ಭಗವದ್ಗೀತೆ ಅಧ್ಯಾಯ-2 (1 ರಿಂದ 40)



ಅಧ್ಯಾಯ-2 (1 ರಿಂದ 40)
ಗೀತಾಸಾರ ಸಂಗ್ರಹ ಶ್ಲೋಕ – 1 
ಯುದ್ಧ ಮಾಡುವುದಿಲ್ಲ ಎಂದು ಕೈಚಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಆರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಗೆ ಪಂಚಾಂಗ ರೂಪದಲ್ಲಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ.ಇಲ್ಲಿ ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು.
ಸಂಜಯ ಉವಾಚ ।
ತಂ ತಥಾ ಕೃಪಯಾSSವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ॥೧॥
ಸಂಜಯ ಉವಾಚ-ಸಂಜಯ ಹೇಳಿದನು:
ತಮ್ ತಥಾ ಕೃಪಯಾ ಆವಿಷ್ಟಮ್ ಅಶ್ರು ಪೂರ್ಣ ಅಕುಲ ಈಕ್ಷಣಮ್ ವಿಷೀದಂತಮ್ ಇದಮ್ ವಾಕ್ಯಮ್ ಉವಾಚ ಮಧುಸೂದನಃ -ಹಾಗೆ ಕಾರುಣ್ಯಕ್ಕೊಳಗಾಗಿ ಕಂಬನಿ ತುಂಬಿ ಕಣ್ಣು ಮಸುಕಾಗಿ ಉಮ್ಮಳಿಸುತ್ತಿರುವ ಅವನನ್ನು ಕಂಡು ಕೃಷ್ಣ ಈ ಮಾತು ನುಡಿದ.
ಅರ್ಜುನನಿಗೆ ಇಡೀ ಸಮಾಜದ, ಜನಾಂಗದ ಮೇಲೆ ಅನುಕಂಪ. ಯುದ್ಧ ಮಾಡುವುದರಿಂದ ಜನಾಂಗ ಹತ್ಯೆಗೆ ಕಾರಣವಾಗುತ್ತೇವೆ ಎನ್ನುವುದು ಆತನ ತಲೆಯಲ್ಲಿ ತುಂಬಿ ಹೋಗಿದೆ. ಕೃಪೆಯ ಆವೇಶದಿಂದ ಕಣ್ಣಲ್ಲಿ ನೀರಿಳಿಯುತ್ತಿದೆ. ಅಜ್ಞಾನದ ಮಂಜು ಮನಸ್ಸನ್ನು ವಿಕ್ಷಿಪ್ತಗೊಳಿಸಿದೆ. ತರ್ಕದ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾನೆ. ಇದು ಸಹಜ ಪ್ರವೃತ್ತಿ ಅಲ್ಲ, ಇದೊಂದು ಆವೇಶ. ಇದಕ್ಕೆ ಕೃಷ್ಣ ನಿಷ್ಠುರವಾಗಿ ಉತ್ತರಿಸುತ್ತಾನೆ.
·  ಶ್ಲೋಕ - 2
ಶ್ರೀಭಗವಾನುವಾಚ ।
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ॥೨॥
ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:
ಕುತಃ ತ್ವಾ ಕಶ್ಮಲಮ್ ಇದಮ್ ವಿಷಮೇ ಸಮುಪಸ್ಥಿತಮ್ ಅನಾರ್ಯ ಜುಷ್ಟಮ್ ಅಸ್ವರ್ಗ್ಯಮ್ ಅಕೀರ್ತಿ ಕರಮ್ ಅರ್ಜುನ - ಅರ್ಜುನ, ಇಂಥ ಸಂಕಟದಲ್ಲಿ ಬಲ್ಲವರು ಮೆಚ್ಚದ, ಅಲ್ಲಿ ಸ್ವರ್ಗಕ್ಕೆ ಸಲ್ಲದ, ಇಲ್ಲಿ ಹೆಸರುಗೆಡಿಸುವ ಈ ಕೊಳೆ ನಿನ್ನನ್ನೇಕೆ ಕವಿಯಿತು?
"ಎಲ್ಲಿಂದ ಬಂತು ನಿನಗೆ ಈ ಬುದ್ಧಿ? ಈ ಭೌತಿಕ ಕೊಳೆ ನಿನಗೆ ಹೇಗೆ ಅಂಟಿತು? ಇಂತಹ ತುರ್ತುಪರಿಸ್ಥಿತಿಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾಗಬೇಕಾದ ಈ ಕ್ಷಣದಲ್ಲಿ ಇದೇನು ಹೊಲಸು ಯೋಚನೆ? ಆರ್ಯರಾದವರು ಯಾರೂ ಈ ರೀತಿ ಎಂದೂ ಯೋಚಿಸುವುದಿಲ್ಲ. ಇಂಥಹ ವಿಚಾರದಾರೆಯಿಂದ- ಪರದಲ್ಲಿ ಸ್ವರ್ಗವಿಲ್ಲ ಹಾಗು ಇಹದಲ್ಲಿ ಕೀರ್ತಿ ಇಲ್ಲ. ತಿಳಿದವರು, ಜ್ಞಾನಿಗಳು, ಹಿರಿಯರು ಎಂದೂ ಈ ರೀತಿ ಯೋಚನೆ ಮಾಡುವುದಿಲ್ಲ"-ಎಂದು ನಿಷ್ಠುರವಾಗಿ ಅರ್ಜುನನ ಸಂಪೂರ್ಣ ವಾದವನ್ನು ಒಂದೇ ಮಾತಿನಲ್ಲಿ ಹೊಡೆದು ಹಾಕಿದ ಕೃಷ್ಣ. ಇಲ್ಲಿ ಬಳಕೆಯಾದ "ಆರ್ಯ" ಎನ್ನುವ ಪದ ಜನಾಂಗ ವಾಚಕ ಪದ ಅಲ್ಲ. ಆರ್ಯ ಎಂದರೆ ತಿಳುವಳಿಕೆ ಇರುವವರು, ವಯೋವೃದ್ಧ ಜ್ಞಾನಿಗಳು, ಗೌರವಾನ್ವಿತರು ಎಂದರ್ಥ. ಕನ್ನಡದಲ್ಲಿ 'ಅಯ್ಯಾ' ಎನ್ನುವ ಪದಕ್ಕೆ ಇದೇ ಅರ್ಥವಿದೆ.
·  ಶ್ಲೋಕ - 3
ಕ್ಲೈಬ್ಯಂ ಮಾಸ್ಮಗಮಃ ಪಾರ್ಥ ನೈತತ್ ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ॥೩॥
ಕ್ಲೈಬ್ಯಮ್ ಮಾ ಸ್ಮಗಮಃ ಪಾರ್ಥ ನ ಏತತ್ ತ್ವಯಿ ಉಪಪದ್ಯತೇ ಕ್ಷುದ್ರಮ್ ಹೃದಯ ದೌರ್ಬಲ್ಯಮ್ ತ್ಯಕ್ತ್ವಾ ಉತ್ತಿಷ್ಠ ಪರಮ್ ತಪ -ಪಾರ್ಥ, ಹೇಡಿಯಾಗಬೇಡ, ನಿನ್ನಲ್ಲಿ ಇದು ತರವಲ್ಲ. ಅರಿಗಳ ಎದೆಗೆಡಿಸುವ ವೀರನೆ, ಕೀಳರಿಮೆಯ ಎದೆಗೇಡಿತನವನ್ನು ತೊರೆದು ಎದ್ದು ನಿಲ್ಲು.
"ನಪುಂಸಕನಂತೆ ಮಾತನಾಡಬೇಡ. ಅರ್ಜುನನಲ್ಲಿ ಇಂತಹ ಹೇಡಿತನವನ್ನು ನಾನು ನಿರೀಕ್ಷಿಸಿರಲಿಲ್ಲ. ಇಂತಹ ಕ್ಷುದ್ರ ಮಾನಸಿಕ ದೌರ್ಬಲ್ಯವನ್ನು ತೊಡೆದುಹಾಕಿ, ವೀರನಾಗಿ ಅನ್ಯಾಯದ ವಿರುದ್ಧ ಹೋರಾಡು" ಎಂದು ಹೇಳಿ ಕೃಷ್ಣ, ಅರ್ಜುನನಿಗೆ ದಿಗ್ಬ್ರಾಂತಿಗೊಳಿಸಿ ಚಿಕೆತ್ಸೆ(Shock Treatment) ನೀಡಿದ್ದಾನೆ. ಕೃಷ್ಣ ಏಕೆ ಹೀಗೆ ಹೇಳಿದ? ಆತ ಯುದ್ಧ ಹಾಗು ರಕ್ತಪಾತವನ್ನು ಬಯಸಿದ್ದನೇ ? ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ: ಯುದ್ಧವಾದರೆ ಸಾಮಾಜಿಕವಾಗಿ ಏನೇನು ತೊಂದರೆ ಆಗಬಹುದು ಎಂದು ಅರ್ಜುನ ಹೇಳಿದ್ದನೋ, ಅದಕ್ಕಿಂತ ಹತ್ತುಪಟ್ಟು ಅನ್ಯಾಯ ಯುದ್ಧವಾಗದೇ ಇದ್ದಿದ್ದರೆ ಆಗುತ್ತಿತ್ತು. ದುರ್ಯೋಧನ ಆ ಕಾಲದ ಮಹಾ ಲೋಕಕಂಟಕ. ತುಂಬಿದ ಸಭೆಯಲ್ಲಿ ತನ್ನ ಸ್ವಂತ ಅತ್ತಿಗೆಯ ಮಾನಭಂಗಕ್ಕೆ ಕೈ ಹಾಕಿದ ಆತ, ಅಧಿಕಾರದ ಗದ್ದುಗೆ ಏರಿದ್ದರೆ ಸಮಾಜದ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ. ಇಲ್ಲಿ ಕೃಷ್ಣನ ಧೋರಣೆ ಈ ದೇಶದ ನಾಯಕತ್ವ ಮುಂದೆ ಯಾರ ಕೈ ಸೇರಬೇಕು ಎನ್ನುವುದೇ ಹೊರತು ಬಂಧು ಪ್ರೇಮವಲ್ಲ. ಗೆಲ್ಲುವುದು ಸೋಲುವುದಕ್ಕಿಂತ, ಅನ್ಯಾಯದ ವಿರುದ್ಧ ದ್ವನಿ ಎತ್ತುವುದು ಮುಖ್ಯ. ಅನ್ಯಾಯದ ವಿರುದ್ಧ ಹೋರಾಡಿ ಸತ್ತರೂ ತೊಂದರೆ ಇಲ್ಲ, ಆದರೆ ಅದರ ವಿರುದ್ಧ ಸೆಟೆದು ನಿಲ್ಲಬೇಕು ಎನ್ನುವುದು ಕೃಷ್ಣನ ಸಂದೇಶ. ಶ್ರೀ ಕೃಷ್ಣ ಮಹಾಭಾರತದ ಮುಖೇನ ನಮಗೆ ಧರ್ಮದ ಒಂದು ಹೊಸ ಸಿದ್ಧಾಂತವನ್ನು ಕೊಟ್ಟ. ಮಹಾಭಾರತಕ್ಕೆ ಮೊದಲು ಇದ್ದ ಧರ್ಮದ ಕಲ್ಪನೆಯೇ ಬೇರೆ. ಉದಾಹರಣೆಗೆ ಸತ್ಯ ಹೇಳುವುದು: ಇದ್ದದ್ದನ್ನು ಇದ್ದಂತೆ ಹೇಳುವುದು ಸತ್ಯ. ಆದರೆ ಕೃಷ್ಣನ ಪ್ರಕಾರ-ಯಾವ ಸುಳ್ಳು ಹೇಳುವುದರಿಂದ ಸಮಾಜಕ್ಕೆ ಹಿತವಾಗುತ್ತದೋ ಅದು ಸತ್ಯ; ಯಾವ ಸತ್ಯ ಹೇಳುವುದರಿಂದ ಸಮಾಜಕ್ಕೆ ಕೆಡುಕಾಗುತ್ತದೋ ಅದು ಸುಳ್ಳು. ಇನ್ನು ಹಿಂಸೆ: ಒಂದು ಹಿಂಸೆಯಿಂದ ಅನೇಕ ಅಹಿಂಸೆ ಸಾಧ್ಯವಾದರೆ ಅದು ಅಹಿಂಸೆ. ಉದಾಹರಣೆಗೆ ನರಭಕ್ಷಕ ಹುಲಿಯೊಂದು ಪ್ರತಿದಿನ ಊರಿಗೆ ದಾಳಿಯಿಟ್ಟು ಒಬ್ಬೊಬ್ಬರನ್ನೇ ತಿನ್ನುತ್ತಿದ್ದರೆ, ಅದನ್ನು ಕೊಲ್ಲುವುದು ಪ್ರಾಣಿ ಹಿಂಸೆ ಅಲ್ಲ. ಒಂದು ಯುದ್ಧದಿಂದ ತಲತಲಾಂತರದವರೆಗೆ ಅಹಿಂಸೆ ಸ್ಥಾಪನೆ ಸಾಧ್ಯವಾದರೆ ಯುದ್ಧಮಾಡುವುದರಲ್ಲಿ ತಪ್ಪಿಲ್ಲ. ಯಾವುದರಿಂದ ಸಜ್ಜನಿಕೆಯ ರಕ್ಷಣೆ ಆಗುತ್ತದೋ ಅದು ಸತ್ಯ. ಧರ್ಮಕ್ಕೆ ಭಾವ ಮುಖ್ಯ. ಯಾವ ಕಾರಣಕ್ಕಾಗಿ ಹೋರಾಡುತ್ತೇವೆ, ಅದರ ಹಿಂದೆ ಇರುವ ಉದ್ದೇಶ ಏನು ಎನ್ನುವುದು ಮುಖ್ಯ.
·  ಶ್ಲೋಕ - 4
ಅರ್ಜುನ ಉವಾಚ ।
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧುಸೂದನ ।
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ ॥೪॥
ಅರ್ಜುನ ಉವಾಚ-ಅರ್ಜುನ ಹೇಳಿದನು:
ಕಥಮ್ ಭೀಷ್ಮಮ್ ಅಹಮ್ ಸಂಖೇ ದ್ರೋಣಮ್ ಚ ಮಧುಸೂದನ ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾ ಅರಿಸೂದನ- ಅರಿಗಳನ್ನು ತರಿದ ಓ ಮಧುಸೂದನ, ಭೀಷ್ಮನನ್ನು, ದ್ರೋಣನನ್ನು, ಪೂಜಿಸಬೇಕಾದ ಮಂದಿಯನ್ನು ನಾನೆಂತು ರಣದಲ್ಲಿ ಬಾಣಗಳಿಂದ ಹೊಡೆದು ಹೋರಾಡಲಿ?
ಕೃಷ್ಣನ ತೀಕ್ಷ್ಣ ಉತ್ತರ ಹಾಗು ಆತನ ನಗುಮೊಗವನ್ನು ಗಮನಿಸಿದ ಅರ್ಜುನನ ಮಾತಿನ ದಾಟಿ ಈಗ ಬದಲಾಗುತ್ತದೆ. ಆತ ಭಾವಾವೇಶ ಬಿಟ್ಟು ಈಗ ಭಾವುಕತೆಯಿಂದ ಶರಣಾಗತಿಯತ್ತ ಹೊರಳುತ್ತಿದ್ದಾನೆ. ಅರ್ಜುನ ಹೇಳುತ್ತಾನೆ "ನನ್ನ ಕಣ್ಣಮುಂದೆ ನಿಂತ ಭೀಷ್ಮಾಚಾರ್ಯರು, ದ್ರೋಣಾಚಾರ್ಯರನ್ನು ಹೇಗೆ ಎದುರಿಸಲಿ? ಒಬ್ಬರು ನಮ್ಮ ವಂಶದ ಮೂಲಪುರುಷನಾದ ರಾಜರ್ಷಿ. ಇನ್ನೊಬ್ಬರು ಎಲ್ಲಾ ಕ್ಷತ್ರಿಯರಿಗೂ ವಿದ್ಯೆ ಕೊಟ್ಟ ಮಹರ್ಷಿ. ಇಂತಹ ಪೂಜಾರ್ಹರಾದ ಮಹಾನೀಯರತ್ತ ಹೇಗೆ ಬಾಣ ಹೂಡಲಿ ? ಸೃಷ್ಟಿಯ ಆದಿಯಲ್ಲಿ ಮದು-ಕೈತಪರನ್ನು ಸಂಹಾರ ಮಾಡಿದ ಓ ಮದುಸೂದನನೆ; ದುಷ್ಟ ಸಂಹಾರಕ್ಕೆಂದು ಅವತರಿಸಿದ ಅರಿಸೂದನನೆ, ಜ್ಞಾನಿಗಳ, ಆಚಾರ್ಯರ ಹತ್ಯೆ ನಿನ್ನ ಮೂಲ ಉದ್ದೇಶ ಅಲ್ಲ" ಎಂದು ಭಿನ್ನ ದಾಟಿಯಲ್ಲಿ ಅರ್ಜುನ ತನ್ನ ಮಾತನ್ನು ಮುಂದುವರಿಸುತ್ತಾನೆ.
·  ಶ್ಲೋಕ - 5
ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ|
ಹತ್ವಾSರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ ॥೫॥
ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ ಭೋಕ್ತುಮ್ ಭೈಕ್ಷ್ಯಮ್ ಅಪಿ ಇಹ ಲೋಕೇ ಹತ್ವಾ ಅರ್ಥ ಕಾಮಾನ್ ತು ಗುರೂನ್ ಇಹ ಏವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್-- ಈ ಮಹಾನುಭಾವಿಗಳನ್ನು ಕೊಲ್ಲುವ ಬದಲು ಇಲ್ಲೆ, ಈ ನೆಲದಲ್ಲಿ ಭಿಕ್ಷೆ ಬೇಡುವುದು ಮೇಲು. ಸಿರಿಯ ಬೆನ್ನು ಹತ್ತಿದ ಇವರನ್ನು ಕೊಂದು ಇಲ್ಲೆ ಅವರ ನೆತ್ತರಿನಿಂದ ನೆನೆದ ಐಸಿರಿಯನುಣ್ಣಬೇಕು! ಗುರು ಹಿರಿಯರನ್ನು ಕೊಂದು, ಸಿರಿವಂತಿಕೆಯ ಭೋಗವನ್ನು ಅನುಭವಿಸುವುದಕ್ಕಿಂತ, ಭಿಕ್ಷೆ ಬೇಡಿ ಬದುಕುವುದು ಹಿರಿತನವಲ್ಲವೇ? ಯಾವ ಸಿಂಹಾಸನ ಅಂತರಂಗದ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಭೀಷ್ಮ-ದ್ರೋಣರಂತಹ ಮಹಾನುಭಾವರನ್ನು ಕೊಡಲಾರದೋ, ಅಂತಹ ಸಿಂಹಾಸನ ನಮಗೇಕೆ ಬೇಕು? ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ನಿಂತ ಇವರನ್ನು ಕೊಂದು ಸಿಂಹಾಸನವೇರಿದರೆ, ಗುರುಗಳ ನೆತ್ತರಿನಿಂದ ತೊಯ್ದ ಭೋಗವನ್ನು ಅನುಭವಿಸಿದಂತೆ.
·  ಶ್ಲೋಕ - 6
ನ ಚೈತದ್ ವಿದ್ಮಃ ಕತರನ್ನೋ ಗರೀಯೋ ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ ।
ಯಾನೇವ ಹತ್ವಾ ನ ಜಿಜೀವಿಷಾಮಸ್ತೇSವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥೬॥
ನ ಚ ಏತತ್ ವಿದ್ಮಃ ಕತರತ್ ನಃ ಗರೀಯಃ ಯತ್ ವಾ ಜಯೇಮ ಯದಿ ವಾ ನಃ ಜಯೇಯುಃ ಯಾನ್ ಏವ ಹತ್ವಾ ನ ಜಿಜೀವಿಷಾಮಃ ತೇ ಅವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ --ಇದೇ ತಿಳಿಯುತ್ತಿಲ್ಲ. ಯಾವುದು ನಮಗೆ ಹೆಚ್ಚು ಒಳಿತು-ನಾವು ಗೆಲ್ಲುವುದೇ? ಅಥವ ನಮ್ಮನ್ನು ಅವರು ಗೆಲ್ಲುವುದೇ? ಯಾರನ್ನು ಕೊಂದು ನಾವು ಬದುಕ ಬಯಸುವುದಿಲ್ಲವೋ, ಅವರು(ಕೌರವರು) ನಮ್ಮೆದುರು ನಿಂತಿದ್ದಾರೆ.
ಇಲ್ಲಿಯ ತನಕ ತನ್ನ ವಾದವನ್ನೇ ಮಂಡಿಸಿದ ಅರ್ಜುನ ಈಗ ಕೃಷ್ಣನಿಗೆ ಶರಣಾಗಿ ತನಗ್ಯಾವುದು ಒಳಿತು ಎಂದು ಪ್ರಶ್ನೆ ಮಾಡುತ್ತಾನೆ. ನಾವು ಯುದ್ಧ ಮಾಡಿ ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ಅಥವಾ ಗುರುಹಿರಿಯರು ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ತಿಳಿಯುತ್ತಿಲ್ಲ. ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ಆಸೆಯೂ ಹೊರಟುಹೋಗಿದೆಎಂದು ತನ್ನ ಮನಸ್ಸಿನ ಸಂಧಿಗ್ಧತೆಯನ್ನು ಅರ್ಜುನ ಕೃಷ್ಣನ ಮುಂದೆ ಬಿಚ್ಚಿಡುತ್ತಾನೆ. ತಂದೆ ಸಮಾನಾದ ಧೃತರಾಷ್ಟ್ರನ ಮಕ್ಕಳು ನಮ್ಮ ಮುಂದೆ ಯುದ್ಧಕ್ಕೆ ನಿಂತಿದ್ದಾರೆ. ಮಕ್ಕಳೆಂದರೆ ಪ್ರಾಣ ಬಿಡುವ ನಮ್ಮ ದೊಡ್ಡಪ್ಪನ ವಿರುದ್ಧ ಹೋರಾಡಲು ಇಷ್ಟವಿಲ್ಲ ಎನ್ನುತ್ತಾನೆ ಅರ್ಜುನ.
·  ಶ್ಲೋಕ - 7
ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಂಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ॥೭॥
ಕಾರ್ಪಣ್ಯ ದೋಷ ಉಪಹತ ಸ್ವಭಾವಃ ಪೃಚ್ಛಾಮಿ ತ್ವಾಮ್ ಧರ್ಮ ಸಮ್ಮೂಢ ಚೇತಾಃ ಯತ್ ಶ್ರೇಯಃ ಸ್ಯಾತ್ ನಿಶ್ಚಿತಮ್ ಬ್ರೂಹಿ ತತ್ ಮೇ ಶಿಷ್ಯಃ ತೇ ಅಹಮ್ ಶಾಧಿ ಮಾಮ್ ತ್ವಾಮ್ ಪ್ರಪನ್ನಮ್- -ದೌರ್ಬಲ್ಯದ ದೋಷದಿಂದ ನನ್ನ ಸಹಜ ಬೀರಕ್ಕೆ ಮಂಕು ಕವಿದಿದೆ. ಧರ್ಮದ ಬಗೆಗೆ ಬಗೆಗಾಣದವನಾಗಿ ನಿನ್ನನ್ನು ಕೇಳುತ್ತಿದ್ದೇನೆ; ಹೇಳು ನನಗಿದನ್ನು: ಯಾವುದು ನಿಖರವಾದ ಒಳಿತಿನ ದಾರಿ? ನಾನು ನಿನ್ನ ಶಿಷ್ಯ. ನಿನಗೆ ಶರಣು ಬಂದ ನನಗೆ ದಾರಿ ತೋರು.
ನನಗೆ ಕಾರ್ಪಣ್ಯ ದೋಷ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ. ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವುದು ಇಲ್ಲಿ ಸ್ಪಷ್ಟ.
·  ಶ್ಲೋಕ - 8
ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ ।

ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾSಧಿಪತ್ಯಮ್ ॥೮॥
ನ ಹಿ ಪ್ರಪಶ್ಯಾಮಿ ಮಮ ಅಪನುದ್ಯಾತ್ ಯತ್ ಶೋಕಮ್ ಉಚ್ಛೋಷಣಮ್ ಇಂದ್ರಿಯಾಣಾಮ್ ಅವಾಪ್ಯ ಭೂಮೌ ಅಸಪತ್ನಮ್ ಋದ್ಧಮ್ ರಾಜ್ಯಮ್ ಸುರಾಣಾಮ್ ಅಪಿ ಚ ಆಧಿಪತ್ಯಮ್ - ಸತ್ಯ ಸಾರವನ್ನೆಲ್ಲ ಹೀರಿ ಬತ್ತಿಸಿಬಿಡಬಲ್ಲ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೆ ಕಾಣದವನಾಗಿದ್ದೇನೆ-ಹಗೆಗಳೇ ಇಲ್ಲದ, ಹುಲುಸಾದ ಇಡಿಯ ನೆಲದ ಒಡೆತನ ಪಡೆದರೂ, ಸಗ್ಗಿಗರ ಸಾಮ್ರಾಟನಾದರೂ ಕೂಡಾ.
ನನ್ನ ಇಂದ್ರಿಯಗಳು ಸೊರಗಿ ಹೋಗುತ್ತಿವೆ. ನನ್ನ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ, ಸ್ವರ್ಗದಲ್ಲಿ ಪ್ರಭುತ್ವವನ್ನು ಪಡೆದರೂ ಕೂಡಾ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆಎನ್ನುತ್ತಾನೆ ಅರ್ಜುನ.
·  ಶ್ಲೋಕ - 9
ಸಂಜಯ ಉವಾಚ ।
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ ।
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ॥೯॥
ಸಂಜಯ ಉವಾಚ -ಸಂಜಯ ಹೇಳಿದನು:
ಏವಮ್ ಉಕ್ತ್ವಾ ಹೃಷೀಕೇಶಮ್ ಗುಡಾಕೇಶಃ ಪರಂತಪಃ ನ ಯೋತ್ಸ್ಯೇ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಮ್ ಬಭೂವ ಹ- ಅರಿಗಳನ್ನು ತರಿದ, ನಿದ್ದೆಯನ್ನು ಗೆದ್ದ ಅರ್ಜುನ-ಇಂದ್ರಿಯಗಳ ಒಡೆಯನಾದ ಗೋವಿಂದನ ಬಳಿ ಹೀಗೆಂದು- ಮತ್ತೆ 'ನಾನು ಕಾದಲಾರೆ' ಎಂದು ಸುಮ್ಮನಾದನು!
ಸಂಜಯ ಯುದ್ಧಭೂಮಿಯಲ್ಲಿ ಅರ್ಜುನನನ ಸ್ಥಿತಿಯನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಾ, ರೀತಿ ಹೇಳುತ್ತಾನೆ: "ಇಡೀ ಬ್ರಹ್ಮಾಂಡದಲ್ಲಿ ತುಂಬಿರುವ ನಮ್ಮ ಇಂದ್ರಿಯಗಳ ಸ್ವಾಮಿ ಗೋವಿಂದನಲ್ಲಿ ನಿದ್ದೆಯನ್ನು ಗೆದ್ದ ಅರ್ಜುನ 'ನಾನು ಯುದ್ಧ ಮಾಡಲಾರೆ' ಎಂದು ಹೇಳಿ ಮೌನಿಯಾದಎಂದು.
·  ಶ್ಲೋಕ - 10
ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ ॥೧೦॥
ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ ಸೇನಯೋಃ ಉಭಯೋಃ ಮಧ್ಯೇ ವಿಷೀದಂತಮ್ ಇದಮ್ ವಚಃ -ಓ ಭರತ ವಂಶದ ದೊರೆಯೆ, ಎರಡು ಪಡೆಗಳ ನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತ ಈ ಮಾತು ನುಡಿದ.
ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತ ತನ್ನ ಮಾತನ್ನು ಆರಂಭಿಸುತ್ತಾನೆ. ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ.
·  ಶ್ಲೋಕ - 11
ಶ್ರೀಭಗವಾನುವಾಚ ।
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ॥೧೧॥
ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:
ಅಶೋಚ್ಯಾನ್ ಅನ್ವಶೋಚಃ ತ್ವಮ್ ಪ್ರಜ್ಞಾವಾದಾನ್ ಚ ಭಾಷಸೇ ಗತ ಅಸೂನ್ ಅಗತ ಅಸೂನ್ ಚ ನ ಅನುಶೋಚಂತಿ ಪಂಡಿತಾಃ -ಅಳಬಾರದವರಿಗಾಗಿ ನೀನು ಅಳುತ್ತಿರುವೆ. ತಿಳಿದವರು ಆಡದಂಥ ಮಾತುಗಳನ್ನು ತೋಚಿದಂತೆ ಆಡುತ್ತಿರುವೆ. ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ.
ಇದು ಭಗವಂತನ ಉಪದೇಶದ ಮೊದಲ ನುಡಿ. ಇದು ಇಡೀ ಗೀತೆಗೆ ಪಂಚಾಂಗ ರೂಪದಲ್ಲಿದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ "ಯಾರಿಗೋಸ್ಕರ ಅಳಬಾರದೋ ಅಂತವರಿಗೋಸ್ಕರ ಅಳುತ್ತಿರುವೆ. ತುಂಬಾ ತಿಳಿದ ಮಹಾ ಜ್ಞಾನಿಯಂತೆ ಮಾತನಾಡುತ್ತಿರುವೆ" ಎಂದು. ಇದು ಅರ್ಜುನನ ದೌರ್ಬಲ್ಯಕ್ಕೆ ಕೃಷ್ಣ ಹಿಡಿದ ಕನ್ನಡಿ. ಇಲ್ಲಿ 'ನಿನಗೇನೂ ತಿಳಿದಿಲ್ಲ' ಎನ್ನುವ ಭಾವ ಕೂಡ ಸ್ಪಷ್ಟವಾಗಿದೆ. ಅರ್ಜುನನಿಗೆ ಕಾಡಿರುವುದು ಕೆಲವರು(ಗುರು-ಹಿರಿಯರು) ಸಾಯುತ್ತಾರೆ ಇನ್ನು ಕೆಲವರು(ದುಷ್ಟರು) ಬದುಕುತ್ತಾರಲ್ಲಾ ಎನ್ನುವ ಭಯ-ಅದರಿಂದಾಗಿ ದುಃಖ. ದುಃಖಕ್ಕೆ ಮೂಲ ಭಯ-ಭಯಕ್ಕೆ ಮೂಲ ಅಜ್ಞಾನ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಭೀಷ್ಮ ದ್ರೋಣರಂತಹ ಮಹಾತ್ಮರು ಸತ್ತರೆ ಅಳುವುದು ತಪ್ಪೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ಹುಟ್ಟು ಸಾವಿನ ಗುಟ್ಟನ್ನು ಅರಿತಿರಬೇಕು. ಹುಟ್ಟು ಸಾವಿನ ಇನ್ನೊಂದು ಆಯಾಮ ತಿಳಿದಾಗ ನಮಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಜೀವ ಅನಾದಿನಿತ್ಯ; ಅದಕ್ಕೆಂದೂ ಸಾವಿಲ್ಲ. ಈ ಭೌತಿಕ ಶರೀರ ಜೀವಕ್ಕೆ ಒಂದು ಪಂಜರದಂತೆ. ಈ ಪಂಜರದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಹುಟ್ಟು. ಪಂಜರದಿಂದ ಹೊರ ಹೋಗುವುದು ಸಾವು. ಈ ಆಯಾಮದಲ್ಲಿ ನೋಡಿದರೆ ಹೊಸ ಅಂಗಿ ತೊಡುವುದು ಹುಟ್ಟು-ಹಳೆ ಅಂಗಿ ತೊರೆಯುವುದು ಸಾವು. ಈ ಜ್ಞಾನ ನಮಗಿದ್ದರೆ ನಮಗೆ ಸಾವಿನ ಭಯವಿರುವುದಿಲ್ಲ.
ಇಲ್ಲಿ ಕೃಷ್ಣ ಹೇಳುತ್ತಾನೆ: "ಜ್ಞಾನಿಗಳು ಆಡುವ ಮಾತನ್ನು ನೀನು ಆಡುತ್ತಿಲ್ಲ" ಎಂದು. ಏಕೆಂದರೆ ಜ್ಞಾನಿಗಳು ಹುಟ್ಟು-ಸಾವಿನ ಮರ್ಮವನ್ನು ಚನ್ನಾಗಿ ಅರಿತಿರುತ್ತಾರೆ. ನೀನು ಆಡುತ್ತಿರುವುದು ತಿಳುವಳಿಕೆಯ ಮಾತಲ್ಲ. ನಿನ್ನ ತಿಳುವಳಿಕೆಯೇ ವಿಶ್ವದ ಸತ್ಯ ಎನ್ನುವ ಭ್ರಮೆಯಿಂದ ನೀನು ಮಾತನಾಡುತ್ತಿದ್ದೀಯ ಎನ್ನುತ್ತಾನೆ ಕೃಷ್ಣ.
ಇಲ್ಲಿ ಕೃಷ್ಣ ಅರ್ಜುನ ಹಾಕಿದ ಎಲ್ಲಾ ಲೌಕಿಕ ಪ್ರಶ್ನೆಗಳನ್ನು ಬಿಟ್ಟು ಅವನಿಗೆ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತಿದ್ದಾನೆ. ಅರ್ಜುನ ಕಂಡಿದ್ದು ಕೇವಲ ಐಹಿಕ ಪ್ರಪಂಚವಾದರೆ, ಕೃಷ್ಣ ಆತನಿಗೆ ಅದರಾಚೆಗಿನ ಸತ್ಯದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತಿದ್ದಾನೆ.
ಸಾವು ಭಯಾನಕವಲ್ಲ, ಹುಟ್ಟಿ ಬಂದವನಿಗೆ ಸಾವು ಅನಿವಾರ್ಯ. ಆತ್ಮಕ್ಕೆ ಎಂದೂ ಸಾವಿಲ್ಲ. ಆತ್ಮ ಅನಾದಿನಿತ್ಯ. ಆದರೆ ದೇಹ ನಾಶ ಅನಿವಾರ್ಯ. ಮನುಷ್ಯ ತನ್ನ ವಿಕೃತಿಯಿಂದ ಪ್ರಕೃತಿಯೆಡೆಗೆ ಪಯಣಿಸುವ ಕ್ರಿಯೆ ಸಾವು. ಆದ್ದರಿಂದ ಅಳಿದವರ ಬಗೆಗಾಗಲಿ, ಅಳಿಯದವರ ಬಗೆಗಾಗಲಿ, ತಿಳಿದವರು ಅಳುವುದಿಲ್ಲ ಎನ್ನುವುದನ್ನು ಇಲ್ಲಿ ಕೃಷ್ಣ ಅರ್ಜುನನಿಗೆ ಮನವರಿಕೆ ಮಾಡಿಸುತ್ತಿದ್ದಾನೆ.
·  ಶ್ಲೋಕ - 12
ನತ್ವೇವಾಹಂ ಜಾತು ನಾSಸಂ ನ ತ್ವಂ ನೇಮೇ ಜನಾಧಿಪಾಃ ।
ನಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ॥೧೨॥
ನ ತು ಏವ ಅಹಮ್ ಜಾತು ನ ಅಸಮ್ ನ ತ್ವಮ್ ನ ಇಮೇ ಜನ ಅಧಿಪಾಃ ನ ಚ ಏವ ನ ಭವಿಷ್ಯಾಮಃ ಸರ್ವೇ ವಯಮ್ ಅತಃ ಪರಮ್-- ನಾನು ಹಿಂದೆ ಎಂದೂ ಇರದಿದ್ದವನಲ್ಲ. ಅಲ್ಲ ನೀನೂ. ಅಲ್ಲ ಈ ಅರಸರೂ. ಇನ್ನು ಮುಂದೂ ನಾವೆಂದೂ ಇಲ್ಲವಾಗುವವರಲ್ಲ.
ಕೃಷ್ಣ ಇಲ್ಲಿ ಸಾವಿನ ಬಗ್ಗೆ ನಾವು ಏಕೆ ಚಿಂತಿಸಬೇಕಿಲ್ಲ ಎನ್ನುವ ಮಾತಿಗೆ ಪೂರಕವಾಗಿ, ಅದನ್ನು ಸಮರ್ಥಿಸುವ ಮಾತನ್ನು ಹೇಳುತ್ತಾನೆ. ಆತ ಹೇಳುತ್ತಾನೆ: "ನಾನು-ನೀನು ಈ ಎಲ್ಲಾ ರಾಜರು, ಹಿಂದೆ ಇದ್ದೆವು, ಇಂದು ಇದ್ದೇವೆ ಹಾಗು ಮುಂದೆ ಕೂಡಾ ಇರುತ್ತೇವೆ. ದೇಹ ನಾಶವಾದಾಗ ಜೀವ ನಾಶವಾಗುವುದಿಲ್ಲ. ನಾನು ಹೇಗೆ ಅನಾದಿನಿತ್ಯವೋ ಹಾಗೇ ಪ್ರತಿಯೊಂದು ಜೀವರು ಕೂಡಾ ಅನಾದಿನಿತ್ಯ. ಆತ್ಮವನ್ನು ಕೊಲ್ಲುವುದು ಅಸಾಧ್ಯ" ಎಂದು. ಅನಂತ ಜೀವದ ಹರವು ಅನಂತ ಕಾಲದ ತನಕ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟದ ಸೃಷ್ಟಿ ಮಾಡಿ, ಈ ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಟ್ಟ. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.
·  ಶ್ಲೋಕ - 13
ದೇಹಿನೋSಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ ॥೧೩॥
ದೇಹಿನಃ ಅಸ್ಮಿನ್ ಯಥಾ ದೇಹೇ ಕೌಮಾರಮ್ ಯೌವನಮ್ ಜರಾ ತಥಾ ದೇಹಾಂತರ ಪ್ರಾಪ್ತಿ ಧೀರಃ ತತ್ರ ನ ಮುಹ್ಯತಿದೇಹದಲ್ಲಿರುವ ಜೀವಕ್ಕೆ ಈ ದೇಹದಲ್ಲೆ ಎಳೆತನ, ಹರಯ, ಮುಪ್ಪು ಹೇಗೆ-ಹಾಗೇ ದೇಹದ ಬದಲಾವಣೆ ಕೂಡಾ. ಇಂಥಲ್ಲಿ ಧೀರನಾದವನು ಕಂಗೆಡುವುದಿಲ್ಲ.
ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತಿ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ 'ಜೀವ'. ಒಂದು ದಿನ ನಾಶವಾಗುವ ಈ ದೇಹದ ಬಗ್ಗೆ ಧೀರನಾದವನು ಎಂದೂ ಅಳುವುದಿಲ್ಲ ಎನ್ನುತ್ತಾನೆ ಕೃಷ್ಣ. ಇಲ್ಲಿ ಧೀರ ಎಂದರೆ ಅರಿವಿನ ಆನಂದವನ್ನು ಅನುಭವಿಸುವ ಜ್ಞಾನಿ(ಧೀ+ರಃ). ಎಲ್ಲಿ ಜ್ಞಾನವಿದೆಯೋ ಅಲ್ಲಿ ದುಃಖವಿಲ್ಲ.
·  ಶ್ಲೋಕ - 14
ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।
ಆಗಮಾಪಾಯಿನೋನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ॥೧೪॥
ಮಾತ್ರಾ ಸ್ಪರ್ಶಾಃ ತು ಕೌಂತೇಯ ಶೀತ ಉಷ್ಣ ಸುಖ ದುಃಖ ದಾಃ ಆಗಮ ಅಪಾಯಿನಃ ಅನಿತ್ಯಾಃ ತಾನ್ ತಿತಿಕ್ಷಸ್ವ ಭಾರತ -- ಕೌಂತೇಯ, ವಿಷಯ ಸಂಪರ್ಕಗಳೆ ತಂಪು-ಬಿಸಿಗಳ, ಸುಖ-ದುಃಖಗಳ ಅನುಭವ ನೀಡುವಂಥವು. ಇವು ಬಂದು ಹೋಗುವಂಥವು. ನಿರಂತರವಾಗಿ ಇರುವಂಥವಲ್ಲ. ಓ ಭಾರತ, ಅವುಗಳನ್ನು ಸಹಿಸಿಕೋ.
ನಾವು ಬಾಲ್ಯದ ದೇಹವನ್ನು ಕಳೆದುಕೊಂಡು ಯೌವನದ ದೇಹವನ್ನು ಪಡೆಯುತ್ತೇವೆ. ಯೌವನದ ದೇಹವನ್ನು ಕಳೆದುಕೊಂಡು ಮುಪ್ಪಿನ ದೇಹವನ್ನು ಪಡೆಯುತ್ತೇವೆ. ಆದರೆ ಈ ಕಾರಣಕ್ಕಾಗಿ ಯಾರೂ ದುಃಖಿಸುವುದಿಲ್ಲ. ಆದರೆ ಸಾವಿನಲ್ಲಿ 'ಕಾಣುವಇನ್ನೊಂದು ದೇಹ ಇಲ್ಲವಾಗುತ್ತದೆ-ಆಗ ದುಃಖ. ಯಾವ ದೇಹದ ಮೂಲಕ ಭಾಂದವ್ಯದ ನಂಟನ್ನು ಬೆಳೆಸಿಕೊಂಡಿರುತ್ತೇವೋ , ಅದು ಇಲ್ಲವಾಗುತ್ತದಲ್ಲಾ ಎನ್ನುವ ದುಃಖ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತದೆ.
ಜೀವನದಲ್ಲಿ ನಾವು ಅನುಭವಿಸುವ ಸುಖ ಮತ್ತು ದುಃಖದ ಮೂಲ ಮಾತ್ರಾ ಸ್ಪರ್ಶಾ". ಇದು ಎಲ್ಲವುದರ ಮೂಲ. ನಾವು ಯಾವುದನ್ನು ನಮ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತೇವೋ ಅದು ಮಾತ್ರೆ. ಶಬ್ದ, ಸ್ಪರ್ಶ, ರೂಪ, ರಸ ಗಂಧ ಇವೇ ನಮ್ಮ ಸುಖ-ದುಃಖಗಳಿಗೆ ಕಾರಣವಾದ ಐದು ಮಾತ್ರೆಗಳು.
ಸುಖ-ದುಃಖಗಳಿಗೆ ಒಂದು ವ್ಯವಸ್ಥೆ ಇಲ್ಲ. ಒಬ್ಬರಿಗೆ ಸುಖವಾದದ್ದು ಇನ್ನೊಬ್ಬರಿಗೆ ದುಃಖವಾಗಬಹುದು. ವಿಷಯಗಳ ಸ್ಪರ್ಶದಿಂದ ಸುಖ-ದುಃಖ ಬರುತ್ತದೆ. ಅದು ಶೀತೊಷ್ಣದಂತೆ. ಮೊದಲು ಸುಖಕೊಟ್ಟ ವಸ್ತುವೇ ಮುಂದೆ ದುಃಖವಾಗಿ ಪರಿಣಮಿಸಬಹುದು. ಸುಖ-ದುಃಖ ಜೀವದ ಧರ್ಮವಲ್ಲ. ಅದು ಬಂದು ಹೋಗುವಂತದ್ದು. ಅದು ನಮ್ಮ ಮಾನಸಿಕ ಕಲ್ಪನೆಯ ಫಲ. "ನನ್ನ" ಎನ್ನುವುದು ದುಃಖಕ್ಕೆ ಮೂಲ ಕಾರಣ. ನಿದ್ದೆಯಲ್ಲಿ ನಮಗೆ "ನನ್ನ" ಎನ್ನುವುದು ಇಲ್ಲ. ಆದ್ದರಿಂದ ಎಂದೂ ನಿದ್ದೆಯಲ್ಲಿ ದುಃಖವಿಲ್ಲ. ಎಚ್ಚರ ಮತ್ತು ಕನಸಿನಲ್ಲಿ ಮಾತ್ರ ಈ ಸಮಸ್ಯೆ. ನಿದ್ದೆಯಲ್ಲಿ ಎಲ್ಲವೂ ನಿರ್ಮಲ.
ನಾವೇ ನಮ್ಮ ಮಾನಸಿಕ ಭಾವನೆಗಳಿಂದ ಮತ್ತು ಅನುಭವಗಳಿಂದ ನಿರ್ಮಿಸಿಕೊಂಡಿರುವುದು ಈ ಸುಖ-ದುಃಖ. ಇದರಿಂದ ಪಾರಾಗುವ ಉಪಾಯವನ್ನು ನಾವೇ ಕಲಿತುಕೊಳ್ಳಬೇಕು. ದುಃಖದ ಮೂಲದ ಅನ್ವೇಷಣೆ ಮಾಡಿದಾಗ ದುಃಖ ಸಹ್ಯವಾಗುತ್ತದೆ. ನಾವು ನಮ್ಮ ಭಾವನೆಗಳನ್ನು ಸಹನೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಯಾವುದು ಬಂತೋ ಅದನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು. ನನಗೆ 'ಅದೇ ಬೇಕು', 'ಹೀಗೆ ಆಗಬೇಕು' ಎನ್ನುವ ಚಿಂತನೆ ದುಃಖಕ್ಕೆ ಮೂಲ ಕಾರಣ. ಬಂದಿದ್ದನ್ನು ಬಂದಂತೆ ಎದುರಿಸುತ್ತೇನೆ ಎನ್ನುವ ಆತ್ಮ ಸ್ಥೈರ್ಯವಿದ್ದರೆ ದುಃಖವಿಲ್ಲ.
·  ಶ್ಲೋಕ - 15
ಯಂ ಹಿ ನ ವ್ಯಥಯನ್ತ್ಯೇತೇ ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ॥೧೫॥
ಯಂ ಹಿ ನ ವ್ಯಥಯಂತಿ ಏತೇ ಪುರುಷಂ ಪುರುಷ ಋಷಭ ಸಮ ದುಃಖ ಸುಖಮ್ ಧೀರಮ್ ಸಃ ಅಮೃತತ್ವಾಯ ಕಲ್ಪತೇ--ಓ ಗಂಡುಗಲಿಯೇ, ಯಾವ ಶರೀರವನ್ನು[ಜ್ಞಾನಿಯನ್ನು] ಇವು ಕಾಡಲಾರವೋ, ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ. ಅಂತವನು ಸಾವಿಲ್ಲದ ತಾಣವನ್ನು ಸೇರಲು ತಕ್ಕವನಾಗುತ್ತಾನೆ.
ಕೃಷ್ಣ ಮುಂದುವರಿದು ಹೇಳುತ್ತಾನೆ, “ಯಾವ ಪುರುಷನಿಗೆ ಮಾತ್ರಾ ಸ್ಪರ್ಶಕಾಡುವುದಿಲ್ಲವೋ ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರಎಂದು. ಇಲ್ಲಿ "ಪುರುಷ" ಎನ್ನುವ ಪದ ಬಂದಿದೆ. ಪುರುಷ ಎಂದರೆ ಗಂಡಸು, ಗಂಡಸರಿಗೆ ಮಾತ್ರ ಸಾಧನೆ-ಮೋಕ್ಷ’-ಎನ್ನುವ ಮೂಢನಂಬಿಕೆ ನಮ್ಮಲ್ಲಿದೆ. ಆದರೆ ಪುರುಷ ಎಂದರೆ "ಪುರದಲ್ಲಿ ಇರುವ ಜೀವ". ಪುರ ಎಂದರೆ ಪೂರ್ಣವಾದ ದೇಹ. ಅಂದರೆ ಮಾನವ ದೇಹ. ಆದ್ದರಿಂದ ಪುರುಷ ಎಂದರೆ ಮಾನವರು(Human being) ಅಥವಾ ಸಾಧಕ ಜೀವ. ಸ್ಥೂಲ ಶರೀರದಲ್ಲಿದ್ದೂ ಕೂಡಾ ಯಾರಿಗೆ ಮಾತ್ರಾಸ್ಪರ್ಶದಿಂದ ಬರುವ ಸುಖ-ದುಃಖ ಬೇರೆ-ಬೇರೆಯಾಗಿ ಕಾಣುವುದಿಲ್ಲವೋ, ಆತ ಸುಖ ದುಃಖವನ್ನು ಸಮನಾಗಿ ಕಾಣಬಲ್ಲ ಧೀರನೆನಿಸುತ್ತಾನೆ.
ಪುರುಷಃ ಎಂದರೆ ಎಲ್ಲಕ್ಕಿಂತ ದೊಡ್ಡವನಾದ ದೇವರನ್ನು ತಿಳಿದವ. ನಮಗೆ ಸುಖ-ದುಃಖ ಏಕೆ ಬರುತ್ತದೆ ಎನ್ನುವ ಜ್ಞಾನವಿದ್ದಾಗ, ನಾವು ಸುಖ ಬಂದಾಗ ಹಿಗ್ಗುವುದಿಲ್ಲ, ದುಃಖ ಬಂದಾಗ ಕುಗ್ಗುವುದಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸುಖ-ದುಃಖಕ್ಕೂ ಒಂದು ಕಾರಣವಿದೆ. ಸುಖ-ದುಃಖ ಜೀವನದಲ್ಲಿ ಬರುವ ಅಲೆಗಳು. ಇದರಲ್ಲಿ ಒಂದು ಬೇಕು, ಇನ್ನೊಂದು ಬೇಡ ಎನ್ನುವ ಆಯ್ಕೆ ಸರಿಯಲ್ಲ. ಯಾವುದು ಬಂತೋ ಅದಿರಲಿ ಎಂದು ಬದುಕಬೇಕು. ನಮಗೆ ಸುಖ-ದುಃಖವನ್ನು ಇನ್ನೊಬ್ಬರು ದ್ವೇಷದಿಂದ ಕೊಡುವುದಲ್ಲ. ಅದು ನಮ್ಮ ಕರ್ಮ ಫಲ. ಸುಖ-ದುಃಖವನ್ನು ನಮಗೆ ಕೊಡುವವನು ಭಗವಂತ. ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಹೇಗೆ ಶಿಕ್ಷೆ ಕೊಡುತ್ತಾಳೋ, ಹಾಗೇ ಭಗವಂತ ನಮ್ಮ ಉದ್ಧಾರಕ್ಕಾಗಿ ನಮಗೆ ದುಃಖವನ್ನು ಕೊಡುತ್ತಾನೆ. ಇದು ಶಿಕ್ಷೆ ಅಲ್ಲ-ಶಿಕ್ಷಣ. ಮನುಷ್ಯ ದುಃಖದಲ್ಲಿ ಬೆಳೆದಾಗ ಗಳಿಸುವ ಅನುಭವ ಎಂದೂ ಸುಖದಲ್ಲಿ ಗಳಿಸಲಾರ. ದುಃಖ ಜೀವನದ ನಿಜವಾದ ಅನುಭವ. ಇದು ನಮಗೆ ಕೊಡುವ ದುಃಖದ ಹಿಂದೆ ಭಗವಂತನಿಟ್ಟ ಮಹಾ ಕಾರುಣ್ಯ. ಈ ಜ್ಞಾನವಿದ್ದಾಗ ಮಾತ್ರ ನಮಗೆ ಸುಖ-ದುಃಖವನ್ನು ಏಕರೂಪದಲ್ಲಿ ಕಾಣುವ ಮನಃಸ್ಥಿತಿ ಬರುತ್ತದೆ. ಇಂತಹ ಜ್ಞಾನವಿರುವವನು ಧೀರನಾಗುತ್ತಾನೆ. ತಿಳುವಳಿಕೆಯಿಂದ ಧೈರ್ಯ ಬರುತ್ತದೆ. ಯಾರು ಒಂದು ಜನ್ಮದಲ್ಲಿ ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ತಿಳುವಳಿಕೆ ಹಾಗು ಧೈರ್ಯವನ್ನು ಗಳಿಸುತ್ತಾರೋ, ಅವರು ಮುಂದೆಂದೂ ಈ ಸಂಸಾರ ಬಂಧದಲ್ಲಿ ಮರಳಿ ಹುಟ್ಟುವುದಿಲ್ಲ. ಇಂತಹ ಮಾನಸಿಕ ಸಮತೋಲನದ ಮೂಲಕ ಭಗವಂತನನ್ನು ತಿಳಿದು ಮೋಕ್ಷವನ್ನು ಪಡೆಯತ್ತಾರೆ.
·  ಶ್ಲೋಕ - 16
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ ॥೧೬॥
ನ ಅಸತಃ ವಿದ್ಯತೇ ಭಾವಃ ನ ಅಭಾವಃ ವಿದ್ಯತೇ ಸತಃ ಉಭಯೋ ಅಪಿ ದೃಷ್ಟಃ ಅನ್ತಃ ತು ಅನಯೋ ತತ್ವ ದರ್ಶಿಭಿಃ -- ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು]. ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು.
ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ ಕೂಡಾ, ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗು ಅದರಿಂದ ದುಃಖವಿಲ್ಲಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ 'ನನ್ನವರು' ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಕೊನೆಯ ಸತ್ಯವಿದು.
ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಇನ್ನೊಂದು ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ- "ನ ಅಸತಃ ಅಭಾವಃ ಸತಃ ಅಭಾವಃ ನ ವಿದ್ಯತಿ" ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ. ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು. ಹಾಗು ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.
·  ಶ್ಲೋಕ - 17
ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್ ।
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ ॥೧೭॥
ಅವಿನಾಶಿ ತು ತತ್ ವಿದ್ಧಿ ಯೇನ ಸರ್ವಮ್ ಇದಮ್ ತತಮ್ ವಿನಾಶಮ್ ಅವ್ಯಯಸ್ಯ ಆಸ್ಯ ನ ಕಶ್ಚಿತ್ ಕರ್ತುಮ್ ಅರ್ಹತಿ--ಯಾವುದು ಈ ಎಲ್ಲವನ್ನು ವ್ಯಾಪಿಸಿದೆ ಅದು ಅಳಿವಿಲ್ಲದ್ದು ಎಂದು ತಿಳಿ. ಬದಲಾಗದ ಅವನಅಳಿವು ಯಾರ ಅಳಿವಿಗೂ ಎಟಕುವುದಲ್ಲ.
ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದಕ್ಕೆ ನಾಶವಿಲ್ಲ. ರೂಪಾತ್ಮಕ ಪ್ರಪಂಚದಂತೆ ನಾಮಾತ್ಮಕ ಪ್ರಪಂಚವಿದೆ. ಅದು ನಿತ್ಯ. ಇಲ್ಲಿ ನಾಮಾತ್ಮಕ ಎಂದರೆ 'ಅಕ್ಷರ' ; ಅ ದಿಂದ ಕ್ಷ ತನಕ ಇರುವ ಐವತ್ತೊಂದು ವರ್ಣಗಳು. ಈ ಐವತ್ತೊಂದು ಅಕ್ಷರಗಳೇ ಮೂಲಭೂತವಾಗಿರುವ ಇಡೀ ಶಬ್ದ ಪ್ರಪಂಚ. ಅದು ನಾಶ ಮಾಡಲಾಗದ ತತ್ವ. ಆದ್ದರಿಂದ ಭಗವಂತ, ಪ್ರಕೃತಿ, ಜೀವ ಹಾಗು ಈ ಎಲ್ಲಾ ತತ್ವಗಳನ್ನು ಪ್ರತಿಪಾದಿಸುವ ಶಬ್ದ ಅನಾದಿನಿತ್ಯ. ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಈ ನಾಮಾತ್ಮಕ ಪ್ರಪಂಚದಲ್ಲಿನ ವೇದ ವಾಙ್ಮಯನಾದ ಭಗವಂತ ಅವಿನಾಶಿ ಆತನಿಗೆ ಯಾವುದೇ ರೀತಿಯ ನಾಶವಿಲ್ಲ. ಸ್ವರೂಪ ನಾಶ, ದೇಹ ನಾಶ, ದುಃಖಪ್ರಾಪ್ತಿ, ಅಪೂರ್ಣತ್ವ ಇದು ಭಗವಂತನಿಗಿಲ್ಲ. ಆತ ಕಾಲತಃ, ದೇಶತಃ, ಗುಣತಃ ವ್ಯಾಪ್ತನಾಗಿರುವ ಅನಂತ ಸ್ವರೂಪ. ಆತ ಅವ್ಯಯ, ಯಾವ ವಿಕಾರ ಬದಲಾವಣೆಗೆ ಒಳಗಾಗದ, ಅನಾದಿನಿತ್ಯ ಸ್ವರೂಪ.
·  ಶ್ಲೋಕ - 18
ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ ।
ಅನಾಶಿನೋSಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ ॥೧೮॥
ಅಂತವಂತ ಇಮೇ ದೇಹಾಃ ನಿತ್ಯಸ್ಯ ಉಕ್ತಾಃ ಶರೀರಿಣಃ ಅನಾಶಿನಃ ಅಪ್ರಮೇಯಸ್ಯ ತಸ್ಮಾತ್ ಯುಧ್ಯಸ್ವ ಭಾರತ-- ಅಳಿಯದ ಜೀವಕ್ಕೆ ಅಳಿವ ಈ ದೇಹಗಳ ನಂಟು. ಏತರಿದಲೂ ಅವನಿಗೆ ಅಳಿವಿಲ್ಲ. ಅವನು ಎಲ್ಲೆಡೆ ತುಂಬಿದ ಭಗವಂತನ ಪಡಿಯಚ್ಚು. ಓ ಭಾರತ, ಆದ್ದರಿಂದ [ಅಳಿವಿರದ ಅಳವಿಗೆಟುಕದ ಭಗವಂತನ ಪೂಜೆಯೆಂದು] ಹೋರಾಡು.
ಭೌತಿಕ ಶರೀರ ಅಂತವಂತ(ನಾಶವಾಗುವಂತದ್ದು). ಕೇವಲ ಕಣ್ಣಿಗೆ ಕಾಣುವ ಸ್ಥೂಲ ಶರೀರ ಮಾತ್ರ ನಾಶವಾಗುವುದೇ ಹೊರತು ಆತ್ಮವಲ್ಲ. ಏಕೆಂದರೆ ಜೀವ ಭಗವಂತನ ಪಡಿಯಚ್ಚು. ಅದು ಸರ್ವವ್ಯಾಪಿ ಭಗವಂತನ ಪ್ರತಿಬಿಂಬ. ಆದ್ದರಿಂದ ಎಲ್ಲಾ ಕಡೆ ಇರುವ ಭಗವಂತನ ಪ್ರತಿಬಿಂಬವಾದ ಈ ಜೀವ ನಿತ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: "ಸಾಮ್ರಾಟನಾಗಬೇಕು ಎನ್ನುವ ಸ್ವಾರ್ಥದಿಂದಾಗಲಿ, ದುರ್ಯೋಧನನ ಮೇಲಿನ ದ್ವೇಷದಿಂದಾಗಲಿ ಹೋರಾಡದೆ, ‘ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆಎಂಬಂತೆ ಯುದ್ಧ ಮಾಡು" ಎಂದು.
ನಾವು ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಪ್ರತಿಯೊಂದು ಕರ್ಮ ಕೂಡಾ ಹೀಗೆ. ಅದು ಭಗವಂತನ ಅರ್ಪಣಾ ರೂಪದಲ್ಲಿರಬೇಕು. ನಮಗೆ ದೇಹ ಕೊಟ್ಟಿದ್ದು ಭಗವಂತ. ಆದ್ದರಿಂದ ಆ ದೇಹ ಹೋದಾಗ ಅಳುವ ಅಗತ್ಯವಿಲ್ಲ. ನಮ್ಮ ಪ್ರತಿಯೊಂದು ಕರ್ತವ್ಯವನ್ನು ಭಗವಂತನ ಪೂಜೆ ಎಂದು ಮಾಡಿ, ಸಾವಿಗೆ ಅಂಜದೆ ಬದುಕಿದಾಗ ಈ ಜೀವನ ಸಾರ್ಥಕ.
·  ಶ್ಲೋಕ - 19
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ॥೧೯॥
ಯಃ ಏನಮ್ ವೇತ್ತಿ ಹಂತಾರಮ್ ಯಃ ಚ ಏನಮ್ ಮನ್ಯತೇ ಹತಮ್ ಉಭೌ ತೌ ನ ವಿಜಾನೀತಃ ನ ಅಯಮ್ ಹಂತಿ ನ ಹನ್ಯತೇ --ಯಾರು ಇವನನ್ನು 'ಕೊಲ್ಲುವವನು' ಎಂದು ತಿಳಿದಿದ್ದಾನೆ ಮತ್ತು ಯಾರು ಇವನನ್ನು 'ಸತ್ತವನು' ಎಂದು ತಿಳಿದಿದ್ದಾನೆ-ಆ ಇಬ್ಬರೂ ತಿಳಿದವರಲ್ಲ. ಇವನು ಕೊಲ್ಲುವುದಿಲ್ಲ ಮತ್ತು ಸಾಯುವುದಿಲ್ಲ.
ಜೀವವನ್ನು ಕೊಲ್ಲಬಹುದು(ಕೊಲ್ಲುತ್ತೇನೆ) ಎಂದು ಭಾವಿಸುವವರಿಗೆ ಹಾಗು ಅದು ನಾಶವಾಯಿತು (ಕೊಲ್ಲಲ್ಪಟ್ಟಿತು) ಎನ್ನುವವರಿಗೆ ತಿಳುವಳಿಕೆ ಇಲ್ಲ. ಏಕೆಂದರೆ ಜೀವ ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ನಮಗೆ ಸಾಯುವುದು ಅಥವಾ ಸತ್ತಿತು ಎಂದು ಕಾಣುವುದು ಭೌತಿಕ ಶರೀರ ಮಾತ್ರ. ಜೀವನಿಗೆ ದೇಹದ ಮೂಲಕ ಕೂಡಾ ಕೊಲ್ಲುವ ಅಥವಾ ಸಾಯುವ ಸ್ವಾತಂತ್ರ್ಯ ಇಲ್ಲ. ಇಲ್ಲಿ ಅರ್ಜುನನಿಗೆ 'ಕೌರವರು ನನ್ನ ಕೈಯಿಂದ ಸಾಯುತ್ತಾರೆ' ಎನ್ನುವುದು ಕೇವಲ ಭ್ರಮೆ. ಸೃಷ್ಟಿ-ಸಂಹಾರ ಕರ್ತನಾದ ಭಗವಂತನ ಇಚ್ಚೆ ಇಲ್ಲದೆ ಯಾವುದೂ ನಡೆಯುವುದಿಲ್ಲ. ಆತನ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ.
·  ಶ್ಲೋಕ - 20
ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾ[S]ಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥
ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್ ಭೂತ್ವಾ ಭವಿತಾ ವಾ ನ ಭೂಯಃ ಅಜಃ ನಿತ್ಯಃ ಶಾಶ್ವತಃ ಅಯಮ್ ಪುರಾಣಃ ನ ಹನ್ಯತೇ ಹನ್ಯಮಾನೇ ಶರೀರೇ-- ಈ ಜೀವ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಭಗವಂತನ ಅರಿವಿನಂತೆ ಹುದುಗಿದ್ದು ಮತ್ತಾಗುವವನೂ ಅಲ್ಲ. ಇವನು ಹುಟ್ಟಿರದ, ಸಾವಿರದ, ಮಾರ್ಪಡದ-ಭಗವಂತನ ಪಡಿಯಚ್ಚು.[ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತಾನೆ ಎನ್ನುವುದೂ ಸಲ್ಲ. ಈ ಜೀವ ಕೂಡ ಹುಟ್ಟದ, ಸಾಯದ, ಬದಲಾಗದ ತತ್ವ.] ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.
ಇಲ್ಲಿ ಕೃಷ್ಣ 'ಜೀವ ಸ್ವರೂಪ' ಅಂದರೆ ಏನೆಂದು ವಿವರಿಸಿದ್ದಾನೆ. ಈ ಜೀವ ಸ್ವರೂಪತಃ ಎಂದೂ ಹುಟ್ಟುವುದಿಲ್ಲ ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಏಕೆಂದರೆ ಜೀವಸ್ವರೂಪ ಭಗವಂತನ ಪ್ರತಿಬಿಂಬ. ಭಗವಂತನಿಗೆ ಹುಟ್ಟಿಲ್ಲ. ಅವನು ನಿತ್ಯ ಹಾಗು ಶಾಶ್ವತ. ಜೀವ ಸದಾ ಶರೀರದಿಂದ ಶರೀರಕ್ಕೆ ಸಂಚರಿಸುತ್ತಿರುತ್ತದೆ(ಪುರ-ಅಣ). ಆದರೆ ದೇಹ ಬದಲಾದಂತೆ ಜೀವಸ್ವರೂಪ ಬದಲಾಗುವುದಿಲ್ಲ. ಭೌತಿಕ ಶರೀರಕ್ಕೆ ಮುದಿತನವಿದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಆದರೆ ಪ್ರಭಾವದಿಂದ ಬಂದ ನಂಬಿಕೆ ಬದಲಾಗಬಹುದು. ಉದಾಹರಣೆಗೆ ಒಂದು ಜನ್ಮದಲ್ಲಿ ನಾಸ್ತಿಕನಾಗಿರುವವ ಇನ್ನೊಂದು ಜನ್ಮದಲ್ಲಿ ಪೂರ್ಣ ಆಸ್ತಿಕನಾಗಬಹುದು. ಸ್ವಭಾವ ವಿಶಿಷ್ಟನಾದ ಜೀವ ಎಂದೂ ಬದಲಾಗದೆ, ನಾಶವಾಗದೆ ಉಳಿಯುತ್ತಾನೆ.
·  ಶ್ಲೋಕ - 21
ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ॥೨೧॥
ವೇದ ಅವಿನಾಶಿನಮ್ ನಿತ್ಯಮ್ ಯಃ ಏನಮ್ ಅಜಮ್ ಅವ್ಯಯಮ್ ಕಥಮ್ ಸಃ ಪುರುಷಃ ಪಾರ್ಥ ಕಮ್ ಘಾತಯತಿ ಹಂತಿ ಕಮ್ಓ ಪಾರ್ಥ, ಹುಟ್ಟು-ಸಾವುಗಳಿರದ, ಮಾರ್ಪಡದ, ಏತರಿಂದಲೂ ಅಳಿಯದ ಈ ಜೀವನನ್ನು[ಶರೀರದಿಂದಲೂ ಅಳಿವಿರದ ಭಗವಂತನನ್ನು] ಬಲ್ಲ ಜೀವಿ, ಯಾರನ್ನು ಹೇಗೆ ಕೊಲ್ಲಿಸುವುದು ? ಯಾರನ್ನು ಹೇಗೆ ಕೊಲ್ಲುವುದು?
ದೋಷ ಸಂಬಂಧವಿಲ್ಲದ, ನಿತ್ಯವಾದ, ಎಂದೂ ಬದಲಾಗದ ಜೀವ ಸ್ವರೂಪವನ್ನು ಯಾರು ತಿಳಿಯುತ್ತಾರೋ ಅಂತಹ ಮಾನವನು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು ಹೇಗೆ ಸಾಧ್ಯ? ಸ್ವರೂಪತಃ ಜೀವನಿಗೆ ನಾಶವಿಲ್ಲ ಎಂದು ತಿಳಿದಾಗ, ಸ್ಥೂಲ ಪ್ರಪಂಚದಲ್ಲಿ ಹುಟ್ಟು-ಸಾವು ಭಗವಂತನ ಇಚ್ಚೆಯಂತೆ ನಡೆಯುತ್ತಿದೆ ಎಂದು ತಿಳಿದ ಮೇಲೆ, ಯಾರು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು? ಹುಟ್ಟು-ಸಾವಿನ ಹಿಂದಿರುವ ಭಗವತ್ ಶಕ್ತಿಯನ್ನು ನಾವು ಅರಿತುಕೊಳ್ಳಬೇಕು ಅಷ್ಟೆ.
ಜೀವಕ್ಕೆ ಅಳಿವಿಲ್ಲ, ಅದಕ್ಕೆ ಹುಟ್ಟು-ಸಾವು ಎನ್ನುವುದಿಲ್ಲ. ಹಾಗಿದ್ದರೆ ನಾವು ಪ್ರಾಪಂಚಿಕವಾಗಿ ಕಾಣುವ ಹುಟ್ಟು-ಸಾವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.
·  ಶ್ಲೋಕ - 22
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥೨೨॥
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ-- ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತಾದುದ್ದನ್ನು ಉಡುತ್ತಾನೆ ಹೇಗೆಯೋ ಹಾಗೇ-ಜೀವ ಒಂದು ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ.
ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೆವೋ-ಹಾಗೇ, ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತದೆ. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಚೆಯಂತೆ ಬಟ್ಟೆ ಬದಲಿಸುತ್ತಾಳೊ ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು. ಅವರು ಭಗವಂತನ ಅನುಗ್ರಹದಿಂದ ಸ್ವ-ಇಚ್ಚೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. [ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ "Living with Himalayan Masters" ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು.] ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವಇಚ್ಛೆಯಂತೆ ದೇಹ ಬದಲಿಸುವ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗು ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ.
ಹಾಗಾದರೆ ಆತ್ಮವನ್ನು ನಾಶ ಮಾಡಲು ಸಾದ್ಯವೇ ಇಲ್ಲವೋ? ಎಂದೆಂದಿಗೂ ಇಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
·  ಶ್ಲೋಕ - 23
ನೈನಂ ಛಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥೨೩॥
ನ ಏನಮ್ ಛಂದಂತಿ ಶಸ್ತ್ರಾಣಿ ನ ಏನಮ್ ದಹತಿ ಪಾವಕಃ ನ ಚ ಏನಮ್ ಕ್ಲೇದಯಂತಿ ಅಪಃ ನ ಶೋಷಯತಿ ಮಾರುತಃ ಈ ಜೀವನನ್ನು (ಭಗವಂತನನ್ನು) ಆಯುಧಗಳು ತುಂಡರಿಸವು. ಇವನನ್ನು ಬೆಂಕಿ ಸುಡದು. ಇವನನ್ನು ನೀರು ನೆನೆಸದು, ಗಾಳಿ ಒಣಗಿಸದು.
ಯಾವುದೇ ಒಂದು ವಸ್ತುವನ್ನು ನಾಶಮಾಡಲು ಇರುವ ಮುಖ್ಯ ಅಸ್ತ್ರ ನಾಲ್ಕು. ಮಣ್ಣು(ಘನ ಆಯುಧ), ನೀರು, ಬೆಂಕಿ ಹಾಗು ಗಾಳಿ. ಜೀವ ಸೂಕ್ಷ್ಮರಲ್ಲಿ ಸೂಕ್ಷ್ಮ. ಶಾಸ್ತ್ರಕಾರರು ಹೇಳುವಂತೆ ಕುದುರೆಯ ಬಾಲದ ಒಂದು ಕೂದಲಿನ ತುತ್ತ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿದರೆ ಸಿಗುವ ಒಂದು ಭಾಗ ಎಷ್ಟು ಗಾತ್ರದ್ದೋ ಅಷ್ಟು ಗಾತ್ರದಲ್ಲಿರುತ್ತದೆ ಜೀವ. ಇಂತಹ ಜೀವವನ್ನು ಯಾವುದೇ ಆಯುಧ ತುಂಡರಿಸಲು ಸಾಧ್ಯವಿಲ್ಲ. ಬೆಂಕಿ ಜೀವನನ್ನು ಸುಡಲಾರದು. ನೀರಿನಿಂದ ಜೀವ ಒದ್ದೆಯಾಗದು. ಗಾಳಿ ಜೀವನನ್ನು ಒಣಗಿಸದು. ಸೂಕ್ಷ್ಮಾತಿ ಸೂಕ್ಷ್ಮವಾದ ಜೀವನನ್ನು ಯಾವ ಆಯುಧವೂ ನಾಶ ಮಾಡಲಾರವು.
ಇಲ್ಲಿ ನಮಗೆ ಇನ್ನೊಂದು ಪ್ರಶ್ನೆ ಮೂಡುತ್ತದೆ. ಇಂದು ನಾಶ ಮಾಡಲು ಅಸಾಧ್ಯವಾದ ಜೀವ ಎಂದೆಂದೂ ನಾಶವಾಗದೇ ಇರುತ್ತದೆಯೇ?” ಎಂದು. ಹೌದು ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
·  ಶ್ಲೋಕ - 24
ಅಚ್ಛೇದ್ಯೋSಯಮದಾಹ್ಯೋSಯಮಕ್ಲೇದ್ಯೋSಶೋಷ್ಯ ಏವ ಚ ।
ನಿತ್ಯಃ ಸರ್ವಗತಃ ಸ್ಥಾಣುರಚಲೋಯಂ ಸನಾತನಃ ॥೨೪॥
ಅಚ್ಛೇದ್ಯಃ ಅಯಮ್ ಅದಾಹ್ಯಃ ಅಯಮ್ ಅಕ್ಲೇದ್ಯಃ ಅಶೋಷ್ಯಃ ಏವ ಚ ನಿತ್ಯಃ ಸರ್ವಗತಃ ಸ್ಥಾಣು ಆಚಲಃ ಅಯಮ್ ಸನಾತನಃ --ಈ ಜೀವನನ್ನು ಕಡಿಯಲಾಗದು. ಇವನನ್ನು ಸುಡಲಾಗದು. ನೆನೆಸಲಾಗದು; ಒಣಗಿಸಲೂ ಆಗದು. ಎಂದೆಂದೂ ಎಲ್ಲೆಡೆ ಹಬ್ಬಿರುವ, ಏತರಿಂದಲೂ ಮಾರ್ಪಡದ, ಅವಿಚಲನಾದ, ಪುರಾಣಪುರುಷನ ಪಡಿಯಚ್ಚು ಇವನು.[ಎಲ್ಲೆಡೆ ಹಬ್ಬಿರುವ ಭಗವಂತನನ್ನೆ ಎಂದೆಂದೂ ಹೊಂದಿರುವ ಅಣುರೂಪಿ. ಇವನು ಏತರಿಂದಲೂ ಮಾರ್ಪಡದ ನಿಯತಿಗೆ ಬದ್ಧ ; ವೇದದ ವಿಧಿ-ನಿಷೇಧಗಳಿಗೆ ಕೂಡ].
ಜೀವನನ್ನು ಇಂದಲ್ಲ, ಮುಂದೆಂದೂ ಯಾರಿಂದಲೂ ನಾಶಮಾಡಲು ಸಾದ್ಯವಿಲ್ಲ. ಏಕೆಂದರೆ ಆತ ತನ್ನ ಗುಣಧರ್ಮದಿಂದ ಎಂದೂ ಬದಲಾಗದ, ಸರ್ವಗತನಾದ, ವಿಚಲಿತನಾಗದ-ಭಗವಂತನ ಪಡಿಯಚ್ಚು. ಯಾವ ಆಯುಧಕ್ಕೂ ನಿಲುಕದೆ ಎಲ್ಲ ಕಾಲದಲ್ಲೂ ಏಕರೂಪನಾಗಿರುವ, ಎಲ್ಲ ಕಡೆ ಸ್ಥಿರವಾದ, ಬದಲಾವಣೆ ಇಲ್ಲದೆ ಇರುವ ಗುಣಧರ್ಮ ಜೀವನಿಗಿದೆ. ಜೀವ ಸನಾತನ. ಅಂದರೆ ನಾತನದಿಂದ ಸಹಿತನಾದವ. ಇಲ್ಲಿ 'ನಾತನ' ಎಂದರೆ 'ನಾದನ'. ಅಂದರೆ ವೇದನಾದ. ಜೀವ ವೇದನಾದದಿಂದ ಸಹಿತನಾಗಿ, ಸಮಸ್ತ ವೇದ ಪ್ರತಿಪಾದ್ಯನಾದ ಭಗವಂತನ ಮಡಿಲಲ್ಲಿ ವೇದದ ವಿಧಿ-ನಿಷೇಧಗಳಿಗೆ ಬದ್ಧನಾಗಿರುತ್ತಾನೆ. ಅದು ಸರ್ವಗತನಾದ ಭಗವಂತನನ್ನು ಆಶ್ರಯಿಸಿರುವ ಮಹತ್ತಾದ ಅಣು.
·  ಶ್ಲೋಕ - 25
ಅವ್ಯಕ್ತೋSಯಮಚಿಂತ್ಯೋSಯಮವಿಕಾರ್ಯೋSಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥೨೫॥
ಅವ್ಯಕ್ತಃ ಅಯಮ್ ಅಚಿಂತ್ಯಃ ಅಯಮ್ ಅವಿಕಾರ್ಯಃ ಅಯಮ್ ಉಚ್ಯತೇ ತಸ್ಮಾತ್ ಏವಮ್ ವಿದಿತ್ವಾ ಏನಮ್ ನ ಅನುಶೋಚಿತುಮ್ ಅರ್ಹಸಿ-- ಭಗವಂತ ಕಣ್ಣಿಗೆ ಕಾಣದವನು; ಇವನು ಚಿಂತನೆಗೆ ನಿಲುಕದವನು; ಇವನು ಬದಲಾಗದವನು-ಎಂದು ವೇದ ಸಾರುತ್ತದೆ. ಅದರಿಂದ ಅವನ[ಮತ್ತು ಜೀವನ] ಪರಿಯನ್ನು ಹೀಗೆ ಅರಿತ ಮೇಲೆ ಕೊರಗುವುದು ತರವಲ್ಲ.
ಭಗವಂತ ಅವ್ಯಕ್ತ. ಆತನ ಪ್ರತಿಬಿಂಬವಾದ ಜೀವ ಭೌತಿಕ ಶರೀರದಲ್ಲಿದ್ದರೂ ಕೂಡಾ ಅವ್ಯಕ್ತ. ಈ ಕಾರಣದಿಂದ ಭಗವಂತ ಹಾಗು ಜೀವ ನಮ್ಮ ಚಿಂತನೆಗೆ ನಿಲುಕದ್ದು. ನಾನು ಯಾರು? ಎಲ್ಲಿಂದ ಬಂದೆ ? ನಾನೇನು? ಎನ್ನುವುದೇ ನಮಗೆ ಗೊತ್ತಿಲ್ಲ. ಭಗವಂತ ಹಾಗು ಜೀವಸ್ವರೂಪ ಎಂದೂ ಬದಲಾಗದಿದ್ದರೂ ಕೂಡಾ, ಅದು ನಮ್ಮ ಚಿಂತನೆಗೆ ಎಟುಕುವುದಿಲ್ಲ. ಈ ಕಟು ಸತ್ಯವನ್ನು ತಿಳಿದ ಮೇಲೆ ಜೀವ ನಾಶವಾಗುತ್ತದೆ ಎಂದು ದುಃಖಿಸುವ ಅಗತ್ಯವಿಲ್ಲ.
·  ಶ್ಲೋಕ - 26
ಅಥ ಚೈ ನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾSಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ॥೨೬॥
ಅಥ ಚ ಏನಮ್ ನಿತ್ಯಜಾತಮ್ ನಿತ್ಯಮ್ ವಾ ಮನ್ಯಸೇ ಮೃತಮ್ ತದಾ ಅಪಿ ತ್ವಮ್ ಮಹಾಬಾಹೋ ನ ಏನಮ್ ಶೋಚಿತುಮ್ ಅರ್ಹಸಿ -- ಆದರೂ ಈ ಜೀವ ದೇಹದ ಮೂಲಕ ಸದಾ ಹುಟ್ಟುವವನು ಮತ್ತು ಸಾಯುವವನು ಎಂದು ಭಾವಿಸುವೆಯ? ಹಾಗಿದ್ದರೂ, ಓ ಮಹಾವೀರ, ನೀನು ಇವನಿಗಾಗಿ ಕೊರಗುವುದು ತರವಲ್ಲ.
ವೇದಾಂತ ಬಿಟ್ಟು ಲೋಕದ ದೃಷ್ಟಿಯಲ್ಲಿ ವಿಚಾರ ಮಾಡಿದರೆ, ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗು ಸಾವಿನ ಮೂಲಕ ಅವ್ಯಕ್ತವಾಗುತ್ತದೆ. ಹುಟ್ಟು-ಸಾವನ್ನು ಮೀರಿ ನಿಲ್ಲುವುದು ಎಂದೂ ಸಾಧ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ದುಃಖ ಪಡುವ ಅಗತ್ಯವಿಲ್ಲ. ಮಹಾ ಬಲಿಷ್ಟನಾದ ನೀನು ಈ ಹಿಂದೆ ಅದೆಷ್ಟು ಯುದ್ಧಗಳನ್ನು ಮಾಡಿದ್ದಿ? ಆಗ ಇರದ ಸಮಸ್ಯೆ ಈಗೇಕೆ? ನೀನು ಮಾಡುತ್ತಿರುವುದು ನಿನ್ನ ಕರ್ತವ್ಯವನ್ನೇ ಹೊರತು ಇನ್ನೇನನ್ನೂ ಅಲ್ಲ-ಎಂದು ಕೃಷ್ಣ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ.
·  ಶ್ಲೋಕ - 27
ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇರ್ಥೇ ನ ತ್ವಂ ಶೋಚಿತುಮರ್ಹಸಿ ॥೨೭॥
ಜಾತಸ್ಯ ಹಿ ಧ್ರುವಃ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ ತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ವಂ ಶೋಚಿತುಮ್ ಅರ್ಹಸಿ-- ಹುಟ್ಟಿದವನಿಗೆ ಸಾವು ಖಚಿತ; ಸತ್ತವನಿಗೆ ಮರುಹುಟ್ಟೂ ಖಚಿತ. ಎಂದ ಮೇಲೆ, ಅನಿವಾರ್ಯವಾದ ಸಂಗತಿಗಾಗಿ ನೀನು ಅಳುವುದು ತರವಲ್ಲ.
ಹುಟ್ಟು-ಸಾವು, ಸುಖ-ದುಃಖ, ಒಂದು ನಾಣ್ಯದ ಎರಡು ಮುಖವಿದ್ದಂತೆ. ರಾತ್ರಿ ಇಲ್ಲದೆ ಹಗಲಿಲ್ಲ. ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ. ನಾವು ಜೀವನದಲ್ಲಿ ಅನಿವಾರ್ಯವಾದದ್ದನ್ನು ಹೊಂದಿಸಿಕೊಳ್ಳುವುದನ್ನು ಕಲಿಯಬೇಕು. ಅದನ್ನು ಬಿಟ್ಟು ಕಷ್ಟ ಬಂದಾಗ ಕೊರಗುವುದು ತರವಲ್ಲ. ಅನಿವಾರ್ಯವಾದ ಕರ್ತವ್ಯ ಪಾಲನೆಯಲ್ಲಿ ನಾವು ಎಂದೂ ದುಃಖಿಸಬಾರದು.
·  ಶ್ಲೋಕ - 28
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ ।
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ ॥೨೮॥
ಅವ್ಯಕ್ತ ಆದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ | ಅವ್ಯಕ್ತ ನಿಧನಾನಿ ಏವ ತತ್ರ ಕಾ ಪರಿದೇವನಾ- -ಭರತವಂಶದ ಕುಡಿಯೆ, ಜೀವಿಗಳ ಬದುಕಿನ ಬುಡದ ಬೇರು ಕಾಣಿಸದು. ನಡು ಮಾತ್ರ ಕಾಣಿಸುತ್ತಿದೆ. ತುದಿಯೂ ಕಾಣಿಸದು. ಹೀಗಿರುತ ಏನಂಥ ಗೋಳು?
ಇಲ್ಲಿಯವರೆಗೆ ಜೀವ, ಜೀವದ ಇರವು, ಹುಟ್ಟು ಸಾವಿನ ಬಗ್ಗೆ ಅನೇಕ ರೀತಿಯಲ್ಲಿ ವಿಶ್ಲೇಷಣೆಯನ್ನು ಕೃಷ್ಣನ ಮಾತಿನಲ್ಲಿ ನೋಡಿದ್ದೇವೆ. ಆದರೆ ಮೂಲಭೂತವಾಗಿ ಅರ್ಜುನನಿಗೆ ಕಾಡಿದ ಸಮಸ್ಯೆ 'ನನ್ನ ಗುರು, ನನ್ನ ಅಜ್ಜ' ಎನ್ನುವ ಸಂಬಂಧದ ಸೆಳೆತ. ಅಂತಹ ಮಹಾ ಜ್ಞಾನಿಗಳ ವಿರುದ್ಧ ನಿರ್ಲಿಪ್ತನಾಗಿ ಯುದ್ಧ ಮಾಡುವುದು ಹೇಗೆ ಎನ್ನುವುದು ಆತನ ಸಮಸ್ಯೆ. ಇಲ್ಲಿ ಕೃಷ್ಣ ಆತನ ಸಮಸ್ಯೆಗೆ ಉತ್ತರಿಸುತ್ತಾನೆ.
ಒಬ್ಬ ವ್ಯಕ್ತಿ ನಮಗೆ ಸಂಬಂಧಿಯಾಗುವುದು ಆತನ ಹುಟ್ಟಿನ ನಂತರ. ಆದರೆ ಹುಟ್ಟಿನ ಮೊದಲು ಆತ ಏನಾಗಿದ್ದ? ಸತ್ತ ನಂತರ ಏಲ್ಲಿ ಹೋಗುತ್ತಾನೆ? ಈ ಹುಟ್ಟು-ಸಾವಿನ ಹಿಂದೆ ಮತ್ತು ಮುಂದೆ ನಮಗೂ ಆ ಜೀವಕ್ಕೂ ಏನೂ ಸಂಬಂಧವಿಲ್ಲ. ಈ ಸಂಬಂಧ ಜೀವದ ನಿರಂತರ ಬದುಕಿನ ಸರಳ ರೇಖೆಯಲ್ಲಿನ ಒಂದು ಬಿಂದು. ಅದು ಮಾತ್ರ ನಮಗೆ ವ್ಯಕ್ತ. ಉಳಿದದ್ದು ಅವ್ಯಕ್ತ. ಆದ್ದರಿಂದ ಸರಳ ರೇಖೆಯ ಒಂದು ಬಿಂದುವಿನಲ್ಲಿ ನಿಂತು ದುಃಖಿಸುವುದು ಸೂಕ್ತವಲ್ಲ.
ಇಲ್ಲಿ ನಾವು ಬದುಕಿದ್ದಾಗ ಒಬ್ಬರನೊಬ್ಬರು ಪ್ರೀತಿಸಬಾರದು ಎಂದಲ್ಲ. ಇದ್ದಾಗ ಪ್ರೀತಿಸು, ಆದರೆ ಇಲ್ಲವಾದಾಗ ಭಗವಂತ ಕರೆಸಿಕೊಂಡ ಎಂದು ನಿಶ್ಚಿಂತೆಯಿಂದ ಇರಲು ಮನಸ್ಸಿಗೆ ತರೆಬೇತಿ ಕೊಡು. ಇಲ್ಲದಿದ್ದರೆ ಜೀವನ ದುಸ್ತರವಾಗುತ್ತದೆ. ಇದ್ದಾಗ ಸಂತೋಷದಿಂದಿರು, ಇಲ್ಲದಿದ್ದಾಗ ದುಃಖಿಸಬೇಡ ಎನ್ನುವುದು ಈ ಶ್ಲೋಕದಲ್ಲಿ ಕೃಷ್ಣ ನಮಗೆ ಕೊಡುತ್ತಿರುವ ಸಂದೇಶ.
·  ಶ್ಲೋಕ - 29
ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ ವದತಿ ತಥೈವ ಚಾನ್ಯಃ ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್ ॥೨೯॥
ಆಶ್ಚರ್ಯವತ್ ಪಶ್ಯತಿ ಕಶ್ಚಿತ್ ಏನಮ್ ಆಶ್ಚರ್ಯವತ್ ವದತಿ ತಥಾ ಏವ ಚ ಅನ್ಯಃ ಆಶ್ಚರ್ಯವತ್ ಚ ಏನಮ್ ಅನ್ಯಃ ಶೃಣೋತಿ ಶ್ರುತ್ವಾ ಅಪಿ ಏನಮ್ ವೇದ ನ ಚ ಏವ ಕಶ್ಚಿತ್-- ಯಾರಾದರೂ ಈ ಜೀವತತ್ವವನ್ನು ಅಥವಾ ಭಗವಂತನನ್ನು ಕಂಡುಕೊಂಡರೆ ಅದೊಂದು ಅಚ್ಚರಿಯಂತೆ. ಇನ್ನೊಬ್ಬ ಅಂದು ತೋರಿಸಿದರೆ ಅದೊಂದು ಅಚ್ಚರಿಯಂತೆ. ಮಗದೊಬ್ಬ ಅದನ್ನು ಕೇಳಿ ತಿಳಿದರೆ ಅದೂ ಒಂದಚ್ಚರಿಯಂತೆ.[ಯಾರೋ ಒಬ್ಬ ಭಗವಂತನನ್ನು ಅಚ್ಚರಿಗೊಂಡು ನೋಡುತ್ತಾನೆ. ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ. ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ] ಎಷ್ಟು ಕೇಳಿದರೂ ಜೀವವನ್ನಾಗಲಿ, ಭಗವಂತನನ್ನಾಗಲಿ ಸರಿಯಾಗಿ ಅರಿತವನು ಯಾರೂ ಇಲ್ಲ.
ಇದು ಜೀವ ಹಾಗು ಭಗವಂತನ ಬಗ್ಗೆ ಇರುವ ಶ್ಲೋಕ. ಭಗವಂತನನ್ನು ಕಂಡವರು ವಿರಳ. ಒಂದು ವೇಳೆ ಬಹಳ ಸಾಧನೆಯಿಂದ ಆತನನ್ನು ಕಂಡುಕೊಂಡರೆ, ಕಂಡವರ ಉದ್ಗಾರ ಕೇವಲ ಅಚ್ಚರಿ. ಅದೊಂದು ವಿಸ್ಮಯ. ಈ ವಿಶ್ವವೇ ಒಂದು ಅದ್ಬುತ, ಹಾಗಿರುವಾಗ ವಿಶ್ವವನ್ನು ನಿರ್ಮಿಸಿದ ಆ ಭಗವಂತ ಅದೆಷ್ಟು ಅದ್ಬುತವಿರಬಹುದು? ಆದ್ದರಿಂದ ಆತನನ್ನು ಕಂಡವರು ಆತನ ಬಗ್ಗೆ ವರ್ಣಿಸಲಾರರು. ಒಂದು ವೇಳೆ ವರ್ಣಿಸಿದರೆ ಕೇಳುವವನಿಗೆ ಅದೊಂದು ಅಚ್ಚರಿ. ಯಾರು ಎಷ್ಟೇ ಕೇಳಲಿ ಕೊನೆಗೆ ಭಗವಂತ ಕೇವಲ ಅಚ್ಚರಿಯಾಗೇ ಉಳಿಯುತ್ತಾನೆ. ಏಕೆಂದರೆ ಭಗವಂತನನ್ನು ತಿಳಿಯುವುದು ಅಸಾಧ್ಯ.
ಇದೇ ರೀತಿ ಜೀವ. ಆತ್ಮ ಸಾಕ್ಷಾತ್ಕಾರ ಆದಾಗ ನಮಗಾಗುವುದು ಕೇವಲ ವಿಸ್ಮಯ. ಅದನ್ನು ವರ್ಣಿಸುವುದು ಅಸಾಧ್ಯ. ಜೀವ ಒಂದು ಬೆಳಕಿನ ಪುಂಜ. ಅದೊಂದು ಮಹಾನ್ ಅಚ್ಚರಿ. ಅದು ಸೂರ್ಯನಿಗಿಂತ ಪ್ರಖರ, ಚಂದ್ರನಿಗಿಂತ ತಂಪಾದ ಬೆಳಕು. ಜೀವ ತತ್ವದ ಬಗ್ಗೆ ಕೇಳಿ ಅದರ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವುದು ಅಸಾಧ್ಯ.
·  ಶ್ಲೋಕ - 30
ದೇಹೀ ನಿತ್ಯಮವಧ್ಯೋSಯಂ ದೇಹೇ ಸರ್ವಸ್ಯ ಭಾರತ ।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ॥೩೦॥
ದೇಹೀ ನಿತ್ಯಮ್ ಅವಧ್ಯಃ ಅಯಮ್ ದೇಹೇ ಸರ್ವಸ್ಯ ಭಾರತ ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಮ್ ಶೋಚಿತುಮ್ ಅರ್ಹಸಿ - -ಓ ಭಾರತ, ಎಲ್ಲರ ದೇಹದಲ್ಲೂ ಇರುವ ಈ ಜೀವ ಎಂದೂ ಕೊಲ್ಲಲಾಗದ್ದು.[ಈ ಜೀವವನ್ನು ಕೊಲ್ಲುವುದು ಎಂದೂ ಸಾಧ್ಯವಿಲ್ಲ. ಏಕೆಂದರೆ ಎಲ್ಲರ ದೇಹದಲ್ಲೂ ಭಗವಂತ ಜೀವಕ್ಕೆ ಕಾವಲಿದ್ದಾನೆ] ಆದ್ದರಿಂದ ಎಲ್ಲ ಜೀವಿಗಳಿಗಾಗಿ ನೀನು ಅಳುವುದು ತರವಲ್ಲ.
ಮೂಲಭೂತವಾಗಿ ಯಾರ ದೇಹದಲ್ಲಿರುವ ಜೀವವನ್ನೂ ಸಾಯಿಸುವುದು ಸಾಧ್ಯವಿಲ್ಲ. ದೇಹ ಸಾಯಬೇಕು ಎನ್ನುವುದು ವಿಧಿ ನಿಯಮ, ಹಾಗು ಅದಕ್ಕಾಗಿ ದುಃಖಪಡಬೇಕಾಗಿಲ್ಲ. ತನ್ನ ಸ್ವಂತ ಇಚ್ಛೆಯಿಂದ ದೇಹ ತ್ಯಜಿಸಲು ಸಾಧ್ಯವಿಲ್ಲ, ಹಾಗು ತ್ಯಜಿಸದೆ ಇರಲೂ ಸಾಧ್ಯವಿಲ್ಲ. "ಅಯಮ್ ದೇಹೇ ಸರ್ವಸ್ಯ ಭಾರತ" - "ರಕ್ಷಣೆ ಮಾಡುವ ಭಗವಂತ ಒಳಗೆ ಕುಳಿತಿರುವಾಗ ಹುಟ್ಟು ಸಾವಿಗೆ ನೀನು ಹೊಣೆಗಾರನಾಗಲಾರೆ. ಭರತ ವಂಶದಲ್ಲಿ ಹುಟ್ಟಿ ಬಂದ ನೀನು ಈ ಸತ್ಯವನ್ನು ಅರಿತುಕೊ" ಎನ್ನುತ್ತಾನೆ ಕೃಷ್ಣ. ಜೀವವೆಂಬ ಬೆಳಕಿನ ಕಿಡಿಯನ್ನು ತಿಳಿದಾಗ, ಅದರ ಅರಿವು ಬಂದಾಗ ಹುಟ್ಟು ಸಾವಿನ ಮರ್ಮ ತಿಳಿಯುತ್ತದೆ. ಆಗ ಸಾವು ಒಂದು ಆನಂದದ ಅನುಭವವಾಗುತ್ತದೆ.
ಕೃಷ್ಣನ ಈ ಎಲ್ಲಾ ವಿಶ್ಲೇಷಣೆಯನ್ನು ಕೇಳಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಮೂಡಬಹುದು . "ಕೊಲ್ಲುವುದು ತಪ್ಪಲ್ಲ, ಏಕೆಂದರೆ ಜೀವಕ್ಕೆ ಸಾವಿಲ್ಲ. ಎಲ್ಲವೂ ದೈವೇಚ್ಛೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು" ಎಂದು. ಆದರೆ ಅದು ಸರಿಯಲ್ಲ. ಏಕೆಂದರೆ ಈವರೆಗೆ ನಾವು ನೋಡಿದ ವಿಷಯ ಕೇವಲ ಬದುಕಿನ ಒಳನೋಟ. ಸಮಾಜ ಜೀವಿಗಳಾದ ನಾವು ಒಳಗಿನ ಅರಿವನ್ನು ಸಮಾಜದ ವಿರುದ್ಧ ಬಳಸುವುದು ಅಧರ್ಮ. ಶಾಸ್ತ್ರಕ್ಕೆ ಅನುಗುಣವಾಗಿರುವ ಸಮಾಜ ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಮುಂದಿನ ಶ್ಲೋಕದಲ್ಲಿ ಕೃಷ್ಣ ಈ ವಿಚಾರವನ್ನು ಅರ್ಜುನನ ಮುಖೇನ ನಮಗೆ ಸ್ಪಷ್ಟಪಡಿಸುತ್ತಾನೆ.
·  ಶ್ಲೋಕ - 31
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋSನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ॥೩೧॥
ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ -- ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.
ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ಅನ್ಯಾಯದ ವಿರುದ್ಧ ಹೋರಡಲೇ ಬೇಕುಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು. ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.
·  ಶ್ಲೋಕ - 32
ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ॥೩೨॥
ಯದೃಚ್ಛಯಾ ಚ ಉಪಪನ್ನಮ್ ಸ್ವರ್ಗ ದ್ವಾರಮ್ ಅಪಾವೃತಮ್ ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್--ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ, ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.
ಕಾಲು ಕೆದಕಿ ಯುದ್ಧ ಮಾಡುವುದು ತಪ್ಪು. ಆದರೆ ಇಲ್ಲಿ ಸಮಷ್ಟಿಯಾಗಿ ಬಂದ ಯುದ್ಧದ ಹೊಣೆಗಾರಿಕೆ ಪಾಂಡವರದ್ದಲ್ಲ. ತನ್ನಷ್ಟಕ್ಕೆ ಬಂದು ಎರಗಿದ ಈ ಯುದ್ಧ ದೈವೇಚ್ಛೆ. ಈಶ್ವರನ ಇಚ್ಚೆಯಂತೆ ಎಲ್ಲವೂ ಆಗುವಾಗ, ಏನು ಬಂತೋ ಅದನ್ನು ಹಾಗೇ ಸ್ವೀಕರಿಸಬೇಕು. ಅನ್ಯಾಯದ ವಿರುದ್ಧ ಧರ್ಮಯುದ್ಧ ಮಾಡಿದವನಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಯುದ್ಧದ ಅವಕಾಶ ಒಬ್ಬ ಕ್ಷತ್ರಿಯನಿಗೆ ಬರಬೇಕಾದರೆ ಆತ ಪುಣ್ಯ ಮಾಡಿರಬೇಕು. ಇಂತಹ ಸಮಯದಲ್ಲಿ ಕ್ಷತ್ರಿಯನಾದವನು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾಪಾಪ.
ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ ಸನಾತನಧರ್ಮ, ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು. ಈ ನೆಲೆಯಲ್ಲಿ ಮಾಡಿದ ಯಾವ ಕಾರ್ಯವೂ ಪಾಪ ಕಾರ್ಯವಾಗದು. ಮುಂದಿನ ಶ್ಲೋಕದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಕೃಷ್ಣ ಕೊಡುತ್ತಾನೆ. ಸನಾತನಧರ್ಮ, ಸಮಾಜಧರ್ಮ ಮತ್ತು ಸ್ವಧರ್ಮ ಅಂದರೆ ಏನು ಎನ್ನುವುದನ್ನು ಈಗಾಗಲೇ ಅಧ್ಯಾಯ ಒಂದರಲ್ಲಿ (ಶ್ಲೋಕ-೪೦) ವಿವರವಾಗಿ ವಿಶ್ಲೇಷಿಸಲಾಗಿದೆ.
·  ಶ್ಲೋಕ - 33
ಅಥ ಚೇತ್ ತ್ವಂ ಧರ್ಮ್ಯಮಿಮಂ ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ॥೩೩॥
ಅಥ ಚೇತ್ ತ್ವಮ್ ಧರ್ಮ್ಯಮ್ ಇಮಮ್ ಸಂಗ್ರಾಮಮ್ ನ ಕರಿಷ್ಯಸಿ ತತಃ ಸ್ವಧರ್ಮಮ್ ಕೀರ್ತಿಮ್ ಚ ಹಿತ್ವಾ ಪಾಪಮ್ ಅವಾಪ್ಸ್ಯಸಿ-- ಒಂದೊಮ್ಮೆ, ನ್ಯಾಯದಿಂದ ಒದಗಿ ಬಂದ ಈ ಕಾಳಗವನ್ನು ನೀನು ಕೈಗೊಳ್ಳದಿದ್ದರೆ, ಆಗ , ನಿನ್ನ ಧರ್ಮವನ್ನೂ ಹೆಸರನ್ನೂ ಕಳೆದುಕೊಂಡು ಪಾಪವನ್ನು ಗಳಿಸುವೆ.
ಮುಂದುವರಿದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: "ನೀನು ಪಾಪದ ಭಯದಿಂದ ಯುದ್ಧ ಬೇಡ ಎಂದು ಹೇಳುತ್ತಿರುವೆ. ಆದರೆ ಯುದ್ಧ ಮಾಡಿದರೆ ಮಾತ್ರ ಧರ್ಮ ಉಳಿಯುತ್ತದೆ, ಹಾಗು ನಿನಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಇಲ್ಲದೆ ಇದ್ದಲ್ಲಿ ನರಕದ ಬಾಗಿಲು ನಿನ್ನನ್ನು ಸ್ವಾಗತಿಸಲಿದೆ" ಎಂದು.
ಇಲ್ಲಿ ನೆಡೆಯುತ್ತಿರುವುದು ಒಂದು ಧರ್ಮ ಸಂಗ್ರಾಮ. ಅರ್ಜುನ ಧರ್ಮದ ಪರ ನಿಂತ ಮಹಾರಥಿ. ಆತ ಇಂತಹ ಧರ್ಮ ಸಂಗ್ರಾಮದಲ್ಲಿ ಧರ್ಮದ ಪರ ಹೋರಾಡದಿದ್ದರೆ ಸಹಜ ಧರ್ಮಕ್ಕೆ ವಿರುದ್ಧವಾಗಿ ಹಾಗು ಸಾಮಾಜಿಕ ಧರ್ಮವನ್ನು ಬಿಟ್ಟು ನೆಡೆದುಕೊಂಡಂತೆ. ಇದೊಂದು ಕಳಂಕ ಮತ್ತು ಮಹಾ ಪಾಪವಾಗುತ್ತದೆ. ಈ ರೀತಿ ಪಾಪದ ಭಯದಿಂದ ಬಳಲುತ್ತಿರುವ ಅರ್ಜುನನಿಗೆ ಕೃಷ್ಣ ಯಾವುದು ನಿಜವಾದ ಪಾಪ ಎನ್ನುವುದನ್ನು ಮನವರಿಕೆ ಮಾಡಿಸುತ್ತಿದ್ದಾನೆ.
ಪಾಪ ಕೃತ್ಯ ಯಾವುದು ಎನ್ನುವುದನ್ನು ಸಂದರ್ಭ ನಿರ್ಧರಿಸುತ್ತದೆ. ಉದಾಹರಣೆಗೆ 'ಸತ್ಯ ನುಡಿಯುವುದು ಪುಣ್ಯದ ಕೆಲಸ' ಎಂದು ಹೇಳಲಾಗದು. ಅದು ಪಾಪವೋ ಪುಣ್ಯವೋ ಎನ್ನುವುದನ್ನು ಸಂದರ್ಭ ನಿರ್ಣಯಿಸುತ್ತದೆ. ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಆಶ್ರಯ ಕೇಳಿ ಬಂದ ವ್ಯಕ್ತಿಯನ್ನು ಅಡಗಿಸಿಟ್ಟು, ದರೋಡೆಕೋರರು ಬಂದು ಪ್ರಶ್ನಿಸಿದಾಗ ಸತ್ಯ ನುಡಿಯುವುದು ಪಾಪದ ಕೆಲಸ. ಅಡಗಿಸಿಟ್ಟ ವ್ಯಕ್ತಿಯ ರಕ್ಷಣೆಗೋಸ್ಕರ ಸುಳ್ಳನ್ನು ಹೇಳುವುದು ಪುಣ್ಯದ ಕೆಲಸ. ಇದೇ ರೀತಿ ಇಲ್ಲಿ ಅರ್ಜುನನಿಗೆ ಧರ್ಮದ ರಕ್ಷಣೆಗೋಸ್ಕರ ಗುರು-ಪಿತಾಮಹರನ್ನು ಎದುರಿಸಿ ಹೋರಾಡುವುದೊಂದೇ ಮಹಾ ಪುಣ್ಯದ ಕೆಲಸ ಎನ್ನುವುದನ್ನು ಕೃಷ್ಣ ಮನವರಿಕೆ ಮಾಡಿಸುತ್ತಿದ್ದಾನೆ.
·  ಶ್ಲೋಕ - 34
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇSವ್ಯಯಾಮ್ ।
ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ ॥೩೪॥
ಅಕೀರ್ತಿಮ್ ಚ ಅಪಿ ಚಾಪಿ ಭೂತಾನಿ ಕಥಯಿಷ್ಯಂತಿ ತೇ ಅವ್ಯಯಾಮ್ ಸಂಭಾವಿತಸ್ಯ ಚ ಅಕೀರ್ತಿ ಮರಣಾತ್ ಅತಿರಿಚ್ಯತೇ--ಜನರು ನಿನ್ನ ಕೊನೆಯಿರದ ಕಳಂಕದ ಕಥೆಯನ್ನು ಆಡಿಕೊಳ್ಳುತ್ತಾರೆ. ಮರ್ಯಾದೆಯ ಮನುಷ್ಯನಿಗೆ ಕೆಟ್ಟ ಹೆಸರು ಸಾವಿಗಿಂತ ದಾರುಣ.
ಸಾಮಾಜಿಕ ಪರಿಣಾಮದ ಬಗ್ಗೆ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ: ಒಬ್ಬ ಮರ್ಯಾದಸ್ತ ಮಾನವನಿಗೆ ಆತನ ಕೀರ್ತಿ ನಾಶವಾದರೆ ಆತ ಅವಮಾನಕ್ಕೊಳಗಾಗುತ್ತಾನೆ. ಅದರಿಂದ ಆತ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳಬಹುದು. ಜಗತ್ತಿನಲ್ಲಿ ಮಹಾನ್ ಬಿಲ್ಲೋಜ ಎನ್ನುವ ಕೀರ್ತಿ ಪಡೆದ ಅರ್ಜುನ ಈ ಧರ್ಮಯುದ್ಧದಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ, ಜನರು ಆತನನ್ನು ಹೇಡಿ ಎಂದು ಆಡಿಕೊಳ್ಳುತ್ತಾರೆ. ಇತಿಹಾಸದ ಪುಟಗಳಲ್ಲಿ ಆತನ ಹೇಡಿತನ ಮುಂದಿನ ಪೀಳಿಗೆಗೆ ಕೆಟ್ಟ ಉದಾಹರಣೆಯಾಗಿ ನಿಲ್ಲುತ್ತದೆ. 'ಬಂಧು ಸ್ನೇಹಕ್ಕಾಗಿ ಯುದ್ಧದಿಂದ ಹಿಂದೆ ಸರಿದ' ಎಂದು ಯಾರೂ ಹೇಳಲಾರರು. ಯುದ್ಧಕ್ಕೆ ಹೆದರಿ ಓಡಿಹೋದ ಹೇಡಿ ಎಂದು ನೀಚವಾಗಿ ಬಯ್ಯುತ್ತಾರೆ. ಒಬ್ಬ ಮರ್ಯಾದಸ್ತ ಮನುಷ್ಯನಿಗೆ ಅಕೀರ್ತಿ ಎನ್ನುವುದು ಸಾವಿಗಿಂತ ಕೀಳು. ಒಬ್ಬ ಕ್ಷತ್ರಿಯ ಇದನ್ನು ಸಹಿಸಲಾರ
·  ಶ್ಲೋಕ - 35
ಭಯಾದ್ ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ ।
ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್ ॥೩೫॥
ಭಯಾತ್ ರಣಾತ್ ಉಪರತಮ್ ಮಂಸ್ಯಂತೇ ತ್ವಾಮ್ ಮಹಾರಥಾಃ ಯೇಷಾಮ್ ಚ ತ್ವಮ್ ಬಹುಮತಃ ಭೂತ್ವಾ ಯಾಸ್ಯಸಿ ಲಾಘವಮ್--ಯಾರಿಗೆ ನೀನು ಘನತೆಯ ವ್ಯಕ್ತಿಯಾಗಿದ್ದೆಯೋ ಅಂಥ ಹಿರಿಯ ತೇರಾಳುಗಳೆದುರು ಹಗುರಾಗುವೆ; ಅವರು ನಿನ್ನನ್ನು ಹೆದರಿ ಹೋರಾಡಲು ಹಿಂಜರಿದ ಹೇಡಿ ಎಂದು ಭಾವಿಸುತ್ತಾರೆ.
·  ಶ್ಲೋಕ - 36
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್ ॥೩೬॥
ಅವಾಚ್ಯ ವಾದಾನ್ ಚ ಬಹೂನ್ ವದಿಷ್ಯಂತಿ ತವ ಅಹಿತಾಃ ನಿಂದಂತಃ ತವ ಸಾಮರ್ಥ್ಯಮ್ ತತಃ ದುಃಖತರಮ್ ನು ಕಿಮ್ --ನಿನಗಾಗದವರು ನಿನ್ನ ಕೆಚ್ಚನ್ನು ಹೀಗಳೆಯುತ್ತ, ಬಾಯಿ ತುಂಬ ಆಡಬಾರದ ಮಾತುಗಳನ್ನಾಡುತ್ತಾರೆ. ಅದಕ್ಕು ಮಿಗಿಲಾದ ಸಂಕಟ ಏನುಂಟು ?
"ಯಾರು ನಿನ್ನನ್ನು ದೊಡ್ಡ ವೀರ ಎಂದು ಕೈ ಮುಗಿದು ತಲೆಬಾಗಿ ನಿಲ್ಲುತ್ತಿದ್ದರೋ, ಅವರು ನಿನ್ನನ್ನು ಹುಲ್ಲಿಗಿಂತ ಕಡೆಯಾಗಿ ನೋಡುತ್ತಾರೆ. ಸಮಾಜದಲ್ಲಿ ಉನ್ನತ ಪುರುಷನಾಗಿರುವ ನೀನು ಅವಮಾನಿತನಾಗಿ ಬದುಕಬೇಕಾಗುತ್ತದೆ. ಆಡಬಾರದ ಅಸಭ್ಯ ಮಾತುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಈ ಹಿಂದಿನ ಸರ್ವ ಸಾಧನೆಯೂ ಸುಳ್ಳು ಎಂದು ಹೀಗಳೆದು ಆಡಿಕೊಳ್ಳುತ್ತಾರೆ".
ಒಬ್ಬ 'ಉತ್ತಮ ನ್ಯಾಯಾಧೀಶ ' ಎಂದು ಹೆಸರು ಪಡೆದ ವ್ಯಕ್ತಿ, ಯಾವುದೋ ಒಂದು ಸಂದರ್ಭದಲ್ಲಿ ತನ್ನ ಆತ್ಮೀಯ ಬಂಧುವಿಗೋಸ್ಕರ ಕೆಟ್ಟ ತೀರ್ಪನ್ನು ಕೊಟ್ಟರೆ, ಆತ ತನ್ನ ಸಂಪೂರ್ಣ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಆತನ ಹಿಂದಿನ ಎಲ್ಲಾ ಸಾಧನೆಗಳು ಒಂದೇ ಕ್ಷಣದಲ್ಲಿ ಮಣ್ಣುಪಾಲಾಗುತ್ತದೆ. ಆತನಿಂದ ಶಿಕ್ಷೆಗೊಳಗಾದ ಅಪರಾಧಿಗಳು ಅಸಭ್ಯವಾಗಿ ಆತನನ್ನು ನಿಂದಿಸುತ್ತಾರೆ. ಇಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಈ ಸಾಮಾಜಿಕ ಅರಿವನ್ನು ಕೊಡುತ್ತಿದ್ದಾನೆ.
·  ಶ್ಲೋಕ - 37
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ।
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ ॥೩೭॥
ಹತಃ ವಾ ಪ್ರಾಪ್ಸ್ಯಸಿ ಸ್ವರ್ಗಮ್ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ-- ಸತ್ತರೆ ಸ್ವರ್ಗ ಸೇರುವೆ. ಗೆದ್ದರೆ ನೆಲವನ್ನಾಳುವೆ. ಆದ್ದರಿಂದ, ಕೌಂತೇಯ, ಹೋರಾಡುವ ತೀರ್ಮಾನ ತಳೆದು ಎದ್ದು ನಿಲ್ಲು.
"ಯುದ್ಧ ಮಾಡುವುದರಿಂದ ನಾವು ಗೆಲ್ಲುತ್ತೇವೆ ಎನ್ನುವುದು ತಿಳಿಯದು. ಧರ್ಮ ಯುದ್ಧದಲ್ಲಿ ಸತ್ತರೂ ಮೋಕ್ಷ, ಗೆದ್ದರೂ ಮೋಕ್ಷ. ಯಾವುದೋ ಸ್ವಾರ್ಥಕ್ಕಾಗಿ ಮಾಡುತ್ತಿರುವ ಯುದ್ಧವಿದಲ್ಲ. ಅನ್ಯಾಯದ ವಿರುದ್ಧ ಹೋರಾಡುವೆ ಎನ್ನುವ ಸಂಕಲ್ಪದಿಂದ ಎದ್ದು ನಿಂತು ಹೋರಾಡು" ಎನ್ನುತ್ತಾನೆ ಕೃಷ್ಣ. ನಾವು ಮಾಡುವ ಕಾರ್ಯದಲ್ಲಿ ಧರ್ಮದ ಪರಿಜ್ಞಾನ ಮುಖ್ಯ. ಯಾವುದೇ ಸ್ವಾರ್ಥವಿಲ್ಲದೆ, ಧರ್ಮದ ಮಾರ್ಗವನ್ನು ಅನುಸರಿಸುವವನು ಎಂದೂ ಯಾವುದಕ್ಕೂ ಅಂಜುವ ಅಗತ್ಯವಿಲ್ಲ. ಧರ್ಮ ಮಾರ್ಗದಲ್ಲಿ ನಡೆದರೆ ನನಗೇನಾಗುತ್ತದೋ ಎನ್ನುವ ಭಯ ಬೇಡ. ಏಕೆಂದರೆ ಧರ್ಮದ ನಡೆಯಲ್ಲಿ ಪಲಿತಾಂಶ ಯಾವುದೇ ಇರಲಿ, ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುವ ಸಾಧನವಾಗಿರುತ್ತದೆ.
·  ಶ್ಲೋಕ - 38
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥೩೮॥
ಸುಖ ದುಃಖೇ ಸಮೇ ಕೃತ್ವಾ ಲಾಭ ಅಲಾಭೌ ಜಯ ಅಜಯೌ ತತಃ ಯುದ್ಧಾಯ ಯುಜ್ಯಸ್ವ ನ ಏವಮ್ ಪಾಪಮ್ ಅವಾಪ್ಸ್ಯಸಿ--ಸುಖ-ದುಃಖಗಳನ್ನು, ಗಳಿಕೆ-ಇಳಿಕೆಗಳನ್ನು, ಸೋಲು-ಗೆಲುವನ್ನು ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು.
ಜೀವನದಲ್ಲಿ ಸುಖ-ದುಃಖ ಎನ್ನುವುದು ಅನಿವಾರ್ಯ. ಸುಖ-ದುಃಖ, ಗಳಿಕೆ-ಇಳಿಕೆ, ಸೋಲು-ಗೆಲುವು ಎಲ್ಲವನ್ನು ಸಮನಾಗಿ ಕಾಣುವವನಿಗೆ ಯಾವ ಪಾಪವೂ ಅಂಟದು. ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತ, ಕೇವಲ ಕರ್ತವ್ಯ ಪ್ರಜ್ಞೆಯಿಂದ ಹೋರಾಟ ಮಾಡುವುದು ಬದುಕಿನ ಯಶಸ್ವಿನ ಸೂತ್ರ. ಜಯಿಸಬೇಕು ಎನ್ನುವ ಸ್ವಾರ್ಥವಿಲ್ಲದೆ; ನಾವೇ ಲಾಭ ಗಳಿಸಬೇಕು-ಅವರು ಮಣ್ಣು ಮುಕ್ಕಲಿ ಎನ್ನುವ ದ್ವೇಷವಿಲ್ಲದೆ, ಎಲ್ಲವೂ ಭಗವಂತನ ಪ್ರಸಾದ ಎನ್ನುವ ಮನೋಭಾವನೆಯಿಂದ ಹೋರಾಡು ಎನ್ನುತ್ತಾನೆ ಕೃಷ್ಣ. ಭಗವಂತನ ಈ ನುಡಿಯನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆತ ಎಂದೂ ದುಃಖಿ ಆಗಲಾರ. "ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ" ಎಂದು ಧರ್ಮ ಮಾರ್ಗದಲ್ಲಿ ಮುನ್ನುಗ್ಗುವವನಿಗೆ ಸದಾ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಆತನಿಗೆ ದುಃಖ-ದುಃಖವಾಗಿ ಕಾಣಲಾರದು, ಸೋಲು-ಸೋಲಾಗಿ ಕಾಣಲಾರದು. ಆತನಿಗೆ ಇಹವೂ-ಸ್ವರ್ಗ ಪರವೂ-ಸ್ವರ್ಗ.ಇಲ್ಲಿಯವರೆಗೆ ಕೃಷ್ಣ ಆತ್ಮ ತತ್ವದ ಬಗೆಗೆ ಸಾಕಷ್ಟು ವಿವರಣೆಯನ್ನು ಅರ್ಜುನನಿಗೆ ಹೇಳಿದ. ಬದುಕು ಅಂದರೇನು? ಸಾವು ಅಂದರೇನು? ಆತ್ಮ-ಪರಮಾತ್ಮ, ಆ ತತ್ವಗಳ ಅಂತರಂಗದ ರಹಸ್ಯವೇನು? ಇವು ಹೇಗೆ ಯಾವ ಬದಲಾವಣೆ ಇಲ್ಲದೆ ಅನಾದಿನಿತ್ಯ ಎನ್ನುವುದನ್ನು ವಿವರಿಸಿ, ಯುದ್ಧದ ಅವಶ್ಯಕತೆಯನ್ನು ಹೇಳಿದ. ಇಲ್ಲಿಂದ ಮುಂದೆ ಕೃಷ್ಣ ಸಾಂಖ್ಯದಿಂದ ಕರ್ಮದ ಕಡೆ ತಿರುಗುತ್ತಾನೆ.
ನಾವು ಮನಸ್ಸಿನಲ್ಲಿ ವೇದಾಂತವನ್ನು ಎಷ್ಟು ರೂಢಿಸಿಕೊಂಡರೂ, ತತ್ಕಾಲದ ಮನುಷ್ಯನ ದುಃಖ ಅದಮ್ಯವಾಗಿರುತ್ತದೆ-ಎನ್ನುವುದನ್ನು ಗೀತೆ ಸ್ಪಷ್ಟವಾಗಿ ತಿಳಿಸುತ್ತದೆ. ಭಗವಂತನಿಂದ ಗೀತೆಯ ಉಪದೇಶವನ್ನು ಪಡೆದ ಅರ್ಜುನ, ತನ್ನ ಮಗ ಅಭಿಮನ್ಯು ಯುದ್ಧದಲ್ಲಿ ಸತ್ತಾಗ ಪುನಃ ವಿಚಲಿತನಾಗುವುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಪೂರ್ಣವಾದ ಆತ್ಮಸಾಕ್ಷಾತ್ಕಾರ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಆತ್ಮ ಅಜರ-ಅಮರ ಎಂದು ತಿಳಿದರಷ್ಟೇ ಸಾಲದು, ಪೂರ್ಣವಾಗಿ ತಿಳಿಯಬೇಕು. ಅಂತಹ ಸ್ಥಿತಿಯಲ್ಲಿ ಎಲ್ಲಾ ದುಃಖವನ್ನು ಮರೆತು ಇರಬಹುದು. ಆದರೆ ಈ ಆತ್ಮ ತತ್ವವನ್ನು ತಿಳಿಯುವ ಬಗೆ ಹೇಗೆ? ಆತ್ಮದ ಜ್ಞಾನವನ್ನು ಪಡೆಯುವ ಸಾಧನವೇನು? ಕೇಳಿದ ತಕ್ಷಣ ಸಾಕ್ಷಾತ್ಕಾರವಾಗಿ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವ ವಿಷಯ ಇದಲ್ಲ. ಅಂದಮೇಲೆ ಮಾನಸಿಕವಾಗಿ ಈ ಉತ್ತುಂಗದ ಸ್ಥಿತಿಯನ್ನು ತಲುಪುವುದು ಹೇಗೆ ಎಂದು ಕೃಷ್ಣ ಮುಂದೆ ವಿವರಿಸುತ್ತಾನೆ.
·  ಶ್ಲೋಕ - 39
ಏಷಾ ತೇSಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು ।
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮ ಬಂಧಂ ಪ್ರಹಾಸ್ಯಸಿ ॥೩೯॥
ಏಷಾ ತೇ ಅಭಿಹಿತಾ ಸಾಂಖ್ಯೇ ಬುದ್ಧಿಃ ಯೋಗೇ ತು ಇಮಾಮ್ ಶೃಣು ಬುದ್ಧ್ಯಾ ಯುಕ್ತಃ ಯಯಾ ಪಾರ್ಥ ಕರ್ಮ ಬಂಧಮ್ ಪ್ರಹಾಸ್ಯಸಿ--ಈ ಆತ್ಮ ವಿಜ್ಞಾನದ ತಿಳಿನುಡಿ ನಿನಗೆ ತಿಳಿಸಿದ್ದಾಯ್ತು, ಅದನ್ನು ಗಳಿಸುವ ಬಗೆಯನ್ನು ಇದೀಗ ಕೇಳು. ಪಾರ್ಥ, ಈ ತಿಳಿನುಡಿಯಿಂದ ನೀನು ತಿಳಿಯಾದಾಗ ಕರ್ಮದ ಕಟ್ಟನ್ನು ಕಳೆದುಕೊಳ್ಳುವೆ.
ಕೃಷ್ಣ ಹೇಳುತ್ತಾನೆ : " ಇಲ್ಲಿಯವರೆಗೆ ಸಾಂಖ್ಯದ ಬಗ್ಗೆ ಹೇಳಿದ್ದಾಯ್ತು. ಇನ್ನು ಯೋಗದ ಬಗ್ಗೆ ಹೇಳುತ್ತೇನೆ ಕೇಳು" ಎಂದು. ಇಲ್ಲಿ ಕೃಷ್ಣ ಹೇಳುತ್ತಿರುವ ಸಾಂಖ್ಯಾ - 'ವೈದಿಕ ಸಾಂಖ್ಯ'. ವೈದಿಕ ಸಾಂಖ್ಯವನ್ನು ಪ್ರಚಾರಕ್ಕೆ ತಂದವ ಕಪಿಲವಾಸುದೇವ. ಸಂಖ್ಯಾ ಅಂದರೆ ಸಮ್ಯಕ್ ಖ್ಯಾತಿ ಅಥವಾ ಸರಿಯಾದ ಅರಿವು. ಇದು ಆತ್ಮದ ಅರಿವನ್ನು ಕೊಡುವ ಮೂಲತತ್ವ. ಈ ಕಾರಣದಿಂದ ಪ್ರಾಚೀನರು ಜ್ಞಾನವನ್ನು ಸಾಂಖ್ಯ ಎಂದು ಕರೆದರು. ಇಲ್ಲಿ ಸಾಂಖ್ಯ ಎಂದರೆ ಖಚಿತವಾದ ಆತ್ಮ ಜ್ಞಾನ. ಇಲ್ಲಿ ಹೇಳುತ್ತಿರುವ ಯೋಗ ಪತಂಜಲಿಯ ಯೋಗವಲ್ಲ, ವೈದಿಕ ಯೋಗ. ಸಾಮಾನ್ಯ ಯೋಗಕ್ಕೆ ದೇವರ ಅಸ್ತಿತ್ವದ ಧೃಡ ನಂಬಿಕೆ ಬೇಕಿಲ್ಲ. ಮನಸ್ಸನ್ನು ಯಾವುದೋ ಒಂದರ ಮೇಲೆ ನಿರಂತರ ಏಕಾಗ್ರತೆ ಮಾಡುವುದರಿಂದ ಅನೇಕ ಪವಾಡಗಳನ್ನು ಮಾಡಬಹುದು. ಆದರೆ ಇದು ನಿಜವಾದ ಆತ್ಮ ಸಾಕ್ಷಾತ್ಕಾರವಲ್ಲ. ಹತ್ತು ವರ್ಷ ಯೋಗ ಸಾಧನೆ ಮಾಡಿ ನೀರಿನ ಮೇಲೆ ನಡೆಯಲು ಕಲಿತವನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಈ ರೀತಿ ಯೋಗದಿಂದ ಪವಾಡಗಳನ್ನು ಕಲಿತು ಪ್ರದರ್ಶಿಸುವುದನ್ನು ವೈದಿಕ ಯೋಗ ನಿಷೇಧಿಸುತ್ತದೆ. ಎಂತಹ ಅಂತಃಶಕ್ತಿ ಪಡೆದರೂ ಅದನ್ನು ಪ್ರದರ್ಶಿಸಕೂಡದು. ನೀರಿನ ಮೇಲೆ ನಡೆಯಲು ಕಲಿತ ತಕ್ಷಣ ನಮಗೆ ಆತ್ಮ ಸಾಕ್ಷಾತ್ಕಾರವಾಗದು. ಇಂತಹ ಇಂದ್ರಜಾಲವನ್ನು ಯಾರು ಬೇಕಾದರೂ ಗಳಿಸಬಹುದು. ಇಲ್ಲಿ ಕೃಷ್ಣ ಹೇಳುತ್ತಿರುವುದು ಆತ್ಮ ತತ್ವವನ್ನು ಪಡೆಯುವುದಕ್ಕೆ ಜೀವನದಲ್ಲಿ ಮಾಡಬೇಕಾದ ಸಾಧನೆ ಏನು ಎನ್ನುವ ವಿಷಯ.
ಸಾಂಖ್ಯವನ್ನು ತಿಳಿಯುವ ಮಾತನ್ನು ಹೇಳಿದೆ, ಇನ್ನು ಜ್ಞಾನದ ದಾರಿಯಲ್ಲಿ ಸಾಗಿ ಸಿದ್ಧಿ ಪಡೆಯಬೇಕಾದರೆ ಬೇಕಾದ ಉಪಾಯವನ್ನು(ಯೋಗವನ್ನು) ಹೇಳುತ್ತೇನೆ ಕೇಳು ಎನ್ನುತ್ತಾನೆ ಕೃಷ್ಣ. ಯಾವ ಅರಿವನ್ನು ಪಡೆದರೆ ಸಾಧನೆಯ ದಾರಿಯಲ್ಲಿ ಕರ್ಮ ಬಂಧನವನ್ನು ದಾಟಿ ಮುನ್ನೆಡೆಯಬಹುದು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಅಧ್ಯಾತ್ಮದ ಸಾಧನೆ ಅಂದರೇನು, ನಮ್ಮ ಜೀವನದಲ್ಲಿ ಅಧ್ಯಾತ್ಮದ ಸಾಧನೆ ಹೇಗಿರಬೇಕು, ಅದನ್ನು ಸಾಧಿಸುವುದು ಹೇಗೆ ಎನ್ನುವುದು ನಾವು ತಿಳಿಯಬೇಕಾದ ಮುಖ್ಯವಾದ ವಿಷಯ. ಅನೇಕ ಮಂದಿ ಹೊರಗಿನಿಂದ ಹೇಗಿರಬೇಕು ಎಂದು ಅನೇಕ ರೀತಿ ಹೇಳುತ್ತಾರೆ. ಆದರೆ ಒಳಗಿನಿಂದ ಹೇಗಿರಬೇಕು ಎನ್ನುವುದನ್ನು ಯಾರೂ ಹೇಳುವುದಿಲ್ಲ. ಇಷ್ಟು ಹೊತ್ತು ಜಪ ಮಾಡಬೇಕು, ಈ ರೀತಿ ಮಡಿಯಾಗಿರಬೇಕು, ಇಷ್ಟು ಮಂತ್ರ ಹೇಳಬೇಕು ಇತ್ಯಾದಿ ವಿಚಾರವನ್ನು ಎಲ್ಲರೂ ಹೇಳುತ್ತಾರೆ. ಆದರೆ ಅಂತರಂಗ ಹೇಗಿರಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತರಂಗದ ಸಾಧನೆ ಇಲ್ಲದೆ ಕೇವಲ ಬಾಹ್ಯ ವೇಷದಿಂದ, ಜಪ-ತಪದಿಂದ, ಎನನ್ನೂ ಸಾಧಿಸಲು ಸಾಧ್ಯವಿಲ್ಲ. ಯೋಗ ಸಾಧನೆ ಎಂದರೆ ನಾವು ಯಾವ ಬಟ್ಟೆ ತೊಡುತ್ತೇವೆ, ಮೈಗೆ ಏನು ಹಚ್ಚಿಕೊಳ್ಳುತ್ತೇವೆ ಎನ್ನುವುದಲ್ಲ. ಅದು ನಮ್ಮ ಅಂತರಂಗದ ನಡೆ. ಅಂತರಂಗ ಮತ್ತು ಬಹಿರಂಗ ಏಕವಾಗಿರುವ ಸ್ಥಿತಿ. ನಮ್ಮ ನಡೆ, ನಮ್ಮ ನಂಬಿಕೆ, ನಮ್ಮ ಪ್ರಾಮಾಣಿಕತೆಯೇ ನಮ್ಮ ನಿಜವಾದ ಧರ್ಮ. ಅಂತಹ ಅಂತರಂಗದ ಸಾಧನೆ ಅತಿ ಮುಖ್ಯ. ಅದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ.
ಜ್ಞಾನ ಬೇಕು ನಿಜ, ಆದರೆ ಆತ್ಮ ಜ್ಞಾನವನ್ನು ಪಡೆಯಲು ನಮ್ಮ ಸಾಧನೆ ಏನಿರಬೇಕು, ಸಂಸಾರ ಬಂಧವನ್ನು ಕಳಚಿಕೊಳ್ಳುವ ಸಾಧನೆ ಯಾವುದು, ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ಸುವಿವರವಾಗಿ ಕಾಣುತ್ತೇವೆ.
·  ಶ್ಲೋಕ - 40
ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ ।
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್೪೦
ನ ಇಹ ಅಭಿಕ್ರಮ ನಾಶಃ ಅಸ್ತಿ ಪ್ರತ್ಯವಾಯುಃ ನ ವಿದ್ಯತೇ ಸು ಅಲ್ಪಮ್ ಅಪಿ ಅಸ್ಯ ಧರ್ಮಸ್ಯ ತ್ರಾಯತೇ ಮಹತಃ ಭಯಾತ್- -ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ; ಈ ಧರ್ಮದ ತುಣುಕು ಕೂಡಾ ದೊಡ್ಡ ಬೆದರಿನಿಂದ ಪಾರುಮಾಡಬಲ್ಲುದು.
ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ನಮ್ಮ ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರು ಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು! ಇದರಿಂದ ಏನು ಉಪಯೋಗ ಎಂದು. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೆ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ ಐಹಿಕ ಸಂಪತ್ತು(ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿ ಇರುತ್ತೇವೆ. ಹಿಂದಿನ ಜನ್ಮದಲ್ಲಿ ಏಲ್ಲಿ ನಿಂತಿದ್ದೆವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗು ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ. ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೆವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭ.
ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ. ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ. ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ ಜನ್ಮ ಸಾಧನೆ ಮಾಡಬೇಕು. ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಆಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು ಆರಂಭಿಸಿ. ಅದು ನಿಮ್ಮನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ. ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ.
ಸಾಧಕರಲ್ಲಿ ಮೂರು ವಿಧ. ಉತ್ತಮ ಸಾಧಕ, ಮಧ್ಯಮ ಸಾಧಕ, ಅಧಮ ಸಾಧಕ. ಉತ್ತಮ ಸಾಧಕ ದೇವರು ಒಬ್ಬನೇ ಎಂದು ನಂಬಿರುತ್ತಾನೆ. ಇಂತಹ ಭಕ್ತರನ್ನು ಭಾಗವತರು ಎನ್ನುತ್ತಾರೆ. ಆತನಿಗೆ ಭಗವಂತನಲ್ಲಿ ಏಕನಿಷ್ಠೆ ಇರುತ್ತದೆ. ಭಗವಂತನನ್ನು ಯಾವ ಶಬ್ದದಿಂದ ಕರೆದರೂ ಅದು ಆ ಆದಿಶಕ್ತಿಯಾದ ಪರಶಕ್ತಿಯನ್ನು ಹೇಳುತ್ತದೆ ಎನ್ನುವ ಸತ್ಯವನ್ನು ಆತ ತಿಳಿದಿರುತ್ತಾನೆ. ಈತ ನಿಜವಾದ ಸಾಧಕ, ಹಾಗು ಇದು ಸಾಧನೆಯ ನಿಜವಾದ ದಾರಿ. ಇನ್ನು ಮಧ್ಯಮ ಸಾಧಕರು: ಇವರು ಪ್ರತಿಯೊಂದು ದೇವತೆಯನ್ನು ಪರಿ ಪರಿಯಾಗಿ ಪೂಜಿಸಿ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎಂದು ಭಗವಂತನಿಗೆ ಅರ್ಪಿಸುತ್ತಾರೆ. ಇವರನ್ನು ತ್ರೈವಿಧ್ಯರು ಎನ್ನುತ್ತಾರೆ. ಇನ್ನು ಅಧಮ ಸಾಧಕ; ಈತ ದೇವರು ನೂರಾರು ಎಂದು ನಂಬಿ ಪೂಜಿಸುತ್ತಿರುತ್ತಾನೆ. ಭಗವಂತ ಸರ್ವಾಂತರ್ಯಾಮಿ ಎನ್ನುವ ಭಾವನೆ ಈತನಿಗಿರುವುದಿಲ್ಲ. ಈತನಿಗೆ ಅಧ್ಯಾತ್ಮದ ನಿಜವಾದ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದು ನಿಜವಾದ ಅಧ್ಯಾತ್ಮ ಸಾಧನೆ ಆಗದು.
ನಾವು ಏಕನಿಷ್ಠೆಯಿಂದ ಮಾಡುವ ಸಾಧನೆ ಎಂದೂ ವ್ಯರ್ಥವಾಗದು. ಇಲ್ಲಿ ತೋರ್ಪಡಿಕೆಯ ಅಗತ್ಯವಿಲ್ಲ. ಆದರೆ ಪ್ರಾಮಾಣಿಕ ನಿಷ್ಠೆ ಅಗತ್ಯ. ಗಣಪತಿಯನ್ನು ಪೂಜಿಸು, ವಾಯುವನ್ನು ಪೂಜಿಸು, ಸೂರ್ಯನನ್ನು ಪೂಜಿಸು, ಅಲ್ಲಾ ಎಂದು, ಯೇಸು ಎಂದು, ಶಿವನೆಂದು, ವಿಷ್ಣುವೆಂದು, ಏನೇ ಅಂದು ಪೂಜಿಸಿದರೂ ಕೂಡಾ, ಎಲ್ಲಾ ಶಬ್ದಗಳೂ ಆದಿಶಕ್ತಿಯಾದ ಪರಶಕ್ತಿ ಎನ್ನುವ ಸತ್ಯ ತಿಳಿದು, ಏಕನಿಷ್ಠೆ ಇಟ್ಟು, ಪರಿಶುದ್ಧ ಪ್ರಾಮಾಣಿಕ ಚಿಂತನೆ ಮಾಡಿದಾಗ ಅದು ನಿಜವಾದ ಅಧ್ಯಾತ್ಮ ಸಾಧನೆಯಾಗುತ್ತದೆ ಹಾಗು ವ್ಯರ್ಥವಾಗದೆ ನಮ್ಮೊಂದಿಗೆ ಬರುತ್ತದೆ. ಇಂತಹ ಸಾಧನೆಯಲ್ಲಿ ದ್ವೇಷ, ಸ್ವಾರ್ಥ, ಅಹಂಕಾರ, ದುಃಖ ಎಂದೂ ಇರುವುದಿಲ್ಲ. ಎಲ್ಲವೂ ಭಗವಂತನ ಪ್ರಸಾದ ಎನ್ನುವ ಭಾವನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.