ಹೇಗೆ ಹೊಂದಿಕೊಳ್ಳುತ್ತವೆ? ಮುತ್ತನ್ನೂ ಮೆಣಸನ್ನೂ ಕೋದಂತಿರುವ ಈ ನಿನ್ನ ತಪಸ್ಸಿನ ರೀತಿ ಅದೆಂತಹುದು? ೯೩. ಎಲೋ ದಡ್ಡ, ತೀವ್ರವಾದ ತಪಸ್ಸಿನಿಂದ ನೀನು ಪಡೆಯಬೇಕಾದ ವಸ್ತು ತಾನೆ ಏನು? ಸ್ವರ್ಗವಲ್ಲವೇ, ಹೋಗು ಮೂರ್ಖ, ಮಾತನಾಡಬೇಡ. ಸ್ವರ್ಗದ ಫಲವೂ ಸುಖವೇ ಅಲ್ಲವೇ? ಸುಖಕ್ಕೆ ಒಪ್ಪದವರಾರಿದ್ದಾರೆ, ಸ್ತ್ರೀಯರಲ್ಲಿ ನಮಗಿಂತ ಸೌಂದರ್ಯವತಿಯರಾದವರು? ನಾವೇ ಅಲ್ಲವೇ (ಪರಮ ಸೌಂದರ್ಯವತಿಯರಾದವರು) ನಾವೇ ಬಂದು ನಿನ್ನ ಕಾಲನ್ನು ಹಿಡಿಯುತ್ತಿದ್ದೇವೆ. ಈ ಮೃದುವಾದ ನಿನ್ನ ಕಾಲುಗಳು ನಾವು ಆಶ್ರಯಿಸುವುದಕ್ಕೆ ಯೋಗ್ಯವಾದುವಲ್ಲವೇ? ಬೂದಿಯನ್ನು ತೊಳೆದುಕೊ. ೯೪. ಇಗೋ ಕೋಗಿಲೆಗಳ ಸಮೂಹದ ಕಂಠಧ್ವನಿ ಯಾವಾಗಲೂ ಮಾಧುರ್ಯವನ್ನು ಪಡೆದಿದೆ. ನೋಡು ಈ ಅಪ್ಸರೆಯರ ಚಲಿಸುತ್ತಿರುವ ವಕ್ರವಾದ ಹುಬ್ಬುಗಳ ತುದಿಗಳೇ ಸುಖದ ಪರಮಾವಯನ್ನುಂಟುಮಾಡುತ್ತವೆ. ವ|| ಎಂಬುದಾಗಿ ಎಷ್ಟೋ ರೀತಿಯ ಪ್ರೇಮದ, ಮದ್ದಿನ, ಚೆಲ್ಲಾಟದ, ಹುರುಡಿನ, ಕೋಪದ, ನೆಪದ ಪ್ರತಿಮಾತುಗಳನ್ನು ಆಡಿಯೂ ಕಾಲು ಹಿಡಿದೂ ಸ್ಥಿರಚಿತ್ತನಾದ ಅರ್ಜುನನ ಮನಸ್ಸನ್ನು ಕದಲಿಸಲಸಮರ್ಥರಾದರು. ಅಪ್ಸರಸ್ತ್ರೀಯರು ವ್ಯಸನಗೊಂಡವರಂತೆ ಅಸಮಾಧಾನವನ್ನು ಹೊಂದಿದರು. ಗಂಧರ್ವರು ತಮ್ಮ ಅಹಂಕಾರವನ್ನು ತೊರೆದರು. ಮನ್ಮಥನು ಅವಮಾನವನ್ನು ಹೊಂದಿ ಸೀಂತ ಹಾಗೆ ಮುಖವನ್ನು ಮಾಡಿಕೊಂಡು ಹೋಗಿ ದೇವೇಂದ್ರನ ಮುಖವನ್ನು ನೋಡಲು ನಾಚಿಕೆಗೊಂಡನು. ಆಗ ಇಂದ್ರನು ರಾಜತಾಪಸನಾದ ಅರ್ಜುನನ ಧೈರ್ಯಕ್ಕೆ ಮೆಚ್ಚಿ ಬ್ರಾಹ್ಮಣ ವೇಷದಲ್ಲಿ ತಾನೇ ಇಂದ್ರಕೀಲಪರ್ವತಕ್ಕೆ ಬಂದನು. ೯೫. ಶೌರ್ಯಾಭಿಮಾನಿಗಳಿಗೆ ಗಣಿಯೂ ಯುದ್ಧದಲ್ಲಿ ಪ್ರತಿಭಟಿಸಿದ

ಶತ್ರುಸೈನ್ಯಕೆ ಬಹು ಶೂರನೂ, ಕಲ್ಹಾರ ಪುಷ್ಪದಂತೆಯೂ ಸಾರವತ್ತಾದ ಅಮೃತದಂತೆಯೂ, ಚಂದ್ರಮಂಡಲದಂತೆಯೂ ಸ್ವಚ್ಛವಾಗಿರುವ ತನ್ನ ವಂಶಕ್ಕೆ ತಲೆಯಾಭರಣವೂ ತೀಕ್ಷ್ಣವಾದ ಪ್ರತಾಪದಲ್ಲಿ ಸೂರ್ಯನೂ ಬೇಡುವ ಯಾಚಕವರ್ಗಕ್ಕೆ ಚಿಂತಾಮಣಿಯೂ ಸಾಮಂತಚೂಡಾಮಣಿಯೂ ಆದ ಅರ್ಜುನನನ್ನು ಇಂದ್ರನು ಬಂದು ಕಂಡನು.

ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಏಳನೆಯ ಆಶ್ವಾಸ.
***********



************

ಕಾಮೆಂಟ್‌ಗಳಿಲ್ಲ: